MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು, ಏ.11 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಮಲ್ಲಿಗೆ ಇಡ್ಲಿ ಸೆಂಟರ್, ಡಿ.ಸಿ.ಕಚೇರಿ ಕಾಂಪೌಂಡ್, ಆರ್.ಟಿ.ಓ. ಕಚೇರಿ, ಕೋರ್ಟ್ ರಸ್ತೆ, ವಾರ್ತಾ ಇಲಾಖೆ, ಬಾಲರಾಜ್ ಅರಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ
S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್ ಪಾಸುಗಳನ್ನ ನಿರಾಕರಿಸುವೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾಧ್ಯಮಗಳಿಗೆ ಪತ್ರ ಮುಖೇನ ಹಂಚಿಕೊಂಡಿದ್ದಾರೆ.
ಹನ್ನೊಂದು ಮಂದಿ ಅಮಾಯಕರ ಬಲಿ ಪಡೆದ ಕಳೆದ ಐಪಿಎಲ್ ಪಂದ್ಯದ ದುರಂತದ ಹಿನ್ನೆಲೆ ನೆನಪಿಸಿ ಈ ನಿರ್ಧಾರ ಮಾಡಿರುವ ಬಗ್ಗೆ ಅವರ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಚೆಲ್ಲಿದ್ದಾರೆ.
S.N. Channabasappa ಕಾಂಪ್ಲಿಮೆಂಟರಿ ಪಾಸುಗಳನ್ನ ಶಾಸಕರಿಗೆ ಕಡ್ಡಾಯ ನೀಡಬೇಕೆನ್ನುವ ಬಹುಪಾಲು ಶಾಸಕರು ಈಗ ತಮ್ಮ ಆತ್ಮಸಾಕ್ಷಿಯನ್ನ ಪ್ರಶ್ನಿಸುವಂತಿದೆ ,ಮತ್ತು ಮೇಲ್ಪಂಕ್ತಿಯಾಗಿದೆ ನಮ್ಮ ಕ್ಷೇತ್ರದ ಶಾಸಕರ ಒಳ್ಳೆಯ ತೀರ್ಮಾನ ಎಂದು ಸಾರ್ವಜನಿಕರ ಅನಿಸಿಕೆ.
ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರಿಂದ ವಿಶೇಷ ಗಾಯನ ಕಾರ್ಯಕ್ರಮ”ನಾಮಾಮೃತ”
ಈಕೆ ನಮ್ಮ ಕರ್ನಾಟಕದ ಸೊಸೆ . ಯುವ ನಾಯಕ , ಬೆಂಗಳೂರು ದಕ್ಷಿಣ ಕ್ಷೇತ್ರದ ಜನಾನುರಾಗಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ .
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಜಿ ಈಕೆ ಹಾಡಿದ ಎರಡು ಕನಸು ಕನ್ನಡ ಚಲನ ಚಿತ್ರದ “ ಪೂಜಿಸಲೆಂದೇ…. ಹೂಗಳ ತಂದೆ” ಗೀತೆಯನ್ನು ಪ್ರಶಂಸಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು !!! . ಅಂದೇ ಈ ಕಲಾವಿದೆಯ ಕಂಠ ಮಾಧುರ್ಯಕ್ಕೆ ದೇಶವೇ ಮಾರುಹೋಗಿತ್ತು !!! .
ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ (ಶಿವಶ್ರೀ ಸ್ಕಂದಪ್ರಸಾದ್) ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದ ಕಲಾವಿದೆ . ಸಂಗೀತ ಮಾತ್ರವಲ್ಲದೇ ಭರತ ನೃತ್ಯದಲ್ಲೂ ಪ್ರವೀಣೆ . ಈಕೆಯ ಧ್ವನಿ ಮಾರ್ದವತೆಯನ್ನು ಮೆಚ್ಚಿ ಸಂಗೀತ ಮಾಂತ್ರಿಕ A R ರೆಹಮಾನ್ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ “ಪೊನ್ನಿಯನ್ ಸೆಲ್ವನ್” ಚಿತ್ರದಲ್ಲಿ ಹಾಡಿಸಿದ್ದಾರೆ.
ಎಲ್ಲಾ ರೀತಿಯ ಸಂಗೀತವನ್ನೂ ಹಾಡುವ ಸಾಮರ್ಥ್ಯವಿರುವ ಈ ಕಲಾವಿದೆಯ ವಿಶೇಷ ಆಸಕ್ತಿ ಎಂದರೆ ಅದು ಭಕ್ತಿ ಸಂಗೀತ . ಭಜನೆ, ನಾಮಾವಳಿ, ದಾಸರ ಪದಗಳನ್ನು ಅಮೋಘವಾಗಿ ಹಾಡುವ ಶಿವಶ್ರೀ ತನ್ನ ಭಕ್ತಿಪೂರ್ಣ ಗಾಯನದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ .
ಇಂತಹ ಅಪರೂಪದ ಕಲಾವಿದೆಯ ಸಂಗೀತ ಕಾರ್ಯಕ್ರಮ “ನಾಮಾಮೃತ”ಪ್ರಪ್ರಥಮ ಬಾರಿಗೆ ಇದೇ ಗುರುವಾರ 9ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ .
ಶಿವಮೊಗ್ಗದ ಪ್ರಸಿದ್ಧ ಪಂಚತಾರ ಐಸ್ರೀಮ್ಮ್ಸ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಪ್ರಕಾಶ್ ಪ್ರಭು ಅವರ ನೇತೃತ್ವದ ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಆಯೋಜಿಸಿರುವ ಈ ಭಕ್ತಿ-ಭಾವದ ಸಂಗೀತಮಯ ಕಾರ್ಯಕ್ರಮಕ್ಕೆ ಸಿಹಿಮೊಗೆಯ ಸಂಗೀತ ರಸಿಕ ಮನಸ್ಸುಗಳಿಗೆ ಆತ್ಮೀಯ ಆಹ್ವಾನ 🙏
~ ವಿನಯ್ ಶಿವಮೊಗ್ಗ. ಸಂಚಾಲಕರು, – ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್
ಜಿಲ್ಲೆಯಲ್ಲಿ ಆಟೋ ಎಲ್.ಪಿ.ಜಿ ಮತ್ತು ಸಿ ಎನ್ ಜಿ ಬಂಕ್ ಗಳಲ್ಲಿ ಸರ್ಕಾರಿ ದರದಲ್ಲೇ ಮಾರಾಟ ಕಡ್ಡಾಯ- ಡೀಸಿ ಪ್ರಭುಲಿಂಗ ಕವಳಿಕಟ್ಟಿ
ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಆಟೋ ಎಲ್ಪಿಜಿ ಮತ್ತು ಸಿಎನ್ಜಿ ಬಂಕ್ಗಳಲ್ಲಿ ಇಂಧನವನ್ನು ಸರ್ಕಾರ ಹಾಗೂ ತೈಲ ಕಂಪನಿಗಳು ನಿಗದಿಪಡಿಸಿದ ದರದಲ್ಲೇ ಮಾರಾಟ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ದರ ಪ್ರದರ್ಶನ ಕಡ್ಡಾಯ: ತೈಲ ಕಂಪನಿಗಳು ಅಥವಾ ಖಾಸಗಿ ಸಂಸ್ಥೆಗಳು ನಿಗದಿಪಡಿಸಿದ ದರದ ವಿವರವನ್ನು ಗ್ರಾಹಕರಿಗೆ ಹಾಗೂ ಸಾರ್ವಜನಿಕರಿಗೆ ಕಾಣುವಂತೆ ಬಂಕ್ಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ: ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಕಾನೂನು ಕ್ರಮದ ಎಚ್ಚರಿಕೆ: ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಲ್ಲಿ, ಅಂತಹ ಬಂಕ್ ಮಾಲೀಕರ ವಿರುದ್ಧ ‘ಅಗತ್ಯ ವಸ್ತುಗಳ ಕಾಯ್ದೆ-1955’ ಮತ್ತು ‘ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ರೆಗ್ಯುಲೇಷನ್ ಆಫ್ ಯೂಸ್ ಇನ್ ಮೋಟರ್ ವೆಹಿಕಲ್ಸ್) ಆರ್ಡರ್-2001’ ರ ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 10 ರಿಂದ ಶಿವಮೊಗ್ಗದಲ್ಲಿ ” ರಜಾ ವಿತ್ ಮಜಾ” ಬೇಸಿಗೆ ಶಿಬಿರ
ಶಿವಮೊಗ್ಗ ನಗರದ ಲಕ್ಷ್ಮೀ ಗೆಲಾಕ್ಸಿಯಲ್ಲಿರುವ ಸ್ಟೈಲ್ ಡಾನ್ಸ್ ಕ್ರಿವ್ ನೃತ್ಯ ಸಂಸ್ಥೆಯ ವತಿಯಿಂದ “ರಜಾ ವಿತ್ ಮಜಾ” ಬೇಸಿಗೆ ಶಿಬಿರ ವನ್ನು ಆಯೋಜಿಸಲಾಗಿದೆ. ಶಿಬಿರವು ಏ.10ರಿಂದ ಮೇ.20ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಮೋಘ ಪ್ರತಿಭಾನ್ವಿತ ರತ್ನ ಬಿರುದು ಇರುವ ಪಾರಿತೋಷಕ ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು.
“ರಜಾ ವಿತ್ ಮಜಾ” ಬೇಸಿಗೆ ಶಿಬಿರದಲ್ಲಿ ವಿವಿಧ ರೀತಿಯ ನೃತ್ಯಗಳು, ಫಿಲ್ಮ್ ಆಕ್ಟಿಂಗ್ , ಆಡಿಷನ್ಸ್ ಕೊಚಿಂಗ್ಸ್ ,ಡ್ರಾಯಿಂಗ್, ಟೆಂಟ್ ಸಿನಿಮಾ, ನಿರೂಪಣೆ, ಯೋಗ, ಓಲ್ಡ್ ಗೆಮ್ಸ್, ಸಿಂಗಿಗ್,ಅಜ್ಜಿಕಥೆಗಳು, ಜಿಮ್ನಾಸ್ಟಿಕ್, ಫ್ಯಾಷನ್ ಷೋ, ಡ್ರಾಮಾ, ಹೀಗೆ ಹಲವಾರು ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು.
ಈ ಶಿಬಿರದಲ್ಲಿ ೨ವರ್ಷದ ಮಗುವಿನಿಂದ ೨೫ವರ್ಷದ ವಯಸ್ಕರವರೆಗೂ ಭಾಗವಹಿಸಬಹುದು. ಈ ಎಲ್ಲಾ ವಯಸ್ಸಿಗೂ ಅನುಗುಣವಾಗಿ ಬೆಳಗಿನ ಬ್ಯಾಚ್ , ಮದ್ಯಾಹ್ನದ ಬ್ಯಾಚ್ , ಸಂಜೆ ಬ್ಯಾಚ್ , ವಿಕೆಂಡ್ ಬ್ಯಾಚ್, ವಿಕ್ ಡೇಸ್ ಬ್ಯಾಚ್ ಹಾಗೆ ಬೆಳಗಿ೦ದ ಸ೦ಜೆಯವರೆಗಿನ ಬ್ಯಾಚ್ ಎಂದು ನಿಮ್ಮ ಅನುಕೂಲಕರ ಸಮಯಕ್ಕೆ ತರಗತಿಗಳು ಇರಲಿದೆ.
ಶಿಬಿರವು ಎರಡು ಬ್ಯಾಚ್ಗಳಲ್ಲಿ ನಡೆಯಲಿದ್ದು, ಬೆಳಗಿನ ಬ್ಯಾಚ್ 10 ರಿಂದ ಮದ್ಯಾಹ್ನ 1ರವರೆಗೆ ಮದ್ಯಾಹ್ನದ ಬ್ಯಾಚ್ : 2:30 ರಿಂದ ಸಂಜೆ 5:15ರವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೊಂದಾಯಿಸಿಕೊಳ್ಳಲು 9845388028, 8123005603ಗೆ ಸಂಪರ್ಕಿಸಿ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳು ಕೇವಲ ಬೈ – ಎಲೆಕ್ಷನ್ ಅಲ್ಲ- ಆರ್.ಅಶೋಕ್
ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನರು ದಾವಣಗೆರೆ ಮತ್ತು ಬಾಗಲ ಕೋಟೆ ಉಪಚುನಾವಣೆಅ ಸನ್ನಿವೇಶದಲ್ಲಿ ಹೇಳುತ್ತಿರುವ “ಟಾಟಾ… ಟಾಟಾ… ಬೈ ಬೈ ಎಲೆಕ್ಷನ್!” ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಕಾಂಗ್ರೆಸ್ ಪಕ್ಷದ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರು “ಅನುಕಂಪದ ಅಲೆ” ಬಗ್ಗೆ ಕನಸು ಕಾಣುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಕಾಣುತ್ತಿರುವುದು ಅನುಕಂಪದ ಅಲೆ ಅಲ್ಲ, ಜನಾಕ್ರೋಶದ ಅಲೆ!
ಕಳೆದ ಮೂರು ವರ್ಷಗಳಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು
ಜನರ ಮೇಲೆ ತೆರಿಗೆ ಭಾರ ಹೇರಿದೆ. ದಿನನಿತ್ಯದ ಬಳಕೆ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿದೆ.
ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ.
ಕನ್ನಡಿಗರನ್ನು ಸಾಲದ ಸುಳಿಗೆ ಸಿಲುಕಿಸಿದೆ ಅಭಿವೃದ್ಧಿಯನ್ನು ಮರೀಚಿಕೆಯಾಗಿಸಿದೆ .
ಒಂದು ಕೈಯಲ್ಲಿ ಗ್ಯಾರಂಟಿ ಕೊಡುವ ನಾಟಕವಾಡಿ, ಇನ್ನೊಂದು ಕೈಯಲ್ಲಿ ತೆರಿಗೆ ಮತ್ತು ಬೆಲೆ ಏರಿಕೆಯಿಂದ ಜನರ ಜೇಬಿಗೆ ಕನ್ನ ಹಾಕುವ ಪಿಕ್ ಪಾಕೆಟ್ ನಡೆಯುತ್ತಿದೆ.
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಕೇವಲ ಎರಡು ಕ್ಷೇತ್ರಗಳ ಚುನಾವಣೆ ಅಲ್ಲ.
ಇದು ದುರಾಡಳಿತ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಕನ್ನಡಿಗರು ನೀಡಲಿರುವ ಎಚ್ಚರಿಕೆಯ ಗಂಟೆ.
ಜನಸಾಮಾನ್ಯರು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸುವ ನಿರ್ಧಾರ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಜನರಿಂದ ಬರುತ್ತಿರುವ ಸಂದೇಶ ಸ್ಪಷ್ಟ – “ಟಾಟಾ… ಟಾಟಾ… ಬೈ ಬೈ!” ಕಟುವಾಗಿ ಆರ್.ಅಶೋಕ್ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿ ಮೇಲೆ ಟೀಕಾಸ್ತ್ರ ಪ್ರಯೋಗಮಾಡಿದ್ದಾರೆ
CM Siddharamaiah ಆರೋಗ್ಯ ಕ್ಷೇತ್ರಕ್ಕೆ ಸರ್ಕಾರದಿಂದ ಹಚ್ಚಿನ ಮುತುವರ್ಜಿವಹಿಸಲಾಗಿದೆ- ಮುಖ್ಯಮಂತ್ರಿ ಸಿದ್ಧರಾಮಯ್ಯ
CM Siddharamaiah ನಮ್ಮ ಸರ್ಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮುತುವರ್ಜಿ ನೀಡುತ್ತಿದ್ದು, ಸ್ವಸ್ಥ ಸಮಾಜ – ಸದೃಢ ಕರ್ನಾಟಕ ಧ್ಯೇಯದಡಿ ಕಾರ್ಯನಿರ್ವಹಿಸುತ್ತಿದೆ.
ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣ, ಉಚಿತ ಚಿಕಿತ್ಸೆ, ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ, ಗಂಭೀರ ಕಾಯಿಲೆಗಳಿಗೆ ಅಗ್ಗದ ದರದಲ್ಲಿ ಚಿಕಿತ್ಸೆ, ಹೆಣ್ಣುಮಕ್ಕಳು ವಿಶೇಷವಾಗಿ ತಾಯಂದಿರು ಹಾಗೂ ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ಸ್ವಸ್ಥ ಕರ್ನಾಟಕ ನಿರ್ಮಾಣದತ್ತ ದಿಟ್ಟ ಹೆಜ್ಜೆಯಿಟ್ಟಿದೆ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ವರ್ಗದ, ಎಲ್ಲಾ ಪ್ರದೇಶದ ಜನತೆಗೆ ಆರೋಗ್ಯಯುತ ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಯೋಜನೆಗಳ ವಿವರ ಹೀಗಿದೆ.
ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಒದಗಿಸಲು ಕ್ಯಾನ್ಸರ್ ಆಸ್ಪತ್ರೆ ಮುನಿರಾಬಾದ್ – ಟಿ.ಬಿ. ಡ್ಯಾಂನಲ್ಲಿ ಸ್ಥಾಪನೆ
ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐವಿಎಫ್ ಕೇಂದ್ರಗಳನ್ನು ಸ್ಥಾಪಿಸಲು ತಲಾ 1 ಕೋಟಿ ರೂ. ಮೀಸಲು
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ
CM Siddharamaiah ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗೆ ₹620 ಕೋಟಿ ಅನುದಾನ ಮತ್ತು ಉಪಕರಣಗಳ ಖರೀದಿಗಾಗಿ ₹220 ಕೋಟಿ ಮೀಸಲು ಇರಿಸಿದೆ ಎಂದು ತಿಳಿಸಿದ್ದಾರೆ.
ಆನಂದವು ಹೃದಯ ಮತ್ತು ಆತ್ಮಕ್ಕೆ ಆಗುವ ಅನುಭವ- ಡಾ.ಹೆಚ್.ಬಿ.ಮಂಜುನಾಥ್
ಸುಖ ಸಂತೋಷಗಳು ದೇಹ ಮತ್ತು ಮನಸ್ಸಿಗೆ ಆಗುವ ಅನುಭವಗಳಾದರೆ ಆನಂದವು ಹೃದಯ ಮತ್ತು ಆತ್ಮಕ್ಕೆ ಆಗುವ ಅನುಭವ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಸಂಗೀತ ಕಲಾ ಕೇಂದ್ರದ ವತಿಯಿಂದ ಏರ್ಪಾಡಾಗಿದ್ದ ಪುರಂದರ ದಾಸರ, ತ್ಯಾಗರಾಜರ ಹಾಗೂ ವಾಗ್ಗೇಯಕಾರರ ಸ್ಮರಣೋತ್ಸವದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಯ, ಶೋಕ, ಮೋಹಗಳಿಲ್ಲದ ಆನಂದದ ಅನುಭವವು ನಮಗೆ ಗಾಢ ನಿದ್ರೆಯಲ್ಲಿ ಆಗುತ್ತಿದ್ದು ಇದನ್ನು ಎಚ್ಚರದಲ್ಲೂ ಹೊಂದಲು ಭಾರತೀಯ ವಾದ ಶಾಸ್ತ್ರೀಯ ಸಂಗೀತ, ನೃತ್ಯ, ಸಾಹಿತ್ಯ, ಲಲಿತ ಕಲಾದಿಗಳಿಂದ ಸಾಧ್ಯ ಎಂದು ಹೇಳಿದರು.
ಕಠಿಣ ತರವಾಗಿದ್ದ ಶಾಸ್ತ್ರೀಯ ಸಂಗೀತವನ್ನು ಮಕ್ಕಳು ಸಹಾ ಸುಲಭವಾಗಿ ಕಲಿಯುವಂತೆ ಸರಳೀಕರಣ ಗೊಳಿಸಿ ಕೊಟ್ಟವರು ದಾಸ ಶ್ರೇಷ್ಠ ಪುರಂದರದಾಸರು. ಇಂತಹ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳಿಗೆ ಕೃತಿಗಳನ್ನು ರಚಿಸಿ ಕೊಟ್ಟವರು ತ್ಯಾಗರಾಜ ಭಾಗವತರು ಮುಂತಾಗಿ ಅನೇಕ ವಾಗ್ಗೇಯಕಾರರು, ಇಂತಹ ಶಾಸ್ತ್ರಿಯ ಕಲೆಗಳನ್ನು ತಾವೂ ಕಲಿತು ಮಕ್ಕಳಿಗೂ ಕಲಿಯಲು ಪ್ರೋತ್ಸಾಹಿಸುವ ಪೋಷಕರು ಅಭಿನಂದನಾರ್ಹರು ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ಹಿಂದೂಸ್ತಾನಿ ಸಂಗೀತ ಕಲಾವಿದರಾದ ಭೀಮಸೇನ ರಂಗಾಚಾರ್ ಜೋಶಿಯವರು ಹಾಡಲು ಪ್ರಯತ್ನಿಸುವವರಿಗೆ ಸ್ವರ ಲಯಗಳು ತಾನಾಗಿಯೇ ಬರಬಹುದು ಆದರೆ ರಾಗ ತಾಳಗಳು ಮಾತ್ರ ಗುರುಗಳಿಂದಲೇ ಕಲಿಯಬೇಕಾದ್ದು ಎಂದರು.
ಗೌರವ ಉಪಸ್ಥಿತಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ತೊಗಲೇರಿಯವರು ಶಾಸ್ತ್ರೀಯ ಸಂಗೀತ ನೃತ್ಯ ಸಾಹಿತ್ಯಗಳ ಕಲಿಕೆ, ಪ್ರಸ್ತುತಿ ಹಾಗೂ ಅಸ್ವಾದನೆಗಳು ಸುಸಂಸ್ಕೃತಿಯ ಲಕ್ಷಣ ಎಂದರು.
ನಾಟ್ಯ ಭಾರತಿಯ ಅಧ್ಯಕ್ಷೆ ವಿದುಷಿ ಶ್ರೀಮತಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ವಿಜಯ ಕುಮಾರ್ ಕಲಮದಾನಿಯವರ ಉಪಸ್ಥಿತಿಯಲ್ಲಿ ನೃತ್ಯ ಶಿಕ್ಷಕ ವಿದ್ವಾನ್ ಶ್ರೀನಿಧಿ ಆರ್ ಕುಲಕರ್ಣಿ ಸ್ವಾಗತ ಕೋರಿದರು.
ಕಲಾ ಕೇಂದ್ರದ ಹಿರಿಕಿರಿಯ ವಿದ್ಯಾರ್ಥಿಗಳು ವೈವಿಧ್ಯಮಯ ಸಂಗೀತ ಕೃತಿಗಳನ್ನು ಪ್ರಸ್ತುತಪಡಿಸುವಾಗ ಹಾರ್ಮೋನಿಯಂ ಹಾಗೂ ತಬಲಾ ಸಹವಾದ್ಯವನ್ನು ಕ್ರಿಸ್ತಾನಂದ ಮತ್ತು ಭರತೇಶ್ ನೀಡಿದರು. ಬಿ ವಿ ರಾಜಶೇಖರ್, ವಿಶ್ವನಾಥ್, ಜಯಶ್ರೀ ಮುಂತಾದವರು ಸಹಕರಿಸಿದರು.
Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ
Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ ದನಿಯಾಗಿ ಅವರ ೯೬ ವರ್ಷದ ಪ್ರಾಯದವರಿಗೂ ದಣಿವರಿಯದ ಸೇವೆ ಸಲ್ಲಿಸಿ ಮಲೆನಾಡಿನ ಹೋರಾಟದ ಈ ನೆಲೆಯಲ್ಲಿ ಶಾಸನವಾದ ಹಿರಿಯ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐವರಿಗೆ ಏ.9ರಂದು ಆರ್.ಟಿ.ಓ ರಸ್ತೆಯ ಶ್ರೀ ಕಲಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಆವರಣದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.
ಈ ಪ್ರಶಸ್ತಿಯು ಮಾದರಿಯಾಗಿದ್ದು ಅಲ್ಲದೆ, ಪ್ರಶಸ್ತಿಗೆ ಭಾಜನರಾದವರಿಗೆ ಸ್ಪೂರ್ತಿ ಹಾಗೂ ಜವಾಬ್ದಾರಿಯು ಆಗಿದೆ ಎಂದು ಹೇಳಿದೆ, ನಿಷ್ಟೆಯ ಸೇವೆ, ಹೋರಾಟಗಳ ಮುಖೇನ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಪತ್ರಕರ್ತರಾದ ಕಾಮ್ರೆಡ್ ಎಂ ಲಿಂಗಪ್ಪನವರು ನಾಡು ಕಂಡ ಮೊದಲ ಆಗ್ರಮಾನ್ಯರು ಅಲ್ಲದೆ ಚಿರಪರಿಚಿತರಾಗಿದ್ದು, ಅವರ ಧರಿಸುತ್ತಿದ್ದ ವಸ್ತ್ರಗಳು, ಹೋರಾಟಕ್ಕೆ ಬಳಸುತ್ತಿದ್ದ ಜಾಗಟೆಗಳಿಂದ ಸಾಮಾಜಿಕ ನ್ಯಾಯ ದಕ್ಕಿಸಿಕೊಳ್ಳುವಲ್ಲಿ ಮುಖ್ಯ ಪಾತ್ರವಾಗಿತ್ತು, ಇಂತಹ ಮುತ್ಸದ್ಧಿತನದ ಹೆಸರಿನಲ್ಲಿ ಈ ವರುಷದಿಂದ ಕಾಮ್ರೆಡ್ ಎಂ ಲಿಂಗಪ್ಪ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಅವರೊಂದಿಗೆ ಒಡನಾಟವಿದ್ದವರು, ಸ್ನೇಹಿತರು, ಹಿತೈಷಿಗಳು ಕಾರ್ಯಕ್ರಮಕ್ಕೆ ಮುಕ್ತವಾಗಿ ಬರುವಂತೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ಈ ಮೂಲಕ ವಿನಂತಿಸಿದೆ.
ಪ್ರಶಸ್ತಿಗೆ ಭಾಜನರಾದವರು : ಸಿನಿಮಾ ರಂಗದಿಂದ ಸನ್ಮಾನ್ಯ ಶ್ರೀ ರಘುರಾಜ್ ಮಲ್ನಾಡ್, ಪತ್ರಕರ್ತ ವಲಯದಿಂದ ಸನ್ಮಾನ್ಯ ಶ್ರೀ ರೇಣುಕೇಶ್,
ಲೇಖಕರ ವಲಯದಿಂದ ಸನ್ಮಾನ್ಯ ಶ್ರೀ ಖಲಂದರ್ ರಜ್ವಿ ಬೆಜ್ಜವಳ್ಳಿ, ಕನ್ನಡ ಸೇವಾ ವಲಯದಿಂದ ಕೆ. ಪ್ರಸನ್ನ ಗೌಡ ವಕೀಲರ ವಲಯದಿಂದ ರೇಖೇಶ್ ಮಾನೆ ಇಂತಿವರುಗಳಾಗಿರುತ್ತಾರೆ,
Sri Kala Skill Development Centre ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ : ಡಿ.ರವಿಕುಮಾರ್, ಸಂಸ್ಥಾಪಕರು, ಅಕ್ಷರ ಎಜ್ಯುಕೇಷನ್ ಟ್ರಸ್ಟ್. ಜಿ.ಗೋಪಾಲಕೃಷ್ಣ, ಮಾಜಿ ಪಾಲಿಕೆ ಸದಸ್ಯರು. ಶಿವಮೊಗ್ಗ. ಕಲೀಮ್ ಪಾಷಾ, ಅಧ್ಯಕ್ಷರು ದಕ್ಷಿಣ ಬ್ಲಾಕ್ ಕಾಂಗ್ರೆಸ್, ಶಿವಮೊಗ್ಗ. ಗೀತಾ ಮಾನೆ, ವಕೀಲರು, ಶಿವಮೊಗ್ಗ.
ನಟರಾಜ್ ಆರ್.ಟಿ, ಸಂಚಾಲಕ, ಹಿಂದೂಳಿದ ಜನಜಾಗೃತಿ ಸಮಿತಿ. ಕುಮರೇಶ್.ಎನ್, ಉದ್ಯಮಿಗಳು, ಶಿವಮೊಗ್ಗ ಅವರುಗಳು ಆಗಮಿಸಲಿದ್ದಾರೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ ಸಂಸ್ಥೆಯು ತಿಳಿಸಿದೆ.
ಮೆಕ್ಕೆಜೋಳ ಬೆಳೆಗೆ ವಿಮೆ ಪರಿಹಾರ ಪಡೆಯದ ರೈತರು ಆಕ್ಷೇಪಣೆ ಸಲ್ಲಿಸಲು ಅವಕಾಶ
2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ಅಡಿಯಲ್ಲಿ ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿ, ತಾಂತ್ರಿಕ ಕಾರಣಗಳಿಂದ ಪರಿಹಾರ ಲಭಿಸದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಕೃಷಿ ಇಲಾಖೆ ಅವಕಾಶ ನೀಡಿದೆ.
ಬೆಳೆ ಸಮೀಕ್ಷೆಯ ಫೋಟೋಗಳು ಮತ್ತು ವಿಮೆ ಮಾಡಿಸಿದ ಬೆಳೆಗಳ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೆಲವು ಅರ್ಜಿಗಳನ್ನು ವಿಮಾ ಸಂಸ್ಥೆಯು ತಿರಸ್ಕರಿಸಿದೆ.
ಇಂತಹ ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿಯನ್ನು ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.
ಯಾವ ರೈತರಿಗೆ ಇನ್ನೂ ವಿಮೆ ಪರಿಹಾರ ಬಂದಿಲ್ಲವೋ, ಅವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪಟ್ಟಿಯನ್ನು ಪರಿಶೀಲಿಸಬೇಕು.
ತಮ್ಮ ಹೆಸರು ತಿರಸ್ಕೃತ ಪಟ್ಟಿಯಲ್ಲಿದ್ದರೆ, 2024ರ ಮುಂಗಾರು ಹಂಗಾಮಿನ ಪಹಣಿ (ಇದರಲ್ಲಿ ವಿಮೆ ಮಾಡಿಸಿದ ಬೆಳೆ ನಮೂದಾಗಿರಬೇಕು), ಬೆಂಬಲ ಬೆಲೆ ಯೋಜನೆಯಲ್ಲಿ ಪ್ರಯೋಜನೆ ಪಡೆದಿರುವ ಬಗ್ಗೆ ರಸೀದಿ, ಪಶು ಆಹಾರ ಘಟಕಕ್ಕೆ ನೀಡಿದ ಬಗ್ಗೆ ಅಥವಾ ಎಪಿಎಂಸಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದ ರಸೀದಿಗಳೊಂದಿಗೆ ಲಿಖಿತ ಮನವಿಯನ್ನು ಸಲ್ಲಿಸಬಹುದು.
ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನಾಂಕವಾಗಿದೆ. ಸಲ್ಲಿಕೆಯಾದ ಮನವಿಗಳನ್ನು ತಾಲೂಕು ಮಟ್ಟದ ತಹಶೀಲ್ದಾರರ ಅಧ್ಯಕ್ಷತೆಯ ಸಮಿತಿಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಮೊಗ್ಗ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
