DK Shivakumar ರಾಜ್ಯದ ಅಭಿವೃದ್ಧಿಗೆ ಹೊಸ ರೂಪ – ಹೊಸ ವೇಗ ನೀಡುವ ನನ್ನ ಸಂಕಲ್ಪಕ್ಕೆ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುನ್ನುಡಿ ಬರೆದಿದ್ದೇನೆ. ರಾಜ್ಯದ ಜನರ ಸರ್ವತೋಮುಖ ಪ್ರಗತಿಯ ಭರವಸೆಯನ್ನಿತ್ತು ಅಧಿಕಾರಕ್ಕೆ ಬಂದಿರುವ ನಾವು ಜನತೆ ಕೊಟ್ಟ ಈ ಅವಕಾಶವನ್ನು ಅಧಿಕಾರವೆಂದು ಭಾವಿಸದೆ, ಸೇವೆಯ ಭಾಗ್ಯವೆಂದು ತಿಳಿದು ಈ ಎಲ್ಲಾ ನೂತನ ಕಾರ್ಯಕ್ರಮಗಳನ್ನು ನಾಡಿಗೆ ಜನತೆಗೆ ಅರ್ಪಿಸುತ್ತಿದ್ದೇನೆ ಎಂದು ನೂತನ ಮುಖ್ಯಮಂತ್ರಿಯಾದ ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್ಲಾ ಹಂತದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಅರ್ಜಿ ವಿತರಣೆಯ ಬಗ್ಗೆ ಸಾರಿಗೆ ಇಲಾಖೆಯು ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ.
ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ಸರ್ಕಾರ, ಈಗಾಗಲೇ 56,000 ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಕೈಗೊಂಡಿದೆ. ಈ ಬಗ್ಗೆ ಎಲ್ಲಾ ತೊಡಕುಗಳನ್ನು ನಿವಾರಿಸಿ ನೇಮಕಾತಿ ಪ್ರಕ್ರಿಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ. ಕರ್ನಾಟಕ ರಾಜ್ಯವು ಗುಣಮಟ್ಟದ ಮಾನವಸಂಪನ್ಮೂಲದಲ್ಲಿ ಭಾರತದ ರಾಜಧಾನಿಯೆಂದೇ ಹೆಸರು ಗಳಿಸಿದೆ. ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಐಟಿ ಬಿಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕರ್ನಾಟಕದಿಂದ ಶ್ರೇಷ್ಠ ಮಾನವಸಂಪನ್ಮೂಲ ಮೂಡಿಬಂದಿದೆ. ಖಾಸಗಿ ರಂಗದಲ್ಲಿ ಉದ್ಯೋಗ ಬಯಸುವ ಯುವಜನರಿಗೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗದ ಬೇಡಿಕೆಗಳ ನಡುವೆ ಸಂಪರ್ಕ ಕಲ್ಪಿಸುವ ‘ಯುವ ಉದ್ಯೋಗ ಸೇತು’ ವ್ಯವಸ್ಥೆಯನ್ನು ರೂಪಿಸಲು ನಿರ್ಣಯಿಸಲಾಗಿದೆ.
ಈ ಸೌಲಭ್ಯ ಕೇಂದ್ರದಲ್ಲಿ ಕಂಪನಿಗಳಿಗೆ ಅಗತ್ಯವಿರುವ ತರಬೇತಿಯನ್ನೂ ನೀಡಿ, ಅಲ್ಲಿನ ಅಭ್ಯರ್ಥಿಗಳನ್ನು ಕಂಪನಿಗಳಿಗೆ ಆಯ್ಕೆ ಮಾಡಲಾಗುವುದು. ಕರ್ನಾಟಕದವರಿಗೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚಿನ ಪಾಲು ನೀಡಲಾಗುವುದು. ಕನ್ನಡಿಗರಿಗೆ ನೀಡಬೇಕಾದ ಉದ್ಯೋಗದ ಶೇಕಡಾವಾರನ್ನು ಕಂಪನಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
DK Shivakumar ಈ ರಾಜ್ಯದ ಯುವಕರು, ವಿದ್ಯಾರ್ಥಿಗಳು, ನಿರುದ್ಯೋಗಗಳ ಉದ್ಯೋಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇಲ್ಲಿನ ಯುವಕರನ್ನು ಜಾಗತಿಕ ಮಟ್ಟದಲ್ಲಿ ತಯಾರು ಮಾಡುವ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದ್ದು, ತಿಂಗಳೊಳಗೆ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ಎಲ್ಲವೂ ಆನ್ ಲೈನ್ ಮೂಲಕ ಲಭ್ಯವಾಗಲಿದೆ.
10,000 ಭಾರತ ಜೋಡೋ ಯುವಕ ಸಂಘ ರಚಿಸಲು ತೀರ್ಮಾನಿಸಲಾಗಿದ್ದು, ಪ್ರತಿ ಪಂಚಾಯತಿಗೂ ಒಂದು ಯುವಕ ಸಂಘ ರಚಿಸುತ್ತೇವೆ. ಸಂಘದಲ್ಲಿ ಕನಿಷ್ಠ 150 ರಿಂದ 200 ಜನರಿರುತ್ತಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವಕ ಸಂಘಗಳು ಕೈಗೊಳ್ಳುವುದಲ್ಲದೇ ನಾಯಕತ್ವ ಬೆಳವಣಿಗೆಗೆ, ಸಾಮಾಜಿಕ ಸಾಮರಸ್ಯ ಕಾಪಾಡಲು ಶ್ರಮಿಸಲಿವೆ. ಅವರ ಪ್ರತಿಭೆಗೂ ಇಲ್ಲಿ ಅವಕಾಶ ದೊರೆಯಲಿದೆ. ಭಾರತ ಜೋಡೋ ಯುವಕ ಸಂಘಗಳಿಗೆ ಸರ್ಕಾರ ತಲಾ 10 ಲಕ್ಷ ರೂ.ಗಳ ಅನುದಾನ ನೀಡಲಿದೆ.
ಬೆಂಗಳೂರು ನಗರದಲ್ಲಿ ವಿದ್ಯುತ್ ಸಮಸ್ಯೆ ಇದ್ದು, 2500 ಅಡಿ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಒಸಿ (OC) ಮತ್ತು ಸಿಸಿ (CC) ಪಡೆಯುವುದರಿಂದ ಒಂದು ಬಾರಿ ಮಾತ್ರ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
ಬಿ ಖಾತೆಯನ್ನು ಎ ಖಾತೆಯಾಗಿ ಪರಿವರ್ತಿಸುವ ಅಭಿಯಾನವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಆರನೇ ಗ್ಯಾರಂಟಿಯಾದ ಭೂ ಗ್ಯಾರಂಟಿಗೆ ಸೂಕ್ತ ದಾಖಲೆ ಮಾಡಿಕೊಡಲು ತೀರ್ಮಾನಿಸಲಾಗಿದೆ.
ನಗರ ಮೂಲಸೌಕರ್ಯವನ್ನು ಉತ್ತಮಗೊಳಿಸಲು, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಜಿಬಿಎ, ಬಿಡಿಎ ವ್ಯಾಪ್ತಿ ಸೇರಿ ಕೇವಲ ರಸ್ತೆಗಳನ್ನು ಉತ್ತಮಪಡಿಸಲು 2000 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.
