ಮೆಸ್ಕಾಂ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ವಿದ್ಯುತ್ ಅವಘಡದಿಂದ ಮೃತ ಪಟ್ಟಿದ್ದ ಜಡೆ ವಿಭಾಗದ ಶಾಖಾಧಿಕಾರಿಯಾಗಿದ್ದ ಮಹಾಲಿಂಗಪ್ಪ ಅವರ ಪಾರ್ಥೀವ ಶರೀರ ವನ್ನು ಅವರು ಕಾರ್ಯ ನಿರ್ವಹಿಸುತ್ತಿದ್ದ ಜಡೆ ಕಛೇರಿಗೆ ತರಲಾಯಿತು. ಕಿಕ್ಕಿರಿದು ನೆರೆದಿದ್ದ ಜನ ಸಾಗರದ ಮಧ್ಯೆ ಸ್ವಾಮೀಜಿಗಳು, ಸಿಬ್ಬಂದಿ ವರ್ಗದವರು, ಊರ ಹಿರಿಯರು, ಗ್ರಾಮಸ್ಥರು, ಪ್ರಮುಖರು ಅಂತಿಮ ಗೌರವ ಸಲ್ಲಿಸಿದರು.
ಅಂತಿಮ ಗೌರವ ಸಲ್ಲಿಸಿ ಮಾತನಾಡಿದ ಜಡೆ ಮಹಾಂತ ಮಹಾಸ್ವಾಮಿಗಳು ಮಹಾಲಿಂಗಪ್ಪ ಅವರು ಜನಾನುರಾಗಿಯಾದ ಅಧಿಕಾರಿಯಾಗಿದ್ದರು. ಅವರನ್ನು ಕಳೆದುಕೊಂಡು ನಮ್ಮ ತಾಲ್ಲೂಕು ಅಷ್ಟೆ ಅಲ್ಲ ನಮ್ಮ ಜಿಲ್ಲೆಗೆ ನಷ್ಟವಾಗಿದೆ. ಎಲ್ಲಿಯೇ ತೊಂದರೆ ಇರಲಿ ಅದನ್ನು ತಕ್ಷಣ ಸರಿಪಡಿಸುವ ಮನೋಭಾವ ಹೊಂದಿದ್ದಕ್ಕೆ ಇಲ್ಲಿ ಸೇರಿರುವ ಜನ ಸಾಗರವೇ ಸಾಕ್ಷಿಯಾಗಿದೆ ಎಂದರು.
ಮಹಾಲಿಂಗಪ್ಪ ಅವರ ಶ್ರದ್ಧಾಂಜಲಿ ಯಲ್ಲಿ ಭಾಗವಹಿಸಿ ಮಾತನಾಡಿದ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇಲಾಖೆ ಹಾಗೂ ಸಾರ್ವಜನಿಕರ ಸಂಪರ್ಕ ಸೇತುವೆ ಆಗಿದ್ದವರು ಮಹಾಲಿಂಗಪ್ಪ ಅವರು. ಪರಸ್ಪರ ಪ್ರೇಮ, ಸಹಕಾರ, ಸೌಹಾರ್ದತೆ ಗೆ ಹೆಸರಾಗಿದ್ದರು. ಇವರ ಕಾರ್ಯಕ್ಷಮತೆ ಯಿಂದ ಇಂದು ಈ ಭಾಗದಲ್ಲಿ ಬೆಳೆಗಳು ಚನ್ನಾಗಿವೆ. ಮನೆಗಳಲ್ಲಿ ಬೆಳಕು ಚನ್ನಾಗಿದೆ. ತಮ್ಮ ವ್ಯಕ್ತಿತ್ವದಿಂದ ಈ ಭಾಗದ ಜನಗಳ ಮನ ಗೆದ್ದಿದ್ದು ಅವರ ಮರಣದಿಂದ ಈ ಭಾಗದಲ್ಲಿ ಸೂತಕದ ವಾತಾವರಣ ಅವರಿಸಿಕೊಂಡಿದೆ ಎಂದರು.
ಜಡೆ ಸಂಸ್ಥಾನ ಮಠದ ಕಿರಿಯ ಶ್ರೀಗಳಾದ ಕುಮಾರ ಕೆಂಪಿನ ಸಿದ್ಧ ವೃಷಭೇಂದ್ರ ಸ್ವಾಮಿಗಳು ಮಾತನಾಡಿ ಮಹಾಲಿಂಗಪ್ಪ ಅವರ ಸೇವೆ ಅನನ್ಯವಾದದು. ಯಾವುದೇ ಜಾತಿ ಮತ ಧರ್ಮ ಬೇಧವಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆ ಈ ಭಾಗದ ಜನತೆಗೆ ಬೇಸರದ ಸಂಗತಿಯಾಗಿದೆ ಎಂದರು.
ಸಾವಿರಾರು ಸಾರ್ವಜನಿಕ ರು ಹಾಗೂ ಇಲಾಖೆ ಸಿಬ್ಬಂದಿ ವರ್ಗದವರು ಅಂತಿಮ ನಮನ ಸಲ್ಲಿಸಿದರು. ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ನಂತರ ಅಂತಿಮ ಸಂಸ್ಕಾರಕ್ಕಾಗಿ ಅವರ ಹುಟ್ಟೂರಿಗೆ ಪಾರ್ಥೀವ ಶರೀರವನ್ನು ಬೀಳ್ಕೊಡಲಾಯಿತು.
