Madhu Bangarappa ‘ಸಮಗ್ರ ಶಿಕ್ಷಣ ಕರ್ನಾಟಕ’ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪ್ರಾಂಶುಪಾಲರು ಹಾಗೂ ಎಸ್ಡಿಎಂಸಿ (SDMC) ಸದಸ್ಯರೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂತ್ರಿ ಮಧು ಬಂಗಾರಪ್ಪನವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು.
ಮುಂಬರುವ ಶೈಕ್ಷಣಿಕ ವರ್ಷದ ಸಿದ್ಧತೆಗಳು ಹಾಗೂ ಹೊಸ ಯೋಜನೆಗಳ ಕುರಿತು ಸಮಗ್ರವಾಗಿ ಸಭೆಯಲ್ಲಿ ಚರ್ಚಿಸಿದರು.
ನಮ್ಮ ಸರ್ಕಾರದ ಪ್ರಮುಖ ಹೆಜ್ಜೆಗಳು ಹೀಗಿವೆ.
ಜೂನ್ ೧ – ಶಿಕ್ಷಣದಲ್ಲಿ ಹೊಸ ಶಕೆ: ರಾಜ್ಯಾದ್ಯಂತ ಒಟ್ಟು ೧,೦೦೦ ‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನು’ (KPS) ಆರಂಭಿಸುವ ಗುರಿ ಹೊಂದಿದ್ದು, ಜೂನ್ ೧ ರಂದು ಶಿವಮೊಗ್ಗದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನೂತನ KPS ಶಾಲೆಗಳ ಶಂಕುಸ್ಥಾಪನೆ ನೆರವೇರಲಿದೆ.
ಮಕ್ಕಳ ಹಬ್ಬ – ಅದ್ದೂರಿ ಸ್ವಾಗತ: ಮೇ ೨೯ ರಿಂದ ೩೧ರವರೆಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಜೂನ್ ೧ ರಂದು ತಳಿರು ತೋರಣ ಕಟ್ಟಿ, ಸಮುದಾಯದ ಸಹಭಾಗಿತ್ವದಲ್ಲಿ ಊಟದ ವ್ಯವಸ್ಥೆಯೊಂದಿಗೆ ಮಕ್ಕಳನ್ನು ಸಂಭ್ರಮದಿಂದ ಶಾಲೆಗೆ ಬರಮಾಡಿಕೊಳ್ಳಲಾಗುವುದು.
Madhu Bangarappa ನಮ್ಮ ಶಾಲೆ ನಮ್ಮ ಜವಾಬ್ದಾರಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು, ದಾನಿಗಳು ಹಾಗೂ ಉದ್ಯಮಿಗಳು ಕೈಜೋಡಿಸಿ, ಸ್ಮಾರ್ಟ್ ಟಿವಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ವೃದ್ಧಿಗೆ ಸಹಕರಿಸಲು ಕೋರಲಾಗಿದೆ.
ದಾಖಲಾತಿ ಅಭಿಯಾನ: ನುರಿತ ಶಿಕ್ಷಕರಿರುವ ನಮ್ಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಪೋಷಕರಲ್ಲಿ ಜಾಗೃತಿ ಮೂಡಿಸಲಾಗುವುದು.
ಪೌಷ್ಟಿಕಾಂಶ ಹಾಗೂ ಸೌಲಭ್ಯ: ಅಜೀಂ ಪ್ರೇಮ್ಜಿ ಫೌಂಡೇಶನ್ ನೆರವಿನೊಂದಿಗೆ ಪ್ರತಿದಿನ ಮೊಟ್ಟೆ/ಬಾಳೆಹಣ್ಣು ವಿತರಣೆ ಹಾಗೂ ವಿಶೇಷ ತರಗತಿಗಳಿಗಾಗಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ.
”ಶಿಕ್ಷಣ ಎಂಬುದು ಯಾರಿಂದಲೂ ಕದಿಯಲಾಗದ ಏಕೈಕ ಸಂಪತ್ತು.” ಬನ್ನಿ, ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಈ ಮಹತ್ಕಾರ್ಯದಲ್ಲಿ ಶಿಕ್ಷಕರು, ಪೋಷಕರು ಹಾಗೂ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಚಿವ ಮಧುಬಂಗಾರಪ್ಪ ಕರೆ ನೀಡಿದರು.
