Azim Premji Foundation ಅಜೀಂ ಪ್ರೇಂ ಜೀ ಫೌಂಡೇಶನ್ನವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದು ಪದವಿ ಮೊದಲನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯನ್ನು ಸರ್ಕಾರಿ ಶಾಲೆಯಲ್ಲಿ ಓದಿ ಪ್ರಸ್ತುತ ಪದವಿಯನ್ನು ಖಾಸಗಿ ಅಥವಾ ಸರ್ಕಾರಿ ಯಾವುದಾದರೂ ಕಾಲೇಜಿನಲ್ಲಿ ಓದುತ್ತಿರುವಂತಹ ಪದವಿ ಮೊದಲನೇ ವರ್ಷದ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಜ.31 ಕಡೆಯ ದಿನವಾಗಿದ್ದು, ಅರ್ಜಿ ಸಲ್ಲಿಕೆ ವಿಧಾನ, ಇತರೆ ಹೆಚ್ಚಿನ ಮಾಹಿತಿಗಾಗಿ ಈ https://www.youtube.com/watch?v=dR0q9nozo-4, https://www.youtube.com/@azimpremjischolarship ಯೂಟ್ಯೂಬ್ ಲಿಂಕನ್ನು ಸಂಪರ್ಕಿಸಬಹುದೆಂದು ಜಿ.ಪಂ.ಸಿಇಓ ಎನ್ ಹೇಮಂತ್ ತಿಳಿಸಿದ್ದಾರೆ.
Azim Premji Foundation ಪದವಿ ಮೊದಲ ವರ್ಷದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಆಹ್ವಾನ
Dinesh Gundu Rao ನರಮಂಡಲ ಕಾಯಿಲೆ “ಗಿಲೆನ್ ಬಾರಿ” ಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ- ಸಚಿವ ದಿನೇಶ್ ಗುಂಡೂರಾವ್.
Dinesh Gundu Rao ರಾಜ್ಯದಲ್ಲಿ ಗಿಲೆನ್-ಬಾರಿ ಸಿಂಡ್ರೋಮ್ (GBS) ಎಂಬ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗಲು ನಮ್ಮ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಕಾಯಿಲೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವೂ ಮತ್ತು ದುಬಾರಿಯೂ ಆದ ‘ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ (IVIG) ಚಿಕಿತ್ಸೆಯನ್ನು ಈಗ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ (AB PMJAY-CM’s ArK) ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನೂತನ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅದರಂತೆ,
- ದುಬಾರಿ ಚಿಕಿತ್ಸೆಗೆ ಸರ್ಕಾರಿ ಸವಲತ್ತು: ಈ ಹಿಂದೆ ಜಿ.ಬಿ.ಎಸ್ ಕಾಯಿಲೆಗೆ ನೀಡಲಾಗುತ್ತಿದ್ದ ಮೂಲ ಚಿಕಿತ್ಸೆಯ ಜೊತೆಗೆ, ಈಗ ಅತ್ಯಗತ್ಯವಾದ IVIG ಥೆರಪಿಯನ್ನೂ ಯೋಜನೆಯಡಿ ತರಲಾಗಿದೆ. ಇದಕ್ಕಾಗಿ ವಿಶೇಷ ಪ್ರೊಸೀಜರ್ ಕೋಡ್ಗಳನ್ನು (2B.M1.00061D ಮತ್ತು 2B.M1.00061E) ನಿಗದಿಪಡಿಸಲಾಗಿದೆ.
- ಚಿಕಿತ್ಸಾ ವೆಚ್ಚ ಮತ್ತು ಮಿತಿ: ಪ್ರತಿ ರೋಗಿಗೆ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಈ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಔಷಧಿಯ ದರವನ್ನು ಪ್ರತಿ ಗ್ರಾಂಗೆ 2,000 ರೂಪಾಯಿಗಳಂತೆ ನಿಗದಿಪಡಿಸಲಾಗಿದ್ದು, ರೋಗಿಯ ತೂಕದ ಆಧಾರದ ಮೇಲೆ ಡೋಸೇಜ್ ನೀಡಲು ಸೂಚಿಸಲಾಗಿದೆ.
- ಪಾರದರ್ಶಕತೆಗೆ ಆದ್ಯತೆ: ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆಸ್ಪತ್ರೆಗಳು ಚಿಕಿತ್ಸೆ ನೀಡುವಾಗ ಔಷಧದ ಬಾಟಲಿ (Vial), ಅದರ ಬ್ಯಾಚ್ ಸಂಖ್ಯೆ, ರೋಗಿಯ ಹೆಸರಿರುವ ಫೋಟೋ ಹಾಗೂ ವೈದ್ಯರು ದೃಢೀಕರಿಸಿದ ಡೋಸೇಜ್ ಪಟ್ಟಿಯನ್ನು ಕಡ್ಡಾಯವಾಗಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕೆಂದು ಸೂಚಿಸಲಾಗಿದೆ.
- ಎಲ್ಲಾ ಆಸ್ಪತ್ರೆಗಳಿಗೆ ಅನ್ವಯ: ಈ ಸೌಲಭ್ಯವು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಯೋಜನೆಯಡಿ ನೋಂದಾಯಿತವಾಗಿರುವ (Empanelled) ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರಲಿದೆ.
ಬಡ ಮತ್ತು ಸಾಮಾನ್ಯ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು, ನರರೋಗಕ್ಕೆ ಸಂಬಂಧಿಸಿದ ಈ ಕಠಿಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವುದರಿಂದ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ.
Dinesh Gundu Rao ಬಡ ಮತ್ತು ಸಾಮಾನ್ಯ ವರ್ಗದ ರೋಗಿಗಳಿಗೆ ಸಾವಿರಾರು ರೂಪಾಯಿ ವೆಚ್ಚದ ಈ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ಅವರ ಬದುಕಿಗೆ ಆಸರೆಯಾಗುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ.
Klive Special Article ಲೇಖನಮಾಲೆ: ಶ್ರೀಮದ್ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ
ಲೇ : ಡಾ.ರಾಮಕೃಷ್ಣ ಮುದ್ದೇಪಾಲ
ಭಾಗ – 1
ಅಪರಾಧ ,ಪರಿಕಲ್ಪನೆ
ಭಗವದ್ಗೀತೆ ಭಾರತೀಯರಿಗೆ ಪವಿತ್ರ ಗ್ರಂಥ. ಅದರಲ್ಲಿನ ಸಂದೇಶಗಳು ಪ್ರಸ್ತುತವಾಗಿರುವ ಬಗ್ಗೆ ವಿದ್ವಾಂಸರು ತಮ್ಮ ಪ್ರವಚನ, ಬರವಣಿಗೆ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇಂಥದೊಂದು ಪ್ರಯತ್ನವನ್ನ ಸೋಂದಾ – ಸ್ವರ್ಣವಲ್ಲಿ ಮಹಾಸಂಸ್ಥಾನದ ಪೂಜ್ಯ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು
ಶಿವಮೊಗ್ಗ ಜಿಲ್ಲೆಯಲ್ಲಿ ಕೈಗೊಂಡಿದ್ದರು.
ಭಗವದ್ಗೀತಾ ಅಭಿಯಾನದ ವಿಶೇಷವಾಗಿ ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರವಾಗಿ ವಿಚಾರ ಸಂಕಿರಣವನ್ನ ಕುವೆಂಪು ವಿವಿಯಲ್ಲಿ ಏರ್ಪಡಿಸಲಾಗಿತ್ತು.
ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಾಮಕೃಷ್ಣ ಮುದ್ದೇಪಾಲ ಅವರು
ಅಪರಾಧ ನಿಯಂತ್ರಣದಲ್ಲಿ ಭಗವದ್ಗೀತೆಯ ಅಂಶಗಳು ಹೇಗೆ ಸಹಕಾರಿ ಎಂಬುದನ್ನ ಸೋದಾಹರಣ ಪ್ರಸ್ತುತಪಡಿಸಿದರು.
ಉಪನ್ಯಾಸ ಮಾಲಿಕೆಯಲ್ಲಿ ನಾಲ್ಕು ಭಾಗಗಳಿವೆ. ಮೊದಲ ಭಾಗ ಇಲ್ಲಿದೆ.
Klive Special Article ಅಪರಾಧಶಾಸ್ತ್ರದ ದೃಷ್ಟಿಯಿಂದ ಭಗವದ್ಗೀತೆಯನ್ನು ಅಪರಾಧ ನಿಯಂತ್ರಣಕ್ಕೆ ಹೇಗೆ ಉಪಯೋಗಿಸಬಹುದು?
“ಅಪರಾಧ” ಎನ್ನುವ ಪರಿಕಲ್ಪನೆ ಮಾನವ ನಾಗರಿಕತೆಯಷ್ಟೇ ಪುರಾತನವಾದುದು. ನಮ್ಮ ಸ್ಮೃತಿಕಾರರು ವಿವಿಧ ರೀತಿಯ ಅಪರಾಧಗಳನ್ನು ಮತ್ತು ಅವುಗಳಿಗೆ ವಿಧಿಸಬಹುದಾದ ಶಿಕ್ಷೆಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಆಧುನಿಕ ಅಪರಾಧಶಾಸ್ತ್ರವು 19ನೇ ಶತಮಾನದಿಂದೀಚೆಗೆ ಬೆಳೆದು ಬಂದಿರುತ್ತದೆ. ಅಪರಾಧಶಾಸ್ತ್ರವನ್ನು ಸಮಾಜಶಾಸ್ತ್ರದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅಪರಾಧಶಾಸ್ತ್ರವು ಮಾನವನ ಅಪರಾಧ ವರ್ತನೆಯ ವೈಜ್ಞಾನಿಕ ಅಧ್ಯಯನವಾಗಿದ್ದರೂ ಕೂಡ ಅದು ಸ್ವತಃ ವಿಜ್ಞಾನವಲ್ಲ. ಯಾಕೆಂದರೆ ಅದು ಸಂಕೀರ್ಣ ಮತ್ತು ಸಾಪೇಕ್ಷ ವಿಷಯವಾಗಿದ್ದು ದೇಶ ಮತ್ತು ಕಾಲಮಿತಿಗೆ ಒಳಪಟ್ಟಿದೆ. ಅಪರಾಧಶಾಸ್ತ್ರವು ಸಮಾಜಶಾಸ್ತ್ರ, ಮನಃಶಾಸ್ತ್ರ, ಮಾನವ ಶಾಸ್ತ್ರ, ಕಾನೂನು, ಶಿಕ್ಷಾಶಾಸ್ತ್ರ, ಅಪರಾಧ ಸಂತ್ರಸ್ತಶಾಸ್ತ್ರ ಮತ್ತು ವಿಧಿವಿಜ್ಞಾನ ಈ ವಿಷಯಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು ಅದು ಅಪರಾಧಗಳ ಕಾರಣ, ನಿಗ್ರಹ ಮತ್ತು ಪರಿಹಾರವನ್ನು ಒಳಗೊಂಡಿರುತ್ತದೆ. ಅಪರಾಧಶಾಸ್ತ್ರ ಮತ್ತು ಅಪರಾಧಕ್ಕೆ ಹಲವಾರು ವ್ಯಾಖ್ಯೆಗಳನ್ನು ಕೊಟ್ಟಿದ್ದರೂ ಸಹ ಅವೆಲ್ಲವೂ ಅಪೂರ್ಣವಾಗಿವೆ ಕಾರಣ, ಅಪರಾಧಕ್ಕಿರುವ ಸಂಕೀರ್ಣತೆ ಮತ್ತು ಸಾಪೇಕ್ಷತೆ. ಆಧುನಿಕ ಮನುಷ್ಯನ ಜೀವನ ಸಂಕೀರ್ಣವಾದ ಹಾಗೆ ಅಪರಾಧಗಳು ಸಂಕೀರ್ಣವಾಗುತ್ತಿವೆ.
Klive Special Article ಅಪರಾಧಶಾಸ್ತ್ರದ ಪ್ರಕಾರ ಅಪರಾಧ ಒಂದು ಸಮಾಜವಿರೋಧಿ ಕೃತ್ಯ. ಯಾವುದೇ ಕೃತ್ಯವು ಸರ್ಕಾರದಿಂದ ಕಾನೂನುಬಾಹಿರವೆಂದು ಪರಿಗಣಿಸಲ್ಪಟ್ಟು ಅದಕ್ಕೆ ಶಿಕ್ಷೆ ವಿಧಿಸಲ್ಪಟ್ಟಿದ್ದರೆ ಆ ಕೃತ್ಯವನ್ನು ಅಪರಾಧವೆಂದು ಪರಿಗಣಿಸಬಹುದು. ಯಾವುದೇ ಕೃತ್ಯವು ಅಪರಾಧವೆಂದೆನಿಸಲು ಆ ಕೃತ್ಯದ ಹಿಂದೆ ಅಪರಾಧೀ ಮನಸ್ಸಿರಬೇಕು. ಅಪರಾಧವೆಸಗುವ ಮನಸ್ಸು, ಯೋಚನೆ ಅಥವಾ ಯೋಜನೆಯಿಲ್ಲದಿದ್ದರೆ ಆ ಕೃತ್ಯವನ್ನು ” ಸಾಮಾನ್ಯ ಅಪವಾದ ” ವೆಂದು ಪರಿಗಣಿಸಿ ಕಾನೂನಿನಲ್ಲಿ ಯಾವುದೇ ಶಿಕ್ಷೆಯನ್ನು ವಿಧಿಸಲಾಗುವುದಿಲ್ಲ. ಅಂದರೆ ಅಪರಾಧಿಗೆ ಕರ್ತೃತ್ವದ ಭಾವವಿರುತ್ತದೆ ಮತ್ತು ಅಪರಾಧದ ಉದ್ದೇಶ ಮುಖ್ಯವಾಗುತ್ತದೆ. ಕರ್ಮಫಲದ ಕುರಿತು ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮಾತು ಗಮನಾರ್ಹ.
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇI
ಹತ್ವಾsಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇII18.17II
ಯಾವನಿಗೆ ನಾನು ʼಕರ್ತೃʼ ಎಂಬ ಭಾವವಿರುವುದಿಲ್ಲವೋ, ಯಾವನ ಬುದ್ಧಿಯು ಲಿಪ್ತವಾಗುವುದಿಲ್ಲವೋ ಅಂಥವನು ಈ ಲೋಕಗಳನ್ನು ಕೊಂದರೂ ಕೊಲ್ಲುವುದಿಲ್ಲ, ಬಂಧಿಸಲ್ಪಡುವುದಿಲ್ಲ.
ʼಅಪರಾಧʼ ಕಾನೂನಿನ ವಿಷಯವಾದರೆ ʼಪಾಪʼವನ್ನು ನೈತಿಕ ಮತ್ತು ಧಾರ್ಮಿಕ ನೆಲೆಯಲ್ಲಿ ನೋಡಬೇಕಾಗುತ್ತದೆ. ಉದಾಹರಣೆಗೆ ಸುಳ್ಳು ಹೇಳುವುದು ನೈತಿಕ ದೃಷ್ಟಿಯಿಂದ ಪಾಪವಾದರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧವೆನಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲ ಅಪರಾಧಗಳು ಪಾಪಕೃತ್ಯಗಳಾಗುತ್ತವೆ. ಆದರೆ ಎಲ್ಲ ಪಾಪಕೃತ್ಯಗಳು ಅಪರಾಧಗಳಾಗುವುದಿಲ್ಲ.
ಕೇವಲ ಮಾನಸಿಕ ಕ್ರಿಯೆ ಪಾಪವಾಗಬಹುದು ಆದರೆ ಅಪರಾಧವಾಗುವುದಿಲ್ಲ.
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್I
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇII3.6II
ಯಾವನು ಕರ್ಮೇಂದ್ರಿಯಗಳನ್ನು ನಿಗ್ರಹಿಸಿ ಇಂದ್ರಿಯವಿಷಯಗಳನ್ನು ಮನಸ್ಸಿನಿಂದ ಸ್ಮರಿಸುತ್ತಿರುವನೋ ಅವನು ವಿಮೂಢಾತ್ಮನೆಂದೂ ಮಿಥ್ಯಾಚಾರನೆಂದೂ ಹೇಳಲ್ಪಡುತ್ತಾನೆ.
ಅಪರಾಧ ಮತ್ತು ಪಾಪ ಇವೆರಡೂ ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವುದನ್ನು ಗಮನಿಸಬಹುದು.
DC Shivamogga ಯೋಜನೆ ಸಿದ್ಧಪಡಿಸುವ ಮುನ್ನ ಜನರ ಶಿಕ್ಷಣ, ಪರಿಸರ, ಆರೋಗ್ಯ ಮತ್ತಿತರ ಲಭ್ಯವಿರುವ ದತ್ತಾಂಶಗಳನ್ನ ಅವಲೋಕಿಸಿ- ಪ್ರಭುಲಿಂಗ ಕವಳಿಕಟ್ಟಿ
DC Shivamogga ಭೌತಿಕ ಪ್ರಗತಿ ಮಾತ್ರವೇ ದೇಶದ ಪ್ರಗತಿ ಎನ್ನಲಾಗುವುದಿಲ್ಲ. ಶಿಕ್ಷಣ, ಆರೋಗ್ಯ, ಪರಿಸರ, ಸಾರ್ವಜನಿಕರ ಸಹಭಾಗಿತ್ವ ಇಂತಹ ಹತ್ತುಹಲವು ಮಹತ್ವದ ಸಂಗತಿಗಳು, ಸಮಸ್ಯೆ-ಸವಾಲುಗಳು ಹಾಗೂ ಪರಿಹಾರ ಕ್ರಮಗಳನ್ನು ಸ್ಥಳೀಯವಾಗಿ ಕ್ರೋಢೀಕರಿಸಿ, ಅದಕ್ಕೆ ಪೂರಕವಾಗಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದಲ್ಲಿ ಇದರ ವರದಿಯ ಆಧಾರದ ಮೇಲೆ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮಾನವ ಅಭಿವೃದ್ಧಿ-2025ರ ವರದಿ ಮತ್ತು ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ತಯಾರಿಕೆ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯದ ಪ್ರತಿ ಜಿಲ್ಲೆಗಳ ಅಭಿವೃದ್ಧಿ ಸೂಚ್ಯಂಕದಲ್ಲಿ ಸಾಮಾನ್ಯದಿಂದ ತೀವ್ರಪ್ರಮಾಣದ ಅಸಮತೋಲನವಿದೆ. ಕೆಲವು ಜಿಲ್ಲೆಗಳು ಸರಾಸರಿಗಿಂತ ಮುಂಚೂಣಿಯಲ್ಲಿದ್ದರೆ ಇನ್ನೂ ಕೆಲವು ಜಿಲ್ಲೆಗಳು ಹಿಂದುಳಿದಿವೆ. ಈ ಅಸಮತೋಲನವನ್ನು ಸರಿಪಡಿಸುವಲ್ಲಿ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಿದಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಹಾಗೂ ವಾರ್ಷಿಕ ಆಯವ್ಯಯದಲ್ಲಿ ಸೇರ್ಪಡೆಗೊಳಿಸಿ ರಾಜ್ಯದ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದರು. ಈ ಯೋಜನೆಗಳನ್ನು ಸಿದ್ಧಪಡಿಸುವ ಮುನ್ನ, ಅಲ್ಲಿನ ಜನರ ಶಿಕ್ಷಣ, ಪರಿಸರ, ಆರೋಗ್ಯ, ನೈರ್ಮಲ್ಯ ಮತ್ತಿತರ ಅಗತ್ಯಗಳನ್ನು ಗುರುತಿಸುವುದರ ಜೊತೆಗೆ ಸ್ಥಳೀಯವಾಗಿರುವ ವಿವಿಧ ಇಲಾಖೆಗಳ ಇರಬಹುದಾದ ಚರಂಡಿ, ಬೀದಿದೀಪ ಮತ್ತಿತರ ಕೋರಿಕೆ ಮತ್ತು ಅಗತ್ಯ ಬೇಡಿಕೆಗಳನ್ನು ಕ್ರೋಡೀಕರಿಸಿ, ವರದಿ ಸಿದ್ಧಪಡಿಸಬೇಕಾಗುವುದು. ಅಲ್ಲದೇ ಕಳೆದ ದಶಕಗಳಿಂದೀಚೆಗೆ ಇಲಾಖಾ ಪ್ರಗತಿಯ ದತ್ತಾಂಶಗಳನ್ನು ಅವಲೋಕಿಸಿ, ಸಾಧಕ-ಬಾದಕಗಳನ್ನು ಪರಿಶೀಲಿಸಿ, ವರದಿ ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ಅವರು ಮಾತನಾಡಿ, ಈ ಸಂಬಂಧ ಈಗಾಗಲೇ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರು ಮಾರ್ಚ್ಮಾಸಾಂತ್ಯದೊಳಗಾಗಿ ಇಲಾಖಾವಾರು ಮಾಹಿತಿಯನ್ನು ಸಂಗ್ರಹಿಸಿ, ದತ್ತಾಂಶ ಕ್ರೋಢೀಕರಿಸಿಬೇಕು. ಅಲ್ಲದೇ ಪ್ರಸ್ತುತ ಸ್ಥಿತಿಯ ವಿಶ್ಲೇಷಣೆ ಹಾಗೂ ಮುಂದಿನ ಗುರಿಗಳನ್ನು ಅಂತಿಮಗೊಳಿಸಿ, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯಲ್ಲಿ ಅನುಮೋದನೆ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಹಾಗೂ ಸಾಧನೆಗಳ ಕುರಿತು ಏಪ್ರಿಲ್ಮಾಹೆಯೊಳಗಾಗಿ ಅಧ್ಯಯನ ಕೈಗೊಳ್ಳಬೇಕು. ಜಿಲ್ಲಾ ಅಭಿವೃದ್ಧಿ ಯೋಜನೆ-2031ರ ವಲಯವಾರು ಅಧ್ಯಾಯಗಳನ್ನು ಸಿದ್ದಪಡಿಸಿ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಈ ವರದಿಯನ್ನು ಅಂತಿಮವಾಗಿ ಜೂನ್ಮಾಹೆಯಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಗುವುದು. ಈ ವರದಿಯಲ್ಲಿ ಹಣಕಾಸು, ಅಪೌಷ್ಟಿಕತೆ ಮತ್ತು ಬಾಣಂತಿಯರ ಮರಣದಂತಹ ಸಮಸ್ಯೆಗಳು ಮಾತ್ರವಲ್ಲ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ಪ್ರಮುಖವಾಗಿ ಪರಿಗಣಿಸಲಾಗುವುದು ಎಂದವರು ನುಡಿದರು.
ಮಾನವ ಅಭಿವೃದ್ಧಿ ಸೂಚ್ಯಂಕ ದೇಶದ ಅಭಿವೃದ್ಧಿಯನ್ನು ಕೇವಲ ಆರ್ಥಿಕತೆಯಿಂದಷ್ಟೇ ಅಲ್ಲದೆ, ಜನರ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಆಧಾರದ ಮೇಲೆ ಅಳೆಯುವ ಸಾಧನವಾಗಿದೆ. ಇದು ದೀರ್ಘಾಯುಷ್ಯ, ಶಿಕ್ಷಣ ಮತ್ತು ಆದಾಯದ ಸರಾಸರಿ ಸಾಧನೆಯನ್ನು ತೋರಿಸುತ್ತದೆ. ರಾಷ್ಟ್ರಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ ಹಾಗೂ ಸುಧಾರಣೆಗಾಗಿ ನೀತಿ ನಿರೂಪಣೆಗಳಿಗೆ ಪ್ರೇರಣೆ ನೀಡುತ್ತದೆ ಎಂದರು.
DC Shivamogga ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯದ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಬಸವರಾಜ ಎಸ್.ಅವರು ಮಾತನಾಡಿ, ದಶಕಗಳ ಹಿಂದೆ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ಸಿದ್ಧಪಡಿಸಲಾಗಿತ್ತು. ಪ್ರಸ್ತುತ ವಿವಿಧ ವಲಯಗಳಡಿ ಉಂಟಾಗಿರುವ ಬದಲಾವಣೆಗಳು, ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಜಿಲ್ಲೆಗಳ ಸಮಸ್ಯೆಗಳು ಮತ್ತು ನಿವಾರಣಾ ಕ್ರಮಗಳು ಹಾಗೂ ಯಶೋಗಾಥೆಗಳನ್ನು ಒಳಗೊಂಡಂತೆ ಮಾನವ ಅಭಿವೃದ್ಧಿ ವರದಿ ತಯಾರಿಸುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕ್ರೋಡೀಕೃತ ವರದಿಯನ್ನು ಸಿದ್ಧಪಡಿಸಲು ತಾಂತ್ರಿಕ ಬೆಂಬಲ ಸಂಸ್ಥೆಯಾಗಿ ಕುವೆಂಪು ವಿಶ್ವವಿದ್ಯಾಲಯವನ್ನು ನೇಮಿಸಿ ಆದೇಶ ಹೊರಡಿಸಿದೆ ಎಂದವರು ನುಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Karnataka and Goa NCC Directorate ಒಪ್ಪಂದದ ಮೇರೆಗೆ ಕೆಲವು ಹುದ್ದೆಗಳಿಗೆ ಎನ್ ಸಿಸಿ ನಿರ್ದೇಶನಾಲಯದಿಂದ ಅರ್ಜಿಗೆ ಕರೆ
Karnataka and Goa NCC Directorate ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27ನೇ ಸಾಲಿಗಾಗಿ ಓರ್ವ ನಿವೃತ್ತ ಸೈನ್ಯಾಧಿಕಾರಿಯನ್ನು ಒಪ್ಪಂದದ ಮೇರೆಗೆ ಶಿಸ್ತು ಮತ್ತು ಜಾಗೃತ ಹುದ್ದೆಗೆ ಹಾಗೂ ಮಾಜಿ ಸೈನಿಕರನ್ನು 30 ಎನ್.ಸಿ.ಸಿ. ಬೋಧಕರ ಹುದ್ದೆಗಳಿಗೆ ಕೆಲವು ಷರತ್ತುಗಳೊಂದಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿಯನ್ನು ಇಮೇಲ್ “adperskardte@gmail.com“ ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa), KSCMF Building, 4th Floor, No-8, Cunningham Road, Bengaluru – 560001 ಮೂಲಕ ಜ.25 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Karnataka and Goa NCC Directorate ಹೆಚ್ಚಿನ ಮಾಹಿತಿಗಾಗಿ “https://nccindia.gov.in“ ಜಾಲತಾಣವನ್ನು ಅಥವಾ ಮೊಬೈಲ್ ಸಂಖ್ಯೆ 9481405092 ನ್ನು ಸಂಪರ್ಕಿಸುವುದು.
ಸಾರಿಗೆ ಬಸ್ ಗಳ ನಿರ್ವಹಣೆ ಬಗ್ಗೆ ನಿಯಂತ್ರಣಾಧಿಕಾರಿಗಳೇ ಮುತುವರ್ಜಿವಹಿಸಿ, ಗ್ರಾಮೀಣರಿಗೆ ಅನುಕೂಲಮಾಡಿ- ದಿನೇಶ್ ಗೊಳಿಗೌಡ
ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಪಟ್ಟಣಗಳಿಗೆ ತೆರಳಲು, ಅನಾರೋಗ್ಯ ಪೀಡಿತರಾಗಿರುವ ವಯೋವೃದ್ಧರು ಚಿಕಿತ್ಸೆಗಾಗಿ ತೆರಳಲು ಸಕಾಲದಲ್ಲಿ ಬಸ್ಸುಗಳಿಲ್ಲದೆ ಜನಸಾಮಾನ್ಯರು ತೀವ್ರ ತರಹದ ಸಮಸ್ಯೆ ಎದುರಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ನಿಗಮದ ವತಿಯಿಂದ ಸಾರ್ವಜನಿಕ ಸೇವೆ ಬಿಡಲಾಗಿರುವ ಬಸ್ಸುಗಳು, ಅವುಗಳ ನಿಲುಗಡೆ, ಹೊಸಮಾರ್ಗಗಳು, ಅಲ್ಲಿನ ಸಮಸ್ಯೆಗಳ ಕುರಿತು ನಿಯಂತ್ರಣಾಧಿಕಾರಿಗಳು ತಮ್ಮ ಹಂತದಲ್ಲಿಯೇ ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳಿಗೆ ತಕ್ಷಣದ ಪರಿಹಾರವನ್ನು ಕಂಡುಕೊಳ್ಳುವಂತೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ಗೊಳಿಗೌಡ ಅವರು ಹೇಳಿದರು.
ಅವರು ಜಿಲ್ಲಾ ಪಂಚಾಯಿತಿ ಅಬ್ದುಲ್ನಜೀರ್ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಗ್ಯಾರಂಟಿ ಯೋಜನೆಗಳ ವ್ಯವಸ್ಥಿತ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಇದುವರೆಗೂ 1 ಲಕ್ಷದ 10 ಸಾವಿರ ಕೋಟಿ ರೂ. ಹಣ ವ್ಯಯಿಸಿದೆ. ಇದರಿಂದ ರಾಜ್ಯದ ತಲಾದಾಯ ಕೂಡ ಹೆಚ್ಚಲು ಸಹಕಾರಿಯಾಗಿದೆ. ಶಿವಮೊಗ್ಗ ಜಿಲ್ಲೆಗೆ 3023.95 ಕೋಟಿ ರೂ.ಹಣವನ್ನು ವೆಚ್ಚ ಮಾಡುವ ಮುಖಾಂತರ ಜಿಲ್ಲೆಯ ಜನತೆಗೆ ಬದುಕಿನ ಗ್ಯಾರಂಟಿಯನ್ನು ನೀಡಿದೆ ಎಂದರು.
2013-14ರಲ್ಲಿ ರಾಜ್ಯದ ತಲಾದಾಯ 1,05,000 ರೂ.ಗಳಷ್ಟಿತ್ತು. ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ರಾಜ್ಯದ ತಲಾದಾಯ 2,04,485 ರೂ.ಗಳಿಗೆ ಏರಿಕೆಯಾಗಿದೆ.
ಇದಕ್ಕೆ ಗ್ಯಾರಂಟಿಗಳೇ ಪ್ರಮುಖ ಕಾರಣ. ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಭರವಸೆ, ಭದ್ರತೆ ಮತ್ತು ಗೌರವವನ್ನು ತರಲು ನೆರವಾಗಿವೆ. ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ದಿನನಿತ್ಯದ ಬದುಕಿಗೆ ನೇರ ಸ್ಪರ್ಶ ನೀಡಿವೆ. 1,24,10,685 ಮಹಿಳೆಯರಿಗೆ ಪ್ರತಿ ತಿಂಗಳು 2500 ಕೋಟಿ ರೂ. ಹಣವನ್ನು ನೇರವಾಗಿ ಅವರ ಖಾತೆಗೆ ಹಾಕಲಾಗುತ್ತಿದೆ. ಇದುವರೆಗೆ ಗೃಹಲಕ್ಷ್ಮಿ ಯೋಜನೆಯಡಿ 57,381 ಕೋಟಿ ರೂ. ಹಣವನ್ನು ಸರ್ಕಾರ ಪಾವತಿಸುವ ಮೂಲಕ ಪ್ರತಿ ಮಹಿಳೆಗೆ 48 ಸಾವಿರ ಗೃಹಲಕ್ಷ್ಮಿ ಹಣ ತಲುಪಿದೆ ಎಂದು ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ 21,500 ಕೋಟಿ, ಅನ್ನಭಾಗ್ಯ ಯೋಜನೆಯಡಿ 18 ಸಾವಿರ ಕೋಟಿ ರೂ., ಯುವನಿಧಿ ಯೋಜನೆಯಡಿ 800 ಕೋಟಿ ರೂ.ಹಣವನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 656 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು ಇದರ ಟಿಕೆಟ್ ಮೌಲ್ಯ 17 ಸಾವಿರ ಕೋಟಿ ರೂ.ಗಳನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಭರಿಸಿದೆ. ದರ ಏರಿಕೆ, ಉದ್ಯೋಗ ಅಸ್ಥಿರತೆ ಮತ್ತು ಆದಾಯ ಅಸಮಾನತೆಗಳ ನಡುವೆ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಈ ಯೋಜನೆಗಳು ಆರ್ಥಿಕ ಭರವಸೆಯಾಗಿ ಪರಿಣಮಿಸಿವೆ. ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಹಾವಳಿ ಹೆಚ್ಚಾಗಿದ್ದು ಸರ್ಕಾರಿ ಬಸ್ ಗಳು ಸಕಾಲಕ್ಕೆ ಬರುತ್ತಿಲ್ಲ. ಇದರಿಂದ ಶಕ್ತಿ ಯೋಜನೆಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿಬಂದಿದೆ. ಅಧಿಕಾರಿಗಳು ಕೂಡಲೇ ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸೊರಬ, ತೀರ್ಥಹಳ್ಳಿ, ಹೊಸನಗರದಲ್ಲಿ ಡಿಫೋಗಳ ಸ್ಥಾಪನೆ ಸಂಬಂಧ ಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಜನತೆಗೆ 3023.95 ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಜಿಲ್ಲೆಯ 3,88,029 ಮಹಿಳೆಯರಿಗೆ ತಲಾ 2 ಸಾವಿರದಂತೆ 48 ಸಾವಿರ ಹಣ ಪಾವತಿಸಿದೆ. ಗೃಹಲಕ್ಷ್ಮಿ ಯೋಜನೆಯಡಿ 1805.56 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ದಿನೇಶ್ ಗೂಳಿಗೌಡ.
.ಗ್ಯಾರಂಟಿಗಳ ಜಿಲ್ಲಾ ಚಿತ್ರಣ : ಗೃಹಲಕ್ಷ್ಮಿ ಯೋಜನೆಯಡಿ 3,88,029 ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ 1805.56 ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ. ಪ್ರತಿ ಫಲಾನುಭವಿಗಳಿಗೆ ತಲಾ 2000ದಂತೆ ಒಟ್ಟು 48 ಸಾವಿರ ರೂ.ಗಳನ್ನು ಸರ್ಕಾರದ ನೀಡಿದೆ. ಈ ಯೋಜನೆಯಡಿ ನೋಂದಾಯಿತರಲ್ಲಿ 4717 ಮಂದಿ ಮೃತಪಟ್ಟಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 4,82,276 ಕುಟುಂಬಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗಿದೆ. ಇದಕ್ಕಾಗಿ 588.44 ಕೋಟಿ ಹಣ ವೆಚ್ಚವಾಗಿದ್ದು ಇದನ್ನು ರಾಜ್ಯ ಸರ್ಕಾರ ವಿದ್ಯುತ್ ನಿಗಮ ಕಂಪನಿಗೆ ಪಾವತಿಸಿದೆ. ಅನ್ನಭಾಗ್ಯ ಯೋಜನೆಯಡಿ 3,76,954 ಕಾರ್ಡ್ ಗಳು ನೋಂದಣಿಯಾಗಿದ್ದು 2,23,13,229 ಸದಸ್ಯರು ಫಲಾನುಭವಿಗಳಿದ್ದಾರೆ. ಅವರಿಗೆ ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದ್ದು 360.55 ಕೋಟಿ ರೂ. ಹಣವನ್ನು ಸರ್ಕಾರ ವ್ಯಯಿಸಿದೆ. ಶಕ್ತಿ ಯೋಜನೆಯಡಿ 6,50,07,631 ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.
ಇದರ ಟಿಕೆಟ್ ಮೌಲ್ಯ 244.98 ಕೋಟಿ ರೂ.ಹಣವನ್ನು ಸಾರಿಗೆ ನಿಗಮಕ್ಕೆ ಪಾವತಿ ಮಾಡಲಾಗಿದೆ. ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ 64.1% ಹೆಚ್ಚಳವಾಗಿದೆ. ಪ್ರಯಾಣಿಕರ ಅವಶ್ಯಕತೆಗೆ ಅನುಗುಣವಾಗಿ 50 ಬಸ್ ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ.
ಒಟ್ಟು ಪ್ರಯಾಣಿಕರಲ್ಲಿ 20.10% ಮಹಿಳೆಯರು ಉದ್ಯೋಗ ನಿಮಿತ್ತ ಸಂಚರಿಸಿದರೆ, 28.58% ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಶಾಲೆ ಕಾಲೇಜುಗಳಿಗೆ, 10.75% ಮಂದಿ ಧಾರ್ಮಿಕ ಕ್ಷೇತ್ರಗಳಿಗೆ 5.15% ಮಹಿಳೆಯರು ಪ್ರವಾಸಿ ತಾಣಗಳಿಗೆ ಪ್ರಯಾಣಿಸಿದ್ದಾರೆ.
ಯುವನಿಧಿ ಯೋಜನೆಯಡಿ ನೋಂದಾಯಿತ 8233 ಯುವಕ ಯುವತಿಯರಿಗೆ, 24.41 ಕೋಟಿ ರೂ.ನಷ್ಟು ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಅವರು ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ನಿಲ್ದಾಣಗಳ ಶೌಚಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಕೆಲಸಗಾರರು ಸೇವಾ ಅವಧಿಯಲ್ಲಿ ಸಮವಸ್ತ್ರಗಳನ್ನು ಧರಿಸಿರುವಂತೆ ಹಾಗೂ ಮೊಬೈಲ್ಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಅಂತೆಯೇ ದೂರು ಪೆಟ್ಟಿಗೆಯನ್ನು ಇರಿಸಬೇಕು. ಬಸ್ಸುಗಳ ಓಡಾಟದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸೊರಬ, ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಬಸ್ ಗಳು ಸಕಾಲದಲ್ಲಿ ಸಂಚರಿಸುತ್ತಿಲ್ಲ ಎಂಬ ದೂರುಗಳು ವ್ಯಕ್ತವಾಗುತ್ತಿವೆ.
ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು, ಸಮಿತಿ ಸಭೆಗೆ ಅಧಿಕಾರಿಗಳು ತಪ್ಪದೆ ಹಾಜರಾಗುವಂತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ನೋಂದಾಯಿತ ಫಲಾನುಭವಿಗಳು ಮನೆ ಬಳಕೆಗೆ ಮಾತ್ರ ವಿದ್ಯುತ್ ಬಳಕೆ ಮಾಡಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಕಂಡುಬಂದರೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದ ಅವರು ವಿವಿಧ ಕಾರಣಗಳಿಂದಾಗಿ ಜಿಲ್ಲೆಯ 276ಜನರಿಗೆ ಗೃಹಲಕ್ಷ್ಮೀ ಸೌಲಭ್ಯ ದೊರೆಯುತ್ತಿಲ್ಲ.. ಸೌಲಭ್ಯ ವಂಚಿತ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯವನ್ನು ಅರ್ಹರಿಗೆ ತಲುಪಿಸುವ ಕಾರ್ಯ ತುರ್ತಾಗಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಅವೈಜ್ಞಾನಿಕ ಮಾನದಂಡವನ್ನು ಅನುಸರಿಸಿ ಪಡಿತರ ಚೀಟಿ ರದ್ದುಗೊಳಿಸುವುದು ತರವಲ್ಲ. ಪಡಿತರ ಚೀಟಿ ರದ್ದುಗೊಳಿಸಿರುವುದನ್ನು ಪುನರ್ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. -ಅನ್ವರ್ಪಾಷಾ, ಗ್ಯಾರಂಟಿ ಸಮಿತಿ ಸದಸ್ಯರು.
ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ತಾಲೂಕು ಮಟ್ಟದ ಸಮಿತಿಗಳಿಂದ ವರದಿ ಪಡೆದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯೋಜನೆಯ ಅನುಷ್ಟಾನದಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿಗಳು, ಶಿವಮೊಗ್ಗ.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ತಾಲೂಕು ಅಧ್ಯಕ್ಷ ಮಧು, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜಪ್ಪ, ಶಿವಣ್ಣ, ಇಕ್ಕೇರಿ ರಮೇಶ್, ಹಾಗೂ ಜಿಲ್ಲಾ, ತಾಲೂಕು ಮಟ್ಟದ ಸದಸ್ಯರು, ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Bharat Scouts and Guides ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳಲ್ಲಿ ಶಿವಮೊಗ್ಗ ಜಿಲ್ಲೆಯು ಭಾರತಕ್ಕೇ ಮಾದರಿ: ಶಾಸಕ ಡಿ.ಎಸ್.ಅರುಣ್
Bharat Scouts and Guides ಜೀವನ ಹಾಗೂ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೌಶಲ್ಯಗಳು ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ಕೌಶಲ್ಯದ ಕೊರತೆ ಎದ್ದು ಕಾಣಿಸುತ್ತಿದೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಕೌಶಲ್ಯವನ್ನು ಕಲಿಸಬೇಕಿದೆ. ತಂತ್ರಜ್ಞಾನ ಮುಂದುವರೆದ ಹಾಗೆ ಉದ್ಯೋಗ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ವಿಫುಲವಾದ ಅವಕಾಶಗಳಿವೆ. ಪ್ರತಿಯೊಂದು ಹಂತದಲ್ಲೂ ಕೌಶಲ್ಯ ತುಂಬಾ ಮುಖ್ಯ ಎಂದು ತಿಳಿಸಿದರು.
ಮಕ್ಕಳಿಗೆ ಮಾನವೀಯ ಗುಣಗಳ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರೇರೇಪಣೆ ಆಗಿದೆ. ಪ್ರಪಂಚಾದ್ಯಂತ ನೂರಾರು ದೇಶಗಳಲ್ಲಿ ವಿಶೇಷ ಕಾರ್ಯಗಳನ್ನು ಮಾಡುತ್ತ ತನ್ನದೇ ಆದ ಛಾಪು ಮೂಡಿಸಿದೆ. ಸಾಂಸ್ಕೃತಿಕ ಹಾಗೂ ಕ್ರೀಡೆಯ ಬಗ್ಗೆ ಮಕ್ಕಳು ಆಸಕ್ತಿ ವಹಿಸುವಂತೆ ಪೋಷಕರು, ಶಿಕ್ಷಕರು ಗಮನಹರಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಗೆ ಅನೇಕರು ವಿಶೇಷವಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗ ಭಾರತಕ್ಕೆ ಮಾದರಿಯಾಗಿದೆ ಎಂದರು.
ಶತಮಾನೋತ್ಸವದ ಅಂಗವಾಗಿ ಕಟ್ಟಡ ನಿರ್ಮಿಸಲು ಆರ್ಥಿಕ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
Bharat Scouts and Guides ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಭಾರತಿ ಚಂದ್ರಶೇಖರ್, ರಾಜ್ಯ ಉಪಾಧ್ಯಕ್ಷ ಮಹೇಶ್, ಆಯುಕ್ತ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಚೂಡಾಮಣಿ ಪವಾರ್, ಎಸ್.ಜಿ.ಆನಂದ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ಲಕ್ಷ್ಮೀ ರವಿ, ಮಲ್ಲಿಕಾರ್ಜುನ್ ಕಾನೂರು, ದೀಪು, ರೇಣುಕಾ, ಶಿವಶಂಕರ್, ಕೆ.ರವಿ, ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪ ಗೌಡ, ಪರಮೇಶ್ವರಯ್ಯ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಆಸ್ಪತ್ರೆ ಕಟ್ಟಡ ನಿಯಮ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆ ಚರ್ಚೆಗೆ ಸದನದಲ್ಲಿ ಸರ್ಕಾರ ಸ್ಪಂದಿಸಿದೆ : ಡಾ.ಧನಂಜಯ ಸರ್ಜಿ
ವಿಧಾನ ಪರಿಷತ್ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಸಿದ ಚರ್ಚೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಹತ್ವದ ಸುಧಾರಣೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ತಮ್ಮ ವಿಧಾನ ಪರಿಷತ್ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ರಾಜ್ಯದ ಸಣ್ಣ ಕ್ಲಿನಿಕ್ ಅಥವಾ ಆಸ್ಪತ್ರೆಗಳು ಬಹುಮಹಡಿ ಕಟ್ಟಡದ ಒಂದು ಭಾಗದಲ್ಲಿದ್ದರೂ ಇಡೀ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ಎನ್.ಒ.ಸಿ (NOC) ಪಡೆಯುವುದು ಕಡ್ಡಾಯವಾಗಿತ್ತು. ಹಳೆಯ ಅಗ್ನಿಸುರಕ್ಷತಾ ಮಾನದಂಡದ ಪ್ರಕಾರ ಶೇ. 99ಕ್ಕೂ ಹೆಚ್ಚು ಆಸ್ಪತ್ರೆಗಳು ಪರವಾನಗಿ ಪಡೆಯಲು ಸಂಕಷ್ಟ ಎದುರಿಸುತ್ತಿದ್ದವು. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ, PHANA , ಕೂಡ್ಲಿಗಿ ಶಾಸಕರಾದ ಡಾ. ಶ್ರೀನಿವಾಸ್ ಅವರು ಒಡಗೂಡಿ ನಾನು ನಡೆಸಿದ ಹೋರಾಟದ ಫಲವಾಗಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವರಾದ ಪರಮೇಶ್ವರ್ ಅವರು ಜಂಟಿ ಸಭೆ ನಡೆಸಿ ನಿಯಮಗಳನ್ನು ಸರಳೀಕರಿಸಿದ್ದಾರೆ.
ಅದರಂತೆ 20.99 ಮೀಟರ್ಗಿಂತ ಕಡಿಮೆ ಎತ್ತರವಿರುವ ಆಸ್ಪತ್ರೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತಾ ಮಾನದಂಡ ನಿಗದಿಪಡಿಸಿ ಜನವರಿ 9, 2026ರಂದು ಆದೇಶ ಹೊರಡಿಸಲಾಗಿದೆ. ವಸತಿ ರಹಿತ 21 ಮೀಟರ್ಗಿಂತ ಕಡಿಮೆ ಎತ್ತರದ ಸಣ್ಣ ಕ್ಲಿನಿಕ್ ಹಾಗೂ ರಕ್ತನಿಧಿ ಕೇಂದ್ರಗಳು ಇನ್ನು ಮುಂದೆ ಅಗ್ನಿಶಾಮಕ ಇಲಾಖೆಯ ಬದಲು ಆರೋಗ್ಯ ಇಲಾಖೆ ಮಟ್ಟದಲ್ಲೇ ತಪಾಸಣೆಗೊಳಪಡಲಿವೆ ಮತ್ತು ನವೀಕರಣ ಶುಲ್ಕವನ್ನು ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ.
ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 8,728 ಆಸ್ಪತ್ರೆಗಳಿವೆ ಇವುಗಳಲ್ಲಿ 329 ಆಸ್ಪತ್ರೆಗಳು ಮಾತ್ರ ಫೈರ್ ಕ್ಲಿಯರೆನ್ಸ್ ಪಡೆದುಕೊಂಡಿದೆ. ಈ ಕಾನೂನು ತಿದ್ದುಪಡಿಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನುಕೂಲವಾಗಿಲಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಮಾತನಾಡಿದ ಶಾಸಕರು, ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ಗಳಿಗೆ ಅತಿ ಹೆಚ್ಚು ಸೀಟುಗಳನ್ನು ಮೀಸಲಿಟ್ಟು ಸರ್ಕಾರಿ ಕಾಲೇಜುಗಳಲ್ಲಿ ಕೇವಲ ಶೇ. 10ರಷ್ಟು ಮಾತ್ರ ಅವಕಾಶ ನೀಡುತ್ತಿರುವುದು ತಾರತಮ್ಯಕ್ಕೆ ಕಾರಣವಾಗಿತ್ತು. ಒಂದು ಖಾಸಗಿ ವಿವಿಯಲ್ಲಿ 4,320 ಇಂಜಿನಿಯರಿಂಗ್ ಸೀಟುಗಳಿದ್ದು ಅದರಲ್ಲಿ 4,100 ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗಳಿಗೆ ಮೀಸಲಿದೆ, ಆದರೆ ರಾಜ್ಯದ ಒಟ್ಟು ಸರ್ಕಾರಿ ಕಾಲೇಜುಗಳಲ್ಲಿ ಕೇವಲ 6,495 ಸೀಟುಗಳಿದ್ದರೆ ಅದರಲ್ಲಿ ಕೇವಲ 700 ಸೀಟುಗಳು ಮಾತ್ರ ಕಂಪ್ಯೂಟರ್ ಸೈನ್ಸ್ ಕೋರ್ಸ್ ಗಳಿಗೆ ಮೀಸಲಿದೆ, ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 1,50,000 ಸೀಟುಗಳಿದ್ದರೆ ಅದ್ರಲ್ಲಿ 1 ಲಕ್ಷ ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗೆ ಇದೆ ಎಂಬ ಆಘಾತಕಾರಿ ವಿಷಯವನ್ನು ಗಮನ ಸೆಳೆದ ಪರಿಣಾಮವಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಒಂದೇ ಕೋರ್ಸಿಗೆ ಅಧಿಕ ಸೀಟು ಪಡೆಯುವುದನ್ನು ನಿರ್ಬಂಧಿಸಲು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಸೌಲಭ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದು ಖಾಸಗಿ ವಿವಿಗಳ ಹಾವಳಿಗೆ ಕಡಿವಾಣ ಹಾಕುವುದಲ್ಲದೆ, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಹೇಳಿದರು.
ಮುಂದುವರಿದು, ವಿವಿಧ ಆರೋಗ್ಯ ಯೋಜನೆಗಳಡಿ ನೀಡಲಾಗುವ ಚಿಕಿತ್ಸಾ ದರಗಳ ತಾರತಮ್ಯ ನಿವಾರಣೆಯಲ್ಲಿ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನವನ್ನು ಶಾಸಕರು ಶ್ಲಾಘಿಸಿದರು. ಸಂಸದರು ಸಂಸತ್ತಿನಲ್ಲಿ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರಲ್ಲಿ ಮಾಡಿದ ಮನವಿಯ ಫಲವಾಗಿ ಅಕ್ಟೋಬರ್ 13, 2025 ರಿಂದ ಅನ್ವಯವಾಗುವಂತೆ ದೇಶಾದ್ಯಂತ CGHS ದರಗಳನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ. ಸಿಸೇರಿಯನ್, ನಾರ್ಮಲ್ ಹೆರಿಗೆ ಮತ್ತು ಹಾರ್ಟ್ ಸರ್ಜರಿಗಳಂತಹ ಸುಮಾರು 2,000 ವೈದ್ಯಕೀಯ ಪ್ರಕ್ರಿಯೆಗಳ ದರವನ್ನು ಹೆಚ್ಚಿಸಲಾಗಿದೆ. ನಗರಗಳನ್ನು ಟೈರ್-1, 2, 3 ಎಂದು ವಿಂಗಡಿಸಿ, ಆಸ್ಪತ್ರೆಗಳ ಮಾನ್ಯತೆ (NABH) ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ.
ಯಶಸ್ವಿನಿ ಮತ್ತು ಆಯುಷ್ಮಾನ್ ಭಾರತ್, ಜ್ಯೋತಿ ಸಂಜೀವಿನಿ, ಆರೋಗ್ಯ ಭಾಗ್ಯ , ಇ.ಎಸ್.ಐಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಲ್ಲೂ ಈ ಪರಿಷ್ಕ್ರತ ದರವನ್ನು ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಿದ್ದಿನಿ ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರುವ ಪ್ರಕ್ರಿಯೆಲ್ಲಿದೆ ಎಂದು ಡಾ.ಧನಂಜಯ ಸರ್ಜಿ ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಎನ್.ಕೆ. ಜಗದೀಶ್, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ. ಹರಿಕೃಷ್ಣ, ಹೆಚ್.ಸಿ. ಮಾಲತೇಶ್, ಮುಖಂಡರಾದ ಶಿವರಾಜ್ ಮತ್ತು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಉಪಸ್ಥಿತರಿದ್ದರು.
MESCOM ಜನವರಿ 16. ಶಿರಾಳಕೊಪ್ಪ ಮೆಸ್ಕಾಂ ಜನ ಸಂಪರ್ಕ ಸಭೆ
MESCOM ಶಿರಾಳಕೊಪ್ಪ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜ .16 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9448998776.
Shimoga District Sports Karate Association ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧಾವಳಿ
Shimoga District Sports Karate Association ಕರಾಟೆ ಕ್ರೀಡೆಯ, ಆತ್ಮವಿಶ್ವಾಸ, ಶಿಸ್ತು ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ – 3ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಪಂದ್ಯಾವಳಿಯು –2026 ಜನವರಿ 11 ರಂದು ,ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಸಹ್ಯಾದ್ರಿ ಶಿವಮೊಗ್ಗ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸನ್ ಸೈ ಸಾಧಿಕ್, ಶ್ರೀಯುತ ಸನ್ ಸೈ ಮಂಜುನಾಥ್ , ರವರು ಆಯೋಜಿಸಲಾದ ಈ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 1,000 ಕ್ಕೂ ಹೆಚ್ಚು ಕರಾಟೆ ಕ್ರೀಡಾಪಟುಗಳು ಭಾಗವಹಿಸಿದ್ದರು. ತಮಿಳುನಾಡು, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಾಳುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಅತ್ಯುತ್ತಮ ಕೌಶಲ್ಯ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು. ಹಾಗೂ ವಿಜೇತರಾದಂತಹ ಕ್ರೀಡಾಪಟುಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಶ್ರೀಯುತ.ಡಿ.ಎಸ್.ಅರುಣ್ ಅವರು ಅಧಿಕೃತವಾಗಿ ಉದ್ಘಾಟಿಸಿ ತಮ್ಮ ಹಿತ ನುಡಿಗಳನ್ನು ನುಡಿದರು ಮಾತು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಧ್ಯಕ್ಷರಾದ ಶ್ರೀಯುತ ಕಲಗೋಡು ರತ್ನಾಕರ್, DSP ರಾಚಪ್ಪ, ನ್ಯೂಸ್ ವಾರಿಯರ್ಸ್ ಸಂಪಾದಕರಾದ ಶ್ರೀಯುತ ರಘುರಾಜ್ , ಮಮಕೋಸ್ ನಿರ್ದೇಶಕರಾದ ವಿರೂಪಾಕ್ಷಪ್ಪ , ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಾಸುದೇವ್, ಶ್ರೀಯುತ ಡಾ. ಶಿಹಾನ್ ಎ .ಝೆಡ್ ಮುಹಿಬ್ ರವರು, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ರೆಫ್ರೀ ಕಮಿಷನರ್ ಸನ್ ಸೈ .ಕೆ.ಪಿ.ಜೊಸ್, ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ಜಿತೇಂದ್ರ ಕಾಕಟೇಕರ್, ಹಾವೇರಿ ಜಿಲ್ಲೆಯ ಅಧ್ಯಕ್ಷರಾದ ಶ್ರೀಯುತ ಶಿಹಾನ್ ನಾರಾಯಣ್ ಪೂಜಾರ್ , ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಎನ್ ಮಾಲತೇಶ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಮತ್ತು ಅನೇಕ ಗಣ್ಯರು ಉಪಸ್ಥಿತರಿದು ,ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ- ಉತ್ತೇಜನ ನೀಡಿ ಗೌರವವನ್ನು ತಂದರು.
ಸ್ಪರ್ಧೆಯು ಅತ್ಯಂತ ಶಿಸ್ತುಬದ್ಧವಾಗಿ, ನ್ಯಾಯಸಮ್ಮತವಾಗಿ ಹಾಗೂ ಉತ್ಸಾಹಭರಿತವಾಗಿ ನಡೆಯಿತು. ಕ್ರೀಡಾಪಟುಗಳ ಪ್ರದರ್ಶನ ಪ್ರೇಕ್ಷಕರನ್ನು ಆಕರ್ಷಿಸಿದ್ದು, ಕರಾಟೆ ಕ್ರೀಡೆಯ ಮಹತ್ವವನ್ನು ಮತ್ತಷ್ಟು ಬೆಳಗಿಸಿತು. ಈ ಚಾಂಪಿಯನ್ಶಿಪ್ ಕೇವಲ ಸ್ಪರ್ಧೆಯಷ್ಟೇ ಅಲ್ಲದೆ, ಏಕತೆ, ಶ್ರೇಷ್ಠತೆ ಮತ್ತು ಕ್ರೀಡಾತ್ಮಕ ಮನೋಭಾವವನ್ನು ಉತ್ತೇಜಿಸುವ ಹಬ್ಬವಾಗಿ ಮೂಡಿಬಂದಿತು.
ಈ ಕ್ರೀಡಾಕೂಟಕ್ಕೆ ಮೈಸೂರು ಜಿಲ್ಲೆಯಿಂದ ಆಗಮಿಸಿದಂತಹ ಸನ್ ಸೈ ಸೌಜನ್ಯ ಮತ್ತು ಸನ್ ಸೈ ಮನೋಜ್ ಹಾವೇರಿ ಜಿಲ್ಲೆಯ ಸನ್ ಸೈ ಮೋನಿಷಾ ,ದಾವಣಗೆರೆ ಜಿಲ್ಲೆಯ ಸನ್ ಸೈ ಗೌತಮ್, ಹಾವೇರಿ ಜಿಲ್ಲೆಯ ಸನ್ ಸೈ ಮಂಜುನಾಥ್,ಮೈಸೂರು ಜಿಲ್ಲೆಯಿಂದ ಸನ್ ಸೈ ನವೀನ್ , ದಾವಣಗೆರೆ ಜಿಲ್ಲೆಯ ಸನ್ ಸೈ ವೆಂಕಟೇಶ್ ಮತ್ತು ಸನ್ ಸೈ ಅನಿಲ್, ಬಿಜಾಪುರ್ ಜಿಲ್ಲೆಯ ಪ್ರೇಮ್, ಶಿವಮೊಗ್ಗ ಜಿಲ್ಲೆಯ ಸನ್ ಸೈ ಚಂದ್ರಕಾಂತ, ಸನ್ ಸೈ ಮಹಾಬಲೇಶ್ ಜ್ಯೋಯಿಶ್, ಸನ್ ಸೈ ಸತೀಶ್ ಮತ್ತು ಇನ್ನೂ ಹಲವು ಜಿಲ್ಲೆಯವರ ಕರಾಟೆ ಶಿಕ್ಷಕರು ಕ್ರೀಡಾಪಟುಗಳೊಂದಿಗೆ ಸಹಕಾರವನ್ನು ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ.
ಈ ಯಶಸ್ವಿ ಆಯೋಜನೆಗೆ ಸಹಕಾರ ನೀಡಿದ ಎಲ್ಲಾ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರು, ಸ್ವಯಂಸೇವಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳಿಗೆ.
Shimoga District Sports Karate Association ಈ ಪಂದಾವಳಿಯನ್ನು ಆಯೋಜಿಸಿದ ಸಹ್ಯಾದ್ರಿ ಶಿವಮೊಗ್ಗ ಜಿಲ್ಲೆಯ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸನ್ ಸೈ ಸಾಧಿಕ್, ಶ್ರೀಯುತ ಸನ್ ಸೈ ಮಂಜುನಾಥ್ , ಸನ್ ಸೈ ಕಿರಣ್, ಸನ್ ಸೈ ಸತೀಶ್, ನವೀನ್ ಪ್ರಕಾಶ್, ಅಪೂರ್ವ, ದೀಕ್ಷಾ, ಮೊಹಮ್ಮದ್ ಗೌಸ್, ಆಶಿಕ್ , ಪೃಥ್ವಿ ,ರಕ್ಷಿತ್ ಹೊಳ್ಳ , ಮೋನಿಕಾ, ಮಧು, ಗಿರೀಶ್ ರವರು ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಿರುತ್ತಾರೆ .
