Sunday, August 2, 2026
Sunday, August 2, 2026
Home Blog Page 3

ಗರ್ಭಿಣಿಯರು ವೈದ್ಯಕೀಯ ಸಲಹೆ ಪಾಲಿಸಬೇಕು- ಪ್ರವೀಣ್ ಜವಳಿ

0

ಜುಲೈ ಮಾಸವನ್ನು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ತಾಯಿ ಮತ್ತು ಮಗುವಿನ ಆರೈಕೆಗೆ ನಿಗದಿಪಡಿಸಿದ್ದು, ಅದರಂತೆ ಸುಮಾರು ಅರವತ್ತು ಗರ್ಭಿಣಿಯರಿಗೆ ಕ್ಲಬ್ ವತಿಯಿಂದ ಪ್ರೋಟೀನ್ ಕಿಟ್ ಮತ್ತು ಮಾರ್ಗದರ್ಶನ ಕೈಪಿಡಿ ನೀಡಲಾಗು ತ್ತಿದೆ. ಆದ್ದರಿಂದ ವೈದ್ಯಕೀಯ ಸಲಹೆ ಪಾಲಿಸುವಂತೆ ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಯು ತಾಲೂಕು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮವನ್ನು ವಿದ್ಯಾನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಮಾಹಿತಿ ಕಾರ್‍ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಿಡುವ ಮಹತ್ವವನ್ನು ಜೀಜಬಾಯಿ ಶಿವಾಜಿ, ಸುಭದ್ರ ಅಭಿಮನ್ಯು ವಿನ ಪ್ರಸಂಗಗಳ ಉದಾಹರಣೆಗಳಿಂದ ವಿವರಿಸಿದರು. ಗರ್ಭದಿಂದಲೇ ಮಗುವಿಗೆ ಸಂಸ್ಕಾರ ನೀಡುವಲ್ಲಿ ತಾಯಿಯ ಪಾತ್ರವನ್ನು ವಿವರಿಸಿ ತಮ್ಮ ಕುಟುಂಬಕಷ್ಟೆ ಅಲ್ಲದೆ ಸಮಾಜಕ್ಕೆ ಉತ್ತಮ ಸಂತಾನ ಕೊಡುವ ಮಹತ್ತರ ಆಶಯ ವ್ಯಕ್ತಪಡಿಸಿದರು.
ಡಾ. ಉಮಾದೇವಿಯವರು ಗರ್ಭಿಣಿಯರ ಆರೋಗ್ಯದ ಬಗ್ಗೆ ಸವಿವರವಾಗಿ ಸಲಹೆ ನೀಡಿದರು. ಗರ್ಭಾವಸ್ಥೆಯಲ್ಲಿ ಆಹಾರ, ವಿಶ್ರಾಂತಿ ಮತ್ತು ನಿಯಮಿತ ತಪಾಸಣೆಯ ಮಹತ್ವ ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷ ಪ್ರೋಟೀನ್ ಪೌಷ್ಟಿಕಾಂಶ ಕಿಟ್ ಪಡೆದ ಗರ್ಭಿಣಿಯರು ಶಿವಮೊಗ್ಗ ಜ್ಯುಬಿಲಿ ರೋಟರಿ ಕ್ಲಬ್ ನ ಈ ಮಾನವೀಯ ಸೇವೆಗೆ ಕೃತಜ್ಞತೆ ಸಲ್ಲಿಸಿದರು.
ಬಿ.ಎಸ್. ಅಶ್ವಥ್ ಅವರು ಸೇವೆಯ ಮಹತ್ವ ಮತ್ತು ರೋಟರಿ ಸಾಧನೆಯನ್ನು ವಿವರಿಸಿದರು. ಕಾರ್ಯದರ್ಶಿ ನವೀನ್ ಕುಮಾರ್ ವಂದಿಸಿದರು. ಶ್ರೀಮತಿ ಚೇತನ ಜವಳಿ, ಭಾರದ್ವಾಜ್, ವೆಂಕಟರಮಣ ಭಟ್, ರೊ. ವಾಗೀಶ್, ಱರೊ. ಸುಧಾಕರ್, ಉಮಾದೇವಿ, ರಾಜ ಶೇಖರ್, ರೊ. ರಾಘವೇಂದ್ರ, ಎಸ್.ಆರ್. ಲಕ್ಷ್ಮೀ ನಾರಾಯಣ, ಅವಿನಾಶ್ ಲಕ್ಷ್ಮೀನಾರಾಯಣ, ರೊ. ಹರೀಶ್ ಪಟೇಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ತಾಯಂದಿರು, ಸಾರ್ವಜನಿಕರು ಉಪಸ್ಥಿತರಿದ್ದರು.
✒️

ಯುವಕರು ಮಾರ್ಗದರ್ಶನ ಬಯಸದೇ ಹೋರಾಟಕ್ಕೆ ಪ್ರವೇಶ:ಅಧ್ಯಾಪಕರಿಗೆ ದೊಡ್ಡ ಸವಾಲಾದ ಕಾಲಘಟ್ಟ:ಮಾಜಿ ಸಚಿವ ಮಾಧುಸ್ವಾಮಿ

0

ಯುವಕರು ಮಾರ್ಗದರ್ಶನ ಬಯಸದೇ ಹೋರಾಟಗಳಿಗೆ ಧುಮುಕುತ್ತಿರುವ ಈ ಕಾಲಘಟ್ಟದಲ್ಲಿ ಅಧ್ಯಾಪಕರು ಅವರಿಗೆ ಯಾವ ರೀತಿ ಬೋಧಿಸಬೇಕೆನ್ನುವುದೇ ದೊಡ್ಡ ಸವಾಲಾಗಿದೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಾಧ್ಯಾಪಕ ಹಾಗೂ ತುಮಕೂರು ವಿವಿ ನಿಕಟಪೂರ್ವ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ. ಅವರ ಅಭಿನಂದನಾ ಸಮಾರಂಭ ಹಾಗೂ ಅಭಿನಂದನಾ ಗ್ರಂಥ ‘ಸಹ್ಯಾದ್ರಿ ಶಿಖರ’ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟ ಬದಲಾಗುತ್ತಿದೆ. ಯುವಕರೇ ತುಂಬಿರುವ ಭಾರತದಂತಹ ದೇಶದಲ್ಲಿ ಯುವಕರು ಯಾವ ಮಾರ್ಗದರ್ಶನವನ್ನು ಬಯಸುತ್ತಿಲ್ಲ. ತಮಗೆ ಏನು ಸತ್ಯವೋ ಅದನ್ನು ತಿಳಿದು ಹೋರಾಟಕ್ಕೆ ಯತ್ನಿಸುತ್ತಿದ್ದಾರೆ. ಹಿತವಚನಗಳು ಅವರನ್ನು ತಲುಪಲು ಕಷ್ಟವಾಗುತ್ತಿದೆ. ಉದ್ಯೋಗಗಳನ್ನು ಕಲ್ಪಿಸಲಾಗದ ಕಾಲವಿದು. ಹಾಗಾಗಿ ಯುವಕರಿಂದಲೂ ಕೂಡ ಆಗಾಗ ತಪ್ಪುಗಳು ಆಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ನಮ್ಮ ಬೋಧಕರು ಯುವಕರನ್ನು ಜಾಗೃತಿಗೊಳಿಸುವ ಮಾರ್ಗದರ್ಶನ ಮಾಡುವ ಜಾಣ್ಮೆಯ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಇಂದು ಉದ್ಯಮಿಗಳೇ ದೇಶವನ್ನು ಆಳುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಕೂಡ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಶ್ರಮದ ಜೀವನ ಇವತ್ತು. ಯಾರಿಗೂ ಬೇಡವಾಗಿದೆ. ಕೃಷಿಗೆ ಕಾರ್ಮಿಕರು ಸಿಗುತ್ತಿಲ್ಲ. ಎಲ್ಲರಿಗೂ ಸುಲಭ ಉದ್ಯೋಗ ಬೇಕು. ಇದನ್ನು ಹೇಗೆ ನಿಯಂತ್ರಿಸಬೇಕು ಮತ್ತು ಸಮಾಜದಲ್ಲಿ ಸಮಾನತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವದಾದರೂ ಹೇಗೆ ಎಂಬ ಪ್ರಶ್ನೆಗಳು ನಮ್ಮ ಮುಂದಿವೆ ಎಂದರು.
ಬದುಕು ಒಂದು ನಡಿಗೆ. ಅದು ಎಲ್ಲೋ ಒಂದು ಕಡೆ ನಿಲ್ಲಬೇಕು. ಪ್ರೊ. ಪ್ರಸನ್ನಕುಮಾರ್ ನಿವೃತ್ತರಾಗುತ್ತಿದ್ದಾರೆ. ಅಕಾಡೆಮಿನಲ್ಲಿ ಆಡಳಿತ ಸೋಲುತ್ತದೆ ಎಂಬ ಮಾತಿದೆ. ಆದರೆ, ಪ್ರಸನ್ನಕುಮಾರ್ ಅವರು ಪರೀಕ್ಷಾಂಗ ಕುಲಸಚಿವರಾಗಿ ಒಳ್ಳೆಯ ಆಡಳಿತ ನೀಡಿದವರು. ನಿವೃತ್ತಿ ಜೀವನ ವಿಶ್ರಾಂತಿಯಲ್ಲ, ಅದು ಸಮಾಧಾನಕರ ಸ್ಥಿತಿ. ಸಮಾಜದ ಋಣ ತೀರಿಸಬೇಕಾದ ಸಮಯ. ಜ್ಞಾನದ ಕಿಟಕಿಗಳನ್ನು ಅವರು ಮತ್ತಷ್ಟು ತೆರೆಯಲಿ. ಮಕ್ಕಳ ಜತೆ ಸಂಪರ್ಕ ಇಟ್ಟುಕೊಳ್ಳಿ ಎಂದರು.
ಪ್ರೊ. ಪ್ರಸನ್ನಕುಮಾರ್ ಕೆ. ಅವರ ಅಭಿನಂದನಾ ಗ್ರಂಥ ‘ಸಹ್ಯಾದ್ರಿ ಶಿಖರ’ದ ಕುರಿತು ಮಾತನಾಡಿದ ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಧನಂಜಯ ಬಿ.ಜಿ., ಈ ಕೃತಿಯಲ್ಲಿ ಮೂರು ತಲೆಮಾರಿನ ವ್ಯಕ್ತಿಗಳು ಪ್ರಸನ್ನಕುಮಾರ್ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಅವರಿಗೆ ಮಾತ್ರವಲ್ಲ. ಸಮಗ್ರ ಶಿಕ್ಷಕರಿಗೆ ಸಂದ ಗೌರವವಾಗಿದೆ. ಎಲ್ಲರ ಪ್ರೀತಿ ಗಳಿಸಿರುವ ಅವರು ಸಹ್ಯಾದ್ರಿ ಶಿಖರವೇ ಹೌದು ಎಂದರು.
ಪ್ರ‍್ರಾಸ್ತಾವಿಕವಾಗಿ ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸಿರಾಜ್ ಅಹಮ್ಮದ್, ನಿವೃತ್ತಿ ಎನ್ನುವುದು ಒಂದು ಔಪಚಾರಿಕೆ ಅಷ್ಟೇ. ಇಂತಹ ಕಾರ್ಯಕ್ರಮಗಳು ಶಿಕ್ಷಣದ ಚಿಂತನೆಗಳನ್ನು ಬೆಳೆಸುವಂತಾಗಬೇಕು. ಈಗ ಶಿಕ್ಷಣ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಯುವಕರು ಕೂಡ ಬದಲಾಗುತ್ತಿದ್ದಾರೆ. ಶಿಕ್ಷಣದ ಶಿಖರವನ್ನು ತಲುಪಿಸುವ ಜವಾಬ್ದಾರಿ ಇಂದು ನಮ್ಮ ಮೇಲಿದೆ. ಅಧ್ಯಾಪಕರ ಹುದ್ದೆಗಳು ಸಾಕಷ್ಟು ಖಾಲಿ ಇದ್ದು,. ಅದು ಭರ್ತಿಯಾಗಬೇಕಾಗಿದೆ ಎಂದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಅಭಿನಂದನಾ ಗ್ರಂಥ ‘ಸಹ್ಯಾದ್ರಿ ಶಿಖರ’ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಯುನೈಟೆಡ್ ಕಿಂಗ್‌ಡA ಯುನಿವರ್ಸಿಟಿಯ ಡಾ. ಶಿಶಾಂಕ್, ಲೋಕಾಸೇವಾ ಆಯೋಗದ ಸದಸ್ಯೆ ಗೀತಾ, ದಸಂಸ ಸಂಚಾಲಕ ಎಂ. ಗುರುಮೂರ್ತಿ, ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಡಾ.ಸಿ.ಹೆಚ್. ಮುರಿಗೇಂದ್ರಪ್ಪ, ಕೃಷಿ ವಿವಿ ಕುಲಪತಿ ಡಾ.ಎಂ.ವಿ. ಧನಂಜಯ, ಸಹ್ಯಾದ್ರಿ ಕಲಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಸೈಯದ್ ಸನಾವುಲ್ಲ. ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ. ಹೆಚ್. ಪ್ರಲ್ಹಾದಪ್ಪ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ನಾಗಾರ್ಜುನ, ಶ್ರೀಮತಿ ಉಮಾ ಪ್ರಸನ್ನಕುಮಾರ್, ಡಾ. ಪ್ರಜ್ವಲ್, ದಯಾಶಂಕರ್, ಸುಬ್ಬಯ್ಯ ಡೆಂಟಲ್ ಕಾಲೇಜ್ ಪ್ರಾಂಶುಪಾಲ ಡಾ. ಸುರೇಶ್ ಬಿ.ಎಸ್. ಸೇರಿದಂತೆ ಹಲವರಿದ್ದರು.
ಇದೇ ಸಂದರ್ಭದಲ್ಲಿ ಪ್ರೊ. ಪ್ರಸನ್ನಕುಮಾರ್ ಕೆ ಅವರನ್ನು ಸನ್ಮಾನಿಸಲಾಯಿತು. ಮತ್ತು ಪ್ರಸನ್ನಕುಮಾರ್ ಅವರು ತಮ್ಮ ಗುರುಗಳಾದ ಶೇಖರ್ ಗೌಳೇರ್ ಹಾಗೂ ಜೋಗದ ವೀರಪ್ಪ ಅವರನ್ನು ಸನ್ಮಾನಿಸಿದರು.
ಭಾವನಾ ನಿರೂಪಿಸಿ, ಜಾಹ್ನವಿ ಭಾವಗೀತೆ ಹಾಡಿದರು.

ರಾಯಲ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆ ಉತ್ಸವ

0

ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು, ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಗೌರವದಿಂದ ತಮ್ಮ ಪೋಷಕರ ಪಾದ ಪೂಜೆಯನ್ನು ಮಾಡಿದರು. ಪ್ರತಿಯೊಂದು ಮಗುವಿಗೂ ತಂದೆ ತಾಯಿಯಂದಿರೆ ಮೊದಲ ಗುರುಗಳು,ಗುರುವಿನ ಆಶೀರ್ವಾದದೊಂದಿಗೆ ತಮ್ಮ ತಂದೆ ತಾಯಿಯರ ಆಶೀರ್ವಾದವು ಬಹುಮುಖ್ಯ, ಜೊತೆಗೆ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಪ್ರತಿ ವರ್ಷವೂ ಶಾಲೆಯಲ್ಲಿ ಗುರುಪೂರ್ಣಿಮೆಯೆಂದು ಪೋಷಕರ ಪಾದ ಪೂಜೆಯನ್ನು ಮಕ್ಕಳಿಂದ ಮಾಡಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಪೂಜಾ ನಾಗರಾಜ್ ಪರಿಸರ ಮೇಡಂ ಮತ್ತು ಶಾಲೆಯ ಪ್ರಾಂಶುಪಾಲರಾದ ಮಂಜುನಾಥ್ ಎಲ್ ಎನ್, ಹಾಗೂ ಶಿಕ್ಷಕ ವೃಂದದವರು, ಪೋಷಕರು, ಉಪಸ್ಥಿತರಿದ್ದರು.

ಡಿಡಿಪಿಐ ಕಛೇರಿಯ ಈರ್ವರು ವಯೋ ನಿವೃತ್ತಿ: ಬಿಳ್ಕೊಡುಗೆ ಸಮಾರಂಭ.

0

ಶಾಲಾ ಇಲಾಖೆ,ಉಪನಿರ್ದೇಶಕರ ಕಛೇರಿ,ಶಿವಮೊಗ್ಗ ಇಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಎಂ ಮತ್ತು ವಾಹನ ಚಾಲಕರಾದ ಬಿ. ಪುಟ್ಟಸ್ವಾಮಿ ಯವರು ಜುಲೈ 31-7-2026 ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದರು. ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ರಾ. ಹ.ತಿಮ್ಮೇನಹಳ್ಳಿ, ಕಾರ್ಯದರ್ಶಿ ಕೆ. ಜಿ. ಮಠಪತಿ, ನಿವೃತ್ತ ಧೈಹಿಕ ಶಿಕ್ಷಣ ಅಧಿಕಾರಿ ಬಿ. ಹೆಚ್. ನಿರಂಜನ್ ಮೂರ್ತಿ, ಶಿಕ್ಷಣ ಸಂಯೋಜಕರಾದ ಮೋಹನ್ ಡಿ., ಕನ್ನಡ ಶಿಕ್ಷಕರಾದ ಡಾ. ಬಸವರಾಜಪ್ಪ, ಮೂರ್ತಿ ನಾಯ್ಕ, ಪ್ರೆಮಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ” ಹಸನ್ಮುಖಿ ನಮ್ಮ ಎಂ.ವಿ.ಸರ್” ಅಭಿನಂದನಾ ಗ್ರಂಥ ಬಿಡುಗಡೆ

0

ಸುದೀರ್ಘ ಅವಧಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ. ಎಂ.ವೆಂಕಟೇಶ್ ಮುಂದಿನ ದಿನಗಳಲ್ಲಿ ಜನಪದ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಲಿ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಆಶಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಎಂ.ವೆಂಕಟೇಶ್ ಅವರ “ಹಸನ್ಮುಖಿ ನಮ್ಮ ಎಂ.ವಿ. ಸರ್” ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ವೆಂಕಟೇಶ್ ಅವರು ಸೇವಾವಧಿ ಪೂರ್ಣಗೊಳಿಸಿದ್ದು, ಪ್ರವೃತ್ತಿಯಿಂದ ಹಲವಾರು ಸಾಧನೆಗಳನ್ನು ಮಾಡಬೇಕಿದೆ. ಜನಪದ ಕ್ಷೇತ್ರದಲ್ಲಿ ಅವರನ್ನು ನಾವು ಬಳಕೆ ಮಾಡಿಕೊಳ್ಳುತ್ತೇವೆ ಎಂದರು.

ದಾವಣಗೆರೆಯ ಡಾ. ಸಿ.ಎಚ್.ಮುರುಗೇಂದ್ರಪ್ಪ ಮಾತನಾಡಿ, ವೆಂಕಟೇಶ್ ಅವರು ಸಂಘಟನಾ ಚತುರರಾಗಿದ್ದು, ಎಲ್ಲರೂ ಅವರ ಗುಣಗಳನ್ನು ಮೆಚ್ಚುತ್ತಾರೆ. ಅವರಿಂದ ಇನ್ನು ಹಲವಾರು ಕೆಲಸಗಳು ಆಗಬೇಕಿದೆ. ಒಂದು ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಇರಲು ಅವರಿಂದ ಸಾಧ್ಯವಾಗುತ್ತದೆ ಎಂದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಚ್.ಎಮ್.ಶಿವಕುಮಾರ್ ಮಾತನಾಡಿ, ನಿವೃತ್ತಿಯಾಗುತ್ತಿರುವುದು ಕೇವಲ ಕೆಲಸದಿಂದ. ಆದರೆ ಅವರ ಪ್ರವೃತ್ತಿ ಅದೇ ರೀತಿ ಮುಂದುವರಿಯುತ್ತದೆ. ಅವರಿಂದ ಇನ್ನು ಹಲವಾರು ಕಾರ್ಯಗಳು ನೆರವೇರಬೇಕಿದೆ ಎಂದು ಹೇಳಿದರು.

ಡಿವಿಎಸ್ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ಪ್ರಾಂಶುಪಾಲರ ಹುದ್ದೆಯಿಂದ ಮಾತ್ರ ನಿವೃತ್ತಿ ಆಗುತ್ತಿದ್ದಾರೆ. ಅವರು ನಂತರ ಡಿವಿಎಸ್ ಆಡಳಿತ ಸಮಿತಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಡಿವಿಎಸ್ ಅಧ್ಯಕ್ಷ ಕೆ.ಬಸಪ್ಪ ಗೌಡ ಮಾತನಾಡಿ, ವೆಂಕಟೇಶ್ ಅವರು ಕಾಯಕಯೋಗಿಯಾಗಿದ್ದು, ಸೌಮ್ಯ ಸ್ವಭಾವದಿಂದ ಎಲ್ಲರನ್ನು ಸಂಘಟಿಸಿ ಕಾಲೇಜಿಗೆ ಮತ್ತು ಆಡಳಿತ ಸಮಿತಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಮೆಚ್ಚಿ ನಾವು ಅವರಿಗೆ ಮುಂದೆ ಇನ್ನಷ್ಟು ಜವಾಬ್ದಾರಿಗಳನ್ನು ನೀಡುತ್ತೇವೆ ಎಂದು ತಿಳಿಸಿದರು. ಇದೇ ಸಮಾರಂಭದಲ್ಲಿ ಕುಲಸಚಿವರಾಗಿ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.

ಡಿವಿಎಸ್ ನಿರ್ದೇಶಕ ರುದ್ರಪ್ಪ ಕೊಳಲೆ ಮಾತನಾಡಿ, ಒಬ್ಬ ವ್ಯಕ್ತಿ ನಿಜವಾದ ಸಾಧನೆ ಮಾಡಿದರೆ ಸ್ಥಾನಮಾನಗಳು ತಾನಾಗಿ ಹುಡುಕಿಕೊಂಡು ಬರುತ್ತವೆ ಎಂದರು.

ಡಾ. ಎಂ.ವೆಂಕಟೇಶ್, ದೇಶೀಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರೊ. ಎನ್.ಕುಮಾರಸ್ವಾಮಿ, ಡಿವಿಎಸ್ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವರ್ಗ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಶಿವಮೊಗ್ಗಕ್ಕೆ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಮತ್ತು ಸಾಂಬಾರ ಮಂಡಳಿ ಉಪಕೇಂದ್ರ ಸ್ಥಾಪಿಸಲು ಸಂಸದ ರಾಘವೇಂದ್ರರ ಪ್ರಯತ್ನಕ್ಕೆ ಕೇಂದ್ರ ಸಚಿವರ ಭರವಸೆ

0

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈತರ ಹಿತಕ್ಕೆ ಸಂಬಂಧಿಸಿದ ಎರಡು ಪ್ರಮುಖ ಕೃಷಿ ಪ್ರಸ್ತಾವನೆಗಳ ಕುರಿತು ಮನವಿ ಸಲ್ಲಿಸಿ ಚರ್ಚೆ ನಡೆಸಿದರು.

ಸಾಗರದಲ್ಲಿ ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯದ (DASD) ಉಪಕೇಂದ್ರವನ್ನು ಸ್ಥಾಪಿಸುವಂತೆ ಅವರು ಮನವಿ ಮಾಡಿದರು. ಇದರಿಂದ ಅಡಿಕೆ ಬೆಳೆಗಾರರಿಗೆ ತಾಂತ್ರಿಕ ಮಾರ್ಗದರ್ಶನ, ರೋಗ ನಿರ್ವಹಣೆ ಹಾಗೂ ಮೌಲ್ಯವರ್ಧನೆಗೆ ಅಗತ್ಯ ಬೆಂಬಲ ದೊರೆಯಲಿದೆ ಎಂದು ವಿವರಿಸಿದರು.

ಇದೇ ವೇಳೆ, ಶಿವಮೊಗ್ಗದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಧೀನದ ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆಯ (ICAR–IIMR) ಪ್ರಾದೇಶಿಕ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ಶೀಘ್ರ ಆರಂಭಿಸುವಂತೆ ಕೋರಿದರು. ಈ ಕೇಂದ್ರದಿಂದ ಗುಣಮಟ್ಟದ ಸಂಶೋಧನೆ, ಸುಧಾರಿತ ತಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ವೈಜ್ಞಾನಿಕ ನೆರವು ದೊರೆಯಲಿದೆ ಎಂದು ತಿಳಿಸಿದರು.

ಈ ಎರಡೂ ಪ್ರಸ್ತಾವನೆಗಳನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಕಾರಾತ್ಮಕವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಾಂಬಾರ ಮಂಡಳಿಯ ಸದಸ್ಯ ಪ್ರಸನ್ನ ಕೆರೆಕೈ ಉಪಸ್ಥಿತರಿದ್ದರು.

ಎಲ್ ನಿನೋ ಎಚ್ಚರಿಕೆ,! ಇನ್ನುಮುಂದೆ ಜಲಾಶಯದ ನೀರನ್ನ ಕುಡಿಯಲು ಮಾತ್ರ‌ ಕಾಯ್ದಿರಿಸಲು ಸರ್ಕಾರದ ಆದೇಶ

0


ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಜಲನೀತಿಯನ್ವಯ, ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲು ಮತ್ತು ಕಾಯ್ದಿರಿಸಲು ಮೈಸೂರು ವಿಭಾಗದ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಆದೇಶಿಸಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಬರುವ ದಿನಗಳಲ್ಲಿ ‘ಎಲ್-ನಿನೋ’ ಪರಿಣಾಮದಿಂದಾಗಿ ಮತ್ತಷ್ಟು ಮಳೆ ಅಭಾವ ಹಾಗೂ ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಈ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿಗಳು, “ಜಲಾಶಯ ನೆಚ್ಚಿಕೊಂಡು ಯಾವುದೇ ರೈತರು ಬೆಳೆ ಹಾಕಬೇಡಿ” ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ಕೃಷ್ಣರಾಜಸಾಗರ, ನುಗು, ತಾರಕ, ಸುವರ್ಣಾವತಿ, ಚಿಕ್ಕಹೊಳೆ, ಗುಂಡಾಲ್, ಉಡುತೊರೆಹಳ್ಳ, ವಾಟೇಹೊಳೆ ಹಾಗೂ ಯಗಚಿ ಜಲಾಶಯಗಳ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಕಾಯ್ದಿರಿಸಲಾಗುತ್ತದೆ:
ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಂಡು, ರೈತ ಬಾಂಧವರು ಜಲಾಶಯದ ನೀರನ್ನು ಅವಲಂಬಿಸುವ ಬೆಳೆಗಳನ್ನು ಬೆಳೆಯಬಾರದು ಎಂದು ವಿನಂತಿಸಲಾಗಿದೆ. ಕೃಷಿ ಇಲಾಖಾ ಅಧಿಕಾರಿಗಳ ಸಲಹೆಯಂತೆ ಕೇವಲ ಮಳೆ ಆಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕುಡಿಯುವ ನೀರಿನ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

ಮೀನುಮರಿ ಖರೀದಿಗೆ ಜಿಲ್ಲಾ ವಲಯ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

0

ಮೀನುಗಾರಿಕೆ ಇಲಾಖೆಯು 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಮೀನುಮರಿ ಖರೀದಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸ್ವಂತ ಕೊಳ, ಇಲಾಖೆಯಿಂದ ಗುತ್ತಿಗೆ, ಹರಾಜಿನಲ್ಲಿ ಪಡೆದ ಕೆರೆಯಲ್ಲಿ ವೈಜ್ಞಾನಿಕವಾಗಿ ಮೀನುಮರಿ ಬಿತ್ತನೆ, ಸ್ವಂತ ಕೊಳ ನಿರ್ಮಿಸಿಕೊಂಡು ಮೀನುಮರಿ ಪಾಲನೆಗೆ ಬಳಸಲು ಖರೀದಿಸಿದವರಿಗೆ ಮಾತ್ರ ಸಹಾಯಧನ ನೀಡಲಾಗುವುದು.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಪಂಚಾಯತ್ ಯೋಜನೆಗಳ ಅಧಿಕೃತ ಪೋರ್ಟಲ್ https://shimoga.nic.in ಮುಖಾಂತರ ಆನ್‌ಲೈನ್‌ನಲ್ಲಿ ಸೆ. 15 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ ಶಿವಮೊಗ್ಗ-9986040981, ಭದ್ರಾವತಿ-9743370815, ಶಿಕಾರಿಪುರ- 9686939028, ಸಾಗರ -9538044365, ಸೊರಬ -9535386449, ತೀರ್ಥಹಳ್ಳಿ- 8655132438 ಇವರುಗಳನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿರುತ್ತಾರೆ.

ಸಂಘರ್ಷಕ್ಕೆ ಬದಲು ಸಮನ್ವಯತೆ, ಮಾನವೀಯತೆ : ಇದು ಮಾಸ್ತಿ ಸಾಹಿತ್ಯದ ವಿಶೇಷ : ನಟರಾಜ ಅರಳಸುರಳಿ

0

ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಾಹಿತ್ಯದಲ್ಲಿ ಸಂಘರ್ಷಕ್ಕೆ ಬದಲು ಸಮನ್ವಯತೆ, ಮಾನವತಾವಾದ ಮತ್ತು ಬದುಕನ್ನು ಪ್ರೀತಿಸುವುದು ಎದ್ದು ಕಾಣುತ್ತದೆ ಎಂದು ಲೇಖಕ ನಿವೃತ್ತ ಪ್ರಾಂಶುಪಾಲ ನಟರಾಜ್ ಅರಳಸುರುಳಿ ಅವರು ಅಭಿಪ್ರಾಯಪಟ್ಟರು.
ಜು.30 ರಂದು ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವಿಭಾಗ, ತುಂಗಾ ಮಹಾವಿದ್ಯಾಲಯ ಮತ್ತು ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಜರಗಿದ ಮಾಸ್ತಿ ಅವರ ಸಾಹಿತ್ಯ ಚಿಂತನೆ ಕುರಿತ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಟರಾಜ್ ಅವರು, ಮಾಸ್ತಿಯವರ ಕಥೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸುತ್ತದೆ. ಅವರ ಸಾಹಿತ್ಯ ಕೃತಿಗಳು ದುಃಖಾಂತ್ಯದತ್ತ ಸಾಗಿದರೂ, ಕೊನೆಯಲ್ಲಿ ಅದಕ್ಕೊಂದು ಟ್ವಿಸ್ಟ್ ನೀಡಿ ಸುಖಾಂತ್ಯದಲ್ಲಿ ಕೊನೆಗೊಳಿಸುತ್ತಿದ್ದರು. ಅವರಿಗೆ ಬದುಕನ್ನು ಪ್ರೀತಿಸುವುದು ಮುಖ್ಯವಾಗಿತ್ತು ಎಂದರು.
ಮಾಸ್ತಿಯವರಿಗೆ ಇಂಗ್ಲೀಷ್ ಸಾಹಿತ್ಯದ ಪ್ರಭಾವವಾಗಿತ್ತು. ಅವರು ಬರೆಯುವ ಕಾಲದಲ್ಲಿ ಅವರಿಗೆ ಮಾದರಿಗಳಿರಲಿಲ್ಲ. ಅವರು ಎಲ್ಲಾ ವರ್ಗದವರನ್ನೂ ಗೌರವಿಸುತ್ತಿದ್ದರು. 95 ವರ್ಷಗಳ ತುಂಬು ಜೀವನ ನಡೆಸಿದ ಅವರು ಕೊನೆಯ ದಿನದವರೆಗೂ ನೆಮ್ಮದಿಯಲ್ಲೇ ಬದುಕಿದವರು ಎಂದು ನಟರಾಜ್ ಹೇಳಿದರು.
ಶ್ರೀಮತಿ ಪ್ರಭಾವತಿ ಶಾಮಣ್ಣ ಅವರು ನೀಡಿರುವ ಸಾಹಿತಿ ಎಂ.ಕೆ. ಇಂದಿರಾ ಸ್ಮಾರಕ ದತ್ತಿಯಾಗಿರುವ ಇಂದಿರಾ ಅವರ ಸಾಹಿತ್ಯ ಅವಲೋಕನ ಎನ್ನುವ ವಿಷಯವಾಗಿ ಮಾತನಾಡಿದ ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ.ಎಲ್. ಸಿ.ಸುಮಿತ್ರಾ ಅವರು, ವಿದ್ಯಾರ್ಥಿಗಳು ಎಂ.ಕೆ. ಇಂದಿರಾ ಅವರನ್ನು ಮಾದರಿಯಾಗಿ ಇರಿಸಿಕೊಂಡು ಕಲಿಯುವುದು ಬಹಳಷ್ಟಿದೆ ಎಂದರು.
ಅವರು ಓದಿದ್ದು ಕೇವಲ ಎರಡನೆ ತರಗತಿಯಾದರೂ, ಆಗಿನ ಎರಡನೆ ತರಗತಿಯೆಂದರೆ ತುಂಬಾ ಮೌಲ್ಯಯುತವಾದುದಾಗಿತ್ತು. ಇಂದಿರಾ ಬಹಳ ಧೈರ್ಯಶಾಲಿ ಮಹಿಳೆಯಾಗಿದ್ದವರು. ಆಗಿನ ಕಾಲದಲ್ಲಿ ಇದ್ದ ಜಾತಿ ಧರ್ಮಗಳ ಕಟ್ಟುಪಾಡು, ಮೂಡನಂಬಿಕೆ, ಅಂಧಶ್ರದ್ದೆಗಳು ಮತ್ತು ಮಹಿಳೆಯರ ದುಸ್ಥಿತಿಯ ಕುರಿತು ಪ್ರಶ್ನಿಸುತ್ತಾರೆ. ಇಂದಿರಾ ಅವರು ತಮ್ಮ 45 ನೇ ವರ್ಷದ ಬಳಿಕ ಮೊದಲ ಕಾದಂಬರಿ ‘ತುಂಗಾಭದ್ರಾ’ ಬರೆಯುತ್ತಾರೆ. ಹಿಂದಿಯಿಂದ ಸಾಕಷ್ಟು ಭಾಷಾಂತರ ಮಾಡುತ್ತಾರೆ. ಬಳಿಕ ಸಾಹಿತಿ ತ್ರಿವೇಣಿಯವರು ಇವರಿಗೆ ಸಾಹಿತ್ಯ ರಚಿಸುವ ಕುರಿತು ಪ್ರೇರಣೆ ನೀಡುತ್ತಾರೆ. ‘ ಸದಾನಂದ’ , ‘ ಗೆಜ್ಜೆಪೂಜೆ’, ಪಣಿಯಮ್ಮ ( ಇವು ಸಿನಿಮಾ ಆದವು) ಸೇರಿದಂತೆ 51 ಕಾದಂಬರಿಗಳು ಹಾಗೂ 6 ಕಥಾ ಸಂಕಲಗಳನ್ನು ರಚಿಸಿದ್ದಾರೆ. ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕುರಿತು ‘ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್’ ಎನ್ನುವ ಕೃತಿ ಹೊರತಂದಿದ್ದರು. ಇವುಗಳಲ್ಲಿ ಬಹುತೇಕ ಇವರು ನೋಡಿದ ವಿಷಯಗಳನ್ನೇ ಆಧರಿಸಿ ಸಾಹಿತ್ಯ ಕೃತಿಯಾಗಿಸಿದ್ದರು. ಎಂದು ಸುಮಿತ್ರಾ ಹೇಳಿದರು.
ಇಂದಿರಾ ಅವರದ್ದು ತೂಕವಾದ ಬರಹ. ವಸ್ತು ವಿಷಯವೇ ಪರಿಣಾಮಕಾರಿಯಾಗಿದ್ದವು. ವಿದ್ಯಾರ್ಥಿಗಳು ಇವರ ಕನಿಷ್ಟ ಒಂದೆರಡು ಪುಸ್ತಕಗಳನ್ನಾದರೂ ಕಾಲೇಜಿನ ಗ್ರಂಥಾಲಯದಿಂದ ಪಡೆದು ಓದಬೇಕು. ಓದು ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಾಧನವಾಗಿದೆ ಎಂದು ಸುಮಿತ್ರಾ ನುಡಿದರು.
ಮಾಸ್ತಿ ಹಾಗೂ ಇಂದಿರಾ ಅವರ ಪುಸ್ತಕಗಳಿದ್ದ ಬಟ್ಟೆಯ ಕಟ್ಟನ್ನು ಬಿಚ್ಚುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ದತ್ತಿ ದಾನಿ ಹಾಗೂ ಸಾಹಿತ್ಯಾಭಿಮಾನಿಯಾಗಿರುವ ಕೂಳೂರು ಸತ್ಯನಾರಾಯಣರಾವ್ ಅವರು, ವಿದ್ಯಾರ್ಥಿಗಳು ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ದೇಶದಲ್ಲಿ ನೂರಾರು ಜಾತಿ, ಪಂಗಡಗಳಿಂದಾಗಿ ದೇಶದಲ್ಲಿ ಸಂಕಷ್ಟ ತಲೆದೋರಿದೆ. ಮೊದಲಿಗೆ ನಾವೆಲ್ಲರೂ ಭಾರತೀಯರು ಎನ್ನುವ ಭಾವನೆ ಬೆಳೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಕುಮಾರಸ್ವಾಮಿಯವರು ಸಾಹಿತ್ಯ ಪರಿಷತ್ತಿನಿಂದ ಸಾಹಿತಿಗಳನ್ನು ಕರೆಯಿಸಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಕುರಿತ ಆಸಕ್ತಿ ಬೆಳೆಯುತ್ತದೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ರೇಣುಕಾ ಎಂ.ಹೆಗಡೆ ಅವರು, ಸಾಹಿತಿಗಳಾದ ಮಾಸ್ತಿ ಹಾಗೂ ಇಂದಿರಾ ಕುರಿತು ಸ್ವಾರಸ್ಯಕರ ಮಾಹಿತಿಗಳು ವಿದ್ಯಾರ್ಥಿಗಳಿಗೆ ಲಭಿಸಿತು ಎಂದರು. ಐ ಕ್ಯೂ ಎ ಸಿ ಸಂಚಾಲಕರಾದ ಡಾ.ನಾಗರಾಜ ಎಂ. ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಡಿ. ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಅವರು ಆಶಯ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ನಯನ ಮತ್ತು ಸುನಿಧಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕ ಕೆ.ಎಲ್. ಪ್ರಸನ್ನ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.

ಕೊನೆಯಲ್ಲಿ…

ಬರಹ ಕೃಪೆ: ಟಿ.ಕೆ.ರಮೇಶ ಶೆಟ್ಟಿ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ: ಸೀಎಂ ಡಿ.ಕೆ.ಶಿವಕುಮಾರ್ ಅವರಿಂದ ಉನ್ನತಮಟ್ಟದ ಸಭೆ

0

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದ ಹಿನ್ನೆಲೆಯಲ್ಲಿ, ಕರ್ನಾಟಕದ ಕಾವೇರಿ ನೀರಿನ ಪರಿಸ್ಥಿತಿಯ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ನೀರಾವರಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದರು.