ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆ ನಾಗರಾಜ್ ಬಿ.ಎಂ. ಎಂಬುವವರು ಸಂತೇ ಕಡೂರು ಕೆನರಾ ಬ್ಯಾಂಕ್ ಶಾಖೆ, ಮಲ್ಲಿಗೆನಹಳ್ಳಿ ಲೀಡ್ ಬ್ಯಾಂಕ್ ಚೇರ್ಮನ್ ಮತ್ತು ಶಿವಮೊಗ್ಗ ಗೋಪಿಸರ್ಕಲ್ ಕರ್ನಾಟಕ ಬ್ಯಾಂಕ್ ಮೇನ್ ಬ್ರಾಂಚ್ ವ್ಯವಸ್ಥಾಪಕರು ಇವರುಗಳ ವಿರುದ್ಧ ಕರ್ನಾಟಕ ಬ್ಯಾಂಕ್ನ ರೂ. 5.50 ಲಕ್ಷ ಚೆಕ್ನ್ನು ಕೆನರಾ ಬ್ಯಾಂಕ್ಗೆ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000 ಗಳನ್ನು ಮಾತ್ರ ಜಮಾ ಮಾಡಿ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲರ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು 2024ರ ಜುಲೈನಲ್ಲಿ ಕೆನರಾ ಬ್ಯಾಂಕ್ನ ತಮ್ಮ ಖಾತೆಗೆ ರೂ. 5.50 ಲಕ್ಷ ಮೊತ್ತ ಕರ್ನಾಟಕ ಬ್ಯಾಂಕ್ ಚೆಕ್ನ್ನು ವರ್ಗಾವಣೆಗಾಗಿ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000/- ಗಳನ್ನು ಮಾತ್ರ ಜಮಾ ಮಾಡಿರುತ್ತಾರೆ. ಈ ಕುರಿತು ಅನೇಕ ಸಲ ಪತ್ರ ವ್ಯವಹಾರ ಮಾಡಿ ಉಳಿದ ಮೊತ್ತ 4,95,000/-ಗಳನ್ನು ಜಮಾ ಮಾಡುವಂತೆ ಕೇಳಿಕೊಂಡರೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ಆಯೋಗವು ದೂರನ್ನು ದಾಖಲಿಸಿಕೊಂಡು ಮೂರು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ಕೆನರಾ ಬ್ಯಾಂಕ್ ತಮ್ಮ ತಕರಾರಿನಲ್ಲಿ ದೂರುದಾರರ ಚೆಕ್ನ್ನು ಕರ್ನಾಟಕ ಬ್ಯಾಂಕ್ ಶಾಖೆಗೆ ಚೆಕ್ ಮೊತ್ತವನ್ನು ಕಳುಹಿಸಲು ಸಲ್ಲಿಸಿದ್ದು, ಅಲ್ಲಿಂದ ರೂ. 55,000/- ಗಳನ್ನು ಮಾತ್ರ ಕಳುಹಿಸಿರುತ್ತಾರೆ. ಉಳಿಕೆ ವ್ಯತ್ಯಾಸದ ಮೊತ್ತವನ್ನು ಕಳುಹಿಸಲು ಪತ್ರ ಸಲ್ಲಿಸಿರುತ್ತೇವೆ. ಆದ್ದರಿಂದ ಕೆನರಾ ಬ್ಯಾಂಕ್ನಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲ ಎಂದು ಹೇಳಿರುತ್ತಾರೆ.
ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಚೆಕ್ನ ಪೂರ್ಣ ಮೊತ್ತವನ್ನು ಖಾತೆಗೆ ಜಮಾ ಮಾಡದೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ಕರ್ನಾಟಕ ಬ್ಯಾಂಕ್ ದೂರುದಾರರಿಗೆ ಚೆಕ್ ಅನ್ವಯದ ವ್ಯತ್ಯಾಸದ ಮೊತ್ತ ರೂ. 4,95,000/- ದಿ:21/02/2025ರಿಂದ ವಾರ್ಷಿಕ ಶೇ. 6ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣವನ್ನು ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವಂತೆ, ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಫೆ.12 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.
District Consumer Disputes Redressal Commission ಕರ್ನಾಟಕ ಬ್ಯಾಂಕ್ ಸೇವಾ ನ್ಯೂನತೆ ದೂರು: ಪರಿಹಾರ ನೀಡಲು ಆದೇಶ
Agnipath scheme ಅಗ್ನಿವೀರ್ ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನ
Agnipath scheme ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಶಿವಮೊಗ್ಗ, ದಾವಣಗೆರೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಉಡುಪಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆಸಕ್ತರು ಆನ್ಲೈನ್ ನೋಂದಣಿ ಪೊರ್ಟಲ್-WWW.JOININDINARMY.NIC.IN ರ ಮೂಲಕ ಏ. 01 ರೊಳಗಾಗಿ ನೋಂದಾಯಿಸಿಕೊಳ್ಳುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Agnipath scheme ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂ. ಸಂ.: 0824-2458376, 7411497644 ಅಥವಾ WWW.JOININDINARMY.NIC.IN ಎಂಬ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ. ಭಾರತೀಯ ಸೇನೆಯಲ್ಲಿ ಆಯ್ಕೆ ವಿಧಾನವು ನ್ಯಾಯಯುತ ಮತ್ತು ಪಾರದರ್ಶಕವಾಗಿದ್ದು, ಅರ್ಹತೆ ಮತ್ತು ದೈಹಿಕ ಕ್ಷಮತೆ ಮೇರೆಗೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿನ ಆಯ್ಕೆ ಪ್ರಕ್ರಿಯೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು ಹಾಗೂ ನೇಮಕಾತಿ ಏಜೆಂಟ್ಗಳಂತೆ ನಟಿಸುವ, ಆಮಿಷ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಅವರು ತಿಳಿಸಿರುತ್ತಾರೆ.
Department of Kannada and Culture ಫೆ.19. ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಜಿಲ್ಲಾಡಳಿತದಿಂದ ಆಯೋಜನೆ
Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯಕ್ತಾಶ್ರಯದಲ್ಲಿ ಫೆ.19 ರ ಬೆಳಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಏರ್ಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
Department of Kannada and Culture ಕಾರ್ಯಕ್ರಮದಲ್ಲಿ ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಪಾಲಿಕೆ ಮಹಾಪೌರರು, ಜನಪ್ರತಿನಿಧಿಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗು ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇನ್ನಿತರ ಗಣ್ಯರು, ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ತೀರ್ಥಹಳ್ಳಿಯ ಚಿಟ್ಟೆಬೈಲು ಪ್ರಜ್ಞಾಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಲೋಹಿತಾಶ್ವ ಕೇದಿಗ್ಗೆರೆ ಇವರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಅಂಚೆ ಇಲಾಖೆಯ “ಮೌನ ಸಿಬ್ಬಂದಿ”ಯ ಸಾರ್ಥಕ ಸೇವೆಗೆ ಸನ್ಮಾನ
ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎಂ ಟಿ ಎಸ್ ವರ್ಗದವರಿಗೆ ವಿಶೇಷ ಸನ್ಮಾನ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನವಲೆ ಇವರ ವತಿಯಿಂದ ಗುಡ್ಡಗಾಡುಗಳಲ್ಲಿ ಹಾಗೂ ಮಳೆ ಚಳಿ ಎಲ್ಲಾ ಸಮಯದಲ್ಲೂ ಪ್ರತಿಯೊಂದು ಮೂಲೆ ಮೂಲೆಗಳಿಗೆ ಹೋಗಿ ಯಾವ ಪಲಾಪೇಕ್ಷೆ ಇಲ್ಲದೆ ಸರಿಯಾದ ಸಮಯಕ್ಕೆ ಅಂಚೆ ಸೇವೆ ಸಲ್ಲಿಸುತ್ತಿರುವ ಸೈಲೆಂಟ್ ವರ್ಕರ್ಸ್ ಸೇವಾ ನಿರತ ಅಂಚೆ ಇಲಾಖೆಯ 70 ಜನ ಪೋಸ್ಟ್ ಮ್ಯಾನ್ ಮತ್ತು ಎಂಟಿಎಸ್ ವರ್ಗದವರಿಗೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸಂಸ್ಥೆ ವತಿಯಿಂದ ಎಲ್ಲರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ನೆನಪಿನ ಕಾಣಿಕೆಗಳು ಜೊತೆಗೆ ಶಾಲು ಹಾರ ಹಾಗೂ ಸಿಹಿ ಬಾಕ್ಸ್ಗಳನ್ನು ನೀಡಿ ತಿಲಕ ಇಟ್ಟು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಸ್ವಾತಿ ಮತ್ತು ಶಾಸಕರಾದ ಚನ್ನಬಸಪ್ಪ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ. ಶಿವಮೊಗ್ಗ ಭದ್ರಾವತಿ ಪ್ರಾಧಿಕಾರದ ಅಧ್ಯಕ್ಷರಾದ ಸುಂದರೇಶ್. ರೋಟರಿ ಜಿ ವಿಜಯಕುಮಾರ್. ಮನೋಹರ್ ಆರ್ . ಪಿ ರುದ್ರೇಶ್. ಡಾ ತಿಪ್ಪೇಶ್. ಮಲ್ಲೇಶಪ್ಪ. ಡಾಕ್ಟರ್ ಆಕಾಶ್ ಹೊಸ್ತೋಟ. ರಾಜಣ್ಣ. ಬಿಕೆ ವಿಜಯಲಕ್ಷ್ಮಿ ರಾಘು. ಹಾಗೂ ಈಶ್ವರಿ ವಿಶ್ವವಿದ್ಯಾಲಯದ ಅಣ್ಣಂದಿರು ಅಕ್ಕಂದಿರು ಅಂಚೆ ಕಚೇರಿಯ ಅಧಿಕರಾದ ಎಂ ಕುಮಾರಸ್ವಾಮಿ. ಡಾಕ್ಟರ್ ಪ್ರಸನ್ನ ಬಸವರಾಜಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸನ್ಮಾನಿತರು ಭಾವ ಪರವಶರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
H.S. Sundaresh ಅಂತರ್ಜಲ ಕಾಪಿಡಲು ಶಿವಮೊಗ್ಗದ ಕೆರೆಗಳ ಅಭಿವೃದ್ಧಿ ನಮ್ಮ ಗುರಿ- ಹೆಚ್.ಎಸ್.ಸುಂದರೇಶ್
H.S. Sundaresh ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅವರು ಸಾಗರ ರಸ್ತೆಯ ಶಿವಪ್ಪನಾಯಕ ಕೆರೆಯ ಜೀರ್ಣೋದ್ಧಾರ ಸಂಬಂಧ ಸ್ಥಳ ಪರಿಶೀಲನೆಗೆ ಅಧಿಕಾರಿ ವರ್ಗದವರೊಂದಿಗೆ ಇಂದು, (ತಾ. 17-2-26) ರಂದು ಭೇಟಿ ನೀಡಿದ್ದರು.
ಶಿವಮೊಗ್ಗ ಮತ್ತು ಸುತ್ತಮುತ್ತ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕೆರೆಗಳ ಅಭಿವೃದ್ಧಿ ಪ್ರಸ್ತಾವನೆ ಇದೆ. ಹೀಗಾಗಿ ಸದ್ಯ ಸಾಗರ ರಸ್ತೆಯಲ್ಲಿ ಸಿರಿಮಲ್ಲಿಗೆ ವಸತಿ ಸಂಘಕ್ಕೆ ಹೊಂದಿಕೊಂಡಂತೆ ಇರುವ ಕೆರೆಯ ಅಭಿವೃದ್ಧಿಯ ಯೋಜನೆಯೂ ಸೇರಿದೆ ಎಂದು ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ,ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸಿರಿಮಲ್ಲಿಗೆ ವಸತಿ ಸಂಘದ ಜಯಕಮಲ್ ಮತ್ತು ಮಲ್ಲಿಗೆ ನಗರ ಬಡಾವಣೆಗಳ ಪಾರ್ಕ್
ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಹಂತಕ್ಕೆ ಹೋಗಿದೆ ಎಂದು ಹೇಳಿದರು.
ಆದಷ್ಟು ಶೀಘ್ರ ಕೆರೆ ಮತ್ತು ಪಾರ್ಕ್ ಕಾಮಗಾರಿ ಆರಂಭಿಸಿ, ಈ ಪಾರ್ಕ್ ಮತ್ತು ಕೆರೆ ಅಭಿವೃದ್ಧಿಯಿಂದ ಸುತ್ತಲ ಹತ್ತು ಬಡಾವಣೆಯಲ್ಲಿ ವಾಸಿಸುವ ಸಾರ್ವಜನಿಕರಿಗೆ ವಿನೋದ ವಿಹಾರ ತಾಣವಾಗಿ ಕಂಗೊಳಿಸುವಲ್ಲಿ ಸೂಡಾ ಕೊಡುಗೆಯಾಗಿ ಇಲ್ಲಿ ವಸತಯಿರುವ ಸಮುದಾಯಕ್ಕೆ ನೀಡಲಿ, ಸುಂದರೇಶ್ ಅವರ ಅಧಿಕಾರಾವಧಿಯಲ್ಲೇ ಈ ಜನೋಪಯೋಗಿ ಕಾರ್ಯ ಪೂರ್ಣವಾಗುವಂತಾಗಲಿ ಎಂದು ಸಿರಿಮಲ್ಲಿಗೆ ವಸತಿ ಸಂಘದ ಅಧ್ಯಕ್ಷ ಡಾ.ಸುಧೀಂದ್ರ ಹಾರೈಸಿ ಮಾತನಾಡಿದರು.
H.S. Sundaresh ಸಿರಿಮಲ್ಲಿಗೆ ವಸತಿ ಸಂಘದ ಖಜಾಂಚಿ ಮಹೇಶ್ ಯಲಿಗಾರ್, ಹಿರಿಯ ಸಲಹೆಗಾರರುಗಳಾದ ಡಿ.ಎನ್.ಶ್ರೀಧರ ರಾವ್
ನಾಡಿಗ್ ಮತ್ತು ಶಿವಾಜಿರಾವ್, ಸೂಡಾ ಇಂಜಿನಿಯರ್ ಗಂಗಾಧರ ಸ್ವಾಮಿ ಮುಂತಾದ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
Kote Marikamba Devi ಶಿವಮೊಗ್ಗ ಮಾರಿಕಾಂಬ ಜಾತ್ರೆ: ಹಿನ್ನೆಲೆ ಮತ್ತು ಆಚರಣೆ ಹೇಗೆ?
Kote Marikamba Devi ಕೋಟೆ ಮಾರಿಕಾಂಬಾ ಜಾತ್ರೆಗೆ ಚಾಲನೆ ದೊರೆತಿದ್ದು, ಸಾರಾ ಹಾಕುವ ಮೂಲಕ ಧಾರ್ಮಿಕ ವಿಧಿವಿಧಾನ ಆರಂಭಗೊಂಡಿವೆ.
ಪ್ರಸಿದ್ಧ ಶಿವಮೊಗ್ಗ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು
ಫೆಬ್ರವರಿ 24ರಿಂದ 28ರವರೆಗೆ ಅತ್ಯಂತ ಸಡಗರದಿಂದ ನಡೆಯಲಿದೆ.
ಜಾತ್ರೆಯ ಹಿನ್ನೆಲೆ ಸಾರಾ ಹಾಕುವ ಅಥವಾ ಅಂಕೆ ಹಾಕುವ ಕಾರ್ಯಕ್ರಮವು ನಡೆಯಿತು.
ಸಮಿತಿಯ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಡೋಲು ಬಾರಿಸುವ ಮೂಲಕ ಚಾಲನೆ ನೀಡಿದ್ದು,
ಆಟೋ ರಿಕ್ಷಾಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಪ್ರಚಾರ ಆರಂಭಗೊಂಡಿವೆ.
ಸಾರಾ ಹಾಕುವುದು ಎಂದರೆ ಅದು ದೇವಿಯ ಹೆಸರಿನಲ್ಲಿ ಇಡೀ ನಗರಕ್ಕೆ ವಿಧಿಸಲಾಗುವ ಒಂದು ಪವಿತ್ರ ಆಜ್ಞೆಯಾಗಿದೆ.
ಜಾತ್ರೆಯ ಅವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಮತ್ತು ಊರಿನ ಜನತೆಗೆ ಯಾವುದೇ ಸಂಕಷ್ಟಗಳು ಬರದಂತೆ ತಡೆಯಲು ಈ ಗಡಿ ನಿರ್ಣಯದ ಪದ್ಧತಿ.
ಕೆಳದಿ ಅರಸರ ಕಾಲದಿಂದಲೂ ನಡೆದುಬಂದಿರುವ ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ.
Kote Marikamba Devi ಸಾರಾ ಹಾಕಿದ ನಂತರ ಗ್ರಾಮಸ್ಥರು ಊರು ಬಿಟ್ಟು ಹೋಗದಂತೆ ಮತ್ತು ಹೊರಗಿನವರು ಅಶುದ್ಧತೆಯಿಂದ ಬರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.
DC Shivamogga ಫೆ.28 ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ: ಸಕಲ ಸಿದ್ಧತೆ ಮಾಡಿಕೊಳ್ಳಿ , ಅಧಿಕಾರಿಗಳಿಗೆ ಸೂಚನೆ- ಪ್ರಭುಲಿಂಗ ಕವಳಿಕಟ್ಟಿ
DC Shivamogga ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ನೀಡಿದರು.
ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪನವರು ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಮತ್ತು ತಂಡಕ್ಕೆ ಸಲಹೆ-ಸೂಚನೆಗಳನ್ನು ನೀಡಲು ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯ ನಂತರ ಜಿಲ್ಲಾಡಳಿತ ಕಚೇರಿಯಲ್ಲಿ ನಡೆಸಿದ ದ್ವಿತೀಯ ಪಿಯುಸಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 19,009 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ರೆಗ್ಯೂಲರ್ ವಿದ್ಯಾರ್ಥಿಗಳು 17,755, ರಿಪೀಟರ್ ವಿದ್ಯಾರ್ಥಿಗಳು 871, ಖಾಸಗಿ- 380 ಮತ್ತು ಇಂಪ್ರೂವ್ಮೆAಟ್ -03 ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರಗಳು :- ಶಿವಮೊಗ್ಗ-17, ಭದ್ರಾವತಿ -06, ತೀರ್ಥಹಳ್ಳಿ- 03, ಹೊಸನಗರ -03 ಸಾಗರ -05, ಶಿಕಾರಿಪುರ-05, ಸೊರಬ-02 ಒಟ್ಟು 41 ಪರೀಕ್ಷಾ ಕೇಂದ್ರಗಳಿವೆ. ಪ್ರಶ್ನೆ ಪತ್ರಿಕೆ ವಿತರಕ ಮಾರ್ಗಗಳು -12 ಇವೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು ತ್ರಿ ಸದಸ್ಯ ಸಮಿತಿಯನ್ನು ನೇಮಿಸಿ ಆದೇಶಿಸಿದ್ದು, ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರ ನೇಮಕವಾಗಿದೆ.
ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಟ ಮಾಡುವ ತ್ರಿ ಸದಸ್ಯ ಸಮಿತಿ ವಾಹನಕ್ಕೆ ಪೋಲಿಸ್ ಸಿಬ್ಬಂದಿ ನೇಮಿಸಲು ಹಾಗೂ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ನೀಡುವ ಬಗ್ಗೆ ಪೋಲಿಸ್ ಇಲಾಖೆಗೆ ಪತ್ರ ಬರೆಯಲಾಗಿದೆ. ಪ್ರಶ್ನೆ ಪತ್ರಿಕೆ ಸಾಗಾಣಿಕೆ ಮಾಡುವ ವಾಹನಕ್ಕೆ ಜಿ.ಪಿ. ಎಸ್ .ಅಳವಡಿಸಿ ಮಾನಿಟರ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಠೇವಣೀಕರಿಸಿರುವ ಮತ್ತು ವಿತರಿಸುವ ಬಗ್ಗೆ 24*7 ಸಿ.ಸಿ.ಟಿ.ವಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಅಳವಡಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಮಕ್ಕಳಿಗೆ ಸೂಕ್ತ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವೆಬ್ಕಾಸ್ಟಿಂಗ್ ವ್ಯವಸ್ಥೆ ಇದ್ದು ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ನವರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಪರೀಕ್ಷಾ ಕೇಂದ್ರದ ಅಧೀಕ್ಷಕರಿಗೆ ತರಬೇತಿ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ತಮ್ಮ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಇಲಾಖೆಯಿಂದ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಜಾಗೃತದಳದ ಸಿಬ್ಬಂದಿಯನ್ನು ನೇಮಿಸಲಾಗುವುದು.
ವೆಬ್ ಕ್ಯಾಸ್ಟಿಂಗ್ : ವೆಬ್ ಕ್ಯಾಸ್ಟಿಂಗ್ಗಾಗಿ ಈಗಾಗಲೇ ಸಿಬ್ಬಂದಿ ನೇಮಕ ಮಾಡಲಾಗಿದೆ. ಪರೀಕ್ಷಾ ವೇಳೆಯಲ್ಲಿ ವೆಬ್ ಕ್ಯಾಸ್ಟಿಂಗ್ಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಆದ್ದರಿಂದ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ನವರು ಕ್ರಮ ವಹಿಸಬೇಕು ಎಂದು ತಿಳಿಸಿದರು.
DC Shivamogga ದೂರದ ಊರುಗಳಿಂದ ಬರುವ, ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗುವುದು. ಬಿಇಓ ಗಳು ಅಂತಹ ಊರುಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ : ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓ ಮತ್ತು ತಂಡದೊAದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಪಿಯುಸಿ ಪರೀಕ್ಷೆಗಳು ಶಾಂತಿಯುತವಾಗಿ ನಡೆಯುವಂತೆ ಸಕಲ ಸಿದ್ದತೆ ಮಾಡಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ವಹಿಸಬೇಕು. ಯಾವುದೇ ಗೊಂದಲ ಮತ್ತು ಭಯಕ್ಕೀಡಾಗದಂತೆ ನಿರಾತಂಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ವ್ಯವಸ್ಥೆಗಳನ್ನು ಮಾಡಿಕೊಡಬೇಕು. ಪರೀಕ್ಷೆ ಕುರಿತು ಯಾವುದೇ ರೀತಿಯ ವದಂತಿಗಳು, ಸೋಷಿಯಲ್ ಮೀಡಿಯಾದಲ್ಲಿನ ನಕಲಿ ಸುದ್ದಿಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಸಿಸಿ ಟಿವಿ, ವೆಬ್ಕಾಸ್ಟಿಂಗ್ ಮತ್ತು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರಿಯಪ್ಪ, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಲೆನಾಡ ಕೋಗಿಲೆ ರಾಘಣ್ಣನವರಿಗೆ ಕರ್ನಾಟಕ ಸಂಘದಿಂದ ಗೌರವ ಸದಸ್ಯತ್ವ ಪ್ರದಾನ
ವಿಶೇಷ ಲೇಖನ:
ವಿನಯ್, ಶಿವಮೊಗ್ಗ
ಹೊಸನಗರ ತಾಲ್ಲೂಕಿನ ಕಾರಣಗಿರಿ ಸಿದ್ಧಿ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ರಾಘಣ್ಣನವರಿಗೆ ಕರ್ನಾಟಕ ಸಂಘದ ಗೌರವ ಸದಸ್ಯತ್ವ ನೀಡಿ ಗೌರವಿಲಾಯಿತು. ಖ್ಯಾತ ವಿದ್ವಾಂಸರಾದ ಡಾ. ಶಾಂತರಾಮ ಪ್ರಭು ರಾಘಣ್ಣನವರಿಗೆ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಶಂಕರನಾರಾಯಣ ಶಾಸ್ತಿçಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ನಿರೂಪಣೆಯನ್ನು ಕಾರ್ಯದರ್ಶಿಗಳಾದ ವಿನಯ್ ಶಿವಮೊಗ್ಗ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ರಾಗಣ್ಣನವರ ಸ್ವರ ಸಂಯೋಜನೆಯ ಭಾವಗೀತೆಗಳನ್ನು ಶ್ರೀಮತಿ ಮಾನಸ ಶಿವರಾಮಕೃಷ್ಣ, ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಅಂಬಿಕಾ ದೇವರಾಜ್ ಮುಂತಾದ ಕಲಾವಿದರು ಹಾಡಿದರು.
“ಮೇಲೆ ನೀಲಿ ಆಗಸ ……. ಕೆಳಗೆ ತಾಯಿ ಭೂಮಿ….. ದೇವರಿತ್ತ ಗಾಳಿ ನೀರು ಹಂಗೆಲ್ಲಿದೆ ಸ್ವಾಮಿ”?!
ನಮ್ಮ ರಾಘಣ್ಣ ಹಾರ್ಮೋನಿಯಂ ಹಿಡಿದು ಕಣ್ಮುಚ್ಚಿ ಮೇಲಿನ ಸಾಲುಗಳನ್ನು ಜೀವ ತುಂಬಿ ಹಾಡುತ್ತಿದ್ದರೆ ಅದು ನಿಜಕ್ಕೂ ಹಂಗಿರದ ಆನಂದದ ಪ್ರಪಂಚ. ರಾಘಣ್ಣ ಅಸಲಿಗೆ ಈ ಹಂಗಿನ ಪ್ರಪಂಚದಲ್ಲಿ ಹಂಗಿಲ್ಲದೆ ಬದುಕಿದ ಕಲಾವಿದ . ಇಂದಿನದು ಇಂದಿಗೆ , ನಾಳೆ ನೋಡಿದರಾಯಿತು ಎಂಬ ನಿಶ್ಚಿಂತೆಯ ನೆರಳಿನಲ್ಲೇ ಬದುಕು ಕಟ್ಟಿಕೊಂಡ ಮುಗ್ಧ ಜೀವ. ಯವತ್ತೋ, ಎಲ್ಲೋ ಪ್ರೇರಣೆ ಪಡೆದು ಬರೆದ ಯಾವುದೋ ಕವಿಯ ಸಾಲುಗಳನ್ನು ಕೇಳುಗರೆದೆಯಲ್ಲಿ ಬಿತ್ತಿ ಅದು ಅವರದೇ ಭಾವವೇನೋ ಎಂಬಂತೆ ತಮ್ಮ ಹಾಡಿನಿಂದ ಕಟ್ಟಿಕೊಡುವ ಹಾಡುಗಾರ ಸಾಮಾನ್ಯದ ಕಲಾವಿದನಲ್ಲ ….. ರಾಘಣ್ಣ, ಪು. ತಿ. ನ ಸಾಲುಗಳನ್ನು ಹಾಡುತ್ತಿದ್ದರೆ ಗೋಕುಲದ ದರ್ಶನವಾಗುತ್ತದೆ. ಕುವೆಂಪು ಸಾಲುಗಳನ್ನು ಹಾಡುತ್ತಿದ್ದರೆ , ಮಲೆನಾಡ ಪ್ರಕೃತಿಯ ರಮ್ಯತೆ ಕಣ್ಣ ಮುಂದೆ ಸುಳಿಯುತ್ತದೆ. ಇದು ರಾಘಣ್ಣನಂತಹ ಬಲು ಅಪರೂಪದ ಕಲಾವಿದನ ಸತ್ವಶುದ್ಧಿ ! ಹಾಡಿನ ಅನಂದ ಹಾಡು ಹಾಡುವ ಕಲಾವಿದನದೋ? ಕೇಳುವ ಪ್ರೇಕ್ಷಕನದೋ?! ಇದೊಂದು ವಿಪರೀತ ಪ್ರಶ್ನೆಯೇ! ಅದೆಷ್ಚೋ ಬಾರಿ ಹಾಡುವವರು ಹಾಡುತ್ತಾರೆ ಕೇಳುವವರು ಕೇಳುವಂತೆ ಇರುತ್ತಾರೆ.. ರಾಘಣ್ಣ ಹಾಡಿದರೆ ಅದೊಂದು ಭಾವಾನುಭೂತಿ! ಇಲ್ಲಿ ಹಾಡುವವ-ಕೇಳುವವ ಇಬ್ಬರೂ ಕಳೆದು ಹೋಗುವಷ್ಚು ಭಾವ ಸಂಮೃದ್ಧಿ !! ಕವಿ ಓ.S. ಲಕ್ಷ್ಮೀನಾರಾಯಣ ಭಟ್ಟರ ಸಾಲಿನಂತೆ…“ನಾನು ಹಾಡುವುದು ನನಗೆಂದು.. ಎದೆ ಭಾರ ಇಳಿಯಲೆಂದು. ಎಲ್ಲ ಮರೆತು ಈ ಹಾಡ ಕೇಳುತಿಹ ನಿಮ್ಮ ಪ್ರೀತಿಗೆಂದು” ಇದು ಪರಸ್ಪರ ಪ್ರೀತಿಯ ಅವಿನಾಭಾವ. ರಾಘಣ್ಣ ದುಡ್ಡಿಗಾಗಿ ಹಾಡಿದ ಕಲಾವಿದನಲ್ಲ. ಹಾಗಾಗಿಯೇ ಅವರು ಮಲೆನಾಡ ಹಕ್ಕಿಯಾಗಿಯೇ ಉಳಿದವರು. ಮನಸ್ಸು ಮಾಡಿದ್ದರೆ ರಾಜಧಾನಿ ಸೇರಿ ದುಡ್ಡು ಮಾಡಬಹುದಿತ್ತು ಆದರೆ ಈ ಹಾಡುವ ಜೋಗಿಗೆ ಅದಾವುದರ ಪರಿವಿರಲಿಲ್ಲ. ಲಕ್ಷ್ಮೀ ಕಾಲು ಮುರಿದುಕೊಂಡು ಮನೆಯಲ್ಲೇ ಇರಲಿಲ್ಲವಾದರೂ ನಂಬಿದ ಗಾನ ಸರಸ್ವತಿ ರಾಘಣ್ಣನ ಕೈ ಬಿಡಲೇ ಇಲ್ಲ. ಮಲೆನಾಡಿಗರ ಭಾವಶುದ್ಧಿಯಲ್ಲಿ ರಾಘಣ್ಣನ ಪಾತ್ರ ದೊಡ್ಡದು. ನಮ್ಮ ನಡುವೆ ಭಾವಗೀತೆಗಳನ್ನು ಆನಂದಿಸುವ-ಆಸ್ವಾದಿಸುವ ದೊಡ್ಡ ವರ್ಗವನ್ನು ಹುಟ್ಟುಹಾಕಿದ ಹಿರಿಮೆ ರಾಘಣ್ಣನದು. ತನ್ನ ಅದ್ಭುತ ರಾಗ ಸಂಯೋಜನೆಗಳ ಮೂಲಕ ಅದೆಷ್ಟೋ ಕವಿ ಕಾವ್ಯಗಳು ಜನರಿಂದ ಜನರಿಗೆ ತಲುಪಿಸಿ ತಾನು ಏನೂ ಮಾಡಿಲ್ಲವೆಂಬತೆ ಸುಮ್ಮನಿರುವ ರಾಘಣ್ಣ ನಿಜವಾಗಿಯೂ “ ಭಾವ ತುಂಬಿಸಿದ ಮೌನ ಸಾಧಕ” ಈ ಮಾತಿನಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ರಾಘಣ್ಣನಿಗೆ ಈಗ ಸುಮಾರು ೯೦ರ ಆಸುಪಾಸು. ಒಂದು ಹಾಡು ಹಾಡಿ ಎಂದು ಒಬ್ಬನೇ ಒಬ್ಬ ಅಭಿಮಾನಿ ಕೋರಿಕೊಂಡರೂ ತನ್ಮಯತೆಯಿಂದ ಹಾಡುವ ನಿರಾಡಂಬರ ವ್ಯಕ್ತಿ. 90 ವರ್ಷ ಸಂದರೂ ಇನ್ನೂ ಕೇಳುಗರ ಎದೆಯನ್ನಾಳುತ್ತಿರುವ ಗಾನಧಣಿ ! ರಾಘಣ್ಣನಂತಹ ನಿಗರ್ವಿ ಕಲಾವಿದ ಸಮಾಜದ ಆಸ್ತಿ …ಅದೆಷ್ಟೋ ಅನಂದದ ಕ್ಷಣಗಳನ್ನು ಹಿಂತಿರುಗಿಸಲಾರದ ಸಾಲದಂತೆ ಕೊಟ್ಟ ರಾಘಣ್ಣನಂತಹ ಕಲಾವಿದನಿಗೆ ಶಿವಮೊಗ್ಗೆಯ ಪ್ರತಿಷ್ಠಿತ ಕರ್ನಾಟಕ ಸಂಘದ ಗೌರವ ಸದಸ್ಯತ್ವವನ್ನು ನೀಡುತ್ತಿರುವುದು ಅತ್ಯಂತ ಸಂತೋಷ ಹಾಗೂ ಸಮಾಧಾನದ ವಿಷಯ.
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ & ಭದ್ರಾವತಿಯಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ನಗರ ಭಾಗದ ಜನರಿಗೆ ತಮ್ಮ ಸಮೀಪದಲ್ಲಿ ಸರ್ಕಾರದ ಹಲವು ಸೇವೆಗಳು ತಮ್ಮ ಮನೆ ಬಾಗಿಲಿಗೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಸಿಸಿ, ಭದ್ರಾವತಿ ಸಿಎಂಸಿ, ಸಾಗರ ಸಿಎಂಸಿ ಮತ್ತು ಸೊರಬ ಟಿಎಂಸಿ ಗಳಲ್ಲಿ ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿ ಇರುವ ಅಭ್ಯರ್ಥಿಗಳು https://www.karnatakaone.gov.in / public/Franchisee Terms ರ ಮೂಲಕ ಮಾ. 02 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Brahmakumari Ishwari University ಧ್ಯಾನವು ಮನಸ್ಸಿನ ಏಕಾಗ್ರತೆ ಹೆಚ್ಚಿಸುತ್ತದೆ- ಬ್ರಹ್ಮಕುಮಾರಿ ಸ್ವಾತಿ
Brahmakumari Ishwari University ಪ್ರತಿ ದಿನ ಧ್ಯಾನ ಅಭ್ಯಾಸ ಮಾಡುವುದರಿಂದ ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ನೆಮ್ಮದಿ ಪಡೆಯಲು, ಆಂತರಿಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಶಿವಮೊಗ್ಗ ನಗರದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಒತ್ತಡಮುಕ್ತ ಜೀವನಕ್ಕಾಗಿ ಶಿವಯೋಗ ಶಿಬಿರದಲ್ಲಿ ಮಾತನಾಡಿ, ಧ್ಯಾನ ಎಂದರೆ ಮನಸ್ಸಿನ ಏಕಾಗ್ರತೆ, ಶಾಂತತೆ ಆಗಿದ್ದು, ಧ್ಯಾನವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಆಲೋಚನೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಎಂದು ತಿಳಿಸಿದರು.
ಧ್ಯಾನವು ಒತ್ತಡ, ಆತಂಕ, ಖಿನ್ನತೆ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಧ್ಯಾನವು ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿ ನೀಡುತ್ತದೆ. ಧನಾತ್ಮಕ ಆಲೋಚನೆ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಿಕ್ಷಕಿ ಬೇಬಿ ಷಡಕ್ಷರಿ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಆಲೋಚನೆಗಳ ಮೊತ್ತವೇ ವ್ಯಕ್ತಿತ್ವ. ಈಗಿನ ಒತ್ತಡದ ಜೀವನಶೈಲಿ, ಆಹಾರ ಪದ್ಧತಿ ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಅನಾರೋಗ್ಯ ಆಗಿಸುತ್ತವೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಬೇಕು ಎಂದು ತಿಳಿಸಿದರು.
ಜೆಎನ್ಎನ್ಸಿಇ ಪ್ರಾಧ್ಯಾಪಕ ನಾಗೇಶ್ ಮಾತನಾಡಿ, ಒತ್ತಡಯುತ ಜೀವನಶೈಲಿ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಧನಾತ್ಮಕ ಆಲೋಚನೆಗಳು ಅತ್ಯಂತ ಮುಖ್ಯ. ಸದಾ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು ಎಂದು ಹೇಳಿದರು.
Brahmakumari Ishwari University ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒತ್ತಡಮುಕ್ತ ಜೀವನ ನಡೆಸಲು ಧ್ಯಾನ ಶಿಬಿರಗಳು ಅತ್ಯಂತ ಸಹಕಾರಿಯಾಗುತ್ತವೆ. ಪ್ರತಿ ದಿನ ಸ್ವಲ್ಪ ಸಮಯ ಯೋಗ, ಧ್ಯಾನ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಬಿಂದು ವಿಜಯಕುಮಾರ್, ರುದ್ರಪ್ಪ ಚಿಲೂರ್, ಆರ್ ಮನೋಹರ್, ನಾಗೇಶ್, ಶಿಕ್ಷಕ ಶಿವಣ್ಣಗೌಡ, ಬ್ಯಾಂಕ್ ಮ್ಯಾನೇಜರ್ ಸಿದ್ದು, ವಕೀಲ ವರಲಕ್ಷ್ಮೀ, 45ಕ್ಕೂ ಹೆಚ್ಚು ಶಿಬಿರಾರ್ಥಿಗಳು, ಈಶ್ವರೀಯ ವಿಶ್ವ ವಿದ್ಯಾಲಯದ ಸದಸ್ಯರು ಉಪಸ್ಥಿತರಿದ್ದರು.
