ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಅನುಮತಿ ಹಾಗೂ ಸಮಾಲೋಚನೆ ಇಲ್ಲದೆ ಸರ್ಕಾರ ಮುಂದುವರಿಯುತ್ತಿರುವ ಕ್ರಮವನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಖಂಡಿಸಿದ್ದಾರೆ.
ಯೋಜನೆಗಾಗಿ ಪೊಲೀಸ್ ಬಲಪ್ರಯೋಗದ ಮೂಲಕ ಭೂಸರ್ವೆ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಇದು ಸರ್ಕಾರದ ಸರ್ವಾಧಿಕಾರಿ ಮನೋಭಾವದ ಸ್ಪಷ್ಟ ಉದಾಹರಣೆ ಎಂದು ಆರೋಪಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಭೂಸ್ವಾಧೀನದ ಪ್ರಶ್ನೆಯಲ್ಲ, ಸಾವಿರಾರು ರೈತ ಕುಟುಂಬಗಳ ಬದುಕು, ಕೃಷಿ ಆಧಾರಿತ ಗ್ರಾಮೀಣ ಆರ್ಥಿಕತೆ ಹಾಗೂ ಪರಿಸರದ ಮೇಲೆ ನೇರ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ ಎಂದು ಅವರು ಹೇಳಿದರು.
ಬಿಡದಿ ಭಾಗದ ರೈತರು ಅಧಿಕಾರಿಗಳ ಕಾಲಿಗೆ ಬಿದ್ದು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದರೂ, ಪೊಲೀಸರನ್ನು ಬಳಸಿ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಎಂದು ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಎಷ್ಟೇ ಪ್ರಚೋದನೆ ನೀಡಿದರೂ ರೈತರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಹೋರಾಟವನ್ನು ಗಟ್ಟಿಯಾಗಿ ಮುಂದುವರಿಸೋಣ. ಆದರೆ ಅದು ಸಂಪೂರ್ಣವಾಗಿ ಶಾಂತಿಯುತ ಹಾಗೂ ಸಂಯಮದ ಮಾರ್ಗದಲ್ಲೇ ಸಾಗಬೇಕು ಎಂದು ರೈತರಿಗೆ ಅವರು ಕರೆ ನೀಡಿದರು.
