Thursday, August 6, 2026
Thursday, August 6, 2026
Home Blog Page 104

S.N. Channabasappa ಮಲ್ಲಮ್ಮನವರ ಜೀವನ ಚರಿತ್ರೆ ನಮಗೆ ತಾಳ್ಮೆಯ ಪಾಠ ಕಲಿಸುತ್ತೆ- ಎಸ್.ಎನ್.ಚನ್ನಬಸಪ್ಪ

0

S.N. Channabasappa ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಕ್ತಿ‌ ಮತ್ತು ತಾಳ್ಮೆಯ ಪ್ರತೀಕವಾಗಿದ್ದು ಅವರ ಪರಹಿತ ಚಿಂತನೆ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು
ಶಾಸಕರಾದ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಲ್ಲಮ್ಮನ ಜೀವನ ಚರಿತ್ರೆ ನಮಗೆ ತಾಳ್ಮೆಯ ಪಾಠವನ್ನು ಕಲಿಸುತ್ತದೆ. ಅವರು ನಮ್ಮಲ್ಲಿ ಆತ್ಮಸ್ಥೈರ್ಯ ತುಂಬಿ, ಬದುಕಿಗೆ ಶಕ್ತಿ ತುಂಬಿದ್ದಾರೆ. ಅವರ ಅನುಭವಗಳು, ಪವಾಡಗಳನ್ನು ಕೈಗನ್ನಡಿಯಾಗಿ ಹಿಡಿದು ನಾವು ಮುನ್ನಡೆಯಬೇಕಿದೆ.
ನಮ್ಮ ಪರಂಪರೆ,ನಂಬಿಕೆಗಳೇ ನಮ್ಮ ಅಸ್ಮಿತೆಯಾಗಿದ್ದು ಇಂತಹ ನಮ್ಮ ನಂಬಿಕೆಗಳ‌ ಮೇಲಿನ ಗಧಾ ಪ್ರಹಾರ ನಿಲ್ಲಬೇಕು ಎಂದ ಅವರು ಮಹಿಳೆಯರು ಸೇರಿದಂತೆ ಎಲ್ಲರಿಗೂ ಮಾದರಿಯಾಗಿರುವ ಮಲ್ಲಮ್ಮನವರ ಜೀವನ ಚರಿತ್ರೆಯನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದರು.
ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ್ ಪರಿಸರ ಇವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮನವರು ಮಹಿಳಾ ಕುಲಕ್ಕೆ ಆದರ್ಶಪ್ರಾಯರು. ಅವರ ಅತ್ತೆಯವರು ಎಷ್ಟೇ ಕಿರುಕುಳ ನೀಡುತ್ತಿದ್ದರೂ ಅವರನ್ನು ಗೌರವದಿಂದ ಕಾಣುತ್ತಿದ್ದರು.

ಆಕೆಯ ಗಂಡನನ್ನು ಹುಚ್ಚ ಎನ್ನಲಾಗುತ್ತಿದ್ದರೂ, ಆತನೇ ತನ್ನ ಪಾಲಿನ‌‌ ಮಲ್ಲಿಕಾರ್ಜುನ ಎಂದು ಪರಿಗಣಿಸಿ ಬದುಕುತ್ತಾರೆ. ಎಷ್ಟೇ ಕಷ್ಟ ಬಂದರೂ, ತೊಂದರೆಗಳು ಬಂದರೂ, ಸಾಧ್ವಿಮಣಿಯಾಗಿ ಬದುಕುತ್ತಾರೆ. ಸಹನೆ ಇದ್ದರೆ ಏನು ಬೇಕಾದರೂ ಜಯಿಸಬಹುದೆಂಬುದಕ್ಕೆ ಅವರೇ ಸಾಕ್ಷಿ‌ಎಂದರು.
ಅತ್ತೆಯು ಕೋಪದಿಂದ ನೀಡಿದ ಉರಿಯುವ ಕೆಂಡವನ್ನು ಭಿಕ್ಷುಕನ ಜೋಳಿಗೆಗೆ ಹಾಕಿದಾಗ, ಅದು ಮಲ್ಲಿಕಾರ್ಜುನನ ಕೃಪೆಯಿಂದ ಧಾನ್ಯವಾಗಿ ಮಾರ್ಪಟ್ಟಿತು. ಅಂದಿನಿಂದ ಇವರು ‘ಬೆಂಕಿದಾನದ ಮಲ್ಲಮ್ಮ’ ಎಂದೇ ಖ್ಯಾತರಾಗುತ್ತಾರೆ. ಮಲ್ಲಮ್ಮ ದಾನ ನೀಡುವುದರಲ್ಲಿ ಎತ್ತಿದ ಕೈ.‌ ಆಕೆ ತನಗಾಗಿ ಬೇಡದೇ, ಸಮಾಜಕ್ಕಾಗಿ ಬೇಡುತ್ತಾಳೆ. ತನ್ನ ಕಷ್ಟಗಳನ್ನು ಯಾರ ಮುಂದೆಯೂ ಹೇಳುತ್ತಿರಲಿಲ್ಲ. ಸಹಾಯ ಕೇಳಿ ಬಂದವರಿಗೆ ಎಂದಿಗೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ.
ಗೋವುಗಳು ಹಾಗೂ ಪರಿಸರದ ಬಗ್ಗೆ ತುಂಬಾ ಕಾಳಜಿ‌‌ ಹೊಂದಿದ್ದರು. ಅತ್ಯಂತ ಸರಳತೆಯ ಜೀವನ‌ ನಡೆಸುತ್ತಿದ್ದ ಅವರ ಜೀವನ‌ ಮೌಲ್ಯಗಳನ್ನು ನಾವೆಲ್ಲ‌ ಅಳವಡಿಸಿಕೊಳಳಬೇಕಿದೆ.
S.N. Channabasappa ಇಂದಿನ‌ ಯುವ ಜನತೆ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದ ಅವರು ಜಯಂತಿಗಳಂದು ರಜೆ ನೀಡುವ ಬದಲು ಶಾಲಾ ಕಾಲೇಜುಗಳಲ್ಲಿ ಇಂತಹ ದಾರ್ಶನಿಕರ, ಮಹಾನ್ ವ್ಯಕ್ತಿಗಳ ತತ್ವಗಳು, ಆದರ್ಶಗಳು ಮತ್ತು ಜೀವನ ಚರಿತ್ರೆ ಕುರಿತು ಪ್ರಬಂಧ, ಭಾಷಣ ಇತರೆ ಸ್ಪರ್ಧೆಗಳನ್ನು‌ ನಡೆಸುವ ಮೂಲಕ‌ ಮಹನೀಯರ ಬಗ್ಗೆ ಮಕ್ಕಳಿಗೆ ತಿಳಿಸಬೇಕೆಂದು ಮನವಿ ಮಾಡಿದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ
ಅಧ್ಯಕ್ಷರಾದ ಕುಮಾರಸ್ವಾಮಿ ಮಾತನಾಡಿ, ಆಚರಣೆಗಿಂತ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಜಯಂತಿಗಳು ಸಾರ್ಥಕವಾಗುತ್ತದೆ. ಮಲ್ಲಮ್ಮನವರು ಕೇವಲ ಸ್ತ್ರೀ ಕುಲಕ್ಕೆ ಮಾತ್ರವಲ್ಲ, ಇಡೀ‌ ಮನುಕುಲಕ್ಕೇ ಮಾದರಿಯಾಗಿದ್ದಾರೆ. ಹೆಣ್ಣು ಗಂಡು ಕುಟುಂಬದಲ್ಲಿ ಹೇಗೆ ಬದುಕಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ
ಕಾರ್ಯದರ್ಶಿಗಳಾದ ಹೊನ್ನಲಿಂಗಪ್ಪ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮನವರು
ಅಸಾಧಾರಣ ಹೆಣ್ಣುಮಗಳು. ಕಷ್ಟ-ಕಾರ್ಪಣ್ಯಗಳ ನಡುವೆಯೂ ಪರಶಿವನ ಪಾದವನ್ನೇ ನಂಬಿ, ಶೋಷಣೆ ಮತ್ತು ಅವಮಾನಗಳನ್ನು ಮೆಟ್ಟಿ ನಿಂತ ಆದರ್ಶ ಮಹಿಳೆ. ತಮಗೆ ಬಂದೊದಗಿದ ಕಷ್ಟಗಳನ್ನೆಲ್ಲಾ ಸಹಿಸಿದ ಅವರು ತಂಗಳು ತಿಂದು, ದನಗಳನ್ನು ಕಾದು ಬದುಕುತ್ತಾರೆ. ದುಶ್ಚಟಗಳಿಗೆ ದಾಸನಾಗಿದ್ದ ಮೈದುನ ವೇಮನನ ಮನಸ್ಸನ್ನು ಪರಿವರ್ತಿಸಿ, ಅವನನ್ನು ಸನ್ಮಾರ್ಗಕ್ಕೆ ತರುತ್ತಾರೆ‌ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಸಮಾಜದ ಮುಖಂಡರು ಹಾಜರಿದ್ದರು.

Karnataka Sanga ಭಾರತ, ಕರ್ನಾಟಕದ ತದ್ವಿರುದ್ಧವಲ್ಲ ತಾಯಿ-ಮಗಳ ಹಾಗೆ- ಡಾ.ಟಿ.ಎಲ್.ಪ್ರವೀಣ್

0

Karnataka Sanga ಕುವೆಂಪು ಅವರ ಸಾಹಿತ್ಯದಲ್ಲಿನ ರಾಷ್ಟ್ರೀಯತೆಯನ್ನು ಮರೆಮಾಚಿದ್ದೇವೆ. ಭಾರತ, ಕರ್ನಾಟಕ ತದ್ವಿರುದ್ಧವಲ್ಲ, ತಾಯಿ-ಮಗಳ ಹಾಗೆ ಎಂಬುದು ಕುವೆಂಪು ಅವರ ಸಾಹಿತ್ಯದಲ್ಲಿ ನೋಡಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಟಿ.ಎಲ್. ಪ್ರವೀಣ್ ಹೇಳಿದರು.

ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಭಾನುವಾರ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆಯ ಸಮನ್ವಯತೆ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಅಸ್ಮಿತೆಗೆ ಹೋರಾಟ ನಡೆಯುತ್ತಿದ್ದ ಕಾಲಘಟ್ಟ ಕುವೆಂಪು ಅವರದ್ದು. ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂಬ ಅವರ ಸಾಲುಗಳೆ ಭಾರತ, ಕರ್ನಾಟಕ ತದ್ವಿರುದ್ಧವಲ್ಲ ಎಂಬ ನಿಲುವು ತೋರಿಸಿದೆ ಎಂದರು.

ಭಾರತದ ಐಕ್ಯತೆಗೆ ಅತ್ಯಂತ ಮುಖ್ಯವೆಂದು ಹೇಳಿದರು. ಕನ್ನಡಕ್ಕಾಗಿ ಕೈಎತ್ತಿ ಎಂದು ಹೇಳುವವರು ಮುಂದಿನದ್ದು ಭಾರತ ಎಂಬುದನ್ನು ಮರೆಯುತ್ತಿದ್ದಾರೆ, ಇದು ವಿಷಾದನೀಯ. ಕನ್ನಡಿಗ, ಭಾರತೀಯ ಎಂಬ ವಿಷಯ ಮುಖಾಮುಖಿ ಮಾಡುವ ಸಂದರ್ಭವೇ ಇಲ್ಲ. ಅದೊಂದು ವಿಭಜಿಸುವ ತಂತ್ರ, ಅದು ಬಾಲಿಶವಾದದು. ವೇದ, ಉಪನಿಷತ್ತುಗಳ ಮೂಲಕ ನಾವು ಇಲ್ಲಿಯವರೆಗೂ ಐಕ್ಯತೆ ಸಾಧಿಸುತ್ತಾ ಬಂದಿದ್ದೇವೆ ಅದರ ಮೂಲಕವೇ ನಾವು ಸಾಗಬೇಕು ಎಂದರು.

1960ರ ನಂತರದಲ್ಲಿ ಸೆಕ್ಯುಲರ್ ರಾಜಕೀಯದಡಿ ಕನ್ನಡ ಬೌದ್ಧಿಕ ಜಗತ್ತು ಅಸ್ಥಿತ್ವ ಕಾಣುವ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಸೀಮಿತಗೊಳಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಮೌಢ್ಯವಿದೆ ಎಂಬ ಸೆಕ್ಯುಲರ್‌ವಾದದ ಚಿಂತನೆಯ ವಿಚಾರವನ್ನ ಮಾತ್ರ ಮುಂದೆ ತರಲಾಯಿತು. ಆದರೆ ಕುವೆಂಪು ಅವರ ವೈಚಾರಿಕತೆಯೇ ಅದರಿಂದ ಭಿನ್ನವಾಗಿತ್ತು, ಮುನ್ನೆಲೆಗೆ ಬರಲೇ ಇಲ್ಲ ಎಂದರು.
ಸೈದ್ಧಾಂತಿಕವಾಗಿ ಕುವೆಂಪು ಅವರ ವಿಚಾರವನ್ನು ಮುನ್ನಲೆಗೆ ತರುವ ಕೆಲಸ ಆಗಬೇಕು. ಆಗ ಭಾರತದ ಅಸ್ಮಿತೆ ಎಲ್ಲರನ್ನೂ ತಲುಪುವುದು. ಆಸುರಿ ಸಾಹಿತ್ಯ, ದೈವೀ ಸಾಹಿತ್ಯ ಎಂಬುದರ ಸ್ಪಷ್ಟನೆ ಕೊಟ್ಟವರು ಕುವೆಂಪು ಅವರು ಅದನ್ನು ತಿಳಿದು ಸಾಗೋಣ ಎಂದು ಕರೆ ನೀಡಿದರು.

ಬೆಂಗಳೂರಿನ ಸಹಪ್ರಾಧ್ಯಾಪಕಿ ಡಾ. ಅಶ್ವಿನಿ ದೇಸಾಯಿ ಮಾತನಾಡಿ, ಕುವೆಂಪು ಅವರದ್ದು ಭಾರತ ಒಗ್ಗೂಡಿಸುವ ಕಾಲಘಟ್ಟ. ಯುರೋಪಿಯನ್, ಕಲೋನಿಯಲ್ ವಿಚಾರ ತಿರಸ್ಕರಿಸಿ ಭಾರತದ ರಾಷ್ಟ್ರೀಯತೆ ಮುಂದಿಡುವ ಪ್ರಯತ್ನವನ್ನು ಕುವೆಂಪು ಹಾಗೂ ಮಾಸ್ತಿ ಅವರು ಮಾಡಿದರು ಎಂದು ತಿಳಿಸಿದರು.

Karnataka Sanga ರಾಷ್ಟ್ರೀಯತೆಯ ಕಲ್ಪನೆ ತಿಳಿಸುವ ಕೆಲಸ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಾಹಿತಿಗಳಿಗಿತ್ತು. ಅಜ್ಞಾನ ತೊರೆದು ಜ್ಞಾನದೆಡೆಗೆ ಸಾಗಿ ಎಂಬುದು ಕುವೆಂಪು ಸಾಹಿತ್ಯದಲ್ಲಿದೆ. ಸಂಸ್ಕೃತಿಯ ಹಿನ್ನೆಲೆಯ ದೃಷ್ಟಿಯಲ್ಲಿ ರಾಷ್ಟ್ರೀಯತೆ ಕಟ್ಟಿಕೊಳ್ಳಲು ಕುವೆಂಪು ಸಾಹಿತ್ಯ ಓದಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮನ್ವಯಕಾರರಾದ ರೋಹಿತ್ ಚಕ್ರತೀರ್ಥ ಇದ್ದರು.

ಮೇ 11 ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

0

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೇ.11 ಬೆಳಗ್ಗೆ 10ಕ್ಕೆ ಪ್ರತಾಪ್ ಆರ್ಕಿಡ್, 2ನೇ ಮಹಡಿ, ದುರ್ಗಿಗುಡಿ ಜೈಲ್ ಸರ್ಕಲ್, ಡಿಸಿಬಿ ಬ್ಯಾಂಕ್ ಹತ್ತಿರ, ಶಿವಮೊಗ್ಗ ಇಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ಈ ನೇರ ಸಂದರ್ಶನದಲ್ಲಿ ರೇಜ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಕಂಪನಿ ಭಾಗವಹಿಸಲಿದ್ದು, ತಮ್ಮಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಪಿಯುಸಿ ಮತ್ತು ಯಾವುದೇ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.

ಉಚಿತ ಪ್ರವೇಶ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, 2ನೇ ಕ್ರಾಸ್, ಪಂಪನಗರ, ಸಾಗರ ರಸ್ತೆ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವಂತೆ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ನಾಶ ಹೆಚ್ಚಾಗುತ್ತಿದ್ದು, ಮಾನವ ಮತ್ತು ಸಕಲ ಜೀವಿಗಳು ಭೂಮಿಯ ಮೇಲೆ ಬದುಕುಳಿಯಲು ಸಂಕಷ್ಟ:ಡಾ. ನಾಗರಾಜ್ ಪರಿಸರ

0

ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಹೆಚ್ಚಾಗುತ್ತಿದ್ದು ಪರಿಣಾಮ ಮಾನವ ಮತ್ತು ಸಕಲ ಜೀವಿಗಳು ಭೂಮಿಯ ಮೇಲೆ ಬದುಕುಳಿಯಲು ಸಂಕಷ್ಟ ಎದುರಿಸುವ ಸ್ಥಿತಿ ಉಂಟಾಗಿದೆ.

ಪ್ರತಿದಿನ ನಾವು ಮಾನವ ವನ್ಯ ಜೀವಿ ಸಂಘರ್ಷ, ಹವಮಾನ ವೈಪರಿತ್ಯ, ಅರಣ್ಯ ನಾಶ ,ಕಾಡ್ಗಿಚ್ಚು, ಭೂಕುಸಿತ, ಭೂತಾಪಮಾನ ಹೆಚ್ಚಾಗುವುದು ಇಂತಹ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.

ಈ ಎಲ್ಲದಕ್ಕೂ ಪರಿಹಾರ ಪರಿಸರದ ಬಗ್ಗೆ ವೈಜ್ಞಾನಿಕ ಅರಿವು ಮತ್ತು ಅದರ ಸಂರಕ್ಷಣೆ.
ಪರಿಸರ ವಿಜ್ಞಾನದ ಬಗ್ಗೆ ಅರಿವು ಮತ್ತು ಕಾಳಜಿಯನ್ನು ಮೂಡಿಸುವ ಹಾಗೂ ರಕ್ಷಿಸುವ ಸಲುವಾಗಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿ. ಎಸ್ಸಿ, ಪರಿಸರ ವಿಜ್ಞಾನ ವಿಷಯವಿದ್ದು ಇದನ್ನು ಓದಿದ ಸಾಕಷ್ಟು ಜನ ಪರಿಸರ ಸಂರಕ್ಷಣೆ ಕಾರ್ಯ ಮಾಡುತ್ತಿದ್ದಾರೆ.

ಬಿ.ಎಸ್ಸಿ,. ಪರಿಸರ ವಿಜ್ಞಾನ ವಿಷಯವನ್ನು ಓದುವುದರಿಂದ ಸಿಗುವ ಉದ್ಯೋಗಾವಕಾಶಗಳು.
ಸರ್ಕಾರಿ ಸಂಸ್ಥೆಗಳಾದಂತಹ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಪುರಸಭೆ ಅಲ್ಲದೆ ಸರ್ಕಾರೇತರ ಸಂಸ್ಥೆಗಳಲ್ಲಿ ಸಾಕಷ್ಟು ವಿಫುಲ ಅವಕಾಶಗಳು ಇವೆ.

ಪ್ರತಿಯೊಂದು ಕೈಗಾರಿಕೆಯಲ್ಲೂ ಪರಿಸರ ನಿರ್ವಹಣಾ ಅಧಿಕಾರಿ ಹಾಗೂ ತ್ಯಾಜ್ಯ ಶುದ್ಧೀಕರಣ ಘಟಕಗಳ ನಿರ್ವಹಣೆಗೆ ಕಡ್ಡಾಯವಾಗಿ ಪರಿಸರ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರನ್ನು ತೆಗೆದುಕೊಳ್ಳಲಾಗುತ್ತಿದೆ.
ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಯಾವುದೇ ಯೋಜನೆಗಳನ್ನು ರೂಪಿಸುವ ಮೊದಲು ಪರಿಸರ ಪರಿಣಾಮಗಳ ಮೌಲ್ಯಮಾಪನವನ್ನು ಕಡ್ಡಾಯವಾಗಿ ಮಾಡಿಸಬೇಕಾಗಿರುತ್ತದೆ, ಪರಿಸರ ವಿಜ್ಞಾನ ವಿಷಯವನ್ನು ಓದಿದ ವಿದ್ಯಾರ್ಥಿಗಳು ಇದಕ್ಕೆ ಅರ್ಹರಾಗಿರುತ್ತಾರೆ ಹಾಗೂ ಸ್ವಂತ ಕಚೇರಿಗಳನ್ನು ಪ್ರಾರಂಭಿಸಿ ಪರಿಸರ ಪರಿಣಾಮಗಳ ಮೌಲ್ಯಮಾಪನದ ವರದಿ ಮಾಡಿಕೊಡಬಹುದು.
ಸಂಶೋಧನಾ ಕ್ಷೇತ್ರ, ವಿಧಿ ವಿಜ್ಞಾನ ಕ್ಷೇತ್ರ, ಪರಿಸರ ಪ್ರವಾಸೋದ್ಯಮ ಕ್ಷೇತ್ರ ಹೀಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಘ ಸಂಸ್ಥೆಗಳಲ್ಲೂ ವಿಫುಲವಾದ ಅವಕಾಶಗಳಿವೆ.

ಡಾ. ನಾಗರಾಜ್ ಪರಿಸರ ,
ಮುಖ್ಯಸ್ಥರು, ಪರಿಸರ ವಿಜ್ಞಾನ ವಿಭಾಗ,
ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ.
9901798999.

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

0

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಒಂದು ಪಲ್ಟಿಯಾದ ಘಟನೆ ಹೊಸನಗರ ಹೊರವಲಯದ ರಾಜ್ಯ ಹೆದ್ದಾರಿ 766 ಸಿಯಲ್ಲಿ ನಡೆದಿದೆ.

ಜಯನಗರ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಬೆಳಿಗ್ಗೆ ಐದರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಕುಂದಾಪುರಕ್ಕೆ ಸಾಗರ್ ಎಂಬ ಹೆಸರಿನ ಖಾಸಗಿ ಬಸ್ ಇದಾಗಿತ್ತು.

ಘಟನೆಯೆಲ್ಲಿ ಹನುಮಂತ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪ್ರಿಯಕರ ಜೊತೆ ಸೇರಿ ಗಂಡನನ್ನು ಕೊಂದ ಹೆಂಡತಿ: ಆರೋಪಿಗಳಿಗೆ ಗಲ್ಲು ಶಿಕ್ಷೆ

0

ಕೊಲೆ ಆರೋಪಿಗಳಿಗೆ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.

2020 ರ ಜನವರಿ 15 ರಂದು ಕೊಲೆಯಾಗಿದ್ದ ಪ್ರಕಾಶ್ ಬಾಬು ಪ್ರಕರಣಕ್ಕೆ ಸಂಬಂಧಿಸಿದಂತೆ, ಪತ್ನಿ ಫ್ಲೋರಾ ನ್ಯಾನ್ಸಿ ಹಾಗೂ ಆಕೆಯ ಪ್ರಿಯಕರ ರಾಜಶೇಖರಯ್ಯ ಅವರನ್ನು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಬಂದಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶ ಇಂದಿರಾ ಮೈಲ ಸ್ವಾಮಿ ಚೆಟ್ಟಿಯಾರ್ ಅವರು ಗಲ್ಲು ಶಿಕ್ಷೆ ಜೊತೆಗೆ 14 ಲಕ್ಷ ದಂಡ ವಿಧಿಸಿದ್ದಾರೆ.

Kuvempu University ಮೇಘನಾ ಪುನೀತ್ ಲಾಡ್‌ಗೆ ಡಾಕ್ಟರೇಟ್ ಪ್ರದಾನ

0

Kuvempu University ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಜಿ. ಜೆ. ಸತೀಶರವರ ಮಾರ್ಗದರ್ಶನದಲ್ಲಿ “ISOLATION PURIFICATION BIOCHEMICAL CHARACTERIZATION AND BIOLOGICAL ACTIVITIES OF LECTIN FROM SCADOXUS MULTIFLORUS BULBS” ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರ ವಿಷಯದಲ್ಲಿ ಮೇಘನಾ ಪುನೀತ್ ಲಾಡ್ ಇವರಿಗೆ ಪಿ.ಎಚ್.ಡಿ ಪದವಿ ನೀಡಿದೆ. ಸ್ಕ್ಯಾಡೋಕ್ಸಸ್ ಮಲ್ಟಿಫ್ಲೋರಸ್ (SCADOXUS MULTIFLOURS) ಸಸ್ಯದಿಂದ ದೊರೆಯುವ ಲೆಕ್ಟಿನ್‌ಗಳು ಜೀವಾಣುನಾಶಕ, ಕ್ಯಾನ್ಸರ್ ವಿರೋಧಿ ಹಾಗೂ ರೋಗ ನಿರೋಧಕ ಸಂಬಂಧಿತ ಜೈವಿಕ ಕ್ರಿಯಾಶೀಲತೆಗಳನ್ನು ಹೊಂದಿರುವುದರಿಂದ ಈ ಅಧ್ಯಯನ ಮಹತ್ವದ್ದಾಗಿದೆ. ಹೊಸ ಸಸ್ಯ ಪ್ರೋಟೀನ್‌ಗಳನ್ನು ಗುರುತಿಸುವ ಮೂಲಕ ಔಷಧ ಅಭಿವೃದ್ಧಿ ಮತ್ತು ರೋಗ ನಿರ್ಣಯ ಅಧ್ಯಯನಗಳಿಗೆ ಇದು ಜೈವರಾಸಾಯನಿಕ ಹಾಗೂ ಜೈವ ವೈದ್ಯಕೀಯ ಸಂಶೋಧನೆಗೆ ಮಹತ್ವದ ಕೊಡುಗೆ ನೀಡುತ್ತದೆ. ಮೇಘನಾ ಪುನೀತ್ ಲಾಡ್‌ರವರು ಪ್ರಸ್ತುತ ಮೈಸೂರಿನ ಎಂ.ಎಂ.ಕೆ ಮತ್ತು ಎಸ್.ಡಿ.ಎಂ. ಕಾಲೇಜಿನಲ್ಲಿ ಮುಖ್ಯಸ್ಥರು ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Kuvempu University ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಸಮಾಜವಾದಿ ನಾಯಕ ಕೋಣಂದೂರು ಲಿಂಗಪ್ಪನವರ ಭೇಟಿ-ಅಭಿನಂದನೆ

0

Kuvempu University ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪನವರು ಶುಕ್ರವಾರದಂದು ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿರಿಯ ಸಮಾಜವಾದಿ ನಾಯಕರು ಹಾಗೂ ಸ್ವಾತಂತ್ರö್ಯ ಹೋರಾಟಗಾರರಾದ ಕೋಣಂದೂರು ಲಿಂಗಪ್ಪನವರ ಮನೆಗೆ ಭೇಟಿ ನೀಡಿ, ಅಭಿನಂದಿಸಿ, ಹಿರಿಯರೊಂದಿಗೆ ಮಾತನಾಡಿದರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನವರಾದ, ಹಿರಿಯ ಸಮಾಜವಾದಿ ನಾಯಕರು ಹಾಗೂ ಸ್ವಾತಂತ್ರö್ಯ ಹೋರಾಟಗಾರರಾಗಿ ಪರಿಚಿತರಾದ ಕೋಣಂದೂರು ಲಿಂಗಪ್ಪನವರಿಗೆ ಕುವೆಂಪು ವಿಶ್ವವಿದ್ಯಾಲಯ 35 ನೇ ಘಟಿಕೋತ್ಸವದಲ್ಲಿ ಘೋಷಿಸಲಾದ ಡಾಕ್ಟರೇಟ್ ಪದವಿ(ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ)ಯನ್ನು ಶುಕ್ರವಾರ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಇತರೆ ಅಧಿಕಾರಿಗಳು ಅವರ ಮನೆಗೆ ತೆರಳಿ ಪ್ರದಾನ ಮಾಡಿದ ಸಂದರ್ಭದಲ್ಲಿ ಸಚಿವರು ಭೇಟಿ ನೀಡಿ ಹಿರಿಯರೊಂದಿಗೆ ಮಾತನಾಡಿದರು.
ತಮ್ಮಂತಹ ಹಿರಿಯರಿಗೆ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಸಂತಸದ ವಿಷಯ. ನಿಮ್ಮನ್ನು ಭೇಟಿ ಮಾಡಿ ಮಾತನಾಡುತ್ತಿರುವುದು ನಮ್ಮ ಪುಣ್ಯ ಎಂದು ಹಿರಿಯರ ಆಶೀರ್ವಾದ ಪಡೆದ ಅವರು, ಇದೇ ಸಮಯದಲ್ಲಿ ತಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ರಾಜಕೀಯ ಜೀವನದ ಘಟನೆಯೊಂದನ್ನು ಸ್ಮರಿಸಿಕೊಂಡು, ಹಿರಿಯರೊಂದಿಗೆ ಹಂಚಿಕೊಂಡರು.
ನನ್ನ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕುವೆಂಪುರವರನ್ನು ಭೇಟಿಯಾಗಿದ್ದರು. ಆ ವೇಳೆ ಕುವೆಂಪುರವರು ಕುಪ್ಪಳಿಯ ತಮ್ಮ ಮನೆಯನ್ನು ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಬಂಗಾರಪ್ಪನವರು ಖುದ್ದಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ, ಅಂದಿನ ಸಚಿವರಾಗಿದ್ದ ಮಲ್ಲಿಕಾರ್ಜುನಯ್ಯ ಹಾಗೂ ಹಾಗೂ ವೈದ್ಯರ ತಂಡದೊಂದಿಗೆ ಕುವೆಂಪುರವರ ಮನೆ ತೋರಿಸಿ, ಅವರನ್ನು ಗೌರವದಿಂದ ಕರೆತಂದಿದ್ದರು,” ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು. ಅಂದಿನ ದಿನಗಳಲ್ಲಿ ಇದ್ದಂತಹ ಬದ್ಧತೆ ಮತ್ತು ಹಿರಿಯರ ಬಗ್ಗೆ ಇದ್ದ ಗೌರವ ಇಂದು ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
Kuvempu University ಇದೇ ವೇಳೆ ಕೋಣಂದೂರು ಲಿಂಗಪ್ಪನವರು ಶಿಕ್ಷಣ ವ್ಯವಸ್ಥೆ, ಫಲಿತಾಂಶದ ಬಗ್ಗೆ ವಿಚಾರಿಸಿದಾಗ, ಸಚಿವರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ. 94.10 ಫಲಿತಾಂಶ ಪಡೆಯುವ ಮೂಲಕ ಈ ಬಾರಿ ಐತಿಹಾಸಿಕ ಸಾಧನೆ ದಾಖಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಹಿಂದೆ ಈ ಪ್ರಮಾಣವು ಶೇ. 70-80 ರಷ್ಟಿರುತ್ತಿತ್ತು. ಪೂರಕ ಪರೀಕ್ಷೆಯ ಬದಲಾಗಿ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಹೊಸ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪರೀಕ್ಷೆ ಮುಗಿದ 20 ದಿನಗಳಲ್ಲೇ ಮತ್ತೊಂದು ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿದೆ ಎಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಸಚಿವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಈ ವೇಳೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಶರತ್ ಅನಂತಮೂರ್ತಿ, ಕುಲ ಸಚಿವರಾದ ಹೇಮಂತ್ ಎನ್, ವಿವಿ ಸಿಂಡಿಕೇಟ್ ಸದಸ್ಯರು, ಇತರೆ ಮುಖಂಡರು, ಜನಪ್ರತಿನಿಧಿಗಳು ಹಾಜರಿದ್ದರು.

ಬಸವೇಶ್ವರ ಸೊಸೈಟಿ ಮಹಿಳಾ ಸದಸ್ಯರಿಗೆ ಮೇ 10ರಂದು ವಿವಿಧ ಕ್ರೀಡಾಸ್ಪರ್ಧೆಗಳು

0

ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಬಸವೇಶ್ವರ ಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ನಿಮಿತ್ತ ಮೇ 10 ರ ಭಾನುವಾರ ಬೆಳಿಗ್ಗೆ 10ರಿಂದ ಹಳೆ ತಾಲೂಕು ಆಫೀಸ್ ರಸ್ತೆಯ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿ ಸಂಘದ ಮಹಿಳಾ ಸದಸ್ಯರು ಮತ್ತು ಅವರ ಕುಟುಂಬದ ಹೆಣ್ಣುಮಕ್ಕಳಿಗಾಗಿ ವಿವಿಧ ಕ್ರೀಡಾಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಹೊರಾಂಗಣ ಕ್ರೀಡೆಗಳಾದ ಲೆಮೆನ್ ಅಂಡ್ ಸ್ಪೂನ್, ತಲೆಮೇಲೆ ಪುಸ್ತಕ ಇಟ್ಟುಕೊಂಡು ವಾಕ್ ಮಾಡುವುದು, 50 ಮೀ. ರಿಲೇ, 40 ವರ್ಷ ಮೇಲ್ಪಟ್ಟವರಿಗೆ ಬಾಂಬ್ ಇನ್ ದಿ ಸಿಟಿ, ಮ್ಯೂಸಿಕಲ್ ಚೇರ್‍ಸ್, ಪಾಸಿಂಗ್ ದ ಬಾಲ್ ಸ್ಪರ್ಧೆಗಳಿರುತ್ತವೆ. ವಿಶೇಷವಾಗಿ ಸಹಕಾರ ಸಂಘಗಳಿಗೆ ಸಂಬಂಧಪಟ್ಟ ಸಾಮಾನ್ಯ ಜ್ಞಾನದ ಪ್ರಶ್ನೆಗಳು, ಜೊತೆಗೆ ವಿನೂತನವಾದ ಶತಸಂಜೀವಿನಿ ಸ್ಪರ್ಧೆ ಇರುತ್ತದೆ. ವಿಜೇತರಿಗೆ ತಲಾ ೩ ಬಹುಮಾನ ಇರುತ್ತದೆ. ಸಂಘದ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಸಂತೋಷ್ ಬಳ್ಳೇಕೆರೆ ಕೋರಿದ್ದಾರೆ. ಹೆಸರು ನೊಂದಣಿ ಇನ್ನಿತರ ವಿವರಗಳಿಗಾಗಿ ಅನಿತಾ ರವಿಶಂಕರ್ 94498 34882 ಅಥವಾ ಶಾಂತಾ ಆನಂದ್ ೯9011 44081ರಲ್ಲಿ ಸಂಪರ್ಕಿಸಬಹುದು

Shivamogga police ಅನಾಮಧೇಯ ಮೃತವ್ಯಕ್ತಿ ಪತ್ತೆ. ಕೋಟೆ ಪೊಲೀಸ್ ಠಾಣೆ ಪ್ರಕಟಣೆ.

0

Shivamogga police ಮೇ. 04 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ 45-50 ವಯೋಮಿತಿಯ ವ್ಯಕ್ತಿ ಅಸ್ವಸ್ಥರಾಗಿ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಅಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಮೇ 05ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತನಾಗಿರುತ್ತಾನೆ. ಈ ವ್ಯಕ್ತಿಯ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.
Shivamogga police ಈ ಮೃತ ವ್ಯಕ್ತಿಯ ಚಹರೆ 5 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಮೈಮೇಲೆ ಮೆರೂನ್ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ಕೋಟೆ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.