Legal Services Authority ಹೆಚ್ಐವಿ ಸೋಂಕಿಗೆ ಒಳಗಾದ ವ್ಯಕ್ತಿಗಳ ಒಪ್ಪಿಗೆ ಇಲ್ಲದೆ ಅವರ ಗೌಪ್ಯತೆಯನ್ನು ಬಹಿರಂಗ ಪಡಿಸುವಂತಿಲ್ಲ. ಒಂದು ವೇಳೆ ಬಹಿರಂಗ ಪಡಿಸಿದರೆ ಸಂರಕ್ಷಿತ ವ್ಯಕ್ತಿಯ ಹಕ್ಕುಗಳ ರಕ್ಷಣೆ ಉಲ್ಲಂಘನೆಯಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎo.ಎಸ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಶಿವಮೊಗ್ಗ, ಜಿಲ್ಲಾ ನ್ಯಾಯಾವಾದಿಗಳ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಶಿವಮೊಗ್ಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಎಫ್ಪಿಎಐ ಶಿವಮೊಗ್ಗ, ಬಾಪೂಜಿ ನರ್ಸಿಂಗ್ ಕಾಲೇಜ್ ಶಿವಮೊಗ್ಗ ಹಾಗೂ ಸರ್ಕಾರೇತರ ಸಂಸ್ಥೆಗಳು ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ “ಹೆಚ್ಐವಿ/ಏಡ್ಸ್ ಹರುಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ” ಎಂಬ ಧ್ಯೇಯವಾಕ್ಯದೊಂದಿಗೆ ಸೋಮವಾರ ಮೆಗ್ಗಾನ್ ಆಸ್ಪತ್ರೆಯ ಐಎಂಎ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಂರಕ್ಷಿತ ವ್ಯಕ್ತಿಯ ಹಕ್ಕುಗಳ ರಕ್ಷಣೆ ಮುಖ್ಯವಾಗಿದ್ದು, ಹೆಚ್ಐವಿ ಸೋಂಕಿತ ವ್ಯಕ್ತಿಗಳ ಗೌಪ್ಯತೆಯನ್ನು ಒಪ್ಪಿಗೆ ಇಲ್ಲದೆ ಎಲ್ಲೂ ಬಹಿರಂಗ ಪಡೆಸಬಾರದು. ಅದರಂತೆ ಕಾನೂನಿನ ಕಾಲಂ 2 ಎಸ್ ನಲ್ಲಿ ಸಂರಕ್ಷಿತ ವ್ಯಕ್ತಿ ಯಾರೆಂದು ವ್ಯಾಖ್ಯಾನಿಸಲಾಗಿದ್ದು, ಹೆಚ್ಐವಿ ಸೋಂಕಿತರು, ಅವರ ಜೊತೆ ಹಿಂದೆ ಇದ್ದ ವ್ಯಕ್ತಿ ಹಾಗೂ ಈಗ ಇರುವವರು ಈ ಮೂವರು ಕಲಂ 2 ಎಸ್ ಗೆ ಒಳಪಡುತ್ತಾರೆ ಎಂದು ಮಾಹಿತಿ ನೀಡಿದರು.
Legal Services Authority ಸಂರಕ್ಷಿತ ವ್ಯಕ್ತಿಯ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಕನಿಷ್ಠ ಮೂರು ತಿಂಗಳು ಜೈಲು ಶಿಕ್ಷೆಯ (ಎರಡು ವರ್ಷದವರೆಗೆ ಶಿಕ್ಷೆ ವಿಧಿಸಬಹುದು), 1 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗಬಹುದು. ಸೋಂಕಿತರಿಗೆ ಲೀಗಲ್ ಸರ್ವಿಸಸ್ ಕ್ಲಿನಿಕ್ ಇದ್ದು, ಇದಕ್ಕೆ ಪ್ರಾಧಿಕಾರದ ಪ್ಯಾನಲ್ ವಕೀಲರಿಂದ ಸಲಹೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
2017 ರ ಕಾಯಿದೆ ಹೆಚ್ಐವಿ ಸೋಂಕಿನ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಲು ತಿಳಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಟಿಬಿ ಸಕ್ರಿಯ ಪ್ರಕರಣಗಳ ಪತ್ತೆಗೆ ಅಭಿಯಾನ ಮಾಡಲಾಗುತ್ತಿದೆ. ಇದರ ಜಾಗೃತಿಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿರುವವರು ಕೈಜೋಡಿಸಬೇಕು. ಸೋಂಕಿತರ ಸಂಪರ್ಕದಲ್ಲಿರುವವರು ಅಭಿಯಾನದಲ್ಲಿ ಪಾಲ್ಗೊಂಡು ಆರೋಗ್ಯ ಇಲಾಖೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ನಾಗೇಶ್.ಬಿ.ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 121 ಸೌಲಭ್ಯಧಾರಿತ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿವೆ. 2024-25 ನೇ ಸಾಲಿನಲ್ಲಿ ಒಟ್ಟು 1,32,868 ಸಾಮಾನ್ಯ ಜನರಿಗೆ ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಒಟ್ಟು 249 ಸೋಂಕಿರತನ್ನು ಪತ್ತೆಹಚ್ಚಲಾಗಿದೆ. ಹಾಗೂ 2024-25 ನೇ ಸಾಲಿನ EV THS ಕಾರ್ಯಕ್ರಮದಲ್ಲಿ ಒಟ್ಟು 31,688 ಗರ್ಭೀಣಿ ಸ್ತ್ರೀಯರನ್ನು ಹೆಚ್ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 8 ಜನ ಸೋಂಕಿತರನ್ನು ಪತ್ತೆಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಸಮುದಾಯಗಳಲ್ಲಿ ಹೆಚ್ಐವಿ ಪತ್ತೆ ಹಚ್ಚುವಲ್ಲಿ ಸಿಬಿಒ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಆರೋಗ್ಯ ಶಿಕ್ಷಣದ ಕುರಿತು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಜಿಲ್ಲಾದ್ಯಾಂತ 42 ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ಗಳನ್ನು ಸ್ಥಾಪಿಸಿ ಹೆಚ್ಐವಿ, ಏಡ್ಸ್ ಅರಿವು, ರಕ್ತದಾನ ಶಿಬಿರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳು, ಯುವಜನೋತ್ಸವ ಕಾರ್ಯಕ್ರಮ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಮ್ಯಾರಥಾನ್, ನಾಟಕ ಹಾಗೂ ರೀಲ್ಸ್ ಸ್ಪರ್ಧೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಮಂಜುನಾಥ್ ಜಿ.ಎ ಅವರು ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಾಥಾ ಕೋರ್ಟ್ ಆವರಣದಿಂದ ಪ್ರಾರಂಭವಾಗಿ ಗೋಪಿ ವೃತ್ತ ಮೂಲಕ ಸಾಗಿ ಐಎಂಎ ಹಾಲ್ಗೆ ತಲುಪಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಹೆಚ್ಐವಿ ನಿಯಂತ್ರಣದ ಬಗ್ಗೆ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಹಾಜರಿದ್ದರು.
ವಾತಾರಣದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಅಪಾಯಮಟ್ಟ ಮೀರಿದೆ- ಡಾ.ಹೆಚ್.ಬಿ.ಮಂಜುನಾಥ್
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾಯುಗುಣಮಟ್ಟ ಸೂಚ್ಯಂಕವು 20 ಇರಬೇಕಾಗಿದ್ದು ಭಾರತದ ಅನೇಕ ನಗರಗಳಲ್ಲಿ ಇದು ಅಪಾಯ ಮಟ್ಟವನ್ನೂ ಮೀರಿ 150ನ್ನು ದಾಟಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಆತಂಕ ವ್ಯಕ್ತಪಡಿಸಿದರು.
ಅವರಿಂದು ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಏರ್ಪಾಡಾಗಿದ್ದ ‘ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ’ಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಬೆಂಗಳೂರಲ್ಲಿ ಇದು 153 ನ್ನು ದಾಟಿದ್ದರೆ ಹೈದರಾಬಾದಿನಲ್ಲಿ 161 ನ್ನು ದಾಟಿದೆ, ದೆಹಲಿಯಲ್ಲಂತೂ 999 ಕ್ಕೆ ಏರಿದ್ದು ಉಸಿರಾಟವೂ ಕಷ್ಟ ಎನ್ನುವಂತಾಗಿದೆ, ಇದರಲ್ಲಿ ವಾಹನಗಳಿಂದ ಹೊರಬರುವ ಹೊಗೆಯ ಪಾತ್ರವೂ ಇದ್ದು ವಾತಾವರಣದಲ್ಲಿನ ಓಝೋನ್ ಪ್ರಮಾಣ ಪ್ರತಿ ಘನ ಮೀಟರ್ ಗೆ 100 ಇರಬೇಕಾದ್ದು 351 ದಾಟುತ್ತಿದೆ, ಹೀಗೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು. 460 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ ಭೂಮಿಯನ್ನು ನಾವೀಗ ಕ್ಷಣಮಾತ್ರದಲ್ಲಿ ವಿನಾಶ ಮಾಡುವ ಹಂತಕ್ಕೆ ತಲುಪಿದ್ದೇವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ ಮಂಜುನಾಥ್ ಅನವಶ್ಯಕವಾದ ವಾಹನ ಬಳಕೆ ಕಡಿಮೆ ಮಾಡುವುದು ಹಾಗೂ ವಾಹನಗಳಿಂದ ಕೆಟ್ಟ ಹೊಗೆ ಬಾರದಂತೆ ನೋಡಿಕೊಳ್ಳುವುದು ಮುಂತಾದ ಮಾರ್ಗಗಳನ್ನು ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಬೇಕು, ಸಣ್ಣ ದೂರಕ್ಕೂ ವಾಹನ ಬಳಸುವ ರೂಢಿ ಬಿಡಬೇಕು, ಕಪ್ಪು ಹೊಗೆ ಪ್ರಮಾಣ ಹೆಚ್ಚಾಗಿರುವ ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು, ವಿದ್ಯುತ್ ವಾಹನಗಳನ್ನು ಸಾಧ್ಯವಾದಷ್ಟೂ ಬಳಸಬೇಕು ಎಂದರು.
ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಅನಿಲ್ ಬಿ ಮಾಸೂರ್ ಉಪಸ್ಥಿತರಿದ್ದರು. ವಾಯು ಮಾಲಿನ್ಯ ಪರಿಣಾಮ ಹಾಗೂ ನಿಯಂತ್ರಣ ಕುರಿತಾದ ಚಿತ್ರಕಲಾ, ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ದರ್ಜೆ ಗುಮಾಸ್ತರಾದ ರಮೇಶ್ ಭಾರಧ್ವಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಅತಿಥಿಗಳ ಪರಿಚಯ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಸೂಪರಿಂಟೆಂಡೆಂಟ್ ಸೋಮಣ್ಣ ಮಾಡಿದರು. ಅಧೀಕ್ಷಕರುಗಳಾದ ಹೆಚ್ ಸಿ ರವಿ, ಪ್ರಸನ್ನ ಹಾಗೂ ಸಿಬ್ಬಂದಿ ವರ್ಗದವರು ಮುಂತಾದವರು ಭಾಗವಹಿಸಿದ್ದರು.
ಮಧ್ಯಮವರ್ಗದವರು ದೊಡ್ಡಮೊತ್ತದ ದಾನ ನೀಡುವುದು ನಿಜಕ್ಕೂ ಶ್ಲಾಘನೀಯ- ಅಥಣಿ ಎಸ್ ವೀರಣ್ಣ
ಸಂಪತ್ತು ಇದ್ದವರು ದೊಡ್ಡ ದಾನ ಕೊಡುವುದು ಸ್ವಾಭಾವಿಕ ಆದರೆ ಮಧ್ಯಮ ವರ್ಗದವರು ಸ್ವಯಂ ಪ್ರೇರಣೆಯಿಂದ ದೊಡ್ಡ ಮೊತ್ತದ ದಾನವನ್ನು ಸತ್ಕಾರ್ಯಕ್ಕೆ ಕೊಡುವುದು ನಿಜಕ್ಕೂ ಶ್ಲಾಘನೀಯ ಎಂದು ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಅಥಣಿ ಎಸ್ ವೀರಣ್ಣ ಅಭಿಪ್ರಾಯ ಪಟ್ಟರು.
ಅವರಿಂದು ಬಾಡಾ ಕ್ರಾಸ್ ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿ ಕಾರ್ಯಗಳಿಗಾಗಿ ನಿವೃತ್ತ ಶಿಕ್ಷಕರಾದ ಎ ಎಮ್ ಬಸವರಾಜಯ್ಯನವರು ತಮ್ಮ ತಂದೆ ಎ ಎಂ ವೃಷಭೇಂದ್ರಯ್ಯ ತಾಯಿ ಎ ಎಮ್ ಅನ್ನಪೂರ್ಣಮ್ಮನವರ ಸ್ಮರಣೆಯಲ್ಲಿ ಒಂದು ಕೋಟಿ ರೂಪಾಯಿ ದಾನವಾಗಿ ನೀಡಿದ್ದು ದಾನಿ ಬಸವರಾಜಯ್ಯನವರನ್ನು ಸನ್ಮಾನಿಸಿ ಮಾತನಾಡುತ್ತಾ ಅಂಧ ಮಕ್ಕಳಿಗೆ ಆಶ್ರಯ ಕೊಟ್ಟು ಸಂಗೀತ ಶಿಕ್ಷಣವನ್ನು ಕೊಡುತ್ತಿರುವ ಪುಣ್ಯಾಶ್ರಮಕ್ಕೆ ಸಹೃದಯರು ಸ್ವಯಂ ಪ್ರೇರಣೆಯಿಂದ ನೀಡುತ್ತಿರುವುದು ಲಿಂಗೈಕ್ಯ ಪಂಚಾಕ್ಷರ ಗವಾಯಿಗಳು ಪುಟ್ಟರಾಜ ಗವಾಯಿಗಳ ಪ್ರೇರಣೆಯಿಂದಲೇ ತಾನಾಗಿ ಬರುತ್ತಿದೆ. ಮಾನ್ಯ ಡಾ. ಶಾಮನೂರು ಶಿವಶಂಕರಪ್ಪನವರ ಗೌರವಾಧ್ಯಕ್ಷತೆಯಲ್ಲಿ ಪುಣ್ಯಾಶ್ರಮದ ಕಾರ್ಯಗಳು ಸುಗಮವಾಗಿ ಸಾಗುತ್ತಿದ್ದು ಅನೇಕರು ತಮ್ಮ ಹುಟ್ಟುಹಬ್ಬ ಹಾಗೂ ಹಿರಿಯರ ನೆನಪುಗಳನ್ನು ಇಲ್ಲಿಯೇ ಬಂದು ಆಚರಿಸುತ್ತಾರೆ, ಬಸವರಾಜಯ್ಯನವರ ಈ ಒಂದು ಕೋಟಿ ರೂಪಾಯಿ ದೊಡ್ಡ ಮೊತ್ತದ ದಾನವು ಪುಣ್ಯಾಶ್ರಮದ ಅಭಿವೃದ್ಧಿಗಾಗಿ ಸದ್ಬಳಕೆಯಾಗಲಿದೆ ಎಂದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ದಾನದ ಮಹತ್ವ ವಿವರಿಸಿದರು.
ಕೋಟಿ ರೂ. ದಾನಿ ನಿವೃತ್ತ ಶಿಕ್ಷಕ ಎ ಎಂ ಬಸವರಾಜಯ್ಯ ಮಾತನಾಡಿ ಪುಣ್ಯಾಶ್ರಮಕ್ಕೆ ತಂದೆ ತಾಯಿಗಳ ಸ್ಮರಣೆಯಲ್ಲಿ ಈ ಮೊತ್ತದ ದಾನ ನೀಡಲು ಐದಾರು ತಿಂಗಳುಗಳಿಂದ ಯೋಚಿಸುತ್ತಿದ್ದೆ, ಈಗ ದಾನ ನೀಡಿ ನನ್ನ ಭಾರ ಕಡಿಮೆ ಮಾಡಿಕೊಂಡಿದ್ದೇನೆ, ದಾನ ಸ್ವೀಕರಿಸಿ ಪುಣ್ಯಾಶ್ರಮದ ಅಥಣಿ ವೀರಣ್ಣ ಮುಂತಾಗಿ ಸರ್ವರೂ ನನ್ನನ್ನು ಕೃತಾರ್ಥ ರನ್ನಾಗಿಸಿದ್ದಾರೆ ಎಂದರು.
ಆಶ್ರಮದ ಉಪಾಧ್ಯಕ್ಷ ದೇವರ ಮನಿ ಶಿವಕುಮಾರ್, ಕಾರ್ಯದರ್ಶಿ ಎ ಹೆಚ್ ಸಿದ್ದಲಿಂಗೇಶ್ವರ, ದಾನಿಗಳ ಆಪ್ತಮಿತ್ರ ಕೆ ಎಂ ಶೇಖರಪ್ಪ ಉಪಸ್ಥಿತರಿದ್ದು ಕೃತಜ್ಞತಾಪೂರ್ವಕ ಮಾತನಾಡಿದರು. ಅಮರಯ್ಯ ಸ್ವಾಮಿ ಹಿರೇಮಠ್ ಹಾಗೂ ಆನಂದ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು ಆಶ್ರಮದ ಅಂಧ ವಿದ್ಯಾರ್ಥಿಗಳು ಭಕ್ತಿ ಗೀತೆಗಳು ಹಾಗೂ ವಚನ ಗಾಯನ ಮಾಡಿದರು.
Rotary Club Shimoga ಕ್ರೀಡೆಗಳಿಂದ ಜೀವನದಲ್ಲಿ ಶಿಸ್ತು,ಧೈರ್ಯ,ಒಗ್ಗಟ್ಟಿನ ಮನೋಭಾವ ಮೂಡುತ್ತದೆ- ಸುರೇಶ್ ಸಾಲ್ಡಾನ
Rotary Club Shimoga ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು, ಕ್ರಮಬದ್ಧತೆ, ಧೈರ್ಯದ ಜತೆಯಲ್ಲಿ ಒಗ್ಗಟ್ಟು ಜೀವನವನ್ನು ಶ್ರೀಮಂತಗೊಳಿಸುತ್ತವೆ ಎಂದು ಮೌಂಟ್ ಕಾರ್ಮೆಲ್ ಶಾಲೆ ಪ್ರಾಂಶುಪಾಲ ಸುರೇಶ್ ಸಾಲ್ಡಾನ ಹೇಳಿದರು.
ವಿದ್ಯಾನಗರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ರೋಟರಿ ವಲಯ 10ರ ವತಿಯಿಂದ ಆಯೋಜಿಸಿದ್ದ ಉತ್ತರ ಧ್ರುವ ಕ್ರೀಡೋತ್ಸವ 2025 ಉದ್ಘಾಟಿಸಿ ಮಾತನಾಡಿ, ರೋಟರಿ ಪರಿವಾರ ಶಾಲೆಯಲ್ಲಿ ಪ್ರತಿ ವರ್ಷ ಕ್ರೀಡೋತ್ಸವ ಆಯೋಜಿಸುತ್ತಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಶಾಲೆಯ ಸ್ವಚ್ಛತೆ, ಶಿಸ್ತಿನ ಪಾಲನೆ ಮತ್ತು ಗೌರವವು ರೋಟರಿ ಸದಸ್ಯರ ಜವಾಬ್ದಾರಿಯುತ ನಡತೆ ತೋರಿಸುತ್ತದೆ. ರೋಟರಿ ಸಂಸ್ಥೆಯು ಶಾಲೆಯಲ್ಲಿ ಆಯೋಜಿಸಿದ್ದ ಐ-ಚೆಕಪ್, ಡೆಂಟಲ್ ಹೆಲ್ತ್ ಕ್ಯಾಂಪ್, ಮಕ್ಕಳ ಆರೋಗ್ಯ ತಪಾಸಣೆ ಮಾನವೀಯ ಸೇವಾ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹೇಳಿದರು.
ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, ಎಲ್ಲ ವಯೋಮಿತಿಗಳಲ್ಲಿ ನಡೆಯುವ ಈ ಕ್ರೀಡಾ ಸ್ಪರ್ಧೆಗಳು ರೋಟರಿ ಕುಟುಂಬದ ಬಾಂಧವ್ಯವನ್ನು ಗಟ್ಟಿಗೊಳಿಸುವ ಅದ್ಭುತ ವೇದಿಕೆ. ನಾವು ಎಲ್ಲರೂ ಒಂದೇ ಪರಿವಾರ ಎಂಬ ಭಾವನೆ ಕ್ರೀಡೋತ್ಸವದಿಂದ ಮತ್ತಷ್ಟು ಬಲವಾಗುತ್ತದೆ ಎಂದು ತಿಳಿಸಿದರು.
ವಲಯ 10ರ ಸ್ಪೋರ್ಟ್ಸ್ ಕೋಆರ್ಡಿನೇಟರ್ ಸಿ.ಎನ್.ಮಲ್ಲೇಶ್ ಮಾತನಾಡಿ, ವಲಯ ಸ್ಪರ್ಧೆಗಳಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಇದೆ ಎಂದು ಹೇಳಿದರು.
Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಬಸವರಾಜ್ ಮಾತನಾಡಿ, ಶಿವಮೊಗ್ಗದ ಎಂಟು ಕ್ಲಬ್ಗಳು ಒಟ್ಟಾಗಿ ನಡೆಸುತ್ತಿರುವ ಕ್ರೀಡೋತ್ಸವವು ರೋಟರಿಯ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಯಾವುದೇ ತಪ್ಪುಗಳಿದ್ದರೆ ಪರಸ್ಪರ ಸಹಕಾರದಿಂದ ಸರಿಪಡಿಸಿಕೊಂಡು ಮುಂದೆ ಉತ್ತಮವಾಗಿ ಸಾಗೋಣ ಎಂದು ಸದಸ್ಯರಿಗೆ ಕರೆ ನೀಡಿದರು.
ರೋಟರಿ ಕಿರಿಯ ಮಕ್ಕಳಿಂದ ಹಿರಿಯರ ತನಕ ಎಲ್ಲ ವಯೋಮಿತಿಯವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಕಾರ್ಯದರ್ಶಿ ಶಿವಕುಮಾರ್, ವಲಯ ಸೇನಾನಿ ಜಗದೀಶ್ ಸರ್ಜಾ, ಶಂಕರ್.ಎಂ.ಪಿ., ಎಂಟು ಕ್ಲಬ್ಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಶಿವಮೊಗ್ಗದಲ್ಲಿ ಶ್ರೀದತ್ತ ಜಯಂತಿ & ಶ್ರೀಧರ ಸ್ವಾಮಿಗಳ ಜಯಂತಿಗೆ ಸರ್ವ ಸಿದ್ಧತೆ
ಶಿವಮೊಗ್ಗ ನಗರದ ಕೋಟೇ ಶ್ರೀ ಭೀಮೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಗುರು ಗೀತಾ, ದತ್ತಾತ್ರೇಯ ಹಾಗೂ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಜಯಂತಿ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಜ.05ರವರೆಗೆ ನಡೆಯಲಿದೆ.
ಸಂಪ್ರದಾಯದಂತೆ ನಿತ್ಯ ಬೆಳಿಗ್ಗೆ 05 ರಿಂದ ಕಾಕಡಾರತಿ, ನಗರ ಸಂಕೀರ್ತನೆ ನಡೆಯಲಿದ್ದು, ಪ್ರತಿ ದಿನ ಸಂಜೆ ಪೂಜೆ, ಉಪಾನ್ಯಾಸ ಹಾಗೂ ಮಹಾ ಮಂಗಳಾರತಿ ನಡೆಯಲಿದೆ.
ಡಿ. 03ರ ಬುಧವಾರ ಹಂದಲಸು ವಾಸುದೇವ ಭಟ್ಟರಿಂದ ಶ್ರೀ ದತ್ತ ಸಂದೇಶ ಉಪನ್ಯಾಸ, ಡಿ. 04ರಂದು ದತ್ತ ಜನನ, ೦೫ರಂದು ದತ್ತಾತ್ರೇಯ ಮೂಲ ಮಂತ್ರ ಹೋಮ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
World Soil Day ಇರುವಕ್ಕಿಯಲ್ಲಿ ತೋಟಗಾರಿಕಾ ಬೆಳೆಗಳ ಕೃಷಿಯಲ್ಲಿ ಮಣ್ಣು ಪರೀಕ್ಷೆ & ಸಮಗ್ರ ಪೋಷಕಾಂಶ ನಿರ್ವಹಣೆ ತರಬೇತಿ
World Soil Day ವಿಶ್ವ ಮಣ್ಣು ದಿನಾಚರಣೆಯ ಪ್ರಯುಕ್ತ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಮತ್ತು ಮಣ್ಣು ವಿಜ್ಞಾನ ವಿಭಾಗ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಇವರ ಸಹಭಾಗಿತ್ವದಲ್ಲಿ “ತೋಟಗಾರಿಕೆ ಬೆಳೆಗಳಲ್ಲಿ ಮಣ್ಣು ಪರೀಕ್ಷೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ (ಅಡಿಕೆ, ತೆಂಗು, ಶುಂಠಿ ಹಾಗೂ ಕಾಳುಮೆಣಸು) “
ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.
ಈ ಕಾರ್ಯಕ್ರಮವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ “ರೈತರ ತರಬೇತಿ ಸಂಸ್ಥೆ, ವರದಾ ಬ್ಲಾಕ್, ನೆಲ ಮಹಡಿ, ಇರುವಕ್ಕಿ” ಯಲ್ಲಿ ದಿನಾಂಕ: 05.12.2025 ರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುತ್ತದೆ.
ಆದುದರಿಂದ ಆಸಕ್ತ ರೈತರು ಮತ್ತು ರೈತ ಮಹಿಳೆಯರು, ರೈತರ ತರಬೇತಿ ಸಂಸ್ಥೆಯ ಸಿಬ್ಬಂದಿಯವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ತರಬೇತಿ ಕಾರ್ಯಕ್ರಮವು ಉಚಿತವಾಗಿರುತ್ತದೆ.
ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು 9958324261/ 8618715599 / 9448312978
World Soil Day ಇರುವಕ್ಕಿಯಲ್ಲಿ ತೋಟಗಾರಿಕಾ ಬೆಳೆಗಳ ಕೃಷಿಯಲ್ಲಿ ಮಣ್ಣು ಪರೀಕ್ಷೆ & ಸಮಗ್ರ ಪೋಷಕಾಂಶ ನಿರ್ವಹಣೆ ತರಬೇತಿ ತರಬೇತಿ ನಡೆಯುವ ಸ್ಥಳಕ್ಕೆ ಬರಲು ಈ ಕೋಡ್ ಪಿನ್ 44L-7L7-PJM6 ಅನ್ನು ಗೂಗಲ್ ಮ್ಯಾಪ್ ನಲ್ಲಿ ಉಪಯೋಗಿಸಿ.
Guarantee scheme ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ಒಂದಿಲ್ಲೊಂದು ರೀತಿಯ ಬದಲಾವಣೆ ತಂದಿವೆ- ಹೆಚ್.ಎಂ.ಮಧು
Guarantee scheme ಆರ್ಥಿಕವಾಗಿ ಸಾಮಾಜಿಕವಾಗಿ ದುರ್ಬಲರಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಘನತೆಯಿಂದ ಜೀವನವನ್ನು ಸಾಗಿಸುವಂತಾಗಬೇಕು ಎನ್ನುವ ಸದುದ್ದೇಶದಿಂದ ಆಡಳಿತಾರೂಢ ಸರ್ಕಾರವು ಪಂಚ ಗ್ಯಾರಂಟೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ ಎಂದು ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ.ಮಧು ಅವರು ಹೇಳಿದರು
ಅವರು ಶಿವಮೊಗ್ಗ ನಗರದ ಖಾಸಗಿ ಬಸ್ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮ ಸಂಪರ್ಕ ಯೋಜನೆಯಡಿ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಾಕ್ಷ್ಯ ಚಿತ್ರಪ್ರದರ್ಶನ, ಸಂಗೀತ ಮತ್ತು ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಶೋಷಿತರನ್ನು ಮಾತ್ರವಲ್ಲದೇ ಸಮಾಜದ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿದ ಅತ್ಯಂತ ಯಶಸ್ವಿ ಗ್ಯಾರಂಟಿ ಯೋಜನೆಗಳಾಗಿದ್ದು, ಜಗತ್ತಿನಾದ್ಯಂತ ಜನಪ್ರಿಯಗೊಂಡಿವೆ ಮಾತ್ರವಲ್ಲ ದೇಶದ ಇತರೆ ರಾಜ್ಯಗಳ ಜನರು ಅವುಗಳನ್ನು ಅನುಸರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಒಂದಿಲ್ಲೊಂದು ರೀತಿಯ ಬದಲಾವಣೆ ಸುಧಾರಣೆ ತಂದಿವೆಯಲ್ಲದೆ ಆರ್ಥಿಕವಾಗಿ ಸಂಚಲನವನ್ನುಂಟು ಮಾಡಿದೆ ಎಂದ ಅವರು, ಆರ್ಥಿಕವಾಗಿ ದುರ್ಬಲ ವರ್ಗದವರ ಜೀವನಮಟ್ಟ ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದರು.
ಕುಟುಂಬದ ಯಜಮಾನಿಗೆ ಆರ್ಥಿಕ ಬಲತುಂಬುವ ನಿಟ್ಟಿನಲ್ಲಿ ಅಕೆಯ ಬ್ಯಾಂಕ್ಖಾತೆಗೆ ನೇರವಾಗಿ ರೂ 2000/-ಗಳನ್ನು ಜಮಾ ಮಾಡುವ ಗೃಹಲಕ್ಷ್ಮೀ ಯೋಜನೆ, ಮಹಿಳಾ ಸಬಲೀಕರಣಕ್ಕೆ ಮುನ್ನಡಿ ಎನ್ನುವಂತೆ ಮಹಿಳೆಯರಿಗಾಗಿಯೇ ರೂಪಿಸಿದ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ, ಹಸಿದ ಒಡಲಿಗೆ ಸಂತೃಪ್ತಿಯ ಊಟ ಬಡಿಸುವ ಅನ್ನಭಾಗ್ಯ ಯೋಜನೆ, ವಿದ್ಯುತ್ಬಳಸುವ ಪ್ರತಿ ಮನೆಗೆ ಉಚಿತ ವಿದ್ಯುತ್ಒದಗಿಸಿದ ಗೃಹಜ್ಯೋತಿ ಯೋಜನೆ ಹಾಗೂ ವಿದ್ಯಾವಂತರಾಗಿಯೂ ಉದ್ಯೋಗ ಸಿಗದ ನಿರುದ್ಯೋಗಿ ಪದವೀದರರಿಗೆ, ಡಿಪ್ಲೋಮಾ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗಳು ಅತ್ಯಂತ ಜನಪ್ರಿಯಗೊಂಡಿದ್ದು, ಜನಸಾಮಾನ್ಯರಲ್ಲಿ ಮಂದಹಾಸ ಮೂಡಿಸಿದೆ ಎಂದರು.
Guarantee scheme ಯಾವುದೇ ಸರ್ಕಾರ ಜನರ ವೆಚ್ಚ ಸಾಮರ್ಥ್ಯವನ್ನು ಅಥವಾ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದಲ್ಲಿ ಅಂತಹ ಸಮಾಜದಲ್ಲಿ ಅರ್ಥಿಕ ಚಲನಶೀಲತೆ ಆರೋಗ್ಯಕರವಾಗಿರುತ್ತದೆ ಜಿಡಿಪಿ ಬೆಳವಣಿಯೂ ಉತ್ತಮ ರೀತಿಯಲ್ಲಿರುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಮತ. ಇಂತಹ ಮಾದರಿ ಎನಿಸಬಹುದಾದ ಯೋಜನೆಗಳ ಜಾರಿಯಿಂದ ಜನರ ಜೀವನಮಟ್ಟ ಸುಧಾರಣೆಗೊಂಡು ಆರ್ಥಿಕ ಚಟುವಟಿಕೆ ಸುಧಾರಿಸಲಿದೆ ಎಂದರು.
ಗ್ಯಾರಂಟಿ ಯೋಜನೆಗಳು ಕಡುಬಡವರ, ದುರ್ಬಲರ ಬಾಳನ್ನು ಬೆಳಗಿಸಿವೆ. ವ್ಯವಸ್ಥೆಯಲ್ಲಿ ಬದಲಾವಣೆಯ ದಿನಗಳನ್ನು ಕಾಣಬಹುದಾಗಿದೆ. ಈ ಯೋಜನೆಗಳ ಪಡೆದ ಫಲಾನುಭವಿಗಳು ಸಹಜವಾಗಿ ತೃಪಭಾವ ಹೊಂದಿರುವುದು ನಮ್ಮ ಅರಿವಿಗೆ ಬರುತ್ತಿದೆ. ಅಷ್ಟೇ ಅಲ್ಲದೇ ಜಿಲೆಯ ಜನರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಸಕ್ರಿಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ ಅವರು ಉಪಸ್ಥಿತರಿದ್ದರು ಭದ್ರಾವತಿಯ ಜಗದೀಶ್ ನೇತೃತ್ವದ ಸಂಸ್ಕೃತಿ ಕಲಾತಂಡದ ಕಲಾವಿದರು ಭಾಗ್ಯದ ಬೆಳಕು ಎಂಬ ಕಿರುನಾಟಕವನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ ತಾಲೂಕುಗಳ ಆಯ್ದ 20ಸ್ಥಳಗಳಲ್ಲಿ ಪ್ರದರ್ಶನ ನೀಡಲಿದೆ. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸುತ ಪಡಿಸುವ ಗ್ಯಾರಂಟಿ ಯೋಜನೆಗಳ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
Unite and Orange the World ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಲು ವಾಕಥಾನ್ ಮೂಲಕ ಮನವಿ
Unite and Orange the World ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಶಿವಮೊಗ್ಗ ನಗರದ ಐದು ಇನ್ನರ್ವ್ಹೀಲ್ ಕ್ಲಬ್ಗಳಿಂದ ಸ್ಟೆಪ್ ಅಪ್ ಮತ್ತು ಸ್ಪೀಕ್ ಔಟ್ ವಿಷಯದಡಿ “ಯುನೈಟ್ ಆಂಡ್ ಆರೇಂಜ್ ದಿ ವರ್ಲ್ಡ್” ಸಾರ್ವಜನಿಕ ಜಾಗೃತಿ ರ್ಯಾಲಿ ವಾಕಥಾನ್ ಆಯೋಜಿಸಲಾಗಿತ್ತು.
ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಧ್ವನಿ ಎತ್ತಲು, ಸಮಾಜದ ಕಲ್ಯಾಣ ಕಾಪಾಡಲು ಮತ್ತು ಮಹಿಳೆಯರು ಗೌರವಯುತ ಜೀವನ ನಡೆಸುವಂತೆ ರಕ್ಷಣೆಯನ್ನು ಖಚಿತಪಡಿಸಲು ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮಹಿಳೆ ಒಂಟಿಯಾಗಿ ಓಡಾಡದ ಪರಿಸ್ಥಿತಿ ಇದೆ. ದರೋಡೆ, ಆತ್ಯಾಚಾರಗಳು ಹೆಚ್ಚಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮಹಿಳೆಯರಿಗೆ ಸೂಕ್ತ ರೀತಿ ಭದ್ರತೆ ನೀಡುವಂತೆ ಮನವಿ ಮೂಲಕ ಆಗ್ರಹಿಸಲಾಯಿತು.
ವಾಕಥಾನ್ ನಗರದ ಸಹ್ಯಾದ್ರಿ ಶಾಲೆಯಿಂದ ಆರಂಭಗೊಂಡು ಜಾಗೃತಿ ಸಂದೇಶದ ಘೋಷಣೆಗಳನ್ನು ಸಾರಲಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಕಥಾನ್ ಸಮಾರೋಪಗೊಂಡಿತು. ಮಹಿಳೆಯರ ಮೇಲಿನ ಹಿಂಸಾಚಾರ ತಡೆಗಟ್ಟುವ ಅಗತ್ಯ ಹೇಳುವ ಬೀದಿನಾಟಕವನ್ನು ಬಿಎಸ್ಎಸ್ ಸರ್ಜಿ ನರ್ಸಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಿದರು.
Unite and Orange the World ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಪಿಡಿಸಿ ವಾರಿಜಾ ಜಗದೀಶ್, ಭಾರತಿ ಚಂದ್ರಶೇಖರ್, ಇನ್ನರ್ವ್ಹೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್, ಐದು ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷರಾದ ವೀಣಾ ಸುರೇಶ್, ಅನ್ನಪೂರ್ಣ ರಂಗರಾಜನ್, ಶೀಲಾ ಸುರೇಶ್, ಲತಾ ರಮೇಶ್, ಶಾರದಾ ಬಸವರಾಜ್, ಮಹಿಳಾ ಕಲ್ಯಾಣ ಅಧಿಕಾರಿ ಶಶಿರೇಖಾ, ಕಲಾವಿದೆ ಎಂ.ವಿ.ಪ್ರತಿಭಾ, ಐದು ಕ್ಲಬ್ಗಳ ಸದಸ್ಯರು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
United Sports and Culture Club ವಾಲಿಬಾಲ್ ಪಂದ್ಯ. ಯುನೈಟೆಡ್ ಕಪ್ ವಿಜೇತರಾದ ಆದಿ ಚುಂಚನಗಿರಿ ಪ.ಪೂ. ಕಾಲೇಜಿನ ಬಾಲಕಿಯರ ತಂಡ
United Sports and Culture Club ಸರ್ದಾರ್ ಜಾಫರ್ ಸ್ಮರಣಾರ್ಥವಾಗಿ ನಾಲ್ಕನೇ ವರ್ಷದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕ,ಬಾಲಕಿಯರಿಗಾಗಿ ಯುನೈಟೆಡ್ ಕಪ್ ವಾಲಿಬಾಲ್ ಕ್ರೀಡಾಕೂಟವನ್ನು ನೆಹರೂ ಕ್ರೀಡಾಂಗಣದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್, ಶಿವಮೊಗ್ಗ. ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಬಾಲಕ ಮತ್ತು ಬಾಲಕಿಯರು ಭಾಗವಹಿಸಿ,ಉತ್ತಮ ಆಟದ ಪ್ರದರ್ಶನ ನೀಡಿ, ಉತ್ತಮ ದಾಳಿ, ಅಷ್ಟೇ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿ, ಬಾಲಕಿಯರು ಅಂತಿಮ ಪಂದ್ಯದಲ್ಲಿ ಉತ್ತಮ ಜೊತೆ ಆಟದ ಪ್ರದರ್ಶನ ನೀಡಿ, ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಅತ್ಯಾಕರ್ಷಕ ಟ್ರೋಪಿ ಮತ್ತು 7777 ರೂಗಳ ನಗದು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ.
ಬಾಲಕರ ವಿಭಾಗದಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ.ಟ್ರೋಫಿ ಮತ್ತು 3333 ನಗದು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
ಬೆಸ್ಟ್ ಆಲ್ ರೌಂಡರ್ ಆಗಿ ಮಾನಸಿ, ಬೆಸ್ಟ್ ಪಾಸರ್ ಯಶಸ್ವಿನಿ ಪಡೆದುಕೊಂಡರೆ, ಬಾಲಕರ ವಿಭಾಗದಲ್ಲಿ ಹರ್ಷ ಕೆ. ಬೆಸ್ಟ್ ಲಿಬ್ರೋ ಆಗಿ ಹೊರಹೊಮ್ಮಿರುತ್ತಾನೆ.
United Sports and Culture Club ಕ್ರೀಡಾಪಟುಗಳ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲಿ ಎಂದು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲ ಎಸ್. ವಿ. ಗುರುರಾಜ್, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
Dinesh Gundu Rao ಶಿವಮೊಗ್ಗ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಿ- ದಿನೇಶ್ ಗುಂಡೂರಾವ್
Dinesh Gundu Rao ಶಿವಮೊಗ್ಗ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯವಾದ ಎಲ್ಲ ಕ್ರಮ ವಹಿಸಬೇಕು. ಜೊತೆಗೆ ಲಿಂಗಾನುಪಾತ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಹೆಚ್ ಓ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಸ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಹೈರಿಸ್ಕ್ ಗರ್ಭಿಣಿಯರ ಕುರಿತು ಕಡ್ಡಾಯವಾಗಿ ಶೇ.100 ಟ್ರಾಕ್ ಆಗಬೇಕು. ಎಎನ್ ಸಿನೋಂದಣಿ ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಆಗುವಂತೆ ನೋಡಿಕೊಳ್ಳಬೇಕು. ತಾಯಿ ಮರಣ ಪ್ರಮಾಣ 80 ಇದ್ದು ಹೊರ ಜಿಲ್ಲೆಗಳ ಗಂಭೀರ ಪ್ರಕರಣಗಳಿಂದಾಗಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಶಿಶು ಮರಣ 15.1 ಇದ್ದು, ಕಳೆದ ಸಾಲಿಗಿಂತ ಕಡಿಮೆ ಆಗಿದೆ. ತಾಯಿ ಮತ್ತು ಶಿಶು
ಮರಣ ಪ್ರಮಾಷ ರಾಜ್ಯ ಸರಾಸರಿಗಿಂತ ಹೆಚ್ಚಿದ್ದು ಇದನ್ನು ಕಡಿತಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಲಿಂಗಾನುಪಾತ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಸೊರಬ, ಶಿವಮೊಗ್ಗ, ಭದ್ರಾವತಿ ಕಡಿಮೆ ಇದ್ದು ಯಾಕೆಂದು ತಿಳಿದು ಕ್ರಮ ವಹಿಸಬೇಕು. ಲಿಂಗ ಪತ್ತೆ ಹಚ್ಚುವ ಕಾರ್ಯವೆಲ್ಲಾದರೂ ನಡೆಯುತ್ತಿದೆಯೋ ಎಂದು ಪತ್ತೆ ಹಚ್ಚಬೇಕು. ಎಎನ್ಸಿ ನೋಂದಣಿ ಕಡ್ಡಾಯವಾಗಿ ಮಾಡಿಸಿ. ವಿಳಂಬ ನೋಂದಣಿಯಲ್ಲಿ ಲಿಂಗಾನುಪಾತ ಪತ್ತೆ ಹಚ್ಚಿ ವರದಿ ನೀಡುವಂತೆ ತಿಳಿಸಿದರು.
ಸಿಹೆಚ್ ಸಿ ಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆ ಇದೆ. ಹೆರಿಗೆ ಅತಿ ಕಡಿಮೆ ಇರುವ ಸಿಹೆಚ್ ಸಿಯಿಂದ ಪ್ರಸೂತಿ ಮತ್ತು ಅರವಳಿಕೆ ತಜ್ಞ ವೈದ್ಯರನ್ನುತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಿ 24/7 ಕೆಲಸ ಮಾಡುವಂತೆ ಕ್ರಮವಹಿಸಬಹುದು ಎಂದ ಅವರು ತಾಲ್ಲೂಕು ಆಸ್ಪತ್ರೆಗಳನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ಮಾಡಬೇಕು. ಆಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೂ ಹೊರೆ ಕಡಿಮೆ ಆಗುತ್ತದೆ ಎಂದರು.
ಜಿಲ್ಲೆಯಲ್ಲಿ 14887 ಹೆರಿಗೆ ಆಗಿದ್ದು, 52.21 % ಸಿಜೇರಿಯನ್ ಶಸ್ತ್ರ ಚಿಕಿತ್ಸೆ ನಡೆದಿದೆ. ಜಿಲ್ಲೆಯಲ್ಲಿ ಎಂಆರ್ ೧, ೨ ನೇ ಡೋಸ್ ಲಸಿಕೆ 91% ಆಗಿದೆ. ರಾಜ್ಯ ಸರಾಸರಿ 95% ಇದ್ದು, 95% ಆಗುವಂತೆ ಕ್ರಮಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಯಲ್ಲಿ ನೀಡುತ್ತಿರುವ ಎಂ ಆರ್ ಲಸಿಕೆ ಪ್ರಮಾಣವನ್ನೂ ಪರಿಶೀಲಿಸುವಂತೆ ಸೂಚಿಸಿದರು.
ನಮ್ಮ ಕ್ಲಿನಿಕ್ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಎಎಂಪಿಕೆ (ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ) ಕಾರ್ಯಕ್ರಮದಡಿ 5 ರಿಂದ 19 ರ್ಷದೊಳಗಿನ ಶಾಲಾ- ಕಾಲೇಜಿನ 114196
ಮಕ್ಕಳನ್ನು ತಪಾಸಣೆಗೆ ಒಳಡಿಸಿದ್ದು, 6.5 % ತೀವ್ರವಲ್ಲದ(ಮೈಲ್ಡ್) 5.7% ಮಧ್ಯಮ(ಮಾಡರೇಟ್) ಮತ್ತು , 0.04 ತೀವ್ರ (ಸಿವಿಯರ್) ಅನಿಮಿಯಾ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಚಿಕಿತ್ಸೆ ಮುಗಿದ ನಂತರ ಮುಂದಿನ ತಿಂಗಳು ವರದಿ ನೀಡಿ ಎಂದರು.
Dinesh Gundu Rao ಗೃಹ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿಆಗಸ್ಟ್ ಯಿಂದ ಸೆಪ್ಟೆಂಬರ್ವರೆಗೆ ಸಕ್ಕರೆ ಖಾಯಿಲೆ 178, ಕಿಡ್ನಿ ಖಾಯಿಲೆ 147, ಸಿಒಪಿಡಿ 36, ಅನೀಮಿಯಾ 97, ಸ್ತನ ಕ್ಯಾನ್ಸರ್ 16, ಗರ್ಭಗೊರಳಿನ ಕ್ಯಾನ್ಸರ್ 4 ಸೇರಿದಂತೆ ವಿವಿಧ ಖಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಮತ್ತು ಸಲಹೆ ನೀಡಲಾಗುತ್ತಿದೆ. 14 ಆರೋಗ್ಯ ಸಮಸ್ಯೆಗಳನ್ನು ತಪಾಸಣೆಗೊಳಪಡಿಸಿ ರೋಗಿಗಳಿಗೆ ದೀರ್ಘಕಾಲದ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಗೃಹ ಆರೋಗ್ಯ ಕಾರ್ಯಕ್ರಮ ಆರಂಭಿಸಿದ್ದು ಬೇರೆ ಯಾವ ರಾಜ್ಯದಲ್ಲೂ ಇಂತಹ ಕಾರ್ಯ ಇಲ್ಲ. ಮನೆ ಮನೆಗೆ ತೆರಳಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಗೊಳಿಸಬೇಕು. ಸಕ್ಕರೆ ಖಾಯಿಲೆ ಮತ್ತು ಹೈಪರ್ ಟೆನ್ಶನ್ ಸಮಸ್ಯೆಗಳನ್ನು ಸಮರ್ಪಕವಾಗಿ ಸ್ಕ್ರೀನಿಂಗ್ ಮಾಡಬೇಕೆಂದು ಸೂಚನೆ ನೀಡಿದರು.
ಡಾ. ಪುನೀತ್ ಹೃದಯ ಜ್ಯೋತಿ ಕಾರ್ಯಕ್ರಮದಡಿ ಎಐ ಮೂಲಕ ಹೃದಯ ಖಾಯಿಲೆ ಪತ್ತೆ ಮಾಡಿ, ಗಂಭೀರವಾಗಿದ್ದರೆ ವೈದ್ಯರಿಗೆ ರೆಫರ್ ಮಾಡಿ ಚಿಕಿತ್ಸೆ ನೀಡಲಾಗುವುದು. ಈ ಕಾರ್ಯಕ್ರಮದಡಿ ಹಲವಾರು ಜೀವ ಉಳಿಸಲಾಗಿದ್ದು ಈ ಬಾರಿ
ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.
ಕೆಎಫ್ ಡಿ ಎಚ್ಚರ ವಹಿಸಿ :
ಈ ಬಾರಿ ಕೆಎಫ್ ಡಿ ನಿಯಂತ್ರಣಕ್ಕೆ ಅತಿ ಎಚ್ಚರಿಕಯಿಂದ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
2025 ನೇ ಸಾಲಿನಿಂದ ಇಲ್ಲಿಯವರೆಗೆ ಕೆಎಫ್ ಡಿ ಪತ್ತೆಗೆ 7155 ಪರೀಕ್ಷೆ ನಡೆಸಲಾಗಿದ್ದು 72 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 02 ಮರಣ ಸಂಭವಿಸಿರುತ್ತದೆ. 450 ಉಣ್ಣೆ ಸಂಗ್ರಹ, 229 ಮಂಗಗಳ ಸಾವು ಸಂಭವಿಸಿದೆ ಎಂದು ವಿಡಿಎಲ್ ನ ಡಿಸಿಎಂಒ ಡಾ.ಹರ್ಷವರ್ದನ್ ತಿಳಿಸಿದರು.
ಸಚಿವತು, ಮಂಗನ ಸಾವು ಕುರಿತು ಕೂಡಲೇ ವರದಿ ಮಾಡಬೇಕು. ಕೆಎಫ್ ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ಕ್ರಮವಹಿಸಬೇಕು.ಈ ವರ್ಷ ಬಹಳ ಜಾಗೃತೆಯಿಂದ ಇದ್ದು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಕೆಎಫ್ ಡಿ ಪರೀಕ್ಷೆಗೆ ಶಿರಸಿ ಯಲ್ಲಿ ಪ್ರಯೋಗಾಲಯ ಆರಂಭಿಸಲು ಅನುಮತಿ ದೊರೆತಿದ್ದು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಈವರೆಗೆ 143 ಡೆಂಗಿ, ಚಿಗುನ್ ಗುನ್ಯ 64 ಮತ್ತು ಮಲೇರಿಯಾ 31 ಪ್ರಕರಣಗಳು ದಾಖಲಾಗಿದೆ. ಟಿಬಿ ಪರೀಕ್ಷೆಯಲ್ಲಿ
99% ಪ್ರಗತಿ ಸಾಧಿಸಲಾಗಿದ್ದು 1492 ಜನ ಚಿಕಿತ್ಸೆಯಲ್ಲಿದ್ದಾರೆ.
ಕುಷ್ಟರೋಗ 32 ಪಾಸಿಟಿವ್ ಇದಗದು ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ 72% ಸಾಧನೆ ಮಾಡಲಾಗಿದೆ.
ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಕನ್ನಡಕ ನೀಡುವ ಆಶಾಕಿರಣ ಕೇಂದ್ರಗಳನ್ನು ರಾಜ್ಯಾದ್ಯಂತ ತೆರೆಯಲಾಗಿದ್ದು ಜಿಲ್ಲೆಯ ೧೪ ಕಡೆ ಮತ್ತು ರಾಜ್ಯದಲ್ಲಿ 398 ಕೇಂದ್ರಗಳನ್ನು ತೆರೆಯಲಾಗಿದೆ.
ಎಲ್ಲ ತಾಲ್ಲೂಕು ಆಸ್ಪತ್ರಯಲ್ಲಿ ಇಬ್ಬರು ಪ್ರಸೂತಿ ಮತ್ತು ಅರವಳಿಕೆ ತಜ್ಞರು ನೇಮಕ ಮಾಡಲುಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿಎನ್ ಸಿಡಿ ಉಪನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಡಾ.ರಘುನಂದನ್,
ಡಿಹೆಚ್ ಒ ಡಾ.ನಟರಾಜ್, ಎನ್ ವಿಬಿಡಿಸಿಪಿ ಅಧಿಕಾರಿ ಡಾ.ಗುಡುದಪ್ಪ ಕಸಬಿ, ಡಿಎಸ್ ಓ ಡಾ.ನಾಗರಾಜ ನಾಯ್ಕ್ , ಆರ್ ಸಿ ಹೆಚ್ ಒ ಡಾ.ಮಲ್ಲಪ್ಪ, ಡಿಎಲ್ ಒ ಡಾ.ಕಿರಣ್,
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು ಹಾಜರಿದ್ದರು.
