Wednesday, May 6, 2026
Wednesday, May 6, 2026
Home Blog Page 22

Shivamogga Airport ಚನ್ನೈ ವಿಮಾನ ರದ್ದು. ಪ್ರಯಾಣಿಕರಿಗೆ ಚನ್ನೈಗೆ ‌ಕೊಂಡೊಯ್ಯಲು ಬಸ್ ವ್ಯವಸ್ಥೆ: ಜನರ ಆಕ್ರೋಶ

0

Shivamogga Airport ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಚೆನ್ನೈ ವಿಮಾನ ರದ್ದಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಚೆನ್ನೈಗೆ ತೆರಳ ಬೇಕಿದ್ದ ಸ್ಪೈಸ್ ಜೆಟ್ ವಿಮಾನವು ಕಾರಣಾಂತರಗಳಿಂದ ರದ್ದಾಗಿದೆ ‌. ಇದರಿಂದಾಗಿ 50ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವಂತಾಗಿದೆ.
ವಿಮಾನ ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಪರ್ಯಾಯಮಾರ್ಗವನ್ನು ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ. ವಿಮಾನಯಾನ ಸಂಸ್ಥೆಯು ಚೆನ್ನೈಗೆ ಪ್ರಯಾಣ ಮಾಡಲು ಬಸ್ ವ್ಯವಸ್ಥೆ ಮಾಡಿದ್ದು ಬಸ್ ಸ್ಥಿತಿ ಕಂಡು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದುವಣಿಗರು ಎತ್ತಿನಗಾಡಿ ಮೆರವಣಿಗೆಯಲ್ಲಿ ರಾರಾಜಿಸಿದರು

0

ಶಿವಮೊಗ್ಗದ ಸಾಗರದ ಕಾಗೋಡಿನಲ್ಲಿ ಎತ್ತಿನ ಬಂಡಿಯಲ್ಲಿ ವಧು ವರರ ಮೆರವಣಿಗೆ ನಡೆಸಲಾಯಿತು.

ಕಾಗೋಡು ಶಾರದಕ್ಕ ಎಂಬುವವರಿಂದ ಎತ್ತಿನ ಬಂಡಿ ಮೆರವಣಿಗೆ ನಡೆಯಿತು.

ಕಳೆದ ಶುಕ್ರವಾರ ನಡೆದ ಮದುವೆ ಸಂಭ್ರಮದಲ್ಲಿ
ಊರಿನ ದೇವಸ್ಥಾನದಿಂದ ಗಂಡಿನ ಮನೆವರೆಗೂ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಮಡಿವಾಳ ಧರ್ಮಪ್ಪರವರ ಮಗ ಹೆಮಂತ್ ಹಾಗೂ ಅಂಕಿತ ರವರ ಮದುವೆ ಸಂಭ್ರಮದಲ್ಲಿ ಈ ಅಪರೂಪದ ದೃಶ್ಯ ಕಾಣಸಿಕ್ಕಿತು.

ಏಪ್ರಿಲ್ 18. ಶಿವಮೊಗ್ಗದ ನಂಜಪ್ಪ ಲೇ ಔಟ್ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ 11 ಕೆವಿ ಮಾರ್ಗದಲ್ಲಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ. 18 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಪಂಡಿತ್ ಲೇಔಟ್, ಊರುಗಡೂರು, ಕಂಟ್ರಿಕ್ಲಬ್ ರಸ್ತೆ, ಎಂ.ಸಿ.ಲೇಔಟ್, ಗೋಶಾಲೆ ರಸ್ತೆ, ಶ್ರೀರಾಮ ಬಡಾವಣೆ, ತೋಟಗಾರಿಕೆ ಇಲಾಖೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

JCI Shivamogga ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ಅನಾಥ ಮಹಿಳೆಯರಿಗೆ ಭಾವನಾ ಜೆಸಿಐನಿಂದ ಉಡುಪು ವಿತರಣೆ

0

JCI Shivamogga ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಭಾವನದಿಂದ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಅನಾಥ ವೃದ್ಧರಿಗೆ ಅಗತ್ಯವಿರುವ ನೈಟಿಗಳನ್ನು ವಿತರಿಸಲಾಗಯಿತು. ಅಧ್ಯಕ್ಷೆ ಕರಿಬಸಮ್ಮ ಆನಂದ್, ಜೆಸಿಐ ಸೆನೆಟರ್ ಕಾರ್ಕಳ ಗಣೇಶ್ ಪೈ, ಜೆಸಿಐ ಭಾವನದ ಐಪಿಪಿ, ಝೆನ್ ಆಫೀಸರ್ ರೇಖಾ ರಂಗನಾಥ್, ಜೆ ಎ ಸಿ ಝೆನ್ ವೈಸ್ ಚೇರ್ಮನ್ ಪೂರ್ಣಿಮಾ ಸುನೀಲ್ ಭಾಗವಹಿಸಿದ್ದರು.

Brahmakumari Ishwariya University ಆಧ್ಯಾತ್ಮ , ಧ್ಯಾನ ಮತ್ತು ಯೋಗ ಮನುಷ್ಯನ ನೈಜ ಸಂಪತ್ತು-ಬ್ರಹ್ಮಕುಮಾರಿ ಸ್ವಾತಿ

0

Brahmakumari Ishwariya University ಒತ್ತಡ ಮತ್ತು ಅಶಾಂತಿಯ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರಿಗೆ ಅದರಿಂದ ಹೊರಬರಲು ಭಗವಂತನ ಸಂದೇಶ ಮತ್ತು ಶಾಂತಿಯ ಮಹತ್ವದ ಅರಿವು ಮೂಡಿಸಬೇಕಿದೆ. ಆಧ್ಯಾತ್ಮ, ಧ್ಯಾನ, ಯೋಗ ಮನುಷ್ಯನ ನಿಜವಾದ ಸಂಪತ್ತು ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ, ರಾಜಯೋಗಿನಿ, ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸಂಸ್ಥೆಯು ಜಗತ್ತಿಗೆ ಶಾಂತಿಯ ಸಂದೇಶ ಸಾರುತ್ತ ಮನುಷ್ಯ ಉತ್ತಮ ಹಾದಿಯಲ್ಲಿ ಬದುಕು ರೂಪಿಸಿಕೊಳ್ಳುವಂತೆ ನೆರವಾಗುತ್ತಿದೆ ಎಂದು ತಿಳಿಸಿದರು.
ಮನುಷ್ಯ ಕೆಟ್ಟ ಚಟಗಳಿಗೆ ದಾಸನಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಒಳ್ಳೆಯ ಸಂಗತಿಗಳಿಂದ ದೂರ ಉಳಿಯುತ್ತಿದ್ದಾರೆ. ಕೆಟ್ಟ ಹವ್ಯಾಸಗಳಿಗೆ ಬೇಗನೇ ಬಲಿಯಾಗುತ್ತಿದೆ. ಅದನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ ವ್ಯಕ್ತಿಯಾಗಿ ರೂಪಿಸಲು ಪರಿವರ್ತನೆ ತರಬೇಕಿದೆ. ಆಧ್ಯಾತ್ಮಿಕ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಪರಮಾತ್ಮನ ನೆನಪು ನಮ್ಮಲ್ಲಿ ಸಾತ್ವಿಕ ಶಕ್ತಿ ವೃದ್ಧಿಸುತ್ತದೆ. ಒಳ್ಳೆಯ ಹಾದಿಯಲ್ಲಿ ಕೆಟ್ಟ ಸಂಗತಿಗಳಿಗೆ ಎಂದಿಗೂ ಪ್ರೇರಣೆ ಇರುವುದಿಲ್ಲ. ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಒಳ್ಳೆಯ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ಉತ್ತಮ ವ್ಯಕ್ತಿತ್ವ ಬೆಳವಣಿಗೆ ಬೆಳೆಸುವಲ್ಲಿ ನೆರವಾಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ. ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಶಿಬಿರ ಪೂರಕವಾಗಿದೆ ಎಂದು ತಿಳಿಸಿದರು.
Brahmakumari Ishwariya University ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರದ ಮಹತ್ವ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವಲ್ಲಿ ಇಂತಹ ಶಿಬಿರಗಳು ಮಹತ್ತರ ಪಾತ್ರ ವಹಿಸುತ್ತವೆ. ಮಕ್ಕಳು ಸರಿಯಾದ ಹಾದಿಯಲ್ಲಿ ಮುನ್ನಡೆಯಲು ಪೋಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಬ್ರಹ್ಮಕುಮಾರಿ ಕಾವ್ಯಾ ಹಾಗೂ ಈಶ್ವರೀಯ ಸಂಸ್ಥೆಯ ಸದಸ್ಯರು ಹಾಜರಿದ್ದರು.

Dr. B.R. Ambedkar ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ 19 ಜನಕ್ಕೆ ಜೀವ ವಿಮಾ ಬಾಂಡ್ ವಿತರಣೆ

0

Dr. B.R. Ambedkar ಶಿವಮೊಗ್ಗ ಜಿಲ್ಲೆಯ ಹೊಳೆ ಬೆನವಲ್ಲಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ವಿಶ್ವ ನಾಯಕ ಭಾರತ ರತ್ನ ಡಾ ಬಿ.ಆ‌ರ್. ಅಂಬೇಡ್ಕ‌ರ್ ರವರ 135ನೇ ಜಯಂತಿಯನ್ನು ಅದಿ ದ್ರಾವಿಡ ಸ್ವಸಹಾಯ ಸಂಘದ ವತಿಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರ ಪಾಲಿಕೆಯ ಮಾಜಿ ಮಹಾಪೌರರು ಏಳು ಮಲೈ ಹಾಗೂ ಭದ್ರಾವತಿಯ ಆದಿ ದ್ರಾವಿಡ ತಮಿಳ್ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರು ನಿತ್ಯಾನಂದನ್, ಜೈಪಾಲ್ .ನಾರಾಯಣಸ್ವಾಮಿ ಉದಯಕುಮಾ‌ರ್. ಗುನಾಲನ್‌. ಅರುಣ ಕುಮಾರ್. ಮುರುಗೇಶ್ ಸೇರಿದಂತೆ ಗ್ರಾಮದ ಮುಖಂಡರು ಮಹಿಳೆಯರು ಯುವಕ ಮಿತ್ರರು ಸೇರಿ ಆಚರಿಸಲಾಯಿತು.
Dr. B.R. Ambedkar ಈ ಕಾರ್ಯಕ್ರಮದಲ್ಲಿ ಸಂಘದ 19 ಜನ ಸದಸ್ಯರಿಗೆ ಎಲ್‌ಐಸಿ ಬಾಂಡ್‌ ವಿತರಿಸಲಾಯಿತು. ಭದ್ರಾವತಿ ಯಲ್ಲಿಯೂ ಆದಿ ದ್ರಾವಿಡ ತಮಿಳು ಹಿತ ರಕ್ಷಣಾ ಸಮಿತಿ ಯಿಂದ ತಮಿಳ್ ಯೂತ್ ಮುಖಾಂತರ ಸಿಹಿ ವಿತರಿಸಲಾಯಿತು.

VISL ಡಾ.ಅಂಬೇಡ್ಕರ್ ಮತ್ತು ವಿಶ್ವೇಶ್ವರಯ್ಯನವರ ಜೀವನದ ವಿಚಾರಗಳು ಮಕ್ಕಳಿಗೆ ಅಗತ್ಯ- ಬಿ.ವಿಶ್ವನಾಥ್

0

VISL ವಿಐಎಸ್‌ಎಲ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ದ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಹೆಚ್.ಆರ್) ಮತ್ತು ಪ್ರಭಾರಿ ಕಾರ್ಯಪಾಲಕ ನಿರ್ದೇಶಕರು, ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು ಪ್ರಭಾರಿ (ಸ್ಥಾವರ), ಶ್ರೀ ಎಂ. ಸುಬ್ಬರಾವ್, ಮಹಾಪ್ರಬಂಧಕರು (ಪರಿಸರ ನಿರ್ವಹಣಾ ಇಲಾಖೆ), ಶ್ರೀ ಎಲ್. ಸುಂದರವಡಿವೇಲು, ಮಹಾಪ್ರಬಂಧಕರು ಕಾರ್ಮಿಕರ ಸಮನ್ವಯಾಧಿಕಾರಿ, ಶ್ರೀ ನವೀನ್ ರಾಹುಲ್, ಸಹಾಯಕ ಮಹಾಪ್ರಬಂಧಕರು (ನಗರಾಡಳಿತ ಮತ್ತು ಸಾರ್ವಜನಿಕ ಸಂಪರ್ಕ) ಮತ್ತು ಅಧ್ಯಕ್ಷರು, ಅಸೋಸಿಯೇಷನ್, ಶ್ರೀ ಪಿ. ಅಮೃತ್ ಕುಮಾರ್, ಅಧ್ಯಕ್ಷರು, ಕಾರ್ಮಿಕರ ಸಂಘ, ಶ್ರೀ ಅಜಯ್ ಡಿ. ಸೋಂಕುವಾರ್, ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಮರ್ಪಿಸಿದರು.

ಶ್ರೀ ಚಂದ್ರಕಾಂತ್, ಸಂವಿಧಾನದ ಪ್ರಸ್ತಾವನೆಯನ್ನು ಓದಿದರು ಹಾಗೂ ಶ್ರೀ ಎಮ್.ಎಲ್. ಯೋಗೀಶ್, ಸಹಾಯಕ ಪ್ರಬಂಧಕರು (ಮಾನವ ಸಂಪನ್ಮೂಲ) ನೆರೆದವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು ಮತ್ತು ವಂದನಾರ್ಪಣೆಗೈದರು.

ಶ್ರೀ ಬಿ. ವಿಶ್ವನಾಥ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಡಾ|| ಬಿ.ಆರ್. ಅಂಬೇಡ್ಕರ್ ಹಾಗೂ ಸರ್.ಎಂ.ವಿಶ್ವೇಶ್ವರಾಯ ಅವರ ಜೀವನದಿಂದ ಸಂಕ್ಷಿಪ್ತ ಕಲಿಕಾ ಅಂಶಗಳನ್ನು ನೀಡಿದರು ಮತ್ತು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಕಲಿಸಲು ಕರೆಯಿತ್ತರು.

ಈ ಸಂದರ್ಭದಲ್ಲಿ ಶ್ರೀ ಟಿ. ರವಿಚಂದ್ರನ್, ಶ್ರೀ ನವೀನ್ ರಾಹುಲ್, ಶ್ರೀ ಪಿ. ಅಮೃತ್ ಕುಮಾರ್ ಮಾತನಾಡಿದರು.

VISL ಶ್ರೀ ಜಗದೀಶ್ ಬಡಿಗೇರ್, ಶ್ರೀ ಕೆ. ಲಕ್ಷ್ಮಣ, ಶ್ರೀ ಎಲ್. ಮಧುಕುಮಾರ್, ಶ್ರೀಮತಿ ಪ್ರೇಮಬಾಯಿ, ಶ್ರೀಮತಿ ರಮ್ಯ, ಶ್ರೀ ಬಿ.ಎಸ್. ವಸಂತ್, ಶ್ರೀಮತಿ ತ್ರಿವೇಣಿ, ಶ್ರೀಮತಿ ಹೇಮಾವತಿ ಮತ್ತು ಕು.ಜಾಹ್ನವಿ ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

2025-26ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆಗೈದ ಕಾರ್ಮಿಕರ ಮಕ್ಕಳಿಗೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಶ್ರೀಮತಿ ರಮ್ಯಾ, ಶ್ರೀಮತಿ ಶೈಲಶ್ರೀ ಮತ್ತು ಶ್ರೀಮತಿ ಪ್ರೇಮಬಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ಗಿISಐ ಮಾನವಸಂಪನ್ಮೂಲ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಅಕ್ಷಯ ತೃತೀಯ: ಬಾಲ್ಯ ವಿವಾಹ ಮಾಡುವುದು ವಾಡಿಕೆ, ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ : ಜಿಲ್ಲಾ ರಕ್ಷಣಾಧಿಕಾರಿ ಸೂಕ್ತ ಕ್ರಮ

0

ಅಕ್ಷಯ ತೃತೀಯ ದಿನದಂದು ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುವ ಸಾಧ್ಯತೆಗಳಿರುವುದರಿಂದ, ಇದನ್ನು ತಡೆಗಟ್ಟಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಡಳಿತ ಸನ್ನದ್ಧವಾಗಿದೆ. ಬಾಲ್ಯವಿವಾಹವು ಒಂದು ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಇದು ಮಕ್ಕಳ ಸಾಮಾಜಿಕ, ಮಾನಸಿಕ, ದೈಹಿಕ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಅಕ್ಷಯ ತೃತೀಯದಂತಹ ಶುಭ ಮುಹೂರ್ತದ ದಿನಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುವ ಸಾಧ್ಯತೆಗಳಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ದಿನಾಂಕ 20-04-2026 ರಂದು ವಿಶೇಷ ನಿಗಾ: ಏಪ್ರಿಲ್ 20 ರಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಈ ದಿನದಂದು ನಡೆಯುವ ವಿವಾಹಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಬಾಲ್ಯವಿವಾಹ ಮಾಡುವುದು ಅಥವಾ ಅದಕ್ಕೆ ಪ್ರೇರಣೆ ನೀಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದ್ದಾರೆ.
ಮಾಹಿತಿ ನೀಡಲು ಸಹಾಯವಾಣಿ:
ನಿಮ್ಮ ಸುತ್ತಮುತ್ತ ಎಲ್ಲಿಯಾದರೂ ಬಾಲ್ಯವಿವಾಹ ನಡೆಯುವ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸರ್ಕಾರ ನೇಮಿಸಲ್ಪಟ್ಟ ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಅಥವಾ ಮಕ್ಕಳ ಸಹಾಯವಾಣಿ: 1098
ಪೊಲೀಸ್ ಸಹಾಯವಾಣಿ: 112 ಕರೆ ಮಾಡಿ ಮಾಹಿತಿ‌ನೀಡಬೇಕು.
ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಬಾಲ್ಯವಿವಾಹಗಳನ್ನು ತಡೆಗಟ್ಟುವ ಮೂಲಕ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕೋರಿದ್ದಾರೆ.

ನಾನು ಕಂಡಂತೆ ಬೆಳಗೆರೆಯ ಬಿಳಿ ಉಡುಪಿನ ಬೆರಗು ಮನುಷ್ಯ

0

ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ

ಅಧ್ಯಾತ್ಮ  ರಶ್ಮಿ -3

“ಶ್ವೇತವಸ್ತ್ರದ ಸಂತ – ಬೆಳಗೆರೆ ಕೃಷ್ಣಶಾಸ್ತ್ರಿಗಳು”

    ಶಾಸ್ತ್ರಿಗಳು ಸ್ವಭಾವತಃ ಗಂಭೀರ ಮತ್ತು ಭಾವುಕರು. ಭಗವದ್ಗೀತೆ ಮನುಕುಲಕ್ಕೆ ಒಂದು ಆದರ್ಶದ ಗ್ರಂಥ ಎಂಬುದು ಅವರ ಅನುಭವವಾಗಿತ್ತು. ಅವರು ದೇವುಡು ನರಸಿಂಹ ಶಾಸ್ತ್ರಿಗಳಂತಹ ದೊಡ್ಡ ದೊಡ್ಡ ವಿದ್ವಾಂಸರ ಒಡನಾಟ ಹೊಂದಿದ್ದವರು. ಒಂದು ಕಾರ್ಯಕ್ರಮದಲ್ಲಿ ದೇವುಡುರವರು ʼಸ್ಥಿತಪ್ರಜ್ಞೆʼ ಬಗ್ಗೆ ಉಪನ್ಯಾಸ ನೀಡುವುದು ಅವರ ವಿಷಯವಾಗಿತ್ತು. ಮಾತನಾಡುತ್ತಾ ಮಾತನಾಡುತ್ತಾ ಅಲ್ಲಿಯ ಒಬ್ಬ ವ್ಯಕ್ತಿಯು ಒಂದು ಕಾಗದ ತಂದು ಕೊಡುತ್ತಾನೆ. ಅದನ್ನು ನೋಡಿ ಜೇಬಿನಲ್ಲಿ ಇರಿಸಿಕೊಂಡು, ಮತ್ತೆ ಅದೇ ವಿಷಯವನ್ನು ಒಂದೂವರೆ ಎರಡುಗಂಟೆಗಳ ಕಾಲ ಮುಂದುವರೆಸಿ. ನಂತರ ತ್ವರಿತವಾಗಿ ಹೊರಟು ಬಂದರು. ಅದೇ ಕಾರ್ಯಕ್ರಮದಲ್ಲಿ ಶಾಸ್ತ್ರಿಗಳೂ ಸಹಾ ಪಾಲ್ಗೊಂಡಿದ್ದರು. ಅವರನ್ನೂ ಕರೆದುಕೊಂಡು ಬಂದು ಬಿಟ್ಟರು. ರಾಮಯ್ಯ ಪಾರ್ಕಿನ ಕಡೆಗೆ ಬಂದಾಗ ಸಹಜವಾಗಿ ಶಾಸ್ತ್ರಿಗಳು “ಯಾಕೆ ಸರ್‌ ಹಾಗೇ ಅರ್ಧ ಕಾರ್ಯಕ್ರಮದಲ್ಲಿಯೇ ಹೊರಟುಬಿಟ್ಟಿರಲ್ಲ”ಎಂದರು. ಅದಕ್ಕೆ ಮಾತನಾಡದೇ ದೇವುಡುರವರು ತಮ್ಮ ಜೇಬಿನಲ್ಲಿದ್ದ ಕಾಗದ ಇವರ ಕೈಗಿತ್ತರು. ಅದನ್ನು ನೋಡಿ ಶಾಸ್ತ್ರಿಗಳು ಒಂದು ನಿಮಿಷ ಅಚ್ಚರಿ ತುಂಬಿದ ಮೌನಿಗಳಾದರು. ಯಾಕೆ ಹಾಗಾಯ್ತು ತಾತ ? ಎಂದು ನಾನು ಕೇಳಿದಾಗ ಹೇಳಿದರು. ಅದರಲ್ಲಿ ದೇವುಡು ಅವರ ಮಗ ಹಾರ್ಟ ಅಟ್ಯಾಕ್‌ನಿಂದ ತೀರಿಹೋಗಿದ್ದರು ಎಂದು ಬಂದ ಟೆಲಿಗ್ರಾಂ ಕಣೋ ಅದು ಎಂದರು. “ದುಃಖೇಶ್ವನುದ್ವಿಘ್ನಮನಾ ಸುಖೇಷು ವಿಗತಸ್ಪೃಹಃ ವೀತರಾಗಭಯಕ್ರೋಧಾನ್‌ ಸ್ಥಿತಧೀರ್ಮುನಿರುಜ್ಯತೆ” ಎಂಬ ಗೀತೆಯ ಶ್ಲೋಕವನ್ನು ಕೇವಲ ಹೇಳಿ-ಕೇಳುವುದಲ್ಲದೇ ಆಚರಣೆಗೆ ತಂದವರು ದೇವುಡು ಎಂದು ಹೇಳುವಾಗ ತಾತನ ಕಣ್ಣುಗಳಲ್ಲಿ ಒಂದು ವಿಲಕ್ಷಣ ಕಾಂತಿಯಿರುತ್ತಿತ್ತು.

  ಹೀಗೆ ನಾನು ತಾತನ ಜೊತೆಯಲ್ಲಿದ್ದುದು ನನಗೆ ಅನಂತ ಪದ್ಮನಾಭನ ಆಭರಣಗಳ ತಿಜೋರಿಯ ಕೀಲಿಯನ್ನು ಹೊಂದಿದ ಧರ್ಮಾಧಿಕಾರಿಯಂತಾದ ಗರ್ವವಿತ್ತು. ಪ್ರತಿಬಾರಿಯ ಭೇಟಿಯಲ್ಲಿಯೂ ಹೊಸ ಹೊಸ ವಿಚಾರಗಳು ತಾತನಿಂದ ನನ್ನ ಮಸ್ತಕದ ಗ್ರಂಥಾಲಯಕ್ಕೆ ಕೊಡುಗೆಯಾಗಿ ಬರುತ್ತಿದ್ದವು, ತಾತ ನಿಜಕ್ಕೂ ಭಗವದ್ಗೀತೆ ಅಷ್ಟು ಚಂದ ಅಲ್ಲವೇ ? ಪ್ರಸಿದ್ಧ ಗಾಯಕರಾದ ಶ್ರೀ ಘಂಟಸಾಲ ಅವರು ಭಗವದ್ಗೀತೆಯ ಆಯ್ದ ಕೆಲವು ಭಾಗಗಳನ್ನು ಹಾಡಿ, ಅದರ ಅರ್ಥವನ್ನು ತೆಲುಗಿನಲ್ಲಿ ಅರ್ಥಸಿರುವುದು ನಾನು ಕೇಳಿದ್ದೆ. ಅವರೊಟ್ಟಿಗೆ ಮಾತನಾಡುವಾಗ ತಾತ ಎಷ್ಟು ಭಾವುಕರಾಗಿ ಹಾಡಿದಾರೆ ಅಲ್ವೇ ಘಂಟಸಾಲ ಅಂತ ಕೇಳಿದಾಗ ಅವರಿಗೆ ಸಿಟ್ಟು ಬರುತ್ತಿತ್ತು. ಆಗ ಹೇಳುತ್ತಿದ್ದರು “ಏನು ಭಾವುಕತೆಯೋ ಅದು. ಭಗವದ್ಗೀತೆ ಅನ್ನೋದು ನಿರ್ವೀರ್ಯನಿಗೆ (ಅಂದರೆ ಈಗಿನ ಮೆಡಿಕಲ್‌ನ ಡಿಪ್ರೆಷನ್)‌ ಅಥವಾ ಆತ್ಮ ಹತ್ಯೆಯ ಯೋಚನೆಯಿಲ್ಲದ್ದವನಿಗೂ ಬದುಕುವ ಉತ್ಸಾಹ ತುಂಬುವ ಗ್ರಂಥ, ಅದನ್ನು ಹಾಗೇ ಉತ್ಸಾದಲ್ಲಿ ಹೇಳಿದಾಗ ಮಾತ್ರ ಇನ್ನಷ್ಟು ಅರ್ಥಗರ್ಭಿತವಾಗುತ್ತೆ. ಮುಂಡೇದೆ ನಿನಗೆ ಸಂಗೀತ ಮಾತ್ರ ಗೊತ್ತು, ಅರ್ಥದ ಅನುಭವವಾಗೋದಿಕ್ಕೆ ಇನ್ನಷ್ಟು ಟೈಂ ಬೇಕು”ಅಂತ ಬೊಚ್ಚು ಬಾಯಿಯಿಂದ ನಕ್ಕ ತಾತನ ನಗು ನನಗೆ ಬೇಸರ ಮಾಡಲಿಲ್ಲ, ಸಿಟ್ಟು ತರಿಸಲಿಲ್ಲ. ಬದಲಾಗಿ ಅವರ ನಗುವಿನ ಹಿಂದಿದ್ದ ಮಾರ್ಮಿಕತೆ ಮತ್ತು ಆ ಮಗುವಿನ ನಗೆಯ ಅನುಭವ ನನಗಾಯ್ತು. ಪ್ರತಿಸಲವೂ ಅಚ್ಚರಿಗೊಳ್ಳುವ ವಿಷಯಗಳು ನನಗೆ ತಾತನ ವರಗಳಾದವು. ಕಳೆದದ್ದು ಸ್ವಲ್ಪ ಸಮಯವಾಗಿದ್ದರೂ ಅದರ ಅನುಭವ ಮತ್ತು ಜ್ಞಾನ ಅಗಾಧವಾಗಿರುತ್ತಿತ್ತು. ಹೀಗೇ ಒಮ್ಮೆ ಕೇಳಿದೆ ತಾತ ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರಲ್ಲ ಏನು ಅದು ? ಅಂತ. ಒಮ್ಮೆ ನನ್ನ ಮುಖವನ್ನು ನೋಡಿದರು. ಈಗ ನಾನು ಮೊನ್ನೆ ಹೇಳಿದೆ ಅಲ್ವೇನಪ್ಪ ಏನು ಹೇಳಿದೆ ? ನಾನು “ಭಗವದ್ಗೀತೆ ನಿರ್ವೀರ್ಯನಿಗೂ ಜೀವನೋತ್ಸಾಹ ತುಂಬಿಸುತ್ತೆ”ಅಂತ ಹೇಳಿದ್ರಿ ಎಂದೆ. “ಹೌದಲ್ವಾ ? ಹಾಗಾದರೆ ಭೂತ ಅಂದ್ರೇನು ? ಹಿಂದೆ ಇದ್ದದ್ದು ಈಗ ಇಲ್ಲದೇ ಇರುವುದು. ಅಲ್ವೇ ? “ ಪಿಯುಸಿ ಓದುವ ನನಗೆ ಈ ಮಟ್ಟದ ಜ್ಞಾನ ಇರಲು ಸಾಧ್ಯವೇ ? ಹೌದು ಎಂಬಂತೆ ತಲೆಯಾಡಿಸಿದೆ. ಆಗ ಹೇಳಿದರು ಭಗವದ್ಗೀತೆ ಅನ್ನೋದು ನಮ್ಮ ಬದುಕಿನ ಹೆಜ್ಜೆಗಳನ್ನ ಹೇಗೆ ಇಡಬೇಕು ಮತ್ತೆ ಹೇಗೆ ನಾವು ಎಲ್ಲರೊಟ್ಟಿಗೆ ಬದುಕಬೇಕು ಅಂತ ಹೇಳುತ್ತೆ. ಅದನ್ನು ಸತ್ತ ಪ್ರೇತದ ಬಾಯಿಂದ ಕೇಳಿದ್ರೆ ಹೇಗೆ ಅನುಭವವಾಗುತ್ತೆ ? ಅದಕ್ಕೆ ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರೆ. ಇನ್ನೂ ಒಂದೇ ಮಾತಲ್ಲಿ ಹೇಳೋದಾದರೆ ಅದು ನಡೆದು ತೋರಿಸೋದೇ ಹೊರತು ಹೇಳಿ ಅರ್ಥ ಮಾಡಿಸೋದಲ್ಲ. “ಯದ್ಯದಾಚರತಿಃ ಶ್ರೇಷ್ಠಃ ತತ್ರದೇವೇತರೋ ಜನಃ ಸಯತ್ಪ್ರಮಾಣಂ ಕುತೇ ಲೋಕಸ್ತದನುವರ್ತತೇ” ಅಂದ್ರೆ ನೀನು ನನ್ನ ತಾತ ಅಂತೀಯಲ್ಲ ನಾನು ಏನು ಹೇಳ್ತೀನಿ, ಏನು ಆಚರಣೆ ಮಾಡ್ತೀನಿ ಅದನ್ನು ನೋಡಿಯೇ ಅಲ್ವಾ ನೀನು ಅಳವಡಿಸಿಕೊಳ್ಳೋದು, ಅಥವ ನೀನು ಹಾಗಾಗಬೇಕು, ಹೀಗಾಗಬೇಕು ಅಂತ ಅಂದ್ಕೊಳೋದು ? ಅಂದಾಗ. ನನಗೆ ಮೊಟ್ಟ ಮೊದಲಿಗೆ ತಾತನ ಅಧ್ಯಾತ್ಮದ ಮುಖ ಕಾಣಿಸಿತ್ತು. ಏಕೆಂದರೆ ತಾತ ಮುಕುಂದೂರು ಸ್ವಾಮಿಗಳ ಶಿಷ್ಯರು. ಅವರ ಎಷ್ಟೋ ಕಠಿಣ ಪರಿಸ್ಥಿತಿಗಳಲ್ಲಿ, ಮುಕುಂದೂರು ಸ್ವಾಮಿಗಳು ಇವರ ಬೆನ್ನಿಗೆ ನಿಂತಿದ್ದ ಎಷ್ಟೋ ವಿಚಾರಗಳನ್ನು ತಾತ ಅಪ್ಪನೊಟ್ಟಿಗೆ ಮಾತನಾಡಿದುದು, ನಂತರ “ಯೇಗ್ದಾಗೆಲ್ಲ ಐತೆ” ಓದಿದಾಗ ಮತ್ತೆ ಮತ್ತೆ ತಲೆಕೆಡಿಸುತ್ತಿತ್ತು. ಏನಿದು ? ಎಲ್ಲರೂ ನೋಡುವ ತಾತ ನಾನು ನೋಡುತ್ತಿರುವ ತಾತ ಇಬ್ಬರೂ ಬೇರೆ ಬೇರೆಯೇ ಎನಿಸುತ್ತಿತ್ತು. ಅಪ್ಪನೊಟ್ಟಿಗೆ ಅದನ್ನು ಬಗೆಹರಿಸಿಕೊಳ್ಳಲು ಭಯ. ಏಕೆಂದರೆ ಅಧ್ಯಾತ್ಮದ ಅನುಭವವೇ ನನಗಿಲ್ಲ. ಇನ್ನು ಅವರನ್ನು ಪರಾಮರ್ಶೆ ಮಾಡಲು ನಾನು ಹೇಗೆ ಸಮರ್ಥನಾಗಲು ಸಾಧ್ಯ. ಆದರೆ ಈಗ ನನಗೊಂದು ಕೊರಗಿದೆ ನನ್ನ ಈ ವಯಸ್ಸಿನಲ್ಲಿ ತಾತನ ಒಡನಾಟವಾಗಿದ್ದರೆ ನಾನು ಇನ್ನಷ್ಟು ಅನುಭವಗಳನ್ನು ಪಡೆಯಬಹುದಾಗಿತ್ತು. ಅವರ ಜ್ಞಾನ ವಾರಿಧಿಯಲ್ಲಿ ಕೈಲಾಗುವಷ್ಟು ನಾನು ಖನಿಜಗಳ ಕೊಳ್ಳೆ ಹೊಡೆಯಬಹುದಿತ್ತು.

 ದಿನಗಳುರುಳಿದವು ಎರಡು ವರ್ಷಗಳು ಕಳೆದವು, ಈ ಮಧ್ಯೆ ತಾತನ ಆರೋಗ್ಯ ಪದೇ ಪದೇ ಕೆಡುತ್ತಿತ್ತು. ಈಗ ಅವರು ಬೆಳಗೆರೆಯ ಹೊಲದಲ್ಲಿರುತ್ತಿಲ್ಲ, ಬೆಂಗಳೂರಿನಲ್ಲಿ ರವಿ ಬೆಳಗೆರೆಯವರ ಮನೆಯಲ್ಲೇ ವರ್ಷದ ಬಹುತೇಕ ದಿನಗಳನ್ನು ಕಳೆಯುತ್ತಿದ್ದಾರೆ. ಇಲ್ಲಿ ನಾನು ಅವರ ಸಹವಾಸದಿಂದ ದೂರಾಗಿ, ನೀರಿಲ್ಲದ ತೆಂಗಿನ ಮರದ ಹಾಗೆ ಒಣಗುತ್ತಿದ್ದೇನೆ. ಎರಡು ಬಾರಿ ಹೃದಯಾಘಾತವಾದರೂ ಮುಖದಲ್ಲಿ ಸಣ್ಣ ಭಯವಿಲ್ಲ, ಚಟುವಟಿಕೆಗಳು ಯಾವುದೂ ನಿಂತಿಲ್ಲ, ಮನೆಯಿಂದ ಕಾಲೇಜಿಗೆ ನಡೆದು ಬರಲು ಅಸಾಧ್ಯವಾಗುತ್ತಿತ್ತು ಆದರೆ ಮನೆಯಲ್ಲಿ ಓಡಾಡಲು ಯಾವುದೇ ಸಮಸ್ಯೆಯಿರಲಿಲ್ಲ. “ದೇಹಿನೋಸ್ಮಿನ್‌ ಯಥಾ ದೇಹೇ ಕೌಮಾರೌ ಯೌವನಂ ಜರಾ ತಥಾ ದೇಹಾಂತರಃ ಪ್ರಾಪ್ತಿಃ ಧೀರಸ್ತತ್ರನಮುಹ್ಯತಿ” ದೇಹಕ್ಕೆ ಬಾಲ್ಯ, ಯೌವನ, ನುಪ್ಪು ಸಹಜವಾಗಿ ಒದಗುವ ಸ್ಥಿತಿಗಳು ಇದಕ್ಕೆ ಧೀರರಾದವರು ಹೆದರುವುದಿಲ್ಲ ಹಾಗೂ ತಾನು ಮಾಡಬೇಕಾದ ಕರ್ತವ್ಯಗಳನ್ನು ನಿಲ್ಲಿಸುವುದಿಲ್ಲ. ಎಂಬಂತೆ ತಾತನ ಕೃಷಿ ನಡೆದೇ ಇತ್ತು. ಮಂಕುತಿಮ್ಮನ ಕಗ್ಗ ತಾತನಿಗೆ ಬಹಳ ಪ್ರೀತಿ. ಈಗೀಗ ಕಗ್ಗವು ನನಗೂ ಪ್ರಿಯವೆನಿಸುತ್ತಿದೆ. ಕುಮಾರವ್ಯಾಸ ಭಾರತ, ಮಂಕುತಿಮ್ಮನ ಕಗ್ಗ, ಭಗವದ್ಗೀತೆ, ಉಪನಿಷತ್‌ಗಳು ಹೀಗೆ ಪ್ರತಿಯೋಂದೂ ಆದರ್ಶ ಪುರುಷ ಹೇಗಿರಬೇಕು ಎಂದು ಹೇಳುತ್ತವೆಯೋ ಹಾಗೆ ಎಲ್ಲರಿಗೂ ಆದರ್ಶ ಪುರುಷನಾಗಿ ತಾತ ಇದ್ದರು, ಜಾತಿ-ಮತ, ಧರ್ಮಗಳ ಹಂಗಿಗೆ ಒಳಪಡದೇ, “ಅನ್ನದಾನಂ ಪರಂದಾನಂ ವಿದ್ಯಾದಾನಮದಃ ಪರಃ | ಅನ್ನೇನ ಕ್ಷಣಿಕಃತೃಪ್ತಿಃ ಯಾವಜ್ಜೀವಂಚ ವಿದ್ಯಯಾ ”ಎಂಬಂತೆ ಅನ್ನದಾನವು ಉತ್ತಮ ಆದರೆ ವಿದ್ಯಾದಾನವು ಸ್ರವೋತ್ತಮ, ಏಕೆಂದರೆ ಅನ್ನವು ಕ್ಷಣಿಕವಾದ ಹಸಿವು ಹೋಗಲಾಡಿಸಿದರೆ ವಿದ್ಯೆಯು ಜೀವಮಾನದವರೆಗೆ ಎಲ್ಲರೀತಿಯ ಹಸಿವು ನೀಗಿಸುತ್ತದೆ. ಎನ್ನುವ ಹಾಗೆ, ಶಾಲೆ-ಕಾಲೇಜುಗಳನ್ನು ಮಾಡಿ, ಅಲ್ಲಿ ಉಚಿತ ಶಿಕ್ಷಣ, ಊಟ ವಸತಿಗಳನ್ನು ನೀಡಿ ಅದೆಷ್ಟೋ ಬಡ ಮಕ್ಕಳ ಏಳ್ಗೆಗೆ ಕಾರಣರಾದರು. ಅಲ್ಲಿಯ ಎಲ್ಲ ಕಟ್ಟಡಗಳೂ ಸಹಾ ಶ್ರಮದಾನದಿಂದ ಕಟ್ಟಿದಂಥವುಗಳು, ವಿದ್ಯಾರ್ಥಿ ನಿಲಯ, ಶಾಲೆ-ಕಾಲೇಜು ಕಟ್ಟಡಗಳು, ಶಾರದಾಮಂದಿರ, ಸುಮಾರು 500ಕ್ಕೂ ಅಧಿಕ ಜನ ಕುಳಿತು ಕಾರ್ಯಕ್ರಮ ನಡೆಸಬಹುದಾದ ಸಭಾ ಮಂಟಪ, 200ಕ್ಕೂ ಅಧಿಕ ಮಕ್ಕಳು ಒಮ್ಮೆಲೆ ಊಟ ಮಾಡಬಹುದಾದ ಊಟದ ಹಾಲ್‌, ಎಲ್ಲವೂ ಸಹಾ ಇಂದಿಗೂ ನಾವು ನೋಡಬಹುದು. ಅವರಿಂದ ಲೆಕ್ಕವಿಲ್ಲದಷ್ಟು ಮಂದಿ ಪ್ರಭಾವಿತರಾಗಿ ಜೀವನದಲ್ಲಿ ನೆಲೆಗೊಂಡಿದ್ದಾರೆ ಅಂಥವರಲ್ಲಿ ನಾನೂ ಒಬ್ಬ. ಅಧ್ಯಾತ್ಮವು ಹೇಳುವುದಲ್ಲ ನಡೆಯುವುದು ಎಂದು ತಮ್ಮ ಜೀವನದಲ್ಲಿ ತೋರಿಸಿದರು. ಇಂಥ ಮಹಾನ್‌  ಸಂತ ಚೇತನ ಮಾರ್ಚ್‌ 2013ರ ಬೆಳಗ್ಗೆ ಭೌತಿಕ ಸೂರ್ಯ ಉದಯಿಸುವ ವೇಳೆಗೆ ಬೆಳಗೆರೆಯ ಈ ಸಂತ ಅಸ್ತಂತನಾದರೆ ಹೇಗೆ ಸಹಿಸುವುದು.? ಬೆಂಗಳೂರಿನಿಂದ ಬೆಳಗೆರೆಯವರೆಗೆ ಅಧ್ಯಾತ್ಮದ ಹರಿಕಾರನಿಗೆ, ಸಾಹಿತ್ಯ ಶ್ರೇಷ್ಠನಿಗೆ ಕಂಬನಿ ಮಿಡಿಯದವರಿರಲಿಲ್ಲ. ನಾನೂ ಅಪ್ಪ ಇಬ್ಬರೂ ಮರುದಿನದ ಅಂತ್ಯ ಸಂಸ್ಕಾರದ ಸಮಯಕ್ಕೆ ಹೋದಾಗ ಸಭಾಂಗಣದಲ್ಲಿ ನನ್ನ ಭುಜದ ಮೇಲೆ ಕೈಇಟ್ಟು ಓಡಾಡಿದ, ಅವರ ಪಕ್ಕ ಕುಳಿತಾಗ ತಲೆ ಸವರಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ತಾತ ಇಂದು ಮಲಗಿದ್ದಾರೆ. ಮಾತಾನಾಡುತ್ತಿಲ್ಲ ಇನ್ನು ಮಾತನಾಡುವುದೂ ಇಲ್ಲ ಎನ್ನುವುದನ್ನು ಸಹಿಸಲೂ ಅಸಾಧ್ಯ. ಅವರು ಜೀವಂತವಿಲ್ಲ ಎಂದು ನನಗೆ ಭಾಸವಾಗುತ್ತಿಲ್ಲ. ಅದೇ ಬಿಳಿಯ ಜುಬ್ಬ, ಪಂಚೆ ತಲೆಗೆ ಸಾಯಿ ಬಾಬಾ ಅವರ ಹಾಗೆ ಒಂದು ಬಿಳಿಯ ಬಟ್ಟೆ ಕಟ್ಟಿಕೊಂಡು ಮಲಗಿದ್ದಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಏಳುತ್ತಾರೆ ಎಂಬಂತಹ ಮುಖಲಕ್ಷಣ ಇದು ಅಧ್ಯಾತ್ಮಿಗಲ್ಲದೇ ನಮ್ಮಂಥ ಸಾಮಾನ್ಯರಿಗೆ ಸಾಧಿಸಲು ಸಾಧ್ಯವೆ ? ತಾತನವರ ದಹನವು ಅವರ ಹೊಲದಲ್ಲಿಯೇ ಆಯಿತು. ಅಲ್ಲಿ ಅವರ ಸ್ಮಾರಕ ಸಣ್ಣ ಕುಟೀರವೊಂದಿದೆ. ಇಂದಿಗೂ ಧ್ಯಾನ ಬೇಕು ಎನ್ನುವವರಿಗೆ ಅಲ್ಲಿ ಪರಿವೆಯಿಲ್ಲದೇ ಗಂಟೆಗಳ ಕಾಲ ಧ್ಯಾನಗೈಯಲು ಪ್ರಕೃತಿಯ ಸಹಕಾರವಿದೆ. ಎಲ್ಲರ ಮಧ್ಯೆ ತಾನು ಇದ್ದು ಎಲ್ಲರನ್ನೂ ಒಗ್ಗೂಡಿಸಿ ಜಗತ್ತಿಗೆ ಶ್ರೇಷ್ಠತೆಯನ್ನು ಸಾರಿದ ತತ್ತ್ವಜ್ಞಾನಿ ತಾತನನ್ನು ನಾನು ಮರೆಯಲಾದೀತೆ ? ಬೆಳಗೆರೆಯ ವಿದ್ಯಾರ್ಥಿಗಳೆಲ್ಲರೂ ನಿಜಕ್ಕೂ ಭಾಗ್ಯವಂತರು. ಏಕೆಂದರೆ ಸಾಹಿತ್ಯ ಲೋಕದ ನಕ್ಷತ್ರಗಳೆಲ್ಲವೂ ಬೆಳಗೆರೆಯ ಬಾನಿನಲ್ಲಿ ಮಿನುಗುತ್ತಿದ್ದವು,  ಹೀಗಿರುವಾಗ ತಾತನನ್ನು ಸಂತನೆನ್ನದೇ ಏನೆನ್ನಬೇಕು ? ಅತ್ಯುತ್ತಮವಾದ ಸಂಸ್ಥೆಯನ್ನು ಪ್ರಾರಂಭಿಸಿ, ತಮ್ಮ ನಂತರ ಏನಾಗುವುದೋ ಎಂದು ಯಾರಾದರೂ ಕಳವಳ ವ್ಯಕ್ತಪಡಿಸಿದಾಗ ನಕ್ಕು ಸುಮ್ಮನಾಗುತ್ತಿದ್ದ ತಾತ, ಮನಸು ಮಾಡಿದ್ದರೆ ತಮಗಿದ್ದ ಪ್ರಭಾವದಲ್ಲಿ ಬೇಕಾದಷ್ಟು ಆಸ್ತಿ, ಹಣ ಮಾಡಬಹುದಾಗಿತ್ತು, ಬೇಕಾದಷ್ಟು ಪ್ರಶಸ್ತಿ ಬಂದರೂ ಅಹಂನಿಂದ ಬೀಗದ, ಸಣ್ಣ ಮಗುವು ಕಂಡರೂ ಅದರ ಹತ್ತಿರ ಬಂದು ಕೆನ್ನೆ ಸವರಿ ಮಾತನಾಡಿಸುವ, ಎಲ್ಲ ಐಶ್ವರ್ಯವಿದ್ದರೂ ಫಕೀರನಂತೆ ಬಾಹ್ಯದಲ್ಲಿಇದ್ದು, ಆಂತರಿಕವಾಗಿ ಅದೆಷ್ಟೋ ಸಿದ್ಧಿಗಳು ಇವರಿಗೆ ಲಭಿಸಿದರೂ ತೋರಿಸದೇ ಜನರಲ್ಲಿ ಒಂದಾದ ಇವರು ಆಧ್ಯಾತ್ಮಿಕ ಸೂರ್ಯನಲ್ಲವೇ ?

ಪ್ರಸಾದ್‌ ಶ್ರೀವತ್ಸ

ಶತಮಾನಗಳ ಕಾಲ ಮೌನವಾಗಿದ್ದದನಿಗಳಿಗೆ ಸಿಕ್ಕ‌ ಮಹಾಶಕ್ತಿ,ಡಾ.ಅಂಬೇಡ್ಕರ್- ಎಂ.ಗುರುಮೂರ್ತಿ

0

ಡಾ.ಬಿ ಆರ್ ಅಂಬೇಡ್ಕರ್ ಎಂಬ ಹೆಸರು ಕೇವಲ ಒಂದು ಅಕ್ಷರವಲ್ಲ. ಅದು ಶತಮಾನಗಳ ಕಾಲ ಮೌನವಾಗಿದ್ದ ದನಿಗಳಿಗೆ ಸಿಕ್ಕ ಮಹಾನ್ ಶಕ್ತಿ ಎಂದು ಪ್ರೊ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗರವರು ಹೇಳಿದರು. ಶಿವಮೊಗ್ಗ ಬಿ ಹೆಚ್ಏ ರಸ್ತೆಯಲ್ಲಿರುವ ಡಿ.ಎಸ್. ಎಸ್ ಕೇಂದ್ರ ಕಾರ್ಯಾಲಯದಲ್ಲಿ ನಡೆದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ಡಾ ಬಿ ಆರ್ ಅಂಬೇಡ್ಕರ್ ರವರು ಅಕ್ಷರವನ್ನೇ ಆಯುಧವನ್ನಾಗಿ ಮಾಡಿಕೊಂಡು ಅಸಮಾನತೆಯ ಕತ್ತಲೆಯನ್ನು ಸರಿಸಿದ ಹಾದಿ ಕೇವಲ ಒಂದು ಇತಿಹಾಸವಲ್ಲ. ಅದು ನಮ್ಮೆಲ್ಲರಿಗೂ ಎಂದೆಂದಿಗೂ ದಾರಿದೀಪವಾಗಿದೆ ಎಂದು ಎಂ. ಗುರುಮೂರ್ತಿ ಶಿವಮೊಗ್ಗ ರವರು ಹೇಳಿದರು.

ಕಾರ್ಯಕ್ರಮದಲ್ಲಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಎಂ ಏಳುಕೋಟಿ, ಪ್ರಗತಿಪರ ಚಿಂತಕರಾದ ಪ್ರೊ. ಚಂದ್ರಪ್ಪ ಜೋಗಿ, ಡಿ ಎಸ್ ಎಸ್ ಮಾಜಿ ಜಿಲ್ಲಾ ಸಂಚಾಲಕರಾದ ಎ ಅರ್ಜುನ್, ಶಿವಮೊಗ್ಗ ಉಪ ವಿಭಾಗದ ಅಟ್ರಾಸಿಟಿ ಕಮಿಟಿ ಸದಸ್ಯರಾದ ಯಡವಾಲ ಹನುಮಂತಪ್ಪ, ಶಿವಮೊಗ್ಗ ಡಿ ಎಸ್ ಎಸ್ ತಾಲೂಕ್ ಸಂಚಾಲಕರಾದ ಎಂ ರಮೇಶ್ ಚಿಕ್ಕ ಮರಡಿ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಸಂಚಾಲಕರಾದ ಮನ್ಸೂರ್ ಲಕ್ಕವಳ್ಳಿ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಸೂರ್ಯ,ಮುಖಂಡರುಗಳಾದ ಗಾಜನೂರು ಹರೀಶ್, ಪುರ್ಲೆ ಸಂತೋಷ್,ಮೈದೊಳಲು ಜಯಣ್ಣ, ಬೆಳಲಕಟ್ಟೆ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.

ತಮ್ಮ ವಿಶ್ವಾಸಿ
ಸ್ಥಳ: ಶಿವಮೊಗ್ಗ
(ರಮೇಶ್ ಚಿಕ್ಕಮರಡಿ)
ತಾಲೂಕ್ ಸಂಚಾಲಕರು
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)