Saturday, February 7, 2026
Saturday, February 7, 2026
Home Blog Page 34

Backward Classes Welfare Department ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ವ್ಯಾಸಂಗವೇತನ/ ಫೆಲೋಷಿಪ್ ಪಡೆಯಲು ಅರ್ಜಿ ಆಹ್ವಾನ, ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ. ಅಧ್ಯಯನ ಮಾಡುತ್ತಿರುವ (ಫೆ.10, 2025 ಮತ್ತು ಅದರ ನಂತರ ಪ್ರಥಮ ವರ್ಷದ ಪಿಹೆಚ್.ಡಿ ಪ್ರಾರಂಭಿಸಿರಬೇಕು) ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಹೊಸ ವಿದ್ಯಾರ್ಥಿಗಳಿಂದ ಮಾತ್ರ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್ ಪಡೆಯಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ದಿ: 09/01/2026 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Backward Classes Welfare Department ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004, ವೆಬ್‌ಸೈಟ್ https://bcwd.karnataka.gov.in, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-222129 ನ್ನು ಸಂಪರ್ಕಿಸುವುದು.

Newspaper Distributors Trust ಶಿವಮೊಗ್ಗದಲ್ಲಿ ಪತ್ರಿಕಾ ವಿತರಕರ ಟ್ರಸ್ಟ್ ಸ್ಥಾಪನೆ

0

Newspaper Distributors Trust ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು
ಪತ್ರಿಕಾ ವಿತರಕರ ಏಳಿಗೆಗಾಗಿ ವಿನೂತನವಾಗಿ ತನ್ನ ಅಂಗ ಸಂಸ್ಥೆಯಾಗಿ ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲು ನಿರ್ಧರಿಸಿದೆ

ಚಾರಿಟಬಲ್ ಟ್ರಸ್ಟ್ ಮೂಲಕ ಪತ್ರಿಕಾ ವಿತರಕರ ಸಂಕಷ್ಟಗಳು, ಸಮಸ್ಯೆಗಳ ನಿವಾರಣೆಗಾಗಿ ಕ್ಷೇಮಾಭಿವೃದ್ಧಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ನಿರ್ಧರಿಸಿದೆ

ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕ ಮಂಡಳಿಯ ವಿವರ ಮುಂದಿನಂತಿದೆ

ಹೆಸರು. ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್

  1. ಪ್ರಶಾಂತ್ ಕುಮಾರ್ ಎನ್. ಅಧ್ಯಕ್ಷರು
  2. ಸಂಗಮ್ ಸುರೇಶ್. ಪಿ ಉಪಾಧ್ಯಕ್ಷರು
  3. ವೀರಭದ್ರ ವೈ.ಸಿ. ಕಾರ್ಯದರ್ಶಿಗಳು
  4. ನಾದೂರು ವಾಸುದೇವ. ನಿರ್ದೇಶಕರು
  5. ಎಂ ಟಿ ಗೋಪಾಲ್ . ನಿರ್ದೇಶಕರು ಸಂಗಂ ಸುರೇಶ್ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ

ಕೆ ಶಂಭುಲಿಂಗ
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ)

MESCOM ಇಂದು ಮತ್ತು ನಾಳೆ ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಕುಡಿಯುವ ನೀರು ಸರಬರಾಜು ಇಲ್ಲ? ಮಾಹಿತಿ ಓದಿ

0

MESCOM ಮೆಸ್ಕಾಂ ವತಿಯಿಂದ ತುರ್ತು ಕಾಮಗರಿಯಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರೀ ಮಧ್ಯಂತರ ಯಂತ್ರಗಾರಕ್ಕೆ ಜ. 07 ರಂದು ವಿದ್ಯುತ್ ನಿಲುಗಡೆ ಮಾಡುವುದರಿಂದ ಜ.07 ಮತ್ತು 08 ರಂದು ಸೋಮಿನಕೊಪ್ಪ, ತ್ಯಾವರೆಚಟ್ನಹಳ್ಳಿ, ಬೊಮ್ಮನಕಟ್ಟೆ, ಶಾಂತಿನಗರ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.

CM Siddharamaih ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಕಾಲದ ಸೇವೆ, ಸಿದ್ಧರಾಮಯ್ಯನವರಿಗೆ ಅಭಿನಂದಿಸಿದ ಶಾಸಕ ಬಸವರಾಜ ರಾಯರೆಡ್ಡಿ

0

CM Siddharamaih ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅವರ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ಅವರು ಪತ್ರ ಬರೆದಿದ್ದಾರೆ.

ಕರ್ನಾಟಕದ ಸಾಮಾಜಿಕ ನ್ಯಾಯ ಹಾಗೂ ಜನಪರ ಸರ್ವಾಂಗೀಣ ಅಭಿವೃದ್ಧಿ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೂರದೃಷ್ಟಿಯ ನಾಯಕತ್ವಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸವು ಜನಪರ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರ ದಿಟ್ಟ ಹೋರಾಟಗಳಿಂದ ರೂಪುಗೊಂಡ ಸುವರ್ಣ ಪರಂಪರೆಯನ್ನು ಹೊಂದಿದೆ. ಶೋಷಿತರು, ಹಿಂದುಳಿದವರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಧೈರ್ಯವಾಗಿ ನಿಂತ ನಾಯಕರಿಂದಲೇ ಈ ನಾಡಿನ ಪ್ರಗತಿಪರ ರಾಜಕೀಯ ಸಂಸ್ಕೃತಿ ಬೆಳೆದಿದೆ.

ಆ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಮಹಾನ್ ನಾಯಕರಲ್ಲಿ ಸನ್ಮಾನ್ಯ ಶ್ರೀ ದಿವಂಗತ ದೇವರಾಜ ಅರಸು ಅವರು ಅಗ್ರಗಣ್ಯರು. ಅವರು 20-03-1972 ರಿಂದ 31-12-1977 ರವರೆಗೆ ಹಾಗೂ 28-02-1978 ರಿಂದ 07-01-1980 ರವರೆಗೆ ಒಟ್ಟಾರೆ 2792 ದಿನಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಭೂ ಸುಧಾರಣೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಉನ್ನತಿ ಮತ್ತು ಶೋಷಿತರ ಸಬಲೀಕರಣದ ಮೂಲಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಮರ ಅಧ್ಯಾಯವೊಂದನ್ನು ರಚಿಸಿದರು.

ಅದಲ್ಲದೆ ಕರ್ನಾಟಕ ರಾಜ್ಯವನ್ನು ಪ್ರಗತಿಪರ ಚಿಂತನೆಯತ್ತ ತರುವುದರಲ್ಲಿ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀಯುತ ಕೆಂಗಲ್ ಹನುಮಂತಯ್ಯ ,ಶ್ರೀಯುತ ನಿಜಲಿಂಗಪ್ಪ, ಶ್ರೀಯುತ ರಾಮಕೃಷ್ಣ ಹೆಗಡೆ ಇವರುಗಳ ವಿಶಾಲ ದೃಷ್ಟಿಕೋನದ ವಿಚಾರಗಳು ಹಾಗೂ ಪ್ರಾಮಾಣಿಕ ಚಿಂತನೆಗಳು ನಮ್ಮ ಮುಂದೆ ಇಂದಿಗೂ ಜೀವಂತ ಇರುತ್ತವೆ

ಅದೇ ಸಾಮಾಜಿಕ ನ್ಯಾಯ ತಾತ್ವಿಕ ಮತ್ತು ರಾಜಕೀಯ ಪರಂಪರ ಮತ್ತು ಸರ್ವಾಂಗೀಣ ಅಭಿವೃದ್ಧಿ ಚಿಂತನೆಗಳನ್ನು ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಮುಂದುವರೆಸಿಕೊಂಡು, ಕರ್ನಾಟಕದ ಇತಿಹಾಸಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸಿ ನೀವು 13-05-2013 ರಿಂದ 15-05-2018 ರವರೆಗೆ ಹಾಗೂ 20-05-2023 ರಿಂದ 06-01-2026 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಸುದೀರ್ಘ ಮತ್ತು ಸಾರ್ಥಕ ಆಡಳಿತದ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಹಾಗೂ ಮುಂದಿನ ಎರಡುವರೆ ವರ್ಷಗಳ ಕಾಲ ಅಂದರೆ 28 ಮೇ 2028 ರವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರಿ ಎಂದು ನನ್ನ ನಂಬಿಕೆಯಾಗಿದೆ.

CM Siddharamaih ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವು ಸ್ಪಷ್ಟವಾಗಿ ಜನಪರ, ಸಂವಿಧಾನಬದ್ಧ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತವಾಗಿದೆ. ರಾಜ್ಯದ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಯಾವುದೇ ಧರ್ಮ ಜಾತಿ ಭೇದವಿಲ್ಲದೆ
ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ರೈತ ಸಮುದಾಯಕ್ಕೆ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನು ಒದಗಿಸುವಲ್ಲಿ ನಿಮ್ಮ ನಿಮ್ಮ ಪ್ರಾಮಾಣಿಕ ವಿಚಾರಗಳು ಮಹತ್ವದ ಪಾತ್ರ ವಹಿಸಿದೆ.

ಈ ಯೋಜನೆಗಳು ಕರ್ನಾಟಕವನ್ನು ನಿಜಾರ್ಥದಲ್ಲಿ ಕಲ್ಯಾಣರಾಜ್ಯದ ಮಾದರಿಯಾಗಿ ರೂಪಿಸುವ ದಿಟ್ಟ ರಾಜಕೀಯ ಸಂಕಲ್ಪದ ಪ್ರತಿಬಿಂಬಗಳಾಗಿವೆ. ನಿಮ್ಮ
ಆಡಳಿತದಲ್ಲಿ ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನದ ಮೌಲ್ಯಗಳಿಗೆ ಅಚಲ ನಿಷ್ಠೆ ಹಾಗೂ ಜಾತಿ–ಧರ್ಮ–ಭಾಷೆಗಳ ಅತೀತವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಮನ್ವಯದ ರಾಜಕಾರಣವು ನಿಮ್ಮ ನಾಯಕತ್ವದ ವಿಶಿಷ್ಟ ಗುರುತುಗಳಾಗಿವೆ ಎಂದಿದ್ದಾರೆ.

ಸಿದ್ದರಾಮಯ್ಯನವರ ಸಮಾಜಮುಖಿ ಮತ್ತು ಪ್ರಗತಿಪರ ದೃಷ್ಟಿಕೋನಕ್ಕೆ ಸಮಕಾಲೀನ ರಾಜಕೀಯ ರೂಪ ನೀಡಿದ ನಾಯಕರೆಂದು ನಿಮ್ಮನ್ನು ಗೌರವದಿಂದ ಮುಂದಿನ ಇತಿಹಾಸ ಪುಟಗಳಲ್ಲಿ ಸ್ಮರಿಸುವುದು ನಿಶ್ಚಿತ.

ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕೋಟ್ಯಂತರ ಜನತೆಯ ಪರವಾಗಿ, ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ, ಜನಪರ ನೀತಿಗಳಿಗೆ ಹಾಗೂ ರಾಜ್ಯವನ್ನು ಸಮಾನತೆ, ಸೌಹಾರ್ದ ಮತ್ತು ಸಾಮಾಜಿಕ ನ್ಯಾಯದ ದಾರಿಯಲ್ಲಿ ದಿಟ್ಟವಾಗಿ ಮುನ್ನಡೆಸುತ್ತಿರುವ ಸಿದ್ದರಾಮಯ್ಯನವರ ಅವಿರತ ಸೇವೆಗೆ ಗೌರವಪೂರ್ವಕ ಹಾಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇವರ ಆಡಳಿತವು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ.
ಕರ್ನಾಟಕವು ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದದ ಮಾದರಿ ರಾಜ್ಯವಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ದೃಢಪಡಿಸಲಿ ಎಂಬುದು ನನ್ನ ಹಾರೈಕೆ ಎಂದು ಹೇಳಿದ್ದಾರೆ.

ಶ್ರಿ ಬಸವರಾಜ ರಾಯರಡ್ಡಿ.
ಮಾನ್ಯ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರು ಹಾಗೂ ಶಾಸಕರು ಯಲಬುರ್ಗಾ.

Sri Ramakrishna Vidyashrama Trust ರಾಮಕೃಷ್ಣ ವಿದ್ಯಾಸಂಸ್ಥೆಯ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭ

0

Sri Ramakrishna Vidyashrama Trust ಅನುಪಿನಕಟ್ಟೆಯಲ್ಲಿರುವ ರಾಮಕೃಷ್ಣ ಆಂಗ್ಲ ಮಾಧ್ಯಮ ವಸತಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ 2026-27ರ ಸಾಲಿನಲ್ಲಿ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜುನ್ನು ಆರಂಭಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಕಟ್ಟಡ ಹಾಗೂ ಪಿಯು ಕಲಿಕೆಗೆ ಅಗತ್ಯದ ಎಲ್ಲಾ ಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ.

ರಾಮಕೃಷ್ಣ ಗುರುಕುಲದಲ್ಲಿ ನಡೆದ ಜನ್ಮದಾತರ ಪಾದಪೂಜೆ ಸಮಾರಂಭದ ದಿವ್ಯಸಾನಿದ್ಯ ವಹಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ರಾಮಕೃಷ್ಣ ವಿಜ್ಞಾನ ಪದವಿ ಪೂರ್ವ ಕಾಲೇಜು ಶಿರೋನಾಮೆಯನ್ನು ಉದ್ಘಾಟಿಸಿ, ಅತ್ಯಂತ ವ್ಯವಸ್ಥಿತವಾದ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಪಿಯು ವಿಭಾಗ ಆರಂಭಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಇಂದು ದೂರದ ಊರಿಗೆ ಹೋಗಿ ಮಕ್ಕಳು ಕಲಿಯುವ ಅಗತ್ಯವಿಲ್ಲ. ಉತ್ತಮ ಶಿಕ್ಷಣ ನಮ್ಮಲ್ಲೇ ಸಿಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಈ ಸಂಸ್ಥೆಯಿಂದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ವಿದ್ಯಾ ಸಂಸ್ಥೆ ಕೆಲಸ ಮಾಡಿದೆ ಎಂದರು.
ಪೋಷಕರು ಯಾವುದೇ ಅನುಮಾನ ಪಡದೇ ತಮ್ಮ ಮಕ್ಕಳನ್ನು ಇಲ್ಲಿನ ಪಿಯು ವಿಭಾಗಕ್ಕೆ ಸೇರಿಸುವಂತೆ ಅವರು ಪೋಷಕರಿಗೆ ಕರೆ ನೀಡಿದರು.

Sri Ramakrishna Vidyashrama Trust ಸಾವಿರಾರು ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಒಂದೆಡೆ ಸೇರಿಸಿ ಜನ್ಮದಾತರ ಪಾದಪೂಜೆಯನ್ನು ಅತ್ಯಂತ ಯಶಸ್ವಿಯಾಗಿ ಕಳೆದ 19 ವರ್ಷಗಳಿಂದ ನಡೆಸುತ್ತಾ ಬಂದಿರುವ ಈ ಸಂಸ್ಥೆ ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ನಿಲುವುಗಳ ಜೊತೆಗೆ ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ಶ್ಲಾಘನೀಯ ಎಂದರು.

ಇಲ್ಲಿನ ಕಲಿಕೆಯ ಮಕ್ಕಳು ಉತ್ತಮ ಭವಿಷ್ಯವನ್ನು ಪಡೆಯುತ್ತಾರೆ ಎಂದು ಅದಿಚುಂಚನಗಿರಿ ಶ್ರೀಗಳು ತಿಳಿಸಿದರು.

Keladi Shivappanayaka University of Agricultural ಹವಾಮಾನ ಆಧರಿಸಿದ ಕೃಷಿಬೆಳೆಗಳಿಗೆ ಸಕಾಲಿಕ ಸಲಹೆಗಳ ಪ್ಯಾಕೇಜ್ ಅಗತ್ಯವಿದೆ- ಡಾ.ಪಿ.ಚಂದ್ರಶೇಖರ್

0

Keladi Shivappanayaka University of Agricultural ಹವಾಮಾನ ಸ್ಥಿತಿಸ್ಥಾಪಕ ಕೃಷಿಗೆ ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಮಣ್ಣು ಮತ್ತು ನೀರಿನ ನಿರ್ವಹಣೆ, ಬೆಳೆಗಳ ಆಯ್ಕೆಗಳು ಮತ್ತು ಸಕಾಲಿಕ ಸಲಹೆಗಳನ್ನು ಒಳಗೊಂಡ ಸಂಯೋಜಿತ ಯೋಜನೆಗಳ ಅಥವಾ ಪ್ಯಾಕೇಜ್‌ಗಳ ಅಗತ್ಯವಿದೆ ಎಂದು ಬಾಂಗ್ಲಾದೇಶದ ಸಿಐಆರ್‌ಡಿಎಪಿ ಮಹಾನಿರ್ದೇಶಕ ಡಾ.ಪಿ.ಚಂದ್ರಶೇಖರ ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ನ್ಯಾಚುರಲ್ ರಿಸೋರ್ಸಸ್ ಇನ್ಸಿ÷್ಟಟ್ಯೂಟ್ ವಿಶ್ವವಿದ್ಯಾಲಯ, ಗ್ರೀನ್‌ವಿಚ್, ಯುಕೆ ಸಹಯೋಗ ಮತ್ತು ಐಎಸ್‌ಪಿಎಫ್-ಬ್ರಿಟಿಷ್ ಕೌನ್ಸಿಲ್, ನವದೆಹಲಿಯ ಐಸಿಎಸ್‌ಎಸ್‌ಆರ್ ಬೆಂಬಲದೊಂದಿಗೆ ‘ಹವಾಮಾನ ಸ್ಥಿತಿಸ್ಥಾಪಕತ್ವದ ಕೃಷಿ ಸಂಶೋಧನೆ ಮತ್ತು ಸಹಯೋಗವನ್ನು ಮುಂದುವರೆಸುವಲ್ಲಿ ಆರಂಭಿಕ ವೃತ್ತಿಜೀವನದ ಸಂಶೋಧಕರನ್ನು ಸಬಲೀಕರಣಗೊಳಿಸುವುದು’ ವಿಷಯ ಕುರಿತು ಜ.5 ರ ಇಂದಿನಿಂದ ಜ.9 ರವರೆಗೆ ಮಲೆನಾಡು ಶೈರ್ ಎಕೊ ರೆಸಾರ್ಟ್ನಲ್ಲಿ ಏರ್ಪಡಿಸಲಾಗಿರುವ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಳೆ ವಿಫಲವಾದಾಗ, ಪ್ರವಾಹಗಳು ಬಂದಾಗ ಅಥವಾ ಕೀಟಗಳು ಉಲ್ಬಣಗೊಂಡಾಗ ಏನು ಮಾಡಬೇಕು ಎಂಬಂತಹ ಸ್ಪಷ್ಟ ಯೋಜನೆಗಳನ್ನು ಈ ಪ್ಯಾಕೇಜ್‌ಗಳು ಒಳಗೊಂಡಿರಬೇಕು ಎಂದರು.

ಪ್ರಯೋಗಾಲಯಗಳಲ್ಲಿ ಅಥವಾ ಗ್ರಂಥಾಲಯಗಳ ಕಪಾಟಿನಲ್ಲಿ ಜರ್ನಲ್ ಲೇಖನಗಳು, ಪುಸ್ತಕಗಳು ಅಥವಾ ವರದಿಗಳಾಗಿ ಉಳಿಯುವ ಹವಾಮಾನ ಸಂಶೋಧನೆಯಿಂದ ಉಪಯೋಗವಿಲ್ಲ. ಬದಲಾಗಿ ರೈತರು, ವಿಸ್ತರಣಾ ಏಜೆಂಟರು ಮತ್ತು ನೀತಿ ನಿರೂಪಕರು ಈ ಸಂಶೋಧನೆಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ.
ಹವಾಮಾನ ಬದಲಾವಣೆಯು ಎಲ್ಲಾ ಸಮುದಾಯಗಳ ಮೇಲೆ ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಇದು ಸ್ಥಳೀಯ ಮಣ್ಣು, ಸೂಕ್ಷ್ಮ ಹವಾಮಾನ, ಸಂಸ್ಕೃತಿಗಳು ಮತ್ತು ಇತಿಹಾಸಗಳಿಂದ ಸಂದರ್ಭೋಚಿತವಾಗಿ ರೂಪುಗೊಂಡಿದೆ.

ಅದಕ್ಕಾಗಿಯೇ ಸಂಶೋಧಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ, ತಲೆಮಾರುಗಳಿಂದ ಸಂಸ್ಕರಿಸಿದ ಸ್ಥಳೀಯ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಗುರುತಿಸಿ ಮುಂದುವರೆಯಬೇಕು.
ಪ್ರತಿ ವರ್ಷ, ರೈತರು ತಮ್ಮ ಬೆಳೆಯ ಪಾಲನ್ನು ಕಡಿಮೆ ಉತ್ಪಾದಕತೆಯಿಂದಾಗಿ ಅಲ್ಲ, ಬದಲಾಗಿ ಅಸಮರ್ಪಕ ಸಂಗ್ರಹಣೆ, ಕಳಪೆ ನಿರ್ವಹಣೆ, ದುರ್ಬಲ ಮಾರುಕಟ್ಟೆ ಸಂಪರ್ಕಗಳು ಮತ್ತು ಹವಾಮಾನ-ಪ್ರೇರಿತ ಅಡಚಣೆಗಳಿಂದಾಗಿ ಕಳೆದುಕೊಳ್ಳುತ್ತಾರೆ. ಆದ್ದರಿಂದ ಹವಾಮಾನ ಸಂಶೋಧನೆಯು ಉತ್ಪಾದನೆಯನ್ನು ಮೀರಿ ನೋಡಬೇಕು ಮತ್ತು ಕೊಯ್ಲಿನ ನಂತರದ ನಷ್ಟಗಳನ್ನು ಕಡಿಮೆ ಮಾಡುವ, ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಸುಧಾರಿಸುವ, ಮೌಲ್ಯ ಸರಪಳಿಗಳನ್ನು ಬಲಪಡಿಸುವ ಮತ್ತು ಮಾರುಕಟ್ಟೆ ಮಟ್ಟದ ತ್ಯಾಜ್ಯವನ್ನು ತಡೆಯುವ ತಂತ್ರಗಳನ್ನು ಸಂಯೋಜಿಸಬೇಕು.

Keladi Shivappanayaka University of Agricultural ಕೃಷಿ ಸಹಕಾರ ಸಂಘಗಳು ಮತ್ತು ಎಫ್‌ಪಿಓ ಗಳು ಮಾರುಕಟ್ಟೆ ಮಧ್ಯವರ್ತಿಗಳಷ್ಟೇ ಅಲ್ಲ, ಹವಾಮಾನ ಸ್ಥಿತಿಸ್ಥಾಪಕ ತಂತ್ರಜ್ಞಾನ ಉತ್ಪಾದನೆ ಮತ್ತು ಅಳವಡಿಕೆಯಲ್ಲಿ ಪ್ರಮುಖ ಪಾಲುದಾರರೂ ಆಗಿವೆ. ರೈತರನ್ನು ಸಂಘಟಿಸುವ ಮೂಲಕ, ಅವರು ವೈಯಕ್ತಿಕ ಅಪಾಯವನ್ನು ಕಡಿಮೆ ಮಾಡುತ್ತಾರೆ. ಹವಾಮಾನ-ಸ್ಮಾರ್ಟ್ ತಂತ್ರಜ್ಞಾನಗಳು, ಇನ್‌ಪುಟ್‌ಗಳು ಮತ್ತು ಮಾಹಿತಿಯನ್ನು ರೈತರ ಕೈಗೆಟುಕುವಂತೆ ಮಾಡುತ್ತಾರೆ.
ಇಂಡೋನೇಷ್ಯಾದ 2000 ರೈತರು ಅರಣ್ಯ ಸಂರಕ್ಷಣೆಯೊಂದಿಗೆ ಕಾಫಿ ಬೆಳೆದು ಆದಾಯ ಗಳಿಸುತ್ತಾರೆ. ವಿಯೆಟ್ನಾಂ ಸಹಕಾರಿ ಸಂಸ್ಥೆಗಳಿಂದ ಪರಿಸರ ಸಂರಕ್ಷಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಫಿಲಿಪೈನ್ಸ್- ಸಹಕಾರಿಯು ವಿಪತ್ತು ನಿರ್ವಹಣೆಗೆ ಸಿದ್ದತೆ ಮಾಡಿಕೊಂಡಿದ್ದು, ಬಾಂಗ್ಲಾದೇಶ-ಸಿಇಡಬ್ಲ್ಯೂಡಿಸಿ-ಮಹಿಳಾ ಸಹಕಾರಿಗಳು 73000 ಸೌರ ಘಟಕಗಳನ್ನು ಸ್ಥಾಪಿಸಿ ಆದಾಯ ಗಳಿಸುತ್ತಿದ್ದು, ಫಿಜಿ-ಬೌಮಾ ಜಲಪಾತ ಬಳಿಯ ಕೃಷಿಕ ಕುಟುಂಬಗಳು ಪ್ರವಾಸಿ ಗೈಡ್ ಮಾಡುವ ಮೂಲಕ ಆದಾಯ ಗಳಿಸುತ್ತಿವೆ.

ಈ ರೀತಿಯ ಆದಾಯ ಗಳಿಕೆಯ ಅಭ್ಯಾಸಗಳನ್ನು ಉತ್ತೇಜಿಸಬೇಕಿದೆ. ಹಾಗೂ ರೈತರಿಗೆ ಕೈಗೆಟುಕುವ ಡಿಜಿಟಲ್ ಪರಿಹಾರಗಳನ್ನು ನೀಡಬೇಕಿದೆ. ಸಂಶೋಧನಾ ವಿಸ್ತರಣಾ ಸೇವೆಗಳನ್ನು ಬಲಪಡಿಸಬೇಕು. ಹಾಗೂ ರೈತರು ತಮ್ಮ ಹವಾಮಾನ-ಸ್ಮಾರ್ಟ್ ಉತ್ಪನ್ನಗಳನ್ನು ಬ್ರ‍್ಯಾಂಡ್ ಮಾಡಲು ಮತ್ತು ಪ್ರಮಾಣೀಕರಿಸಲು ಸಹಾಯ ಮಾಡಬೇಕು. ಹವಾಮಾನ ಸ್ಥಿತಿಸ್ಥಾಪಕತ್ವ ಕೃಷಿಯನ್ನು ಉತ್ತೇಜಿಸುವ ಸರ್ಕಾರಿ ಬೆಂಬಲ ಕಾರ್ಯಕ್ರಮಗಳು ಮತ್ತು ಸಾಲ ಯೋಜನೆಗಳನ್ನು ಜನಪ್ರಿಯಗೊಳಿಸುವುದರೊಂದಿಗೆ ಸ್ಟಾರ್ಟ್ಅಪ್‌ಗಳು, ಉದ್ಯಮಿಗಳಿಗೆ ಉಚಿತ ಪ್ರವೇಶ ನೀಡಬೇಕೆಂದರು.

ಯುಎಎಸ್, ಬೆಂಗಳೂರು ಕುಲಪತಿ ಡಾ. ಎಸ್.ವಿ.ಸುರೇಶ್ ಮಾತನಾಡಿ, ಹವಾಮಾನ ಬದಲಾವಣೆ ಕೃಷಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದ್ದು, ಹವಾಮಾನ ಬದಲಾವಣೆಯಿಂದ ಕೃಷಿಕರು ಒಂದು ಕಡೆ ಬಲಿಪಶುಗಳಾಗುತ್ತಿದ್ದರೆ ಇನ್ನೊಂದೆಡೆ ಕೃಷಿಯಿಂದಲೂ ಹವಾಮಾನ ಬದಲಾವಣೆಯಾಗುತ್ತಿದೆ. ಆದ ಕಾರಣ ಕೃಷಿಸ್ನೇಹಿಯಾದ ಸಂಶೋಧನೆಗಳನ್ನು, ಸಂಶೋಧಕರನ್ನು ನಾವು ಉತ್ತೇಜಿಸಬೇಕು. ಮಳೆ, ಉಷ್ಣತೆ ವೈಪರೀತ್ಯ ತಡೆಯುವ ತಳಿಗಳ ಅಭಿವೃದ್ದಿಯಾಗಬೇಕು. ಹವಾಮಾನ ಸ್ಮಾರ್ಟ್ ತಂತ್ರಜ್ಞಾನದಿಂದ ರೈತರಿಗಾಗುವ ನಷ್ಟವನ್ನು ಕಡಿಮೆಗೊಳಿಸುವುದು, ಹವಾಮಾನ ವೈಪರೀತ್ಯ ಎದುರಿಸಲು ವ್ಯವಸ್ಥಿತ ವಿಧಾನ ಅನುಸರಣೆ ಮತ್ತು ನಿರ್ವಹಣೆ ಮುಖ್ಯವಾಗಿದೆ. ಜೊತೆಗೆ ಸ್ಪರ್ಧಾತ್ಮಕ ಸಂಶೋಧನೆಗಿಂತ ಸಹಕಾರಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಯುಎಸ್‌ಎ ವಾಷಿಂಗ್ಟನ್ ಡಿಸಿ ಐಎಸ್‌ಎಫ್‌ಆರ್‌ಐ ನ ಸಂಶೋಧನಾ ಸಹೋದ್ಯೋಗಿ ಡಾ.ಸುರೇಶ್ ಚಂದ್ರ ಬಾಬು ಮಾತನಾಡಿ, ಹಿರಿಯ ಸಂಶೋಧಕರ ಅನುಭವದಿಂದ ಯುವ ಸಂಶೋಧಕರನ್ನು ಉತ್ತೇಜಿಸಬೇಕು. ಹವಾಮಾನ ಸ್ಥಿತಿಸ್ಥಾಪಕತ್ವ ಸಾಧಿಸಲು ಸಂಶೋಧನೆ ಅತಿ ಮುಖ್ಯವಾಗಿದೆ.

ಹಸಿರು ಕ್ರಾಂತಿಯ ಪಿತಾಮಹ ಎನಿಸಿಕೊಂಡಿರುವ ಅಮೆರಿಕಾದ ಅಗ್ರೊನೊಮಿಸ್ಟ್ ನಾರ್ಮನ್ ಬೊರ್ಲಾಗ್ ಅವರು ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ವ್ಯಾಪಕ ಕೊಡುಗೆಯನ್ನಿತ್ತಿದ್ದು, ಎಸಿ ರೂಮಿನಲ್ಲಿ ಕೂತು ಕೃಷಿ ನಿಯಮಾವಳಿಗಳನ್ನು ರೂಪಿಸಬೇಡಿ, ಕೃಷಿ ಕ್ಷೇತ್ರಕ್ಕಿಳಿದು ಕೈ ಮಣ್ಣು ಮಾಡಿಕೊಂಡು ಸಂಶೋಧನೆಗಳನ್ನು ಕೈಗೊಳ್ಳಬೇಕು ಎನ್ನುತ್ತಿದ್ದರು ಹಾಗೂ ನೀನು ಜಾಗತಿಕ ನಾಗರೀಕನಾಗಿ ಕೃಷಿ ಸಂಶೋಧನೆಯಲ್ಲಿ ತೊಡಗಬೇಕೆಂದು ಪ್ರೇರೇಪಿಸಿದ್ದರು ಎಂದು ನೆನೆದರು.

ಯುನೈಟೆಡ್ ಕಿಂಗ್‌ಡಮ್ ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಕರ್ನ ಹ್ಯಾನ್ಸನ್, ಮಾತನಾಡಿ, ಹವಾಮಾನ ಬದಲಾವಣೆ ಒಂದು ನಿಜವಾದ ಸವಾಲಾಗಿದ್ದು, ನವೀನ ಸಂಶೋಧನೆಗಳು ಮತ್ತು ಇಂತಹ ಕಾರ್ಯಾಗಾರಗಳು ಎಲ್ಲರೂ ಒಟ್ಟಾಗಿ ಸೇರಿ ಪರಿಹಾರೋಪಾಯಗಳನ್ನು ಕಂಡು ಹಿಡಿಯಲು ಒಂದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.

ಸಿಆರ್‌ಎಆರ್‌ಸಿ -2026 ನ ಸಂಘಟನಾ ಕಾರ್ಯದರ್ಶಿ ಡಾ.ವಿನಯ್ ಕುಮಾರ್ ಹೆಚ್ ಎಂ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಯ ಮೇಲೆ ಹವಾಮಾನ ಬದಲಾವಣೆಯಿಂದಾಗಿ ಹೆಚ್ಚುತ್ತಿರುವ ಸವಾಲುಗಳನ್ನು ಪರಿಹರಿಸುವಲ್ಲಿ ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವುದು ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಕಾರ್ಯಾಗಾರದ ಗುರಿಯಾಗಿದೆ.

ಈ ಕಾರ್ಯಕ್ರಮವು ತಜ್ಞರ ಉಪನ್ಯಾಸಗಳು, ಪ್ರಾಯೋಗಿಕ ತರಬೇತಿ ಅವಧಿಗಳು, ಪ್ರಸ್ತಾವನೆ ಅಭಿವೃದ್ಧಿ ಕಾರ್ಯಾಗಾರಗಳು, ಕ್ಷೇತ್ರ ಮಾನ್ಯತೆ ಮತ್ತು ಬ್ರಿಟಿಷ್ ಕೌನ್ಸಿಲ್, ಐಸಿಎಸ್‌ಎಸ್‌ಆರ್, ಡಿಎಸ್‌ಟಿ, ಐಸಿಎಆರ್, ಎಎನ್‌ಆರ್‌ಎಫ್ ಮತ್ತು ವಿಜಿಎಸ್‌ಟಿ ಸೇರಿದಂತೆ ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಸಂವಹನಗಳನ್ನು ಒಳಗೊಂಡಿರುತ್ತದೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಯುವ ಸಂಶೋಧಕರು, ವಿಜ್ಞಾನಿಗಳು ಮತ್ತು ತಜ್ಞರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಯುನೈಟೆಡ್ ಕಿಂಗ್‌ಡಮ್‌ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ನೈಸರ್ಗಿಕ ಸಂಪನ್ಮೂಲ ಸಂಸ್ಥೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ವಿಜ್ಞಾನ ಪಾಲುದಾರಿಕೆ ನಿಧಿ (ISPಈ-ಬ್ರಿಟಿಷ್ ಕೌನ್ಸಿಲ್) ಮತ್ತು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಜಂಟಿಯಾಗಿ ಈ ಕಾರ್ಯಾಗಾರವನ್ನು ಆಯೋಜಿಸಿವೆ.

ಒಟ್ಟು ಐದು ದಿನಗಳ ಈ ಕಾರ್ಯಗಾರದಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ನಿಂದ ವಿಜ್ಞಾನಿಗಳು ಭಾಗವಹಿಸಲಿದ್ದು, ಹವಾಮಾನ-ನಿರೋಧಕ ಕೃಷಿ ನಾವೀನ್ಯತೆಗಳು, ಇಂಗಾಲ ಕೃಷಿ, ಕೃಷಿ ಹವಾಮಾನಶಾಸ್ತ್ರ, ಸುಸ್ಥಿರ ತಂತ್ರಜ್ಞಾನಗಳು ಮತ್ತು ಅಂತರರಾಷ್ಟ್ರೀಯ ಸಹಯೋಗದ ಮೇಲೆ ದೃಷ್ಟಿಕರಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಹಿರಿಯ ಗಣ್ಯರು ಮುಖ್ಯ ಭಾಷಣಗಳನ್ನು ನೀಡಲಿದ್ದಾರೆ ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ ಜಗದೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತ ಬ್ರಿಟಿಷ್ ಕೌನ್ಸಿಲ್‌ನ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಡಾ. ರಾಜೇಂದ್ರ ತ್ರಿಪಾಠಿ, ಯುನೈಟೆಡ್ ಕಿಂಗ್‌ಡಮ್ ನ ಗ್ರೀನ್‌ವಿಚ್ ವಿಶ್ವವಿದ್ಯಾಲಯದ ಡಾ. ಲೂಸಿ ಬುಷಿ, ಕೆಎಸ್‌ಎನ್‌ಯುಎಹೆಚ್ ಸಂಶೋಧನಾ ಸಹ ನಿರ್ದೇಶಕ ಡಾ. ಪ್ರದೀಪ್ ಎಸ್, ಆಡಳಿತ ಮಂಡಳಿ ಸದಸ್ಯರಾದ ಡಾ. ಟಿ ಕೆ ಬಸವರಾಜ್ ಪ್ರಭು, ಡಾ.ಬಿ.ಕೆ.ಕುಮಾರಸ್ವಾಮಿ, ದೇವಿಕುಮಾರ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಎಂ.ದುಶ್ಯಂತ್ ಕುಮಾರ್ ಸ್ವಾಗತಿಸಿದರು.

K.S. EShwarappa ಯೋಧರನ್ನು ಸನ್ಮಾನಿಸುವುದು ನನಗೆ ಸಿಕ್ಕ ಭಾಗ್ಯ- ಮಾಜಿ ಡೀಸಿಎಂ ಕೆ.ಎಸ್. ಈಶ್ವರಪ್ಪ

0

K.S. EShwarappa ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರು ಭಾರತೀಯ ಯುವಪೀಳಿಗೆಗೆ ಪ್ರೇರಣೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ನವುಲೆಯ ಇಂದಿರಾಗಾಂಧಿ ಬಡಾವಣೆ ನಿವಾಸಿಗಳ ಸಂಘದಿಂದ ಆಯೋಜಿಸಿದ್ದ 8ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಧರನ್ನು ಸನ್ಮಾನಿಸುವುದು ನನಗೆ ಸಿಕ್ಕಿರುವ ಭಾಗ್ಯ. ಯುವಜನರು ದೇಶಕ್ಕಾಗಿ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರಭಕ್ತರ ಬಳಗದ ಯುವ ಮುಖಂಡ ಕೆ.ಇ.ಕಾಂತೇಶ್ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಬಡಾವಣೆಗಳ ಅಭಿವೃದ್ಧಿಗೆ ಸದಾ ಪ್ರಾಮಾಣಿಕವಾಗಿ ಶ್ರಮಿಸುವುದರ ಮುಖಾಂತರ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.

ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್ ಮಾತನಾಡಿ, ಅತಿ ಹೆಚ್ಚು ಅನುದಾನ ತಂದಿರುವುದರಲ್ಲಿ ನಮ್ಮ ಬಡಾವಣೆ ಮುಂಚೂಣಿಯಲ್ಲಿದ್ದು, ಬಡಾವಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸಹ ಅದರ ಪರಿಹಾರಕ್ಕೆ ಸಾರ್ವಜನಿಕರ ಜೊತೆ ಕೈಜೋಡಿಸುತ್ತೇನೆ ಎಂದು ನುಡಿದರು.

K.S. EShwarappa ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಯುವ ಕಾಂಗ್ರೆಸ್ ಮುಖಂಡ ಚೇತನ್.ಕೆ ಮಾತನಾಡಿ, ಬಡಾವಣೆ ನಿವಾಸಿಗಳಲ್ಲಿ ಹೆಚ್ಚಿನವರು ಹಿರಿಯರೇ ಇದ್ದು, ಅವರು ಬಡಾವಣೆಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಅಭಿನಂದನೀಯ ಎಂದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧರಾದ ನಾಯ್ಕ್ ಪ್ರವೀಣ್ ಕುಮಾರ್ (ಇಎಂಇ ಭಾರತೀಯ ಸೇನೆ), ಕೃಷ್ಣಪ್ಪ ಡಿ (ಬಿಎಸ್‌ಎಫ್ ಸಿಗ್ನಲ್ ವಿಭಾಗ ಭಾರತೀಯ ಸೇನೆ), ಪಾಂಡುರಂಗ ಎಸ್.ಕೆ (ಸಿಆರ್‌ಪಿಎಫ್ ಭಾರತೀಯ ಸೇನೆ), ಶ್ರೀನಿವಾಸ್ (ಹವಾಲ್ದಾರ್, ಭಾರತೀಯ ಸೇನೆ), ರಂಗಪ್ಪ ಲಕ್ಕಜ್ಜೇರ (ಭೂ ಸೇನೆ ಕೊರಾಫ್ ಸಿಗ್ನಲ್ ವಿಭಾಗ ಭಾರತೀಯ ಸೇನೆ) ಅವರಿಗೆ ಗೌರವಿಸಲಾಯಿತು.

ಬಡಾವಣೆ ನಿವಾಸಿ ಸಂಘದ ಅಧ್ಯಕ್ಷ ಶಿವಪ್ಪ ಮಾತನಾಡಿ, ಸೈನಿಕರು ನಮ್ಮ ದೇಶದ ಆಸ್ತಿ. ಅವರನ್ನು ಗೌರವಿಸುವುದರಿಂದ ನಮ್ಮ ದೇಶಭಕ್ತಿಯನ್ನು ತೋರಿಸಿದಂತಾಗುತ್ತದೆ. ಪ್ರತಿಯೊಬ್ಬರಲ್ಲೂ ದೇಶಪ್ರೇಮ ಬೆಳೆಸಬೇಕು ಎಂದು ನುಡಿದರು. ಬಡಾವಣೆ ನಿವಾಸಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು

Sankara Eye Hospital ಸಾವಿನಲ್ಲೂ ಸಾರ್ಥಕತೆ ಮೆರೆದ ಸಾಧ್ವಿ ಪದ್ಮಾವತಮ್ಮ

0

Shankara Eye Hospital ದಿವಗಂತ ಸ್ವತಂತ್ರ ಹೋರಾಟಗಾರರಾದ ಶ್ರೀನಿವಾಸರಾವ್ ರವರ ದರ್ಮಪತ್ನಿ ಪದ್ಮಾವತಿ (95) ಶುಕ್ರವಾರದಂದು ಶಿವಮೊಗ್ಗದ ತಮ್ಮ ಸ್ವ ಗೃಹದಲ್ಲಿ ವಯೋ ಸಹಜ ಕಾಯಿಲೆಗಳಿಂದ ದೈವಾಧೀನರಾಗಿದ್ದಾರೆ.

ಆದರೆ ಸಾವಿನ ನಂತರ ಅವರ ಕುಟುಂಬಸ್ಥರು ಅವರ ಎರಡು ಕಣ್ಣುಗಳನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Shankara Eye Hospital ಇವರ ಸಾವಿಗೆ ಇವರ ಪುತ್ರರಾದ ಶಿವಮೊಗ್ಗದ ಹತ್ವಾರ್ ಮೆಡಿಕಲ್ ಏಜೆನ್ಸಿಯ ಮಾಲೀಕರಾದ ಕೆ.ಎಸ್. ಸದಾನಂದ ಹತ್ವಾರ್ ಹಾಗೂ ಅವರ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

CM Siddharamaih ಪರಿಸರವನ್ನು ನಾವು ರಕ್ಷಿಸಿದರೆ ಅದಹ ನಮ್ಮನ್ನು ರಕ್ಷಿಸುತ್ತದೆ. ಚಿತ್ರಸಂತೆಯ ಧ್ಯೇಯವಾಕ್ಯ ಅರ್ಥಪೂರ್ಣ- ಸಿದ್ಧರಾಮಯ್ಯ

0

CM Siddharamaih ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ 23ನೇ ಚಿತ್ರಸಂತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ ಎನ್ನುವುದು ಖುಷಿಯ ವಿಚಾರ. ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದರು.

ಚಿತ್ರಸಂತೆ ತನ್ನ 23ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು, ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು, ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ. ಈ ಬಾರಿಯ ಚಿತ್ರಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

CM Siddharamaih ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ. 30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಸಾಲು ಮರದ ತಿಮ್ಮಕ್ಕನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಹಲವು ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.

ಪರಿಸರ ರಕ್ಷಣೆಗಾಗಿ ಹೋರಾಟವನ್ನೇ ಕೈಗೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಗಿಡ ನೆಡಲು ಬಹಳ ಖರ್ಚು ಆಗುವುದಿಲ್ಲ. ಮನಸ್ಸು ಮಾಡಬೇಕಷ್ಟೆ. ಸರ್ಕಾರ ಕೂಡ ಈ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದು ಹೇಳಿದರು.

ಜೀವನಕ್ಕಾಗಿ ಪತ್ರಿಕೋದ್ಯಮ ಮಾಡಬೇಡಿ. ಅದು ಒಂದು ಅಭಿಯಾನ ಇದ್ದಂತೆ- ಕೆ.ಶಿವಕುಮಾರ್.

0

ದಲಿತ ಪತ್ರಕರ್ತರ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡುವ ಸಮಿತಿಯು ಈ ಬಗ್ಗೆ ಸಮಗ್ರ ಅಧ್ಯಯನ ಮಾಡಲು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ, ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿಯಲ್ಲಿ ಇರುವ ಅಂಶಗಳನ್ನು ಜಾರಿಗೊಳಿಸಲು ಪ್ರಯತ್ನಿಸುವುದಾಗಿ’ ಸಮಿತಿಯ ಅಧ್ಯಕ್ಷರೂ ಆದ ವಿಧಾನ ಪರಿಷತ್‌ ಸದಸ್ಯ ಕೆ. ಶಿವಕುಮಾರ್‌ ತಿಳಿಸಿದರು.
ʼಹೊಸ ಜಾಹೀರಾತು ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದವರು ಪ್ರಕಟಿಸುವ ಪತ್ರಿಕೆಗಳಿಗೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಜೀವನಕ್ಕಾಗಿ ಪತ್ರಿಕೋದ್ಯಮ ಮಾಡಬಾರದು. ಪತ್ರಿಕೋದ್ಯಮ ಒಂದು ಮಿಷನ್‌ (ಅಭಿಯಾನ) ಇದ್ದಂತೆ. ಇಂದು ನಮ್ಮ ದೇಶದಲ್ಲಿ ಒಗ್ಗಟ್ಟು ಕಾಪಾಡಿಕೊಂಡಿರಲು ಪತ್ರಿಕೋದ್ಯಮವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಶನಿವಾರ ಆಯೋಜಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರಿಗೆ ಪತ್ರಿಕೆಗಳಲ್ಲಿ ಎಐ ಬಳಕೆ ಮತ್ತು ಡಿಜಿಟಲ್‌ ಸವಾಲುಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ತತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ಮೂಲಕ ಸುಳ್ಳನ್ನು ಸತ್ಯವೆಂದು ಬಿಂಬಿಸುವ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಕೆಲ ಪಕ್ಷಗಳು ಸಮಾಜದ ಸಾಮರಸ್ಯವನ್ನು ಹಾಳು ಮಾಡುವ ಕೆಲಸ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ದಲಿತ ಸಂಪಾದಕರ ಹಾಗೂ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ ಎಂದ ಅವರು, ಎಲ್ಲ ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಪ್ರಸ್ತುತ ಸ್ಥಿತಿಗತಿಗಳ ಕುರಿತು ಸಂಪಾದಕೀಯ ಬರೆಯಬೇಕು. ಈಗ ಕುಟುಂಬ ಆಧಾರಿತ ಪತ್ರಿಕೆಗಳು ಹೆಚ್ಚಾಗಿವೆ. ಇದನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು.
‘ಮುಖ್ಯ ವಾಹಿನಿಯ ಬಹಳಷ್ಟು ಪತ್ರಿಕೆಗಳು ಒಂದು ತತ್ವ, ಸಿದ್ಧಾಂತದ ಕಡೆಗೆ ವಾಲುತ್ತಿವೆ. ನಾವು ಸ್ವತಂತ್ರ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.
“ಪತ್ರಿಕೆಗಳಲ್ಲಿ ಸಂವಿಧಾನದ ಕುರಿತು ಲೇಖನಗಳನ್ನು ಪ್ರಕಟಿಸಿ, ಅವುಗಳನ್ನು ಶಾಲಾ ಕಾಲೇಜಿನ ಮಕ್ಕಳಿಗೆ ತಲುಪಿಸುವ ಕೆಲಸ ಮಾಡಬೇಕು. ಜ. 26ರಿಂದ 2027ರ ಜ. 26ರವರೆಗೆ ಎರಡು ವರ್ಷಗಳ ಕಾಲ ಸಂವಿಧಾನ ಪೀಠಿಕೆಯಿಂದ ಹಿಡಿದು ಪ್ರಮುಖ ಅಂಶಗಳನ್ನು ಪ್ರಕಟಿಸಿ, ಮಾಧ್ಯಮ ಅಕಾಡೆಮಿಗೆ ತಂದು ಕೊಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್‌ ಅವರು ಸಂಪಾದಕರಿಗೆ ಸತ್ಯಶೋಧನೆ, ಪ್ರಾಮಾಣಿಕತೆಯ ಮಹತ್ವವನ್ನು ತಮ್ಮ ಅನುಭವಗಳೊಂದಿಗೆ ವಿವರಿಸಿದರು.
ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ತರಬೇತಿ ಎಐ ಬಳಕೆ ಹಾಗೂ ಅದರ ಸಾಧಕ, ಬಾಧಕ, ಹೊಸ ತಂತ್ರಜ್ಞಾನಗಳ ಅಳವಡಿಕೆ ಕುರಿತು ನಿಮ್ಮನ್ನು ಚಿಂತನೆಗೆ ಹಚ್ಚುವ ಒಂದು ಪ್ರಯತ್ನವಾಗಿದೆ ಎಂದು ವಿವರಿಸಿದರು.
ಅಕಾಡೆಮಿಯ ಸದಸ್ಯರಾದ ಶ್ರೀ ಜೆ.ಅಬ್ಬಾಸ್‌ ಮುಲ್ಲಾ ಹಾಗೂ ಶ್ರೀ ಕೆ. ವೆಂಕಟೇಶ್‌, ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಶ್ರೀ ಚೆಲುವರಾಜು ಮತ್ತು ಕಾರ್ಯದರ್ಶಿ ಸಹನಾ ಎಂ. ಉಪಸ್ಥಿತರಿದ್ದರು. ರಾಹುಲ್‌ ಗುಂಡಾಲ, ಶ್ರೀ ಡಿ.ಎನ್.‌ ಹಾಗೂ ಎಸ್.‌ ಕುಮಾರ್‌ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.