Pragathi Composite School ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ವಿದ್ಯಾಭ್ಯಾಸದಲ್ಲಿ ಅಂಕಗಳಿಕೆ, ಪರೀಕ್ಷಾ ಫಲಿತಾಂಶಗಳಲ್ಲಿ ಪೂರಕ ವಾತಾವರಣ ಸೃಷ್ಟಿಸುತ್ತದೆ. ಅಂತಹ ಹೊಳಹುಗಳನ್ನು ಹೊತ್ತೇ ಸಾಗರದ ರವೀಂದ್ರ ಪುಸ್ತಕಾಲಯ ಈ ರೀತಿಯ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ನಿವೃತ್ತ ಪ್ರಾಚಾರ್ಯ, ಇತಿಹಾಸ ಉಪನ್ಯಾಸಕ ಡಾ. ಪ್ರಭಾಕರರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಗರ ನಗರದ ಎಂಡಿಎಫ್ ಸಂಸ್ಥೆಯ ಪ್ರಗತಿ ಸಂಯುಕ್ತ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರವೀಂದ್ರ ಪುಸ್ತಕಾಲಯ ನಾಡಿನ ಹೆಮ್ಮೆ, ಮಲೆನಾಡಿನ ಪ್ರೀತಿಯ ಸಾಹಿತಿಯಾಗಿ, ಸಾಮಾಜಿಕ ಹೋರಾಟಗಳ ಧ್ವನಿಯಾಗಿದ್ದ ಹಿರಿಯ ಸಾಹಿತಿ ಡಾ. ನಾ. ಡಿಸೋಜಾ ಅವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಲಾಗಿತ್ತು.
ನಾಡಿ ನಮ್ಮಿಂದ ದೂರವಾಗಿ ಈಗ ವರ್ಷ ಆಗಿದೆ. ಈ ಪ್ರಬಂಧ ಸ್ಪರ್ಧೆ ಮೂಲಕ ಮಕ್ಕಳು ನಾಡಿ ಅವರ ಕುರಿತು ಮಾಹಿತಿ ಸಂಗ್ರಹಿಸಿ ಬರೆಯಲು ಪ್ರಯತ್ನಿಸುವುದರಿಂದ ಅವರಿಗೂ ನಮ್ಮೂರಿನ ಸಾಹಿತಿ ಬಗ್ಗೆ ಗೊತ್ತಾಗುತ್ತದೆ ಎಂಬುದು ಸ್ಪರ್ಧೆಯ ಉದ್ದೇಶವಾಗಿತ್ತು ಎಂದು ವಿವರಿಸಿದರು.
ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ತಮ್ಮ ಆಲೋಚನೆಗಳನ್ನು ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ ಕೌಶಲವನ್ನು ರೂಢಿಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತವೆ ಎಂದು ತಿಳಿಸಿದರು.
Pragathi Composite School ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪ್ರಸಿದ್ಧ ಛಾಯಾಗ್ರಾಹಕ ಜಿ.ಆರ್.ಜಿ.ಪಂಡಿತ್ ಮಾತನಾಡಿ, ಚಿತ್ರಕಲೆ ಎಂಬುದನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಿರುತ್ತಾನೆ. ರೇಖಾಗಣಿತ, ವಿಜ್ಞಾನದ ವಿಷಯದಲ್ಲಿ ಚಿತ್ರ ಬರೆಯುವುದು ಮಕ್ಕಳಿಗೆ ಅನಿವಾರ್ಯ. ಚಿತ್ರಕಲೆಯಲ್ಲಿ ಪ್ರಾಥಮಿಕ ಆಸಕ್ತಿ ಇದ್ದವರು ಅದಕ್ಕೊಂದು ಚೌಕಟ್ಟು ಮೂಡಿಸಲು ಶಾಸ್ತ್ರೀಯವಾಗಿ ಕಲಿಯುವಂತಾಗಬೇಕು ಎಂದರು.
ರವೀಂದ್ರ ಪುಸ್ತಕಾಲಯದ ಪ್ರಕಾಶಕರಾದ ವೈ.ಎ. ದಂತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯಲ್ಲಿ ತನ್ನ ಚಿತ್ರಕಲಾ ಪ್ರದರ್ಶನ ನಡೆಸಿಕೊಟ್ಟ ರಾಜಗೋಪಾಲ್ ಉಳ್ಳೂರು, ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ. ಶಿವಕುಮಾರ್, ಇಕ್ಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಜನೀಶ್ ಸಿ., ಪ್ರಗತಿ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಇತರರು ವೇದಿಕೆಯಲ್ಲಿದ್ದರು.
ವಿಜೇತ ವಿದ್ಯಾರ್ಥಿಗಳಿಗೆ ರವೀಂದ್ರ ಪುಸ್ತಕಾಲಯದಿಂದ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ವಿತರಿಸಲಾಯಿತು.
೧೦ನೇ ತರಗತಿಯ ಧನುಷ್ ಎಂ.ಪಿ. ಪ್ರಥಮ ಬಹುಮಾನ, ೯ನೇ ತರಗತಿಯ ಶರಣ್ಯ ಆರ್. ಭಟ್ ದ್ವಿತೀಯ ಬಹುಮಾನ ಹಾಗೂ ರಾಮನಾಥ್ ಜಿ. ಶೆಣೈ ತೃತೀಯ ಬಹುಮಾನ ಗಳಿಸಿದರು. ಹರ್ಷ ಕಾರ್ಯಕ್ರಮ ನಿರ್ವಹಿಸಿದರು.
ಎಂಡಿಎಫ್ ಸಂಸ್ಥೆಯ ಪ್ರಗತಿ ಸಂಯುಕ್ತ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರವೀಂದ್ರ ಪುಸ್ತಕಾಲಯ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
