B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಶಿಕಾರಿಪುರ ರೋಟರಿ ಕದಂಬ ಕ್ಲಬ್, ಶಿವಮೊಗ್ಗ ರೋಟರಿ ಮಲೆನಾಡು ಇವರ ಸಂಯುಕ್ತಾಶ್ರಯದಲ್ಲಿ ರಾಯಲ್ ಆರ್ಕಿಡ್ ಸಭಾಂಗಣದಲ್ಲಿ ಆಯೋಜಿಸಿದ್ದ ರೋ. ಶಿವಪ್ರಕಾಶ್ ಎ.ಎಸ್. ಅವರ 60ನೇ ಜನ್ಮದಿನ ಆಚರಣೆ ಹಾಗೂ ಜಂಟಿ ಕ್ಲಬ್ ಮೀಟ್ ಕಾರ್ಯಕ್ರಮದಲ್ಲಿ ಶಿವಪ್ರಕಾಶ್ ದಂಪತಿಗಳನ್ನು ಅಭಿನಂದಿಸಿ ಮಾತನಾಡಿದರು.
ಶಿವಪ್ರಕಾಶ್ ಉತ್ತಮ ಸ್ನೇಹಿತ. ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನು ಸಾರ್ಥಕಗೊಳಿಸುತ್ತವೆ. ಸಮಾಜಮುಖಿಯಾಗಿ ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ನೀಡುತ್ತವೆ. ಶಿವಪ್ರಕಾಶ್ ಮತ್ತು ನನ್ನ ಸ್ನೇಹ ತುಂಬಾ ಗಟ್ಟಿಯಾದುದು. ಅವರ ಸೇವಾ ಕಾರ್ಯಗಳು ಮುಂದುವರೆಯಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ರೋಟರಿ ಅಂದರೆ ಸೇವೆ, ಅದು ನಾಯಕತ್ವದ ಜೊತೆಗೆ ಪ್ರೀತಿ ವಿಶ್ವಾಸ ನೀಡುತ್ತದೆ. ಶಿವಪ್ರಕಾಶ್ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಗೆಳೆತನದ ಮಹತ್ವ ಸಾರಿದ ಕಾರ್ಯಕ್ರಮವಿದು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಸಹಾಯಕ ಗವರ್ನರ್ ತೀರ್ಥಯ್ಯ, ಪಿ ಡಿ ಜಿ ಹೆಚ್ ಎಲ್ ರವಿ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ. ಜಗದೀಶ್, ಕದಂಬ ಕ್ಲಬ್ ನ ರೋ.ಕೆ.ಎಸ್. ರವಿ, ರೋ. ಮಧುಸೂದನ್, ಉದ್ಯಮಿ ಬೆನಕಪ್ಪ ಡಿ.ಜಿ., ಪಿಡಿಜಿ ದೇವಾನಂದ್, ರೋ.ಪ್ರೊ.ಎ.ಎಸ್. ಚಂದ್ರಶೇಖರ್, ಆನಂದಮೂರ್ತಿ, ಮಲೆನಾಡು ಕ್ಲಬ್ ಅಧ್ಯಕ್ಷೆ ರಶ್ಮಿ ಆರ್.ಎಸ್., ಕಾರ್ಯದರ್ಶಿ ಡಾ. ಸಿದ್ಧಲಿಂಗಮೂರ್ತಿ ಕೆ.ಎಸ್., ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಮೂರ್ತಿ ಎಂ ಆರ್, ಮಾತೆ ಶರಣಾಂಬಿಕೆ, ವೀಣಾ ಶಿವಪ್ರಕಾಶ್, ಶ್ರೀಮತಿ ತೇಜಸ್ವನಿ ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೋಟರಿಯ 10 ಮತ್ತು 11ರ ಘಟಕದ ಸದಸ್ಯರು, ಸಂಘ ಸಂಸ್ಥೆಗಳು ಮತ್ತು ಶಿವಪ್ರಕಾಶ್ ಕುಟುಂಬ ವರ್ಗದವರು ಹಾಜರಿದ್ದು, ಶುಭ ಹಾರೈಸಿದರು.
B.Y. Raghavendra ತಾಳಗುಂದ ಶಾಸನವೇ ಕನ್ನಡದ ಮೊದಲ ಶಾಸನ ಸಂಶೋಧಕರ ಇತ್ತೀಚಿನ ಮಾಹಿತಿ ಪ್ರಕಾರ ಹಲ್ಮಿಡಿ ಶಾಸನಕ್ಕಿಂತಲೂ ತಾಳಗುಂದ ಶಾಸನವೇ ಕನ್ನಡದ ಮೊದಲ ಶಾಸನವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಹಾಗಾಗಿ ತಾಳಗುಂದದ ಶಾಸನದ ಸಂರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಮಹತ್ವ ನೀಡಲಾಗುವುದು. ಇದರ ಜೊತೆಗೆ ಅಕ್ಕಮಹಾದೇವಿ ಕ್ಷೇತ್ರ ಉಡುತಡಿ ಸೇರಿದಂತೆ ಇಡೀ ಕ್ಷೇತ್ರವನ್ನು ಒಂದು ಸುಂದರ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು. ಹಾಗೆಯೇ ಅಡಿಕೆ ಬೆಳೆಗಾರರ ಬಗ್ಗೆ ಶೀಘ್ರವೇ ಕೇಂದ್ರ ಮತ್ತು ಮಹಾರಾಷ್ಟ್ರದ ಜತೆ ಸಭೆ ನಡೆಸಲಾಗುವುದು. ವಿಮಾನ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
