Tuesday, March 31, 2026
Tuesday, March 31, 2026
Home Blog Page 1355

ಗಾಡಿಕೊಪ್ಪ ಕೆರೆ ಅಭಿವೃದ್ಧಿ ಮಾಡಲು ಭೂಮಿ ಸಂಸ್ಥೆ ಸಿದ್ಧ

0

ಶಿವಮೊಗ್ಗ ತಾಲೂಕು ಕಸಬಾ ಹೋಬಳಿ ಗಾಡಿಕೊಪ್ಪ ಗ್ರಾಮದ ಸರ್ವೆ ನಂಬರ್ 15ರಲ್ಲಿ ಬರುವ ಕೆರೆಯನ್ನು ಸರ್ವೇ ಮಾಡಿ ಕೆರೆ ಅಭಿವೃದ್ಧಿ ಪಡಿಸಲು ಭೂಮಿ ಸಂಸ್ಥೆಗೆ ವಹಿಸಿಕೊಡುವಂತೆ, ಈ ಕೆರೆಯ ಅಭಿವೃದ್ಧಿ ಪಡಿಸಲು ಭೂಮಿ ಸಂಸ್ಥೆಗೆ ಅನುಮತಿ ನೀಡಿದಲ್ಲಿ, ಭೂಮಿ ಸಂಸ್ಥೆಯ ಜೊತೆಗೆ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸಿವೆ, ಸದರಿ ಕೆರೆ ಅಭಿವೃದ್ಧಿ ಪಡಿಸಿದಲ್ಲಿ ಈ ಭಾಗದ ಸಾರ್ವಜನಿಕರಿಗೆ, ಜಾನುವಾರುಗಳಿಗೆ ಬೇಸಿಗೆ ಸಂದರ್ಭದಲ್ಲೂ ನೀರು ಒದಗಿಸಬಹುದಾಗಿದೆ. ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಈ ಕೆರೆಯ ಹೂಳು ತೆಗೆಸುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಹಾಗೆಯೇ ಕೆರೆ ಏರಿಯನ್ನು ಅಭಿವೃದ್ಧಿ ಪಡಿಸಿದಲ್ಲಿ ಸಾರ್ವಜನಿಕರು ವಾಯು ವಿಹಾರ ನಡೆಸಲು ಅನುಕೂಲವಾಗಲಿದೆ. ಕೆರೆ ಏರಿ ಸುತ್ತ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಮಣ್ಣು ಸವಕಳಿ ತಪ್ಪಿಸಬಹುದು. ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗುತ್ತಿರುವ ಕೆರೆಯನ್ನು
ಸಂರಕ್ಷಿಸಲು ಭೂಮಿ ಸಂಸ್ಥೆ ಮುಂದಾಗಿದ್ದು, ಜಿಲ್ಲಾಡಳಿತ ಭೂಮಿ ಸಂಸ್ಥೆಗೆ ಕೆರೆ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ .

ಈ ಸಂದರ್ಭದಲ್ಲಿ ಭೂಮಿ ಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ಕಾಮಧೇನು ಗೋ ಶಾಲೆಯ ಅರ್ ತೇಜೇಶ್, ಜೈ ಸಂಸ್ಥೆ ಅಧ್ಯಕ್ಷ ಯತೀಶ್, ಪುಟ್ಟಪ್ಪ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಶಿವಕುಮಾರ್ ಕೆ ಪಿ, ಭೂಮಿ ಸಂಸ್ಥೆಯ ಸದಸ್ಯರು, ಪರಿಸರ ಪ್ರೇಮಿಗಳು ಇದ್ದರು.

ನೀರಿನ ಕಂದಾಯ ಏರಿಕೆ ಮಾಡಿದ ಶಿವಮೊಗ್ಗ ನಗರ ಪಾಲಿಕೆ

0

ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾದ ಪ್ರಯುಕ್ತ ನೀರಿನ ದರವನ್ನು ಕರ್ನಾಟಕ ಸರ್ಕಾರದ ಆದೇಶ ಹಾಗೂ ಮಹಾನಗರಪಾಲಿಕೆಯ ನಿರ್ದೇಶನದಂತೆ ಪರಿಷ್ಕರಿಸಲಾಗಿದೆ.

ಪಾಲಿಕೆಗಳಿಗೆ ಅನ್ವಯಿಸುವ ದರದಂತೆ ಮೀಟರ್ ರಹಿತ ಸಂಪರ್ಕಗಳಿಗೆ ಕನಿಷ್ಟ ದರ ಪ್ರತಿ ತಿಂಗಳು ಗೃಹಬಳಕೆ ಸಂಪರ್ಕಕ್ಕೆ ರೂ.175, ಗೃಹೇತರ ಸಂಪರ್ಕಕ್ಕೆ ರೂ. 350ಕ್ಕೆ ನಿಗದಿಪಡಿಸಲಾಗಿರುತ್ತದೆ.

2022-23 ನೇ ಸಾಲಿನಿಂದ ನೀರಿನ ಕಂದಾಯವನ್ನು ಪರಿಷ್ಕೃತ ದರದಂತೆ ಪಾವತಿಸಲು ಹಾಗೂ ಈಗಾಗಲೇ 2022-23 ನೇ ಸಾಲಿನ ನೀರಿನ ಕಂದಾಯವನ್ನು ಪಾವತಿಸಿರುವ ಖಾತೆದಾರರಿಗೆ ಪರಿಷ್ಕೃತ ದರದ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಸೀಎಂ ಭರವಸೆ ಸಿಕ್ಕಿದೆ- ಶಾಸಕ ಕೆ.ಎಸ್. ಈಶ್ವರಪ್ಪ

0

ಇಲ್ಲಿಯವರೆಗೂ ತಾಳ್ಮೆಯಿಂದಿದ್ದ ಶಾಸಕ ಈಶ್ವರಪ್ಪನವರೀಗ ತಮ್ಮ ಪಕ್ಷದವರಿಗೆ ಮನದಾಳದ ನೋವು ಮುಟ್ಟಿಸಿದ್ದಾರೆ.
ಬೆಂಗಳೂರಿನಲ್ಲಿ ವಿಶೇಷ ಪತ್ರಿಕಾಗೋಷ್ಢಿಯಲ್ಲಿ
ಈ ಪ್ರತಿಕ್ರಿಯೆ ಅ ವರಿಂದ ವ್ಯಕ್ತವಾಗಿದೆ.

ಶೇಕಡ 4o ರ ಭ್ರಷ್ಟಾಚಾರ ಹಗರಣದಲ್ಲಿ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇಷ್ಟು ತಿಂಗಳಾದರೂ ತಮ್ಮನ್ನ ಮತ್ತೆ ಸಂಪುಟಕ್ಕೆ ಸೇರ್ಪಡೆ ಗೊಳಿಸದೇ ಇರುವ ಬಗ್ಗೆ ಅವರು ಅಸಮಾಧಾನವನ್ನ ಹೊರಹಾಕಿದ್ದಾರೆ. ಬೆಳಗಾವಿ ಅಧಿವೇಶನಕ್ಕೆ ಗೈರುಹಾಜರಾಗಲು ಇದೂ ಪ್ರಮುಖ ಕಾರಣವೆನ್ನಬಹುದು.
ಸಭಾಧ್ಯಕ್ಷರಿಗೆ ಸಕಾರಣ ತಿಳಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.
ಪ್ರಭಾವೀ ಸಮುದಾಯದ ಮುಖಂಡರಾಗಿ ಅವರು ವ್ಯಕ್ತಪಡಿಸಿದ
ಅತೃಪ್ತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅರ್ಥವಾಗಿದೆ. ತಕ್ಷಣ ಸೀಎಂ ಈಶ್ವರಪ್ಪನವರಿಗೆ ಸೂಕ್ತ ಸಂದೇಶ ಕಳಿಸಿದ್ದಾರೆ. ತೃಪ್ತಗೊಂಡ ಈಶ್ವರಪ್ಪನವರು
ಸಂಪುಟಕ್ಕೆ ಸೇರ್ಪಡೆಮಾಡಿಕೊಳ್ಳಲು ಸೀಎಂ ಭರವಸೆ
ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೆಸ್ಕಾಂ ಶಿವಮೊಗ್ಗ ಉಪವಿಭಾಗದಿಂದ ಜನಸಂಪರ್ಕ ಸಭೆ

0

ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ ಕಚೇರಿಯಲ್ಲಿ ದಿನಾಂಕ: 23-12-2022 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ಗಂಟೆವರೆಗೆ ಜನ ಸಂಪರ್ಕ ಸಭೆ ನಡೆಯಲಿದ್ದು ಮೆಸ್ಕಾಂ ಅಧಿಕಾರಿಗಳು ಪಾಲ್ಗೊಂಡು ಈ ಕಚೇರಿ ವ್ಯಾಪ್ತಿಯ ಗ್ರಾಹಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ: 9448289448 ನ್ನು ಸಂಪರ್ಕಿಸಬಹುದೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಫೆಲೋಶಿಪ್ ಗೆ ಅರ್ಜಿ ಆಹ್ವಾನ

0

2022-23 ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಹೆಚ್.ಡಿ ಅಧ್ಯಯನದಲ್ಲಿ ತೊಡಗಿರುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2022-23 ನೇ ಸಾಲಿನಲ್ಲಿ ರಾಜ್ಯದ ಶಾಸನಬದ್ದ ವಿಶ್ವವಿದ್ಯಾಲಯಗಳಲ್ಲಿ/ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು 2023 ರ ಜನವರಿ 13 ಕಡೆಯ ದಿನವಾಗಿದ್ದು, ವಿದ್ಯಾರ್ಥಿಗಳು ಆನ್‍ಲೈನ್ ಅರ್ಜಿ ಪ್ರತಿ ಹಾಗೂ ಒಂದು ಸೆಟ್ ದೃಢೀಕೃತ ದಾಖಲೆಗಳನ್ನು ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ದೂ.ಸಂ: 08182-222129, ಸಹಾಯವಾಣಿ ಸಂಖ್ಯೆ 8050770004 ಹಾಗೂ ಇಲಾಖಾ ವೆಬ್‍ಸೈಟ್ https://www.bcwd.karnataka.gov.in ನೋಡಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಈಶ್ವರಪ್ಪನವರ ಮೇಲೆ ಸರ್ಜಿಕಲ್ ಸ್ಟ್ರೈಕ್- ಕಾಂಗ್ರೆಸ್ ಪ್ರತಿಕ್ರಿಯೆ

0

ಈಶ್ವರಪ್ಪನವರ ಮೇಲೆ ಬಿಜೆಪಿ ‘ಸರ್ಜಿ’ಕಲ್ ಸ್ಟ್ರೈಕ್ ನಡೆಸುತ್ತಿದೆ!

ಶಿವಮೊಗ್ಗದಲ್ಲಿ ಧನಂಜಯ ಸರ್ಜಿಯವರ ಮೂಲಕ ಈಶ್ವರಪ್ಪನವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಬಿಜೆಪಿ ಸಿದ್ಧತೆ ನಡೆಸಿದೆ,
ಇತ್ತ ಮಂತ್ರಿಗಿರಿ ನೀಡದೆ ಮೂಲೆಗುಂಪು ಮಾಡಲಾಗಿದೆ!

ಯಡಿಯೂರಪ್ಪನವರಂತೆ ಈಶ್ವರಪ್ಪನವರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸಲಿದೆ ಬಿಜೆಪಿ -ಎಂದು ರಾಜ್ಯ ಕಾಂಗ್ರೆಸ್ ತನ್ನ ಟ್ವಿಟರ್ ಸಂದೇಶದಲ್ಲಿ
ರಾಜಕೀಯ ಟೀಕೆ ಮಾಡಿದೆ.

ಮಡಿವಾಳ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ಬೈಲಾ ವಿರುದ್ಧ – ನಾಗರಾಜ್

0

ಡಿ.11 ರಂದು ನಡೆದ ಜಿಲ್ಲಾ ಮಡಿವಾಳ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ಆಗಿರುವುದು ಬೈಲಾಕ್ಕೆ ವಿರುದ್ಧವಾಗಿದೆ ಎಂದು ಮಡಿವಾಳ ಸಂಘದ ನಿರ್ದೇಶಕ ನಾಗರಾಜ್ ಎಂ ಆಗ್ರಹಿಸಿದ್ದಾರೆ.

ಈ ಕುರಿತು ಶಿವಮೊಗ್ಗದ ಮಿಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಸಿ.ಹನುಮಂತಪ್ಪ, ಪಿ.ಮಧು, ಕೊಟ್ಟಪ್ಪ ಎಂಬುವರು ಅನುಕ್ರಮವಾಗಿ ಉಪಾಧ್ಯಕ್ಷರಾಗಿದ್ದಾರೆ. ಸಹಕಾರ್ಯದರ್ಶಿ ಮತ್ತು ಸಂಚಾಲಕರಾಗಿದ್ದಾರೆ. ಇವರ ಹೆಸರು ಚುನಾವಣೆಯಲ್ಲಿ ಚುನಾಯಿತರಾದ ಪಟ್ಟಿಯಲ್ಲಿ ಇಲ್ಲ.ಮತ್ತು ಮಾನ್ಯತೆ ಪಡೆದ ಸಂಘಗಳ ಪಟ್ಟಿಯಲ್ಲಿ ಇಲ್ಲದವರನ್ನ ದಿಡೀರ್ ಅಂತ ಪದಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದರು.

ಸಂಘದ ಅಂಗರಚನೆಯ ನಿಯಮ ನಿಬಂಧನೆಯ ಭಾಗ-3 ರಲ್ಲಿ 16 ರ ಪ್ರಕಾರ ತಾಲೂಕು ಸಂಘಗಳು ಜಿಲ್ಲಾ ಸಂಘದ ಮಾನ್ಯತೆ ಪಡೆದಿಲ್ಲ. ಆದ್ದರಿಂದ ಮಾನ್ಯತೆ ಹೊಂದದೆ ಇರುವ ಸಂಘಗಳ ಪ್ರತಿನಿಧಿಗಳು ಪದಾಧಿಕಾರಿಯಾಗಲು ಸಂಘದ ಕಾನೂನಿನಲ್ಲಿ ಅವಕಾಶ ಖಂಡಿತವಿಲ್ಲವೆಂದು ತಿಳಿಸಿದರು.

ಸಂಘದ ಕಾರ್ಯಕಾರಿ ಸಮಿತಿಯ ಆಯ್ಕೆಗೆ ನಡೆದ ಚುನಾವಣೆಗೆ ನಿಗದಿಯಾಗುವ ದಿನಾಂಕದ ಪೂರ್ವದ 15ದಿನಗಳ ಮುಂಚೆ ನಿಗಧಿತ ಶುಲ್ಕ ಪಾವತಿ ಮಾಡಿ ನವೀಕರಿಸಿದ ಮಾನ್ಯತೆ ಪಡೆದ ಸಂಘಗಳ ಪಟ್ಟಿಯನ್ನ ಪ್ರಕಟಿಸಿಲ್ಲ.ಮಾನ್ಯತೆ ಪಡೆದ ಸಂಘಗಳ ಪ್ರತಿನಿಧಿಗಳು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ ಎಂದು ಸಂಘದ ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಿ ಪ್ರಕಟಿಸಿಲ್ಲ. ಆದ್ದರಿಂದ ಇವರ ನೇಮಕ ರದ್ದುಪಡಿಸಬೇಕು. ಈಗಾಗಲೇ ಸಹಕಾರ ಉಪನಿಬಂಧಕರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಸರಿಹೋಗದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಮುಖಂಡರಾದ ಹಿರಣ್ಣಯ್ಯ ,ಟಿ.ಎಸ್. ಗುರುಮೂರ್ತಿ , ಪ್ರಮೋದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜೈನರ ಪವಿತ್ರ ಕ್ಷೇತ್ರ ಪ್ರವಾಸೋದ್ಯಮಕ್ಕೆ ಪರಿವರ್ತನೆ ವಿರುದ್ಧ ಪ್ರತಿಭಟನೆ

0

ಜಾರ್ಖಂಡ್ ಸರ್ಕಾರವು ಜೈನ ಸಮುದಾಯದ ಪವಿತ್ರ ಕ್ಷೇತ್ರವಾದ ಶಿಖರಜಿ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸುವುದನ್ನು ಖಂಡಿಸಿ ತಾಲ್ಲೂಕು ಜೈನ ಸಮಾಜದ ವತಿಯಿಂದ ಡಿಸೆಂಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ನೆಹರು ಮೈದಾನದ ದಿಗಂಬರ ಜೈನ ಬಸದಿಯಿಂದ ಉಪವಿಭಾಗಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಪಿ.ಲೋಕರಾಜ್ ಜೈನ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಅಕಲಂಕಕೇಸರಿ ಜಗದ್ಗುರು ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ ಸೋಂದಾ ಮತ್ತು ಶ್ರೀ ಕ್ಷೇತ್ರ ಲಕ್ಕವಳ್ಳಿಯ ಶ್ರೀ ವೃಷಭ ಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಈ ರ‍್ಯಾಲಿಯು ನಡೆಯಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರಿಗೆ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಸಮ್ಮೇದ ಶಿಖರಜಿ ಕ್ಷೇತ್ರವು ಜೈನರ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. 24 ತೀರ್ಥಂಕರರಲ್ಲಿ ಸುಮಾರು 20 ತೀರ್ಥಂಕರರು ಅಲ್ಲಿ ತಪಸ್ಸು ಹಾಜರಿದ್ದರು
ಮೋಕ್ಷ ಹೊಂದಿದ್ದಾರೆ. ಇದಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಇಂಥ ಧಾರ್ಮಿಕ ಕ್ಷೇತ್ರವೊಂದಕ್ಕೆ ತನ್ನದೇ ಆದ ನೀತಿ ನಿಯಮಗಳಿರುತ್ತವೆ. ಪ್ರವಾಸೋದ್ಯಮ ಇಲಾಖೆಯ ಹಸ್ತಕ್ಷೇಪದಿಂದ ಇಡೀ ಕ್ಷೇತ್ರವು ಅಪವಿತ್ರವಾಗುವುದರಲ್ಲಿ ಸಂದೇಹವಿಲ್ಲ. ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಆದೇಶ ಹೊರಡಿಸಿ ನಮ್ಮ ಸಮುದಾಯದಲ್ಲಿ ಆತಂಕ ಸೃಷ್ಟಿಸಲಾಗಿದೆ. ಈ ಬೆಳವಣ ಗೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ. ಈ ಆದೇಶವನ್ನು ಜಾರ್ಖಂಡ ಸರ್ಕಾರ ವಾಪಸ್ ಪಡೆಯಬೇಕು ಎಂದು ದೇಶದ ಎಲ್ಲ ಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಸಮಾಜದ ಪ್ರಮುಖರಾದ ಎಸ್.ವಿ.ಹಿತಕರ ಜೈನ್ ಮಾತನಾಡಿ, ದೇಶದಲ್ಲೇ ಜೈನ ಸಮುದಾಯದ ಜನಸಂಖ್ಯೆ ಸುಮಾರು 5 ಕೋಟಿ 50 ಲಕ್ಷ ಇದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 4 ಲಕ್ಷ 40 ಸಾವಿರ ಜನಸಂಖ್ಯೆಯಿದೆ. ರಾಜ್ಯದಲ್ಲಿ 6 ಸಾವಿರ ಬಸದಿಗಳಿದ್ದವು. ಆದರೆ ಈಗ ಸರ್ಕಾರಿ ದಾಖಲೆ ಪ್ರಕಾರ ಕೇವಲ 106 ಬಸದಿ ಮಾತ್ರ ಇದೆ. ಒಂದು ಕಾಲದಲ್ಲಿ ಉಚ್ಛಾçಯ ಸ್ಥಿತಿಯಲ್ಲಿದ್ದ ಜೈನ ಸಮುದಾಯದ ಜನಸಂಖ್ಯೆಯೂ ಈಗ ಕ್ಷೀಣ ಸುತ್ತಿದೆ. ಮಹಾರಾಷ್ಟದಲ್ಲಿ ಅತಿ ಹೆಚ್ಚು 16 ಲಕ್ಷ ಜನಸಂಖ್ಯೆಯಿದೆ. ದೇಶದ ವಾಣಿಜ್ಯ, ಸಾಂಸ್ಕೃತಿಕ ಮತ್ತು ಸಾಹಿತ್ಯ ಮತ್ತು ಆಡಳಿತದಲ್ಲಿ ಜೈನರ ಕೊಡುಗೆ ಅಪಾರವಾಗಿದೆ ಎಂದರು.

ಹಿಂದೂಗಳಿಗೆ ಕಾಶಿ, ರಾಮೇಶ್ವರ, ಮಂತ್ರಾಲಯ ಮುಂತಾದ ಪವಿತ್ರ ಕ್ಷೇತ್ರಗಳಿದ್ದಂತೆ ಜೈನರಿಗೆ ಶಿಖರಜಿ ಕ್ಷೇತ್ರ ಅತ್ಯಂತ ಪವಿತ್ರವಾದುದು.

ಈ ಸ್ಥಳದಲ್ಲಿ ಪಾವಿತ್ರ್ಯಕ್ಕೆ ಹೆಚ್ಚು ಮಹತ್ವವಿದೆ. ಮೌನ ದ್ಯಾನಕ್ಕೆ ಒತ್ತು ನೀಡುವ ಮೂಲಕ ನೆಮ್ಮದಿಯಿಂದ ಪ್ರಾರ್ಥಿಸುವ ಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು.
ಇಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರಬಾರದು. ರಾಜ್ಯಸಭಾ ಸದಸ್ಯರೂ ಆಗಿರುವ ನಮ್ಮ ಸಮುದಾಯದ ಗಣ್ಯರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಜಾಖಂಡ್ ಸರ್ಕಾರದ ಮೇಲೆ ಈ ಆದೇಶವನ್ನು ವಾಪಸ್ ಪಡೆಯಲು ಒತ್ತಡ ತರಲಾಗುತ್ತದೆ ಎಂದರು.

ಸಮಾಜದ ಪ್ರಮುಖರಾದ ವಿದ್ಯುತ್ ಗುತ್ತಿಗೆದಾರರು ರಾಜ್‌ಕುಮಾರ್ ಜೈನ್,ನಿವೃತ್ತ ಪ್ರಾಂಶುಪಾಲರು ಎಸ್.ಆರ್.ನಾಗರಾಜ್ ಜೈನ್ ಹಾಜರಿದ್ದರು.

ಮನಸ್ಸಿನಿಂದ ಮನಸ್ಸಿಗೆ – 03

0

ನಿರ್ಭಯ ಎಂಬ ಜ್ಯೋತಿ ಸಿಂಗ್ ಭಾರತದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿ ಹತ್ತು ವರ್ಷಗಳು ಉರುಳಿದವು…………

ಇಡೀ ದೇಶದ ಗಮನ ಸೆಳೆದ – ಅತ್ಯಾಚಾರದ ಬಗ್ಗೆ ಅತ್ಯಂತ ಆಕ್ರೋಶ ವ್ಯಕ್ತವಾದ ಘಟನೆಯಿದು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವ ಹೊಸ ಕಠಿಣ ಕಾನೂನು ಸಹ ಜಾರಿ ಮಾಡಲಾಯಿತು………

ಆದರೂ ಇಡೀ ದೇಶದಲ್ಲಿ ಅತ್ಯಾಚಾರಗಳ ಸರಣಿ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ…….

ನಿರ್ಭಯಳೆಂಬ ನತದೃಷ್ಟ ಹೆಣ್ಣಿನ ಮೇಲಾದ ಬರ್ಬರ ಅತ್ಯಾಚಾರವನ್ನು ನೆನೆದು ಸಂಕಟಪಡುವುದೋ ?

ಅದಕ್ಕೆ ಕಾರಣರಾದ ಆ ಕಿರಾತಕರಿಗೆ ಗಲ್ಲು ಆದುದಕ್ಕೆ ಸಂಭ್ರಮಪಡುವುದೋ ?

ಆಕೆ ಭಾರತದಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಮರುಕಪಡುವುದೋ ?
ಅರ್ಥವಾಗುತ್ತಿಲ್ಲ…….

ಈ ಘಟನೆಯನ್ನು ಕೇವಲ ಒಂದು ಅಪರಾಧವಾಗಿ ನೋಡಿದರೆ ಸಮಸ್ಯೆ ತಿಳಿಯುವುದಿಲ್ಲ. ನಮ್ಮ ಭಾರತೀಯ ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯ ಹಿನ್ನೆಲೆಯಲ್ಲಿ ಇದನ್ನು ಅರ್ಥಮಾಡಿಕೊಂಡರೆ ನಾವೂ ಕೂಡ ನಿರ್ಭಯಳ ಮತ್ತು ಆ ಯುವಕರ ಸಾವಿಗೆ ಪರೋಕ್ಷ ಕಾರಣರು ಎಂದು ಅನಿಸುತ್ತದೆ…….

ಸೃಷ್ಟಿಯ ಸಹಜ ಜೀವಿ ಹೆಣ್ಣನ್ನು ನಮ್ಮ ಅನುಕೂಲಕ್ಕಾಗಿ ಪೂಜನೀಯಗೊಳಿಸಿದ ದಿನದಿಂದಲೇ ಆಕೆಯ ಮೇಲೆ ನಿಯಂತ್ರಣ ಸಾಧಿಸಿ ಆಕೆಯನ್ನು ಭೋಗದ ವಸ್ತುವೆಂದು ತೀರ್ಮಾನಿಸಲಾಯಿತು. ಅಲ್ಲಿಂದ ಶುರುವಾದ ಹೆಣ್ಣಿನ ಶೋಷಣೆ ಈ ಕ್ಷಣದವರೆಗೂ ನಿರಂತರವಾಗಿ ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇದೆ……..

ತನ್ನ ತಾಯಿ ತಂಗಿ ಅಕ್ಕ ಎಂಬ ಕೆಲವು ರಕ್ತ ಸಂಬಂಧದ ಹೆಣ್ಣುಗಳನ್ನು ಹೊರತುಪಡಿಸಿ ಪ್ರತಿ ಹೆಣ್ಣನ್ನು ನೋಡುವ ಮಾನಸಿಕ ಸ್ಥಿತಿ ಆಕೆಯ ಲಿಂಗಾಧಾರಿತವಾಗಿರುತ್ತದೆಯೇ ಹೊರತು ಅವರೂ ಸೃಷ್ಟಿಯ ಸ್ವತಂತ್ರ ಜೀವಿ ಎಂಬ ಮನೋಭಾವ ಮೂಡುವ ವ್ಯವಸ್ಥೆ ಇಲ್ಲ. ಕಾನೂನಿನ ಭಯದಿಂದ ಮಾತ್ರ ಒಂದಷ್ಟು ನಾಗರಿಕ ವರ್ತನೆ ಇದೆಯೇ ಹೊರತು ಆಂತರ್ಯದಲ್ಲಿ ಅದು ಇರುವುದು ಅತ್ಯಂತ ಕಡಿಮೆ…….

ಈ ಕ್ಷಣದಲ್ಲೂ ಪ್ರತಿನಿತ್ಯ ನಮ್ಮ ದೇಶದಲ್ಲಿ ಅತ್ಯಾಚಾರಗಳು ನಡೆಯುತ್ತಲೇ ಇದೆ. ಇದನ್ನು ಮೂರು ರೀತಿಯಲ್ಲಿ ವಿಂಗಡಿಸಬಹುದು…..

ಮೊದಲನೇ ವರ್ಗದಲ್ಲಿ ಶ್ರೀಮಂತ ರಾಜಕಾರಣಿಗಳು, ದೊಡ್ಡ ದೊಡ್ಡ ದಲ್ಲಾಳಿಗಳು, ಶಕ್ತಿವಂತ ಅಧಿಕಾರಿಗಳು, ಡೋಂಗಿ ಧಾರ್ಮಿಕ ಮುಖಂಡರುಗಳು, ದೊಡ್ಡ ಉದ್ಯಮಿಗಳು, ರೌಡಿಗಳು, ಮಾಫಿಯಾದವರು, ಸಿನಿಮಾ ನಟರು ( ಎಲ್ಲರೂ ಅಲ್ಲ ಕೆಲವರು ಮಾತ್ರ ) ಮುಂತಾದವರು ಅವರಿಗಿರುವ ಚಟಕ್ಕೆ ಅನುಸಾರವಾಗಿ ಹಣದಿಂದಲೋ, ಬಲದಿಂದಲೋ, ಬೆದರಿಕೆಯಿಂದಲೋ, ಆಮಿಷದಿಂದಲೋ ನಿರಂತರವಾಗಿ ಅತ್ಯಾಚಾರ ಮಾಡುತ್ತಲೇ ಇರುತ್ತಾರೆ. ಆದರೆ ಇದು ಬಲವಂತದ ಒಪ್ಪಿತ ಅತ್ಯಾಚಾರವಾಗುವುದರಿಂದ ಅದಕ್ಕೆ ಒಳಗಾದ ಹೆಣ್ಣಿನ ಪ್ರತ್ಯಕ್ಷ ಅಥವಾ ಪರೋಕ್ಷ ಒಪ್ಪಿಗೆ ಇರುವುದರಿಂದ ಕಾನೂನಿನ ರೀತಿ ಅತ್ಯಾಚಾರವಾಗುವುದಿಲ್ಲ. ಆಕೆ ಏನಾದರೂ ದೂರು ಕೊಟ್ಟರೆ ಮಾತ್ರ ಅದು ದಾಖಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಆ ಸಾಧ್ಯತೆ ಕಡಿಮೆ ಮತ್ತು ಆಕೆಗೆ ಯಾವ ಸುರಕ್ಷತೆಯೂ ಇರುವುದಿಲ್ಲ.ಇದೊಂದು ಬಲಾಢ್ಯರ ಕೂಟ……

ಎರಡನೆಯದಾಗಿ ಮಧ್ಯಮವರ್ಗದ ಕೆಲವು ಜನರು ಬದುಕಿನ ಸುಖಲೋಲುಪತೆಯ ಅಂಗವಾಗಿ ಬೆಲೆವೆಣ್ಣಿನ ರೂಪದ ಮಾರುಕಟ್ಟೆಯಲ್ಲಿ – ಹೌದು ಮಾರುಕಟ್ಟೆಯಲ್ಲಿಯೇ ದೊರೆಯುವ ಹೆಣ್ಣುಗಳನ್ನು ಅತ್ಯಾಚಾರ ಮಾಡುತ್ತಾರೆ. Again ಇದೂ ಕೂಡ ಒಪ್ಪಿತ ಕ್ರಿಯೆಯಾಗುವುದರಿಂದ ಕಾನೂನಿನ ವ್ಯಾಪ್ತಿಯಲ್ಲಿ ಬಚಾವಾಗುತ್ತಾರೆ‌……..

ನೆನಪಿರಲಿ ಈ ಎರಡೂ ಸಂದರ್ಭದಲ್ಲಿ ಹೆಣ್ಣನ್ನು ಬಲವಂತ ಒಪ್ಪಿಸುವಿಕೆಯ ಮುಂಖಾಂತರವೇ ಭೋಗದ ವಸ್ತುವೆಂದು ಅತ್ಯಾಚಾರ ಮಾಡಲಾಗುತ್ತದೆಯೇ ವಿನಹ ಸಹಜ ಗಂಡು ಹೆಣ್ಣಿನ ಪ್ರೀತಿಯ ಮಿಲನವಾಗಿರುವುದಿಲ್ಲ……..

ಇನ್ನು ಮೂರನೆಯದಾಗಿ ತೀರಾ ಕೆಳ ಹಂತದ, ಬದುಕಿನ ಭರವಸೆಯನ್ನೇ ಕಳೆದುಕೊಂಡ, ಮಾದಕ ವಸ್ತುಗಳಿಗೆ ದಾಸರಾಗಿರುವ, ಅಜ್ಞಾನವೇ ತುಂಬಿಕೊಂಡಿರುವ, ಹೆಣ್ಣಿನೊಂದಿಗಿನ ಮಿಲನವೇ ಸ್ವರ್ಗ ಮತ್ತು ಅದೇ ಬದುಕಿನ ಧ್ಯೇಯ ಎಂದು ಭಾವಿಸುವ ಜನ ಒಂಟಿಯಾಗಿ ಸಿಗುವ, ಅಸಹಾಯಕ ಅಥವಾ ತಾವೇ ಹೊಂಚುಹಾಕಿ ಹಿಡಿಯುವ ಹೆಣ್ಣನ್ನು ತಿಂದು ಮುಗಿಸುತ್ತಾರೆ……..

ಇವರಿಗೆ ಕಾನೂನಿನ ಭಯವೂ ಇರುವುದಿಲ್ಲ. ಧರ್ಮದ ಭಯವೂ ಇರುವುದಿಲ್ಲ ‌ ಸಾವಿನ ಭಯವೂ ಇರುವುದಿಲ್ಲ. ಇದನ್ನು ಮಾತ್ರ ಕಾನೂನಿನ ರೀತಿಯಲ್ಲಿ ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಈಗ ನಿರ್ಭಯಳ ಹಂತಕರು ಇದೇ ವರ್ಗದವರು……..‌

ಈಗ ಅನಿಸುವುದೇನೆಂದರೆ,
ಕೇವಲ ಅವರು ಮಾತ್ರವಲ್ಲದೆ ನಾವೂ ನೇರವಾಗಿಯೇ ಈ ಪರಿಸ್ಥಿತಿಯ ಪಾಲುದಾರರು. ಸಿನಿಮಾ – ಸಾಹಿತ್ಯ – ಕಲೆ – ಧಾರ್ಮಿಕ ನಂಬಿಕೆಗಳು – ಇತ್ಯಾದಿಗಳ ಮುಖಾಂತರ ಹೆಣ್ಣನ್ನು ಭೋಗದ ವಸ್ತುವೆಂದು ಪ್ರಚಾರಮಾಡಿ ಸಾಮಾನ್ಯರಲ್ಲಿ ಆಕೆಯ ಬಗೆಗೆ ವಿಚಿತ್ರ ಕಲ್ಪನೆ ಮೂಡಿಸಿ ಈ ರೀತಿಯ ದುರಂತ ಘಟನೆಗಳಿಗೆ ಕಾರಣವಾಗಿದ್ದೇವೆ……..

ಇದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವುದು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ ಇಡೀ ವ್ಯವಸ್ಥೆಯನ್ನು ಹೆಚ್ಚು ನಾಗರಿಕವಾಗಿ ರೂಪಿಸುವುದೇ ಇದಕ್ಕಿರುವ ಬಹುಮಖ್ಯ ಪರಿಹಾರವೆನಿಸುತ್ತದೆ. ಏಕೆಂದರೆ ನಮಗಿಂತ ಹೆಚ್ಚು ಮುಂದುವರಿದ ಮತ್ತು ಹೆಚ್ಚು ನಾಗರಿಕವಾದ ಪಾಶ್ಚಾತ್ಯ ದೇಶಗಳಲ್ಲಿ ಇದು ಬಹಳ ಕಡಿಮೆ ಎಂದು ಕೇಳಿದ್ದೇನೆ…

ಹಾಗೆಯೇ ಅತ್ಯಂತ ಆಳ ಧಾರ್ಮಿಕ ನಂಬುಗೆಯ ಮತ್ತು ಅತ್ಯಂತ ಅಮಾನುಷ ಕಠಿಣ ಕಾನೂನು ಹೊಂದಿರುವ ಷರಿಯತ್ ಕಾನೂನು ಇರುವ ದೇಶಗಳಲ್ಲಿ ಸಹ ಸ್ವಲ್ಪ ಕಡಿಮೆ ಎನಿಸುತ್ತದೆ.

ಏನಾದರಾಗಲಿ ಹೆಣ್ಣು ಶ್ರೇಷ್ಠಳೂ ಅಲ್ಲ. ಕನಿಷ್ಠಳೂ ಅಲ್ಲ. ಭೋಗದ ವಸ್ತುವೂ ಅಲ್ಲ. ಆಕೆ ನಮ್ಮ ನಿಮ್ಮಂತೆ ಸೃಷ್ಟಿಯ ಸಹಜ ಜೀವಿ. ನಿಮ್ಮ ತಾಯಿ ತಂಗಿ ಅಕ್ಕ ಪ್ರೇಯಸಿಯರು ಮಾತ್ರ ಹೆಣ್ಣುಗಳು ಉಳಿದವರು ನಿಮ್ಮ ಆಡು ಗೊಂಬೆಗಳು ಎಂಬ ಭಾವನೆ ಬಿಡಿ…….

ತಿಳಿವಳಿಕೆ ನಡವಳಿಕೆಯಾಗಿ ಪರಿವರ್ತನೆ ಹೊಂದಿದರೆ ಸಮಾಜ ಖಂಡಿತವಾಗಿ ಉತ್ತಮ ನಾಗರಿಕ ಸಮಾಜವಾಗಿ ರೂಪಗೊಳ್ಳುತ್ತದೆ…..

ಅತ್ಯಾಚಾರಕ್ಕಿಂತ ಹತ್ತು ಪಟ್ಟು ಹೆಚ್ಚು ಸುಖ ಪ್ರೀತಿ ಪ್ರೇಮ ಪ್ರಣಯಗಳು ಹೊಂದಾಣಿಕೆಯ ಎರಡು ಜೀವಗಳಲ್ಲಿ ಅಡಗಿದೆ ಎಂಬ ಅರಿವಿರಲಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

ಶ್ರೀಮತಿ ಸೌಮ್ಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಶಿವಮೊಗ್ಗ ಜಿಲ್ಲಾ ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘವು ಡಿ‌.17 ಮತ್ತು18 ರಂದು ಆಯೋಜಿಸಲಾಗಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಸೌಮ್ಯರವರು ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಇವರಿಗೆ ಕುಟುಂಬದವರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.