Monday, August 3, 2026
Monday, August 3, 2026
Home Blog Page 24

ಶಿವಮೊಗ್ಗ ಪ್ರದೇಶಕ್ಕಿಂತಲೂ ಅಧಿಕ ಹಸಿರಾಗಿರುವ ಬಿಡದಿಯಲ್ಲಿ ಟೌನ್ ಶಿಪ್ ಬೇಡ.ರೈತರಿಗೆ ಬಾಳಲು ಬಿಡಿ- ಹೆಚ್.ಆರ್ ಬಸವರಾಜಪ್ಪ

0

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಅನುಮತಿ ಹಾಗೂ ಸಮಾಲೋಚನೆ ಇಲ್ಲದೆ ಸರ್ಕಾರ ಮುಂದುವರಿಯುತ್ತಿರುವ ಕ್ರಮವನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಖಂಡಿಸಿದ್ದಾರೆ.

ಯೋಜನೆಗಾಗಿ ಪೊಲೀಸ್ ಬಲಪ್ರಯೋಗದ ಮೂಲಕ ಭೂಸರ್ವೆ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಇದು ಸರ್ಕಾರದ ಸರ್ವಾಧಿಕಾರಿ ಮನೋಭಾವದ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಭೂಸ್ವಾಧೀನದ ಪ್ರಶ್ನೆಯಲ್ಲ, ಸಾವಿರಾರು ರೈತ ಕುಟುಂಬಗಳ ಬದುಕು, ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆ ಹಾಗೂ ಪರಿಸರದ ಮೇಲೆ ನೇರ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು.

ಬಿಡದಿ ಭಾಗದ ರೈತರು ಅಧಿಕಾರಿಗಳ ಕಾಲಿಗೆ ಬಿದ್ದು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದರೂ, ಪೊಲೀಸರನ್ನು ಬಳಸಿ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಎಂದು ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಎಷ್ಟೇ ಪ್ರಚೋದನೆ ನೀಡಿದರೂ ರೈತರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಹೋರಾಟವನ್ನು ಗಟ್ಟಿಯಾಗಿ ಮುಂದುವರಿಸೋಣ. ಆದರೆ ಅದು ಸಂಪೂರ್ಣವಾಗಿ ಶಾಂತಿಯುತ ಹಾಗೂ ಸಂಯಮದ ಮಾರ್ಗದಲ್ಲೇ ಸಾಗಬೇಕು ಎಂದು ರೈತರಿಗೆ ಅವರು ಕರೆ ನೀಡಿದರು.

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದಿಂದ ಉದ್ಯಮಶೀಲತಾ ಮಾಹಿತಿ ತರಬೇತಿ ಶಿಬಿರ

0

ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವ ಶಿವಮೊಗ್ಗ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಗಾಗಿ ಜುಲೈ 18 ರಂದು ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

ಬೆಂಗಳೂರಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಧಾರವಾಡ ಮತ್ತು ಶಿವಮೊಗ್ಗದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಜುಲೈ 18 ರಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಜಿಲ್ಲಾ ಸಮಿತಿ, ಶೇಖ್ ಮಂಜಿಲ್, ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು, ಕಿಣಿ ಲೇಔಟ್, ಶಿವಮೊಗ್ಗ ಇಲ್ಲಿ ತರಬೇತಿ ನಡೆಯಲಿದ್ದು ಕನಿಷ್ಠ 18 ವರ್ಷದ ವಯಸ್ಸಾದ ಹಾಗೂ ಓದುವ/ಬರೆಯುವ ಜ್ಞಾನವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ಶಿಬಿರದಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವ ಆಸಕ್ತ ಮಹಿಳೆಯರಿಗೆ ವಿಶೇಷ ಪ್ರೇರೇಪಣೆ ನೀಡಲಾಗುವುದು. ಇದರೊಂದಿಗೆ ಸರ್ಕಾರ ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು ಮತ್ತು ಪ್ರೋತ್ಸಾಹ ಧನದ ಮಾಹಿತಿ,
ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಸುಧಾರಿತ ಉದ್ಯಮಶೀಲತಾಭಿವೃದ್ಧಿ ತರಬೇತಿಗಳ ವಿವರಗಳನ್ನು ನೀಡಲಾಗುವುದು.

ಶಿವಮೊಗ್ಗ ಜಿಲ್ಲೆಯ ಸ್ವಯಂ ಉದ್ಯೋಗಾಕಾಂಕ್ಷಿಗಳು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ ಕಛೇರಿ ವೇಳೆಯಲ್ಲಿ ಉಪ ನಿರ್ದೇಶಕರ ಕಛೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೇಕ್ಸ್, ನೆಹರು ರಸ್ತೆ, ಶಿವಮೊಗ್ಗ, ದೂರವಾಣಿ ಸಂಖ್ಯೆ: 9448812974
ಶಿವಾನಂದ ಎಲಿಗಾರ್ , ಉಪ ನಿರ್ದೇಶಕರು, ಸಿಡಾಕ್ : 9164811887,
ಅವಿನಾಶ್ ಎ. ,ತರಬೇತಿದಾರರು, ಸಿಡಾಕ್ ಇವರನ್ನು‌ ಸಂಪರ್ಕಿಸಬಹುದೆಂದು ಸಿಡಾಕ್ ಉಪನಿರ್ದೇಶಕರು ಕೋರಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಆದೇಶದನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಫಾರ್ಮಸಿ ಅಧಿಕಾರಿಗಳ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳ ಒಟ್ಟು 18 ಹುದ್ದೆಗಳಿದ್ದು, ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಡಿಪ್ಲೋಮಾ ಇನ್ ಲ್ಯಾಬೋರೇಟರಿ ತಾಂತ್ರಿಕ ವಿದ್ಯಾರ್ಹತೆ ಪಡೆದಿರಬೇಕು.

ಫಾರ್ಮಸಿ ಅಧಿಕಾರಿಗಳು : ಒಟ್ಟು 24 ಹುದ್ದೆಗಳಿದ್ದು, ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಡಿ.ಫಾರ್ಮಾ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಕರ್ನಾಟಕ ಫಾರ್ಮಸಿ ಕೌನ್ಸಿಲಿಂಗ್‌ನಲ್ಲಿ ನೋಂದಣಿಯಾಗಿರಬೇಕು.

ಅರ್ಹ ಅಭ್ಯರ್ಥಿಗಳು ದಿನಾಂಕ 16-07-2026 ರ ಬೆಳಿಗ್ಗೆ 10:30 ರಿಂದ ದಿನಾಂಕ 25-07-2026 ರ ಸಂಜೆ 5:30 ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಈ ಎರಡು ಹುದ್ದೆಗಳಿಗೆ ಸಂಬಂಧಪಟ್ಟ ಅರ್ಜಿ ನಮೂನೆಯನ್ನು ಕಚೇರಿ ಅವಧಿಯಲ್ಲಿ ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬಿ.ಹೆಚ್. ರಸ್ತೆ, ಶಿವಮೊಗ್ಗ’ ಇಲ್ಲಿ ಪಡೆದುಕೊಳ್ಳಲು ಸೂಚಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಕಚೇರಿ ವೇಳೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08182-222382 ಅಥವಾ ಇಮೇಲ್ ಐಡಿ: dhoshimoga@gmail.com ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
ತಿಳಿಸಿದ್ದಾರೆ.

ಇಂದು ಎಲ್ ಕೆ ಜಿ ಶಾಲೆಗೆ ಪ್ರವೇಶಾತಿ‌ ಪಡೆದ ಬಾಲಕ ಮರುದಿನವೇ ರಸ್ತೆ ಅಪಘಾದಲ್ಲಿ ಮರಣ

0

ಶಾಲೆಗೆ ಸೇರಿದ ಮರುದಿನವೇ ನಾಲ್ಕೂವರೆ ವರ್ಷದ ಎಲ್‌ಕೆಜಿ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ. ಶಾಲೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದ ನಿವಾಸಿ ನಸ್ರುಲ್ಲಾ ಅವರ ಪುತ್ರ, ನಾಲ್ಕೂವರೆ ವರ್ಷದ ಮೊಹಮ್ಮದ್ ಮುನಾವರ್ ತೈಫ್ ಮೃತಪಟ್ಟ ದುರ್ದೈವಿ ಬಾಲಕ. ಸೋಮವಾರವಷ್ಟೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್‌ಕೆಜಿ ತರಗತಿಗೆ ಸೇರಿಸಲಾಗಿದ್ದ ಮುನಾವರ್ ತೈಫ್, ಶಾಲೆಗೆ ಸೇರಿದ ಎರಡನೇ ದಿನವೇ ಅಪಘಾತಕ್ಕೆ ಬಲಿಯಾಗಿದ್ದಾನೆ.

ಮಂಗಳವಾರ ಶಾಲೆಯ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮುನಾವರ್ ತೈಫ್ ಕೊನೆಯುಸಿರೆಳೆದಿದ್ದಾನೆ.

ಘಟನೆಯಿಂದ ದೊಣಬಘಟ್ಟ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಂಜಾರ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ: ಅರ್ಜಿಗಳ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ (ರಿ.) ನೇತೃತ್ವದಲ್ಲಿ, ರಾಯ್ ಸೀನಾ ಫೌಂಡೇಶನ್ ಗೋರಸಿಕವಾಡಿ, ಗೋರ್‌ಭಾಯಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಶಿವಮೊಗ್ಗ ಹಾಗೂ ತಾಲ್ಲೂಕು ಬಂಜಾರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ, 2025–26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಂಕಪಟ್ಟಿಯ ನಕಲು, ಜಾತಿ ಪ್ರಮಾಣ ಪತ್ರ, ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್‌ನ ನಕಲು ಪ್ರತಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 22, 2026 ಆಗಿದ್ದು, ಅರ್ಜಿಗಳನ್ನು ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ (ರಿ.), ಬಂಜಾರ ಕನ್ವೆನ್ಷನ್ ಹಾಲ್, ಬಾಲರಾಜ ಅರಸ್ ರಸ್ತೆ, ಕೋರ್ಟ್ ಮುಂಭಾಗ, ಶಿವಮೊಗ್ಗ ವಿಳಾಸಕ್ಕೆ ಸಲ್ಲಿಸುವಂತೆ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ವೈದ್ಯರ ಸೇವೆಯನ್ನ ನಾವು ಗೌರವಿಸಬೇಕು : ವಾಗ್ದೇವಿ ಬಸವರಾಜ್

0

ವೈದ್ಯರ ಸೇವೆ ತುಂಬಾ ಪವಿತ್ರವಾದದ್ದು ಹಾಗೂ ಅವಿಸ್ಮರಣೀಯ ಸಕಾಲದಲ್ಲಿ ಚಿಕಿತ್ಸೆ ಸಿಗದೆ , ಸಾಕಷ್ಟು ಜನ ಸಾವನ್ನಪ್ಪುವ ಪ್ರಕರಣಗಳನ್ನು ನಾವು ನೋಡುತ್ತಾ ಬಂದಿದ್ದೇವೆ ಎಂದ ಅವರು ವೈದ್ಯರ ಸೇವೆಯನ್ನು ನಾವು ಗೌರವಿಸಬೇಕು ಎಂದು ಕದಳಿ ವನಿತಾ ಸಮಾಜದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾದ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು ಶಿವಮೊಗ್ಗ ನಗರದಲ್ಲಿ ಸಾಕಷ್ಟು ಜನ ವೈದ್ಯರು ತಮ್ಮ ವೃತ್ತಿಯೊಂದಿಗೆ ಸಮಾಜ ಮುಖಿ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವೈದ್ಯರುಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಮ್ಮ ಕದಳಿ ವನಿತಾ ಸಮಾಜ ಮಾಡುತ್ತಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಹೃದಯ ತಜ್ಞರಾದ ಡಾಕ್ಟರ್ ವಿಜೇತ. ಲ್ಯಾಪ್ರೋಸ್ಕೋಪಿಕ್ ತಜ್ಞರಾದ ಡಾಕ್ಟರ್ ವಿವೇಕ. ಚರ್ಮರೋಗ ತಜ್ಞರಾದ ಡಾಕ್ಟರ್ ಶೃತಿ. ಮಕ್ಕಳ ತಜ್ಞರಾದ ಡಾಕ್ಟರ್ ವಿಶ್ವನಾಥ್
ಡಾಕ್ಟರ್ ಮೇಘನಾ. ಡಾಕ್ಟರ್ ರಕ್ಷಾ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ತ್ರಿವೇಣಿ ಗುರು ಶಾಂತಪ್ಪ. ಕಾರ್ಯದರ್ಶಿ ಗೀತಾ ಬಸವರಾಜ್.. ಖಜಾಂಚಿ ಲಲಿತಾ ಬಸವನಗೌಡ . ಗಾಯತ್ರಿ ಮೃತ್ಯುಂಜಯ. ಅನುಸೂಯ ಗಂಗಾಧರ್. ಸಚಿತಾ ಪ್ರಸಾದ್ ವಿಜಯ ಜವಳಿ. ಅನ್ನಪೂರ್ಣ ಹಾಲೇಶ್ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

ಕಡಿಮೆ ಮಳೆ ಪರ್ಯಾಯ ಬೆಳೆ ಹಾಗೂ ಕೃಷಿಪದ್ಧತಿ ಅಳವಡಿಕೆಗೆ ಕೃಷಿ ಇಲಾಖೆ ಪ್ರಕಟಣೆ

0

ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸಕಾಲದಲ್ಲಿ ಮಳೆ ಬಾರದೇ ಇರುವುದರಿಂದ ರೈತರು ಎದುರಿಸುತ್ತಿರುವ ಸಮಸ್ಯೆಗೆ ಕೃಷಿ ಇಲಾಖೆ ಸೂಕ್ತ ಪರ್ಯಾಯ ಮಾರ್ಗೋಪಾಯಗಳನ್ನು ಪ್ರಕಟಿಸಿದೆ. ರೈತರು ತಮ್ಮ ಹಿತದೃಷ್ಟಿಯಿಂದ ಕೆಳಕಂಡ ಕೃಷಿ ಪದ್ಧತಿಗಳು ಹಾಗೂ ಪರ್ಯಾಯ ಬೆಳೆಗಳನ್ನು ಅನುಸರಿಸುವಂತೆ ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.
ಬೀಜೋಪಚಾರ ಮತ್ತು ಅಂತರ ಬೆಳೆ: ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡುವ ರೈತರು, ಪ್ರತಿ 8 ಸಾಲು ಮೆಕ್ಕೆಜೋಳದ ಜೊತೆಗೆ 2 ಸಾಲು ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಹೆಸರು ಅಥವಾ ಉದ್ದು ಬೆಳೆಗಳನ್ನು ಅಂತರ ಬೆಳೆಯಾಗಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುನ್ನ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ ಮೆಟಾಲಾಕ್ಸಿಲ್ ಎಂ.ಝಡ್. ಮತ್ತು 5 ಎಂ.ಎಲ್. ಕ್ಲೋರೋಪೈರಿಫಾಸ್ ಬೆರೆಸಿ ಬೀಜೋಪಚಾರ ಮಾಡುವುದು ಕಡ್ಡಾಯವಾಗಿದೆ.
ರಸಗೊಬ್ಬರ ನಿರ್ವಹಣೆ: ಈಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಮಣ್ಣಿನಲ್ಲಿ ತೇವಾಂಶ ಕಡಿಮೆ ಇದ್ದಲ್ಲಿ ಹರಳು ರೂಪದ ಗೊಬ್ಬರವನ್ನು ಬಳಸಬಾರದು. ಬದಲಾಗಿ, ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು (ಪ್ರತಿ ಲೀಟರ್ ನೀರಿಗೆ 5 ಗ್ರಾಂ) ಬೆರೆಸಿ, ಬಿತ್ತನೆಯಾದ 25ನೇ ದಿನ ಹಾಗೂ 45ನೇ ದಿನದಂದು ಸಿಂಪಡಿಸಬೇಕು.
ತೇವಾಂಶ ಸಂರಕ್ಷಣೆ: ಹೊಲದಲ್ಲಿ ಎರಡು ಸಾಲುಗಳ ಮಧ್ಯೆ ಎಡೆಕುಂಟೆ ಹಾಯಿಸುವುದರಿಂದ ಕಳೆಗಳನ್ನು ನಿಯಂತ್ರಿಸುವುದರ ಜೊತೆಗೆ, ಮಣ್ಣಿನಿಂದ ನೀರು ಆವಿಯಾಗುವುದನ್ನು ತಡೆದು ತೇವಾಂಶವನ್ನು ಕಾಯ್ದುಕೊಳ್ಳಬಹುದು.
ಭತ್ತದ ಬೇಸಾಯ: ತಗ್ಗು ಪ್ರದೇಶ ಹಾಗೂ ನೀರಿನ ಲಭ್ಯತೆ ಇರುವ ಕಡೆಗಳಲ್ಲಿ ಮಧ್ಯಮಾವಧಿ ಭತ್ತದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ನಾಟಿ ಪದ್ಧತಿಯ ಬದಲಾಗಿ ‘ಡ್ರಂಸೀಡರ್’ ಬಳಸಿ ಬಿತ್ತನೆ ಮಾಡುವುದು ಸೂಕ್ತ.
ಜುಲೈ ಕೊನೆಯ ವಾರದ ಪರ್ಯಾಯ: ಒಂದು ವೇಳೆ ಮುಂಗಾರು ಮಳೆ ಜುಲೈ ನಾಲ್ಕನೇ ವಾರದವರೆಗೂ ತಡವಾದರೆ, ರೈತರು ರಾಗಿ ಹಾಗೂ ದ್ವಿದಳ ಧಾನ್ಯದ ಬೆಳೆಗಳನ್ನು ಬಿತ್ತನೆ ಮಾಡಲು ಆದ್ಯತೆ ನೀಡಬೇಕು.
ಗಮನಿಸಿ: ಬಿತ್ತನೆ ಅಥವಾ ನಾಟಿ ಮಾಡುವ ಮುನ್ನ ಭೂಮಿಯ ತೇವಾಂಶ ಹಾಗೂ ನೀರಿನ ಲಭ್ಯತೆಯನ್ನು ಖಾತರಿ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ಮಾರ್ಗದರ್ಶನಕ್ಕಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಮತದಾನ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರ. ಅದರ ಮಹತ್ವವನ್ನ ನಾವು ಅರಿಯಬೇಕು- ಎನ್.ಹೇಮಂತ್

0

ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಎನ್ ಜುಲೈ 14ರಂದು ಸಾಗರ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ವಿವಿಧ ಪ್ರಗತಿ ಪರಿಶೀಲನೆ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಕೋಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಸ್ ಐ ಆರ್ ಪ್ರಗತಿ ಪರಿಶೀಲನೆ‌ ಕುರಿತು ಸಮಗ್ರ ಪರಿಶೀಲನೆ ನಡೆಸಿದ ಸಿಇಒ ಅವರು, ನಂತರ ಬಿ.ಎಲ್.ಒ ಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಮತದಾರರನ್ನು ಭೇಟಿಯಾಗಿ, ಅವರಿಗೆ ಎಸ್ ಐ ಆರ್ ಹಾಗೂ ಮತದಾನದ ಪ್ರಕ್ರಿಯೆಗಳ ಕುರಿತು ಸವಿಸ್ತಾರವಾದ ಮಾಹಿತಿ ಮತ್ತು ಜಾಗೃತಿ ಮೂಡಿಸಿದರು.
ಹಸಿರುಮಕ್ಕಿ ಲಾಂಚ್‌ನಲ್ಲಿ ‘ಸ್ವೀಪ್’ ಸಂಭ್ರಮ
ಇದಾದ ಬಳಿಕ, ತಾಲ್ಲೂಕಿನ ಪ್ರಸಿದ್ಧ ಹಸಿರುಮಕ್ಕಿ ಲಾಂಚ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವೀಪ್ (SVEEP – ಮತದಾರರ ಶಿಕ್ಷಣ ಮತ್ತು ಚುನಾವಣಾ ಸಹಭಾಗಿತ್ವ) ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿ, ಮತದಾನದ ಮಹತ್ವದ ಕುರಿತು ನೆರೆದಿದ್ದ ಸಾರ್ವಜನಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಪಂಚಾಯತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್ ಮತ್ತು ಗ್ರಾಮೀಣ ಉದ್ಯೋಗ), ಕೋಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ರಾಜ್ಯದಲ್ಲಿನ ಬರಗಾಲ ಅಧ್ಯಯನಕ್ಕೆ ತಂಡ ನಿಯೋಜಿಸಲು ಕೇಂದ್ರಕ್ಕೆ ಮುಖ್ಯಮಂತ್ರಿಗಳಿಂದ ಪತ್ರ

0

ಕರ್ನಾಟಕದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ ಉದ್ಭವಿಸಿರುವ ತೀವ್ರ ಬರ ಪರಿಸ್ಥಿತಿಯನ್ನು ಮನಗಂಡು, ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದು, ಮುಂಗಾರು ಬಿತ್ತನೆ ವಿಳಂಬವಾಗಿರುವುದು ಹಾಗೂ ಕೃಷಿ ಮತ್ತು ಕುಡಿಯುವ ನೀರಿನ ಭದ್ರತೆಯ ಮೇಲಾಗುತ್ತಿರುವ ಗಂಭೀರ ಪರಿಣಾಮಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೂಡಲೇ ಕೇಂದ್ರದ ಅಧ್ಯಯನ ತಂಡವನ್ನು ನಿಯೋಜಿಸಬೇಕು ಹಾಗೂ ರಾಜ್ಯಕ್ಕೆ ತುರ್ತು ಪರಿಹಾರ ನೆರವು ನೀಡಬೇಕು ಎಂದು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ವಿನಂತಿಸಿದ್ದಾರೆ.

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ರೈತರ ಹಿತರಕ್ಷಿಸಲು, ಜಲಮೂಲಗಳನ್ನು ಸಂರಕ್ಷಿಸಲು ಹಾಗೂ ಸಾರ್ವಜನಿಕರ ಸಂಕಷ್ಟವನ್ನು ತಗ್ಗಿಸಲು ಕರ್ನಾಟಕ ಸರ್ಕಾರವು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ವಲಯ ಮೀನುಗಾರಿಕೆ ಯೋಜನೆಗಳಡಿ ವಿವಿಧ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿಗಳ ಆಹ್ವಾನ

0

2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿಯ ವಿವಿಧ ಮೀನುಗಾರಿಕೆ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಶಿವಮೊಗ್ಗ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮೀನುಗಾರಿಕೆ ಸಲಕರಣೆ ಕಿಟ್/ಫೈಬರ್ ಗ್ಲಾಸ್ ಹರಿಗೋಲು ಖರೀದಿ ಯೋಜನೆಯಡಿ ರೂ. 10,000/- ಮೌಲ್ಯದ ಮೀನುಗಾರಿಕೆ ಸಲಕರಣೆ ಕಿಟ್ ಅಥವಾ ಫೈಬರ್ ಗ್ಲಾಸ್ ಹರಿಗೋಲು ಖರೀದಿಗೆ ನೆರವು ನೀಡಲಾಗುವುದು. ಕಳೆದ 3 ವರ್ಷಗಳಲ್ಲಿ ಈ ಕಿಟ್ ಯೋಜನೆಯಡಿ ಸೌಲಭ್ಯ ಪಡೆದಿರಬಾರದು ಹಾಗೂ ಒಬ್ಬರಿಗೆ ಒಮ್ಮೆ ಮಾತ್ರ ಫೈಬರ್ ಗ್ಲಾಸ್ ಹರಿಗೋಲು ವಿತರಿಸಲಾಗುವುದು.‌
ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿಗೆ ಸಹಾಯಧನ ಯೋಜನೆಯಡಿ ಮೀನು ಮಾರಾಟ ಮತ್ತು ಸಾಗಣೆಗೆ ನೆರವಾಗುವಂತೆ ದ್ವಿಚಕ್ರ ವಾಹನ ಹಾಗೂ ಐಸ್ ಬಾಕ್ಸ್ ಖರೀದಿಸಲು ಸಹಾಯಧನ ನೀಡಲಾಗುವುದು. ಈ ಹಿಂದೆ ಈ ಯೋಜನೆಯಡಿ ಸೌಲಭ್ಯ ಪಡೆದವರು ಅರ್ಹರಾಗಿರುವುದಿಲ್ಲ.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಪಂಚಾಯತ್ ಯೋಜನೆಗಳ ಅಧಿಕೃತ ಪೋರ್ಟಲ್ https://shimoga.nic.in ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 16-07-2026,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-08-2026 ಆಗಿರುತ್ಅಥವಾ

ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ ಶಿವಮೊಗ್ಗ-9986040981, ಭದ್ರಾವತಿ-9743370815, ಶಿಕಾರಿಪುರ- 9686939028, ಸಾಗರ -9538044365, ಸೊರಬ -9535386449, ತೀರ್ಥಹಳ್ಳಿ- 8655132438 ಇವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.