Friday, March 20, 2026
Friday, March 20, 2026
Home Blog

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

0

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ ರಾದ ವೈ ಎಸ್ ವಿ ದತ್ತ ಅವರಿಗೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರು ಈ ನಾಡು ಕಂಡ ಅಪ್ರತಿಮ ಪ್ರಾಮಾಣಿಕ ರಾಜಕಾರಣಿ. ಕಡು ಬಡತನದಿಂದ ಸಾಲ ಸೂಲ ಮಾಡಿ ತನ್ನ ಪ್ರಾಮಾಣಿಕ ರಾಜಕಾರಣದಿಂದ ಕಡು ಬಡವರ ಸೇವೆ ಮಾಡಿದವರು ಕಾಗೋಡು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಸಿದ್ಧರಾಗಿ ಡಾ ರಾಮಮನೋಹರ ಲೋಹಿಯವರ ಸಮಾಜವಾದಿ ಸಿದ್ಧಾಂತವನ್ನು ಅಪ್ಪಿಕೊಂಡು ಶಿವಮೊಗ್ಗ ಜಿಲ್ಲೆಯನ್ನು ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು. ಶಾಂತವೇರಿ ಗೋಪಾಲಗೌಡರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ಇಡೀ ವಿಧಾನಸಭೆ ನಡುಗುತ್ತಿತ್ತು. ಅವರಂತಹ ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ ಮತ್ತೆ ನೋಡಲು ಸಾಧ್ಯವಿಲ್ಲವಾಗಿದೆ. ಸರ್ಕಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ಬದುಕಿದ್ದರೆ ಅವರಿಗೆ 101 ವರ್ಷ ವಯಸ್ಸು ಆಗುತ್ತಿತ್ತು ಅವರ ಹೆಸರಿನಲ್ಲಿರುವ ಈ ಪ್ರಶಸ್ತಿ ನನಗೆ ಕೊಟ್ಟಿರುವುದನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದರು

ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಎಂ ಎನ್ ಸುಂದರ್ ರಾಜ್ ರವರು ಅವರು ಮೂಲತ ರಾಜಕಾರಣಿಯಾಗಿದ್ದರು ತನ್ನೊಳಗಿನ ಬರಹಗಾರ ಲೇಖಕ ಯಾವಾಗಲೂ ಜಾಗೃತನಾಗಿದ್ದಾನೆ ಇದರಿಂದ ಅವರು ತಮ್ಮ ಪ್ರಾಮಾಣಿಕ ರಾಜಕಾರಣವನ್ನು ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು

ನಂತರ ಮಾತನಾಡಿದ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ್ ರವರು ವೈ ಎಸ್ ವಿ ದತ್ತ ರಂತಹ ನೇರ ನಿಷ್ಟುರ ಪ್ರಾಮಾಣಿಕ ಆದರ್ಶ ರಾಜಕಾರಣವನ್ನು ಮಾಡಿಕೊಂಡು ಬಂದವರು ಸಾಮಾಜಿಕ ರಾಜಕೀಯ ಸೇವೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ರಾಜಕೀಯಕ್ಕೆ ಮೌಲ್ಯವನ್ನು ತುಂಬಿಕೊಟ್ಟವರು ಅವರು ಎಂದು ವಿಶ್ಲೇಷಣೆ ಮಾಡಿದರು

Shimoga News ಇದೇ ಸಂದರ್ಭದಲ್ಲಿ ಮಾತನಾಡಿದ ಸರ್ವೋದಯ ಜಿಲ್ಲಾ ಮಂಡಲದ ಕಾರ್ಯದರ್ಶಿಯಾದ ರೊಟೇರಿಯನ್ ಜಿ ವಿಜಯ್ ಕುಮಾರ್ ಅವರು ವೈ ಎಸ್ ವಿ ದತ್ತ ರವರ ಪ್ರಾಮಾಣಿಕ
ರಾಜಕಾರಣ,ಸಾಹಿತ್ಯ,ಲೇಖಕ ಬರಹಗಾರರಾಗಿ ಅವರು ಮಾಡಿದ ಸೇವೆಯನ್ನು ಸ್ಮರಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದು ಅದು ಸಹ ನಮ್ಮ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ರಾಜಕಾರಣಿ ಹೆಸರಿನ ಈ ಪ್ರಶಸ್ತಿಗೆ ಅವರು ಅರ್ಹ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನನ್ನ ಕನಸಿನ ಶಿವಮೊಗ್ಗದ ಎನ್ ಗೋಪಿನಾಥ್ ರವರು ಸುಮಾರು 40 ವರ್ಷದಿಂದ ರಾಜಕಾರಣದಲ್ಲಿದ್ದರು ಸರಳತೆಯಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದರು

ಇದೆ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್ ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ ಆರ್ ಜೆ ಗಳಾದ ಗಣೇಶ್ ಕೆಂಚನ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್ ರುದ್ರಪ್ಪ ಚೀಲು, ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ ಉಪಸ್ಥಿತರಿದ್ದರು

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

0

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ “ಕ್ವೇದಮಭ್ರಂ ನಿವಿಶತೇ ಕ್ವಾಯಂ ಸಂವತ್ಸರೋ ಮಿಥಃ|ಕ್ವಾಹಃ ಕ್ವೇಯಂ ದೇವರಾತ್ರೀ ಕ್ವ ಮಾಸಾ ಋತವಃ ಶ್ರಿತಾಃ”||

ಹೇ ಭಗವಂತ ಆಕಾಶದಲ್ಲಿ ಮೋಡಗಳನ್ನು ಹಿಡಿದಿಟ್ಟು ನಿಲ್ಲಿಸಿರುವವರು ಯಾರು? ಸಂವತ್ಸರ ಗಳನ್ನು ನಿಯಮಿಸಿದವರು ಯಾರು? ಹಗಲಿರುಳು ಹೇಗೆ ಸಂಭವಿಸುತ್ತದೆ? ಮಾಸ ಮತ್ತು ಋತುಗಳಿಗೆ ಆಧಾರ ಯಾವುದು?.. ಶಾಲಿವಾಹನ ಶಕೆಯಲ್ಲಿ ಬರುವ ಅರವತ್ತು ಸಂವತ್ಸರದಲ್ಲೊಂದಾದ ಪರಾಭವ ಸಂವತ್ಸರದ ಆಗಮನವಾಗಿದೆ. ವಸಂತದಲ್ಲಿ ಹೊಸ ಚಿಗುರು ಮೂಡುವಂತೆ ಎಲ್ಲರಲ್ಲಿ ಹೊಸ ಬೆಳಕು, ಭರವಸೆ ಮೂಡಲಿ, ಭಾಸ್ಕರನ ಕಿರಣಗಳಂತೆ ಸಾಧನೆಗಳು ಶೋಭಿಸಲಿ, ಬೇವಿನ ಕಹಿಯೂ, ಬೆಲ್ಲದ ಸವಿಯೂ ಸೇರಿದಂತೆ ಸುಖ ದುಃಖ ಗಳು ಸಮವಾಗಿರಲಿ, ಪರಾಭವ ಸಂವತ್ಸರದಲ್ಲಿ ಶತೃಗಳ ಪರಾವಭವವಾಗಲಿ, ಗೆಲುವು ವಿಜೃಂಭಿಸಲಿ, ಭಗವಂತನಿಂದ‌ ರಚಿತವಾದ ಪ್ರಕೃತಿಯ ನಿಯಮದಂತೆ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ, ಈ ಪರಾಭವ ಸಂತ್ಸರದಲ್ಲಿ ಆರೋಗ್ಯ, ಆಯುಷ್ಯ, ನೆಮ್ಮದಿ, ಸಂಪತ್ತು ವೃದ್ಧಿಸಲಿ.

ಜಂಬೂದ್ವೀಪದ ಭರತವರ್ಷ, ಭರತಖಂಡದ ಶಕಪುರುಷರಲ್ಲೊಬ್ಬನಾದ ಶಾಲಿವಾಹ‌ನ ಶಕಪುರುಷರುಷನು ಎಲ್ಲರಿಗೂ ಹರ್ಷವನ್ನುಂಟುಮಾಡಲಿ.

ಹೊಸ ಸಂವತ್ಸರ ಪರಾಭವ ಸಂವತ್ಸರದ ಹಾರ್ಧಿಕ ಶುಭಾಶಯ.🌹🌹🌹🙏🙏🙏

ಕಲಿಯುಗದ ಆರು ಶಕಕರ್ತೃರು ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ.

ಕ್ರಿ.ಪೂ 3102ರಲ್ಲಿ ಆರಂಭವಾದ 4,32,000 ವರ್ಷಗಳ ಕಲಿಯುಗದಲ್ಲಿ ಯುಧಿಷ್ಟಿರ ಶಕೆ 3044 ವರ್ಷಗಳು (ಯುಧಿಷ್ಟಿರ ಶಕೆಯ ಒಟ್ಟೂ ಕಾಲ ದ್ವಾಪರ ಯುಗದ 36 + ಕಲಿಯುಗದ 3044 ವರ್ಷಗಳು = 3080 ವರ್ಷ, ಯುಧಿಷ್ಟಿರ ಶಕೆ ಶುರುವಾಗಿದ್ದು ಮಹಾಭಾರತ ಯುದ್ಧ ಮುಗಿದ ನಂತರ ಅರ್ಥಾತ್ ಕ್ರಿ.ಪೂ 3138ರಲ್ಲಿ).

ವಿಕ್ರಮಾದಿತ್ಯನಿಂದ ಶುರುವಾದ ವಿಕ್ರಮಶಕೆಯ ಅವಧಿ 135 ವರ್ಷ. ಅಂದರೆ 3044ನೇ ಕಲಿಯುಗ ವರ್ಷದಿಂದ 3179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಪೂ 57ರಿಂದ ಕ್ರಿ.ಶ 78ರ ತನಕ)

ಶಾಲಿವಾಹನ ಶಕೆಯ ಅವಧಿ 18,೦೦೦ ವರ್ಷಗಳು. 3179ನೇ ಕಲಿಯುಗ ವರ್ಷದಿಂದ 21,179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಶ 78- ಕ್ರಿ.ಶ 21257)

ಇದಾದ ನಂತರ 1೦,೦೦೦ ವರ್ಷಗಳ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷಗಳ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಬರಲಿಕ್ಕಿದೆಯಷ್ಟೆ. ಇವು ಆರನ್ನೂ ಸೇರಿಸಿದರೆ ಅದು ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತದೆ. ಕೊನೆಯ ಮೂರು ಶಕೆಗಳು ಭವಿಷ್ಯತ್ಕಾಲದ್ದಾದ್ದರಿಂದ ಅವುಗಳ ಚಿಂತೆ ಬಿಟ್ಟುಬಿಡೋಣ.

ಜ್ಯೋತಿರ್ವಿಧಾಭರಣದಲ್ಲಿ

ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||

ಶಾಲೇಯಧಾರಾಭೃತಿ ಶಾಲಿವಾಹನಃ | ಸುಚಿತ್ರಕೂಟೇ ವಿಜಯಾಭಿನಂದನಃ ||

ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||

ಚಂದ್ರವಂಶದ ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ಪ್ರಮಾರ ವಂಶದ ವಿಕ್ರಮನದ್ದು ಉಜ್ಜಯಿನೀ, ಅದೇ ವಂಶದ ಶಾಲಿವಾಹನನ ರಾಜಧಾನಿ ಧಾರಾನಗರ. ಗೋಹಿಲ ವಂಶದ ವಿಜಯಾಭಿನಂದನನದ್ದು ಚಿತ್ರಕೂಟ, ಸಿಸೋದರ ಕುಲದ ನಾಗಾರ್ಜುನ ಆಳುವುದು ರೋಹಿತಕದಲ್ಲಿ, ಕಲ್ಕಿವಂಶದ ಬಲಿಯ ರಾಜಧಾನಿ ಭೃಗುಕಚ್ಛ.

ಇದೇ ಕಾಳಿದಾಸ ವಿಕ್ರಮನನ್ನು ಮುಂದಿನ ಶ್ಲೋಕದಲ್ಲಿ ಹೊಗಳಿದ್ದಾನೆ.

ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |

ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತಃ

ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |

ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |

ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||

ವಿಕ್ರಮನು ಎಷ್ಟು ದೊಡ್ಡ ವಿದ್ವಜ್ಜನಪೋಷಕನೆಂದರೆ ಕೈಯಲ್ಲಿ ನಾಲ್ಕು ಶ್ಲೋಕಗಳಿದ್ದರೆ ಅವನನ್ನು ಎಂಥ ಸಮಯದಲ್ಲೂ ಭೇಟಿಯಾಗಬಹುದಿತ್ತಂತೆ. ಕವಿಗಳ ಪ್ರತಿ ಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಅದಕ್ಕಾಗಿ ಹದಿನಾಲ್ಕು ಶಾಸನಗಳು ಬಹುಮಾನವಾಗಿ ದೊರೆಯುತ್ತಿದ್ದವು.

ಹೇ ರಾಜನೇ! ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕೈಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಅದು ಮಾತ್ರ ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದಿಗೂ ಸಿಗಲಾರದು.

Klive Special Article  ಏಳನೇ ಶತಮಾನದ ಭೋಜರಾಜನನ್ನು ಕುರಿತು ಹದಿನೈದನೇ ಶತಮಾನದಲ್ಲಿ ಬಂದ ಭೋಜಪ್ರಬಂಧದಲ್ಲಿ ಇದೇ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ ! ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರು ಸೇರಿ ಸಂಸ್ಕೃತ ಕವಿಗಳನ್ನೆಲ್ಲ ಭೋಜನ ಆಸ್ಥಾನದಲ್ಲಿದ್ದರೆಂಬಂತೆ ಒಟ್ಟಿಗೆ ತುರುಕಿ ಕಲಸುಮೆಲೋಗರಗೊಳಿಸಿದ ಭೋಜಪ್ರಬಂಧವೆಂಬ ಶುದ್ಧ ಕಾಲ್ಪನಿಕ ಕೃತಿಯನ್ನು ಹಿಡಿದುಕೊಂಡು ಇತಿಹಾಸಕಾರರು ಭೋಜನನ್ನೇ ವಿಕ್ರಮಾದಿತ್ಯನನ್ನಾಗಿಸಿದರು. ಭೋಜಪ್ರಬಂಧದ ಅರ್ಧಕ್ಕರ್ಧ ಕಥೆ ೧೩ನೇ ಶತಮಾನದಲ್ಲಿ ರಚಿತವಾದ ಕುಮಾರದಾಸನ ಕುರಿತಾದ ಸಿಂಹಳದ ’ಪೂಜಾವಳಿ’ ಎಂಬ ಕೃತಿಯನ್ನು ಬಳಸಿಕೊಂಡದ್ದು. ಶುದ್ಧ ವೈದಿಕ ಕಾಳಿದಾಸ ಕುರಿಕಾಯುವ ಪೆದ್ದನಾಗಿಬಿಟ್ಟ.

ವಿಕ್ರಮನ ಆಸ್ಥಾನ ಜ್ಯೋತಿಷಿಯಾದ ಶ್ರೀಕೃಷ್ಣಮಿಶ್ರನ ಜ್ಯೋತಿಷ್ಯಫಲರತ್ನಮಾಲಾ ಗ್ರಂಥದಲ್ಲಿ.

ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||

ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||

ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸುತ್ತಾನೆ.

ವಿಕ್ರಮನು ದಕ್ಷಿಣ ಸಾಗರದಿಂದ ಹಿಮಾಲಯದವರೆಗೂ ಆಡಳಿತ ನಡೆಸಿ, ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ ವಿಕ್ರಮ ಶಕೆಯನ್ನು ಕ್ರಿ.ಪೂ 57ರಲ್ಲಿ ಸ್ಥಾಪಿಸಿದ. ಇದಾದ ನಂತರ ಉಜ್ಜೈನಿಗೆ ಹಿಂದಿರುಗಿ 7೦ ವರ್ಷಗಳ ಕಾಲ ಕವಿಗಳು, ವಿದ್ವಾಂಸರ ಜೊತೆ ತನ್ನ ಆಸ್ಥಾನದಲ್ಲಿ ಕಾಲಕ್ಷೇಪ ನಡೆಸಿದ. ವಿಕ್ರಮ ಪಟ್ಟಕ್ಕೇರಿದ್ದು 2೦ನೇ ವರ್ಷದಲ್ಲಿ, ನಂತರ 24 ವರ್ಷಗಳ ಕಾಲ ದಂಡಯಾತ್ರೆಯಲ್ಲಿ ಈಡೀ ಭರತಖಂಡವನ್ನು ಗೆದ್ದು ಶಕಸ್ಥಾಪಕನಾಗಿ, ಜ್ಯೋತಿಷ್ಯಫಲರತ್ನಮಾಲದ ರಚನೆಯ ವೇಳೆಗೆ 7೦ ವರ್ಷಗಳನ್ನು ವಿದ್ವಾಂಸರ ಮಧ್ಯೆ ಕಳೆದಿದ್ದ.

ಇದು ಭಾರತದ ಇತಿಹಾಸ,
ಇದು ಶ್ರೇಷ್ಠ ಇತಿಹಾಸ.

ದಿಲೀಪ್ ನಾಡಿಗ್

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

0

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ನವಮಿ ಉತ್ಸವದ ಭಾಗವಾಗಿ ಪ್ರತಿ ದಿನ ಸಂಜೆ 06.30ಕ್ಕೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ದೇವರಿಗೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.

ಮಾ. 19ರ ಗುರುವಾರ ಯುಗಾದಿ ಹಬ್ಬ ಪಂಚಾಂಗ ಶ್ರವಣ ನಡೆಯಲಿದ್ದು, ಮಹಾವಿಷ್ಣುವಿನ ಅಲಂಕಾರವಿದೆ. ಮಾ. 20ರ ಶುಕ್ರವಾರ ಶ್ರೀಮತಿ ಭವಾನಿ ಅನಂತರಾಮ್ ಮತ್ತು ಸಂಗಡಿಗರು, ಮತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಗೂ ದೇವರಿಗೆ ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ, ಮಾ. 21ರ ಶನಿವಾರ ಕಗ್ಗ ಖ್ಯಾತಿಯ ನಟೇಶ್‌ರವರಿಂದ ಸೀತಾ ಪರಿತ್ಯಾಗ – ಉಪನ್ಯಾಸ, ದೇವರಿಗೆ ಅಹಲ್ಯಾ ಶಾಪ ವಿಮೋಚನೆ ಅಲಂಕಾರವಿದೆ. 22ರ ಭಾನುವಾರ ನಾಗಶ್ರುತಿ ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಸೀತಾ ಕಲ್ಯಾಣ ಅಲಂಕಾರವಿದೆ. ಮಾ. 23ರ ಸೋಮವಾರ ನಡೆಯುವ ಮುದ್ರಿಕಾ ಪ್ರದಾನ ಗಮಕ ವಾಚನದಲ್ಲಿ, ಡಾ. ಸನತ್ ಕುಮಾರ್‌ರವರಿಂದ ವಾಚನ, ಅಚ್ಯುತ ಅವಧಾನಿಯವರಿಂದ ವ್ಯಾಖ್ಯಾನ ನಡೆಯಲಿದೆ.

Kote SeethaRamanjaneya Temple ದೇವರಿಗೆ ಗುಹಾತಿಥ್ಯ ಅಲಂಕಾರವಿದೆ. ಮಾ. ೨೪ರ ಮಂಗಳವಾರ ಸಂಭ್ರಮ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಕಬಂಧ ಬಾಹು ವಧೆ ಅಲಂಕಾರವಿದೆ. ಮಾ. 25ರ ಬುಧವಾರ ನಾದ ಸಂಭ್ರಮ ಕಾರ್ಯಕ್ರಮವಿದ್ದು, ದೇವರಿಗೆ ಶಬರಿ ಅತಿಥ್ಯ ಅಲಂಕಾರವಿದೆ. ಮಾ. 26ರ ಗುರುವಾರ ಶೃಂಗೇರಿ ಹೆಚ್. ಎಸ್. ನಾಗರಾಜ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮವಿದ್ದು, ದೇವರಿಗೆ ವಿಭೀಷಣ ಶರಣಾಗತಿ ಅಲಂಕಾರವಿದೆ. ಮಾ. 27ರ ಶುಕ್ರವಾರ ಬೆಳಗ್ಗೆ ಮೂಲ ರಾಮರಿಗೆ ಮಹಾಭಿಷೇಕ, ಸಂಜೆ 5ಕ್ಕೆ ಪಟ್ಟಾಭಿಷೇಕ, ಸಂಜೆ 7ಕ್ಕೆ ಉತ್ಸವ, ರಾವಣ ಸಂಹಾರ ಮತ್ತು ಪುಷ್ಪಕ ವಿಮಾನ ಅಲಂಕಾರ, ಮಾ. 28ರ ಶನಿವಾರ ಸಂಜೆ 7.00ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 5 ರಿಂದ ವಿವಿಧ ಭಜನಾ ಮಂಡಳಿ ವತಿಯಿಂದ ಸಂಜೆ ಭಜನಾ ಕಾರ್ಯಕ್ರಮವಿದ್ದು, ರಾತ್ರಿ ವಸಂತ ಸೇವೆ (ಪಾನಕ, ಕೋಸಂಬರಿ) ವಿತರಣೆ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

0

Women’s Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೀವನ ಸಂಜೆ ವೃದ್ಧಾಶ್ರಮ ಗೋಪಾಳದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯರಾದ ಪ್ರಿಯಾಂಕ ಚೌಹಾಣ್ ರವರು ಮಾತನಾಡಿ, ವೃದ್ಧಾಪ್ಯದಲ್ಲಿ ಬರಬಹುದಾದ ಸಾಮಾನ್ಯ ತೊಂದರೆಗಳು ಅದಕ್ಕೆ ಬೇಕಾದಂತಹ ಚಿಕಿತ್ಸೆಗಳನ್ನು ವಿಸ್ತಾರವಾಗಿ ತಿಳಿಸಿದರು.

ಭಾಗ್ಯಲಕ್ಷ್ಮಿ ಆಚಾರ್ ರವರು ಮಾತನಾಡಿ, ಮಹಿಳಾ ದಿನಾಚರಣೆಯನ್ನು ವೃದ್ಧಾಶ್ರಮದಲ್ಲಿ ಆಚರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಮನಸಿಗೆ ಹತ್ತಿರವಾಗಿರುವ ಕಾರ್ಯವಾಗಿದೆ. ಸಮಾಜದಲ್ಲಿ ತಮ್ಮ ಜೀವನವನ್ನು ಕುಟುಂಬಕ್ಕೆ ಅರ್ಪಿಸಿದ ಅನೇಕ ವೃದ್ಧ ಮಹಿಳೆಯರು ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿದ್ದಾರೆ. ಈ ವಿಶೇಷ ದಿನದಂದು ಅವರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಸಹನ.ಇ.ವಿ. ಅವರು ಮಾತನಾಡಿ, ಪ್ರಸ್ತುತ ಹೆಣ್ಣು ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಹೊರ ಪ್ರಪಂಚಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Women’s Day ಕಾರ್ಯಕಮ್ರದ ಅಧ್ಯಕ್ಷತೆ ವಹಿಸಿದ್ದ ಪೃಥ್ವಿ ನಾಗರಾಜ್ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷತೆಯ ಕುರಿತು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೈದ್ಯರಾದ ಪ್ರಿಯಾಂಕಾ ಚೌಹಾಣ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಶ್ರೀಮತಿ ಸಹನಾ.ಇ.ವಿ., ನಿವೃತ್ತ ಪ್ರಾಂಶುಪಾಲೆ ಭಾಗ್ಯಲಕ್ಷ್ಮಿ ಆಚಾರ್, ಯಶೋದಮ್ಮನವರು ಹಾಗೂ ವಲಯ ಉಪಾಧ್ಯಕ್ಷರಾದ ಕುಮಾರ್ ಬೆಣ್ಣಿ, ಪೂರ್ವ ಅಧ್ಯಕ್ಷರಾದ ರುದ್ರೇಶ್ ಕೋರಿ ಹಾಗೂ ಕಾರ್ಯದರ್ಶಿ ಮಮತಾ ವಿ ಶಾನ್ಬೋಗ್, ಮಕ್ಕಳ ವಿಭಾಗದ ಜೆಸಿ ಕನಿಷ್ಕ.ವಿ, ಜೀವನ ಸಂಜೆ ವೃದ್ಧಾಶ್ರಮದ ಮುಖ್ಯಸ್ಥರಾದ ಹಾಲಪ್ಪನವರು ಹಾಗೂ ಚಿರಂತನದ ಎಲ್ಲಾ ಸದಸ್ಯರು ಭಾಗವಹಿಸಿದ್ದರು

Keladi Shivappa Nayaka Agriculture University ಮಾರ್ಚ್ 23 ರಿಂದ ನವಿಲೆ ಕೃಷಿ ಮಹಾವಿದ್ಯಾಲಯದಲ್ಲಿ ವಿಕಸಿತ ಭಾರತ ರಾಷ್ಟ್ರೀಯ ಸಮ್ಮೇಳನ.

0

Keladi Shivappa Nayaka Agriculture University ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘ, ಐಸಿಎಆರ್-ಐಎಆರ್‌ಐ ನವದೆಹಲಿ, ಐಸಿಎಆರ್-ಪುಷ್ಪ ಕೃಷಿ ಸಂಶೋಧನಾ ನಿರ್ದೇಶನಾಲಯ ಪುಣೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಐಸಿಎಆರ್-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಈ ಸಂಸ್ಥೆಗಳ ಸಹಯೋಗದೊಂದಿಗೆ ಮಾರ್ಚ್ 23 ರಿಂದ 25 ರವರೆಗೆ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಮೂರು ದಿನಗಳ ಕಾಲ ವಿಕಸಿತ ಭಾರತ@2047ರ ಪುಷ್ಪ ಕೃಷಿ ಮತ್ತು ಭೂದೃಶ್ಯ ಕುರಿತ ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ.

ಈ ಸಮ್ಮೇಳನವು ಭಾರತದಲ್ಲಿನ ಪುಷ್ಪ ಕೃಷಿ ಮತ್ತು ಭೂದೃಶ್ಯ ವಲಯವನ್ನು ಬಲಪಡಿಸಲು, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ನಾವೀನ್ಯತೆಗಳನ್ನು ಪರಸ್ಪರ ಹಂಚಿಕೊಳ್ಳಲು ಹಾಗೂ ಹೊಸ ತಂತ್ರಜ್ಞಾನಗಳನ್ನು ಅನ್ವೇಷಿಸಲು ಒಂದು ಪ್ರಮುಖ ವೇದಿಕೆಯಾಗಲಿದೆ. ಈ ವಿಶಿಷ್ಟ ವಲಯದಲ್ಲಿನ ಸಂಶೋಧನೆ, ತಂತ್ರಜ್ಞಾನಗಳ ಅಳವಡಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವತ್ತ ಗಮನಾರ್ಹವಾಗಿ ಕೊಡುಗೆ ನೀಡುವಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಕರ್ನಾಟಕವು ಭಾರತದ ವಾಣಿಜ್ಯ ಪುಷ್ಪ ಕೃಷಿಯ ರಾಜಧಾನಿ ಎಂದೇ ಹೆಸರಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಹೂವುಗಳನ್ನು ವೈಜ್ಞಾನಿಕವಾಗಿ ಬೆಳೆದು ರಫ್ತು ಮಾಡುವ ಬೃಹತ್ ಉದ್ಯಮವಾಗಿ ಇದು ರಾಜ್ಯದಲ್ಲಿ ಬೆಳೆದಿದೆ. ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಪುಷ್ಪಕೃಷಿ ಉದ್ಯಮವಾಗಿ ಬೆಳೆದಿದಿದೆ. ಈ ವಾಣಿಜ್ಯ ಪುಷ್ಪ ಕೃಷಿ ರಾಜ್ಯದ ಆರ್ಥಿಕತೆ, ಕೃಷಿ ವಲಯದ ಪ್ರಗತಿ ಮತು ಗ್ರಾಮೀಣಾಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಹವಾಮಾನ ವೈಪರೀತ್ಯ ಅಥವಾ ಮಾರುಕಟ್ಟೆ ಬೆಲೆ ಕುಸಿತದ ಸಂದರ್ಭದಲ್ಲಿ ಬಹುಬೆಳೆ ಪದ್ಧತಿಯಲ್ಲಿನ ಪುಷ್ಪ ಕೃಷಿಯು ರೈತರಿಗೆ ಆರ್ಥಿಕ ನಷ್ಟದ ಅಪಾಯವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.

ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಹೂವು ಹರಾಜು ಮಂಡಳಿ ಇಂಟರ್‌ನ್ಯಾಷನಲ್ ಫ್ಲವರ್ ಆಕ್ಷನ್ ಬೆಂಗಳೂರು(ಐಎಫ್‌ಎಬಿ) ಏಷ್ಯಾದಲ್ಲೇ ಮೊಟ್ಟಮೊದಲ ‘ಡಚ್ ಮಾದರಿ’ಯ ಹೂವಿನ ಹರಾಜು ಕೇಂದ್ರವಾಗಿದ್ದು, ಇದು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರಿಗೆ ತಾವು ಬೆಳೆದ ಹೂವುಗಳಿಗೆ ನೇರವಾಗಿ ಅತ್ಯುತ್ತಮ ಹಾಗೂ ಸ್ಪರ್ಧಾತ್ಮಕ ಬೆಲೆ ದೊರೆಯುತ್ತ್ತಿದೆ. ಕರ್ನಾಟಕವು ವಾಣಿಜ್ಯ ಪುಷ್ಪಗಳನ್ನು ರಫ್ತು ಮಾಡುವಲ್ಲಿ ಅಗ್ರಸ್ಥಾನದಲ್ಲಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಶೀತಲೀಕರಣ ಘಟಕಗಳ ಮೂಲಕ ನೆದರ್ಲ್ಯಾಂಡ್, ಜಪಾನ್, ಆಸ್ಟ್ರೇಲಿಯಾ, ಯುಎಇ, ಮತ್ತು ಯುರೋಪ್ ರಾಷ್ಟ್ರಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಹೂವುಗಳು ರಫ್ತಾಗುತ್ತವೆ.

Keladi Shivappa Nayaka Agriculture University ಶಿವಮೊಗ್ಗ ಜಿಲ್ಲೆಯಲ್ಲಿ ಪುಷ್ಪ ಕೃಷಿಯನ್ನು ಹೆಚ್ಚಾಗಿ ಮಾಡಲಾಗುತ್ತ್ತಿದೆ. ಗುಲಾಬಿ, ಮಲ್ಲಿಗೆ, ಆಸ್ಟರ್, ಕನಕಾಂಬರ ಮತ್ತು ಸುಗಂಧರಾಜ ನಂತಹ ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅಲ್ಲದೆ ಅಂಥೂರಿಯ ಮತ್ತು ಜರ್ಬೆರಾಕೂಡ ಬೆಳೆಯುತ್ತಿದ್ದಾರೆ. ಇವುಗಳನ್ನು ಹೆಚ್ಚಾಗಿ ಹಸಿರುಮನೆಗಳಲ್ಲಿ, ಪಾಲಿಹೌಸ್‌ಗಳಲ್ಲಿ ಬೆಳೆಯಲಾಗುತ್ತದೆ.

ಜೊತೆಗೆ ರಾಜ್ಯ ತೋಟಗಾರಿಕೆ ಇಲಾಖೆ ಶಿವಮೊಗ್ಗದಲ್ಲಿ “ಪುಷ್ಪ ಕೃಷಿಗಾಗಿ ಶ್ರೇಷ್ಠತಾಕೇಂದ್ರ”ವನ್ನು ಸ್ಥಾಪಿಸಿರುತ್ತದೆ. ಈ ಮೂಲಕ ಪುಷ್ಪ ಕೃಷಿ ಬೆಳೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ರೈತರಿಗೆ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತಿರುವುದುಆಶಾದಾಯಕ ಬೆಳವಣಿಗೆಯಾಗಿದೆ.
ಈ ಸಮ್ಮೇಳನದಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದು, “ವಿಕಸಿತ ಭಾರತ@2047ರ ಪುಷ್ಪ ಕೃಷಿ ಮತ್ತು ಭೂ ವಿನ್ಯಾಸ್ಯ” ಕುರಿತ ಸ್ಮರಣ ಸಂಚಿಕೆಯನ್ನು ಹಾಗೂ “ಜಿಯೋಗ್ರಾಫಿಕಲ್ ಇಂಡಿಕೇಶನ್ ಫ್ಲರ‍್ಸ್ ಆಫ್ ಇಂಡಿಯಾ” ಎಂಬ ಕೃತಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.
ಈ ಸಮ್ಮೇಳನದಲ್ಲಿ ವಿಶೇಷವಾಗಿ 6 ಮಂದಿ ವಿಜ್ಞಾನಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿಗೌರವಿಸಲಾಗುತ್ತಿದೆ.

ಮೂರು ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಲೋಟಸ್ ಪುಸ್ಕಾರ ನೀಡಿಗೌರವಿಸಲಾಗುತ್ತಿದೆ. ಸಣ್ಣ ರೈತ ವರ್ಗದ ಮೂರು ಮಂದಿ ಅತ್ಯುತ್ತಮ ಗುಲಾಬಿ ಬೆಳೆಗಾರರನ್ನು ಗುರುತಿಸಿ, ರೋಸ್ ಪುರಸ್ಕಾರ ಹಾಗೂ ದೊಡ್ಡ ಪ್ರಮಾಣದ ರೈತ ವರ್ಗದ ಮೂರು ಮಂದಿ ಅತ್ಯುತ್ತಮ ಗುಲಾಬಿ ಬೆಳೆಗಾರರು ಮತ್ತುರಫ್ತುದಾರರಿಗೆ ರೋಸ್ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

ಈ ಸಮ್ಮೇಳನದಲ್ಲಿ ಭಾರತೀಯ ಅಲಂಕಾರಿಕತೋಟಗಾರಿಕೆ ಸಂಘದ ವತಿಯಿಂದ 5 ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಫೆಲೋಷಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇಬ್ಬರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಡಾಕ್ಟೋರಲ್ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಹಾಗೂ 4 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಇಬ್ಬರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಈ ಸಮ್ಮೇಳನಕ್ಕೆ, ದೇಶದ ವಿವಿಧ ರಾಜ್ಯಗಳ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿಜ್ಞಾನಿಗಳು, ಕಾರ್ಪೂರೇಟರ್ ವಲಯದ ತಜ್ಞರು, ಪ್ರಗತಿಪರ ರೈತರು, ಉದ್ದಿಮೆದಾರರು, ಮಾರುಕಟ್ಟೆ ತಜ್ಞರು ಹಾಗೂ ಪುಷ್ಪ ಕೃಷಿ ರೈತರು, ಆಸಕ್ತರು ಭಾಗವಹಿಸಿ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Ugadi “ನೂತನ ಸಂವತ್ಸರ+ಮೊದಲ ಋತು+ಮೊದಲಮಾಸ+ಮೊದಲಪಕ್ಷ+ಮೊದಲತಿಥಿ=ಮೊದಲದಿನ”)ಪರಾಭವ ನಾಮಸಂವತ್ಸರ+ವಸಂತ ಋತು+ಚೈತ್ರಮಾಸ+ಶುಕ್ಲಪಕ್ಷ+ಪಾಡ್ಯತಿಥಿ=ಯುಗಾದಿ

0

Ugadi ಯುಗ+ಆದಿ=ಯುಗಾದಿ(ಹೊಸ ಯುಗದ ಆರಂಭ ಎಂದು)
ಯುಗಾದಿ ” ಚೈತ್ರಮಾಸದಮೊದಲದಿನ ಭಾರತದ ಅನೇಕ ಕಡೆಗಳಲ್ಲಿಈ ದಿನ ಹೊಸವರ್ಷದ ಮೊದಲ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ.
ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಿನಿಂದ ಹಿಡಿದು ಡಿಸೆಂಬರ್ ತಿಂಗಳ ಕೊನೆಯ ದಿನದವರೆಗಿನ ಕಾಲವನ್ನುಒಂದುವರ್ಷವೆಂದು ಹೇಳುತ್ತಾರೆ.ಹಿಂದೂ ಪಂಚಾಂಗದ ಪ್ರಕಾರ ಒಂದು ಸಂವತ್ಸರವೆಂದರೆ ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಿಂದ ಪ್ರಾರಂಭವಾಗಿ ಫಾಲ್ಗುಣ ಮಾಸದ ಅಮಾವಾಸ್ಯೆಯ ವರೆಗಿನ ಕಾಲವನ್ನು ಒಂದುಸಂವತ್ಸರವೆನ್ನುತ್ತಾರೆ.
ಈಗಿರುವ ವಿಶ್ವಾವಸುನಾಮ ಸಂವತ್ಸರ ಮುಗಿದು ಹೊಸ ಸಂವತ್ಸರ”ಪರಾಭವ”ಸಂವತ್ಸರ.ಹೆಸರಿನಲ್ಲೇ ಇರುವಂತೆ ಈ ಸಂವತ್ಸರ ಎಲ್ಲರಲ್ಲಿಯೂ ಅಹಂಕಾರ, “ಪರಾಭವ”ವನ್ನು ಮತ್ತು ಪ್ರೀತಿಯನ್ನು ಬೆಳೆಸುವುದೆಂಬ ನಂಬಿಕೆ ಇದೆ.
ಯುಗಾದಿಯ ದಿನ ಸುಖದ ಸಂಕೇತವಾದ
ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನು ಸಮರಸವಾಗಿ ಸ್ವೀಕರಿಸುವಪದ್ಧತಿ ನಡೆದು ಬಂದಿದೆ.
ಬೇವು-ಬೆಲ್ಲವನ್ನು ಸ್ವೀಕರಿಸುವಾಗ ಹೇಳುವ ಶ್ಲೋಕ ಈ ಕೆಳಕಂಡಂತಿದೆ.
“ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ/
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ/ಭಕ್ಷಣಂ//
Ugadi ನೂರು ವರ್ಷಗಳ ಆಯುಷ್ಯ ಸದೃಢ ಆರೋಗ್ಯ,ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲವನ್ನು
ಸೇವನೆ ಮಾಡುತ್ತೇನೆ.,ಎಂಬುದು ಶ್ಲೋಕದ ಅರ್ಥ.
ಈ ಹೊಸ ಸಂವತ್ಸರದ “ಯುಗಾದಿ” ಯನ್ನು ಸಂಭ್ರಮ,ಸಂತೋಷದಿಂದಸ್ವಾಗತಿಸೋಣ. ಎಲ್ಲರಿಗೂ ಆ ದಯಾಮಯಿಯಾದ ಭಗವಂತನು ಹೊಸದಾಗಿ ಬರುತ್ತಿರುವ “ಪರಾಭವ” ನಾಮ ಸಂವತ್ಸರದಲ್ಲಿ ಆಯುರಾರೋಗ್ಯ,ಐಶ್ವರ್ಯ,ಸುಖ,ಶಾಂತಿ ಜ್ಞಾನ ಸಂಪತ್ತು ಕರುಣಿಸಲಿ ಎಂತ ಶುಭ ಕೋರುತ್ತೇವೆ.

ಯುಗಾದಿಹಬ್ಬದ ಶುಭಾಶಯಗಳೊಂದಿಗೆ

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

0

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಹಂಪಿ ಮತ್ತು ಕರಾವಳಿ ಉತ್ಸವಗಳ ಮಾದರಿಯಲ್ಲಿ ‘ಸಹ್ಯಾದ್ರಿ ಉತ್ಸವ’ ಅಥವಾ ‘ಮಲೆನಾಡು ಉತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಬೇಕು ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಇಂದು ಸರ್ಕಾರವನ್ನು ಒತ್ತಾಯಿಸಿದರು.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಸಾಂಸ್ಕೃತಿಕ ಉತ್ಸವಗಳು ನಡೆಯದ ಕಾರಣ ಜಿಲ್ಲೆಯ ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಶಾಸಕರು, ಶಿವಮೊಗ್ಗ ಜಿಲ್ಲೆಯು ರಾಷ್ಟ್ರಕವಿ ಕುವೆಂಪು ಸೇರಿದಂತೆ ಅನೇಕ ಸಾಹಿತ್ಯ ದಿಗ್ಗಜರ ಹಾಗೂ ಜಾನಪದ ಕಲಾ ಪ್ರಕಾರಗಳ ಬೀಡಾಗಿದೆ. ಇಂತಹ ಶ್ರೀಮಂತ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ಕನಿಷ್ಠ ಮೂರು ದಿನಗಳ ಕಾಲ ಜಿಲ್ಲಾ ಉತ್ಸವವನ್ನು ಆಯೋಜಿಸುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದು ಶೀಘ್ರವೇ ಕಾಲಮಿತಿಯೊಳಗೆ ಉತ್ಸವವನ್ನು ಏರ್ಪಡಿಸಬೇಕು ಎಂದು ಅವರು ಆಗ್ರಹಿಸಿದರು. ಬೇಸಿಗೆಯ ರಜಾ ಅವಧಿಯಲ್ಲಿ ಇಂತಹ ಉತ್ಸವವನ್ನು ಹಮ್ಮಿಕೊಳ್ಳುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲೆಯ ಇತಿಹಾಸ, ಸಂಸ್ಕೃತಿ ಮತ್ತು ಕಲಾ ಪ್ರಕಾರಗಳ ಬಗ್ಗೆ ಅರಿವು ಮೂಡಿಸಲು ಒಂದು ಸಕಾರಾತ್ಮಕ ವೇದಿಕೆಯಾಗಲಿದೆ. ಇದು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವುದಲ್ಲದೆ, ಪ್ರವಾಸೋದ್ಯಮದ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಅವರು ಸದನದ ಗಮನ ಸೆಳೆದರು.

ಜಿಲ್ಲೆಯ ಹಿರಿಯ ಸಾಧಕರನ್ನು ಗೌರವಿಸಲು ಮತ್ತು ಮಲೆನಾಡಿನ ಕಲಾ ಸೌಂದರ್ಯವನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ಸರ್ಕಾರವು ಈ ಕೂಡಲೇ ಅನುದಾನ ಬಿಡುಗಡೆ ಮಾಡಿ ಉತ್ಸವಕ್ಕೆ ಚಾಲನೆ ನೀಡಬೇಕು ಎಂದು ಶಾಸಕ ಚನ್ನಬಸಪ್ಪ ಅವರು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.

S.N. Channabasappa ಶಾಸಕ ಚನ್ನಬಸಪ್ಪ ಅವರ ಈ ಪ್ರಸ್ತಾವನೆಗೆ ಸ್ವತಃ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ಧ್ವನಿಗೂಡಿಸಿ ಬೆಂಬಲ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಕಾರ್ಕಳ ಶಾಸಕ ಶ್ರೀ ಸುನೀಲ್ ಕುಮಾರ್, ಸುಳ್ಯ ಶಾಸಕಿ ಶ್ರೀಮತಿ ಭಾಗೀರಥಿ ಮುರುಳ್ಯ ಹಾಗೂ ಗಂಗಾವತಿ ಶಾಸಕ ಶ್ರೀ ಜನಾರ್ದನ ರೆಡ್ಡಿ ಸೇರಿದಂತೆ ಅನೇಕರು ಜಿಲ್ಲಾವಾರು ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುವ ಅಗತ್ಯತೆಯನ್ನು ಎತ್ತಿ ಹಿಡಿದರು. ಪಕ್ಷಾತೀತವಾಗಿ ವ್ಯಕ್ತವಾದ ಈ ಬೆಂಬಲವು ಸಾಂಸ್ಕೃತಿಕ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ ಎಂದರು.

ಹೊಸನಗರ ಊರೊಳಗೆ ಊಟಕ್ಕಾಗಿ ಕಾಲಿಟ್ಟ‌ ಜಿಂಕೆ

0

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಳೆ ಕೋರ್ಟ್ ಸರ್ಕಲ್ ಬಳಿ
ಆಹಾರ ಅರಿಸಿ ಜಿಂಕೆಯೊಂದು ಪಟ್ಟಣಕ್ಕೆ ಬಂದ ಘಟನೆ ನಡೆದಿದೆ.

ಹೊಸನಗರ ತಾಲೂಕಿನ ಹಳೇ ಕೋರ್ಟ್ ಸರ್ಕಲ್ ಬಳಿಯಲ್ಲಿರುವ ಕಾಂಪ್ಲೆಕ್ಸ್ ಬಳಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿ ಮೇಲೆ ಜಿಂಕೆ ಹೋಗಿದೆ. ಜಿಂಕೆ ಕಂಡು ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಅರಣ್ಯಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಜಿಂಕೆಯನ್ನು ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

0

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಆರಂಭವಾಗಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅವರು ಆತ್ಮಸ್ಥೈರ್ಯ ತುಂಬಿ ಶುಭ ಹಾರೈಸಿದರು.

ಈ ವರ್ಷ ರಾಜ್ಯಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು 2,870 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ವಿಶೇಷವಾಗಿ 16 ದೃಷ್ಟಿಮಾಂದ್ಯ ಮಕ್ಕಳು ಬರಹಗಾರರ ಸೌಲಭ್ಯ ಬಳಸದೆ, ಸ್ವತಃ ಲ್ಯಾಪ್‌ಟಾಪ್ ಬಳಸಿ ಪರೀಕ್ಷೆ ಬರೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ.

ಸರ್ಕಾರಿ ಶಾಲೆಗಳ 3,59,594 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,11,486 ವಿದ್ಯಾರ್ಥಿಗಳು ಹಾಗೂ ಅನುದಾನರಹಿತ ಶಾಲೆಗಳ 2,94,908 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ವಿದ್ಯಾರ್ಥಿಗಳಿಗೆ ಸಚಿವರ ಕಿವಿಮಾತು:

ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಸಚಿವರು, “ಮಕ್ಕಳು ಯಾವುದೇ ಒತ್ತಡವಿಲ್ಲದೆ, ಭಯಮುಕ್ತರಾಗಿ ಪರೀಕ್ಷೆ ಎದುರಿಸಬೇಕು. ಪೋಷಕರು ಸಹ ಮಕ್ಕಳ ಮೇಲೆ ಒತ್ತಡ ಹೇರಬಾರದು. ಪರೀಕ್ಷಾ ಸಿದ್ಧತೆಗಾಗಿ ಈಗಾಗಲೇ 3 ಪೂರ್ವಸಿದ್ಧತಾ (Preparatory) ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಮಕ್ಕಳಲ್ಲಿನ ಭಯವನ್ನು ಹೋಗಲಾಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳು ಆಮಿಷಗಳಿಗೆ ಒಳಗಾಗಿ ತಪ್ಪು ದಾರಿ ಹಿಡಿದು ಮೊಸಹೋಗಬಾರದು” ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿನಂತಿಸಿದರು.

Madhu Bangarappa ಪರೀಕ್ಷಾ ಅಕ್ರಮಗಳನ್ನು ತಡೆಯಲು ಎಲ್ಲ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ವಹಿಸಲಾಗಿದೆ. ಪ್ರತಿದಿನ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಪೋಲೀಸ್ ಸಿಬ್ಬಂದಿಯೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ಆಯಾ ಜಿಲ್ಲಾ ಆಡಳಿತದ ಮೂಲಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. “ಭಯಮುಕ್ತರಾಗಿ ಸಂತಸದಿಂದ ಪರೀಕ್ಷೆ ಬರೆಯಿರಿ, ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ” ಎಂದು ಎಸ್. ಮಧು ಬಂಗಾರಪ್ಪ ಅವರು ಹಾರೈಸಿದರು.

ಜಿಲ್ಲೆಯಲ್ಲಿ ಅನಿಲ ಸಿಲಿಂಡರ್ ಗೆ ಕೊರತೆಯಿಲ್ಲ, ಗ್ರಾಹಕರು ಸಾಮಾಜಿಕ ಜಾಲತಾಣಗಳ ವದಂತಿ ನಂಬಬೇಡಿ- ಪ್ರಭುಲಿಂಗ ಕವಳಿಕಟ್ಟಿ

0

ಶಿವಮೊಗ್ಗ ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಈ ಕಾರಣದಿಂದ ಗ್ರಾಹಕರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಗಾಬರಿ, ಆತಂಕ ಪಡದೇ ಹೆಚ್ಚುವರಿಯಾಗಿ ದಾಸ್ತಾನು ಮಾಡಿಕೊಳ್ಳಬಾರದೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲೆಯ ಗ್ರಾಹಕರಿಗೆ ತಿಳಿಸಿದ್ದಾರೆ.

ಹೆಚ್ಚಿನ ಗ್ರಾಹಕರು ಒಂದು ರಿಫಿಲ್ಲಿಂಗ್ ಸಿಲಿಂಡರ್ ಪಡೆದ ನಂತರ ಸಿಂಗಲ್ ಗೃಹ ಬಳಕೆ ಸಿಲಿಂಡರ್‌ಗಾಗಿ 25 ದಿನಗಳ ಅಂತರದ ನಂತರ ಮತ್ತು ಡಬ್ಬಲ್ ಸಿಲಿಂಡರ್ ಗೃಹ ಬಳಕೆಯವರು 30 ದಿನಗಳ ನಂತರ ಮತ್ತೊಂದು ಸಿಲಿಂಡರ್‌ಗಾಗಿ ಬುಕ್ಕಿಂಗ್ ಮಾಡಬೇಕು. ಅದಕ್ಕೂ ಮುಂಚಿತವಾಗಿ ಬುಕ್ಕಿಂಗ್ ಮಾಡಬಾರದು. ಎಲ್.ಪಿ.ಜಿ ಅಡುಗೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಶಿವಮೊಗ್ಗ ಇಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಮೊ.ಸಂ:9148267229 ಮತ್ತು 9844214270ಗೆ ಕರೆ ಮಾಡಿ ಗ್ರಾಹಕರು ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.