ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ಇನ್ನಿತರ ಬಲವಾದ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳಿಗೆ ಕೌಟುಂಬಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪೋಷಕತ್ವ ಯೋಜನೆಯಡಿ ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳನ್ನು ಸಂಸ್ಥೆಗಳಲ್ಲಿ ಇರಿಸುವುದನ್ನು ತಪ್ಪಿಸಿ, ಅವರಿಗೆ ಪರ್ಯಾಯವಾಗಿ ವಿಸ್ತೃತ ಕುಟುಂಬದ ಸದಸ್ಯರು ಅಥವಾ ಸಂಬಂಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವುದು ಹಾಗೂ ಕಾರಣಾಂತರಗಳಿಂದ ದತ್ತು ಸ್ವೀಕಾರಕ್ಕೆ ಒಳಪಡಲು ಸಾಧ್ಯವಿಲ್ಲದ ಮಕ್ಕಳಿಗೆ ತಾತ್ಕಾಲಿಕ ಪೋಷಕರನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಒಂದೇ ರೀತಿಯ ಸಂಸ್ಕೃತಿ, ಬುಡಕಟ್ಟು ಮತ್ತು ಸಮುದಾಯದ ಸಂಪರ್ಕವನ್ನು ಹಂಚಿಕೊಳ್ಳುವ ಕುಟುಂಬಗಳಿಗೆ ಈ ಯೋಜನೆಯಡಿ ಮೊದಲ ಆದ್ಯತೆ ನೀಡಲಾಗುತ್ತದೆ. ಪೋಷಕತ್ವವು ಗುಂಪು ಪೋಷಕತ್ವವನ್ನೂ ಒಳಗೊಂಡಿರುತ್ತದೆ.
ಬಾಲನ್ಯಾಯ ಕಾಯ್ದೆ-2015 (ತಿದ್ದುಪಡಿ-2021) ಸೆಕ್ಷನ್ 44 ಹಾಗೂ ಬಾಲನ್ಯಾಯ ಮಾದರಿ ನಿಯಮಗಳ ಅನ್ವಯ, ಸಾಮಾನ್ಯವಾಗಿ ಒಂದು ವರ್ಷದವರೆಗೆ ಮಗುವನ್ನು ಪೋಷಕತ್ವಕ್ಕೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಪ್ರತಿ ವರ್ಷ ಇದನ್ನು ನವೀಕರಿಸಲು ಅವಕಾಶವಿರುತ್ತದೆ.
ಯೋಜನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ಅರ್ಜಿ ಸಲ್ಲಿಕೆಗೆ ಆಸಕ್ತರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೋಳ, ಶಿವಮೊಗ್ಗ ಅಥವಾ ದೂರವಾಣಿ ಸಂಖ್ಯೆ: 08182-295709 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪೋಷಕತ್ವ ಯೋಜನೆಯಡಿ ಮಕ್ಕಳ ತಾತ್ಕಾಲಿಕ ಆರೈಕೆಗೆ ಅರ್ಹರಿಂದ ಅರ್ಜಿ ಆಹ್ವಾನ
Date:
