ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ ಸೇವೆಗೆ ಒಂದಲ್ಲ ಒಂದು ದಿನ ಹತ್ತು ಪಟ್ಟು ಫಲ ದೊರೆಯುತ್ತದೆ. ಆಶ್ರಮವಾಸಿಗಳಿಗೆ ಸೇವೆ ಮಾಡುವುದರಿಂದ ದೇವರ ಸೇವೆ ಮಾಡಿದಷ್ಟು ಆತ್ಮತೃಪ್ತಿ ದೊರೆಯುತ್ತದೆ ಎಂದು ಸಮಾಜ ಸೇವಕಿ ಹೇಮಾ ಗೋಣೂರು ಹೇಳಿದರು.
ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಅಗತ್ಯ ಸಾಮಗ್ರಿಗಳೊಂದಿಗೆ ರೂ.50 ಸಾವಿರ ದೇಣಿಗೆ ನೀಡಿ ಅವರು ಮಾತನಾಡಿದರು.
ನಾವು ನೀಡುವ ದೇಣಿಗೆ ಸಾರ್ಥಕವಾಗಬೇಕು. ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಸಮಾಜಕ್ಕೆ ನಮ್ಮ ಕೈಲಾದ ಕೊಡುಗೆ ನೀಡಬೇಕು ಎಂದು ಹೇಮಾ ಗೋಣೂರು ಹೇಳಿದರು.
ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಹೇಮಾ ಗೋಣೂರು ಅವರು ಪ್ರತಿವರ್ಷ ಇದೇ ರೀತಿಯಲ್ಲಿ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ನಮ್ಮ ಆಶ್ರಮಕ್ಕೆ ನೆರವು ನೀಡುತ್ತಿದ್ದಾರೆ. ಇಂತಹ ದಾನಿಗಳ ಸಹಕಾರದಿಂದ ಆಶ್ರಮವು ಯಾವುದೇ ಕೊರತೆಯಿಲ್ಲದೆ ನಡೆಯಲು ಸಾಧ್ಯವಾಗಿದೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ಹಾಗೂ ಇನ್ನಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
ಆಶ್ರಮದ ಉಪಾಧ್ಯಕ್ಷ ಶಿವಪ್ಪಗೌಡ ಅವರು ದಾನಿಗಳನ್ನು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
