Sunday, August 2, 2026
Sunday, August 2, 2026
Home Blog Page 2

Rotary Club Shivamogga ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ರೊಟೇರಿಯನ್ಸ್ ದಾರಿದೀಪವಾಗಿದ್ದಾರೆ- ಸಿ.ಎಸ್.ಷಡಾಕ್ಷರಿ

0

Rotary Club Shivamogga ರೋಟರಿ ಸದಸ್ಯರುಗಳಲ್ಲಿ ನಾಯಕತ್ವ, ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ಆತ್ಮವಿಶ್ವಾಸ, ವಿವಿಧ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ಇತರೆ ಸಂಘದ ಸದಸ್ಯರುಗಳಿಗೆ ಮಾದರಿ ಎಂದು ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ತಿಳಿಸಿದರು.

ಶಿವಮೊಗ್ಗ ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಇವರು ಏರ್ಪಡಿಸಿದ್ದ “ಸಂಘ ಸಂಸ್ಥೆಗಳಲ್ಲಿ ಸದಸ್ಯರ ಪಾತ್ರ” ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಜ್ಞಾನ, ಶಿಸ್ತು, ಮೌಲ್ಯಗಳು ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ದಾರಿದೀಪವಾಗಿರುವ ರೊಟೇರಿಯನ್ಸ್ ಗಳ ಕೊಡುಗೆ ಸದಾ ಸ್ಮರಣೀಯ. ಯಾವ ವ್ಯಕ್ತಿಯಲ್ಲಿ ಸಾಮಾಜಿಕ ಕಳಕಳಿಯ ಗುಣಗಳಿರುತ್ತವೆಯೋ ಅಂತವರಿಗೆ ಎಲ್ಲಾ ಸ್ಥಾನಮಾನಗಳು ಸಹಜವಾಗಿ ಹುಡುಕಿಕೊಂಡು ಬರುತ್ತವೆ ಸಾಧನೆ ಯಾರೊಬ್ಬರ ಸ್ವತ್ತಲ್ಲ. ಅದು ಸಾಧಕರ ಸ್ವತ್ತು. ಅಂತಹ ಸಾಧಕರ ಸಾಧನೆಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಅಧಿಕಾರ ಎನ್ನುವುದು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿ. ತಾವು ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದಲ್ಲಿ ಆಗಿರುವ ಅಭಿವೃದ್ಧಿಯ ಪರ್ವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ಅವರು, ಜಿಲ್ಲಾ ಕೇಂದ್ರದಿಂದ ರಾಜಧಾನಿಯವರೆಗೆ ಬೆಳೆಯುವಲ್ಲಿ ಸಿ.ಎಸ್.ಷಡಾಕ್ಷರಿಯವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸತತ ಪರಿಶ್ರಮಗಳೇ ಪ್ರಮುಖ ಕಾರಣ. ಇದರೊಂದಿಗೆ ಅವರಲಿದ್ದ ಸೇವಾ ಮನೋಭಾವ ಮತ್ತು ಹಿಡಿದ ಕೆಲಸ ಸಾಧಿಸಬೇಕೆಂಬ ಛಲ ಅವರನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿದವು ಎಂದರು.

Rotary Club Shivamogga ಈ ಸಂದರ್ಭದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್ ಮನೋಹರ, ಪದಾಧಿಕಾರಿಗಳು, ಮಾಜಿ ಅಸಿಸ್ಟೆಂಟ್ ಅಂಡ್ ಝೋನಲ್ ಲೆಫ್ಟಿನೆಂಟ್ಸ್ ಗವರ್ನರ್, ಮಾಜಿ ಅಧ್ಯಕ್ಷರಾದ ಆದಿಮೂರ್ತಿ, ಎಚ್ ಬಿ ಗಣೇಶ್, ಎಸ್, ಶ್ರೀಕಾಂತ್ ಎನ್ ಎಚ್ , ಚಂದ್ರಹಾಸ್ ಪಿ ರಾಯ್ಕರ್, ಸುಮತಿ ಕುಮಾರಸ್ವಾಮಿ, ಕಾಸಲ ವಿ ಸುರೇಂದ್ರ, ಡಾ. ಗುಡುದಪ್ಪ ಕಸಬಿ, ಸಂತೋಷಕುಮಾರ್ ಬಿ ಎನ್ , ನಿಕಟ ಪೂರ್ವ ಅಧ್ಯಕ್ಷರಾದ ಡಿ ಕಿಶೋರ್ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಬಿ ಆರ್ ಧನಂಜಯ್ , ರಘುರಾಜ್ ಎಚ್ ಕೆ, ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್ , ಕೆ ಎನ್ ರಾಜಶೇಖರ್, ಜಗದೀಶ್, ರವಿಶಂಕರ್, ಡಿ ಎಸ್ , ಸಾಧ್ವಿ ಸಿ ಕಾಂತ್, ಸಂಜೀವ್ ಎಸ್ ಎನ್, ಅಜಿತ್ ಎಚ್ ಎಸ್, ಹೇಮಂತ್ ಎಂ ಸಿ, ಡಾ. ಅರುಣ್ ಎಂ, ಸಪ್ನಾ ಬದರಿನಾಥ್ , ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಆನ್ಸ್ ಉಪಸ್ಥಿತರಿದ್ದರು.

ಖ್ಯಾತ ಪತ್ರಕರ್ತ ಮತ್ತು ಹಿರಿಯ ವ್ಯಂಗ್ಯ ಚಿತ್ರಕಾರ ಡಾ.ಹೆಚ್.ಬಿ.ಮಂಜುನಾಥ್ ಗೆ ಜೀವಮಾನ ಸಾಧನ ಸನ್ಮಾನ

0

ಮಾಧ್ಯಮರಂಗದಲ್ಲಿನ ಐದು ದಶಕಗಳಿಗೂ ಹೆಚ್ಚಿನ ಸೇವಾ ಸಾಧನೆಗಾಗಿ ವ್ಯಂಗ್ಯ ಚಿತ್ರಕಾರ, ಪತ್ರಕರ್ತ, ಪತ್ರಿಕಾ ಛಾಯಾಗ್ರಾಹಕ ಡಾ. ಎಚ್. ಬಿ. ಮಂಜುನಾಥರನ್ನು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದವರು ನಿನ್ನೆ(31-07-2026) ‘ಜೀವಮಾನ ಸಾಧನಾ ಸನ್ಮಾನ’ ನೀಡಿ ಶ್ರೀಶೈಲ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಗೌರವಿಸಿದರು.

“ನಶಾಮುಕ್ತ ಯುವ ಭಾರತ್ ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರತಿಭಾವಂತ ವಿದ್ಯಾರ್ಥಿ – ಕಲಾವಿದರಿಂದ ಅರ್ಜಿ‌ ಆಹ್ವಾನ

0

ಕೇಂದ್ರ ಸರ್ಕಾರದ ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಮೇರಾ ಯುವ ಭಾರತ್’ ಶಿವಮೊಗ್ಗ ಜಿಲ್ಲಾ ಕಚೇರಿಯ ವತಿಯಿಂದ 2026-2027ನೇ ಸಾಲಿನ ‘ನಶಾ ಮುಕ್ತ ಯುವ ಭಾರತ್’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಮತ್ತು ಕಲಾವಿದರು ತಮ್ಮ ವಿವರಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗೆ
ಜಿಲ್ಲಾ ಯುವ ಅಧಿಕಾರಿ, ಮೇರಾ ಯುವ ಭಾರತ್, ತಾಲೂಕು ಪಂಚಾಯಿತಿ ಕಚೇರಿ ಎದುರು, ಆರ್ ಟಿ ಓ ಆಫೀಸ್ ರಸ್ತೆ,
ಶಿವಮೊಗ್ಗ – 577201 ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

ಆಗುಂಬೆ ಭಾಗದಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ. ವಾಹನ ಸಂಚಾರ ಸ್ಥಗಿತ

0

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದೆ. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ರಸ್ತೆಯೊಂದು ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಕುರಿತ ವರದಿ.

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಭಾಗದಲ್ಲಿ ಕಳೆದ ಕೆಲ ಗಂಟೆಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಮಾಲತಿ ನದಿ ಉಕ್ಕಿ ಹರಿಯುತ್ತಿದ್ದು, ಆಗುಂಬೆ ಸಮೀಪದ ನಾಬಳ ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ.

ಸೇತುವೆಯ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಹೊಸಗದ್ದೆ–ಆಗುಂಬೆ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರು ಈ ಮಾರ್ಗವನ್ನು ಬಳಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ತೀರ್ಥಹಳ್ಳಿಗೆ ತೆರಳುವ ವಾಹನ ಸವಾರರು ಬದಲಿ ಮಾರ್ಗವಾಗಿ ಆಗುಂಬೆ ಮೂಲಕ ಸಂಚರಿಸಬಹುದು. ಅಲ್ಲದೆ, ಬೇಗಾರು–ಕೈಮರ–ಕಮ್ಮರಡಿ ಮಾರ್ಗದ ಮೂಲಕವೂ ತೀರ್ಥಹಳ್ಳಿಗೆ ತಲುಪಬಹುದಾಗಿದೆ.

ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಮತ್ತು ತಗ್ಗು ಪ್ರದೇಶಗಳ ಸಮೀಪ ಅನಗತ್ಯವಾಗಿ ತೆರಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಹಾಸನ ಜಿಲ್ಲೆ ಬರ ಪರಿಸ್ಥಿತಿ ಅಧ್ಯಯನ: ಬಿಜೆಪಿ ತಂಡಕ್ಕೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವ

0

ರಾಜ್ಯಾದ್ಯಂತ ಮುಂಗಾರು ಮಳೆಯ ಅಭಾವದಿಂದಾಗಿ ತೀವ್ರ ಬರ ಪರಿಸ್ಥಿತಿ ತಲೆದೂರಿದ್ದು, ನಮ್ಮ ನಾಡಿನ ಅನ್ನದಾತ ರೈತ ಬಾಂಧವರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ, ಶ್ರೀ ಅರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಜನಪ್ರತಿನಿಧಿಗಳ ವಿಶೇಷ ಅಧ್ಯಯನ ನಿಯೋಗವು ಹಾಸನ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ನಡೆಸಿತು.

ನಿಯೋಗವು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆಹೊಸಳ್ಳಿ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡ ಕಾಡನೂರು ಕೃಷಿ ಪ್ರದೇಶಗಳಿಗೆ ಭೇಟಿ ನೀಡಿತು. ಈ ಭಾಗದಲ್ಲಿ ರೈತರು ವ್ಯಾಪಕವಾಗಿ ಬೆಳೆದಿರುವ ಮೆಕ್ಕೆಜೋಳ ಬೆಳೆಗೆ ‘ಬಿಳಿಸುಳಿ’ ರೋಗ ಆವರಿಸಿದ್ದು, ಪರಿಶೀಲನೆಯ ವೇಳೆ ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತ ಬಾಂಧವರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿ ಧೈರ್ಯ ತುಂಬಲಾಯಿತು.

ಸಂಕಷ್ಟದಲ್ಲಿರುವ ರೈತರ ಪರವಾಗಿ ಶಾಸಕರ ನಿಯೋಗವು ದೃಢವಾಗಿ ನಿಲ್ಲಲಿದ್ದು, ಮುಂಬರುವ ಅಧಿವೇಶನದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ರೈತರ ಧ್ವನಿಯಾಗಿ ಹೋರಾಟ ನಡೆಸಿ ಸೂಕ್ತ ನ್ಯಾಯ ದೊರಕಿಸಿಕೊಡಲಾಗುವುದು ಎಂದು ನಿಯೋಗವು ಭರವಸೆ ನೀಡಿತು.

ಈ ಅಧ್ಯಯನ ಪ್ರವಾಸದಲ್ಲಿ ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಸಕಲೇಶಪುರ ಶಾಸಕರಾದ ಶ್ರೀ ಸಿಮೆಂಟ್ ಮಂಜುನಾಥ್, ಬೇಲೂರು ಶಾಸಕರಾದ ಶ್ರೀ ಎಚ್.ಕೆ. ಸುರೇಶ್, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದೇಶ್ ನಾಗೇಂದ್ರ, ಹಾಸನ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ನಾರಾಯಣ ಗೌಡ ಸೇರಿದಂತೆ ಸ್ಥಳೀಯ ಪ್ರಮುಖರು, ರೈತ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಿಪ್ಪನ್ ಪೇಟೆ ಬಳಿ ವ್ಯಕ್ತಿ ಶವಪತ್ತೆ: ರೈಲಿಗೆ ಸಿಲುಕಿ ಮರಣ , ಶಂಕೆ

0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬಟಾಣಿಜಡ್ಡು ಗ್ರಾಮದ ಬಳಿ ರೈಲು ಹಳಿ ಮೇಲೆ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ.

ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಸಂಚರಿಸಿದ್ದ ಮೈಸೂರು–ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಪ್ರಯಾಣಿಸುವ ವೇಳೆ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೋ ಅಥವಾ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೋ ಎಂಬ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಮೃತನ ಹೆಸರು ಹಾಗೂ ವಿಳಾಸ ಇದುವರೆಗೆ ಪತ್ತೆಯಾಗಿಲ್ಲ. ಮಾಹಿತಿ ತಿಳಿದ ತಕ್ಷಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತನ ಗುರುತು ಪತ್ತೆಯಾದ ಬಳಿಕ ಹಾಗೂ ತನಿಖೆ ಪೂರ್ಣಗೊಂಡ ನಂತರವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕವಿ ವಸುದೇವ ಭೂಪಾಳಂ ರಚಿತ ಕವನಗಳ ಗಾಯನ, ವಾಚನ ಸ್ಪರ್ಧೆ – ಡಿ.ಮಂಜುನಾಥ್

0

ನಮ್ಮ ಜಿಲ್ಲೆಯ ಹೆಮ್ಮೆಯ ಕವಿಗಳಾದ ದಿ. ವಸುದೇವ ಭೂಪಾಳಂ ಅವರ ಕವನಗಳ ಗಾಯನ ಮತ್ತು ವಾಚನ ಸ್ಪರ್ಧೆ ಏರ್ಪಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಅವರ ಕವನಗಳನ್ನು ಹಾಡುವ, ಓದುವ ಸ್ಪರ್ಧೆ ಯಿದೆ.ವಿದ್ಯಾರ್ಥಿಗಳು ಪ್ರತ್ಯೇಕ ವಿಭಾಗ, ಸಾರ್ವಜನಿಕರು ಪ್ರತ್ಯೇಕ ವಿಭಾಗ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಭಾಗದಲ್ಲಿಯೂ ಅವರ ಕವನಗಳ ವಾಚನ ಪ್ರತ್ಯೇಕ, ಹಾಡು ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು.

ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಜಿಲ್ಲಾ ವ್ಯಾಪ್ತಿಯಲ್ಲಿ ಯಾರು ಬೇಕಾದರೂ ಭಾಗವಹಿಸಲು ಅವಕಾಶವಿದೆ. ವಸುದೇವ ಭೂಪಾಳಂ ಕವನಗಳನ್ನು ಕಸಾಪ ಕಚೇರಿಯಲ್ಲಿ ಕೇಳಿ ಪಡೆಯಬಹುದು. ವಾಟ್ಸ್ ಆಪ್ ಮೂಲಕ ಪಡೆಯಬಹುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.

ಆಸಕ್ತರು ಡಿ. ಗಣೇಶ್, ಜಿಲ್ಲಾ ಕಾರ್ಯದರ್ಶಿ ಅವರ ದೂರವಾಣಿ : 9901331667, ಎಂ. ಎಂ. ಸ್ವಾಮಿ, 9448856911, ಮಹಾದೇವಿ, ಶಿವಮೊಗ್ಗ ತಾ. ಅಧ್ಯಕ್ಷರು, : 8073052370, 8970405092 ಇವರನ್ನು ಸಂಪರ್ಕ ಮಾಡಿ ಕವನಗಳನ್ನು ಪಡೆಯಬಹುದು ಎಂದು ಜಿಲ್ಲಾ ಅಧ್ಯಕ್ಷರು ಕೋರಿದ್ದಾರೆ.

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

0

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಿರುವ ಶಿವಮೊಗ್ಗ – ತುಮಕೂರು ಎನ್‌ಎಚ್-69 (ಹಳೆಯ ಎನ್‌ಎಚ್-206) ರಾಷ್ಟ್ರೀಯ ಹೆದ್ದಾರಿಯ 4 ಪಥಗಳ ವಿಸ್ತರಣೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಒಟ್ಟು ಸುಮಾರು 6,400 ಕೋಟಿ ರೂ. ಅಂದಾಜು ವೆಚ್ಚದ, 214.43 ಕಿ.ಮೀ ಉದ್ದದ ಈ ಬೃಹತ್ ಯೋಜನೆಯಲ್ಲಿ ಈಗಾಗಲೇ 197.42 ಕಿ.ಮೀ ಗೂ ಹೆಚ್ಚಿನ ಕಾಮಗಾರಿ ಮುಗಿದಿದ್ದು, ಯೋಜನೆಯ ನಾಲ್ಕು ಹಂತಗಳ ಪೈಕಿ ಮೂರು ಹಂತಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 2027ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಯೋಜನೆ ಕುರಿತಂತೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ.

ಮಲ್ಲಸಂದ್ರದಿಂದ ಕರಡಿವರೆಗಿನ (52.89 ಕಿ.ಮೀ) ಮೊದಲ ಹಂತ ಶೇ.100 ರಷ್ಟು ಪೂರ್ಣಗೊಂಡಿದ್ದರೆ, ಕರಡಿಯಿಂದ ಬಾಣಾವರ (56.70 ಕಿ.ಮೀ) ಮತ್ತು ಬಾಣಾವರದಿಂದ ಬೆಟ್ಟದಹಳ್ಳಿ (48.51 ಕಿ.ಮೀ) ಭಾಗದ ಕಾಮಗಾರಿಗಳು ಶೇ.98 ಕ್ಕಿಂತ ಹೆಚ್ಚು ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗಿನ ಕೊನೆಯ ಹಂತದ 56.33 ಕಿ.ಮೀ ಕಾಮಗಾರಿಯೂ ಈಗಾಗಲೇ ಶೇ.83.78 ರಷ್ಟು ಭೌತಿಕ ಪ್ರಗತಿ ಸಾಧಿಸಿದ್ದು, ಮಾರ್ಚ್ 2027 ರ ವೇಳೆಗೆ ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ಈ ಬೃಹತ್ ಯೋಜನೆಗೆ ಅಗತ್ಯವಿರುವ 1,271.41 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ 1,268.33 ಹೆಕ್ಟೇರ್ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಭೂಸ್ವಾಧೀನ, ಅರಣ್ಯ ಇಲಾಖೆ ತೆರವು ಹಾಗೂ ರೈಲ್ವೆ ಮೇಲ್ಸೇತುವೆಗಳ (ROB/RUB) ಅನುಮತಿ ಸೇರಿದಂತೆ ಎದುರಾಗಿದ್ದ ತಾಂತ್ರಿಕ ತೊಡಕುಗಳನ್ನು ‘ಭೂಮಿ ರಾಶಿ’ ಹಾಗೂ ‘ಪರಿವೇಶ’ ಪೋರ್ಟಲ್ ಮೂಲಕ ಬಗೆಹರಿಸಲಾಗುತ್ತಿದೆ. ಈ ಬೃಹತ್ ಹೆದ್ದಾರಿ ಯೋಜನೆ ಪೂರ್ಣಗೊಂಡ ಬಳಿಕ ಶಿವಮೊಗ್ಗ – ಬೆಂಗಳೂರು ನಡುವಿನ ಪ್ರಯಾಣಿಸುವ ಸಮಯ ಗಣನೀಯವಾಗಿ ಕಡಿಮೆಯಾಗಲಿದ್ದು, ಮಲೆನಾಡು ಭಾಗದ ವ್ಯಾಪಾರ, ಕೃಷಿ ಸಾಗಾಣಿಕೆ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗಲಿದೆ.

B.Y. Raghavendra ಈ ಬೃಹತ್ ಹೆದ್ದಾರಿ ಯೋಜನೆಯ ಪ್ರಾರಂಭದಿಂದಲೂ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ತಮ್ಮ ಸತತ ಪರಿಶ್ರಮವನ್ನು ಮುಂದುವರಿಸಿಕೊಂಡೇ ಬರುತ್ತಿರುವ ಸಂಸದ ರಾಘವೇಂದ್ರ, “ಶಿವಮೊಗ್ಗ ಜಿಲ್ಲೆಯ ನಾಗರಿಕರ ದಶಕಗಳ ಕನಸಾಗಿದ್ದ ಈ ಹೆದ್ದಾರಿ ಅಗಲೀಕರಣಕ್ಕೆ 6,400 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಿ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಸಾಕಾರಗೊಳಿಸುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರಸ್ತೆ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಬಾಕಿ ಇರುವ ಸ್ಥಳೀಯ ಭೂಸ್ವಾಧೀನ ಹಾಗೂ ಉಪಯುಕ್ತತೆಗಳ (utility shifting) ವರ್ಗಾವಣೆಗೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಮತ್ತೊಮ್ಮೆ ಒತ್ತಾಯಿಸುತ್ತೇನೆ. ಈ ಮೂಲಕ ಕಾಮಗಾರಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಬೆಂಬಲಿಸಬೇಕು,” ಎಂದು ಹೇಳಿದ್ದು, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ

ಕಾವೇರಿ ನೀರು: ವಿರೋಧ ಪಕ್ಷದವರನ್ನ ಸಭೆಗೆ ಕರೆದು ವಿಶ್ವಾಸಕ್ಕೆ ಪಡೆದು ಸಲಹೆ ಪಡೆಯುತ್ತೇವೆ : ಡಿ.ಕೆ.ಶಿವಕುಮಾರ್

0

ಕಾವೇರಿ ನೀರಿನ ವಿಚಾರವಾಗಿ ಕಾನೂನು ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.

“ಕಾವೇರಿ ನೀರಿನ ವಿಚಾರದಲ್ಲಿ ನಿತ್ಯ 3500 ಕ್ಯೂಸೆಕ್ ನೀರುನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ. ಈ ಹಿಂದೆ ಇಂತಹ ಸಂಕಷ್ಟ ಕಾಲದಲ್ಲಿ ಅನೇಕ ತೀರ್ಮಾನ ಬಂದಿವೆ. 2016, 2017, 2018, 2023ರಲ್ಲಿ ಇಂತಹ ಆದೇಶ ಬಂದಿವೆ. ಕಳೆದ 3 ವರ್ಷಗಳಲ್ಲಿ ಮಳೆ ಬಹಳ ಸಂತುಷ್ಟಿಯಾಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲೇ ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೆವು. ಕಳೆದ ವರ್ಷ ಉತ್ತಮ ಮಳೆ ಬೆಳೆ ಆಗಿತ್ತು. ಕಳೆದ ವರ್ಷ 177 ಟಿಎಂಸಿ ಬದಲಾಗಿ 400ಕ್ಕೂ ಹೆಚ್ಚು ಟಿಎಂಸಿ ನೀರು ಹರಿಸಲಾಗಿತ್ತು. ಅನೇಕ ಪ್ರಮಾಣದ ನೀರು ಸಮುದ್ರವನ್ನು ಸೇರಿದೆ” ಎಂದು ತಿಳಿಸಿದರು.

“ಬಿಳಿಗುಂಡ್ಲುವಿಗೆ 3,500 ಕ್ಯೂಸೆಕ್ ನೀರನ್ನು ಹರಿಸಲು ನೀಡಿರುವ ಆದೇಶದ ವಿರುದ್ಧ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ನಮ್ಮ ವಿರೋಧ ಪಕ್ಷಗಳ ಸ್ನೇಹಿತರು, ಅಧಿಕಾರಿಗಳು ಹೋಗಿಲ್ಲ ಎಂದು ಆರೋಪ ಮಾಡಿದರು. ನಾನು ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಆದರೆ ರಾಜ್ಯದ ಜನರಿಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿಯಾಗಿದೆ. ನಿನ್ನೆ ಸಿಡಬ್ಲ್ಯೂಎಂಎ ಮುಂದೆ ಮೇಲ್ಮನವಿ ಸಲ್ಲಿಸಿದ್ದೆವು. ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದ ಸಲಹೆಗಾರರನ್ನೇ ನಾವು ಮುಂದುವರಿಸಿದ್ದೇವೆ. ಅವರು ಸಭೆಯಲ್ಲಿ ಭಾಗವಹಿಸಿದ್ದರು” ಎಂದರು.

“ನೀರು ಹರಿಸುವ ನೀರಿನ ಪ್ರಮಾಣ ಕಡಿಮೆ ಮಾಡಿ, ನೀರು ಬಿಡುವ ತೀರ್ಮಾನವನ್ನು ಮುಂದಕ್ಕೆ ಹಾಕಿ, ನಮಗೆ ಕಾಲಾವಕಾಶ ನೀಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ ತಮಿಳುನಾಡಿನವರು ನಿಮಗೆ ಹೆಚ್ಚಿನ ನೀರು ಬರುತ್ತಿದೆ. ನೀವು ಹೆಚ್ಚಿನ ನೀರು ಬಿಡಬೇಕು ಎಂದು ವಾದ ಮಂಡಿಸಿದರು. ನಮ್ಮ ಅಧಿಕಾರಿಗಳು ನಮಗೆ ಸಮಾಧಾನ ತರುವಂತೆ ಸಿಡಬ್ಲ್ಯೂಎಂಎ ಮುಂದೆ ವಾದ ಮಂಡಿಸಿದರು. ನಮ್ಮ ಅಡ್ವೋಕೇಟ್ ಜನರಲ್, ಎಸಿಎಸ್ ಅವರು ವಾದ ಮಂಡಿಸಿದ್ದಾರೆ. ಆದರೆ ಪ್ರಾಧಿಕಾರ, ನಿಮಗೆ ಒಳಹರಿವು ಇದ್ದು, ನಿಮಗೆ ಬಿಡಲು ಹೇಳಿರುವ ನೀರು ಕಡಿಮೆ ಪ್ರಮಾಣದ್ದಾಗಿದೆ ಎಂದು ಹೇಳಿದ್ದಾರೆ” ಎಂದರು.

ರಾಜ್ಯದಲ್ಲಿ ಒಳಹರಿವು ಚೇತರಿಕೆ, ಸಮಾಧಾನಕರ ವಿಚಾರ

“ಕಾವೇರಿ ಪ್ರಾಧಿಕಾರದವರಿಗೆ, ತಮಿಳುನಾಡಿನವರಿಗೆ, ಮಾಧ್ಯಮವರರು ಸೇರಿದಂತೆ ಎಲ್ಲರಿಗೂ ಪ್ರತಿ ಅಣೆಕಟ್ಟಿನ ಒಳಹರಿವಿನ ಮಾಹಿತಿ ಇದ್ದು, ಹಾರಂಗಿ ಜಲಾಶಯ 95%, ಕಬಿನಿ 83%, ಕೆಆರ್ಎಸ್ 36%, ಹೇಮಾವತಿಯಲ್ಲಿ 67% ನೀರು ಶೇಖರಣೆಯಾಗಿದೆ. ಈ ಮಾಹಿತಿಯನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಪ್ರತಿನಿತ್ಯ 3,500 ಕ್ಯೂಸೆಕ್ ನಂತೆ 15 ದಿನಕ್ಕೆ 4.5 ಟಿಎಂಸಿ ನೀರು ಹರಿಸಲು ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಳಹರಿವು ಚೇತರಿಕೆ ಕಂಡಿರುವುದು ಸಮಾಧಾನಕರ ವಿಚಾರ. ನಮ್ಮ ಅಣೆಕಟ್ಟುಗಳ ಒಳಹರಿವು 25 ಸಾವಿರ ಕ್ಯೂಸೆಕ್ ನಷ್ಟಿದ್ದು, ಅದರಲ್ಲಿ 3,500 ಕ್ಯೂಸೆಕ್ ನೀರು ಬಿಡಲು ಸೂಚಿಸಿದ್ದಾರೆ. ಈ ಮಾಹಿತಿಗಳನ್ನು ಸಮಿತಿ ಹಾಗೂ ಪ್ರಾಧಿಕಾರ ಎರಡೂ ತನ್ನ ಆದೇಶದಲ್ಲಿ ಸೂಚಿಸಿವೆ. ಆದರೂ ನಮ್ಮ ರಾಜ್ಯದ ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ. ನಾವು ನಮ್ಮ ರಾಜ್ಯದ ರೈತರ ರಕ್ಷಣೆ ಮಾಡುತ್ತೇವೆ. ನಾವು ಶಾಸಕರನ್ನು ಕರೆದು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸುವ ರಕ್ಷಣೆ ನೀಡಿದ್ದೇವೆ. ಬಂಗಾರಪ್ಪನವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ನಾವು ರಾಜ್ಯದ ಹಿತಕ್ಕೆ ಅಗತ್ಯ ರಕ್ಷಣೆ ನೀಡಲು ಬದ್ಧತೆ ತೋರಿದ್ದೇವೆ. ಈಗಲೂ ನಾವು ನಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದೇವೆ” ಎಂದರು.

ಕೇಂದ್ರ ಸಚಿವರು ಹಾಗೂ ಸಂಸದರಿಂದ ಉತ್ತಮ ಸಹಕಾರ:

“ವಿರೋಧ ಪಕ್ಷದ ನಾಯಕರು ಮಾಧ್ಯಮಗಳ ಮೂಲಕ ಅನೇಕ ಮಾರ್ಗದರ್ಶನ ನೀಡಿದ್ದಾರೆ. ನಾವು ಮೇಲ್ಮನವಿ ಸಲ್ಲಿಸುವ ಮುನ್ನ ಕೇಂದ್ರ ಸಂಸದರು ಹಾಗೂ ಕೇಂದ್ರ ಸಚಿವರ ಸರ್ವಪಕ್ಷ ಸಭೆ ಮಾಡಿದ್ದೆ. ಎಲ್ಲಾ ಪಕ್ಷದ ಸಂಸದರು ಬಹಳ ಗೌರವದಿಂದ ರಾಜ್ಯದ ನೆಲ, ಜಲ ವಿಚಾರದಲ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದ್ದಾರೆ. 3 ಕೇಂದ್ರ ಸಚಿವರು ಸೇರಿದಂತೆ 36 ಸಂಸದರು ಭಾಗವಹಿಸಿದ್ದರು. ನಾನು ಪ್ರಹ್ಲಾದ್ ಜೋಷಿ ಹಾಗೂ ಸಂಸದರ ಜತೆ ಚರ್ಚೆ ಮಾಡಿದ್ದೆ. ನಮ್ಮ ಮೇಲ್ಮನವಿ ಅರ್ಜಿಯನ್ನು ನಾವು ಜೋಷಿ ಅವರು, ಸೋಮಣ್ಣ ಹಾಗೂ ಶೋಭ ಕರಂದ್ಲಾಜೆ ಅವರಿಗೆ ಕಳುಹಿಸಿಕೊಟ್ಟಿದ್ದೆ. ಅವರು ಕೂಡ ತಮ್ಮ ಪ್ರಯತ್ನ ಮಾಡಿದ್ದಾರೆ. ಅವರು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕಿದ್ದಾರೆ” ಎಂದರು.

“ತಮಿಳುನಾಡಿನವರು 9.94 ಟಿಎಂಸಿ ನೀರನ್ನು ಹರಿಸಬೇಕು ಎಂದು ವಾದ ಮಂಡಿಸಿದ್ದರು. ಆದರೆ ಸಮಿತಿಯು ಅದರಲ್ಲಿ ಅರ್ಧದಷ್ಟು ಪ್ರಮಾಣದ ನೀರು ಹರಿವಿಗೆ ಸೂಚಿಸಿದ್ದಾರೆ. ಕಳೆದ 2-3 ದಿನಗಳಿಂದ ನಮ್ಮಲ್ಲಿ ಒಳಹರಿವು ಹೆಚ್ಚಾಗಿದೆ. ಈ ವಿಚಾರವಾಗಿ ಚರ್ಚೆ ಮಾಡಲು ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾವೇರಿ ಭಾಗದ ಎಲ್ಲಾ ಪಕ್ಷಗಳ ಶಾಸಕರು, ಸಂಸತ್ ಸದಸ್ಯರಿಗೆ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಕಾನೂನು ತಂಡದ ಜೊತೆಗೆ ನಾನು, ಪರಮೇಶ್ವರ್, ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಸರ್ವಪಕ್ಷ ಸಭೆಯಲ್ಲಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಮಂಡಿಸಿ, ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯ ಸಂಸದರು, ಕೇಂದ್ರ ಸಚಿವರು ನಮಗೆ ಸಹಕಾರ ನೀಡಿದ್ದಾರೆ. ಇಲ್ಲಿ ಕೆಲವರು ವಿರೋಧ ಮಾಡಿರಬಹುದು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರಾಜ್ಯದ ಹಿತವನ್ನು ಅವರು ಕಾಪಾಡುತ್ತಾರೆ ಎಂದು ಭಾವಿಸಿದ್ದೇನೆ”

100 ವರ್ಷಗಳಲ್ಲಿ ಈ ವರ್ಷವೇ ತಮಿಳುನಾಡಿಗೆ ಅತಿ ಕಡಿಮೆ ನೀರು (ಜುಲೈ ಅಂತ್ಯದ ವೇಳೆಗೆ) ಬಿಟ್ಟಿದ್ದೇವೆ

“ನಾನು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು, ರಾಜ್ಯದ ಹಿತಕ್ಕೆ ಅವರ ಸಲಹೆ ಪಡೆಯುತ್ತೇವೆ. ಸರ್ವಪಕ್ಷ ಸಭೆಯಲ್ಲಿ ಅವರು ಬರಲಿ, ಅವರ ಸಲಹೆ ನೀಡಲಿ. ರಾಜ್ಯದ ಹಿತಕ್ಕೆ ನಾವು ಬದ್ಧರಾಗೋಣ. ಜುಲೈ ಅಂತ್ಯದವರೆಗೆ ನಾವು ತಮಿಳುನಾಡಿಗೆ 0.6 ಟಿಎಂಸಿ ನೀರನ್ನು ಮಾತ್ರ ತಮಿಳುನಾಡಿಗೆ ಹರಿಸಿದ್ದು, ಕಳೆದ 100 ವರ್ಷಗಳಲ್ಲಿ ತಮಿಳುನಾಡಿಗೆ ಹರಿಸಲಾಗಿರುವ ಅತ್ಯಂತ ಕಡಿಮೆ ಪ್ರಮಾಣದ ನೀರಾಗಿದೆ. ಇದುವರೆಗೂ ಹರಿದಿರುವ ನೀರು ಅಣೆಕಟ್ಟುಗಳಿಂದ ಬಿಟ್ಟಿರುವ ನೀರಲ್ಲ, ಬೆಂಗಳೂರು ಸುತ್ತಮುತ್ತ ಬಿದ್ದ ಮಳೆ ನೀರು ಹರಿದು ಹೋಗಿರುವ ನೀರಿನ ಪ್ರಮಾಣ. ಇಷ್ಟಾದರೂ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಆಗಸ್ಟ್ 13ರಂದು ಬಂದ್ ಗೆ ಕರೆ ನೀಡುವ ಬಗ್ಗೆ ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾವೇ ನಿಮ್ಮ ಪರವಾಗಿದ್ದು, ಬಂದ್ ಮಾಡುವ ಅಗತ್ಯವಿಲ್ಲ. ಇದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ” ಎಂದು ತಿಳಿಸಿದರು.

ರಾಜ್ಯದ ಹಿತ ಕಾಯಲು ನಾವು ಬದ್ಧ, ಬಂದ್ ಮಾಡುವುದರಿಂದ ಪರಿಹಾರ ಸಿಗಲ್ಲ

“ಬಂದ್, ಪ್ರತಿಭಟನೆಗಳಿಂದ ಜನರಿಗೆ ತೊಂದರೆ ಆಗಬಾರದು ಎಂದು ನ್ಯಾಯಾಲಯದ ತೀರ್ಮಾನಗಳಿದ್ದು, ಈ ಬಂದ್ ಮಾಡಬಾರದ ಎಂದು ಸರ್ಕಾರದ ಪರವಾಗಿ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ. ರಾಜ್ಯದ ಹಿತದ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕರು ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ. ನಿಮ್ಮ ಕಾಲದಲ್ಲಿ ನೀವು ಅನೇಕ ತೀರ್ಮಾನ ಮಾಡಿದ್ದೀರಿ. ನಾಗೇಗೌಡರು, ಜೆ ಹೆಚ್ ಪಟೇಲರು ನೀರಾವರಿ ಮಂತ್ರಿಯಾಗಿದ್ದಾಗ, ದೇವೇಗೌಡರು ಪ್ರಧಾನಿಯಾಗಿದ್ದಾಗ ಅನೇಕ ತೀರ್ಮಾನ ಮಾಡಲಾಗಿತ್ತು, ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ, ಅದರ ಅಗತ್ಯವೂ ಇಲ್ಲ” ಎಂದು ತಿಳಿಸಿದರು.

ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಅವರ ಜೊತೆ ಸಭೆ

“ಆಗಸ್ಟ್ 3ರಂದು ತಮಿಳನಾಡು ಸಿಎಂ ಬರುವ ತೀರ್ಮಾನವಾಗಿತ್ತು. ಈ ಹಿಂದೆ ನಾನೇ ತಮಿಳುನಾಡಿಗೆ ಹೋಗಲು ಮನವಿ ಮಾಡಿದ್ದೆ ಆದರೆ ಡಿಎಂಕೆ ಸರ್ಕಾರ ಅನುಮತಿ ನೀಡಿರಲಿಲ್ಲ, ನಂತರ ಚುನಾವಣೆ ಬಂದು ಸರ್ಕಾರ ಬದಲಾಗಿದೆ. ಈಗ ವಿಜಯ್ ಅವರು ತಮ್ಮ ತಂಡದೊಂದಿಗೆ ಕರ್ನಾಟಕ್ಕೆ ಬರುವುದಾಗಿ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವ ಬೆಳವಣಿಗೆ ನಮಗೆ ಸಮಾಧಾನ ತರುತ್ತಿಲ್ಲ. ಈ ವಿಚಾರವನ್ನು ಸೌಹಾರ್ದತೆ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಸಮಸ್ಯೆ ಬಗೆಹರಿದರೆ ಅವರಿಗೂ ಹಿತ, ನಮಗೂ ಹಿತ. ಈಗ ಪರಿಸ್ಥಿತಿ ಉತ್ತಮವಾಗಿಲ್ಲ, ಹೀಗಾಗಿ ನಮ್ಮ ಸಭೆಯನ್ನು ಕೆಲ ದಿನಗಳ ಕಾಲ ಮುಂದೂಡೋಣ ಎಂದು ನಾನು ತಮಿಳುನಾಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಚರ್ಚೆ ಮಾಡುತ್ತೇನೆ. ಹೊರಗಿನಿಂದ ಅತಿಥಿಗಳು ಬರುವಾಗ ನಾವು ಸೌಹಾರ್ದತೆ ಹಾಗೂ ಗೌರವಪೂರ್ವಕವಾಗಿ ಆತಿಥ್ಯವಹಿಸಬೇಕು. ಹೀಗಾಗಿ ಆಗಸ್ಟ್ 3ರ ಬದಲು ಬೇರೆ ದಿನಾಂಕ ನಿಗದಿ ಮಾಡಿ ಮನವಿ ಮಾಡುತ್ತೇನೆ. ಅವರು ಅವರ ರಾಜ್ಯದ ಹಿತ ಕಾಪಾಡುವ ಉದ್ದೇಶವಿದ್ದರೆ, ನಮಗೆ ನಮ್ಮ ರಾಜ್ಯದ ಹಿತ ಕಾಪಾಡುವ ಉದ್ದೇಶವಿದೆ. ಸೌಹಾರ್ದತೆಯಿಂದ ಇದನ್ನು ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಚರ್ಚೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ನಾನು ಅಧಿಕಾರ ವಹಿಸಿಕೊಂಡ ಬಳಿಕ ಕೇಂದ್ರ ಜಲಶಕ್ತಿ ಸಚಿವರಾದ ಸಿ ಆರ್ ಪಾಟೀಲ್ ಅವರ ನೇತೃತ್ವದಲ್ಲಿ ನಾನು, ತೆಲಂಗಾಣ ಸಿಎಂ ಹಾಗೂ ಆಂಧ್ರಪ್ರದೇಶ ಸಿಎಂ ಒಟ್ಟಿಗೆ ಸಭೆ ಮಾಡಿ ಒಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಆಂಧ್ರ ಸಿಎಂ ದೇಶದ ಹಿರಿಯ ರಾಜಕಾರಣಿ, ಅವರಿಗೆ ಸಾಕಷ್ಟು ಅನುಭವವಿದೆ. ಅವರೊಂದಿಗೆ ತುಂಗಭದ್ರಾ ಅಣೆಕಟ್ಟಿನ ಹೂಳು ತುಂಬಿರುವುದರಿಂದ ಕರ್ನಾಟಕಕ್ಕೆ ಆಗುತ್ತಿರುವ 33 ಟಿಎಂಸಿ ನೀರಿನ ನಷ್ಟವನ್ನು ತಡೆಯಲು ಸಮತೋಲಿತ ಅಣೆಕಟ್ಟು ನಿರ್ಮಾಣ ಸೇರಿದಂತೆ ಅನೇಕ ಪರ್ಯಾಯ ಆಯ್ಕೆ, ನದಿ ಜೋಡಣೆ ವಿಚಾರದಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿದೆ” ಎಂದರು.

“ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಕೈಗೆತ್ತಕೊಂಡು 90-10 ಅನುಪಾತದಲ್ಲಿ ಕೇಂದ್ರ ಸರ್ಕಾರ ಹಣವನ್ನು ಭರಿಸಲಿದೆ. ಹೀಗಾಗಿ ಸಿ ಆರ್ ಪಾಟೀಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ರೀತಿ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಆಗಮಿಸಿ ಚರ್ಚೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ಬಿಜೆಪಿ ಸ್ನೇಹಿತರು, ರೈತ ಸಂಘಟನೆಗಳು ಹೋರಾಟ ಮಾಡುತ್ತಿವೆ. ಅವರು ಹೋರಾಟ ಮಾಡುವುದನ್ನು ತಪ್ಪು ಎಂದು ಹೇಳುವುದಿಲ್ಲ. ನಮ್ಮ ಸರ್ಕಾರ ಪ್ರತಿ ಸಂದರ್ಭದಲ್ಲಿ ರಾಜ್ಯದ ಹಿತ ಕಾಪಾಡಿಕೊಂಡು ಬಂದಿದೆ. ಯಾವ ಸಂದರ್ಭದಲ್ಲೂ ರೈತರನ್ನು ಕೈ ಬಿಟ್ಟಿಲ್ಲ. ಇಂದು ಬೆಳಗ್ಗೆ ಬಿಜೆಪಿ ನಾಯಕರು ಹೋರಾಟ ಮಾಡಿದ್ದಾರೆ. ಅವರ ಪಕ್ಷದ ಕೇಂದ್ರದ ಮಂತ್ರಿಗಳು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಸರ್ವಪಕ್ಷ ಸಭೆ ಕರೆಯಲಾಗಿದೆ. ಎಲ್ಲರ ಜೊತೆ ಚರ್ಚೆ ಮಾಡದೇ ನಾನು ಅಂತಿಮ ತೀರ್ಮಾನ ಮಾಡುವುದಿಲ್ಲ. ಹೀಗಿರುವಾಗ ಬಿಜೆಪಿ ನಾಯಕರು ಇಂದು ಹೋರಾಟ ಮಾಡುವ ಅಗತ್ಯವಿರಲಿಲ್ಲ”

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಪ್ರಯೋಜನ

“ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಪ್ರಯೋಜನವಾಗಲಿದೆ. ನಾವು ಕೇವಲ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಬಳಕೆಯಾಗಲಿದೆ. ಈ 66 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ಇಂತಹ ಕಠಿಣ ಸಂದರ್ಭದಲ್ಲಿ ನೀರು ಹರಿಸುವ ಆದೇಶ ಬಂದಾಗ ಅದನ್ನು ಪಾಲನೆ ಮಾಡಲು ನೆರವಾಗುತ್ತದೆ. ಇತ್ತೀಚೆಗೆ ಬಂದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕು ಎಂದು ನಮಗೂ ನಿರ್ದೇಶನ ನೀಡಿದೆ. ಅದನ್ನು ಪಾಲಿಸುವಲ್ಲಿ ನಮ್ಮ ಅಭ್ಯಂಥರವಿಲ್ಲ. ನಿಮ್ಮ ಜಾಗದಲ್ಲಿ ನೀವು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. ಈ ಮಧ್ಯೆ ತಮಿಳುನಾಡು ವಿಧಾನಸಭೆಯಲ್ಲಿ ಅವರು ನಿರ್ಣಯ ಮಂಡಿಸಿದ್ದಾರೆ. ಅದು ಅವರ ರಾಜಕಾರಣ, ಅದನ್ನು ನಾನು ಪ್ರಶ್ನೆ ಮಾಡುವುದಿಲ್ಲ. ನಾವು ನಮ್ಮ ರಾಜ್ಯದ ಹಿತಕ್ಕೆ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುತ್ತೇವೆ. ಮೇಕೆದಾಟು ಯೋಜನೆ ಡಿಪಿಆರ್ ತಿರಸ್ಕಾರಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅದು ತಿರಸ್ಕಾರವಲ್ಲ, ಅವರು ಕೆಲವು ವಿಚಾರವಾಗಿ ಸ್ಪಷ್ಟನೆ ಕೇಳಿದ್ದು, ಅವುಗಳನ್ನು ಸಧ್ಯದಲ್ಲೇ ನೀಡುತ್ತೇವೆ” ಎಂದು ವಿವರಿಸಿದರು.

ಪ್ರಶ್ನೋತ್ತರ:

ತಮಿಳುನಾಡಿಗೆ ಕೂಡಲೇ ನೀರು ಹರಿಸುತ್ತೀರಾ ಎಂದು ಕೇಳಿದಾಗ, “ನಮ್ಮ ಮೇಲ್ಮನವಿ ತಿರಸ್ಕಾರಗೊಂಡಿದೆ. ಮುಂದೆ ಏನು ಮಾಡಬೇಕು ಎಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಸಭೆ ಬಳಿಕ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೆ ಎಂದು ಕೇಳಿದಾಗ, “ಈಗ ನಾವು ಅದರ ಬಗ್ಗೆ ಯಾಕೆ ಯೋಚನೆ ಮಾಡಬೇಕು” ಎಂದು ತಿಳಿಸಿದರು.

ನಮ್ಮ ರಾಜ್ಯದಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗುವುದೇ ಎಂದು ಕೇಳಿದಾಗ, “ದೆಹಲಿ ಕಾನೂನು ತಜ್ಞರ ಸಲಹೆ, ಸರ್ವಪಕ್ಷ ಸಭೆಯಲ್ಲಿ ಮಾಜಿ ಸಿಎಂಗಳು ಹಾಗೂ ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ ಯಾವುದೇ ತೀರ್ಮಾನ ಮಾಡುವುದಿಲ್ಲ” ಎಂದು ತಿಳಿಸಿದರು.

ಎರಡು ರಾಜ್ಯಗಳ ಸಿಎಂಗಳ ಭೇಟಿ ಪ್ರಸ್ತಾಪ ನಮ್ಮ ರಾಜ್ಯದಿಂದ ಹೋಗಿದ್ದಾ ಅಥವಾ ತಮಿಳುನಾಡಿನಿಂದ ಬಂದಿದ್ದಾ ಎಂದು ಕೇಳಿದಾಗ, “ತಮಿಳುನಾಡಿನ ಮುಖ್ಯಮಂತ್ರಿಗಳ ಕಚೇರಿಯಿಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬಂದಿದ್ದು, ಅವರ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಭೇಟಿ ನೀಡಿ ಅನೇಕ ವಿಚಾರವಾಗಿ ಚರ್ಚೆ ಮಾಡಲು ಬಯಸಿದ್ದಾರೆ ಎಂದು ತಿಳಿಸಲಾಗಿತ್ತು. ನಾವು ಅದಕ್ಕೆ ಸಮ್ಮತಿ ನೀಡಿ ಆಗಸ್ಟ್ 3ರಂದು ಸಭೆಗೆ ತೀರ್ಮಾನ ಮಾಡಿದ್ದೆವು. ಆದರೆ ಈಗ ಸಭೆಗೆ ವಾತಾವರಣ ಸರಿಯಾಗಿಲ್ಲ ಎಂದು ಮುಂದೂಡಲು ಚಿಂತಿಸುತ್ತಿದ್ದೇವೆ. ಎರಡೂ ರಾಜ್ಯದಲ್ಲಿರುವ ರೈತರು ನಮ್ಮ ದೇಶದವರೇ, ನಾವು ಒಟ್ಟಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು” ಎಂದು ತಿಳಿಸಿದರು.

ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲವೇ ಎಂದು ಕೇಳಿದಾಗ, “ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇದಕ್ಕೆ 40 ಟಿಎಂಸಿ ನೀರಿನ ಅಗತ್ಯವಿದ್ದು, 36 ಟಿಎಂಸಿ ಕುಡಿಯಲು ಹಾಗೂ 4 ಟಿಎಂಸಿ ನೀರು ಆವಿಯಾಗುವ ಸಾಧ್ಯತೆ ಇರುತ್ತದೆ. ಉಳಿದಂತ ಹೆಚ್ಚುವರಿ ನೀರನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ನೀರುಹಂಚಿಕೆ ಸೂತ್ರದ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು” ಎಂದು ತಿಳಿಸಿದರು.

ಕಾನೂನು ತಜ್ಞರು ಎಲ್ಲಿ ಎಡವಿದ್ದಾರೆ ಎಂದು ಕೇಳಿದಾಗ, “ನಮ್ಮ ಕಾನೂನು ತಜ್ಞರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ” ಎಂದು ತಿಳಿಸಿದರು.

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

0

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಬಡಾವಣೆಗಳಲ್ಲೂ ನಾಗರಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಸುಸಜ್ಜಿತ ನೈರ್ಮಲ್ಯ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ,” ಎಂದು ಶಿವಮೊಗ್ಗ ನಗರ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.

ಇಂದು ಶಿವಮೊಗ್ಗ ನಗರದ ಸೂರ್ಯ ಬಡಾವಣೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ನೂತನ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ (ಯುಜಿಡಿ) ಕಾಮಗಾರಿಗಳಿಗೆ ಮಾನ್ಯ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಡಾವಣೆಯ ನಿವಾಸಿಗಳಿಗೆ ಎದುರಾಗುತ್ತಿದ್ದ ಸಂಚಾರ ಮತ್ತು ಒಳಚರಂಡಿ ಸಮಸ್ಯೆಗೆ ಈ ಯೋಜನೆಯ ಮೂಲಕ ಶಾಶ್ವತ ಪರಿಹಾರ ಸಿಗಲಿದೆ. ಕಾಮಗಾರಿಯ ಸ್ಥಳದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು ಮತ್ತು ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

S. N. Channabasappa ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀಮತಿ ಆಶಾ ಚಂದ್ರಪ್ಪ, ಶ್ರೀ ಚಂದ್ರಪ್ಪ, ವಾರ್ಡ್ ನ ಅಧ್ಯಕ್ಷರಾದ ಶ್ರೀ ರಾಜು, ಬಡಾವಣೆಯ ನಿವಾಸಿಗಳು, ಸ್ಥಳೀಯ ಪ್ರಮುಖರು, ಮುಖಂಡರು ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತ ಬಾಂಧವರು ಉಪಸ್ಥಿತರಿದ್ದರು.