District Health and Family Welfare Department ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ & ಮೆರಿಟ್ ಆಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್. ಪದವೀಧರ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಫೆ. 02 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00ರವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು ಮತ್ತು ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222382 ನ್ನು ಸಂಪರ್ಕಿಸುವುದು.
District Health and Family Welfare Department ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ
ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಪೂರ್ಣಗೊಳಿಸಲು ಒತ್ತಾಯ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಉಪಕರಣಗಳ ಅಳವಡಿಕೆ ಕಾಮಗಾರಿ ಶೀಘ್ರ ಬೇಗ ಪೂರ್ಣಗೊಳಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಒತ್ತಾಯಿಸಿದರು.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿ ಕರ್ನಾಟಕ ಸರ್ಕಾರ ನಿರ್ವಹಿಸಿದ ಪ್ರಥಮ ವಿಮಾನ ನಿಲ್ದಾಣ. 3 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸುಗಮ ಸೇವೆ ನೀಡಿದೆ. ಪ್ರಸ್ತುತ ಬೆಂಗಳೂರು, ಗೋವಾ, ಚೆನ್ನೈ, ತಿರುಪತಿ ಮತ್ತು ಹೈದರಾಬಾದ್ಗೆ ವಿಮಾನಗಳನ್ನು ಹೊಂದಿದೆ. ನೈಟ್ ಲ್ಯಾಂಡಿAಗ್ ವ್ಯವಸ್ಥೆ ಪೂರ್ಣಗೊಂಡ ಬಳಿಕ ನವದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳೊಂದಿಗೆ ನೇರ ವಿಮಾನ ಸಂಪರ್ಕ ಸಿಗಲಿದೆ ಎಂದರು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಬಾಕಿ ಇರುವ ಸಿವಿಲ್ ಕಾಮಗಾರಿ ಮತ್ತು ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಅಗತ್ಯವಾದ ಉಪಕರಣಗಳ ಅಳವಡಿಕೆಗೆ ಕಾಮಗಾರಿಗಳು ವಿಳಂಬ ಆಗುತ್ತಿದೆ. ಈ ಉಪಕರಣಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿದ್ದರೂ ಅಳವಡಿಕೆ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ನೈಟ್ ಲ್ಯಾಂಡಿಂಗ್ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡಿನ ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ಉದ್ಯೋಗಾವಕಾಶಗಳಿಗೆ ಇನ್ನಷ್ಟು ಶಕ್ತಿ ತುಂಬಿ ಜಿಲ್ಲೆಯ ವ್ಯಾಪಾರ ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. ಸಚಿವರು ಸಂಘದ ಅಹವಾಲು ಸ್ವೀಕರಿಸಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ನೈಟ್ ಲ್ಯಾಂಡಿಂಗ್ ಕಾಮಗಾರಿಗಳು ಬೇಗನೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಆದ ಹೆಚ್.ಸಿ ಯೋಗೇಶ್ ಅವರು ಮಾತನಾಡುತ್ತಾ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಅತಿ ಅವಶ್ಯಕವಾಗಿದ್ದು ಉಪಮುಖ್ಯಮಂತ್ರಿಗಳು ಈ ದಿಸೆಯಲ್ಲಿ ಸ್ಪಂದಿಸುವ ಭರವಸೆ ನೀಡಿದ್ದು ಸಂತಸ ತಂದಿದೆ ಎಂದರು
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ನ ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಸಾಗರ ರಸ್ತೆ ಕೈಗಾರಿಕಾ ಸಂಘದ ಕೆ ಬಿ ಶಿವಕುಮಾರ್ ಇದ್ದರು.
CM Siddharamaiah ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ಉದ್ಯೋಗ: ಆದೇಶ ಪ್ರತಿ ಹಸ್ತಾಂತರಿಸಿದ ಸಿಎಂ
CM Siddharamaiah ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪುತ್ರಿ ಚೈತನ್ಯಾ ಎಮ್.ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಾಂತರಿಸಿ, ತಂದೆಯಂತೆಯೇ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶುಭ ಕೋರಿದರು.
ಸಚಿವರಾದ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಉಪಸ್ಥಿತರಿದ್ದರು.
Rotary Club Shivamogga ವಿಶ್ವಾದ್ಯಂತ ರೋಟರಿ ಸಂಸ್ಥೆಯಿಂದ ಮನುಕುಲದ ಸೇವೆ
Rotary Club Shivamogga ವಿಶ್ವದ ಎಲ್ಲ ಕಡೆಗಳಲ್ಲಿ ರೋಟರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜಮುಖಿ ಕಾರ್ಯಗಳ ಜತೆಯಲ್ಲಿ ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.
ಶ್ರೀಲಂಕಾ ದೇಶದಲ್ಲಿ ಅಲ್ಲಿನ ರೋಟರಿ ಕ್ಲಬ್ ಹಾಗೂ ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ಗಳ ಅಂತರಾಷ್ಟ್ರೀಯ ಮಟ್ಟದ ಸ್ನೇಹಮಿಲನ ಹಾಗೂ ಅವರವರ ಕ್ಲಬ್ಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡು ಧ್ವಜಗಳನ್ನು ಹಸ್ತಾಂತರಿಸಿ ಮಾತನಾಡಿ, ರೋಟರಿ ಸಂಸ್ಥೆಯು ಸೇವಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಾಲೆ ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ ಎಂದರು.
ಶ್ರೀಲಂಕಾ-ಮಾಲ್ಡೀವ್ಸ್ ರೋಟರಿ ಸದಸ್ಯ ರಮೇಶ್ ಮಾತನಾಡಿ, ಅಂತರಾಷ್ಟ್ರೀಯ ಭೇಟಿ ಹಾಗೂ ಕಾರ್ಯಕ್ರಮಗಳಿಂದ ಕ್ಲಬ್ಗಳ ಕಾರ್ಯಯೋಜನೆ ಹಾಗೂ ಸೇವಾಕಾರ್ಯಗಳ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಶೇಷಗಿರಿ ಡಿ.ಕೆ. ಮಾತನಾಡಿ, ಅಂತರಾಷ್ಟ್ರೀಯ ಧ್ವಜ ಹಸ್ತಾಂತರ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಸಂಸ್ಥೆಗಳನ್ನು ಬಲಪಡಿಸುವುದರ ಜತೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
Rotary Club Shivamogga ರೋಟರಿ ಕ್ಲಬ್ನ ಕೋಟ್ಯಾನ್, ಅಂಜಲಿ ಕಾತರಕಿ, ಅನಂತ ಕಾತರಕಿ, ಪ್ರಭುಲಿಂಗಪ್ಪ ಹಲಗೇರಿ, ಪೂರ್ಣೇಶ್, ಬ್ರಿಜೇಶ್, ದಿವ್ಯಾ, ಆರ್.ಮನೋಹರ, ಮಲ್ಲೇಶ್ , ಬಿಂದು ವಿಜಯಕುಮಾರ್ , ಸುರೇಶ್ ಉಪಸ್ಥಿತರಿದ್ದರು.
D.K. Shivakumar ಡಿಸಿಎಂ ಡಿಕೆ ಶಿವಕುಮಾರ್ ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ – ಶುಭ ಹಾರೈಕೆ
D.K. Shivakumar ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ಪೋಸ್ಟರ್ ನನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ರವರು ಶಿವಮೊಗ್ಗ ನಗರದ ಕಿಮ್ಮನೆ ರೆಸಾರ್ಟ್ ನಲ್ಲಿ ಬಿಡುಗಡೆಗೊಳಿಸಿ ಶುಭ ಕೋರಿದರು
ಈ ಸಂದರ್ಭದಲ್ಲಿ ಪ್ರಧಾನ ಸಂಚಾಲಕರಾದ ಕೆ ರಂಗನಾಥ್ , ಗೌರವ ಸಂಚಾಲಕರಾದ ಎಚ್ ಪಾಲಾಕ್ಷಿ, ಸಿ ರವಿ ಹಾಪ್ ಕಾಮ್ಸ್ನ ಅಧ್ಯಕ್ಷರಾದ ವಿಜಯಕುಮಾರ್ ದನಿ, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ನಮ್ಮೂರ ಬಳಗದ ಸಂಚಾಲಕರಾದ ಹೆಚ್ ಪಿ ಗಿರೀಶ್, ಟಿ ಗುರುಪ್ರಸಾದ್, ದಿವಾಕರ್, ರಜನಿಕಾಂತ್ ಕೆ ಎಲ್ ಪವನ್ ಹಾಗೂ ಇತರರು ಇದ್ದರು.
Madhu Bangarappa ಶರಾವತಿ ಹಿನ್ನೀರು ಸಂತ್ರಸ್ತರ ಭೂಮಿ ಹಕ್ಕು ಕಸಿದುಕೊಳ್ಳುವ ಪ್ರಶ್ನೆಯೇ ಇಲ್ಲ: ಸಚಿವ ಮಧುಬಂಗಾರಪ್ಪ
Madhu Bangarappa ಮಡೆನೂರು, ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಮುಳುಗಡೆಯಾಗಿ, ಕೆಪಿಸಿ (ಕರ್ನಾಟಕ ವಿದ್ಯುತ್ ನಿಗಮ) ಅಡಿಯಲ್ಲಿರುವ ಉಳಿಕೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಶರಾವತಿ ಹಿನ್ನೀರು ಸಂತ್ರಸ್ಥರ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಮ್ಮ ಹೆಮ್ಮೆಯ ನಾಯಕರಾದ ಶ್ರೀ ಎಸ್.ಮಧು ಬಂಗಾರಪ್ಪನವರು, ʼಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗಲೇ ಹಿನ್ನೀರು ಸಂತ್ರಸ್ಥರು ಅಳಿದುಳಿದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ. ಜಲಾಶಯ ನಿರ್ಮಾಣದಿಂದ ಕೆಪಿಸಿಗೆ ಅಗತ್ಯವಿದ್ದ ಭೂಮಿ ಬಳಕೆಯಾಗಿದೆ. ಯೋಜನೆಯಿಂದ ಸಂತ್ರಸ್ತರಾದ ರೈತರು ಆರು ದಶಕಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ. ಆ ಜನರಿಗೆ ಸರ್ಕಾರ ತೊಂದರೆ ಕೊಡುವುದಿಲ್ಲ. ಅವರ ಸಾಗುವಳಿ ಭೂಮಿಯನ್ನು ಕಾನೂನು ಪರಿಮಿತಿಯಲ್ಲಿ ಮಂಜೂರು ಮಾಡಲಾಗುವುದು ಎಂದರು.
ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿ ಎಂದು ಅರಣ್ಯ ಸಚಿವರಿಗೆ ಪತ್ರ ಬರೆದಿರುವುದನ್ನು ಸಚಿವರ ಗಮನ ಸೆಳೆದಾಗ, ಯಾರೊ ಪತ್ರ ಬರೆದ ಮಾತ್ರಕ್ಕೆ ರೈತರಿಗೆ ತೊಂದರೆ ಕೊಡಲಾಗದು. ಈ ಪ್ರಕರಣ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯೊಂದಿಗೆ ಸಂಪರ್ಕಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದರು.
ಸುಪ್ರೀಂ ಕೋರ್ಟಿಗೆ ವರದಿ
Madhu Bangarappa ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಸರ್ವೆ ಮಾಡಿದ್ದು, ಘನ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು ಬಾಕಿ ಇದೆ. ನ್ಯಾಯಾಲಯದ ಮುಂದಿನ ವಿಚಾರಣೆ ಸಂದರ್ಭ ವರದಿ ಸಲ್ಲಿಸಲು ಎಲ್ಲ ಸಿದ್ಧತೆ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇದೇ ವೇಳೆ ಮುಳುಗಡೆ ಸಂತ್ರಸ್ತರ ಬಿಟ್ಟು ಹೋದ ಭೂಮಿಯ ವಿಚಾರವಾಗಿ ನಮ್ಮ ವಕೀಲರು ನ್ಯಾಯಾಲಯದ ಗಮನ ಸೆಳೆಯಲಿದ್ದಾರೆ. ಆರು ದಶಕಗಳಿಂದ ಕಗ್ಗಂಟಾಗಿರುವ ಸಮಸ್ಯೆಯನ್ನು ಒಂದೇ ಬಾರಿ ಅಥವಾ ತುರ್ತಾಗಿ ಪರಿಹರಿಸುವುದು ಕಷ್ಟವಾಗುತ್ತದೆ. ಆದರೆ, ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಮಾತುಕೊಟ್ಟಂತೆ ಆದ್ಯತೆಯಾಗಿ ತೆಗೆದುಕೊಂಡಿದೆ. ಇದೇ ರೀತಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಅಡ್ಡಿಯಾಗಿರುವ 75 ವರ್ಷಗಳ ದಾಖಲೆ ಕೊಡುವ ಷರತ್ತನ್ನು ಸಡಿಲಿಸರುವ ವಿಚಾರದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತನಾಡಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿದ ಬಳಿಕ ಚಕ್ರಾ, ವಾರಾಹಿ, ತುಂಗಾ ಡ್ಯಾಂನಿಂದ ಸಂತ್ರಸ್ತರಾದವರ ಸಮಸ್ಯೆಗಳೂ ಒಂದೊಂದಾಗಿ ಬಗೆಹರಿಯುತ್ತವೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್, ರಕ್ಷಣಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ಇದ್ದರು.
ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಂಚಾರ ವೃತ್ತ ಕಛೇರಿಗೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ
ಶ್ರೀ ನಿಖಿಲ್ ಬಿ., ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಂಚಾರ ವೃತ್ತ ಕಛೇರಿಗೆ ಭೇಟಿ ನೀಡಿ, ಪೊಲೀಸ್ ಗೌರವ ವಂದನೆಗಳನ್ನು ಸ್ವೀಕರಿಸಿ, ಆನಂತರ ಪೊಲೀಸ್ ಠಾಣಾ ಸ್ವಚ್ಚತೆ, ಕಡತಗಳು ಮತ್ತು ಸ್ವತ್ತಿನ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ, ಡಿವೈಎಸ್.ಪಿ ಶಿವಮೊಗ್ಗ ‘ಬಿ ‘ಉಪ ವಿಭಾಗ ರವರು ಹಾಗೂ ಸಿಪಿಐ ಸಂಚಾರ ವೃತ್ತ ರವರು ಉಪಸ್ಥಿತರಿದ್ದರು. ನಂತರ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಪೂರ್ವ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು. ಆನಂತರ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ, ಅವರುಗಳ ಕುಂದು ಕೊರತೆಯನ್ನು ಆಲಿಸಿದರು.
Shivamogga Police ಕಾಣೆಯಾಗಿದ್ದಾರೆ : ಸುಳಿವು ನೀಡಲು ಮನವಿ
Shivamogga Police ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳAದು ನಾಲ್ವರು ಕಾಣೆಯಾಗಿದ್ದು, ವಿವರ ಕೆಳಕಂಡಂತಿವೆ.
ನಗರದ ಹೊಸಮನೆ ಬಲಭಾಗದ 2ನೇ ಕ್ರಾಸ್ ವಾಸಿ ಸ್ವಾಮಿ ಎಂಬುವವರ ತಮ್ಮ ಶಿವು ಜಿ. ಬಿನ್ ಗಂಗಾ ಭೋವಿ ಎಂಬ 29 ವರ್ಷದ ವ್ಯಕ್ತಿ ಮೇ 2025 ರಲ್ಲಿ ಮನೆಯಿಂದ ಜೆಸಿಬಿ ಡ್ರೈವರ್ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ನಗರದ ಬಸವನಗಂಗೂರು ವಾಸಿ ಹಾಲೇಶಪ್ಪ ಎಂಬುವವರ ಮಗ ನ್ಯೂಮಂಡ್ಲಿ ವಾಸಿ ಲೋಹಿತ ಎಂಬ 36 ವರ್ಷದ ವ್ಯಕ್ತಿ ಆಗಸ್ಟ್ 2025 ರಲ್ಲಿ ಟೈಲ್ಸ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ.
Shivamogga Police ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಹತ್ತಿರ ಶ್ರೀ ಮಲ್ಲಿಕಾರ್ಜುನ ನಿಲಯ, ಇ ಬ್ಲಾಕ್ ವಾಸಿ ಬಿ.ಎಂ. ಸಿದ್ದಯ್ಯ ಬಿನ್ ಮಲ್ಲಯ್ಯ ಎಂಬ 64 ವರ್ಷದ ವ್ಯಕ್ತಿ ಫೆಬ್ರವರಿ 2025ರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.3 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಗಾಡಿಕೊಪ್ಪ ಗಂಧರ್ವ ಬಾರ್ ಹಿಂಭಾಗ ವಾಸಿ ಸಚಿನ್ ಈ ಬಿನ್ ಈಶ್ವರ ಎಂ. ಹೆಚ್. ಎಂಬ 19 ವರ್ಷದ ಯುವಕ ಸೆಪ್ಟಂಬರ್ 2024 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ದುಂಡುಮುಖ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಈ ಮೇಲ್ಕಂಡ 4 ಜನ ವ್ಯಕ್ತಿಗಳ ಸುಳಿವು ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ನಂ.: 100 ಅಥವಾ ದೂ.ಸಂ.: 08182-261400 261424/ 9480803308/ 9480803373 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
Kateel Ashok Pai Memorial College ಮುಂಡಘಟ್ಟದಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಅದ್ಧೂರಿ ಚಾಲನೆ
Kateel Ashok Pai Memorial College ಕುವೆಂಪು ವಿಶ್ವವಿದ್ಯಾಲಯ, ಮಾನಸ ಟ್ರಸ್ಟ್ (ರಿ), ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ಮುಂಡಘಟ್ಟದಲ್ಲಿ ಚಾಲನೆ ನೀಡಲಾಯಿತು. “ಯುವಶಕ್ತಿಯಿಂದ ಡಿಜಿಟಲ್ ಸಾಕ್ಷರತೆ” ಎಂಬ ಆಶಯದೊಂದಿಗೆ ಹಮ್ಮಿಕೊಂಡಿರುವ ಈ ಶಿಬಿರವು ಗ್ರಾಮದ ಸಾಂಸ್ಕೃತಿಕ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಟೀಲ್ ರೈಸ್ ಮಿಲ್ ಮಾಲೀಕರಾದ ಶ್ರೀ ನಂಜಪ್ಪ ಗೌಡ್ರು, “ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಹಬಾಳ್ವೆಯನ್ನು ಕಲಿಸುವುದೇ ಎನ್ ಎಸ್ ಎಸ್ ನ ಮುಖ್ಯ ಉದ್ದೇಶ. ಸ್ವಯಂಸೇವಕರು ಶಿಬಿರದ ಅವಧಿಯಲ್ಲಿ ಈ ಮೌಲ್ಯಗಳನ್ನು ಮನನ ಮಾಡಿಕೊಂಡು, ಜೀವನದ ಅತ್ಯಮೂಲ್ಯ ಅನುಭವಗಳನ್ನು ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು.
ಮುಂಡಘಟ್ಟದ ಮುಖಂಡರಾದ ಶ್ರೀ ಸುರೇಶ್ ಸಿಂಗನಳ್ಳಿ ಮಾತನಾಡಿ, “ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವ ಈ ಶಿಬಿರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ವಿದ್ಯಾರ್ಥಿಗಳಿಗೆ ಶಿಬಿರದ ಅವಧಿಯಲ್ಲಿ ಯಾವುದೇ ಸಹಾಯ ಬೇಕಾದಲ್ಲಿ ಗ್ರಾಮಸ್ಥರು ಸದಾ ಸಿದ್ಧರಿದ್ದೇವೆ” ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಪರ ಪ್ರಾಂಶುಪಾಲರಾದ ಡಾ.ಅರ್ಚನಾ.ಕೆ.ಭಟ್ ರವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾ “ನಾನು ಸತತವಾಗಿ 15 ಎನ್ ಎಸ್ ಎಸ್ ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ಇಂದು ನಾನು ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಮತ್ತು ಸ್ವತಂತ್ರವಾಗಿ ನಿಲ್ಲಲು ಶಕ್ತಳಾಗಿದ್ದರೆ ಅದಕ್ಕೆ ಎನ್ ಎಸ್ ಎಸ್ ನೀಡಿದ ತರಬೇತಿಯೇ ಬೆನ್ನೆಲುಬು. ಇದು ಕೇವಲ ನನಗಷ್ಟೇ ಅಲ್ಲ, ನೀವು ಕೂಡ ಇದನ್ನು ಸರಿಯಾಗಿ ಬಳಸಿಕೊಂಡರೆ ಜೀವನದ ಉತ್ತುಂಗಕ್ಕೇರಲು ಸಾಧ್ಯ” ಎಂದು ಸ್ವಯಂಸೇವಕರಿಗೆ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ಬೋರಪ್ಪ, ನಿವೃತ್ತ ಸಹಕಾರಿ ಬ್ಯಾಂಕ್ ಇನ್ಸ್ಪೆಕ್ಟರ್ ಶ್ರೀ ಧರ್ಮಪ್ಪ, ಬಸವೇಶ್ವರ ಸ್ವಾಮಿ ದೇವಸ್ಥಾನದ ಸದಸ್ಯರಾದ ಶ್ರೀ ರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
Kateel Ashok Pai Memorial College ಶಿಬಿರದ ಯಶಸ್ಸಿಗಾಗಿ ಎನ್ ಎಸ್ ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ.ಸುಕೀರ್ತಿ ಮತ್ತು ಘಟಕ-2 ರ ಕಾರ್ಯಕ್ರಮಾಧಿಕಾರಿ ಶ್ರೀ ಮೋಹನ್ ಕುಮಾರ್ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಡಘಟ್ಟದ ಗ್ರಾಮಸ್ಥರು, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.
CM Siddharamaiah ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
CM Siddharamaiah ಚಲನಚಿತ್ರಗಳು ಮನರಂಜನೆಗೆ ಮಾತ್ರ ಸೀಮಿತವಾಗದೆ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಅಸಮಾನತೆ, ಬಡತನ, ಸಿರಿತನ, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾಾತರು, ಮಹಿಳೆಯರು ಕುರಿತಾಗಿ ಚಿತ್ರಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ನಗರದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇಂದು ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿನ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ತೋರಿಸಬೇಕು. ಕನ್ನಡದ ಮಟ್ಟಿಗೆ ಡಾ. ರಾಜಕುಮಾರ್ ಸಿನಿಮಾಗಳಲ್ಲಿ ಇವೆಲ್ಲವನ್ನೂ ನೋಡುವುದಕ್ಕೆ ಸಾಧ್ಯವಿತ್ತು ಎಂದು ಹೇಳಿದರು.
ಈ ಚಿತ್ರೋತ್ಸವಗಳಿಂದ ಬೇರೆ ದೇಶಗಳ ಜನರ ಜೀವನ, ರಾಜಕೀಯ ಮತ್ತು ಸಮಾಜ ಅರ್ಥವಾಗುತ್ತದೆ. ಅಸಮಾನತೆ, ಸಮಾನತೆ ಅರ್ಥ ಮಾಡಿಕೊಳ್ಳುರವುದು ಅವಶ್ಯಕ. ಅದಕ್ಕೆ ಚಿತ್ರೋತ್ಸವ ಸುವರ್ಣಾವಕಾಶ ಒದಗಿಸುತ್ತದೆ. ಅದನ್ನು ಉಪಯುಕ್ತವಾಗಿ ಬಳಸಿಕೊಂಡು ಸಮಾಜದಲ್ಲಿ ಬದಲಾವಣೆ ತರಬೇಕು. ಬದಲಾವಣೆ ಆಗದಿದ್ದರೆ, ಸಿನಿಮಾ ಬರೀ ಮನರಂಜನೆಗೆ ಸೀಮಿತ ಆಗುತ್ತದೆ.
ನಾವು ಮನುಷ್ಯರು, ನಾವು ಮಾನವರಾಗಿ ಬಾಳುವುದು ಅವಶ್ಯಕ. ಪ್ರತಿ ವ್ಯಕ್ತಿಯನ್ನು ಪ್ರೀತಿಯಿಂದ, ಸ್ನೇಹದಿಂದ ಕಾಣಬೇಕು. ಆಗ ಮಾತ್ರ ಸಮಸಮಾಜ ಕಟ್ಟುವುದಕ್ಕೆ ಸಾಧ್ಯ. ಬೇಧ, ಭಾವ, ಅಸಮಾನತೆ ಹೋಗಲಾಡಿಸುವ ಕೆಲಸ ಸಿನಿಮಾದ ಮೂಲಕ ಮಾಡಬೇಕು. ನಮ್ಮ ಸರ್ಕಾರ ಚಲನಚಿತ್ರ ಅಭಿವೃದ್ಧಿಗೆ ಸಹಕಾರ, ಬೆಂಬಲ ಕೊಡುತ್ತದೆ. ಬದುಕನ್ನು ಹಸನು ಮಾಡುವ ಕೆಲಸ ಚಲನ ಚಿತ್ರಗಳು ಮಾಡಲಿ ಎಂದು ಚಿತ್ರೋತ್ಸವಕ್ಕೆ ಶುಭ ಹಾರೈಸಿದರು.
ಇಂದಿನಿಂದ ಫೆಬ್ರವರಿ 6 ರ ವರೆಗೆ ನಡೆಯಲಿರುವ ಈ ಚಿತ್ರೋತ್ಸವದಲ್ಲಿ ಸುಮಾರು 70 ದೇಶಗಳ ಆಯ್ದ ಸುಮಾರು 240 ಸಿನಿಮಾ ಪ್ರದರ್ಶನ ನಡೆಯಲಿದ್ದು, ದೇಶ-ವಿದೇಶಗಳ ಅಪರೂಪದ ಈ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವಿದೆ. ಜಗತ್ತಿನ ಪ್ರಸಿದ್ಧ ಜನಮನ್ನಣೆಗಳಿಸುರುವ 100 ಕ್ಕೂ ಹೆಚ್ಚು ವಿದೇಶಿ ಚಲನಚಿತ್ರಗಳು ಹಾಗೂ 30 ಕ್ಕೂ ಹೆಚ್ಚು ವಿವಿಧ ಭಾರತೀಯ ಭಾಷೆಗಳ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಾತನಾಡಿ ಇಡಿ ದೇಶದಲ್ಲಿ ಹೆಮ್ಮೆ ಪಡುವಂತ ಕಾರ್ಯಕ್ರಮ ಈ ಚಲನಚಿತ್ರೋತ್ಸವ, ಕಲಾವಿದರ ಕುರಿತು ಮುಖ್ಯಮಂತ್ರಿಗಳಿಗೆ ಹೆಚ್ಚಿನ ಕಾಳಜಿ ಇದೆ. ಸಿನಿಮಾ ನೋಡುವಾಗ ಕನಿಷ್ಟ ನಾವು ನೆಮ್ಮದಿಯಿಂದ ಮೂರು ತಾಸು ಕಳೆಯುತ್ತೇವೆ, ಟಿವಿ ಮೋಬೈಲ್ ಗಳ ಹಾವಳಿಯಿಂದ ಇಂದು ಸಿನಿಮಾ ಕ್ಷೇತ್ರ ಸಮಸ್ಯೆಯಲ್ಲಿದೆ ಎಂದು ಹೇಳಿ ಹಳೆ ಸಿನಿಮಾಗಳನ್ನು ಸ್ಮರಿಸಿಕೊಂಡ ಅವರು ಈ ಚಿತ್ರೋತ್ಸದಲ್ಲಿ ಸಿನಿಮಾಗಳ ಪ್ರದರ್ಶನದ ಜೊತೆ ಸಿನಿಮಾ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಲಿ ಎಂದರು.
ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾಧ್ಯವಾದ ಸಹಾಯವನ್ನು ಹಾಗೂ ಸಹಕಾರವನ್ನು ನೀಡಲಾಗುವುದು. ಇಂತಹ ಕಾರ್ಯಕ್ರಮಗಳಲ್ಲಿ ನಡೆಯುವ ವಿಚಾರಗಳಿಗೆ ಸ್ಪಂದಿಸಲಾಗುವುದು, ಕಾರ್ಯಕ್ರಮ ಸಾರ್ಥಕತೆಗೆ ಶ್ರಮಿಸುವಂತೆ ಸಿನಿಮಾಸಕ್ತರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅವರು ಮಾತನಾಡಿ ನಮ್ಮ ಸರ್ಕಾರದವತಿಯಿಂದ ಅದ್ಭುತವಾದ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ, ಸಿನಿಮಾ ಸಮಾಜದ ಒಂದು ಭಾಗ, ಪ್ರತಿ ವಿಷಯದಲ್ಲಿ ಸಿನಿಮಾ ಕೊಡುಗೆ ಅಪಾರವಾಗಿದೆ, ಎಷ್ಟೇ ಕಷ್ಟದಲ್ಲಿದ್ದರು ಸಹ ಜನರಿಗೆ ಸಿನಿಮಾ ಮನರಂಜನೆ ನೀಡುತ್ತದೆ, ಇದೊಂದು ಅತ್ಯಂತ ಪ್ರಭಾವಶಾಲಿ ಮಾಧ್ಯಮ ಆಗಿದ್ದು, ಸಿನಿಮಾ ಮುಖಾಂತರ ಮನುಷ್ಯ ಮತ್ತು ಮನುಷ್ಯತ್ವವನ್ನು ಬೆಸೆಯುವ ಕೆಲಸವಾಗಬೇಕು, ಸಿನಿಮಾ ಕ್ಷೇತ್ರ ಮರೆತಿರುವುದನ್ನು ಮತ್ತೇ ಮರುಕಳಿಸಲಿ, ಪ್ರಕಾಶ್ ರೈ ಕೇವಲ ನಟರಲ್ಲ ಅವರೊಬ್ಬ ಮಾನವೀಯ ಕಾಳಜಿಯುಳ್ಳ ಜವಾಬ್ಧಾರಿ ಯುತ ನಾಗರೀಕ ಎಂದು ಹೇಳಿದರು.
CM Siddharamaiah ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 255 ಚಿತ್ರಗಳು ಪ್ರದರ್ಶನ ಹಮಿಕೊಂಡಿದ್ದು ಅದರಲ್ಲಿ 65 ಮಹಿಳಾ ನಿರ್ದೇಶಕರ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಚಿತ್ರೋತ್ಸವವನ್ನು ಮಹಿಳೆಯರಿಗೆ ಅರ್ಪಿಸಿರುವುದು ಅತ್ಯಂತ ಗೌರವಯುತ ಕಾರ್ಯವಾಗಿದೆ. ಸರ್ಕಾರ ಚಿತ್ರದ್ಯೋಮಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಮುಖ್ಯವಾಗಿ ಮೈಸೂರಿನಲ್ಲಿ ಚಲನಚಿತ್ರ ನಗರಿ, ಅಕಾಡೆಮಿ ಕಟ್ಟಡದಲ್ಲಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ , ಕನ್ನಡ ಚಿತ್ರಗಳಿಗಾಗಿ ಓಟಿಟಿ ಸೇರಿದಂತೆ ಚಲನ ಚಿತ್ರ ಕಾರ್ಮಿಕರಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಬಾರಿಯ ವಿಶೇಷವೆಂದರೆ ಲುಲು ಮಾಲ್ ಆವರಣದಲ್ಲಿ ಪ್ರತಿದಿನಸಂಜೆ 7 ಗಂಟೆಗೆ ಟೆಂಟ್ ಸಿನಿಮಾ ಮಾದರಿಯಲ್ಲಿ ಓಪನ್ ಏರ್ ಥೇಟರ್ ನಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ. ಚಲನ ಚಿತ್ರ ನಿರ್ಮಾಣ ಹಾಗೂ ಚಿತ್ರೀಕರಣಕ್ಕಾಗಿ ಸಂಬಂಧಿಸಿದಂತೆ ಅನುಮೋದನೆಗಳನ್ನು ಪಡೆಯಲು ಸಿಂಗಲ್ ವಿಂಡೋ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.
ಚಲನ ಚಿತ್ರೋತ್ಸವ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಮಾತನಾಡಿ ಈ ಬಾರಿಯ ವಿಶೇಷತೆಗಳನ್ನು ವಿವರಿಸಿದರು. ಕನ್ನಡ ಚಲನಚಿತ್ರದ ಸಾಧಕರ ಸಿನಿಮಾಯಾನವನ್ನು ಸಹ ಈ ಚಲನಚಿತ್ರೋತ್ಸವದಲ್ಲಿ ಸಂಭ್ರಮಿಸಲಾಗುತ್ತಿದೆ. ಇದೊಂದು ಸಿನಿಮಾ ಹಬ್ಬವಾಗಿದ್ದು ಎಲ್ಲರೂ ಭಾಗವಹಿಸಿ ಎಂದು ಹೇಳಿದರು.
ಈ ಬಾರಿಯ ಚಲನ ಚಿತ್ರೋತ್ಸವದ ರಾಯಭಾರಿ ಹಿರಿಯ ನಟ ಪ್ರಕಾಶ್ ರೈ ಮಾತನಾಡಿ ಸುಮಾರು 16 ವರ್ಷಗಳ ಹಿಂದೆ ನಾನು ಈ ಚಲನಚಿತ್ರೋತ್ಸವವನ್ನು ಉದ್ಘಾಟನೆ ಮಾಡಿದ್ದೆ ಎಂದು ಸ್ಮರಿಸಿಕೊಂಡ ಅವರು ಇದೊಂದು ರಂಗನತಿಟ್ಟು ಇದ್ದಂತೆ, ಅಲ್ಲಿಯಂತೆಯೇ ಇಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಸಿನಿಮಾ ಪಕ್ಷಿಗಳು ಸೇರುವುದು ವಿಶೇಷ ಎಂದರು.
ಅಂತರಾಷ್ಟ್ರೀಯ ಚಿತ್ರೋತ್ಸವ ಅಥವಾ ಸಾಹಿತ್ಯೋತ್ಸವಗಳು ಜನರ ಬದುಕು ಹಾಗೂ ಮನುಷ್ಯತ್ವವನ್ನು ಹಂಚಿಕೊಳ್ಳುವ ವೇದಿಕೆಗಳು. ಇಂತಹ ವೇದಿಕೆಗಳಿಗೆ ರಾಜಕೀಯ ಪ್ರವೇಶವಾಗಿರುವುದು ದುರಂತ, ಕೆಲದೇಶದ ಸಿನಿಮಾಗಳ ಪ್ರದರ್ಶನ ವನ್ನು ಕೇಂದ್ರ ಸರ್ಕಾರ ಅನುವ ಮಾಡಿಕೊಡದಿರುವುದನ್ನು ರಾಜ್ಯ ಸರ್ಕಾರ ಖಂಡಿಸಬೇಕು ಹಾಗೂ ಅದನ್ನು ವಿರೋಧಿಸುವ ಮೂಲಕ ನಮ್ಮ ಚಿತ್ರೋತ್ಸವಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಪ್ಯಾಲೇಸ್ತೀನಿ ಸಿನಿಮಾಗಳನ್ನು ಬೆಂಬಲಿಸಿ ಕವನ ವಾಚನ ಮಾಡಿದ ಅವರು ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿದಾಮವನ್ನು ಹೋಲಿಸಿ ಮಾತನಾಡಿ ಇಂತಹ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ರಾಜಕೀಯ ಮಾಡದಂತೆ ಪ್ರತಿರೋಧವನ್ನು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಈ ಬಾರಿಯ ಚಲನಚಿತ್ರೋತ್ಸವದ ಸಿಗ್ನೇಚರ್ ಫಿಲ್ಮ್ ಬಿಡುಗಡೆ ಮಾಡಿದರು.
ಕಾಂತರ ಸಿನಿಮಾ ಖ್ಯಾತಿಯ ನಟಿ ರುಕ್ಮಿಣಿ ವಸಂತ ಅವರು ಮಾತನಾಡಿ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ನನ್ನಂತ ಯುವನಟಿಯನ್ನು ಆಹ್ವಾನಿಸಿರುವುದು ನನಗೆ ಸಿಕ್ಕ ಸೌಭಾಗ್ಯ, ಬೆಂಗಳೂರು ಎಲ್ಲಾ ಕಲೆಗಳ ನೆಲೆ, ಸಿನಿಮಾ ಎಲ್ಲಾ ಕಲೆಯನ್ನು ಬಳಸಿಕೊಳ್ಳುವ ಮಾಧ್ಯಮ, ಎಲ್ಲಾ ರಾಷ್ಟ್ರಗಳ ಸಿನಿಮಾಗಳನ್ನು ನೋಡುವ ಮೂಲಕ ಸಿನಿಮಾಸಕ್ತರು ಕಲಿಯಲು ಇದೊಂದು ವೇದಿಕೆ. ಮುಖ್ಯವಾಗಿ ತಂತ್ರಜ್ಞರ ಹಾಗೂ ಸಿನಿಮಾ ಪ್ರಿಯರ ಸಿನಿಮಾ ವಿಷಯಗಳ ವಿನಿಮಯ ಅತ್ಯಂತ ಸಹಾಯಕವಾಗಲಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಬಿ.ಬಿ.ಕಾವೇರಿ ಅವರು ಸ್ವಾಗತ ಮಾಡಿ ಮಾತನಾಡಿ ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಿಸಲು ಕಾತರಿಸಿದ ಎಲ್ಲಾ ವೀಕ್ಷಕರು ಆನಂದಿಸುತ್ತಿದ್ದಾರೆ ಎನ್ನುವ ಭರವಸೆ ಇದೆ , ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಲಾದ ಸಿನಿಮಾಗಳ ಕುರಿತು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ. ಹಿರಿಯ ನಟಿ ಹಾಗೂ ಮಾಜಿ ಸಚಿವರಾದ ಶ್ರೀಮತಿ ಉಮಾಶ್ರೀ ಹಾಗೂ ಹಿರಿಯ ನಟಿ ಮತ್ತು ಮಾಜಿ ಸಚಿವೆ ಡಾ. ಜಯಮಾಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ವಾರ್ತಾ ಇಲಾಖೆಯ ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕ ಮಂಜುನಾಥ್ ಡೊಳ್ಳಿನ್ , ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಮುಖ್ಯಮಂತ್ರಿ ಚಂದ್ರು, ಚೇತನ್ ಅಹಿಂಸ, ಪೂಜಾ ಗಾಂಧಿ, ಶ್ರೀನಗರ ಕಿಟ್ಟಿ, ಶರತ್ ಲೋಹಿತಾಶ್ವ, ಅನು ಪ್ರಭಾಕರ್, ರಘು ಮುಖರ್ಜಿ, ರಾಕ್ಲೈನ್ ವೆಂಕಟೇಶ್, ಸುಂದರ್ ರಾಜ್ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಅವರ ನೇತೃತ್ವದಲ್ಲಿ 35 ಕಲಾವಿದರಿಂದ ‘ವಿಶ್ವ ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಚಿತ್ರೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಉದ್ಘಾಟನಾ ವೇದಿಕೆಯಲ್ಲಿ ನೆದರ್ಲ್ಯಾಂಡ್ ದೇಶದ ‘ಪೋರ್ಟ್ ಬ್ಯಾಗೇಜ್’ ಚಿತ್ರವು ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಯಿತು.
