ಶಿವಮೊಗ್ಗ ತಾಲ್ಲೂಕಿನಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿರುವುದಲ್ಲದೇ, ಸರಿಯಾದ ಸಮಯದಲ್ಲಿ ಮಳೆ ಬಂದಿರುವುದಿಲ್ಲ.
ಆದ್ದರಿಂದ ರೈತರು ಕೆಳಕಂಡ ವ್ಯವಸಾಯ ಪದ್ದತಿಗಳನ್ನು ಅನುಸರಿಸಲು ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ಪಟ್ಟಣ ಶೆಟ್ಟಿ ತಮ್ಮ ತಿಳಿಸಿರುತ್ತಾರೆ.
ಬಿತ್ತನೆಗೆ ಮುಂಚೆ ಭೂಮಿಯ ತೇವಾಂಶ ಹಾಗೂ ನಾಟಿ ಮಾಡುವ ಮುನ್ನ ನೀರಿನ ಲಬ್ಯತೆಯ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡುವ ರೈತರು ಪ್ರತೀ ೮ ಸಾಲು ಮೆಕ್ಕೆಜೋಳದ ಜೊತೆ ೨ ಸಾಲು ದ್ವಿದಳ ಧಾನ್ಯದ ಬೆಳೆಗಳಾದ ತೊಗರಿ, ಅಲಸಂದೆ, ಹೆಸರು, ಉದ್ದು ಬೆಳೆಗಳನ್ನು ಅಂತರ ಬೆಳೆಯಾಗಿ ಬಿತ್ತಬೇಕು.
ಪ್ರತೀ ಕೆ.ಜಿ.ಬೀಜಗಳನ್ನು ೪ ಗ್ರಾಂ ಮೆಟಾಲಾಕ್ಸಿಲ್ ಎಂ.ಝಡ್. ಮತ್ತು ೫ ಎಂ.ಎಲ್ ಕ್ಲೋರೋಪೈರಿಫಾಸ್ ನೊಂದಿಗೆ ಬೀಜೋಪಚಾರ ಮಾಡುವುದು.
ಈಗಾಗಲೇ ಮೆಕ್ಕೆ ಜೋಳ ಬಿತ್ತನೆ ಮಾಡಿ ಮಣ್ಣಿನಲ್ಲಿ ತೇವಂಶ ಕಡಿಮೆ ಇದ್ದ ಪಕ್ಷದಲ್ಲಿ ಹರಳು ರೂಪದ ಗೊಬ್ಬರದ ಬದಲಾಗಿ ನೀರಿನಲ್ಲಿ ಕರಗುವ ೧೯:೧೯:೧೯ ಗೊಬ್ಬರವನ್ನು ೫ ಗ್ರಾಂ ಪ್ರತೀ ಲೀಟರ್ ನೊಂದಿಗೆ ಬೆರಸಿ ಬಿತ್ತನೆಯಾದ ೨೫ ದಿನ ಹಾಗೂ ೪೫ನೇ ದಿನದಂದು ಸಿಂಪಡಿಸಬೇಕು.
ಎರಡು ಸಾಲುಗಳ ಮದ್ಯೆ ಎಡೆಕುಂಟೆ ಹಾಯಿಸುವುದರಿಂದ ಕಳೆಗಳ ನಿಯಂತ್ರಣದ ಜೊತೆಗೆ ನೀರು ಆವಿಯಾಗುವುದನ್ನು ತಡೆಯಬಹುದು. ತಗ್ಗು ಪ್ರದೇಶ ಹಾಗೂ ನೀರಿನ ಲಬ್ಯತೆ ಇದ್ದ ಪಕ್ಷದಲ್ಲ್ಲಿ ಮದ್ಯಮಾವಧಿ ಭತ್ತದ ತಳಿಗಳನ್ನು ಬೆಳೆಯುವುದು.
ಹಾಗೂ ನಾಟಿ ಮಾಡುವುದರ ಬದಲಾಗಿ ಡ್ರಂಸೀಡರ್ ನಿಂದ ಬಿತ್ತನೆ ಮಾಡುವುದು.
ಮುಂಗಾರು ಜುಲೈ ನಾಲ್ಕನೇ ವಾರದ ವರೆಗೂ ತಡವಾದಲ್ಲಿ ರಾಗಿ ಹಾಗೂ ದ್ವಿದಳ ಧಾನ್ಯದ ಬೆಳೆಯನ್ನು ಬಿತ್ತನೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಲು ತಮ್ಮ ತಿಳಿಸಿದ್ದಾರೆ.
