ಶಿವಮೊಗ್ಗ ವಿದ್ಯಾನಗರದ ದುರ್ಗಮ್ಮ ಜಾತ್ರೆ ನಿಮಿತ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ನಿನ್ನೆ ಸಂಜೆ ಪಂಜಾಬಿನ ವಿಶ್ವಜಿತ್ ಮತ್ತು ವಿದ್ಯಾನಗರದ ಕುಸ್ತಿ ಪಟು ವರುಣ್ ಅವರ ನಡುವೆ ಪಂದ್ಯ ನಡೆಯಿತು. ರೋಚಕ ಹೋರಾಟದಲ್ಲಿ ಶಿವಮೊಗ್ಗ ವಿದ್ಯಾನಗರದ ವರಣ್ ವಿಜೇತರಾಗಿ ಬೆಳ್ಳಿ ಗದೆಯನ್ನು ಗೆದ್ದರು. ಸಮಿತಿಯ ಪ್ರಮುಖರಿದ್ದರು.
ಕೆ ಎಫ್ ಡಿ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ. ಯಾವುದೇ ಜ್ವರಲಕ್ಷಣಕ್ಕೆ ಶೀಘ್ರ ಚಿಕಿತ್ಸೆ ನೀಡಿ- ಪ್ರಭುಲಿಂಗ ಕವಳಿಕಟ್ಟಿ
ಕೆಎಫ್ಡಿ ಕುರಿತು ಸ್ಥಳೀಯ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಯಾವುದೇ ರೀತಿಯ ಜ್ವರಕ್ಕೆ ಶೀಘ್ರ ಚಿಕಿತ್ಸೆ ನೀಡುವುದು ಸೇರಿದಂತೆ ಪರಿಣಾಮಕಾರಿಯಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಎಫ್ಡಿ ರೋಗವನ್ನು ಹರಡುವ ಉಣ್ಣೆಗಳು ನವೆಂಬರ್ ಯಿಂದ ಮೇ ವರೆಗೆ ಸಕ್ರಿಯವಾಗಿರುತ್ತವೆ. ಹಾಗೂ ಜನವರಿಯಿಂದ ಮಾರ್ಚ್ವರೆಗೆ ರೋಗ ಹರಡುವ ಅವಧಿಯಾಗಿರುವ ಕಾರಣ ಸಾಗರ, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಜನರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ತೋಟಕ್ಕೆ, ಕಾಡಿಗೆ ಹೋಗುವ ಜನರು ಅತ್ಯಂತ ಜಾಗರೂಕತೆಯಿಂದ ಇರಬೇಕು. ಡೇಪಾ ಎಣ್ಣೆಯನ್ನು ಲೇಪನ ಮಾಡಿಕೊಳ್ಳಬೇಕು ಹಾಗೂ ಜಾನುವಾರುಗಳಿಗೆ ಡೇಪಾ ತೈಲವನ್ನು ಲೇಪನ ಮಾಡಬೇಕೆಂದು ತಿಳಿಸಿದರು.
ಮಲೆನಾಡಿನ ಭಾಗದಲ್ಲಿ, ವಿಶೇಷವಾಗಿ ಮಂಗ ಸತ್ತಿರುವ ಹಾಟ್ಸ್ಟಾಟ್ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಯಾವುದೇ ಜ್ವರ ಪ್ರಕರಣಗಳನ್ನು ಶೀಘ್ರವಾಗಿ ಪರಿಗಣಿಸಿ ಚಿಕಿತ್ಸೆ ನೀಡಬೇಕು. ಜ್ವರ ಸರ್ವೇ ಮಾಡಬೇಕು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಪ್ರತ್ಯೇಕ ಬೆಡ್ಗಳನ್ನು ಮೀಸಲಿಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಳಿಗೆ ಸೂಚನೆ ನೀಡಿದರು.
ಜನರು ಎಚ್ಚರಿಕೆಯಿಂದ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಆರೋಗ್ಯ ಇಲಾಖೆ, ಪಶುಪಾಲನೆ ಮತ್ತು ಪಶುವೈದ್ಯಕೀಯ, ಅರಣ್ಯ, ಆರ್ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಕೆಎಫ್ಡಿ ಹರಡದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಈ ಭಾಗಗಳಲ್ಲಿ ಮಾಹಿತಿ, ಶಿಕ್ಷಣ, ಸಂವಹನ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.
ಜಿ.ಪಂ ಸಿಇಓ ಮಾತನಾಡಿ, ಜಾನುವಾರುಗಳಿಂದ ಕೆಎಫ್ಡಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಾನುವಾರುಗಳಿಗೆ ಲಸಿಕೆ ನೀಡಬೇಕು. ದಾಸ್ತಾನು ಇಲ್ಲದಿದ್ದರೆ ಈ ತಕ್ಷಣ ಲಸಿಕೆ ತರಿಸಿಕೊಳ್ಳಬೇಕು. ಜಾನುವಾರುಗಳಿಗೆ ಎರಡು ಡೋಸ್ ಲಸಿಕೆಗಳನ್ನು ನೀಡಬೇಕು. ಡೇಪಾ ಎಣ್ಣೆಯನ್ನು ಜಾನುವಾರುಗಳಿಗೆ ಲೇಪನ ಮಾಡಲು ನೀಡಬೇಕು ಮತ್ತು ತೋಟಕ್ಕೆ, ಹೊರಗೆ ಕೆಲಸಕ್ಕೆ ಹಾಗೂ ಕಾಡಿಗೆ ಹೋಗುವ ಜನರಿಗೆ ನೀಡಬೇಕು ಎಂದು ಸೂಚನೆ ನೀಡಿದರು.
ಡಿಎಸ್ಓ ಡಾ.ನಾಗರಾಜ ನಾಯ್ಕ್ ಮಾತನಾಡಿ, ಕೆಎಫ್ಡಿ ಪ್ರಕರಣ ಪತ್ತೆಗಾಗಿ ಜಿಲ್ಲೆಯಲ್ಲಿ ಇಲ್ಲಿಯರೆಗೆ 5202 ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದ್ದು, 59 ಪಾಸಿಟಿವ್ ಬಂದಿದೆ. 01 ಮರಣ ಸಂಭವಿಸಿದೆ. 457 ಟಿಕ್ ಸಂಗ್ರಹಿಸಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಬಂದಿರುವುದಿಲ್ಲ. 114 ಮಂಗಗಳ ಸಾವು ಸಂಭವಿಸಿದ್ದು ಮಂಗ ಅಟಾಪ್ಸಿಯಲ್ಲಿ 31 ಪಾಸಿಟಿವ್ ಬಂದಿದ್ದು, ಮಂಗಗಳ ಸಾವು ಸಂಭAವಿಸಿದ ಸುತ್ತಮುತ್ತಲಿನ ಪ್ರದೇಶವನ್ನು ಹಾಟ್ಸ್ಪಾಟ್ ಎಂದು ಗುರುತಿಸಿ, ಇಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹೈರಿಸ್ಕ್ ಪ್ರದೇಶಗಳಲ್ಲಿ ಟಿಕ್ ಕಲೆಕ್ಷನ್ ಮಾಡಲಾಗುತ್ತಿದೆ ಎಂದರು.
ನಾಯಿ ಕಡಿತ-ಶೀಘ್ರ ಚಿಕಿತ್ಸೆ ಅಗತ್ಯ : ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಕಾಯಿಲೆ ಮಾರಣಾಂತಿಕವಾಗಿದ್ದು, ರೇಬಿಸ್ ಬಂದ ನಂತರ ಇದಕ್ಕೆ ಚಿಕಿತ್ಸೆ ಇಲ್ಲ. ಆದ್ದರಿಂದ ನಾಯಿ ಕಚ್ಚಿದ ತಕ್ಷಣ ಚಿಕಿತ್ಸೆ ಪಡೆಯಬೇಕು. ಕಡ್ಡಾಯವಾಗಿ ಆಂಟಿ ರೇಬಿಸ್ ಚುಚ್ಚುಮದ್ದು ಪಡೆಯಬೇಕು. ರೇಬಿಸ್ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸಬಾರದು.
ಮನೆ ಮಾಲೀಕರು ಮನೆಯಲ್ಲಿನ ನಾಯಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳು, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಬೀದಿ ನಾಯಿಗಳಿಗೆ ಆಂಟಿ ರೇಬಿಸ್ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಚೇರಿಗಳು, ವಿವಿಧ ಸಂಸ್ಥೆಗಳ ಆವರಣಗಳಲ್ಲಿನ ನಾಯಿಗಳನ್ನು ನಿಯಮಾನುಸಾರ ಒಂದು ಬಾರಿ ಶಿಫ್ಟ್ ಮಾಡಿಸಿ ಶೆಲ್ಟರ್ ಕೇರ್ ತೆಗೆದುಕೊಳ್ಳಲು ಕ್ರಮ ವಹಿಸಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆಯಿಂದ ಸೂಕ್ತ ಕ್ರಮದೊಂದಿಗೆ, ಶಾಲೆಗಳು, ಹೋಟೆಲ್ಗಳು, ಬೀದಿ ಬದಿ ತಿಂಡಿ ಅಂಗಡಿಗಳು ಉಳಿದ/ತ್ಯಾಜ್ಯ ಆಹಾರವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 3906 ನಾಯಿ ಕಡಿತ ಪ್ರಕರಣ ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿರುವುದಿಲ್ಲ ಎಂದರು.
ಹಾವು ಕಡಿತ-ಅರಿವು ಅಗತ್ಯ : ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 47 ಜನರು ಹಾವು ಕಡಿತಕ್ಕೆ ಒಳಗಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಎಲ್ಲ ಆಸ್ಪತ್ರಗಳಲ್ಲಿ ಹಾವು ಕಡಿತಕ್ಕೆ ಚಿಕತ್ಸೆಗೆ ಅಗತ್ಯವಾದ ಔಷಧಗಳನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹಾಗೂ ಹಾವು ಕಚ್ಚಿದ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು ಎಂದರು.
ಡಿಎಸ್ಓ ಡಾ.ನಾಗರಾಜ ನಾಯ್ಕ್ ಮಾತನಾಡಿ, ನಾಯಿ ಕಚ್ಚಿದ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಅದಕ್ಕೂ ಮುನ್ನ ಗಾಯವನ್ನು ಸೋಪು ಹಾಕಿ ಹರಿಯುವ ನೀರಿನಿಂದ 15 ನಿಮಿಷ ತೊಳೆಯಬೇಕು. ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಆರ್ಐಜಿ ಯನ್ನು ಕಡ್ಡಾಯವಾಗಿ ಪಡೆಯಬೇಕು.
ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮಾಧಾನಪಡಿಸಿ, ಎಡಭಾಗಕ್ಕೆ ಮಲಗಿಸಿ, ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸೂಚನೆ : ಸಾಂಕ್ರಾಮಿಕ ರೋಗಗಳಾದ ಟೈಫಾಯ್ಡ್, ವೈರಲ್ ಹೆಪಟೈಟಿಸ್, ಕ್ಷಯ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯದಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಅಂಶಗಳನ್ನು ಗುರುತಿಸಿ, ಆರಂಭದಲ್ಲಿಯೇ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಶುದ್ದ ಕುಡಿಯುವ ನೀರು ಮತ್ತು ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ಗಳನ್ನು ಕಾಲ ಕಾಲಕ್ಕೆ ಸ್ವಚ್ಚಗೊಳಿಸಿ ಸಮರ್ಪಕವಾಗಿ ಕ್ಲೋರಿನೀಕರಣ ಮಾಡಬೇಂದು ಡಿಸಿ ಸೂಚನೆ ನೀಡಿದರು.
ಏಡ್ಸ್ ನಿಯಂತ್ರಣ-ಗುರಿ ತಲುಪಲು ಸೂಚನೆ : ನ್ಯಾಷನಲ್ ಪ್ರೊಗ್ರಾಂ ಫಾರ್ ಏಡ್ಸ್ ಕಂಟ್ರೋಲ್ ಕಾರ್ಯಕ್ರಮದಡಿ 2026 ರ ಡಿಸೆಂಬರ್ 1 ರ ವಿಶ್ವ ಏಡ್ ದಿನಕ್ಕೆ 95 95 99 ರ ಗುರಿ ನೀಡಲಾಗಿದೆ. ಅಂದರೆ ಸಮಾಜದಲ್ಲಿನ ಶೇ.95 ರಷ್ಟು ಹೆಚ್ಐಐ ರೋಗಿಗಳನ್ನು ಪತ್ತೆ ಮಾಡಬೇಕು. ಹಾಗೂ ಪತ್ತೆಯಾದವರಲ್ಲಿ ಶೇ.95 ರಷ್ಟು ಜನರಿಗೆ ಚಿಕಿತ್ಸೆ ನಿಡಬೇಕು. ಹೀಗೆ ಮಾಡುವುದರಿಂದ ಶೇ. 99 ಜನರಲ್ಲಿ ವೈರಲ್ ಲೋಡ್ ಕಡಿಮೆಯಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಮೂಲಕ 2026 ರ ಡಿಸೆಂಬರ್ಗೆ ಈ ಗುರಿಯನ್ನು ತಲುಪಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿರಣ್ ಮಾತನಾಡಿ, ಜಿಲ್ಲೆಯಲ್ಲಿ 2025 ರ ಏಪ್ರಿಲ್ ಮಾಹೆಯಿಂದ 2026 ರ ಫೆಬ್ರವರಿವರೆಗೆ 257 ಹೆಚ್ಐವಿ ಪ್ರಕರಣಗಳು ದಾಖಲಾಗಿದ್ದು, 230 ಜನರಿಗೆ ಎಆರ್ಟಿ ಚಿಕಿತ್ಸೆ ನೀಡಲಾಗುತ್ತಿದ್ದು, 14 ಜನ ಮರಣ ಹೊಂದಿರುತ್ತಾರೆ. ಇನ್ನುಳಿದವರ ಚಿಕಿತ್ಸೆಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಓ, ತಾಯಿ ಮರಣ ಪರಿಶೋಧನಾ(ಡೆಟ್ ಆಡಿಟ್) ಸಮಿತಿ ಸಭೆ ನಡೆಸಿ, ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಡಿಹೆಚ್ಓ ಡಾ.ನಟರಾಜ್, ಆರ್ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ, ಡಿಎಲ್ಓ ಡಾ.ಕಿರಣ್, ಡಾ.ಗುಡುದಪ್ಪ, ಡಾ.ಹರ್ಷವರ್ದನ್, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಾಜರಿದ್ದರು.
Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ
Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ಮೂಲಕ ಕುಂದಗಸವಿ ಗ್ರಾಮದ ವಿದ್ಯಾರ್ಥಿನಿ ಎಂ.ಎನ್. ಅಪೂರ್ವ ಉತ್ತಮ ಅಂಕಪಡೆದು ಆಯ್ಕೆಯಾಗಿದ್ದಾಳೆ.
ಪತ್ರಕರ್ತ ಎಂ.ಎಲ್. ನೋಪಿಶಂಕರ್ ಕುಂದಗಸವಿ ಹಾಗೂ ಪ್ರವೀಣೆ ದಂಪತಿಯ ಪುತ್ರಿಯಾಗಿರುವ ಎಂ.ಎನ್. ಅಪೂರ್ವ ಅವಳಿಗೆ ಮಾತೃಶ್ರೀ ಕೋಚಿಂಗ್ ಸೆಂಟರ್ನ ಶಿಕ್ಷಕ ರಮೇಶ್ ಕಲ್ಲಂಬಿ ಮಾರ್ಗದರ್ಶನ ನೀಡಿದ್ದರು.
Jawahar Navodaya Vidyalaya ಗ್ರಾಮೀಣ ಭಾಗದ ಪ್ರತಿಭೆ ವಿದ್ಯಾರ್ಥಿನಿ ಅಪೂರ್ವ ಸಾಧನೆಗೆ ಕುಂದಗಸವಿ ಗ್ರಾಮಸ್ಥರು ಹಾಗೂ ತಾಲೂಕು ಪತ್ರಕರ್ತ ಬಳಗ ಅಭಿನಂದನೆ ಸಲ್ಲಿಸಿದೆ.
ಎಸ್ಎಸ್ಎಲ್ ಸಿ ಪರೀಕ್ಷೆ ಸುಗಮ ನಡೆಯಲು ಸಕಲ ಸಿದ್ಧತೆ- ಪ್ರಭುಲಿಂಗ ಕವಳಿಕಟ್ಟಿ
ಶಿವಮೊಗ್ಗ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯು 18.03.2026 ರಿಂದ 02.04.2026 ರವರೆಗೆ ಒಟ್ಟು 79 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಸುಗಮವಾಗಿ ಪರೀಕ್ಷೆಗಳನ್ನು ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಭದ್ರಾವತಿ-15 ಹೊಸನಗರ-7 ಸಾಗರ-9 ಶಿಕಾರಿಪುರ-11 ಶಿವಮೊಗ್ಗ-20 ಸೊರಬ-10 ಮತ್ತು ತೀರ್ಥಹಳ್ಳಿ-7 ಪರೀಕ್ಷಾ ಕೇಂದ್ರಗಳಿವೆ.
ರೆಗ್ಯುಲರ್ ಫ್ರೆಶ್, ರೆಗ್ಯುಲರ್ ರಿಪೀಟರ್, ರೆಗ್ಯುಲರ್ ಪ್ರೈವೇಟ್, ಪ್ರೈವೇಟ್ ರಿಪೀಟರ್ ಈ 4 ವಿಧದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಒಟ್ಟು 23,262 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕಾರ್ಯ ನಿರ್ವಹಿಸುವ ಎಲ್ಲಾ, ಕಾರ್ಯನಿರತರು ಪರೀಕ್ಷೆಗಳನ್ನು ಸಕಲ ಸಿದ್ಧತೆಗಳೊಂದಿಗೆ ಪಾರದರ್ಶಕತೆಯಿಂದ ನಡೆಸಲು ಸಭೆ ನಡೆಸಿ ಸೂಚನೆ ನೀಡಲಾಗಿದೆ. ಪರೀಕ್ಷಾ ಅವ್ಯವಹಾರವನ್ನು ತಡೆಗಟ್ಟಲು ಜಿಲ್ಲಾ ಮಟ್ಟದಲಿ ಜಿಲ್ಲಾ, ವಿಚಕ್ಷಣ ದಳದ 3 ತಂಡಗಳನ್ನು ರಚನೆ ಮಾಡಲಾಗಿದೆ. ಡಯಟ್ ನಿಂದ ಜಾಗೃತದಳ ನೇಮಕ ಮಾಡಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ಇತರೆ ಇಲಾಖೆಗಳಿಂದ ವೀಕ್ಷಕರನ್ನು ನಿಯೋಜಿಸಿದೆ.
ಪರೀಕ್ಷೆಯ ಸುಗಮ ನಿರ್ವಹಣೆಗಾಗಿ 79 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ನಿಗದಿಪಡಿಸಿದ ಕೇಂದ್ರಗಳಿಗೆ ಉಪ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್, ಮಾರ್ಗಾಧಿಕಾರಿಗಳು ಹಾಗೂ ಎಲ್ಲಾ ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ಗ್ರೂಪ್ ” ಬಿ” ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲು ವಿಚಕ್ಷಣಾ ಜಾಗೃತ ದಳಗಳನ್ನು ರಚಿಸಿದ್ದು, ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಭೇಟಿ ನೀಡಿ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಿ ನಿಯಮಾನುಸಾರ ಪರೀಕ್ಷೆ ನಡೆಯುತ್ತಿರುವುದನ್ನು ಗಮನಿಸಲು ಸೂಚಿಸಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬ ಮೊಬೈಲ್ ಸ್ವಾಧೀನಾಧಿಕಾರಿಯನ್ನು ನೇಮಿಸಲಾಗಿದ್ದು ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿ ಮೊಬೈಲ್ ತೆಗೆದುಕೊಂಡು ಕೇಂದ್ರದೊಳಗೆ ಪ್ರವೇಶಿಸದಂತೆ ನಿರ್ಭಂಧಿಸಲು ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಮತ್ತು ಸಮೀಪದಲ್ಲಿರುವ ಜೆರಾಕ್ಸ್ ಮತ್ತು ಕಂಪ್ಯೂಟರ್/ಸೈಬರ್ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
ಪರೀಕ್ಷಾ ಕಾರ್ಯಗಳಿಗೆ ಅಗತ್ಯವಿರುವ ವಾಹನಗಳ ಸೌಕರ್ಯಗಳನ್ನು ಒದಗಿಸಲು ಆರ್.ಟಿ.ಓ. ರವರಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್ ಭದ್ರತೆಯನ್ನು ಒದಗಿಸಲು ಕ್ರಮವಹಿಸಲಾಗಿದೆ,
ಪರೀಕ್ಷೆ-1ಕ್ಕೆ ಜಿಲ್ಲೆಯ ಖಜಾನೆಯಲ್ಲಿ ಪರೀಕ್ಷಾ ಗೌಪ್ಯ ವಸ್ತುಗಳ ಠೇವಣಿ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಗೌಪ್ಯ ವಸ್ತುಗಳ ವಿತರಣೆಯನ್ನು “ಕರ್ನಾಟಕ ಸೆಕ್ಯೂರ್ಡ್ ಎಕ್ಷಾಮಿನೇಷನ್ ಸಿಸ್ಟಮ್” ಅಡಿಯಲ್ಲಿ ಸುವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಗೌಪ್ಯ ವಸ್ತುಗಳನ್ನು ಠೇವಣಿಸಲಾದ ಖಜಾನೆಗಳಿಗೆ ಪೂರ್ಣಾವಧಿಯ ಸಶಸ್ತ್ರ ಪೊಲೀಸ್ ಪಹರೆಯನ್ನು ಒದಗಿಸಲಾಗಿದೆ.
ಹಿಂದಿನ ವರ್ಷಗಳಂತೆಯೇ ಮಾರ್ಚ್/ಏಪ್ರಿಲ್ 2026 ರ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ತಾಲ್ಲೂಕು ಖಜಾನೆಗಳಲ್ಲಿ ಪರೀಕ್ಷಾ ಗೌಪ್ಯ ವಸ್ತುಗಳನ್ನು ಠೇವಣಿಸಲಾಗಿದೆ.
ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತಿರುವುದನ್ನು ಗಮನಿಸಲು ಜಿಲ್ಲಾ ಹಂತದಲ್ಲಿ ಪ್ರತಿ 06 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ 15 ಸಿಬ್ಬಂದಿಗಳ ವೆಬ್ ಕಾಸ್ಟಿಂಗ್ ತಂಡವನ್ನು ರಚನೆ ಮಾಡಲಾಗಿದೆ.
ಪರೀಕ್ಷೆ ನಡೆಯುವ ಅವಧಿಯಲ್ಲಿ ವೆಬ್ ಕಾಸ್ಟಿಂಗ್ ಕಾರ್ಯ ಸುಗಮವಾಗಿ ನಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ವೆಬ್ ಕಾಸ್ಟಿಂಗ್ ವೀಕ್ಷಣೆ ನಡೆಯುವ ಕೊಡಚಾದ್ರಿ ಸಭಾಂಗಣ, ಜಿಲ್ಲಾ ಪಂಚಾಯತ್ ಶಿವಮೊಗ್ಗ ಇಲ್ಲಿಗೆ ಮೆಸ್ಕಾಂ ನವರು ನಿರಂತರ ವಿದ್ಯುತ್ ಸರಬರಾಜು ಒದಗಿಸಲು ಕ್ರಮವಹಿಸಿದೆ.
ಪರೀಕ್ಷೆ ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರಕ್ರಿಯೆಯ ವೆಬ್ ಕಾಸ್ಟಿಂಗ್ ವೀಕ್ಷಣೆಯನ್ನು ಕೊಡಚಾದ್ರಿ ಸಭಾಂಗಣ, ಜಿಲ್ಲಾ, ಪಂಚಾಯತ್ ಶಿವಮೊಗ್ಗ ಇಲ್ಲಿ ನಡೆಸಲಾಗುವುದು.
ಪರೀಕ್ಷಾ ಕೇಂದ್ರಗಳಿಗೆ ದೂರದ ಊರುಗಳಿಂದ ಹಾಜರಾಗುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ಪರೀಕ್ಷಾ ಕೇಂದ್ರಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಡಾ ಕಛೇರಿಯಿಂದ ಕೃಷಿಕರಿಗೆ ಕೃಷಿ ಯಂತ್ರೋಪಕರಣ ಮತ್ತು ವಾರ್ಷಿಕ ಕಾರ್ಯಾನುದಾನ ವಿತರಣೆ
ಭದ್ರಾ ಅಚ್ಚುಕಟ್ಟು ಪ್ರದೇಶಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ರಾಣೆಬೆನ್ನೂರು ತಾಲೂಕಿನ ನೀರು ಬಳಕೆದಾರ ಸಹಕಾರ ಸಂಘಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳಿಗೆ 1 ದಿನದ ತರಬೇತಿ ಕಾರ್ಯಾಗಾರ ಸಭೆ ನಡೆಸಲಾಯಿತು .ಮತ್ತು ಕಾಡಾ ಅಧ್ಯಕ್ಷರಾದ ಡಾ. ಕೆ. ಪಿ. ಅಂಶುಮಂತ್ ರವರು, ಕಾಡಾ ಕಛೇರಿಯಿಂದ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುವ ಕೃಷಿ ಯೊಂತ್ರೋಪಕರಣ ಹಾಗೂ ವಾರ್ಷಿಕ ಕಾರ್ಯ ಅನುದಾನವನ್ನು ನೀಡಿದರು.
ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳು ಆರ್, ಸತೀಶ್ ಹಾಗೂ ಭೂ ಅಭಿವೃದ್ಧಿ ಅಧಿಕಾರಿಗಳು ಕೆ ಪ್ರಶಾಂತ್ (ತಾಂತ್ರಿಕ),(ಕೃಷಿ)(ಪ್ರ) ಹಾಗೂ, ಡಾ. ನಾಗೇಶ್ ಎಸ್, ಡೋಂಗರೆ ಭೂ ಅಭಿವೃದ್ಧಿ ಅಧಿಕಾರಿಗಳು (ಸಹಕಾರ) ಮತ್ತು ಭದ್ರ ಕಾಡಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು
ವೈಭವದಿಂದ ಜರುಗಿದ ಕಲ್ಪತರು ಶ್ರೀ ಚೌಡೇಶ್ವರಿ ದೇವಿಯ 6 ನೇ ವಾರ್ಷಿಕೋತ್ಸವ
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿರುವ ಕಲ್ಪತರು ಶ್ರೀ ಚೌಡೇಶ್ವರಿ ದೇವಿಯ ೬ನೇ ವರ್ಷದ ವಾರ್ಷಿಕೋತ್ಸವವನ್ನು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವು ಪುಣ್ಯಾಹವಾಚನ, ದೇವರ ಪ್ರಾರ್ಥನೆ, ಪ್ರಧಾನ ದೇವರುಗಳ ಕಲಶ ಸ್ಥಾಪನೆ, ದಿಕ್ಕು ಶುದ್ಧಿ ಹಾಗೂ ದಿಕ್ಬಲಿ ಪೂಜೆಯೊಂದಿಗೆ ಪ್ರಾರಂಭವಾಗಿ ಗಣಹೋಮ, ನವಗ್ರಹ ಹೋಮ, ಪರಿವಾರ ಹೋಮ, ದುರ್ಗಾ ಹೋಮ ಮತ್ತು ಶ್ರೀ ಲಲಿತಾ ಸಹಸ್ರನಾಮ ಹೋಮಗಳನ್ನು ನೆರವೇರಿಸಿ ಮಹಾಪೂರ್ಣಾಹುತಿಯನ್ನು ಸಮರ್ಪಿಸಲಾಯಿತು. ನಂತರ ಅಮ್ಮನವರಿಗೆ ಫಲ-ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಹಾಗೂ ಬ್ರಹ್ಮಕಳಶಾಭಿಷೇಕಗಳನ್ನು ನೆರವೇರಿಸಲಾಯಿತು. ಬಳಿಕ ದೇವಿಗೆ ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಧರ್ಮಪತ್ನಿ ಜಯಲಕ್ಷ್ಮಿ, ಕೆ. ಇ. ಕಾಂತೇಶ್ ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್, ಸಹ ಅರ್ಚಕರಾದ ಹೃತಿಕ್ ಭಟ್ ಅವರ ನೇತೃತ್ವದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಸಿ.ಎನ್. ಮಲ್ಲೇಶ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಅತ್ಯಂತ ವೈಭವದಿಂದ ನಡೆಸಿಕೊಟ್ಟರು.
Department of Tourism ಶಿವಮೊಗ್ಗ ಜಿಲ್ಲೆಯಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಪ.ಜಾ/ ಪ.ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Department of Tourism ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹಾಗೂ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸುವ ಉದ್ದೇಶದಿಂದ ಮೊಬೈಲ್ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾಗಿರುವ ಪರಿಶಿಷ್ಟ ಜಾತಿಗೆ ಸೇರಿದ 06 ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 04 ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸಹಾಯಧನ ನೀಡುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾ. 23ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು 20 ರಿಂದ 55 ವರ್ಷದೊಳಗಿನವರಾಗಿದ್ದು, 10ನೇ ತರಗತಿ ಉತ್ತೀರ್ಣ ಪ್ರಮಾಣ ಪತ್ರ, ಆಧಾರ್ ಪ್ರತಿ, ಲಘು ವಾಹನ ಚಾಲನಾ ಪರವಾನಗಿ, ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಬ್ಯಾಂಕ್ನಿಂದ ಸಾಲ ಪಡೆಯಲು ಅರ್ಹತೆ ಹೊಂದಿರುವ ಬಗ್ಗೆ ಮಂಜೂರಾತಿ/ದೃಢೀಕರಣ ಪತ್ರ ಹಾಗೂ ಇಲಾಖೆಯಿಂದ ನೀಡಲಾಗುವ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಕಡ್ಡಾಯವಾಗಿ ಪಡೆಯುವುದಾಗಿ ಪ್ರಮಾಣ ಪತ್ರ, ಯಾವುದೇ ಸರ್ಕಾರಿ ಇಲಾಖೆ ಅಥವಾ ನಿಗಮ/ಮಂಡಳಿಗಳಲ್ಲಿ ಖಾಯಂ ನೌಕರಿಯಾಗಿಲ್ಲವೆಂಬ ಸ್ವಯಂ ಘೋಷಣೆಯನ್ನು ಸಲ್ಲಿಸಬೇಕು ಮತ್ತು ಅರ್ಜಿಯೊಂದಿಗೆ ಸಲ್ಲಿಸುವ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
Department of Tourism ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ‘ಎ’ ಬ್ಲಾಕ್, 3ನೇ ತಿರುವು ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಈ ಕಛೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಮಾ.23 ರೊಳಗಾಗಿ ಸಲ್ಲಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251444 ನ್ನು ಸಂಪರ್ಕಿಸುವುದು.
Women’s Day ಚಿತ್ರಕಲಾ ಸ್ಪರ್ಧೆ ಮಹಿಳೆಯರ ಸುಪ್ತ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ- ಎನ್.ಹೇಮಂತ್
Women’s Day ಮಹಿಳೆಯರ ಚಿತ್ರಕಲೆಯಲ್ಲಿ ‘ಪ್ರಕೃತಿ’ಯು ಅನಾವರಣಗೊಳ್ಳುತ್ತಿರುವುದು ಸಂತಸದ ವಿಷಯ. ಇಂತಹ ಚಿತ್ರಕಲೆ ಸ್ಪರ್ಧೆಗಳು ಮಹಿಳೆಯರಲ್ಲಿ ಸುಪ್ತವಾಗಿ ಅಡಗಿರುವ ಕಲೆ, ಕೌಶಲ್ಯಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಜಿ.ಪಂ. ಸಿಇಓ ಹೇಮಂತ್ ಎನ್ ತಿಳಿಸಿದರು.
ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪ್ರಕೃತಿ ಎಂಬ ವಿಷಯ ಕುರಿತು ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆ ಕೇವಲ ಕಲೆ ಮಾತ್ರವಲ್ಲದೆ, ಮನಸ್ಸಿಗೆ ನೆಮ್ಮದಿ ಮತ್ತು ಆನಂದ ನೀಡುವ ಮಾರ್ಗವಾಗಿದೆ. ಆದ್ದರಿಂದ ಆಸಕ್ತಿ ಉಳ್ಳವರು ಹೆಚ್ಚೆಚ್ಚು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಪಡಿಸಿಕೊಳ್ಳಬೇಕೆಂದು ತಿಳಿಸಿದ ಅವರು ಸ್ಪರ್ಧಾರ್ಥಿಗಳಿಗೆ ಶುಭ ಕೋರಿದರು.
74 ಸ್ಪರ್ಧಾರ್ಥಿಗಳು ಚಿತ್ರಕಲಾ ಸ್ಪರ್ಧೆಗೆ ನೋಂದಾಯಿಸಿಕೊಂಡಿದ್ದರು. ಸ್ಪರ್ಧಿಗಳಿಗೆ 22.5 ಅಳತೆಯ ಕ್ಯಾನ್ವಾಸನ್ನು ಆಯೋಜಕರಿಂದ ಒದಗಿಸಲಾಗಿತ್ತು.



Women’s Day ಕಾರ್ಯಕ್ರಮದಲ್ಲಿ ಜಿ.ಪಂ ಅಧಿಕಾರಿಗಳು, ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.
ವಿಜೇತರು : ಮೊದಲ ಬಹುಮಾನ (ರೂ.8,000/-)ವನ್ನು ತೀರ್ಥಹಳ್ಳಿಯ ಪ್ರಕೃತಿ ಶೆಣೈ ಪಡೆದುಕೊಂಡರು. ದ್ವಿತೀಯ ಬಹುಮಾನ (ರೂ.6,000/-) ನ್ನು ತೀರ್ಥಹಳ್ಳಿಯ ಭಾವನಾ ಹೊಳ್ಳ ಪಡೆದುಕೊಂಡಿದ್ದು, ತೃತೀಯ ಬಹುಮಾನ (ರೂ.4,000/- )ವನ್ನು ತೀರ್ಥಹಳ್ಳಿಯ ಆಶಾ ಉಮೇಶ್ ಹಾಗೂ ಎರಡು ಸಮಾಧಾನಕರ ಬಹುಮಾನ(ತಲಾ ರೂ.2,000/-) ವನ್ನು ಶಿಕಾರಿಪುರದ ಹೇಮಲತಮ್ಮ, ಶಿವಮೊಗ್ಗದ ಮನ್ವಿತಾ ಆರ್, ಆನವಟ್ಟಿಯ ಶಾಲಿನಿ ನಾಯಕ್ ಮತ್ತು ವಿಶೇಷ ಬಹುಮಾನವನ್ನು ಶಿವಮೊಗ್ಗದ ಸೌಜನ್ಯ ಆರ್ ಕೆ ಪಡೆದರು. ವಿಜೇತರಿಗೆ ಮಾ.26 ರಂದು ನಡೆಯುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ಫಾಸ್ಟ್ ಫುಡ್ ತಯಾರಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಪುರುಷ ಹಾಗೂ ಮಹಿಳೆಯರಿಗೆ 12 ದಿನಗಳ ಅವಧಿಯ ಉಚಿತ ಫಾಸ್ಟ್ ಫುಡ್ (ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿ ಶಿಬಿರವನ್ನು ಏಪ್ರಿಲ್ ತಿಂಗಳ 4 ನೇ ತಾರೀಖಿನಿಂದ ಪ್ರಾರಂಭಿಸಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಈ ಶಿಬಿರದಲ್ಲಿ ಪಾನಿ ಪೂರಿ, ಚಾಟ್ ಮಸಾಲ, ಕಚೋರಿ, ಗೋಬಿ ಮಂಚೂರಿ, ಪ್ರೈಡ್ ರೈಸ್, ಸಮೋಸ ಇನ್ನಿತರೆ ಚಾಟ್ಸ್ ಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು. ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 49 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷ ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ದಿನಾಂಕ : 27/03/2026 ಬುಧವಾರ ಬೆಳಿಗ್ಗೆ 9.30 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗಬೇಕಾಗಿ ಈ ಮೂಲಕ ಸೂಚಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ದಿನಾಂಕ : 27/03/2026 ರೊಳಗೆ ಸಂಸ್ಥೆಯನ್ನು ಈ ಕೆಳಕಂಡ ದೂರವಾಣಿ ಸಂಖ್ಯೆ 8970476050/9591514154/9686248369/ 6363139123/9505894247 ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆAದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
H.M. Chandrashekariah ವ್ಯಕ್ತಿಯಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಪರಿಣಾಮ- ಹೆಚ್.ಎಂ.ಚಂದ್ರಶೇಖರಯ್ಯ
H.M. Chandrashekariah ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಹಾಗೂ ಅಹಂಕಾರಗಳಲ್ಲಿನ ಧನಾತ್ಮಕ ಬದಲಾವಣೆಯೇ ಯೋಗದ ಉದ್ದೇಶ ಎಂದು ಕಾರ್ಯದರ್ಶಿ ಹೆಚ್.ಎಂ.ಚಂದ್ರಶೇಖರಯ್ಯ ತಿಳಿಸಿದರು.
ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ಕೃಷಿ ನಗರದ ಶಕ್ತಿ ಗಣಪತಿ ಯೋಗ ಶಾಖೆಯಲ್ಲಿ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮೃದ್ಧತೆಯ ಸಂಕೇತ, ಸಡಗರ ಸಂಭ್ರಮದ ಸಂಕೇತ, ಸ್ಥಿತ ಪ್ರಜ್ಞತೆಯ ಸಂಕೇತ. ಈ ತತ್ವಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಈ ಭೂಮಿಯಲ್ಲಿ ನಾಲ್ಕು ದಿನ ಬದುಕಿ ಹೋಗುವುದೇ ಈ ಯೋಗದ ಉದ್ದೇಶವೆಂದು ತಿಳಿಸಿದರು.
ಇಂದು ಎಲ್ಲಿ ನೋಡಿದರೂ ಅಶಾಂತಿ, ಅಭದ್ರತೆ, ಅಪನಂಬಿಕೆ, ಭಯ ತಾಂಡವವಾಡುತ್ತಿದೆ. ಬಹುತೇಕ ಕುಟುಂಬಗಳಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತಿದೆ. ಕಾರಣ, ಮಿತಿ ಇಲ್ಲದ ಕಾಮನೆಗಳು, ಸ್ವಾರ್ಥಪರ ಚಿಂತನೆಗಳು, ಅಧಿಕಾರ, ಕೀರ್ತಿ, ಸಂಪತ್ತಿನ ಬೆನ್ನು ಹತ್ತಿರುವ ಜಗತ್ತು ಪ್ರಕ್ಷುಬ್ಧಗೊಂಡಿದೆ. ಹಿಂಸೆ, ಯುದ್ಧಗಳಿಂದ ಜಗತ್ತು ಜರ್ಜರಿತವಾಗುತ್ತಿದೆ. ನಾವೆಲ್ಲ ಜಗತ್ತು ಬದಲಾಗಲಿ ಎಂದು ಹೇಳುತ್ತೇವೆ. ಆದರೆ ನಮ್ಮಲ್ಲಿ ಬದಲಾವಣೆಯಾಗಲಿ ಎಂದು ಯಾರೂ ಬಯಸುತ್ತಿಲ್ಲ. ಮೊದಲು ನಮ್ಮಲಿನ ಚಿಂತನೆಗಳು, ಆಲೋಚನೆಗಳು, ದುರಾಸೆಗಳು, ಹಣ, ಕೀರ್ತಿಗಾಗಿ ಬೆನ್ನು ಹತ್ತಿರುವ ವ್ಯಕ್ತಿಯ ಮನಸ್ಸು ಬದಲಾಗಬೇಕಿದೆ. ಇದು ಯೋಗದ ಅಷ್ಟಾಂಗ ಮಾರ್ಗಗಳಾದ ಆಸನ, ಪ್ರಾಣಯಾಮ ಮತ್ತು ಧ್ಯಾನಗಳಿಂದ ಮಾತ್ರ ಸಾಧ್ಯವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಸಂಸ್ಥೆಯ ಖಜಾಂಚಿ ಸೂರ್ಯನಾರಾಯಣ ಹೊಸತೋಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಳ್ಳೆಕೆರೆ ಸಂತೋಷ್ ಆಗಮಿಸಿದ್ದರು. ಹಿರಿಯ ಯೋಗ ಶಿಕ್ಷಕರಾದ ನೀಲಕಂಠ ರಾವ್ ಕಾರ್ಯಕ್ರಮ ನಿರೂಪಿಸಿದರು. ಗಣಪತಿಯವರು ವಂದಿಸಿದರು.
H.M. Chandrashekariah ರೋಟರಿ ಜಿ ವಿಜಯ್ ಕುಮಾರ್, ಪ್ರೊ. ಮಂಜುನಾಥ್, ಡಾ. ನಟರಾಜ್, ಪರಮೇಶ್ವರಪ್ಪ, ಕೆ.ಚಂದ್ರಪ್ಪ, ಸಂಸ್ಥೆ ಪೋಷಕರಾದ ಪರಮೇಶ್, ಮನು ಕುಮಾರ್, ಅನಿಲ್, ಸುಮಾ ನಟರಾಜ್, ಜಾನಕಮ್ಮ, ನಾಗರತ್ನ, ಚಂದ್ರಶೇಖರಯ್ಯ, ಶೋಭಾ, ಸರಸ್ವತಿ, ಬಿಂದು ವಿಜಯ್ ಕುಮಾರ್, ಜ್ಯೋತಿ ಠಾಕ್ರೆ, ಕುಸುಮಾ ಹಾಗೂ ಕೃಷಿ ನಗರದ ಯೋಗಾರ್ಥಿಗಳು ಪಾಲ್ಗೊಂಡಿದ್ದರು.
