Tuesday, February 24, 2026
Tuesday, February 24, 2026
Home Blog Page 1641

ಡಿಜಿಟಲ್ ಪೇಮೆಂಟ್ ದೋಖಾ ಮಾಡುತ್ತಿರುವ ಸೈಬರ್ ಕಳ್ಳರು

0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಜಿಟಲ್‌ ಪೇಮೆಂಟ್‌ ಹೆಚ್ಚಾಗುತ್ತಿದ್ದಂತೆ ಡಿಜಿಟಲ್‌ ಪೇಮೆಂಟ್‌ನಿಂದ ದೋಖಾಗಳು ಕೂಡ ಹೆಚ್ಚಾಗುತ್ತಿವೆ.

ಮೊಬೈಲ್‌ನಲ್ಲಿ ಪೋನ್‌ ಪೇ, ಪೇಟಿಎಂ, ಗೂಗಲ್‌ ಪೇ ಇದ್ರೆ ಸಾಕು ಜನ ತಮ್ಮ ಜೇಬಲ್ಲಿ ಹತ್ತು ರೂಪಾಯಿ ಇಲ್ಲದಿದ್ರೂ ಹತ್ತಾರು ಏರಿಯಾ ಸುತ್ತಿ, ಹತ್ತಾರು ಕಡೆ ಶಾಪಿಂಗ್‌ ಮಾಡಿ ಬರ್ತಾರೆ. 10 ರೂಪಾಯಿ ಟೀ ಕುಡಿದ್ರೂ ಪೋನ್‌ ಪೇ, 15 ರೂಪಾಯಿಯ ಕಬ್ಬಿನ ಹಾಲಿಗೂ ಗೂಗಲ್‌ ಪೇ, 30 ರೂಪಾಯಿಯ ತಿಂಡಿ ತಿಂದ್ರೂ ಕೂಡಾ ಪೇಟಿಎಂ ಮಾಡುವ ಕಾಲ ಬಂದಿದೆ.

ಹೀಗೆ ನಿತ್ಯ ಬದುಕಿನಲ್ಲಿ ಡಿಜಿಟಲ್‌ ಪೇಮೆಂಟ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಇದೇ ಡಿಜಿಟಲ್‌ ಪೇಮೆಂಟ್‌ ಮೇಲೂ ಸೈಬರ್‌ ಕಳ್ಳರ ಕಣ್ಣು ಬಿದ್ದಿದೆ. ನಿತ್ಯ ಹತ್ತಾರು ಕೇಸ್‌ಗಳು ಬೆಳಕಿಗೆ ಬರ್ತಿವೆ.
ನಗರದಲ್ಲಿ ಹೆಚ್ಚಾಗ್ತಿವೆ ಸೈಬರ್‌ ಕಳ್ಳತನ
ಬೆಳಗ್ಗೆ ಎದ್ದು ಟೀ ಕುಡಿಯೋದ್ರಿಂದ ಸಂಜೆ ಮನೆಗೆ ರೇಷನ್‌ ತರೋವರೆಗೂ ಎಲ್ಲದಕ್ಕೂ ಡಿಜಿಟಲ್‌ ಪೇಮೆಂಟ್‌ ಮೂಲಕವೇ ಜನ ಹಣ ಕಳಿಸ್ತಾರೆ. ಹೀಗಾಗಿ ಕ್ಯಾಶ್‌ ವ್ಯವಹಾರ ಅರ್ಧಕ್ಕಿಂತ ಕಡಿಮೆಯಾಗಿದೆ. ಗೂಗಲ್ ಪೇ, ಪೋನ್ ಪೇ, ಪೇಟಿಎಂ ನಂತಹ ಆಪ್‌ಗಳ ಮೂಲಕ ಅಂಗಡಿ ಮಾಲೀಕರಿಗೆ ಗ್ರಾಹಕರು ಡಿಜಿಟಲ್ ಪೇಮೆಂಟ್‌ ಮಾಡ್ತಾರೆ. ಆದ್ರೆ ಇದ್ರಿಂದ ಕೆಲ ಅಂಗಡಿ ಮಾಲೀಕರಿಗೆ ವಂಚನೆಯಾಗ್ತಿರೋದು ಬೆಳಕಿಗೆ ಬಂದಿದೆ. ಅಂಗಡಿಗೆ ಬಂದ ಗ್ರಾಹಕರು ಪೋನ್ ಪೇ ಮಾಡಿದ ಬಳಿಕ ಪೋನ್ ಪೇ ಆಗಿದೆ ಅಂತಾ ಗ್ರೀನ್ ಸಿಗ್ನಲ್ ತೋರಿಸಿ ಹೋಗ್ತಾರೆ. ಆದರೆ ಅಕೌಂಟ್ ಚೆಕ್ ಮಾಡಿದಾಗ ಅಕೌಂಟ್‌ಗೆ ಅಮೌಂಟ್ ಬಾರದೆ ಶಾಪ್‌ ಮಾಲೀಕರು ವಂಚನೆಗೆ ಒಳಗಾಗ್ತಿದ್ದಾರೆ.

ಅದ್ರಲ್ಲೂ ನಗರದ ಮೆಜೆಸ್ಟಿಕ್‌ ಭಾಗದಲ್ಲೇ ಇಂಥಾ ಪ್ರಕರಣಗಳು ಹೆಚ್ಚಾಗ್ತಿವೆ.
ಇನ್ನೂ ಡಿಜಿಟಲ್ ಪೇಮೆಂಟ್‌ನಲ್ಲಿ ಆಗ್ತಿರೋ ಕಳ್ಳತನದ ಬಗ್ಗೆ ಸೈಬರ್‌ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ನಗದು ವ್ಯವಹಾರಕ್ಕಿಂತ ಕೇಸ್‌ಲೆಸ್‌ ವ್ಯವಹಾರವೇ ಹೆಚ್ಚಾಗ್ತಿರೋದ್ರಿಂದ ಸೈಬರ್‌ ಕಳ್ಳರು ಕೂಡಾ ಇಂಥಾ ದಾರಿ ಹಿಡಿದಿದ್ದಾರೆ. ಹೀಗಾಗಿ ಗ್ರಾಹಕರು ಹಾಗೂ ಶಾಪ್‌ ಮಾಲೀಕರು ಇಂಥಾ ಌಪ್‌ಗಳನ್ನ ಎಚ್ಚರಿಕೆಯಿಂದ ಬಳಸಬೇಕು. ಮೊಬೈಲ್‌ಗೆ ಬರೋ ಯಾವುದೇ ಓಟಿಪಿ, ಲಿಂಕ್‌ಗಳನ್ನ ಕ್ಲಿಕ್‌ ಮಾಡಬಾರ್ದು ಅಂತಾರೆ.
ಒಟ್ನಲ್ಲಿ ಬ್ಯಾಂಕ್‌ಗೆ ಹೋಗಿ ಹಣ ಬಿಡಿಸಿಕೊಂಡು ಬರೋದನ್ನ ನಿಲ್ಲಿಸಿರೋ ಜನ, ಎಟಿಎಂ ಕೂಡಾ ಮರೆತಿದ್ದಾರೆ.

ಎಲ್ಲದಕ್ಕೂ ಡಿಜಿಟಲ್‌ ಪೇಮೆಂಟ್‌ ಌಪ್‌ಗಳನ್ನೇ ಬಳಸ್ತಿದ್ದಾರೆ. ಆದ್ರೆ ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಶಾಪ್‌ ಮಾಲೀಕರಿಗೆ ಯಾಮಾರಿಸುತ್ತಿದ್ದಾರೆ.

ಶ್ರೀಲಂಕಾ ಸಂಕಷ್ಟದ ನಡುವೆ ಮಂತ್ರಿಮಂಡಲ ರಾಜಿನಾಮೆ

0

ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕರ ಆಕ್ರೋಶದ ನಡುವೆ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಹೊರತುಪಡಿಸಿ ಶ್ರೀಲಂಕಾದ ಇಡೀ ಕ್ಯಾಬಿನೆಟ್ ಸಚಿವರು ರಾಜೀನಾಮೆ ನೀಡಲು ನಿರ್ಧರಿಸಿ ಅವರೆಲ್ಲರೂ ರಾಜಿನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ.

ಹೊಸ ಸಚಿವ ಸಂಪುಟ ರಚನೆಗೆ ದಾರಿ ಮಾಡಿಕೊಡಲು ರಾಜೀನಾಮೆ ನೀಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಬಿಕ್ಕಟ್ಟಿನ ಪೀಡಿತ ಶ್ರೀಲಂಕಾದ ಕ್ಯಾಬಿನೆಟ್ ಭಾನುವಾರ ತಡರಾತ್ರಿಯ ಸಭೆಯಲ್ಲಿ ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ ಅನ್ನೋದು ಗಮನಾರ್ಹ ವಿಷಯವಾಗಿದೆ.

ಈ ಪತ್ರವು ಪ್ರಸ್ತುತ ಶ್ರೀಲಂಕಾ ಪ್ರಧಾನಿ ಬಳಿಯಲ್ಲಿದ್ದು, ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರಿಗೆ ಹಸ್ತಾಂತರಿಸಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬೆಳವಣಿಗೆಯನ್ನು ದೃಢೀಕರಿಸಿದ ಸಂಸದ ದಿನೇಶ್ ಗುಣವರ್ದನ, ಮಹಿಂದಾ ರಾಜಪಕ್ಸೆ ಅವರು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಾರೆ ಮತ್ತು ಸಂಪುಟದ ಇತರ ಎಲ್ಲ ಸದಸ್ಯರು ಪ್ರಧಾನಿಗೆ ರಾಜೀನಾಮೆ ನೀಡಿದ್ದಾರೆ ವರದಿಯಾಗಿದೆ.

ದೇಶದ ಕ್ರೀಡಾ ಸಚಿವ ಮತ್ತು ಪಿಎಂ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸೆ ಅವರು ತಮ್ಮ ಎಲ್ಲಾ ಖಾತೆಗಳಿಗೆ ರಾಜೀನಾಮೆ ನೀಡಿದ ಒಂದು ಗಂಟೆಯೊಳಗೆ ಇದು ಸಂಭವಿಸಿದೆ.

ಎಲ್‌ಕೆಎ ಜನರಿಗೆ ಮತ್ತು ಸರ್ಕಾರಕ್ಕೆ ಸ್ಥಿರತೆಯನ್ನು ಸ್ಥಾಪಿಸಲು HE ಮತ್ತು PM ಗಳ ನಿರ್ಧಾರಕ್ಕೆ ಇದು ಸಹಾಯ ಮಾಡಬಹುದೆಂಬ ಭರವಸೆಯಲ್ಲಿ ನಾನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಪೋರ್ಟ್‌ಫೋಲಿಯೊಗಳಿಗೆ ನನ್ನ ರಾಜೀನಾಮೆಯನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ನಾನು ನನ್ನ ಮತದಾರರಿಗೆ ಬದ್ಧನಾಗಿರುತ್ತೇನೆ ಎಂದು ನಮಲ್ ರಾಜಪಕ್ಸೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾ ಈಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸೋದ್ಯಮದ ಮೇಲಿನ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯದ ಕೊರತೆಯು ಈ ಪರಿಸ್ಥಿತಿಗೆ ಕಾರಣವಾಗಿದೆ.

ಕ್ರಿಕೆಟ್ ದಾಖಲೆ ಮಾಡಿದ ದಂಪತಿ

0

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್‍ ಕೀಪರ್- ಬ್ಯಾಟರ್ ಅಲಿಸ್ಸಾ ಹೀಲಿ, ಮಹಿಳಾ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಫೈನಲ್‍ ನಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು 71 ರನ್‍ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದಿದೆ.

ಇಂಗ್ಲೆಂಡ್ ವಿರುದ್ಧದ ಫೈನಲ್‍ನಲ್ಲಿ 170 ರನ್ ಸಿಡಿಸಿದ ಅವರು, ಈ ಹಿಂದಿನ ವಿಜೇತರ ಪ್ರತಿಷ್ಠಿತ ರೋಲ್-ಕಾಲ್‍ನಲ್ಲಿ ತಮ್ಮ ಹೆಸರು ದಾಖಲಿಸಿ, ಆಸ್ಟ್ರೇಲಿಯಾದ ಮಾಜಿ ನಾಯಕಿ ಕರೆನ್ ರೋಲ್ಟನ್ (2005) ಅವರ ಜತೆ ದಾಖಲೆಗೆ ಸೇರಿದ್ದಾರೆ. ಜತೆಗೆ ಸ್ಟಾರ್ ಆಟಗಾರ್ತಿಯರು (ಇಂಗ್ಲೆಂಡ್‍ನ ಕ್ಲಾರೆ ಟೇಲರ್ 2009, ನ್ಯೂಝಿಲೆಂಡ್‍ನ ಸೂಸಿ ಬಟೇಸ್ 2013 ಮತ್ತು ಇಂಗ್ಲೆಂಡ್‍ನ ಟ್ಯಾಮಿ ಬಿಯಮಂಟ್, 2017) ಕೂಡಾ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದರು.
ಅಲಿಸ್ಸಾ ಹೀಲಿ ತಮ್ಮ ಪತಿ ಮಿಚೆಲ್ ಸ್ಟಾರ್ಕ್ ಅವರ ಸಾಧನೆಯನ್ನೂ ಸರಿಗಟ್ಟಿದ್ದು, ಈ ಎಡಗೈ ವೇಗದ ಬೌಲರ್ 2015ರ ಐಸಿಸಿ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದಾಗ ಟೂರ್ನಿಯ ಅತ್ಯುತ್ತಮ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಅಲಿಸ್ಸಾ ಹೀಲಿ (509) ನ್ಯೂಝಿಲೆಂಡ್‍ನಲ್ಲಿ ಗರಿಷ್ಠ ರನ್ ಗಳಿಸಿದ ಖ್ಯಾತಿಗೂ ಪಾತ್ರರಾದರು. ಸೆಮಿಫೈನಲ್ ಮತ್ತು ಫೈನಲ್‍ನಲ್ಲಿ ಅವರ ಶತಕಗಳು ಆಸ್ಟ್ರೇಲಿಯಾಗೆ ದಾಖಲೆ ಏಳನೇ ಬಾರಿ ವಿಶ್ವಕಪ್ ಗೆಲ್ಲಲು ನೆರವಾದವು. 32 ವರ್ಷದ ಅಲಿಸ್ಸಾ ಹೀಲಿ 56.55 ಸರಾಸರಿಯಲ್ಲಿ ರನ್ ಗಳಿಸಿದ್ದಲ್ಲದೇ, ನಾಲ್ಕು ಕ್ಯಾಚ್ ಹಾಗೂ ನಾಲ್ಕು ಸ್ಟಂಪಿಂಗ್ ಮೂಲಕ ಎಂಟು ವಿಕೆಟ್‌ ಪಡೆದಿದ್ದಾರೆ.

ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ಯೋಜನೆ-ನಿರಾಣಿ

0

ರಾಜ್ಯ ಸರ್ಕಾರವು ಅಂದಾಜು 7000 ಕೋಟಿ ರೂಪಾಯಿ ವೆಚ್ಚದಲ್ಲಿ ರಸಗೊಬ್ಬರ ಉದ್ಯಮವನ್ನು ತೆರೆಯಲು ಯೋಜಿಸಿದೆ ಎಂದು ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದರು.

ನಗರದ ಎಸ್ ಸಿಡಿಸಿಸಿ ಕಚೇರಿಗೆ ಆಗಮಿಸಿದ ಸಂದರ್ಭ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ನೆರವಿನಿಂದ ಈ ಬೃಹತ್ ಕಾರ್ಖಾನೆ ಯನ್ನು ಆರಂಭಿಸಿ ರಸಗೊಬ್ಬರ ಕೊರತೆ ಯನ್ನು ನೀಗಿಸುವ ಉದ್ದೇಶ ಸರಕಾರ ಹೊಂದಿದೆ.

ರಾಜ್ಯದ ಮಂಗಳೂರು, ದಾವಣಗೆರೆ ಅಥವಾ ಬೆಳಗಾವಿಯಲ್ಲಿ ಈ ಕಾರ್ಖಾನೆ ಆರಂಭಿಸಲಾಗುವುದು. ಈ ಕಾರ್ಖಾನೆ ಆರಂಭವಾದರೆ ಸುಮಾರು 10 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ರಸಗೊಬ್ಬರ ಕೊರತೆಯನ್ನು ನೀಗಿಸಲು ಯೋಜನೆ ರೂಪಿಸಲಾಗಿದೆ. ಸುಮಾರು 5000 ಉದ್ಯೋಗಗಳನ್ನು ಸೃಷ್ಟಿಸುವ 64 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಫ್ತು ಉತ್ತೇಜನಾ ಕೈಗಾರಿಕಾ ಪಾರ್ಕ್ ಅನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಗೆ 1,000 ಎಕರೆ ಭೂಮಿ ಅಗತ್ಯವಿದ್ದು, ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ದಕ್ಷಿಣ ಕನ್ನಡದ ಬಳ್ಕುಂಜೆ, ಉಳೆಪಾಡಿ ​​ಮತ್ತು ಕೊಲ್ಲೂರಿನಲ್ಲಿ 100 ಎಕರೆ ಭೂಮಿಯನ್ನು ಗುರ್ತಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕೃಷಿ ಮತ್ತು ಕೈಗಾರಿಕೆಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಬೆಂಬಲವನ್ನು ಶ್ಲಾಘನೀಯವಾದದ್ದು ಎಂದರು.

ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ನವೆಂಬರ್ 2 ರಿಂದ 4 ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನಡೆಸುತ್ತಿದೆ. ಹೂಡಿಕೆದಾರರ ಸಮಾವೇಶದ ಭಾಗವಾಗಿ ನಾವು ಇತರ ರಾಜ್ಯಗಳಲ್ಲಿ ರೋಡ್ ಶೋ ನಡೆಸಲಾಗುತ್ತದೆ. ಸರ್ಕಾರವು ಎಂಬಿಎ, ಎಂಟೆಕ್ ಪದವೀಧರರಿಗೆ ಪ್ರೋತ್ಸಾಹ ನೀಡಲಿದೆ. ಸ್ಟಾರ್ಟ್‌ಅಪ್‌ಗಳಿಗಾಗಿ ಮೊದಲ ಕಾರ್ಯಕ್ರಮವನ್ನು ಕಲಬುರಗಿ, ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಡೆಸಲಾಗುತ್ತದೆ.

ಇದರ ಹೊರತಾಗಿ, ಕೈಗಾರಿಕಾ ಅದಾಲತ್‌ಗಳನ್ನು ಕೂಡ ನಡೆಸಲಾಗುವುದು ಮತ್ತು ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಜನರ ಮನೆ ಬಾಗಿಲಿಗೇ ಹೋಗಿ ಪರಿಹರಿಸಲಾಗುವುದು ಎಂದು ಹೇಳಿದರು.

ಉಕ್ರೇನ್ ನ ಕೀವ್ ನಲ್ಲಿ ನಾಗರಿಕರ ಶವ ಪತ್ತೆ ತನಿಖೆಗೆ ಗುಟೆರಸ್ ಆಗ್ರಹ

0

ರಷ್ಯಾದಿಂದ ಹಿಂಪಡೆಯಲಾದ ಉಕ್ರೇನ್‌ನ ಕೀವ್ ಪ್ರದೇಶದಲ್ಲಿ 410 ನಾಗರಿಕರ ಮೃತದೇಹಗಳು ಕಂಡು ಬಂದಿವೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ.

ರಷ್ಯಾದ ಪಡೆಗಳಿಂದ ಇತ್ತೀಚೆಗೆ ಹಿಂಪಡೆದ ಕೀವ್ ಪ್ರದೇಶದಲ್ಲಿ ಒಟ್ಟು 410 ನಾಗರಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಐರಿನಾ ವೆನೆಡಿಕ್ಟೋವಾ ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯನ್ನರು ಆಕ್ರಮಿಸಿಕೊಂಡಿರುವ ಪಟ್ಟಣಗಳಲ್ಲಿ ನಾಗರಿಕರ ಉದ್ದೇಶಿತ ಹತ್ಯೆಗಳನ್ನು ಖಂಡಿಸಿದ್ದಾರೆ.

ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಬುಚಾ ಮತ್ತು ಕೀವ್‌ನ ಇತರ ಉಪನಗರಗಳಲ್ಲಿ ನಾಗರಿಕರ ಹತ್ಯೆಯ ಆರೋಪವನ್ನು ತಿರಸ್ಕರಿಸಿದೆ.
ಈ ವಾರಾಂತ್ಯದಲ್ಲಿ ರಷ್ಯಾ ಸೇನೆಯಿಂದ ಇಡೀ ಕೀವ್ ಪ್ರದೇಶದ ನಿಯಂತ್ರಣವನ್ನು ಮರಳಿ ಪಡೆದ ಉಕ್ರೇನ್, ರಾಜಧಾನಿಯ ವಾಯುವ್ಯಕ್ಕೆ 30 ಕಿ.ಮೀ (19 ಮೈಲುಗಳು) ದೂರದಲ್ಲಿರುವ ಬುಚಾ ಪಟ್ಟಣದಲ್ಲಿ ಉದ್ದೇಶಪೂರ್ವಕ ಹತ್ಯಾಕಾಂಡ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

ಇಲ್ಲಿ 280 ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ ಎಂದು ಬುಚಾ ಮೇಯರ್ ಅನಾಟೊಲಿ ಫೆಡೋರುಕ್ ತಿಳಿಸಿದ್ದಾರೆ.

ಉಕ್ರೇನಿಯನ್ ಪಡೆಗಳು ಪ್ರದೇಶವನ್ನು ಮರಳಿ ಪಡೆಯುತ್ತಿದ್ದಂತೆ ನಾಗರಿಕರ ಮೃತದೇಹಗಳು ಬೀದಿಯಲ್ಲಿ ಕಂಡುಬಂದವು. ಶನಿವಾರ, ಪತ್ರಕರ್ತರು ಬುಚಾದ ಒಂದೇ ರಸ್ತೆಯಲ್ಲಿ ಕನಿಷ್ಠ 20 ಶವಗಳನ್ನು ನೋಡಿದ್ದಾರೆ ಎಂದು ತಿಳಿದುಬಂದಿದೆ.

ಹಲವರ ಕೈಗಳನ್ನು ಬೆನ್ನ ಹಿಂದೆ ಕಟ್ಟಿ ಗುಂಡು ಹೊಡೆದು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಈ ಚಿತ್ರಗಳು ವರದಿಯಾದ ನಂತರ ಕೀವ್​​ ಪ್ರದೇಶದಲ್ಲಿನ ದಾಳಿಯನ್ನು ಅಂತರರಾಷ್ಟ್ರೀಯ ನಾಯಕರು ಖಂಡಿಸಿದ್ದಾರೆ.

ಕೀವ್ ಬಳಿಯ ಬುಚಾ ಪಟ್ಟಣದಲ್ಲಿ ನಾಗರಿಕರ ಹತ್ಯೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಭಾನುವಾರ ಒತ್ತಾಯಿಸಿದ್ದಾರೆ.

ಉಕ್ರೇನ್‌ನ ಬುಚಾದಲ್ಲಿ ಕೊಲ್ಲಲ್ಪಟ್ಟ ನಾಗರಿಕರ ಚಿತ್ರಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಈ ಬಗ್ಗೆ ಸ್ವತಂತ್ರ ತನಿಖೆ ಅತ್ಯಗತ್ಯ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಷ್ಯಾದ ರಕ್ಷಣಾ ಸಚಿವಾಲಯವು ಇದನ್ನು ಉಕ್ರೇನಿಯನ್ ಅಧಿಕಾರಿಗಳ ಒಂದು ಹಂತದ ಕಾರ್ಯಾಚರಣೆ’ ಎಂದು ಕರೆದಿದೆ.

ಮತ್ತೊಂದೆಡೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಘಟನೆಯನ್ನು ಜನಾಂಗೀಯ ಹತ್ಯೆ ಎಂದು ಕರೆದಿದ್ದಾರೆ.

ಬಗರ್ ಹುಕುಂ ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಯತ್ನ-ಬಿವೈಆರ್

0

ಕಲ್ಲೂರು-ಬಸವಾಪುರ ಮಾರ್ಗವಾಗಿ ಹಾಯ್‌ಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ
₹ 14.20 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕರ್ನಾಟಕ ನೀರಾವರಿ ನಿಗಮ, ತುಂಗಾ ಮೇಲ್ದಂಡೆ ಯೋಜನಾ ವಲಯದಿಂದ ಭಾನುವಾರ ಹಾಯ್‌ಹೊಳೆ ಮುಖ್ಯರಸ್ತೆಯಲ್ಲಿ ಏರ್ಪಡಿಸಿದ್ದ ಶಿವಮೊಗ್ಗ-ತೀರ್ಥಹಳ್ಳಿ ಎನನ್‌ಎಚ್ 169ರಿಂದ ಕಲ್ಲೂರು ಬಸವಾಪುರ ಮಾರ್ಗವಾಗಿ ಹಾಯ್‌ಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹಿಂದೆ ರಾಮಿನಕೊಪ್ಪಕ್ಕೆ ಬಂದಾಗ ಇಲ್ಲಿನ ಜನರು ರಸ್ತೆಗಾಗಿ ಮನವಿ ಸಲ್ಲಿಸಿದ್ದರು. ₹ 6 ಕೋಟಿ ಮತ್ತು ₹ 2 ಕೋಟಿ ಮಂಜೂರು ಮಾಡಿ ಶಂಕುಸ್ಥಾಪನೆ ನೆರವೇರಿಸಿ ನಂತರ ರಸ್ತೆ ಉದ್ಘಾಟನೆ ಕೂಡ ಮಾಡಲಾಗಿತ್ತು.

ರಸ್ತೆ ಹದಗೆಟ್ಟಿದ್ದನ್ನು ಮನಗಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಅನುದಾನ ನೀಡಲಾಗುತ್ತಿರುವುದು ಸಂತಸದ ವಿಚಾರ ಎಂದರು.

ಹಾಯ್‌ಹೊಳೆ ರಸ್ತೆ ಅಭಿವೃದ್ದಿಗೆ ಸರ್ಕಾರ ₹ 14.20 ಕೋಟಿ ಅನುದಾನ ಒದಗಿಸಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ವಿಧಾನಸಭಾ ಮತ್ತು ವಿಧಾನಪರಿಷತ್ ಶಾಸಕರ ನೇತೃತ್ವದಲ್ಲಿ ₹ 53.63 ಕೋಟಿ ವೆಚ್ಚದಲ್ಲಿ 150 ಸಮುದಾಯ ಭವನಗಳ ನಿರ್ಮಾಣ ಆಗಿದೆ.

ರಸ್ತೆಗಳಿಗಾಗಿ ಬೃಹತ್ ನೀರಾವರಿ ಇಲಾಖೆಯಿಂದಲೇ ಸುಮಾರು ₹ 119 ಕೋಟಿ ವೆಚ್ಚದಲ್ಲಿ 260 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಮದುವೆ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಅಗಸವಳ್ಳಿಯಲ್ಲಿ ಒಂದು ಸಮುದಾಯ ಭವನ ನಿರ್ಮಿಸಲು ₹ 50 ಲಕ್ಷ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದು, ಒಂದು ತಿಂಗಳಲ್ಲಿ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಭಾಗದ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಮತ್ತು ಶರಾವತಿ ಮುಳುಗಡೆ ಸಮಸ್ಯೆ ಬಗ್ಗೆ ಅನೇಕ ತಾಂತ್ರಿಕ ಸಮಸ್ಯೆಗಳಿವೆ. ಆದರೂ, ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿಂದೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದಾಗ ಯಡಿಯೂರಪ್ಪ ಮತ್ತು ಇತರೆ ಮುಖಂಡರು ಹೋರಾಡಿದ್ದರ ಫಲವಾಗಿ ಸರ್ಕಾರ ಒಕ್ಕಲೆಬ್ಬಿಸುವ ಮಸೂದೆ ಹಿಂಪಡೆದಿತ್ತು.

ಬಗರ್‌ಹುಕುಂ ಸಾಗುವಳಿದಾರರ ಪರವಾಗಿ ಪಾದಯಾತ್ರೆ ಮಾಡಲಾಗಿತ್ತು. ಬಗರ್‌ಹುಕುಂ, ಶರಾವತಿ ಮುಳಗಡೆ ಬಗ್ಗೆ ಶಾಸಕರ ನೇತೃತ್ವದಲ್ಲಿ ಈ ಕುರಿತು ಸರ್ಕಾರದ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಹನಿ ನೀರಾವರಿ ಯೋಜನೆಯಡಿ ವಿಶ್ವ ಬ್ಯಾಂಕ್‌ನಿಂದ ₹ 25ಕೋಟಿಯಿಂದ ₹30 ಕೋಟಿ ಸಾಲ ಪಡೆಯುವ ಅವಕಾಶ ಇದ್ದು, ಹೊಳೆಭಾಗದಲ್ಲಿ ಅಭಿವೃದ್ದಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ತಿಳಿದರು.

ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿ. ಪೆರುಮಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ್, ಎಸ್‌.ರುದ್ರೇಗೌಡ, ಅಗಸವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ. ಸುಬ್ರಮಣಿ, ಗ್ರಾಮ ಪಂಚಾಯಿತಿ ಇದ್ದರು.

ರಾಜ್ಯದಲ್ಲಿ ನವೋದ್ಯಮಿಗಳಿಗೆ ಉತ್ತೇಜನವಿದೆ- ಅಶ್ವತ್ಥನಾರಾಯಣ

0

ರಾಜಧಾನಿಯಲ್ಲಿ ಮೂಲಸೌಕರ್ಯ ವಿಚಾರದಲ್ಲಿ ಚಿಕ್ಕಪುಟ್ಟ ನ್ಯೂನತೆ ಇರಬಹುದು. ಇದನ್ನು ಉದ್ಯಮಿಗಳು ಸರಕಾರದ ಗಮನಕ್ಕೆ ತರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಬಾರದು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸ್ಟಾರ್ಟಪ್ ಸೇರಿದಂತೆ ಯಾವುದೇ ಉದ್ದಿಮೆಗಳಿಗೆ ಬೆಂಗಳೂರಿನಲ್ಲಿ ಇರುವಂತಹ ಮೂಲಸೌಕರ್ಯ ಜಾಗತಿಕ ಮಟ್ಟದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿಯೇ ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ ಎನಿಸಿ ಕೊಂಡಿದೆ ಎಂದರು.

ನವೋದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಟ್ವೀಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರು ಹೀಗೆಂದಿದ್ದಾರೆ. ಉದ್ಯಮಿಗಳಿಗೆ ಸರಕಾರವು ಯಥೇಚ್ಛ ಅನುಕೂಲಗಳನ್ನು ಒದಗಿಸುತ್ತಿದೆ. ಉದ್ಯಮಿಗಳಿಗೆ ಕೂಡ ಮೊದಲು ನಾವು ಭಾರತೀಯರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು, ‘ಕೆಂಪಣ್ಣನವರು ಎಷ್ಟು ವರ್ಷಗಳಿಂದ ಗುತ್ತಿಗೆದಾರರಾಗಿದ್ದಾರೆ ಎನ್ನುವುದು ನನಗೆ ಗೊತ್ತು. ಇಷ್ಟು ವರ್ಷ ಸುಮ್ಮನಿದ್ದ ಅವರು ಈಗಷ್ಟೇ ಮಾತನಾಡುತ್ತಿದ್ದಾರೆ ಅಂದರೆ ಏನರ್ಥ? ಇವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಯಾರಬೇಕಾದರೂ ಊಹಿಸಬಹುದು’ ಎಂದರು.

‘ಸಮಾಜದಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ ಎನ್ನಲಾರೆ. ಆದರೆ ಇದು 70 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಹುಟ್ಟು ಹಾಕಿದ ರೋಗಗ್ರಸ್ತ ಸಂಸ್ಕೃತಿ. ಇದು ಹೆಮ್ಮರವಾಗಿ ಬೆಳೆದಿದೆ. ಇದನ್ನು ಕಿತ್ತು ಹಾಕಲೆಂದೇ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲಾಗುತ್ತಿದೆ ಎಂದು ಅವರು ನುಡಿದರು.

ಭ್ರಷ್ಟಾಚಾರವನ್ನು ಹತ್ತಿಕ್ಕಲೆಂದೇ ಡಿಜಿಟಲ್ ವ್ಯವಹಾರ ವ್ಯವಸ್ಥೆ ತರಲಾಗುತ್ತಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕನಿಷ್ಠ ನೈತಿಕತೆಯೂ ಇಲ್ಲ. ಹೀಗಾಗಿಯೇ ಜನರು ಆ ಪಕ್ಷವನ್ನು ಮೂಲೆಗೆ ತಳ್ಳಿದ್ದಾರೆ ಎಂದು ಅಶ್ವತ್ಥ ನಾರಾಯಣ ಪ್ರತಿಪಾದಿಸಿದರು.

ಉಕ್ರೇನ್ ನಲ್ಲಿ ರಷ್ಯ ನರಮೇಧ ನಡೆಸುತ್ತಿದೆ- ಝೆಲೆನ್ಸ್ಕಿ

0

ರಷ್ಯಾ ತನ್ನ ದೇಶದಲ್ಲಿ ನರಮೇಧ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ಆರೋಪಿಸಿದ್ದಾರೆ. ರಾಜಧಾನಿ ಕೀವ್‌ನ ಹೊರಗೆ ರಷ್ಯಾದ ಪಡೆಗಳು ಕಾರ್ಯಾಚರಣೆಯನ್ನು ಹಿಂಪಡೆದ ಪಟ್ಟಣಗಳಲ್ಲಿ ನಾಗರಿಕರ ಹತ್ಯೆಯಾಗಿರುವುದು ಗೋಚರಿಸುತ್ತಿದ್ದಂತೆ ಪಾಶ್ಚಿಮಾತ್ಯ ನಾಯಕರು ಖಂಡಿಸಿದ್ದಾರೆ.

ಖಂಡಿತವಾಗಿಯೂ ಇದು ನರಮೇಧ. ಇಡೀ ರಾಷ್ಟ್ರ ಮತ್ತು ಜನರ ನಿರ್ಮೂಲನೆ ಮಾಡುವುದಾಗಿದೆ’. ‘ನಾವು ಉಕ್ರೇನ್‌ನ ಪ್ರಜೆಗಳು ಮತ್ತು ರಷ್ಯಾದ ನೀತಿಗೆ ನಾವು ಅಧೀನರಾಗಲು ಬಯಸುವುದಿಲ್ಲ. ಈ ಕಾರಣದಿಂದಾಗಿ ನಾವು ನಾಶವಾಗುತ್ತಿದ್ದೇವೆ’ ಎಂದು ಝೆಲೆನ್‌ಸ್ಕಿ ಸಿಬಿಎಸ್‌ನ ‘ಫೇಸ್ ದಿ ನೇಷನ್’ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಆದರೆ, ರಷ್ಯಾದ ರಕ್ಷಣಾ ಸಚಿವಾಲಯ ಈ ಆರೋಪಗಳನ್ನು ನಿರಾಕರಿಸಿದೆ. ಬುಕಾದಲ್ಲಿ ಮೃತ ದೇಹಗಳನ್ನು ತೋರಿಸುವ ದೃಶ್ಯಗಳು ಮತ್ತು ಫೋಟೊಗಳು ಕೀವ್‌ನಿಂದ ಆಗುತ್ತಿರುವ ಮತ್ತೊಂದು ಪ್ರಚೋದನೆ ಎಂದು ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಝೆಲೆನ್‌ಸ್ಕಿ, ಸೂಚನೆಗಳು ಹಾಗೂ ಆದೇಶಗಳನ್ನು ನೀಡಿದ ಎಲ್ಲಾ ಮಿಲಿಟರಿ ಕಮಾಂಡರ್‌ಗಳು ಸೇರಿ ಪ್ರತಿಯೊಬ್ಬರಿಗೂ ಸಮರ್ಪಕ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನ ಸಂಸತ್ತು ವಿಸರ್ಜನೆ

0

ಪಾಕಿಸ್ತಾನ ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಿಗೊಳಿಸುವ ಪ್ರಯತ್ನವನ್ನು ಇಮ್ರಾನ್ ಖಾನ್ ವಿಫಲಗೊಳಿಸಿದ್ದಾರೆ.

ಪಾಕಿಸ್ತಾನದ ಸಂಸತ್ತು ನ್ಯಾಷನಲ್ ಅಸೆಂಬ್ಲಿಯು ಭಾನುವಾರ ಭಾರಿ ಪ್ರಹಸನಕ್ಕೆ ಸಾಕ್ಷಿಯಾಯಿತು.
ಸಂಸತ್ತು ವಿಸರ್ಜನೆಗೆ ಅಧ್ಯಕ್ಷ ಆರಿಫ್ ಅಲ್ವಿ ಅವರ ಅನುಮೋದನೆಯನ್ನು ಇಮ್ರಾನ್ ಪಡೆದುಕೊಂಡಿದ್ದಾರೆ. ಹೀಗಾಗಿ ಮೂರು ತಿಂಗಳಲ್ಲಿ ಪಾಕಿಸ್ತಾನ ಸಂಸತ್ತಿನ ಚುನಾವಣೆ ನಡೆಯಲಿದೆ.

ಇಮ್ರಾನ್ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಅಸಾಂವಿಧಾನಿಕ ಎಂದು ಅವರು ಹೇಳಿದರು.
ಇದೇ ಹೊತ್ತಿಗೆ ಸುದ್ದಿವಾಹಿನಿಯಲ್ಲಿ ಕಾಣಿಸಿಕೊಂಡ ಇಮ್ರಾನ್ ಖಾನ್, ಪಾಕಿಸ್ತಾನದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ವಿದೇಶಿ ಶಕ್ತಿಗಳು ಹಸ್ತಕ್ಷೇಪ ನಡೆಸುತ್ತಿವೆ ಎಂದು ದೂರಿದರು.

ಸಂಸತ್ತನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಿದ್ದೇನೆ. ಚುನಾವಣೆ ನಡೆಯಲಿ. ಏನು ಬೇಕು ಎಂಬುದನ್ನು ದೇಶವು ತೀರ್ಮಾನಿಸಲಿ ಎಂದು ಇಮ್ರಾನ್ ಹೇಳಿದ್ದಾರೆ.

ಪಾಕಿಸ್ತಾನದ ಯಾವ ಪ್ರಧಾನಿಯೂ ಅವಧಿ ಪೂರ್ಣಗೊಳಿಸಿದ ಇತಿಹಾಸ ಇಲ್ಲ. 2018 ರಲ್ಲಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಅವರು ತಮ್ಮ ಆಳ್ವಿಕೆಯ ಅತ್ಯಂತ ದೊಡ್ಡ ಸವಾಲು ಎದುರಿಸುತ್ತಿ ದ್ದಾರೆ.

ಪೂಂಛ್ ಜಿಲ್ಲೆಯಲ್ಲಿ ಉಗ್ರರ ಅಡಗುದಾಣ ಪತ್ತೆ

0

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿಯ ಹಳ್ಳಿಯೊಂದರಲ್ಲಿ ಭದ್ರತಾ ಪಡೆಗಳು ಉಗ್ರರ ಅಡಗುತಾಣವನ್ನು ಭೇದಿಸಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೂರಕೋಟೆ ಗ್ರಾಮದಲ್ಲಿ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಮ್ಯಾಗಜೀನ್ ನೊಂದಿಗೆ ಎರಡು ಎಕೆ-47 ರೈಫಲ್ಸ್ ಗಳು, 63 ಗುಂಡು ಸುತ್ತುಗಳು, ಹ್ಯಾಂಡ್ ಗ್ರೀಪ್ ನೊಂದಿಗೆ ಒಂದು 223 ಬೋರ್ ಎಕೆ ಮಾದರಿಯ ಗನ್, ಅದರು ಎರಡು ಮ್ಯಾಗಜಿನ್ ಗಳು ಮತ್ತು 20 ಗುಂಡು ಸುತ್ತುಗಳು ಮತ್ತು ಮ್ಯಾಗಜಿನ್ ನೊಂದಿಗೆ ಚೀನಾದ ಪಿಸ್ತೂಲ್ ವೊಂದನ್ನು ಅಡಗುತಾಣದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಭಾನುವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.