ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಸಮೀಪದ ಹೊಸಕೆರೆ ದೇವಸ್ಥಾನದಲ್ಲಿ ಹುಂಡಿ ಹಣ ಕಳವು ಮಾಡುತ್ತಿದ್ದ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬ ಬಳಿಕ ಆ ಹಣದಲ್ಲಿ ಎಣ್ಣೆ ಖರೀದಿಸಲು ಸ್ಥಳೀಯ ಬಾರ್ಗೆ ತೆರಳಿದ್ದಾನೆ. ಈ ವೇಳೆ ಆತ ನೀಡಿದ ನೋಟುಗಳಲ್ಲಿ ಕುಂಕುಮದ ಕಲೆ ಇರುವುದನ್ನು ಗಮನಿಸಿದ ಬಾರ್ ಮಾಲೀಕ ವರ್ಧನ್ ಅವರಿಗೆ ಅನುಮಾನ ಬಂದಿದೆ.
ತಕ್ಷಣವೇ ಆರೋಪಿಯನ್ನು ವಿಚಾರಿಸಿದಾಗ ದೇವಸ್ಥಾನದ ಹುಂಡಿ ಹಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ವರ್ಧನ್ ಹಾಗೂ ಅವರ ಸ್ನೇಹಿತ ನಿತಿನ್ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರ ಜಾಗೃತಿಯಿಂದ ದೇವಸ್ಥಾನದ ಹಣ ಕಳವು ಪ್ರಕರಣ ಬಯಲಾಗಿದ್ದು, ಬಾರ್ ಮಾಲೀಕ ವರ್ಧನ್ ಮತ್ತು ನಿತಿನ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
