World Environment Day ತಂತ್ರಜ್ಞಾನ ಮುಂದುವರಿಯುತ್ತಿರುವ ಜೊತೆಯಲ್ಲಿ ಪ್ರತಿನಿತ್ಯ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಹಾಗೂ ಜಲ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಹಾಗೂ ಬಯೋ ಡೈವರ್ಸಿಟಿ ಪಾರ್ಕ್ ಚೇರ್ಮನ್ ಪ್ರೊ. ಎ.ಎಸ್.ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ನಗರದ ಹೊರವಲಯದಲ್ಲಿ ಇರುವ ರೋಟರಿ ಬಯೋ ಡೈವರ್ಸಿಟಿ ಪಾರ್ಕ್ನಲ್ಲಿ ಶಿವಮೊಗ್ಗ ನಗರದ ಎಲ್ಲ ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಿಸರ ಮಾಲಿನ್ಯ ಹೆಚ್ಚುತ್ತಿರುವುದರಿಂದ ಮನುಷ್ಯನ ಜೀವಿತ ಅವಧಿ ಕಡಿಮೆಯಾಗುತ್ತಿದೆ. ಪರಿಸರವನ್ನು ಸರಿಯಾಗಿ ಸಂರಕ್ಷಿಸದಿದ್ದರೆ ಮನುಕುಲಕ್ಕೆ ತುಂಬಾ ಪರಿಣಾಮಕಾರಿಯಾದ ಅನಾಹುತವಾಗುತ್ತದೆ ಎಂದು ತಿಳಿಸಿದರು.
ಪ್ರತಿ ನಿತ್ಯ ಅತಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅರಣ್ಯ ನಾಶ ಮತ್ತು ನೀರಿನ ದುರ್ಬಳಕೆ ಹೆಚ್ಚಿದೆ. ಹವಾಮಾನ ಬದಲಾವಣೆ ಮತ್ತು ಪ್ರಕೃತಿಯ ಸಮತೋಲನವನ್ನು ಹಾಳು ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಮಾನವನ ಜೀವನ, ಪ್ರಾಣಿ ಪಕ್ಷಿಗಳು ಹಾಗೂ ಭೂಮಿಯ ಭವಿಷ್ಯದ ಮೇಲೂ ಆಪತ್ತು ಉಂಟಾಗುತ್ತದೆ ಆದ್ದರಿಂದ ನಾವು ಪ್ರತಿಯೊಬ್ಬರೂ ಗಿಡಗಳನ್ನು ನೆಡುವುದರ ಮುಖಾಂತರ ಪರಿಸರವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.
ಮಾಜಿ ಸಹಾಯಕ ಗವರ್ನರ್ ಎಂ.ಪಿ.ಆನಂದ ಮೂರ್ತಿ ಮಾತನಾಡಿ, ಅತಿಯಾದ ಕಸದ ಉತ್ಪಾದನೆ ಮತ್ತು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದೆ. ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ ಎಂದರು.
ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಆಶಯ. ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಇರುವುದು ಪರಿಸರ ಮಾಲಿನ್ಯಕ್ಕೆ ಅತಿ ಮುಖ್ಯವಾದ ಕಾರಣವಾಗಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್, ಸರ್ಜಾ ಜಗದೀಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ನಾಗರಾಜ್, ನನ್ನ ಕನಸಿನ ಶಿವಮೊಗ್ಗದ ಎನ್.ಗೋಪಿನಾಥ್, ಬಯೋ ಡೈವರ್ಸಿಟಿ ಪಾರ್ಕಿನ ನಿರ್ದೇಶಕರು, ಎಂಟು ರೋಟರಿ ಕ್ಲಬ್ಗಳ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು. ಇನ್ನರ್ ವೀಲ್ ಮಾಜಿ ಜಿಲ್ಲಾ ಚೇರ್ಮನ್ ವಾರಿಜಾ ಜಗದೀಶ್, ಕಿರಣ್ ಕುಮಾರ್ ಇತರರಿದ್ದರು.
