ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಸಾರ್ವಜನಿಕರ ಆಕ್ರೋಶದ ನಡುವೆ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಹೊರತುಪಡಿಸಿ ಶ್ರೀಲಂಕಾದ ಇಡೀ ಕ್ಯಾಬಿನೆಟ್ ಸಚಿವರು ರಾಜೀನಾಮೆ ನೀಡಲು ನಿರ್ಧರಿಸಿ ಅವರೆಲ್ಲರೂ ರಾಜಿನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ.
ಹೊಸ ಸಚಿವ ಸಂಪುಟ ರಚನೆಗೆ ದಾರಿ ಮಾಡಿಕೊಡಲು ರಾಜೀನಾಮೆ ನೀಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಬಿಕ್ಕಟ್ಟಿನ ಪೀಡಿತ ಶ್ರೀಲಂಕಾದ ಕ್ಯಾಬಿನೆಟ್ ಭಾನುವಾರ ತಡರಾತ್ರಿಯ ಸಭೆಯಲ್ಲಿ ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ ಅನ್ನೋದು ಗಮನಾರ್ಹ ವಿಷಯವಾಗಿದೆ.
ಈ ಪತ್ರವು ಪ್ರಸ್ತುತ ಶ್ರೀಲಂಕಾ ಪ್ರಧಾನಿ ಬಳಿಯಲ್ಲಿದ್ದು, ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರಿಗೆ ಹಸ್ತಾಂತರಿಸಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬೆಳವಣಿಗೆಯನ್ನು ದೃಢೀಕರಿಸಿದ ಸಂಸದ ದಿನೇಶ್ ಗುಣವರ್ದನ, ಮಹಿಂದಾ ರಾಜಪಕ್ಸೆ ಅವರು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಾರೆ ಮತ್ತು ಸಂಪುಟದ ಇತರ ಎಲ್ಲ ಸದಸ್ಯರು ಪ್ರಧಾನಿಗೆ ರಾಜೀನಾಮೆ ನೀಡಿದ್ದಾರೆ ವರದಿಯಾಗಿದೆ.
ದೇಶದ ಕ್ರೀಡಾ ಸಚಿವ ಮತ್ತು ಪಿಎಂ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸೆ ಅವರು ತಮ್ಮ ಎಲ್ಲಾ ಖಾತೆಗಳಿಗೆ ರಾಜೀನಾಮೆ ನೀಡಿದ ಒಂದು ಗಂಟೆಯೊಳಗೆ ಇದು ಸಂಭವಿಸಿದೆ.
ಎಲ್ಕೆಎ ಜನರಿಗೆ ಮತ್ತು ಸರ್ಕಾರಕ್ಕೆ ಸ್ಥಿರತೆಯನ್ನು ಸ್ಥಾಪಿಸಲು HE ಮತ್ತು PM ಗಳ ನಿರ್ಧಾರಕ್ಕೆ ಇದು ಸಹಾಯ ಮಾಡಬಹುದೆಂಬ ಭರವಸೆಯಲ್ಲಿ ನಾನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಪೋರ್ಟ್ಫೋಲಿಯೊಗಳಿಗೆ ನನ್ನ ರಾಜೀನಾಮೆಯನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ನಾನು ನನ್ನ ಮತದಾರರಿಗೆ ಬದ್ಧನಾಗಿರುತ್ತೇನೆ ಎಂದು ನಮಲ್ ರಾಜಪಕ್ಸೆ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾ ಈಗ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪ್ರವಾಸೋದ್ಯಮದ ಮೇಲಿನ ನಿರ್ಬಂಧದಿಂದ ಉಂಟಾದ ವಿದೇಶಿ ವಿನಿಮಯದ ಕೊರತೆಯು ಈ ಪರಿಸ್ಥಿತಿಗೆ ಕಾರಣವಾಗಿದೆ.
