ವಿಶೇಷ ವರದಿ: ಪ್ರಭಾಕರ ಕಾರಂತ.
Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ತಮ್ಮ ನೇಪಾಳದ ಧರ್ಮ ವಿಜಯ ಯಾತ್ರೆಯಲ್ಲಿ ಗಂಡಕೀ ನದಿಗೆ ತೆರಳಿ ಆ ಪುಣ್ಯ ಜಲವನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಮೂಲಕ ಆ ನದಿಯ ಪಾವಿತ್ರ್ಯತೆಯನ್ನು ಸ್ಮರಣೆಗೆ ತಂದರು.ಪವಿತ್ರ ನದಿ ತಟದ ಜೋಮ್ಸೊಂ ನಲ್ಲಿ ಅವರಿಗಾಗಿ ಒಂದು ಕಾರ್ಯಕ್ರಮ ಕಾಯುತ್ತಿತ್ತು.ಅದೇನು ಪೂರ್ವ ನಿಗದಿತ ಕಾರ್ಯಕ್ರಮ ಆಗಿರಲಿಲ್ಲ.ಜಗದ್ಗುರುಗಳು ಈ ಮಾರ್ಗದಲ್ಲಿ ಸಾಗಲಿದ್ದಾರೆ ಎಂದು ಅರಿತುಕೊಂಡ ಸ್ಥಳೀಯ ಗ್ರಾಮ ಪಾಲಿಕೆ ಅದನ್ನು ಸ್ಮರಣೀಯವಾಗಿಸಲು ಸಂಕಲ್ಪಿಸಿತು.ಈ ನದಿ ಸಾಲಿಗ್ರಾಮದ ಮೂಲ ಆವಾಸ ಸ್ಥಾನವಾಗಿದೆ.ಮಹಾವಿಷ್ಣು ಈ ಸಾಲಿಗ್ರಾಮಗಳಲ್ಲಿ ಸ್ವಯಂ ಪ್ರತಿಷ್ಠಾಪನೆಯಾಗಿರುತ್ತಾನೆ. ದೇವರ ಮೂರ್ತಿ ಕೆತ್ತಿ ಅದನ್ನು ಪ್ರತಿಷ್ಠಾಪನೆ ಮಾಡಿ ಸಾನಿಧ್ಯ ಉಂಟುಮಾಡುವ ಯಾವ ಪ್ರಕ್ರಿಯೆಯೂ ಸಾಲಿಗ್ರಾಮದ ವಿಷಯದಲ್ಲಿ ಬೇಕಿಲ್ಲ.ಇಲ್ಲಿ ದೇವರೇ ಸಾನಿಧ್ಯ ಹೊಂದಿದ್ದಾನೆ.ಹೀಗೆಂದೇ ಮನುಷ್ಯ ಪ್ರತಿಷ್ಠೆಗಿಂತ ದೇವರ ಈ ಸ್ವಯಂ ಪ್ರತಿಷ್ಠೆ ಶ್ರೇಷ್ಠ.ಇಂತಹ ಪವಿತ್ರ ಶಿಲೆಗಳ ಆವಾಸಸ್ಥಾನವಾದ ಜೋಮ್ಸಂ ನಲ್ಲಿ ನದೀ ತಟದಲ್ಲಿದ್ದ ಬೃಹತ್ ಶಿಲೆಯೊಂದರಲ್ಲಿ ಸಾಲಿಗ್ರಾಮ ಶಿಲೆಯ ಒಳಗೆ ಅಡಗಿರುವ ವಿಷ್ಣು ಚಕ್ರವನ್ನು ಕೆತ್ತನೆ ಮಾಡಿಸಿದ ಸ್ಥಳೀಯ ಆಡಳಿತ ಅದನ್ನು ಶೃಂಗೇರಿಯ ಶಂಕರಾಚಾರ್ಯರಿಂದ ಉದ್ಘಾಟಿಸಬೇಕೆಂದು ಇಚ್ಛಿಸಿ ಪ್ರಾರ್ಥಿಸಿತ್ತು.ಇದು ಸಾಕ್ಷಾತ್ ಪರಶಿವ ವಿಷ್ಣುವನ್ನು ಪ್ರತಿಷ್ಠಾಪನೆ ಮಾಡಿದಂತದೇ ಘಟನೆ.ಈ ಪ್ರದೇಶಕ್ಕೆ ಈವರೆಗೆ ಅದೆಷ್ಟು ಭಕ್ತರು ಬಂದಿಲ್ಲ. ಆವರಲ್ಲಿ ಅದೆಷ್ಟು ಸಾಧುಸಂತರು, ಮಠಾಧೀಶರು ಇದ್ದಿರಬಹುದು.ಆದರೆ ಮಹಾವಿಷ್ಣುವಿಗೆ ಇಲ್ಲಿ ತನ್ನ ಸಾಲಿಗ್ರಾಮವನ್ನು ಶೃಂಗೇರಿಯ ಜಗದ್ಗುರುಗಳೇ ಪೂಜಿಸಬೇಕು ಎಂಬ ಇಚ್ಛೆ ಉಂಟಾಗಿದ್ದು ಕಾಕತಾಳೀಯವಲ್ಲ.ಈಶ್ವರ ಸಂಕಲ್ಪ.ಆದರ ಪ್ರತಿಕೃತಿಯೊಂದನ್ನು ಸ್ಥಳೀಯ ಸಂಘಟಕರು ಭಕ್ತಿಪೂರ್ವಕವಾಗಿ ಜಗದ್ಗುರುಗಳಿಗೆ ಸಮರ್ಪಿಸಿದರು. ಕಾಟ್ಮಂಡುವಿನಲ್ಲಿ ಪೊಲೀಸ್ ಮುಖ್ಯಾಲಯದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿ ಜಗದ್ಗುರುಗಳಿಗೆ ಸಮರ್ಪಿಸಲಾಗಿತ್ತು.ಇದನ್ನು ಗುರುಭವನದಲ್ಲಿ ಸದಾ ತಮ್ಮ ಜೊತೆಗೆ ಇಟ್ಟುಕೊಳ್ಳುವುದಾಗಿ ಜಗದ್ಗುರುಗಳು ಭರವಸೆ ನೀಡಿದ್ದರು.ಈಗ ಪಶುಪತಿನಾಥನ ಜೊತೆಗೆ ಇರಲು ಮಹಾವಿಷ್ಣು ಸಹ ನೇಪಾಳದಿಂದ ಜಗದ್ಗುರುಗಳ ಜೊತೆಗೆ ಆಗಮಿಸುತ್ತಿದ್ದಾನೆ.ಶಿವಕೇಶವ ಅಭೇದ ತತ್ವವನ್ನು ಜಗದ್ಗುರುಗಳು ನೇಪಾಳದ ಯಾತ್ರೆ ಅನುಗ್ರಹ ಭಾಷಣದಲ್ಲಿ ಹೇಳಿದ್ದರು.ಅದರ ಸಾಕ್ಷಾತ್ಕಾರ ಹೀಗೆ ಆಯಿತು.
Klive Special Article ಜಗದ್ಗುರುಗಳು ಗಾಲೇಶ್ವರ ತಲುಪುವಾಗ ನಡು ರಾತ್ರಿ ಸಮೀಪಿಸುತ್ತಿತ್ತು.ಅಲ್ಲೇ ಆ ದಿನದ ಚಂದ್ರಮೌಳೀಶ್ವರ ಪೂಜೆ.ಭಕ್ತರು ಈ ಪೂಜೆ ಕಣ್ತುಂಬಿಕೊಂಡು ಭಾವಪರವಶರಾದರು. ಸಾವಿರಾರು ಮೈಲು ದೂರದ ಭಾರತದ ಸಂತ ಶ್ರೇಷ್ಠ ತಮ್ಮ ಪುಣ್ಯ ಭೂಮಿಗೆ ಆಗಮಿಸುತ್ತಿದ್ದಾರೆ ಎಂಬ ನಿರೀಕ್ಷೆಯಲ್ಲಿ ಆ ತಡರಾತ್ರಿ ಕಾದು ನಿಂತ ಭಕ್ತರ ಭಕ್ತಿ ಶ್ರದ್ಧೆಗೆ ಸಾಟಿ ಇಲ್ಲ.ಗಾಲೇಶ್ವರನನ್ನು ಮರುದಿನ ಜಗದ್ಗುರುಗಳು ಪೂಜಿಸುವಾಗಲೂ ಆ ಜನಕ್ಕೆ ಅದೇ ಶ್ರದ್ಧೆ.ಪೂಜೆಯ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಅವರು ಜಗದ್ಗುರುಗಳನ್ನು ಬೀಳ್ಕೊಟ್ಟರು.ಜಗದ್ಗುರುಗಳು ಸಮೀಪದ ಸಾಲಿಗ್ರಾಮ ಸಂಗ್ರಹಾಲಯಕ್ಕೆ ಚಿತ್ತೈಸಿ ಅಲ್ಲಿ ಕಾಷ್ಟ ನಾರಾಯಣ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.ಇಲ್ಲಿ ಗಂಡಕೀ ನದಿಯ ಪಥ ದರ್ಶನದ ಪ್ರತಿಕೃತಿ ಸಹ ಇದೆ.ಪವಿತ್ರ ಗಂಗಾನದಿಯಲ್ಲಿ ಪಾಟ್ಣಾದಲ್ಲಿ ಸೇರಲೀರುವ ಈ ಪವಿತ್ರ ನದಿ ಎರಡು ದೇಶದ ಪವಿತ್ರ ಸಂಬಂಧಗಳನ್ನು ಸಾರಿ ಹೇಳುತ್ತಿದೆ.
ಜಗದ್ಗುರುಗಳು ಮಾರ್ಗದಲ್ಲಿ ಮಹಾಯೋಗಿ ಜಡಭರತನ ಗುಹೆ ದರ್ಶನ ಮಾಡಿದರು.ನಮ್ಮೀ ಪುಣ್ಯ ಭೂಮಿಗೆ ಭಾರತ ಎಂದು ನಾಮಕರಣ ಆಗಲು ಕಾರಣನಾದ ಭರತ ಮಹಾರಾಜ ತನ್ನ ಮುಂದಿನ ಜನ್ಮದಲ್ಲಿ ಜಡಭರತನಾಗಿ ಜನಿಸಿದ.ಆತ ಆತ್ಮ ಸಾಕ್ಷಾತ್ಕಾರ ಪಡೆದ ಮಹಾ ತಪಸ್ವಿ.ಆತ್ಮವೇ ಶಾಶ್ವತ ಸತ್ಯ ಎಂದು ಪ್ರತಿಪಾದಿಸಿದ ಮಹಾತ್ಮ.
ಜಡಭರತನ ಬದುಕೇ ಅದ್ವೈತದ ದೃಷ್ಟಾಂತ.ಆ ವೈರಾಗ್ಯದ ಪರಮ ಮೂರ್ತಿಯ ಸಾಧನೆಯ ಸ್ಥಳವನ್ನು ಆತ್ಮತತ್ವದ ಅದ್ವೈತದ ಶಂಕರ ಭಗವತ್ಪಾದರ ಪ್ರತಿನಿಧಿ ದರ್ಶಿಸಿದ್ದು ಮತ್ತೆ ಭಾರತ ನೇಪಾಳದ ಆನನ್ಯತೆಯ ದ್ಯೋತಕವೇ ಸರಿ.
ಈ ಗುಹೆಯು ಭೇಟಿ ಕುರಿತು ವಿಂಗ್ ಕಮಾಂಡರ್ ಸುದರ್ಶನ್ ಲೇಖನ ಬರೆದಿದ್ದು “ಇದು ಕೇವಲ ಗುಹೆಯ ದರ್ಶನ ಘಟನೆಯಲ್ಲ.ಇದು ಭರತ ಮಹಾರಾಜನ ವೈರಾಗ್ಯದಿಂದ ಆರಂಭವಾಗಿ ಜಡಭರತನ ಆತ್ಮಜ್ಞಾನ,ಆದಿ ಶಂಕರಾಚಾರ್ಯರ ಅದ್ವೈತ ತತ್ವ,ಮತ್ತು ಇಂದಿನ ಜಗದ್ಗುರುಗಳ ಮೂಲಕ ಮುಂದುವರೆಯುತ್ತಿರುವ ಸನಾತನ ಧರ್ಮದ ಅವಿಚ್ಛಿನ್ನ ಜ್ಯೋತಿಯ ಪ್ರತೀಕವಾಗಿದೆ” ಎಂದು ಬಣ್ಣಿಸಿದ್ದಾರೆ.
Klive Special Article ಜಗದ್ಗುರುಗಳು ದೇವಘಾಟ್ ತಲ್ಪುವಾಗ ಮತ್ತೆ ತಡರಾತ್ರಿ ಆಗಿತ್ತು.ಇಡೀ ಪ್ರದೇಶ ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು.ಮಾರ್ಗದ ಇಕ್ಕೆಲಗಳಲ್ಲೂ ಕಾದುನಿಂತ ಭಕ್ತರು.ಅವರ ಸಂಭ್ರಮ ಶ್ರದ್ಧೆ ವರ್ಣಿಸಲಸದಳ.ಈ ಕ್ಷೇತ್ರದಲ್ಲಿ ಮೂರು ವೇದಪಾಠ ಶಾಲೆಗಳಿವೆ.ಒಟ್ಟು ಮೂರೂ ಶಾಲೆಗಳಲ್ಲಿ ಒಂಬೈನೂರು ವಿದ್ಯಾರ್ಥಿಗಳು ಇದ್ದಾರೆ.ಜಗದ್ಗುರುಗಳು ಹರಿಹರ ಸನ್ಯಾಸಾಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ.ಇಲ್ಲಿನ ಸ್ವಾಮಿ ಶ್ರೀ ದಯಾನಂದ ಸರಸ್ವತಿ ಶೃಂಗೇರಿಯ ಭಕ್ತರು.ಅವರ ಶಿಷ್ಯ ಶ್ರೀ ವಿಮಲಾನಂದ ಸರಸ್ವತಿ ದೂಳೀ ಪಾದಪೂಜೆ ನೆರವೇರಿಸಿದರು.ನಂತರ ವೇದ ವಿದ್ಯಾರ್ಥಿಗಳ ಮಂತ್ರ ಪಠಣ ದೊಂದಿಗೆ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಿತು.ಮತ್ತೆ ಭಕ್ತರೊಂದಿಗೆ ಶ್ರೀ ದಯಾನಂದ ಸರಸ್ವತಿಯವರೊಂದಿಗೆ ಅವರ ಶಿಷ್ಯರೊಂದಿಗೆ ಮಾತುಕತೆ.ಜಗದ್ಗುರುಗಳಿಗೆ ದಣೀವೇ ಇಲ್ಲ ಅದಕ್ಕೇ ವಿಶ್ರಾಂತಿಯೂ ಬೇಡ.
ವಿಶೇಷ ಬರಹ: ಪ್ರಭಾಕರ ಕಾರಂತ
