ಕೋವಿಡ್ 19ರ ಭೀತಿಯ ಹಿನ್ನೆಲೆಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಶಾಲೆಯನ್ನು ಮುಚ್ಚಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ಪ್ರಾರ್ಥಮಿಕ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಅಕ್ಟೋಬರ್ 25ರಿಂದ ಒಂದರಿಂದ ಐದನೇ ತರಗತಿಗಳ ಭೌತಿಕ ತರಗತಿಗಳನ್ನು ಆರಂಭಿಸಲು ತಜ್ಞರ ನೀಡಿದ ಸಲಹೆ ಆಧರಿಸಿ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಕೊರೋನ ಮಾರ್ಗಸೂಚಿ ಅನುಸರಿಸುತ್ತಾ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.
ಅಕ್ಟೋಬರ್ 25ರಿಂದ ಶಾಲೆಗಳು ಆರಂಭ, ಸಚಿವರ ಹೇಳಿಕೆ:
ಆಸೆ,ದ್ವೇಷ ಬಿಟ್ಟರೆ, ಧ್ಯೇಯ ಸಾಧನೆ ಸುಲಭ
ಆಸೆ, ದ್ವೇಷ ಬಿಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಖ್ಯಾತ ನಾಣ್ಯ ಸಂಗ್ರಾಹಕ ಹೆಚ್. ಖಂಡೋಬರಾವ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಖಂಡೋಬರಾವ್ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಅಮೂಲ್ಯ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮನತುಂಬಿದ ಅಭಿನಂದನೆ ಸಲ್ಲಿಸಿದ್ದಕ್ಕೆ ನನ್ನ ಕೃತಜ್ಞತೆಗಳು. ಮನುಷ್ಯ ಸಾಯುವ ಮೊದಲು ಏನಾದರೂ ಸಾಧನೆ ಮಾಡಲೇಬೇಕು. ಸಾಧನೆ ಹೇಗೆ ಮಾಡಲು ಸಾಧ್ಯ ಎಂದರೆ ಮೊದಲು ಆಸೆ ಮತ್ತು ದ್ವೇಷವನ್ನು ಬಿಡಬೇಕು. ಬಹುಶಃ ಆಸೆ ಮತ್ತು ದ್ವೇಷ ಬಿಟ್ಟಿದ್ದರೆ ರಾಮಾಯಣ ಮತ್ತು ಮಹಾಭಾರತದ ಕತೆಗಳು ನಡೆಯುತ್ತಲೇ ಇರಲಿಲ್ಲ. ಆಸೆ ಬದಲು ಜ್ಞಾನ, ದ್ವೇಷದ ಬದಲು ಸಾಧನೆ ಮಾಡಬೇಕು ಎಂದರು.
ನನ್ನ ಬಗ್ಗೆ ಅಭಿಮಾನಿಗಳು, ಗೆಳೆಯರು, ತುಂಬು ಹೃದಯದಿಂದ ಮಾತನಾಡಿದ್ದಾರೆ. ನನಗೊಂದು ಉನ್ನತ ಸ್ಥಾನ ಕೊಟ್ಟಿದ್ದಾರೆ. ಅಭಿನಂದನಾ ಸ್ಥಾನ ಕೊಟ್ಟಿದ್ದಾರೆ. ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಪರಿವಾರದವರು ಮತ್ತು ನನ್ನ ಪತ್ನಿಯ ಕಡೆಯವರು ವಿಶೇಷವಾಗಿ ಅಭಿನಂದಿಸಿದ್ದು ನನಗೆ ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.

ಆದರ್ಶದ ಬದುಕು ನಮ್ಮದಾಗಬೇಕು. ಮನುಷ್ಯ ಒಳ್ಳೆಯ ಗುಣಗಳನ್ನು ಮತ್ತು ನಿರಂತರ ಚಟುವಟಿಕೆಯನ್ನು ಬೆಲೆಸಿಕೊಂಡರೆ ಉತ್ತಮ ಜೀವನ ಮತ್ತು ಸಂಸ್ಕಾರವನ್ನು ಪಡೆಯಬಹುದಾಗಿದೆ. ನನ್ನೆಲ್ಲಾ ಸಾಧನೆಗೆ ಗೆಳೆಯರ ಜೊತೆಗೆ ನನ್ನ ಪತ್ನಿಯೂ ಮುಖ್ಯ ಎಂದ ಅವರು, ಬಯಲು ಸೀಮೆಯ ಹುಡುಗ ನಾನು ಮಲೆನಾಡ ಹುಡುಗಿ ನನ್ನ ಪತ್ನಿ. ನಾನು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳು ಹೋದ ಮೇಲೆ ಅವಳಿಗಾಗಿಯೇ ಈ ಅಮೂಲ್ಯ ಶೋಧ ನಿರ್ಮಿಸಿದೆ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿಬಾರ್ಕೂರು ಮಹಾಸಂಸ್ಥಾನದ
ಡಾ.ವಿಶ್ವ ಸಂತೋಷಭಾರತಿ ಸ್ವಾಮೀಜಿ, ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಬಾಗಲಕೋಟೆಯ ಉದ್ಯಮಿ ಮಾರುತಿ ರಾವ್ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.
ಚಂಪಕ ಸರಸ್ಸುಗೆ ಚಂದದ ರೂಪಕೊಟ್ಟ ಯಶೋಮಾರ್ಗ
ಕೆಳದಿ ಅರಸ ವೆಂಕಟಪ್ಪ ನಾಯಕರು ಚಂಪಕ ಎಂಬ ಪ್ರೇಯಸಿ ಸವಿ ನೆನಪಿಗಾಗಿ ನಿರ್ಮಿಸಿದ ಕೊಳ ಅದೆ ಇಂದಿನ ಚಂಪಕ ಸರಸ್ಸು. ಈ ಕೊಳ ಬಿರು ಬೇಸಿಗೆಯಲ್ಲಿ ತುಂಬಿ ತುಳುಕುತ್ತಿರುತ್ತದೆ. ಆನಂದಪುರಂ ಸನಿಹದಲ್ಲಿರುವ ಈ ಕೊಳ ಎತ್ತರದ ಪ್ರದೇಶದಲ್ಲಿದೆ.
ಈ ಕೊಳವು ಕಲ್ಯಾಣಿಯ ವಿನ್ಯಾಸದಲ್ಲಿದ್ದು, ಈ ಕೊಳಕ್ಕೆ ಚಂಪಕ ಸರಸ್ಸು ಅಲ್ಲದೆ ಮಹಂತೇಶ್ವರ ಮಠ, ಮಹಾಂತ ಮಠ, ಮಹಾಂತ ಮಠದ ಕೊಳ ಎಂದು ಜನಜನಿತವಾಗಿದೆ.
ಇತ್ತೀಚಿಗೆ ಈ ಕೊಳವನ್ನು ನಟ ಯಶ್ ಅವರ ನೇತೃತ್ವದಲ್ಲಿ ಯಶೋಮಾರ್ಗ ಸಂಸ್ಥೆಯ ವತಿಯಿಂದ ಸ್ವಚ್ಛ ಗೊಳಿಸುವ ಪುನರುಜ್ಜೀವನ ಯೋಜನೆ ಕೈಗೊಂಡಿದೆ. ಕೊಳದ ಮಧ್ಯದಲ್ಲಿ ಸುಂದರವಾದ ನಂದಿಮಂಟಪ, ಆ ಮಂಟಪ ತಲುಪಲು ಶಿಲಾ ಸೇತುವೆ ಇದ್ದು, ಇದು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ಆಕರ್ಷಣೆಯ ತಾಣವಾಗಿದೆ.
ಇಂತಹ ಸುಂದರ ಕೊಳವನ್ನು ಯಶೋಮಾರ್ಗ ಸಂಸ್ಥೆಯ ಹೈದರಾಬಾದ್ ನ ಫ್ರೀಡಂ ಆಯಿಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಚಂಪಕ ಸರಸ್ಸು ಅಭಿವೃದ್ಧಿಗೆ ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಿಂದೆ ಕೆರೆಗಳ ಅಭಿವೃದ್ಧಿ ಕುರಿತು ಅವರೊಂದಿಗೆ ಚರ್ಚಿಸಿದಾಗ, ನಟ ಯಶ್ ರವರಿಗೆ ಚಂಪಕ ಸರಸ್ಸು ಕೊಳದ ಬಗ್ಗೆ ಪ್ರಸ್ತಾಪಿಸಿದ್ದೆವು. ಈಗ ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ದಿ ಪಡಿಸಿರುವುದು ಸಂತಸದ ವಿಚಾರ ಎಂದರು.
ದೇವನೊಬ್ಬನೇ :ಆತನಿಗೆ ಸರಿಸಮಾನ ಯಾರಿಲ್ಲ – ಪ್ರವಾದಿ ಮಹಮ್ಮದ್ ಪೈಗಂಬರ್
ಪ್ರವಾದಿ ಮಹಮ್ಮದ್ ರವರು ಅತ್ಯಂತ ಬಡತನದಲ್ಲಿ ಬೆಳೆದವರು. ವಾಸಿಸಲು ಗುಡಿಸಲೊಂದೆ. ಅವರು ತೊಡುವ ಚರ್ಮದ ಅಂಗಿಯನ್ನು ಅವರೇ ಹೊಲಿಯುತ್ತಿದ್ದರು.
ಅವರು ಅತ್ಯಂತ ಸಾಧಾರಣ ಮತ್ತು ವಿನಮ್ರರಾಗಿದ್ದರು. ಹೀಗಾಗಿ ತಮ್ಮ ಸಹವರ್ತಿಗಳೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ಕುಟುಂಬದಲ್ಲಿ ಮನೆಗೆಲಸಕ್ಕೆ ನೆರವಾಗುತ್ತಿದ್ದರು. ಮದೀನ ಪಟ್ಟಣದಲ್ಲಿ ವಾಸಮಾಡುತ್ತಿದ್ದ ಅವರ ಜೀವಿತಾವಧಿಯಲ್ಲಿ ಇಡೀ ನಗರವೇ ಬೆಳ್ಳಿ- ಬಂಗಾರಗಳಿಂದ ತುಂಬಿತ್ತು . ಹೀಗಾಗಿ ಅವರನ್ನು “ಅರೇಬಿಯಾದ ರಾಜ “ಎಂದು ಕರೆಯುತ್ತಿದ್ದರು.
ಇವರ ಸರಳತೆಯನ್ನು ಕುರಿತು ಜಾರ್ಜ್ ಬರ್ನಾಡ್ ಶಾ ” ಇಸ್ಲಾಂ ನಲ್ಲಿರುವ ಜೀವಸತ್ವದಿಂದಾಗಿ ನಾನು ಯಾವಾಗಲೂ ಅದನ್ನು ಗೌರವಾನ್ವಿತ ಸ್ಥಾನದಲ್ಲೇ ಕಾಣುತ್ತಿರುವೆನು” ಎಂದಿದ್ದಾರೆ. ಮಹಾತ್ಮ ಗಾಂಧೀಜಿಯವರು “ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದ ರಹಿತವಾದ ಪ್ರಭುತ್ವವನ್ನು ಸ್ಥಾಪಿಸಿದರು. ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯ ಬಯಸಿದ್ದೆ…. ಅಂದಿನ ಜೀವನರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟಿದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ನಿರಾಡಂಬರತೆ , ಪರಿಪೂರ್ಣ ನಿಷ್ಕಪಟತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ನನ್ನ ಸ್ನೇಹಿತರು ಮತ್ತು ಸಹವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತ ಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಮತ್ತು ವಾಸ್ತವತೆಯನ್ನು ನಾನು ಚೆನ್ನಾಗಿ ಮನದಟ್ಟು ಮಾಡಿಕೊಂಡೆ. ಇವುಗಳಾದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗ ವಾಗಿರಲಿಲ್ಲ” ಎಂದಿದ್ದಾರೆ.
ಮಹಾತ್ಮ ಗಾಂಧೀಜಿಯವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ತಾವು ತಿಳಿದುಕೊಂಡ ಸಂಗತಿಯ ಬಗ್ಗೆ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹೀಗೆ ಇನ್ನೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳು , ಲೇಖಕರು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳ ಪ್ರಭಾವಕ್ಕೆ ಒಳಗಾಗಿದ್ದಾರೆ.
ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಪ್ರೀತಿ ಮತ್ತು ವಾತ್ಸಲ್ಯಭರಿತ ಭಾವನೆ ನಮ್ಮೆಲ್ಲರಿಗೂ ಮಾದರಿ. ಎಲ್ಲಾ ಜನರನ್ನು ಒಬ್ಬನೇ ದೇವನು ಸೃಷ್ಟಿಸಿದ್ದಾನೆ ಎಂದು ಭೋದಿಸಿ, ಎಲ್ಲರನ್ನೂ ಒಂದೇ ಕುಟುಂಬದ ಸದಸ್ಯರ ಹಾಗೆ ಕಾಣುತ್ತಿದ್ದ ಅವರ ಸ್ವಭಾವ ಮಾನವರ ಕೌಟುಂಬಿಕ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವನ್ನು ನೀಡುವುದರಲ್ಲಿ ಸಂದೇಹವಿಲ್ಲ.
ಅಕ್ಕನ ಸಾಧನೆಯ ಬಗ್ಗೆ ತಮ್ಮನ ಪ್ರೀತಿಯ ಬರಹ
ಸಾಧನೆಯ ಹಾದಿಯಲ್ಲಿರುವ ಮಹಿಳೆಯ ಯಶಸ್ಸಿನ ಬಗ್ಗೆ ಕುಟುಂಬದ ಸದಸ್ಯರು ಬರೆಯುವುದು ಸಾಮಾನ್ಯದ ಸಂಗತಿ.
ಆದರೆ ಎಲ್ಲಾ ಮಮಕಾರಗಳನ್ನು ಮೀರಿ ಅಕ್ಕನ ಸಾಧನೆಯ ಮೆಟ್ಟಿಲುಗಳನ್ನು ಮನತುಂಬಿ ರಂಗೋಲಿ ಇಟ್ಟಂತೆ ಬಿಡಿಸಿಟ್ಟಿದ್ದಾರೆ ಸಹೋದರ ರಾಮಚಂದ್ರ ನಾಡಿಗ್.
ಬೆಳಗಾವಿಯ ಮರಾಠಾ ಲೋಕಮಾನ್ಯ ಸೊಸೈಟಿಯವರು ನವರಾತ್ರಿ ಅಂಗವಾಗಿ ನೀಡುವ ‘ಸ್ತ್ರೀಶಕ್ತಿ’ ಪ್ರಶಸ್ತಿಯನ್ನು ಈಬಾರಿ ನನ್ನ ಅಕ್ಕ ವತ್ಸಲಾ ಇವಳಿಗೆ ನೀಡಿದ್ದಾರೆ.
ಅಕ್ಕನ ಸಾಧನೆಯ ಪಯಣವನ್ನು ರಾಮಚಂದ್ರ ನಾಡಿಗ್ ಅವರು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿರುವ ಬಗೆ ಹೀಗಿದೆ……,
ಉದ್ಯಮದಲ್ಲಿ ಯಾವ ಮಹಿಳೆ ತನ್ನನ್ನು ತೊಡಗಿಸಿಕೊಂಡು ಯಶಸ್ವಿ ಆಗಿರುತ್ತರೋ, ಸಾಧನೆ ಮಾಡಿರುತ್ತಾರೆಯೋ ಅವರಿಗೆ ಲೋಕಮಾನ್ಯ ಸೊಸೈಟಿಯು ಈ ಪ್ರಶಸ್ತಿಯನ್ನು ನೀಡುತ್ತದೆ.
ನನ್ನ ನಾಲ್ಕು ಜನ ಅಕ್ಕಂದಿರಲ್ಲಿ ವತ್ಸಲಾ ನಾಲ್ಕನೆಯವಳು. ಓದಿನಲ್ಲಿ ಸ್ವಲ್ಪ ಹಿಂದೆ ಇದ್ದರೂ, ವ್ಯವಹಾರದ ಲಕ್ಷಣಗಳು ಮೊದಲಿನಿಂದಲೇ ಇದ್ದವು.

ಟೈಪ್ ರೈಟಿಂಗ್ ಕಲಿತಳು, ಭರತನಾಟ್ಯ ಕಲಿತಳು ಯಾವುದೂ ಕೈಹಿಡಿಯಲಿಲ್ಲ.
ಈಕೆ ಒಳ್ಳೆ ನೃತ್ಯಗಾತಿ. ಅದನ್ನೇ ಮುಂದುವರಿಸಿದ್ದರೆ ನೃತ್ಯದಲ್ಲಿ ಒಳ್ಳೆಯ ಭವಿಷ್ಯವಿತ್ತು. ಆದರೆ ಮನೆಯಲ್ಲಿನ ಹಲವು ಸಮಸ್ಯೆಗಳು ಇದಕ್ಕೆ ಆಸ್ಪದ ಕೊಡಲಿಲ್ಲ.
ಕೆಲ ವರ್ಷಗಳ ಕಾಲ ಹಳ್ಳಿಯ ಮನೆಯಲ್ಲಿ ಕುಳಿತು ಬಟ್ಟೆ ಹೊಲಿದು ಅದರಲ್ಲೆ ಉತ್ತಮ ಹಣ ಸಂಪಾದಿಸುತ್ತಿದ್ದಳು.
ಕಡೆಗೆ ಬೆಳಗಾವಿಯ ವಿಲಾಸ್ ತಿನೈಕರ್ ಜೊತೆ ಮದುವೆಯಾಯಿತು. ಭಾವ ವಿಲಾಸ್ ಅವರ ಬಗ್ಗೆ ಹಾಗೂ ಅವರ ಉದ್ಯಮದ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ.
ಆಗ ನಮ್ಮ ಭಾವ ನಡೆಸುತ್ತ ಇದ್ದದ್ದು ಸಣ್ಣ ಹೋಟೆಲ್. ಬೆಳಗಾವಿಯ ಭಾಗ್ಯನಗರದಲ್ಲಿನ ಕೆ. ಎಲ್.ಇ ಸೊಸೈಟಿಯ ಹಾಸ್ಟೆಲ್ನಲ್ಲಿ ಹೋಟೆಲ್ ನಡೆಸುತ್ತಿದ್ದರು.
ವಿಲಾಸ್ ಈ ಹೋಟೆಲ್ ಜೊತೆ ಮತ್ತೊಂದು ಹೋಟೆಲ್ ಉದ್ಯಮಕ್ಕೆ ಕೈ ಹಾಕಿದರು. ವತ್ಸಲಾ ಇಲ್ಲಿನ ವ್ಯವಹಾರ ನೋಡಿಕೊಂಡರೆ, ಭಾವ ಮತ್ತೊಂದು ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು.
ಕಡೆಗೆ ಒಮ್ಮೆ ಇದ್ದಬದ್ದ ಬಂಗಾರವನ್ನೆಲ್ಲ ಮಾರಿ, ಬ್ಯಾಂಕಿನಿಂದ ಒಂದಿಷ್ಟು ಲೋನ್ ಮಾಡಿ ಭಾಗ್ಯನಗರದಲ್ಲಿ ಒಂದು ಮಳಿಗೆಯನ್ನು ಖರೀದಿ ಮಾಡಿದರು. ಅದಕ್ಕೆ “ಪದ್ಮಶ್ರೀ ಹೋಟೆಲ್” ಎಂದು ನಾಮಕರಣ ಮಾಡಿದರು.
ಎರಡರ ಜೊತೆ ಮೂರನೆಯದಾಗಿ ಈ ಹೋಟೆಲ್ ಆರಂಭವಾಯಿತು.
ಅವೆರಡು ಕಾಲೇಜ್ ಕ್ಯಾಂಟೀನ್ ಆದರೆ, ಇದು ಮಾತ್ರ ಯಾರ ಆಧೀನದಲ್ಲೂ ಇಲ್ಲದೆ ಸ್ವತಂತ್ರವಾಗಿ ನಡೆಯುವಂತಾಯಿತು. ಪದ್ಮಶ್ರೀ ಹೋಟೆಲ್ನಲ್ಲಿ ಎರಡು ಹೊತ್ತು ಊಟ ಮಾತ್ರ.
ಕಡೆಗೆ ಎರಡು ಹಾಸ್ಟೆಲ್ ಕ್ಯಾಂಟೀನ್ ಗಳನ್ನು ಬಿಟ್ಟು ಪದ್ಮಶ್ರೀ ಹೋಟೆಲ್ ಸಮೀಪವೇ ಮತ್ತೊಂದು ಜಾಗವನ್ನು ಲೀಸ್ ಗೆ ಪಡೆದು ಎರಡು ವರ್ಷದ ಹಿಂದೆ ಮತ್ತೊಂದು ಹೋಟೆಲ್ ಆರಂಭವಾಗಿದೆ.
ಇಲ್ಲಿ ಊಟ ಇಲ್ಲ ತಿಂಡಿ ಮಾತ್ರ. ಇದರ ನಡುವೆ ಮದುವೆ, ಬರ್ತಡೆ ಪಾರ್ಟಿ ಮತ್ತಿತರ ಶುಭಕಾರ್ಯಗಳಿಗೆ ಕ್ಯಾಟರಿಂಗ್ ಸೇವೆ ಕೂಡಾ ಇದೆ. ಭಾವನವರ ಎಲ್ಲಾ ಸಾಧನೆ ಹಿಂದೆ ಇರುವುದು ಅಕ್ಕ ವತ್ಸಲಾ.
ಹಬ್ಬ-ಹರಿದಿನಗಳಲ್ಲಿ ಊಟದಲ್ಲಿ ಏನಾದರೂ ವಿಶೇಷತೆ, ಅಡುಗೆ, ತಿಂಡಿಯಲ್ಲಿ ಏನಾದರೂ ವಿಶೇಷತೆ ಹೀಗೆ ಹಲವು ಹೊಸ ಪ್ರಯೋಗಗಳನ್ನು ಮಾಡಿ ಗ್ರಾಹಕರ ಮೆಚ್ಚುಗೆಗೆ ಪದ್ಮಶ್ರೀ ಹೋಟೆಲ್ ಪಾತ್ರವಾಗಿದೆ ಎಂದರೆ ಅದಕ್ಕೆ ಕಾರಣ ವತ್ಸಲಾ.
ತವರು ಮನೆಯಲ್ಲಿ ನಮ್ಮಮ್ಮ ಮಾಡುತ್ತಿದ್ದ ಚಟ್ನಿ, ಪಲ್ಯಗಳನ್ನು ಹೋಟೆಲ್ ನಲ್ಲಿ ಪ್ರಯೋಗಿಸಿದ್ದು ಗ್ರಾಹಕರಿಗೆ ಬಹಳ ಇಷ್ಟವಾಗಿದೆ.
ಅದಕ್ಕೆ ಹಿರಿಯರು ಹೇಳಿದ ಮಾತು… ಹೆಣ್ಣು ಸಂಸಾರದ ಕಣ್ಣು.
ಶ್ರೀಮತಿ ವತ್ಸಲಾ ಅವರು ಇನ್ನೂ ಹೆಚ್ಚಿನದನ್ನು ಸಾಧಿಸಲಿ ….
ಶುಭಾಶಯಗಳು.
ಭೀಕರ ಮಳೆಗೆ ತುತ್ತಾದ ಕೇರಳಕ್ಕೆ, ಕೇಂದ್ರದ ಸಾಂತ್ವನ:
ಕೇರಳದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೇರಳ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
ಕೇರಳದ ಇಡುಕಿ ಜಲಾಶಯದಲ್ಲಿ ನೀರಿನ ಮಟ್ಟ 2396.90 ಅಡಿಯಿದ್ದು ಜನರ ಸುರಕ್ಷತೆಗಾಗಿ ಜಿಲ್ಲಾಡಳಿತವು ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ. ಶಬರಿಗಿರಿ ಯೋಜನೆಯ ಭಾಗಿಯಾಗಿರುವ ಕಕ್ಕಿ ಆಣೆಕಟ್ಟಿನ ಶಟರ್ ಗಳನ್ನು ತೆರೆಯಲಾಗಿದ್ದು, ಪಂಪ ನದಿಯ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಶಬರಿಮಲೆ ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ನೀರು ಬಿಡುವ ನಿರ್ಧಾರವು ಬೇಸರದ ಸಂಗತಿಯಾಗಿದೆ. ಈ ಭಾರೀ ಕೇರಳದಲ್ಲಿ ಧಾರಾಕಾರ ಮಳೆಯಿಂದಾಗಿ ಜನರ ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿಯಾದ ಮಳೆಯ ಕಾರಣ ಅನೇಕ ಕಡೆ ಭೂಕುಸಿತದಿಂದ ಅನೇಕರು ಸಾವಿಗೀಡಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ನಿಮ್ಮ ರಕ್ಷಣೆಗಾಗಿ ನಾವಿದ್ದೇವೆ ಎಂದು ಮಾನ್ಯ ಪ್ರಧಾನ ಮಂತ್ರಿ,ಹಾಗೂ ಗೃಹ ಸಚಿವರು ತಮ್ಮ ಕಳಕಳಿಯನ್ನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದರು.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇರಳದ ಮುಖ್ಯಮಂತ್ರಿ ಜೊತೆ ,ಭೂ ಕುಸಿತ ಮತ್ತು ಮಳೆ ವಿಚಾರದ ಬಗ್ಗೆ ಮಾತು ಕತೆ ನಡೆಸಿದ್ದೇನೆ, ಸಂಬಂಧ ಪಟ್ಟ ರಕ್ಷಣಾ ಇಲಾಖೆಯು ಕಾರ್ಯಚರಣೆ ನಡೆಸುತ್ತಿದೆ. ಆರೋಗ್ಯ ಇಲಾಖೆಯು ಗಾಯಾಳುಗಳಿಗೆ ಚಿಕಿತ್ಸೆ ಕಾರ್ಯವನ್ನು ಮಾಡುತ್ತಿದೆ. ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆಂದು ಮಾನ್ಯ ಪ್ರಧಾನಿ ಮೋದಿಯವರು ತಮ್ಮ ಅಭಿಪ್ರಾಯಗಳನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹಾಗೆ ಕೇಂದ್ರ ಗೃಹಸಚಿವ ಅಮಿತ್ ಶಾ ರವರು ಭಾರೀ ಮಳೆ ಹಾಗೂ ನೆರೆ ಉಂಟಾಗಿರುವ ಕೇರಳದ ಪರಿಸ್ಥಿತಿಯ ಬಗ್ಗೆ ನಾವು ನಿರಂತರವಾಗಿ ಪರಿಶೀಲನೆ ನಡೆಸಿದ್ದೇವೆ, ಜನರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡಲು ಕೇಂದ್ರ ಸರ್ಕಾರವು ಸಿದ್ಧವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ ಡಿಆರ್ ಎಫ್ ತಂಡವನ್ನು ಕಳುಹಿಸಲಾಗಿದೆ. ಜನರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಪ್ರವಾಹ ಪೀಡಿತರಿಗೆ ಧೈರ್ಯತುಂಬುವ ನುಡಿಗಳನ್ನ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ : ಬಿಡುಗಡೆ
ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ಇನ್ಸ್ಟಾಗ್ರಾಮ್ ನಲ್ಲಿ ರೋಹಿತ್ ಶರ್ಮ ಅವರೊಂದಿಗೆ ಲೈವ್ ಚಾಟ್ ನಲ್ಲಿ, ಯುವರಾಜ್ ಅವರು ಯುಜ್ವೇಂದ್ರ ಚಹಲ್ ಅವರನ್ನು ಗುರಿಯಾಗಿಸಿಕೊಂಡು ಪರಿಶಿಷ್ಟ ಜಾತಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಯುವರಾಜ್ ಸಿಂಗ್ ಅವರಿಗೆ ತಕ್ಷಣ ಜಾಮೀನು ನೀಡಿ ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ. ಹೈಕೋರ್ಟ್ ಆದೇಶದ ನಂತರ ಯುವರಾಜ್ ತನ್ನ ವಕೀಲರೊಂದಿಗೆ ಹಿಸಾರ್ ತಲುಪಿದರು.
ಕೆಲವು ಗಂಟೆಗಳ ವಿಚಾರಣೆಯ ನಂತರ ಯುವರಾಜ್ ಸಿಂಗ್ ಚಂಡಿಗಢಕ್ಕೆ ಹೋದರು ಎಂದು ಮೂಲಗಳು ತಿಳಿಸಿವೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 324 ಪ್ರೊಬೆಷನರಿ ಅಧಿಕಾರಿ ( PO) ಹುದ್ದೆಗಳ ನೇಮಕಾತಿ ಸೇರಿದಂತೆ 6,328 ಹುದ್ದೆಗಳಿವೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಅರ್ಜಿಯಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 25 ರವರೆಗೆ ಕಾಲಾವಕಾಶ ನೀಡಲಾಗಿದೆ.
ಪರಿಶಿಷ್ಟ ಜಾತಿ (SC ) 162
ಇತರೆ ಹಿಂದುಳಿದ ವರ್ಗಗಳಿಗೆ ( OBC) 560
ಆರ್ಥಿಕವಾಗಿ ದುರ್ಬಲ ವಿಭಾಗ (EWS ) 200
ಸಾಮಾನ್ಯ ವರ್ಗಕ್ಕೆ 810 ಹುದ್ದೆಗಳಿವೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು. ತಮ್ಮ ಪದವಿಯ ಅಂತಿಮ ವರ್ಷ ಅಥವಾ ಸೆಮಿಸ್ಟರ್ ನಲ್ಲಿರುವವರು ಸಂದರ್ಶನಕ್ಕೆ ಕರೆದರೆ, ಅವರು ಡಿಸೆಂಬರ್ 31, 2021 ರಂದು ಅಥವಾ ಅದಕ್ಕೂ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಕ್ಕೆ ಪುರಾವೆಯನ್ನು ಹಾಜರುಪಡಿಸಬೇಕಾಗುತ್ತದೆ ಎಂಬ ಷರತ್ತಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದು.
ಇಂಟಿಗ್ರೇಟೆಡ್ ಡುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಐಡಿಡಿ ಉತ್ತಿರ್ಣ ಗೊಳಿಸಿರುವ ದಿನಾಂಕ ಡಿಸೆಂಬರ್ 31, 2021 ರಂದು ಅಥವಾ ಅದಕ್ಕೂ ಮೊದಲು ಇರಬೇಕು ಎಂಬುದನ್ನು ಗಮನಿಸಬೇಕು.
ವಯೋಮಿತಿ
ಅಭ್ಯರ್ಥಿಯು ಏಪ್ರಿಲ್ 1, 2021 ರಂತೆ 21 ವರ್ಷಕ್ಕಿಂತ ಕಡಿಮೆ ಇರಬಾರದು.
30 ವರ್ಷಗಳಿಗಿಂತ ಮೇಲ್ಪಟ್ಟವರಾಗಿರಬಾರದು.
ಎಸ್ಸಿ, ಎಸ್ಟಿ, ಓಬಿಸಿ, ಪಿಡಬ್ಲ್ಯೂಡಿ, ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇದೆ.
ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆಯನ್ನು ಪ್ರಿಲಿಮ್ಸ್, ಮೈನ್ಸ್, ಮತ್ತು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ. ಫೀಲಿಮ್ಸ್ ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಕರೆಯಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ ಮತ್ತು ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು www.sbi.co.in ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮತ್ತು ಅಧಿಸೂಚನೆ ಸಂಬಂಧಿಸಿದಂತೆ ವಿವರವನ್ನು ಪಡೆಯಬಹುದು.
ಗತಿ ಶಕ್ತಿ : ದೇಶದ ಅಭ್ಯುದಯಕ್ಕೆ ಅಡಿಪಾಯ
ದುರ್ಗಾಷ್ಟಮಿಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯ ಪ್ರಗತಿ ಮೈದಾನದ ನ್ಯೂ ಎಕ್ಸಿಬಿಶನ್ ಕಾಂಪ್ಲೆಕ್ಸ್ ನಲ್ಲಿ ಗತಿ ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು.
ಪ್ರಧಾನಿಯವರು ತಮ್ಮ ಉದ್ಘಾಟನಾ ನುಡಿಗಳನ್ನಾಡುತ್ತ “ಶಕ್ತಿ ದೇವತೆಯ ಆರಾಧನೆಯಂದು ಆರಂಭಗೊಂಡ ಗತಿ ಶಕ್ತಿ ಯೋಜನೆಯು ಅಷ್ಟೇ ಹೊಸ ಶಕ್ತಿಯನ್ನು ಪಡೆದುಕೊಂಡಿದೆ. ಇಂತಹ ಪವಿತ್ರವಾದ ದಿನ ಆರಂಭಗೊಂಡಿರುವ ಯೋಜನೆಯಿಂದ ದೇಶವು ಪ್ರಗತಿ ಹೊಂದುವುದರಲ್ಲಿ ಸಂದೇಹವಿಲ್ಲ. ಆತ್ಮ ನಿರ್ಭರ ಭಾರತ ಯೋಜನೆಯಿಂದ ಮುಂದಿನ 25 ವರ್ಷಗಳ ಪ್ರಗತಿಯ ಬೆಳವಣಿಗೆಗೆ ಇದು ಅಡಿಪಾಯ ಆಗಿದೆ” ಎಂದರು.
21ನೇ ಶತಮಾನದ ನವ ಭಾರತಕ್ಕೆ ಗತಿ ಶಕ್ತಿಯು ಒಂದು ದಿಕ್ಸೂಚಿ ಯೋಜನೆಯಾಗಿದೆ. ಭಾರತೀಯ ಉದ್ಯಮಗಳು, ವ್ಯವಹಾರ, ಭಾರತೀಯ ಕೈಗಾರಿಕಾ ಉತ್ಪಾದಕರು, ಕೃಷಿಕರು, ಮತ್ತು ಭಾರತೀಯ ಪ್ರಜೆಗಳ ಹಿತದೃಷ್ಟಿಯನ್ನು ಈ ಯೋಜನೆಯು ಒಳಗೊಂಡಿದೆ. ಈ ಎಲ್ಲ ಸಮುದಾಯದ ಅಭಿವೃದ್ಧಿಗೆ ಅಡ್ಡಗಾಲಾಗಿರುವ ಸಮಸ್ಯೆಗಳನ್ನು ಬಗೆಹರಿಸುವುದು ಗತಿ ಶಕ್ತಿ ಯೋಜನೆ ಪರಮೋದ್ದೇಶ.
ಇಲ್ಲಿಯವರೆಗೆ ನಡೆದುಬಂದ ಪ್ರಗತಿಯ ಬೆಳವಣಿಗೆಯು ವಿಶ್ವಾಸದ ಕೊರತೆಯಿಂದ ನಿಧಾನಗತಿಯಲ್ಲಿತ್ತು. ಪ್ರಗತಿಯು ತೀವ್ರ ವೇಗ ಪಡೆದುಕೊಳ್ಳಬೇಕು ಮತ್ತು ಸ್ವಯಂ ಉತ್ಸಾಹ, ಸಂಘಟಿತ ಪ್ರಯತ್ನ ವಾಗಿರಬೇಕು. 21ನೇ ಶತಮಾನದ ಭಾರತವು ಹಳೆಯ ವ್ಯವಸ್ಥೆ ಮತ್ತು ಅಭ್ಯಾಸಗಳಿಂದ ವಿಮುಖವಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟರು.
ಪ್ರಧಾನಮಂತ್ರಿ ಅವರು ಹೇಳಿದ ಪ್ರಗತಿ ಮಂತ್ರ ಹೀಗಿವೆ : ಪ್ರಗತಿಗಾಗಿ ಕೆಲಸ, ಸಂಪತ್ತಿಗಾಗಿ ಪ್ರಗತಿ, ಪ್ರಗತಿಗಾಗಿ ಯೋಜನೆ, ಮತ್ತು ಪ್ರಗತಿಗಾಗಿ ಎಲ್ಲಾ ಆದ್ಯತೆ.
ಮುಂದುವರಿದು ಮಾತನಾಡಿದ ಪ್ರಧಾನಿ ಶ್ರೀ ಮೋದಿಯವರು ನಾವು ಕಾರ್ಯ ಪ್ರವೃತ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದು, ಅವುಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಿದ್ದೆವೆ.ಆದರೆ ಎಲ್ಲಾ ಯೋಜನೆಗಳನ್ನು ನಿಗದಿತ ಅವಧಿಗಿಂತ ಮುಂಚೆ ಮುಗಿಸುವಲ್ಲಿ ಪ್ರಯತ್ನಶೀಲರಾಗಿದ್ದೆವೆ ಎಂದರು.
ಗತಿ ಶಕ್ತಿಯು ಬೃಹತ್ತ್ ಯೋಜನೆಯಾಗಿದ್ದು, ಮಂಜೂರಾಗಿರುವ ಅಂದಾಜು ವೆಚ್ಚವನ್ನು ಸಾರ್ಥಕವಾಗಿ ಬಳಸುವುದೇ ಆಗಿದೆ. ತಾವು 2014ರಲ್ಲಿ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗ ಇಂತಹ ತಡೆ ಗೊಂಡಿದ್ದ ನೂರಾರು ಯೋಜನೆಗಳನ್ನು ಪರಿಶೀಲಿಸಲಾಯಿತು. ಎಲ್ಲ ಯೋಜನೆಗಳನ್ನು ಒಂದೇ ವೇದಿಕೆಗೆ ತಂದು ಅಡೆತಡೆಗಳನ್ನು ದೂರ ಮಾಡಲು ಪ್ರಯತ್ನಿಸಲಾಯಿತು. ಈ ಎಲ್ಲಾ ಯೋಜನೆಗಳನ್ನು ಯಶಸ್ವಿಗೊಳಿಸಲು ಸರ್ವಪ್ರಯತ್ನಗಳನ್ನು ತಮ್ಮ ಸರ್ಕಾರ ಕೈಗೊಂಡಿರುವ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ಶ್ರೀ ಪಿಯುಷ್ ಗೊಯಲ್, ಶ್ರೀ ಹರ್ದೀಪ್ ಸಿಂಘ್ ಪುರಿ, ಶ್ರೀ ಸರ್ಭಾನಂದ ಸೊನೊವಾಲ್, ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾ, ಶ್ರೀ ಅಶ್ವಿನಿ ವೈಷ್ಣವ್, ಮತ್ತು ಆರ್.ಕೆ. ಸಿಂಗ್ ಮುಂತಾದ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.
ಐಪಿಎಲ್-14 ಕ್ರಿಕೆಟ್ ಪುರಸ್ಕಾರ
ಐಪಿಎಲ್ 2021 ಸೀಸನ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲ ಆಟಗಾರರು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ನಲ್ಲಿ CSK ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಫೈನಲ್ ನಲ್ಲಿ ಮಿಂಚಿದ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಫಾಫ್ ಡುಪ್ಲೆಸಿಸ್ ಪಡೆದಿದ್ದಾರೆ. CSK ತಂಡದ ರುತುರಾಜ್ ಗಾಯಕ್ವಾಡ್ ಅವರಿಗೆ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ಲಭಿಸಿದೆ. ಹಾಗೆಯೇ ರಾಜಸ್ತಾನ ರಾಯಲ್ಸ್ ತಂಡಕ್ಕೆ ಕ್ರೀಡಾಸ್ಫೂರ್ತಿಯಿಂದ ಆಡಿದ ತಂಡಕ್ಕೆ ನೀಡುವ ಫೇರ್ ಪ್ರಶಸ್ತಿ ಪಡೆದಿದೆ. ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿ ಪಂಜಾಬ್ ಕಿಂಗ್ಸ್ ತಂಡದ ರವಿ ಬಿಷ್ಣೋಯ್ ಗೆ ಲಭಿಸಿದೆ. ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿ KKR ತಂಡದ ವೆಂಕಟೇಶ್ ಅಯ್ಯರ್ ಪಡೆದಿದ್ದಾರೆ. ಗೇಮ್ ಚೇಂಜರ್ ಆಫ್ ದಿ ಸೀಸನ್ -RCB ಯ ಹರ್ಷಲ್ ಪಟೇಲ್ ಅವರಿಗೆ ಸಿಕ್ಕಿದೆ. ಸೀಸನ್ನಲ್ಲಿ 635 ರನ್ ಬಾರಿಸಿದ ರುತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಪಡೆದಿದ್ದಾರೆ. RCB ತಂಡದ ಬಾಲರ್ ಹರ್ಷಲ್ ಪಟೇಲ್ 32 ವಿಕೆಟ್ ಗಳನ್ನು ಪಡೆದು ಪರ್ಪಲ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೀಸನ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಿಗೆ ನೀಡುವ ಪ್ರಶಸ್ತಿ 30 ಸಿಕ್ಸ್ ಬಾರಿಸಿದ K.L. ರಾಹುಲ್ ಅವರ ಪಾಲಾಗಿದೆ. ಒಟ್ಟಾರೆ ಐಪಿಎಲ್ 2021ರ ಆವೃತ್ತಿ ಮುಗಿದಿದ್ದರೂ ಕೂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೆಲವು ಆಟಗಾರರು ಪಡೆದಿರುವ ವಿಶೇಷ ಪ್ರಶಸ್ತಿಗಳಿಂದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.
