Sunday, February 8, 2026
Sunday, February 8, 2026
Home Blog Page 45

District Chamber of Commerce and Industry ದೇವಕಾತಿಕೊಪ್ಪ : ಕೈಗಾರಿಕೆಗಳಿಗೆ ಪರಿಸರ ಇಲಾಖೆ ಅನುಮತಿ ನೀಡಿಕೆ ಸಮಸ್ಯೆ ಪರಿಹರಿಸಬೇಕು- ಡಿ.ಎಸ್.ಅರುಣ್.

0

District Chamber of Commerce and Industry ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಪರಿಸರ ಅನುಮತಿ ನೀಡುವಿಕೆಯ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸರ್ಕಾರದ ಗಮನ ಸೆಳೆಯಲು ಹಾಗೂ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಏರ್ಪಡಿಸಿದ್ದ ದೇವಕಾತಿಕೊಪ್ಪ ಕೈಗಾರಿಕಾ ವಲಯದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದರು.

ದೇವಕಾತಿ ಕೈಗಾರಿಕಾ ಪ್ರದೇಶದಲ್ಲಿ 450 ಎಕರೆ ಪ್ರದೇಶದಲ್ಲಿ 200 ಜನಕ್ಕೆ ಕೈಗಾರಿಕಾ ಭೂಮಿ ಮಂಜೂರು ಮಾಡಿದ್ದು, 20 ಜನ ಕೈಗಾರಿಕೆ ಪ್ರಾರಂಭಿಸಿದ್ದಾರೆ. ಉಳಿದ 180 ಜನ ಕೈಗಾರಿಕೆ ಪ್ರಾರಂಭಿಸಲು ತಯಾರಿ ಮಾಡಿಕೊಂಡಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಸೌಕರ್ಯಗಳಿಲ್ಲ. ಈವರೆಗೂ ಸಹ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಮಂಜೂರು ಮಾಡಿರುವ ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಅನುಮತಿ ಕೊಡಿಸಿಲ್ಲ ಎಂದು ದೂರಿದರು.

ರಾಜ್ಯದ ಮೂರು ಕೈಗಾರಿಕಾ ಪ್ರದೇಶಗಳಿಗೂ ಪರಿಸರ ಅನುಮತಿ ಇಲ್ಲದೆ ಕೈಗಾರಿಕೆಗಳನ್ನು ಪ್ರಾರಂಭಿಸಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ನ ಹಸಿರು ಪೀಠವು ಪರಿಸರ ಅನುಮತಿ ಇಲ್ಲದೆ ಇರುವ ಎಲ್ಲ ಕೈಗಾರಿಕೆಗಳನ್ನು ಮುಚ್ಚಲು ಆದೇಶ ನೀಡಿದೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ, ಅತಿ ಹೆಚ್ಚಿನ ಬೆಲೆಗೆ ಕೈಗಾರಿಕೆ ಭೂಮಿ ಪಡೆದು ಮೂಲ ಸೌಕರ್ಯಗಳನ್ನು ಮಾಡಿಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸಿರುವ ಕೈಗಾರಿಕೆಗಳಿಗೆ ಮುಚ್ಚುವ ಆತಂಕ ಎದುರಾಗಿದೆ ಎಂದರು.

ದೇವಕಾತಿ ಕೈಗಾರಿಕಾ ವಲಯ 500 ಎಕರೆಗಿಂತ ಕಡಿಮೆ ಪ್ರದೇಶ ಇರುವುದರಿಂದ ರಾಜ್ಯ ವ್ಯಾಪ್ತಿಗೆ ಬರುತ್ತದೆ. ಕೈಗಾರಿಕಾ ಭೂಮಿಯನ್ನು ವಾಪಸ್ ಮಾಡುವ ಕೈಗಾರಿಕೋದ್ಯಮಿಗಳಿಗೆ ಶೇ. 20 ರಷ್ಟು ಕಡತ ಮಾಡಿದೆ ಪೂರ್ತಿ ಹಣ ವಾಪಸ್ ಕೊಡಬೇಕು. ದಂಡ, ಬಡ್ಡಿಯನ್ನು ಮನ್ನಾ ಮಾಡಬೇಕು. ಆಗಿರುವ ನಷ್ಟಕ್ಕೆ ಪರಿಹಾರವನ್ನು ಕೈಗಾರಿಕೋದ್ಯಮಿಗಳಿಗೆ ರಾಜ್ಯ ಸರ್ಕಾರ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.

District Chamber of Commerce and Industry ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗದಲ್ಲಿ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ಭೂಮಿ ಕೊರತೆ ಇದೆ. ಇಂತಹ ಸಮಯದಲ್ಲಿ ದೇವಕಾತಿ ಕೈಗಾರಿಕಾ ವಲಯ ಪ್ರದೇಶದಲ್ಲಿ ಕೈಗಾರಿಕೆಗಳು ಮುಚ್ಚುವ ಆತಂಕದಿಂದ ಶಿವಮೊಗ್ಗದ ಕೈಗಾರಿಕಾ ಅಭಿವೃದ್ಧಿಗೆ ಹೊಡೆತ ಕೊಟ್ಟಂತಾಗಿದೆ. ಸರ್ಕಾರ ಆದಷ್ಟು ಬೇಗ ವನ್ಯಜೀವಿ ಮಂಡಳಿಯಿಂದ ಪರಿಸರ ಅನುಮತಿ ಕೊಡಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಮಾಣಿತ ಕಾರ್ಯ ವಿಧಾನ ಪ್ರಾರಂಭಿಸಿ ದೇವಕಾತಿ ಪ್ರದೇಶದ ಕೈಗಾರಿಕೋದ್ಯಮಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ದೇವಕಾತಿ ಕೈಗಾರಿಕಾ ವಲಯದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಸಮಸ್ಯೆಗೆ ಕೆಐಎಡಿಬಿ ನೇರ ಕಾರಣ ಎಂದರು. ಕೆಐಎಡಿಬಿ ವಿರುದ್ಧ ನ್ಯಾಯಯುತ ಹೋರಾಟಕ್ಕೆ ಕಾನೂನು ಮಾರ್ಗದ ಆಯ್ಕೆಯ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಡಾ. ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ರವಿಪ್ರಕಾಶ್ ಜೆನ್ನಿ, ಜಿ.ವಿ.ಕಿರಣ್ ಕುಮಾರ್, ವಿನೋದ್ ಕುಮಾರ್, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಡಿ.ಎಂ.ಶಂಕರಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.

MESCOM ಡಿಸೆಂಬರ್ 28 & 29 ನಿದಿಗೆ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ, ಮೆಸ್ಕಾಂ ಪ್ರಕಟಣೆ

0

MESCOM ಡಿಸೆಂಬರ್ 28 ಮತ್ತು 29 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಮಾಚೇನಹಳ್ಳಿ 110 ಕೆವಿ ಎಂಆರ್‌ಎಸ್ ವಿವಿ ಕೇಂದ್ರದಿಂದ 110 ಕೆವಿ ಸಿಂಗಲ್ ಸರ್ಕ್ಯುಟ್ ಮಾರ್ಗವನ್ನು ಡಬಲ್ ಸರ್ಕ್ಯುಟ್ ಮಾರ್ಗವನ್ನಾಗಿ ಬದಲಾಯಿಸುವ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನಿಧಿಗೆ, ದುಮ್ಮಳ್ಳಿ, ಓತಿಘಟ್ಟ, ಸೋಗಾನೆ, ರೆಡ್ಡಿಕ್ಯಾಂಪ್, ಆಚಾರಿ ಕ್ಯಾಂಪ್, ಹಾರೆಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಕೋರಿದೆ.

Department of Pre-Graduate School Education ಎಲ್ಲಾ ಅರ್ಹ ವಿದ್ಯಾರ್ಥಿ ಮತದಾರರು ಕೂಡಲೇ ನೋಂದಣಿ ಮಾಡಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು- ಚಂದ್ರಪ್ಪ ಎಸ್. ಗುಂಡಪಲ್ಲಿ

0

Department of Pre-Graduate School Education 18 ವರ್ಷ ವಯಸ್ಸು ತುಂಬಿದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕೆಂದು ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ ತಿಳಿಸಿದರು.

ಮುಖ್ಯ ಚುನಾವಣಾಧಿಕಾರಿಗಳು ಬೆಂಗಳೂರು, ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಸ್ವೀಟ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಮಟ್ಟದ ಇ.ಎಲ್.ಸಿ. ವತಿಯಿಂದ ಶುಕ್ರವಾರ ನಗರದ ಸ್ವೀಟ್ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಇಎಲ್‌ಸಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣಾ ಪ್ರಕ್ರಿಯೆಗಳು ನ್ಯಾಯ ಸಮ್ಮತ, ನಿಷ್ಪಕ್ಷಪಾತ, ಭ್ರಷ್ಟಾಚಾರ ಮುಕ್ತ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯಬೇಕು. ಹೀಗೆ ಭ್ರಷ್ಟಾಚಾರ ಮುಕ್ತವಾಗಿ ನಡೆಯಬೇಕಾದರೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಆಮಿಷಗಳಿಗೆ ಒಳಗಾಗದೇ, ಸ್ವತಂತ್ರವಾಗಿ ಮತದಾನ ಮಾಡುಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆಚಾರ-ವಿಚಾರ, ಶಿಸ್ತು, ಸಮಯ ಪಾಲನೆ, ವ್ಯಕ್ತಿ ಗೌರವ, ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ದೇಶದ ಸಂವಿಧಾನದ ಬಗ್ಗೆ ಜಾಗೃತಿಯನ್ನು ಹೊಂದುವ ಮೂಲಕ ಉತ್ತಮ ಸಮಾಜ ಹಾಗೂ ದೇಶವನ್ನು ನಿರ್ಮಾಣ ಮಾಡಲು ಸಹಕಾರಿಯಾಗಬೇಕೆಂದರು.

ರಾಜ್ಯ ಮಟ್ಟದ ಇ.ಎಲ್.ಸಿ ತರಬೇತುದಾರರಾದ ಪರವೇಜ್ ನವೀದ್ ಅಹ್ಮದ್ ಮಾತಾನಾಡಿ, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಯಾವುದೇ ಮತ, ಜಾತಿ, ಧರ್ಮದ ಬೇದ ಭಾವವಿಲ್ಲದೇ ದೇಶದ ಎಲ್ಲಾ ನಾಗರೀಕರಿಗೂ ಮತದಾನವೆಂಬ ಪವಿತ್ರವಾದ ಹಕ್ಕನ್ನು ನೀಡಲಾಗಿದೆ.

18 ವರ್ಷ ತುಂಬಿದ ಪ್ರತಿಯೂಬ್ಬ ಭಾರತದ ನಾಗರೀಕನೂ ಕೂಡಾ ಭಾರತದ ಚುನಾವಣಾ ಆಯೋಗದಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ. ವೋಟರ್ ಹೆಲ್ಪ್ ಲೈನ್ ಆ್ಯಪ್(ವಿಹೆಚ್‌ಪಿ) ನಲ್ಲಿ ಸ್ವಯಂ, ಅಥವಾ ಹತ್ತಿರದ ಬಿ.ಎಲ್.ಓ ಗಳನ್ನು ಸಂಪರ್ಕಿಸಿ ನಮೂನೆ-6 ನ್ನು ಭರ್ತಿ ಮಾಡುವ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದು.

Department of Pre-Graduate School Education ನಮೂನೆ-8 ರ ಮೂಲಕ ಹೆಸರು, ವಿಳಾಸ, ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದ್ದು ನಮೂನೆ-7 ರಲ್ಲಿ ಮೃತ ಮತದಾರರನ್ನು ಗುರುತಿಸಿ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವಕಾಶವಿದೆ. ನಮೂನೆ-12 ರಲ್ಲಿ 80 ವರ್ಷ ವಯಸ್ಸು ತುಂಬಿದ ಹಾಗೂ ವಿಕಲಚೇತನ ಮತದಾರರಿಗೆ ಚುನಾವಣಾ ಅಧಿಕಾರಿಗಳು ಅವರ ಮನೆಗೆ ಬಂದು ರಹಸ್ಯ ಮತದಾನದ ಮೂಲಕ ಮತ ಚಲಾವಣೆಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಎಲ್ಲದರ ಹಿಂದೆ ಇರುವ ಉದ್ದೇಶ ನ್ಯಾಯ ಸಮ್ಮತ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸುವುದಾಗಿದೆ ಎಂದರು.

ತೀರ್ಪುಗಾರರಾಗಿ ಪಾಲ್ಗೊಂಡಿದ್ದ ವಸಂತ್ ನಾಯ್ಕ್ ಮಾತನಾಡಿಮ ಎಲ್ಲಾ ನೀತಿಗಳಲ್ಲಿ ಶ್ರೇಷ್ಠ ನೀತಿ ರಾಜನೀತಿ. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ಮತದಾನ. ಮತದಾನವು ನಿಷ್ಪಕ್ಷಪಾತವಾಗಿ, ನಿಖರವಾಗಿ, ನ್ಯಾಯಸಮ್ಮತವಾಗಿ ನಡೆಯಬೇಕು ಎಂದರು.
ಪ್ರಬಂಧ ಸ್ಪರ್ದೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಸ.ಪ.ಪೂ.ಕಾಲೇಜು ಬರೂರು ವಿದ್ಯಾರ್ಥಿನಿ ಕೌಶಲ್ಯಗೆ ಪ್ರಥಮ ಬಹುಮಾನ, ಸ.ಪ.ಪೂ.ಕಾಲೇಜು ಆನವಟ್ಟಿ ವಿದ್ಯಾರ್ಥಿನಿ ಸುಮ ಗಣಪ ಕಳಲಿ ದ್ವಿತೀಯ ಹಾಗೂ ತೃತೀಯಾ ಬುಹುಮಾನ ಸ.ಪ.ಪೂ.ಕಾಲೇಜು ತುಮರಿ ವಿದ್ಯಾರ್ಥಿನಿ ಛಾಯಾ ಅವರು ತೃತೀಯ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಇ.ಎಲ್.ಸಿ. ಸಂಚಾಲಕರಾದ ಮಂಜುನಾಥ್ ಬಣಕಾರ, ಸ್ವೀಟ್ ಪಿ.ಯು.ಕಾಲೇಜಿನ ಅಧ್ಯಕ್ಷರಾದ ಗಂಗಾಧರ್ ನಾಯ್ಕ್, ಪ್ರಾಂಶುಪಾಲರಾದ ರೇಖಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Tourism Department – Shivamogga District ಪ್ರವಾಸೊದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರಾಗಿ ಎನ್.ಗೋಪಿನಾಥ್

0

Tourism Department – Shivamogga District ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರಾಗಿ ಎನ್.ಗೋಪಿನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ವೇದಿಕೆ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಎನ್.ಗೋಪಿನಾಥ್, ಉಪಾಧ್ಯಕ್ಷರಾಗಿ ಆರ್.ರಂಗಪ್ಪ, ಕಾರ್ಯದರ್ಶಿಯಾಗಿ ಜಿ.ವಿಜಯಕುಮಾರ್, ಸಹಕಾರ್ಯದರ್ಶಿಯಾಗಿ ಅ.ನಾ.ವಿಜಯೇಂದ್ರರಾವ್, ಖಚಾಂಚಿಯಾಗಿ ನಿರ್ಮಲಕಾಶಿ, ನಿರ್ದೇಶಕರಾಗಿ ಆರ್.ಮನೋಹರ್, ಲಕ್ಷ್ಮೀ ನಾಗೇಶ್, ಪ್ರೇಮ ಹೆಗ್ಡೆ, ಮಲ್ಲಿಕಾರ್ಜುನ್ ಕಾನೂರ್, ರವೀಂದ್ರ ಆಯ್ಕೆಯಾದರು. ಯೂತ್ ಹಾಸ್ಟೆಲ್ಸ್ ತರುಣೋಣದಯ ಘಟಕ, ಶಿವಮೊಗ್ಗ ಸೈಕಲ್ ಕ್ಲಬ್, ಬೈಕ್ ಕ್ಲಬ್, ಇತಿಹಾಸ ವೇದಿಕೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಹ್ವಾನಿತ ಸದಸ್ಯರಾಗಿರುತ್ತಾರೆ.

ಇಂದಿನ ಕವಿತೆ… ಕವಿ: ಡಾ. ರವಿ. ಎಮ್. ಸಿದ್ಲಿಪುರ

0

ಯಾರೋ ಗೀಚಿದ ಹಳೆಯ ನಕ್ಷೆಯಲಿ
ನೆಲದ ಒಡಲು ಸೀಳಿ ಹೋಗಿದೆ,
ತನ್ನ ಸೀಮೆಯ ದಾಟದಂತೆ ಗಾಳಿಗೆ
ಸಂಪ್ರದಾಯದ ಬೇಲಿ ಬಿದ್ದಿದೆ.

ಒಂದೇ ಮಣ್ಣಿನಲಿ ಮೊಳೆತ ಎರಡು ಕುಡಿಗಳು
ಬಣ್ಣ ಬೆರೆಸಿ ಅರಳಲೆಂದು ಹಂಬಲಿಸಿದರೆ,
ತಾಯಿ ಬೇರೇ ಸರ್ಪವಾಗಿ ಎದೆಯುಬ್ಬಿಸಿ
ಹಸಿರು ಉಸಿರನ್ನೇ ಹಿಸುಕಿ ನಕ್ಕಿದೆ.

ಬಿಳಿ ಬಟ್ಟೆಯ ಮಡಿಕೆ ಮಲಿನವಾಗಬಾರದೆಂದು
ಕೆಂಪು ರಕ್ತವನ್ನೇ ಸುರಿದು ತೊಳೆದವರು,
ಮರ್ಯಾದೆಯ ಮುರುಕು ಪೇಟದ ಅಡಿಯಲ್ಲಿ
ತಮ್ಮದೇ ಕುಡಿಯ ಹೆಣವ ಹೂತಿಟ್ಟರು.

ಮನೆಯ ಹಜಾರದಲ್ಲಿ ಈಗ ನೀರವ ಮೌನ
ಸಿಂಹಾಸನವೇರಿ ವಿಜೃಂಭಿಸುತ್ತಿದೆ,
ಗೌರವದ ಹಳೆಯ ಗೋಡೆಗಳ ಮೇಲೆ
ಕಂದಮ್ಮಗಳ ಆರ್ತನಾದ ಚಿತ್ರವಾಗಿ ಉಳಿದಿದೆ.

ಜಾತಿಯ ಜೇಡರಬಲೆಯಲ್ಲಿ ಸಿಲುಕಿದ ಕನಸು
ರೆಕ್ಕೆ ಬಡಿದು ಬಡಿದು ಸುಸ್ತಾಗಿದೆ,
ಪ್ರೀತಿ ಸತ್ತ ಸಮಾಧಿಯ ಮೇಲೆ ನಿಂತು
ಜಗವಿದು ಇನ್ನೂ ‘ಗೌರವ’ದ ಪಾಠ ಓದಿದೆ..

ಡಾ. ರವಿ ಎಂ. ಸಿದ್ಲಿಪುರ, ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವವಿರುವ ಇವರು, ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಲವಗೊಪ್ಪದಲ್ಲಿ ಮಾನವೀಯ ಗುಣ ಮೆರೆದ “ಹರೀಶ್ ನಾಯಕ್”

0

ಬಡವರಿಗೆ, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುತ್ತಾ ನೊಂದವರ ಬಾಳಿನಲ್ಲಿ ಬೆಳಕಾಗುತ್ತಿರುವ ಕೊಡುಗೈ ದಾನಿ ಯುವ ನಾಯಕ ಹರೀಶ್ ನಾಯ್ಕ್ ಮತ್ತೆ ನೊಂದ ಜೀವಕ್ಕೆ ಆಸರೆಯಾಗಿದ್ದಾರೆ.

ಕೈ ಕಾಲು ಬುದ್ಧಿ ಶಕ್ತಿ ಇವನ್ನೆಲ್ಲ ಕೊಟ್ಟು ಪರೀಕ್ಷೆ ಮಾಡ್ಲಿ. ಆದರೆ, ಎಲ್ಲವನ್ನು ಕಿತ್ಕೊಂಡು, ಒಂದು ಕಡೆ ಬದುಕೋಕೆ ಆಗದೆ, ಇನ್ನೊಂದು ಕಡೆ ಸಾಯಕ್ಕು ಆಗದೆ ಇಂತಹ ಜೀವನ ಕೊಟ್ಟು, ಜಗತ್ತನ್ನು ಫೇಸ್ ಮಾಡು ಜೀವನ ನಡೆಸು ಅಂದರೆ ಹೇಗಾಗುತ್ತೆ ? ಎಂದು ಪ್ರಶ್ನಿಸಿ, ಇಲ್ಲಿ ವಯಸ್ಸಾದ ಜೀವಕ್ಕೆ ಆಸರೆಯಾಗಿದ್ದಾರೆ ಯುವ ನಾಯಕ ಹರೀಶ್ ನಾಯ್ಕ್.

ಶಿವಮೊಗ್ಗದ ಇಂದಿರಾ ಕಾಲೋನಿ ಮಲವಗೊಪ್ಪ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸೂರಿಲ್ಲದೇ ನಡೆದಾಡಲು ಸಹ ಪರದಾಡುತ್ತಿದ್ದ ನಾಗರಾಜ್ ಎಂಬುವವರಿಗೆ, ಸೂರು ನೀಡಿ, ಜೊತೆಗೆ ಓಡಾಡಲು, ಮೂರು ಚಕ್ರದ ಸೈಕಲ್ ನೀಡಿ ಉಪಚರಿಸಿದ್ದಾರೆ. ಸಮಾಜ ಸೇವಕ ಯುವ ನಾಯಕ ಹರೀಶ್ ನಾಯ್ಕ್ ನೊಂದ ಜೀವಕ್ಕೆ ಆಸರೆಯಾಗಿ, ಸಂಚರಿಸಲು ಮೂರು ಚಕ್ರದ ಸೈಕಲ್ ನೀಡಿ ಸಹಾಯಹಸ್ತ ಚಾಚಿದ್ದಾರೆ. ಇದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಶಶಿಕುಮಾರ್ ನಾಯ್ಕ್. ಕೆಂಚಪ್ಪ ರಘು ಹೇಮತ್ ಶಿವು ಸಿದ್ದು ಉಮೇಶ್ ಈಶಣ್ಣ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟ.ಲಕ್ಷಾಂತರ ರೂ, ಮೌಲ್ಯದ ನಷ್ಟ ಅಂದಾಜು

0

ಅಡುಗೆ ಅನಿಲ ಸಿಲಿಂಡರ್‌ ಸ್ಪೋಟಗೊಂಡು ಮನೆ ಸಂಪೂರ್ಣ ಹಾನಿಯಾಗಿದೆ. ಸಿದ್ದೇಶ್ವರ ನಗರದ 4ನೇ ಅಡ್ಡರಸ್ತೆಯ ಘಟನೆ ಸಂಭವಿಸಿದೆ.

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಧರ್ಮಪ್ಪ ಎಂಬುವವರು ಬಾಡಿಗೆಗೆ ಇದ್ದ ಮನೆಯಲ್ಲಿ ಸಿಲಿಂಡರ್‌ ಸ್ಪೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಶೀಟ್‌ ಛಾವಣಿ ಹಾರಿ ಹೋಗಿದೆ.

ಇನ್ನು, ಧರ್ಮಪ್ಪ ಅವರ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಪೋಟದ ರಭಸಕ್ಕೆ ಪಕ್ಕದ ಮನೆ ಹಾನಿಯಾಗಿದೆ.

ಬೆಂಕಿ ಹೊತ್ತುಕೊಂಡ ಕೂಡಲೆ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ಘಟನೆಯಲ್ಲಿ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ

S.N.Chennabasappa ಶಿವಮೊಗ್ಗದ 31 ನೇ ವಾರ್ಡಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕ ಚೆನ್ನಿ

0

S.N.Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 31ರ ಗೋಪಿಶೆಟ್ಟಿ ಕೊಪ್ಪ ಪ್ರದೇಶಕ್ಕೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ, ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು.

ಭೇಟಿಯ ವೇಳೆ ಈ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಜೊತೆಗೆ ಕೆರೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಸ್ಥಳದಲ್ಲಿಯೇ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದರು.

S.N.Chennabasappa ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಜಗನ್ನಾಥ್, ಪ್ರಮುಖರಾದ ಶ್ರೀ ಪರಂದಾಮ್ ರೆಡ್ಡಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Chamber of Commerce Shivamogga ಸರ್ಕಾರವು ಪಿಂಚಣಿದಾರರಿಗೆ ಆಗುತ್ತಿರುವ ತೊಂದರೆಗಳನ್ನ ಪರಿಹರಿಸಬೇಕು- ಎಸ್.ರುದ್ರೇಗೌಡ

0

Chamber of Commerce Shivamogga ಪಿಂಚಣಿದಾರರಿಗೆ ತಾವು ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಸರ್ಕಾರದಿಂದ ಅರ್ಹ ಸೌಲಭ್ಯಗಳು ದೊರೆಯಬೇಕು ಹಾಗೂ ಪಿಂಚಣಿದಾರರು ಸೇವೆಯಲ್ಲಿ ಗಳಿಸಿದ ಅನುಭವವನ್ನು ಸಾರ್ವಜನಿಕರ ಉಪಯೋಗಕ್ಕೆ ಹಂಚಿಕೊಳ್ಳಬೇಕು ಎಂದು ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಕರ್ನಾಟಕ ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘದಿಂದ ( ಕರ್ನಾಟಕ ಮತ್ತು ಗೋವಾ ) ಏರ್ಪಡಿಸಿದ್ದ ಪಿಂಚಣಿದಾರರ ದಿನ 2025 ಸಮಾರಂಭದಲ್ಲಿ ಮಾತನಾಡಿ, ಪಿಂಚಣಿದಾರರು ತಮ್ಮ ಹಕ್ಕಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಹೋರಾಡಿ ತಮ್ಮ ಹಕ್ಕನ್ನು ಪಡೆದಿದ್ದರು. ಸರ್ಕಾರ ಪಿಂಚಣಿದಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು ಎ‌ಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಪಿಂಚಣಿಯು ಔದಾರ್ಯವಲ್ಲ ಅಥವಾ ಉದ್ಯೋಗದಾತರ ಇಚ್ಛೆಯನ್ನು ಅವಲಂಬಿಸಿದ ಕೃಪೆಯ ವಿಷಯವಲ್ಲ, ಅಥವಾ ಎಕ್ಸ್-ಗ್ರೇಷಿಯಾ ಪಾವತಿಯೂ ಅಲ್ಲ. ಇದು ಹಿಂದಿನ ಸೇವೆಗಳಿಗೆ ಪಾವತಿಯಾಗಿದೆ ಎಂದು ಹೇಳಿದರು.

ಉದ್ಯೋಗದಾತರಿಗಾಗಿ ನಿರಂತರ ಶ್ರಮಿಸಿದವರಿಗೆ ಸಾಮಾಜಿಕ-ಆರ್ಥಿಕ ನ್ಯಾಯವನ್ನು ಒದಗಿಸುವ ಸಾಮಾಜಿಕ ಕಲ್ಯಾಣ ಕ್ರಮ ಪಿಂಚಣಿ. ಎಲ್ಲಾ ಪಿಂಚಣಿದಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಹೋರಾಟ ಮುಂದುವರಿಸೋಣ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘದ ಅಧ್ಯಕ್ಷ ಆರ್.ಬಿ.ದೇಶಪಾಂಡೆ ಮಾತನಾಡಿ, ಡಿಸೆಂಬರ್ 17 ಭಾರತದಲ್ಲಿ ಪಿಂಚಣಿದಾರರಿಗೆ ಒಂದು ಮಹತ್ವದ ದಿನವಾಗಿದೆ. 1982ರ ಈ ದಿನ ಸುಪ್ರೀಂ ಕೋರ್ಟ್ ನಿವೃತ್ತ ಅಧಿಕಾರಿಗಳು ಮತ್ತು ಪಿಂಚಣಿದಾರರಿಗೆ ಘನತೆ ಮತ್ತು ಸಭ್ಯತೆ ಖಾತರಿಪಡಿಸುವ ಹೆಗ್ಗುರುತು ಆಗಿದ್ದು, ತೀರ್ಪಿನ ಮೂಲಕ ಸಮುದಾಯಕ್ಕೆ ಘನತೆ ಮತ್ತು ಅನುಗ್ರಹವನ್ನು ತರಲು ವರ್ಷಗಳ ಕಾಲ ಹೋರಾಡಿದ ಡಿ.ಎಸ್. ನಕಾರ ಅವರನ್ನು ಸ್ಮರಿಸಲು ನಮ್ಮ ದೇಶದಲ್ಲಿ ‘ಪಿಂಚಣಿದಾರರ ದಿನ’ ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಿಂಚಣಿದಾರರು ಕಾನೂನು ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆದಿದ್ದನ್ನು ನೆನಪಿಸಿದರು. ಪಿಂಚಣಿದಾರರು ಒಗ್ಗಟ್ಟಾಗಿ ಹೋರಾಡಿದರೆ ತಮಗೆ ಸಿಗಬೇಕಾದ ಅರ್ಹ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ಸಂಘದ ಕಾರ್ಯದರ್ಶಿ ಬಿ.ವಿ.ವೆಂಕಟೇಶ್ ಮಾತನಾಡಿ, ವ್ಯಾಲಿಡೇಷನ್ ಕಾಯ್ದೆ 2025 ರ ಬಗ್ಗೆ ಮಾಹಿತಿ ನೀಡಿ 8ನೇ ವ್ಯಾಲಿಡೇಷನ್ ಕಾಯ್ದೆ 2025 ರ ಕೇಂದ್ರೀಯ ವೇತನ ಆಯೋಗದ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ವಿವರಿಸಿ ರಾಷ್ಟ್ರೀಯ ಪಿಂಚಣಿದಾರ ಸಂಘವು ವ್ಯಾಲಿಡೇಷನ್ ಕಾಯ್ದೆ 2025ರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದೆ ಎಂದು ಸಭೆಗೆ ಮಾಹಿತಿ ನೀಡಿದರು

ಹಿರಿಯ ಪಿಂಚಣಿ ಬಾಬು ಕುಟ್ಟನ್ ಪಿಳ್ಳೆ ಅವರು ಪಿಂಚಣಿದಾರರಿಗೆ ಹೆಚ್ಚಿನ ಸೌಲಭ್ಯವು ಸರ್ಕಾರದ ಮಟ್ಟದಲ್ಲಿ ದೊರೆಯಬೇಕು ಎಂದರು.

Chamber of Commerce Shivamogga ಆದಾಯ ತೆರಿಗೆ ಇಲಾಖೆ ಪಿಂಚಣಿದಾರರ ಸಂಘವು ಪಿಂಚಣಿದಾರರ ಅನುಕೂಲಕ್ಕಾಗಿ ತಂದಿರುವ ಎರಡನೇ ಆವೃತ್ತಿಯ ಡೈರೆಕ್ಟರಿಅನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಬಿಡುಗಡೆಗೊಳಿಸಿದರು.

ಕರ್ನಾಟಕ ಆದಾಯ ತೆರಿಗೆ ಇಲಾಖೆ ( ಕರ್ನಾಟಕ ಮತ್ತು ಗೋವಾ ) ಪಿಂಚಣಿದಾರರ ಸಂಘದ ಉಪಾಧ್ಯಕ್ಷೆ ಉಷಾ ಶಾಂತರಾಮ್, ಕಾರ್ಯದರ್ಶಿ ಬಿ.ವಿ.ವೆಂಕಟೇಶ್, ಸಹ ಕಾರ್ಯದರ್ಶಿ ಜಿ.ನಿರ್ಮಲ, ಹಿರಿಯ ಸದಸ್ಯ ಎಂ.ಜಿ.ವಾಸುದೇವಮೂರ್ತಿ, ವಿಶ್ವನಾಥ್ , ಸಂಘದ ಪದಾಧಿಕಾರಿಗಳು, ಸದಸ್ಯರು, ಲೆಕ್ಕ ಪರಿಶೋಧಕ ಎನ್.ಎಲ್.ಪ್ರಸಾದ್ ಭಾಗವಹಿಸಿದ್ದರು.

Backward Classes Welfare Department ಪಿ ಹೆಚ್ ಡಿ ವಿದ್ಯಾರ್ಥಿಗಳಿಗೆ ವ್ಯಾಸಂಗ ವೇತನ/ ಫೆಲೋಷಿಪ್ ಗಾಗಿ ಅರ್ಜಿ ಆಹ್ವಾನ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ. ಅಧ್ಯಯನ ಮಾಡುತ್ತಿರುವ (ಫೆ.10, 2025 ಮತ್ತು ಅದರ ನಂತರ ಪ್ರಥಮ ವರ್ಷದ ಪಿಹೆಚ್.ಡಿ ಪ್ರಾರಂಭಿಸಿರಬೇಕು) ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಹೊಸ ವಿದ್ಯಾರ್ಥಿಗಳಿಂದ ಮಾತ್ರ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್ ಪಡೆಯಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ದಿ: 09/12/2026 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Backward Classes Welfare Department ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004, ವೆಬ್‌ಸೈಟ್ https://bcwd.karnataka.gov.in, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-222129 ನ್ನು ಸಂಪರ್ಕಿಸುವುದು.