ಉಚಿತ ಇ-ಗ್ರಂಥಾಲಯ ಸದಸ್ಯತ್ವ ನೋಂದಣಿ
ಶಿವಮೊಗ್ಗ, ನವೆಂಬರ್ 12 (ಕರ್ನಾಟಕ ವಾರ್ತೆ) ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಸಾರ್ವಜನಿಕ ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ಸೇವೆಯನ್ನು ಪ್ರಾರಂಭಿಸಲಾಗಿದ್ದು, 2021 ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಗ್ರಂಥಾಲಯ ಬಳಸಿಕೊಳ್ಳಲು ಉಚಿತವಾಗಿ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಜಾಲತಾಣ www.karnatakadigitalpubliclibrary.org ಮೂಲಕ e-Sarvajanika Granthalaya ಇ-ಗ್ರಂಥಾಲಯ ಸೇವೆ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಂಡು ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ ಮೂಲಕ ಪುಸ್ತಕಗಳು/ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ಉಚಿತವಾಗಿ ಓದಬಹುದು.
ಇ-ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಸಿಇಟಿ/ಎನ್ಇಇಟಿ/ಯುಪಿಎಸ್ಸಿ/ಕೆಪಿಎಸ್ಸಿ ಅಲ್ಲದೇ ರಾಜ್ಯ ಸರ್ಕಾರದ ಸಿಬಿಎಸ್ಸಿ/ಐಸಿಎಸ್ಇ/ಎನ್ಸಿಇಆರ್ಟಿ ಪಠ್ಯಪುಸ್ತಕಗಳು ಮತ್ತು ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿದ್ದು ವಿದ್ಯಾರ್ಥಿಗಳು ಸಾರ್ವಜನಿಕರು ಉಚಿತ ಸದಸ್ಯತ್ವ ಪಡೆದು ಇದರ ಸದುಪಯೋಗ ಪಡೆಯಬೇಕೆಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ(ಪ್ರ) ತಿಳಿಸಿದ್ದಾರೆ.
ಇ-ಗ್ರಂಥಾಲಯ ಸದಸ್ಯತ್ವ ನೋಂದಣಿ
ಬೆಂಗಳೂರಿನಲ್ಲಿ ತಂತ್ರಜ್ಞಾನ ಶೃಂಗ ಸಮಾವೇಶ
ಡಿಟಿಎಸ್ 2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯೂರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನದ ಕಡೆಗೆ ಗಮನ ಹರಿಸಲಾಗುವುದು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.
ನವೆಂಬರ್ 15ರಿಂದ 19ರವರೆಗೆ ನಡೆಯಲಿರುವ 24ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಮೊದಲ ಬಾರಿಗೆ ಅರಬ್ ಸಂಸ್ಥಾನ, ವಿಯೆಟ್ನಾಮ್, ಯುರೋಪಿಯನ್ ಒಕ್ಕೂಟ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು” ಸರಕಾರದ ಜಾಗತಿಕ ನಾವಿನ್ಯತೆ ಮೈತ್ರಿಕೂಟ ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಹೆಜ್ಜೆ ಇಡಲಾಗಿದೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ. ಅಮೆರಿಕದ ಜೊತೆಗಿನ ಸಹಭಾಗಿತ್ವವು, ಹೊಸ ಕ್ಷೇತ್ರದಲ್ಲಿ ಮತ್ತಷ್ಟು ಅಂತರಾಷ್ಟ್ರೀಯ ಅವಕಾಶ ಸೃಷ್ಟಿಸಲಿದೆ ಎಂದು ಅವರು ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಡಿಟಿಎಸ್ 2021ರಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದೊಂದಿಗೆ ಜಿಐಎ ಸಹಭಾಗಿತ್ವ ಹೊಂದಿರುವ ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ಸ್ವಿಡ್ಜರ್ಲ್ಯಾಂಡ್ ಇನ್ನೂ ಮುಂತಾದ ದೇಶಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದವು.
ಸಾರಿಗೆ ಬಸ್ ನಲ್ಲಿ ಮೊಬೈಲ್ ಕಿರಿಕ್, ಬ್ರೇಕ್
ಇದು ಆಧುನಿಕ ಯುಗ. ಎಲ್ಲೆಂದರಲ್ಲಿ ಸ್ಮಾರ್ಟ್ ಫೋನ್ ಗಳ ಹಾವಳಿ. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಇದರಿಂದಾಗಿ ಶಬ್ದ ಮಾಲಿನ್ಯವು ಹೆಚ್ಚಾಗುತ್ತಿದೆ. ನಾವು ಎಷ್ಟೇ ಪ್ರಯತ್ನಿಸಿದರೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆಯನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ಆದರೆ ಈಗ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಮುಂದಾಗಿದೆ.
ಬಸ್ಸಿನಲ್ಲಿ ಸಹಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ನಲ್ಲಿ ಜೋರಾಗಿ ಹಾಡು ಹಾಕುವುದು, ಬೇರೆಯವರಿಗೆ ಕಿರಿಕಿರಿಯಾಗುವಂತೆ ಸಿನಿಮಾ ನೋಡುವುದು, ಗಟ್ಟಿಯಾಗಿ ಮಾತನಾಡುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಈ ರಗಳೆಗಳನ್ನು ತಡೆಯಲು ಸಾರಿಗೆ ಇಲಾಖೆಯು ಮೊದಲ ಪ್ರಯತ್ನಕ್ಕೆ ಸಜ್ಜಾಗಿದೆ.
ಬಸ್ ನಲ್ಲಿ ಪ್ರಯಾಣಿಕರಿಗೆ ಮೊಬೈಲ್ ನಿಂದ ಆಗುವ ತಲೆನೋವು ತಪ್ಪಿಸಲು ಹಾಗೂ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು -1989, ನಿಯಮ 94(1) (ವಿ) ಅನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕರ್ತವ್ಯನಿರತ ಸಿಬ್ಬಂದಿ ಸೂಕ್ತ ತಿಳಿವಳಿಕೆ ನೀಡಬೇಕು. ಹೆಚ್ಚಾಗಿ ಶಬ್ಧ ಬರುವಂತೆ, ಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುತ್ತಿದ್ದರೆ, ಬಳಸದಂತೆ ವಿನಂತಿಸಿಕೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಬಸ್ಸಿನಿಂದ ಆ ಪ್ರಯಾಣಿಕನನ್ನು ಕೆಳಗಿಳಿಸಬೇಕು. ಆತ ಕೆಳಕ್ಕೆ ಇಳಿಯುವವರೆಗೂ ಬಸ್ಸನ್ನು ಅಲ್ಲೇ ನಿಲ್ಲಿಸುವುದು ಹಾಗೂ ಕೆಳಕ್ಕಿಳಿದ ಪ್ರಯಾಣಿಕರಿಗೆ ಬಸ್ ದರವನ್ನು ಹಿಂದಿರುಗಿಸಬಾರದು ಎಂದು ಆದೇಶ ಸ್ಪಷ್ಟಪಡಿಸಲಾಗಿದೆ.
ಸಾರಿಗೆ ಇಲಾಖೆಯ ಈ ಹೊಸ ಪ್ರಯತ್ನವು ಜನಸಾಮಾನ್ಯರಿಗೆ ಮಾತ್ರವಲ್ಲದೇ ಪರಿಸರಕ್ಕೂ ಅನುಕೂಲಕರವಾಗಲಿದೆ.
ಈ ಹಿಂದೆ ಕ್ಯಾಸೆಟ್ ಹಾಕಿ ಬಸ್ ನವರೇ ತೊಂದರೆ ಕೊಡುತ್ತಿದ್ದರು. ಅದು ನಿಂತಮೇಲೆ ಪ್ರಯಾಣಿಕರಿಂದ ಈ ಹೊಸ ಕಿರಿಕಿರಿ ಶುರುವಾಗಿತ್ತು. ಈಗ ಎರಡಕ್ಕೂ ಬ್ರೇಕ್!…
ಕೀವೀಸ್ ವಿರುದ್ಧ ಭಾರತ ತಂಡ ಸಿದ್ಧ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಆಗಾರರ ಪಟ್ಟಿ ಪ್ರಕಟವಾಗಿದ್ದು ನವೆಂಬರ್ 25 ರಿಂದ ನಡೆಯಲ್ಲಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ 2 ನೇ ಟೆಸ್ಟ್ ಸರಣಿಗೆ ಶುಕ್ರವಾರ 16 ಸದಸ್ಯರನ್ನ ಆಯ್ಕೆ ಮಾಡಲಾಗಿದೆ. ಈ ಟೆಸ್ಟ್ ಸರಣಿಗೆ ಟಿ – 20 ತಂಡದ ನೂತನ ನಾಯಕ ರೋಹಿತ್ ಶರ್ಮಾ ವಿಕೆಟ್ ಕೀಪರ್ ರೀಷಬ್ ಪಂತ್ ವೇಗಿಗಳಾದ ಜಸ್ ಪ್ರಿತ್ ಬಮ್ರಾ ಮತ್ತು ಮಹಮ್ಮದ್ ಶಮೀಗೆ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್ ಸರಣಿಗು ಮೊದಲು ನಡೆಯಲ್ಲಿರುವಂತಹ 3 ನೇ ಟಿ – 20 ಸರಣಿಯಿಂದಲು ಜಸ್ ಪ್ರಿತ್ ಬುಮ್ರಾ ಮತ್ತು ಮಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಹಂಗಾಮಿ ನಾಯಕನಾಗಿ ಅಜಿಂಕ್ಯಾ ರಹಾನೆ ಮತ್ತು ಉಪನಾಯಕನಾಗಿ ಚೇತೇಶ್ವರ್ ಪೂಜಾರ ಕಾರ್ಯ ನಿರ್ವಹಿಸಲಿದ್ದಾರೆ . 2 ನೇ ಟೆಸ್ಟ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಟೀಮ್ ಇಂಡಿಯಾದ ಆಟಗಾರರ ಪಟ್ಟಿ ಹೀಗಿದ್ದು
ಅಜಿಂಕ್ಯಾ ರಹಾನೆ (ನಾಯಕ) K.L ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ(ಉಪ ನಾಯಕ)ಶುಭ್ಮನ್ ಗಿಲ್,ಶ್ರೇಯಸ್ ಅಯ್ಯರ್,ವೃದ್ದೀಮಾನ್ ಸಾಹ ( ವಿಕೆಟ್ ಕೀಪರ್)K.S ಭರತ್ (ವಿಕೆಟ್ ಕೀಪರ್)ರವೀಂದ್ರ ಜಡೇಜಾ ,R.ಅಶ್ವಿನ್,ಅಕ್ಷರ್ ಪಟೇಲ್,ಜಯಂತ್ ಯಾದವ್. ಇಶಾಂತ್ ಶರ್ಮ, ಉಮೇಶ್ ಯಾದವ್,ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಇವರುಗಳನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರುವುದು ಟಿಕೆಟ್ ಪ್ರೀಯರಲ್ಲಿ ಕುತೂಹಲ ಮನೆ ಮಾಡಿದೆ.
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೆಲಸವನ್ನು ಡಾ. ರಾಜಕುಮಾರ್ ಕುಟುಂಬ ಹಿಂದಿನಿಂದಲೂ ರೂಪಿಸಿಕೊಂಡು ಬಂದಿದೆ. ಇತ್ತೀಚಿಗೆ ಕನ್ನಡ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದ್ದರೂ ಸಹ ಅವರ ಮರಣದ ನಂತರ ನೇತ್ರದಾನ ಮಾಡುವ ಮೂಲಕ ನಾಲ್ವರು ಅಂಧರ ಬಾಳಲ್ಲಿ ಬೆಳಕು ಮೂಡಿತು. ಈಗ ಪುನೀತ್ ಅವರ ಕಣ್ಣಿನಿಂದ ಇದೇ ಮೊದಲ ಬಾರಿಗೆ ಹತ್ತು ಜನಕ್ಕೆ ದೃಷ್ಟಿ ನೀಡಲು ನಾರಾಯಣ ನೇತ್ರಾಲಯದ ವೈದ್ಯರು ಮುಂದಾಗಿದ್ದಾರೆ.
ಪ್ರಥಮಬಾರಿಗೆ ಒಬ್ಬ ವ್ಯಕ್ತಿಯ ಕಾರ್ನಿಯ ಹಾಗೂ ಸ್ಟೆಮ್ ಸೆಲ್ ಎರಡನ್ನು ಬಳಸಿ ಅಂದರಿಗೆ ದೃಷ್ಟಿ ನೀಡುವ ಪ್ರಯತ್ನಕ್ಕೆ ನಾರಾಯಣ ನೇತ್ರಾಲಯ ಮುಂದಾಗುವ ಮೂಲಕ ರಾಜ್ಯದಲ್ಲೇ ಹೊಸ ದಾಖಲೆ ಸೃಷ್ಟಿಸುವಲ್ಲಿ ಮುಂದಾಗಲಿದೆ.
ಏನಿದು ಸ್ಟೆಮ್ ಸೆಲ್ ?
ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಬಂದ ನಾರಾಯಣ ನೇತ್ರಾಲಯ ಡಾ.ಭುಜಂಗ ಶೆಟ್ಟಿ ಅವರು ಪುನೀತ್ ಅವರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದರು.
ಪುನೀತ್ ಅವರ ಕಣ್ಣಿನ ಬಿಳಿ ಗುಡ್ಡೆಯಿಂದ ತೆಗೆಯಲಾದ ಸ್ಟೆಮ್ ಸೆಲ್ ಗಳನ್ನು ಸಂಗ್ರಹಿಸಿ ಲ್ಯಾಬೋರೇಟರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸ್ಟೆಮ್ ಸೆಲ್ ಗಳು ಮಲ್ಟಿಪಲ್ ಆಗುತ್ತಿವೆ. ಈ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುತ್ತಿದ್ದು, ಸ್ಟೆಮ್ ಸೆಲ್ ಗಳು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾದ ಬಳಿಕ ಸ್ಟೆಮ್ ಸೆಲ್ ನಿಂದ ದೃಷ್ಟಿ ಕಳೆದುಕೊಂಡಿದ್ದ ಅಂದರಿಗೆ ಕಸಿ ಮಾಡಬಹುದಾಗಿದೆ.
ಪಟಾಕಿ ಸಿಡಿತದಿಂದಾಗಿ ಅಥವಾ ವಂಶವಾಹಿನಿಯಿಂದಾಗಿ ಹಲವರಲ್ಲಿ ಅಂಧತ್ವ ಸಮಸ್ಯೆ ಇರುತ್ತದೆ. ಅಂತವರಿಗೆ ಸ್ಟೆಮ್ ಸೆಲ್ ಅಳವಡಿಕೆ ಮಾಡುವುದರಿಂದ ದೃಷ್ಟಿ ನೀಡಲು ಸಾಧ್ಯವಿದೆ ಹಾಗೂ ಪುನೀತ್ ರಾಜಕುಮಾರ್ ಅವರ ಸ್ಟೆಮ್ ಸೆಲ್ ಗಳನ್ನು 10 ದಿನದಲ್ಲಿ 10ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ನೀಡುವ ಪ್ರಯತ್ನ ಯಶಸ್ವಿಯಾದರೆ ರಾಜ್ಯದ ಮಟ್ಟಿಗೆ ಇದು ಹೊಸ ದಾಖಲೆಯಾಗಲಿದೆ ಎಂದು ಡಾ.ಭುಜಂಗ ಶೆಟ್ಟಿ ತಿಳಿಸಿದರು.
ತಾಳಗುಪ್ಪಕ್ಕೆ ರೈಲು ಬಂದ ಸಂಭ್ರಮ
ವಿಶ್ವವಿಖ್ಯಾತ ಯಂತ್ರಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಮೈಸೂರು ಒಡೆಯರ ದೂರದೃಷ್ಟಿಯ ಫಲವಾಗಿ ಮಲೆನಾಡಿನ ಮೂಲೆಯ ತಾಳಗುಪ್ಪ ರೈಲು ಬಂಡಿಯನ್ನ ಕಂಡಿತು.
ಶರಾವತಿ ಜಲವಿದ್ಯುತ್ ಯೋಜನೆಯ ಸಲುವಾಗಿ ತಾಳಗುಪ್ಪಕ್ಕೆ ಬಂತು ರೈಲು ಭಾಗ್ಯ. ಈಗ 80 ವರ್ಷ ಪೂರೈಸಿರುವ ಈ ರೈಲು ಮಾರ್ಗ ಮುಂಚಿನ ಸಡಗರ ಕಾಣುತ್ತಿಲ್ಲ.
ಬ್ರಿಟಿಷರ ಕಾಲದಲ್ಲಿ, ಇಲ್ಲಿನ ಅರಣ್ಯ ಸಂಪತ್ತು ನಾಗರಿಕ ಉಪಯೋಗಕ್ಕಾಗಿ ಲೂಟಿಯಾಯಿತು. ಸ್ವಾತಂತ್ರ್ಯ ನಂತರ ವಿಸ್ತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಧ್ಯ ಸಾರ್ವಜನಿಕರಿಗೆ ಬಸ್ ಪ್ರಯಾಣಕ್ಕಿಂತ ಸುಲಭ ದರದಲ್ಲಿ ಪ್ರಯಾಣ ಸಾಧ್ಯವಾಗಿದೆ. ಇಂತಹ ರೈಲುಮಾರ್ಗದ ಸುಧಾರಣೆಗೆ ಈ ಭಾಗದ ಜನತೆ ಕಾಯುತ್ತಿದೆ.
ಪುನೀತ್ ಅಗಲಿಕೆ : ರಜನಿ, ಕಂಬನಿ
ರಜನಿ: ಕಂಬನಿ
” ಪುನೀತ್ ನನ್ನ ಕಣ್ಮುಂದೆ ಬೆಳೆದ ಪ್ರೀತಿಪಾತ್ರ ಮತ್ತು ಪ್ರತಿಭಾವಂತ ಮಗು..” ಎಂದು ತಮ್ಮ ಸಂತಾಪ ಸಂದೇಶವನ್ನ ದಕ್ಷಿಣಭಾರತದ ಖ್ಯಾತ ನಟ ಮತ್ತು ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ರೀರಜನಿಕಾಂತ್ ,
ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಹಿರಿಯನಟ ರಜನಿ ಮುಂದುವರೆದು ತಮ್ಮ ಸಂದೇಶದಲ್ಲಿ
” ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ನಮ್ಮನ್ನು ಅವರು ಅಗಲಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಮಾತುಗಳೇ ಬರುತ್ತಿಲ್ಲ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ” ಎಂದು ತಮ್ಮ ಎದೆಯಾಳದ ಅಗಲಿಕೆಯ ನೋವನ್ನ ಹಂಚಿಕೊಂಡಿದ್ದಾರೆ
ಪುನೀತ್ ನಿಧನದ ಸಂರ್ಭದಲ್ಲಿ ರಜನಿಕಾಂತ್ ಕಾವೇರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಈ ಕಾರಣ ಅವರು ಪುನೀತ್ ಅವರ ಅಂತಿಮ ದರ್ಶನಕ್ಕೆ ಬರಲಾಗಿರಲಿಲ್ಲ.
ಈಗ ಚೇತರಿಸಿಕೊಂಡ ಕೂಡಲೇ ತಮ್ಮ ಸಂತಾಪವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
“ಟಾಮ್ ಅಂಡ್ ಜೆರಿ” ಇಂದು ತೆರೆಗೆ
ಇಂದಿನಿಂದ ರಾಜ್ಯಾದ್ಯಂತ ಟಾಮ್ ಅಂಡ್ ಜೆರ್ರಿ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.
‘ಟಾಮ್ ಅಂಡ್ ಜೆರ್ರಿ’ ಚಿತ್ರವು ಶೀರ್ಷಿಕೆಗೆ ತಕ್ಕಂತೆ ಕಿತ್ತಾಟ, ಗುದ್ದಾಟ ,ಮುದ್ದಾಟ ಅಂಶಗಳನ್ನು ಒಳಗೊಂಡಿದೆ.
ಗಂಟು ಮೂಟೆ ಚಿತ್ರದ ನಾಯಕರಾಗಿದ್ದ ನಿಶ್ಚಿತ್ ಕೊರೋಡಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಕಿರುತೆರೆ ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚೈತ್ರ ರಾವ್ ನಾಯಕಿ ಪಾತ್ರವಹಿಸಿದ್ದಾರೆ.
ಚಿತ್ರದಲ್ಲಿ ಖಳನಾಯಕನಾಗಿ ಸೂರ್ಯ ಶೇಖರ್ ಮಿಂಚಿದ್ದಾರೆ. ಜೈ ಜಗದೀಶ್, ತಾರಾ ಅನುರಾಧ, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು ಹೀಗೆ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಯುವ ಪ್ರತಿಭೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಸಿನಿಮಾ ನಿರ್ಮಾಣವಾಗಿದೆ. ನಮ್ಮ ಬ್ಯಾನರ್ ನಿಂದ, ಮುಂದಿನ ದಿನಗಳಲ್ಲಿ ಹಲವು ಯುವಪ್ರತಿಭೆಗಳ ಸಿನಿಮಾಗಳು ನಿರ್ಮಾಣವಾಗಲಿದೆ ಎಂದು ಟಾಮ್ ಅಂಡ್ ಜೆರ್ರಿ ಚಿತ್ರದ ನಿರ್ಮಾಪಕರಾದ ರಾಜು ಶೇರಿಗಾರ್ ತಿಳಿಸಿದ್ದಾರೆ.
ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು, ಎಲ್ಲಾ ವಯಸ್ಸಿನವರು ಕುಳಿತು ನೋಡಬಹುದಾದ ಸಿನಿಮಾವಾಗಿದೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿದೆ. ಅದರಲ್ಲಿ ‘ಹಾಯಾಗಿದೆ ಎದೆಯೊಳಗೆ’ ಎಂಬ ಹಾಡು ಜನರ ಮೆಚ್ಚುಗೆಯನ್ನು ಪಡೆದಿದೆ. ಛಾಯಾಗ್ರಹಣ ಸಂಕೇತ್ ಎಂ.ವೈ.ಎಸ್, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ಅಣ್ಣ ಮಾಡಿದ್ದಾರೆ. ನೃತ್ಯ ಸಂಯೋಜನೆಯನ್ನು ರಾಜ್ ಕಿಶೋರ್ ಅವರು ನಿರ್ವಹಿಸಿದ್ದಾರೆ.
ಇಂದು ಟಾಮ್ ಅಂಡ್ ಜೆರ್ರಿ ಚಿತ್ರವು ತೆರೆಕಂಡಿದ್ದು, ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಬಹುಬೆಳೆ ಕೃಷಿ ರೈತರ ಉದ್ಧಾರ: ಮುರುಘಾಶ್ರೀಗಳು
ಮಾನವ ಜೀವನಕ್ಕೆ ಭದ್ರತೆ ಮತ್ತು ಬದ್ದತೆ ಬೇಕು. ಕೃಷಿಯಿಂದ ಈ ಎರಡೂ ಸಾಧ್ಯವಾಗಿದ್ದು, ಪ್ರಸ್ತುತ ಯಾಂತ್ರೀಕೃತ ಬದುಕನ್ನು ಬದಲಾಯಿಸಿಕೊಂಡು ಉತ್ತಮ ಆಹಾರ ಪದ್ದತಿ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ದಿ ಇಲಾಖೆಗಳು ಶಿವಮೊಗ್ಗ ಇವರ ಸಹಯೋಗದೊಂದಿಗೆ ನವೆಂಬರ್ 12 ಮತ್ತು 13 ರಂದು ಕೃಷಿ ಮೇಳ-2021 ನ್ನು ಕಳಸಿಗೆ ಭತ್ತ ತುಂಬುವ ಮೂಲಕ ಶ್ರೀ ಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಾವ ದೇಶದಲ್ಲಿ ಕೃಷಿ ಜೀವನ ಅಭದ್ರತೆಯಿಂದ ಕೂಡಿರುತ್ತದೋ ಅಂತಹ ದೇಶದ ಭವಿಷ್ಯ ಉಜ್ವಲವಾಗಿರುವುದಿಲ್ಲ. ಕೃಷಿ ಪ್ರಧಾನ ಜೀವನದಲ್ಲಿ ನಿರಂತರ ಭದ್ರತೆಯಂತೂ ಇದ್ದೇ ಇರುತ್ತದೆ. ಆವಿಷ್ಕಾರ, ತಂತ್ರಜ್ಞಾನದಿಂದ ಆಹಾರಧಾನ್ಯ ಉತ್ಪಾದಿಸಲು ಸಾಧ್ಯವಿಲ್ಲ. ಭೂಮಿಯ ಮೂಲಕ ಆಹಾರೋತ್ಪನ್ನ ಸಾಧ್ಯ. ನಮ್ಮದು ಭೂಮಿ ಆಧಾರಿತ ಬದುಕು. ಭೂಮಿ ಅಥವಾ ಜಮೀನು ಬಿಟ್ಟರೆ ಬದುಕೇ ಇಲ್ಲ ಎಂದರು.
ರಾಗಿ-ಸಿರಿಧಾನ್ಯ ಬಳಸಿ : ರಾಗಿ ತಿಂದು ನಿರೋಗಿಯಾಗು ಎನ್ನುವ ನುಡಿಯಂತೆ ನಾವೆಲ್ಲ ದಿನಕ್ಕೆ ಒಮ್ಮೆಯಾದರೂ ರಾಗಿಯಿಂದ ತಯಾರಿಸಿದ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥ ಸೇವಿಸಬೇಕು. ನಾನು ದಿನವೂ ಒಂದೊತ್ತು ರಾಗಿ ಅಥವಾ ಸಿರಿಧಾನ್ಯ ಸೇವಿಸುತ್ತೇನೆ. ನವಣಕ್ಕಿ ಹೊನ್ನು ಅಕ್ಕಿ ಬೆಳ್ಳಿ ಎಂದರು.
ಬಹುಬೆಳೆ ಬೆಳೆಯಿರಿ : ರೈತರು ಒಂದೇ ರೀತಿಯ ಬೆಳೆಯನ್ನು, ಒಂದೇ ರೀತಿಯ ವಾಣಿಜ್ಯ ಬೆಳೆ ಬೆಳೆಯುವುದಕ್ಕಿಂತ ಬಹುಬೆಳೆ ಬೆಳೆಯಬೇಕು. ಆಗ ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ಎಲ್ಲ ರೈತರು ಬಹುಬೆಳೆ ಪದ್ದತಿಯನ್ನು ಅನುಸರಿಸುವುದು ಮುಖ್ಯ ಎಂದು ಸಲಹೆ ನೀಡಿದ ಅವರು ರೈತರ ಬೆಳೆಗೆ ಸೂಕ್ತ ಬೆಲೆ ದೊರಕದ ಕಾರಣ ಬೆಂಬಲ ಬೆಲೆ ಬೇಡುತ್ತಾರೆ. ರೈತರ ಬೆಳೆಗೆ ಉತ್ತಮ ಬೆಲೆ ಲಭಿಸುವಂತೆ ಆಗಬೇಕು. ಕೃಷಿ ವಿಶ್ವವಿದ್ಯಾಲಯಗಳು ಕೂಡ ರೈತರು ಮತ್ತು ಕೃಷಿಪರವಾಗಿ ಕೆಲಸ ಮಾಡುತ್ತಿದ್ದು, ಇಂದಿನ ಕೃಷಿ ಮೇಳದ ಮುಖಾಂತರ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಮಾದರಿ ಮತ್ತು ಆದರ್ಶಗಳನ್ನು ರೈತರು ಮತ್ತು ಜನ ಸಾಮಾನ್ಯರಿಗೆ ಬಿತ್ತರಿಸುತ್ತಿದೆ ಎಂದರು.
ವಿಶೇಷ ಆಹ್ವಾನಿತರ ಭಾಷಣವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಮರ ಆಧಾರಿತ ಕೃಷಿಕರಾದ ವಿಜಯಪುರದ ಹೆಚ್.ವಿ ಸಜ್ಜನರವರು ನಡೆಸಿಕೊಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುರಘಾ ಶ್ರೀಗಳು ಇತರೆ ಗಣ್ಯರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೇಷ್ಟ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ಪುರಸ್ಕಾರ ವಿತರಿಸಿದರು.
ಚಿಕ್ಕಮಗಳೂರಿನ ಬ್ಲಾಕ್ ಗೋಲ್ಡ್ ಲೀಗ್ ಅಧ್ಯಕ್ಷ ಕೆ.ಆರ್.ಕೇಶವ, ಹಾಗೂ ಪ್ರಗತಿಪರ ಕೃಷಿಕರಾದ ಕೆ.ಗುಣಪಾಲ್ ಕಡಂಬ ತಾಂತ್ರಿಕತೆ ಮತ್ತು ತಳಿಗಳ ಬಿಡುಗಡೆ ಮಾಡಿದರು. ವಿವಿ ಕುಲಪತಿಗಳಾದ ಡಾ.ಎಂ.ಕೆ.ನಾಯಕ್, ಶಿಕ್ಷಣ ನಿರ್ದೇಶಕ ಡಾ.ಎಂ.ಹನುಮಂತಪ್ಪ, ಕುಲಸಚಿವ ಡಾ.ಲೋಕೇಶ್.ಆರ್, ಡಾ.ಮೃತ್ಯುಂಜಯ ವಾಲಿ, ಡಾ.ದಿನೇಶ್ ಕುಮಾರ್.ಎಂ ಡಾ.ಶಿವಶಂಕರ್ ಎನ್ ಇವರು ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಿದರು.
ಮುರಘಾ ಶ್ರೀಗಳು ಕೃಷಿ ಮೇಳದ ವಿಶೇಷತೆಗಳಾದ ತಂತ್ರಜ್ಞಾನ ಉದ್ಯಾನವನ, ಭತ್ತ, ರಾಗಿ ಮತ್ತು ಮೆಕ್ಕೆಜೋಳ ತಳಿ ಮತ್ತು ತಂತ್ರಜ್ಞಾನ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಕೃಷಿ ಪರಿಕರಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ವಿವಿಧ ಇಲಾಖೆಗಳಿಂದ ಸ್ಥಾಪಿಸಲಾದ ಮಳಿಗೆಗಳನ್ನು ವೀಕ್ಷಿಸಿದರು.
ಕೃಷಿ ಮಳಿಗೆಗಳು : ಕೃಷಿ ಮೇಳದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು, ಪಶುಸಂಗೋಪನೆ, ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 36 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರೈತರ, ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕ/ಬೋಧಕೇತರ ವರ್ಗ, ವಿದ್ಯಾರ್ಥಿಗಳು, ರೈತರು ಉಪಸ್ಥಿತರಿದ್ದರು. ವಿವಿ ವಿಸ್ತರಣಾಧಿಕಾರಿ ಡಾ.ಬಿ.ಹೇಮ್ಲಾನಾಯ್ಕ ಸ್ವಾಗತಿಸಿದರು. ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ.ವಾಲಿ ವಂದಿಸಿದರು.
ವಕೀಲರ ಸೇವೆ ದೂಷಿಸಬೇಡಿ : ಸುಪ್ರೀಂ ಕೋರ್ಟ್
ನ್ಯಾಯಾಲಯದಲ್ಲಿ ಕಾನೂನು ಹೋರಾಟದಲ್ಲಿ ಸೋತ ನಂತರ ಕಕ್ಷಿದಾರರು ಕೋರುವ ಸೇವೆಗಳು ಮತ್ತು ಪರಿಹಾರದ ಕೊರತೆಗಾಗಿ ವಕೀಲರನ್ನು ಯಾವಾಗಲೂ ದೂಷಿಸಲಾಗುವುದಿಲ್ಲ. ವಕೀಲರು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮಾತ್ರ ನಿಬಂಧನೆಗಳನ್ನು ಅನ್ವಯಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರರೊಬ್ಬರು ಬಿಎಸ್ಎನ್ಎಲ್ ವಿರುದ್ಧ ದೂರು ದಾಖಲಿಸಿದ್ದರು. ಆ ಮೊಕದ್ದಮೆಯಲ್ಲಿ ಸೋತ ಮೂರು ವಕೀಲರು 15 ಲಕ್ಷ ರೂ. ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಗೆ ಅರ್ಜಿ ಹಾಕಿದ್ದರು. ಆದರೆ ಆ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಸಂದರ್ಭದಲ್ಲಿ, ವಕೀಲರು ಯಾವುದೇ ಮೊಕದ್ದಮೆಯ ಕಾನೂನು ಹೋರಾಟ ನಡೆಸಿ ಸೋತರೆ ಅವರನ್ನು ದೂಷಿಸಲಾಗುವುದಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿದೆ.
