Sunday, July 5, 2026
Sunday, July 5, 2026

Klive Special Article ಮಕ್ಕಳು ಉತ್ತಮ ನಾಗರೀಕರಾಗಲು ಸ್ಕೌಟ್ಸ್ ಗೈಡ್ಸ್ ಪ್ರೇರಣೆ

Date:

-ಪುನರ್ನಿರ್ಮಿತ ಧ ರಾ ಮ ಸ್ಕೌಟ್ ಭವನ ಇಂದು ಉದ್ಘಾಟನೆ, ತನ್ನಿಮಿತ್ತ ಈ ವಿಶೇಷ ಲೇಖನ-

Klive Special Article ಸ್ಕೌಟ್ ಸಂಕ್ಷಿಪ್ತ ಇತಿಹಾಸ: ಮಕ್ಕಳು ಪ್ರಪಂಚದ ಉತ್ತಮ ನಾಗರೀಕರಾಗಬೇಕೆಂಬ ಸದುದ್ದೇಶದಿಂದ 1907ರಲ್ಲಿ ರಾಬರ್ಟ್ ಸ್ಟೀಫನ್ ಸನ್ ಬೇಡೆನ್ ಪೋವೆಲ್ ಎಂಬುವರು ಯುನೈಟೆಡ್ ಕಿಂಗ್ಡಮ್ಮಿನ ಬ್ರೌನ್ ಸೀ ದ್ವೀಪದಲ್ಲಿ ಕೇವಲ 20 ವಿದ್ಯಾರ್ಥಿಗಳನ್ನು ಸೇರಿಸಿ ಸ್ಕೌಟ್ ರಚನೆ ಮಾಡಿದರು. 1910 ರಲ್ಲಿ ಇದರ ಸ್ಥಾಪನೆ ಯಾದರೆ 1912 ರಲ್ಲಿ ಇದರ ಸಂಘಟನೆ ಆರಂಭವಾಯಿತು. ಆರಂಭದಲ್ಲಿ ಇದರ ಹೆಸರು ‘ಡಿ ಬಾಯ್ ಸ್ಕೌಟ್ಸ್ ಅಸೋಸಿಯೇಷನ್’ ಎಂಬುದಾಗಿತ್ತು. 1909ರಲ್ಲಿ ಇಂಗ್ಲೆಂಡಿನಲ್ಲಿ ಬಾಯ್ ಸ್ಕೌಟ್ಸ್ ಸಮಾವೇಶವಾದಾಗ ಹುಡುಗಿಯರ ಗುಂಪೊಂದು ಅಲ್ಲಿ ಕಾಣಿಸಿಕೊಂಡಿತು, ‘ಗರ್ಲ್ ಸ್ಕೌಟ್ಸ್’ ಎಂದು ಹೇಳಿಕೊಂಡ ಅದು ಮುಂದೆ ‘ಗೈಡ್ಸ್’ ಎಂದು ಪರಿವರ್ತನೆ ಆಯಿತು. 119 ವರ್ಷಗಳ ಕೆಳಗೆ ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದದ್ದು ಈಗ ಪ್ರಪಂಚದ 216ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 6 ಕೋಟಿಗೂ ಹೆಚ್ಚು ಸ್ಕೌಟ್ಸ್ ಗೈಡ್ಸ್ ಇದ್ದಾರೆ.’SCOUT’ ಎಂದರೆ Service Commitment Opportunity Unity Team.

-ಭಾರತದಲ್ಲಿ ಸ್ಕೌಟ್ಸ್ ಆರಂಭ:
ಇಂಗ್ಲೆಂಡಿನಲ್ಲಿ ಸ್ಕೌಟ್ಸ್ ಸ್ಥಾಪನೆಯಾದ ಕೇವಲ ಎರಡೇ ವರ್ಷಗಳಲ್ಲಿ ಭಾರತದಲ್ಲೂ 1909ರಲ್ಲಿ ಮೊಟ್ಟ ಮೊದಲ ಸ್ಕೌಟ್ಸ್ ಘಟಕ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಕ್ಯಾಪ್ಟನ್ ಟಿ ಹೆಚ್ ಬೇಕರ್ ರಿಂದ ಸ್ಥಾಪನೆ ಆಯಿತು.
ದಾವಣಗೆರೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ 1928 ರಲ್ಲಿ ಲೋಕಲ್ ಸ್ಕೌಟ್ಸ್ ಅಸೋಸಿಯೇಷನ್ ಎಂಬುದಾಗಿ ಸ್ಥಾಪನೆ ಆಯಿತು. ಆಗ ಯುವರಾಜ ಕಂಠೀರವ ನರಸರಾಜ ಒಡೆಯರು ಮೈಸೂರು ರಾಜ್ಯ ಸ್ಕೌಟ್ಸ್ ನ ಮುಖ್ಯ ಕಬ್ ಆಗಿದ್ದರು. ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ದಾವಣಗೆರೆಗೆ ಬಂದಾಗ ಸ್ಕೌಟ್ ಗಳ ಶಿಸ್ತು ಪಾಲನೆ ಮೆಚ್ಚಿದ್ದರು. 1940 ರಲ್ಲಿ ದಾವಣಗೆರೆಯ ಡಿಇಎ ಮಾಧ್ಯಮಿಕ ಶಾಲೆಯಲ್ಲಿ ನಮ್ಮ ಜಿಲ್ಲೆಯ ಮೊಟ್ಟ ಮೊದಲ ಸ್ಕೌಟ್ ತಂಡ ಪ್ರಾರಂಭವಾಗಿ ಕೀರ್ತಿ ಶೇಷರಾದ ಅ.ರಾ. ಶಂಕರಯ್ಯನವರು ತರಬೇತಿ ಪಡೆದು ಪ್ರಪ್ರಥಮ ಸ್ಕೌಟ್ ಮಾಸ್ಟರ್ ಆದರು. ಬಿ ಕಲಪನಹಳ್ಳಿಯಲ್ಲಿ ಕ್ಯಾಂಪ್ ಏರ್ಪಾಡಾಯಿತು. ಕ್ಯಾಂಪಿಗೆ ಬಂದ ಸ್ಕೌಟ್ ಕಮಿಷನರ್ W.U. ಹನುಮಂತರಾಯರು ಡಿಇಎ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಶೇಷಗಿರಿರಾಯರನ್ನು ಕರೆಸಿ ಲೋಕಲ್ ಸ್ಕೌಟ್ ಅಸೋಸಿಯೇಷನ್ನಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದರು. ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪನವರನ್ನು ಇದರ ಅಧ್ಯಕ್ಷರನ್ನಾಗಿ ಮಾಡಲಾಯಿತು. ಶೇಷಗಿರಿರಾಯರು ಕಾರ್ಯದರ್ಶಿಗಳಾದರು. ಆ ವೇಳೆಗಾಗಲೇ ಸ್ಥಳೀಯ ಸ್ಕೌಟ್ ಸಂಘದಲ್ಲಿ 560 ರೂ.ಗಳ ಉಳಿತಾಯವಾಗಿತ್ತು, ಬಂಗಾರದ ದರಕ್ಕೆ ಹೋಲಿಸಿದರೆ ಈಗಿನ ಸುಮಾರು 18 ಲಕ್ಷ ರೂಪಾಯಿಗಳು. ಇದೇ ವರ್ಷ ದಾವಣಗೆರೆಯ ಕಂದಾಯ ಅಸಿಸ್ಟೆಂಟ್ ಕಮಿಷನರ್ ಆಗಿ ಬಂದ ಬಿ. ಬೀರಪ್ಪನವರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣರಾಯರ ಒಡಗೂಡಿಕೊಂಡು ಹಳೇಬಾತಿಯಲ್ಲಿ ಸ್ಕೌಟ್ ಕ್ಯಾಂಪಿಗೆ ಏರ್ಪಾಡು ಮಾಡಿ ಕ್ಯಾಂಪ್ ಫೈರ್ ಅಲ್ಲಿ ತಾವೂ ಭಾಗಿಗಳಾದರು. ಇವರಿಂದಾಗಿ ಆಗಿನ ಪುರಸಭೆಗೆ ಸೇರಿದ್ದ ಜಾಗದಲ್ಲಿ ಈಗಿನ ಸ್ಕೌಟ್ ಹಾಲಿನ ನಿರ್ಮಾಣಕ್ಕೆ ಸ್ಥಳ ಒದಗಿತು, ಚಿತ್ರದುರ್ಗ ಜಿಲ್ಲಾ ಸ್ಕೌಟ್ ಸಮಿತಿಯು ರಚನೆಯಾಗಿ ದಾವಣಗೆರೆ ಹರಿಹರ ಜಗಲೂರು ಹೊಳಲ್ಕೆರೆ ಸ್ಕೌಟ್ ಸಂಸ್ಥೆಗಳು ಇದರ ಉಪನಿಯಮಗಳ ಅಡಿಯಲ್ಲಿ ರಚನೆಗೊಂಡವು. ಆಗ ನಡೆದ ಚಿತ್ರದುರ್ಗ ಜಿಲ್ಲಾ ರ್ಯಾಲಿಯಲ್ಲಿ 60 ಜನ ಭಾಗಿಗಳಾಗಿದ್ದರು. ನಂತರ 1942 ರಲ್ಲಿ ದಾವಣಗೆರೆ ನಗರ ರ್ಯಾಲಿ ನಡೆಯಿತು. ಆಗ ಡಿಡಿಪಿಐ ಆಗಿದ್ದ ಕಸ್ತೂರಿ ರಾಜಶೆಟ್ಟರು ಕಂದಾಯ ಮತ್ತು ಶಿಕ್ಷಣ ಇಲಾಖೆ ಸೇರಿ ಸ್ಕೌಟ್ ಚಟುವಟಿಕೆ ಮಾಡಲು ಅನುವು ಮಾಡಿದರು.

-ಸ್ಕೌಟ್ ಭವನ ನಿರ್ಮಾಣ:
1945 ರಲ್ಲಿ ದಾವಣಗೆರೆ ಸ್ಕೌಟ್ ಅಸೋಸಿಯೇಷನ್ ವತಿಯಿಂದ ಹಳೆಬಾತಿಯಲ್ಲಿ ಎರಡು ದಿನಗಳ ಜಿಲ್ಲಾ ಸ್ಕೌಟ್ ರ್ಯಾಲಿ ಏರ್ಪಾಡಾಯಿತು, 450 ಸ್ಕೌಟ್ಗಳು ಭಾಗವಹಿಸಿದ್ದರು. ಇದರ ಅನೇಕ ಸ್ಪರ್ಧಾ ಬಹುಮಾನಗಳನ್ನು ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಧರ್ಮಛತ್ರ ಹಿಂಭಾಗದ ಈಗಿನ ಆರ್ ಸಿ ಸಿ ವಾಟರ್ ಟ್ಯಾಂಕ್ ಆವರಣದಲ್ಲಿ ಆಗ ಕಬ್ಬಿಣದ ವಾಟರ್ ಟ್ಯಾಂಕ್ ಇತ್ತು, ಅದರ ಬಳಿ ಬಹುಮಾನ ವಿತರಣೆ ಮತ್ತು ಕ್ಯಾಂಪ್ ಫೈರ್ ನೆರವೇರುವಾಗ ಸ್ಕೌಟ್ಸ್ ಅಧ್ಯಕ್ಷ ಮದ್ದೂರಾಯಪ್ಪನವರು, ಕಂದಾಯ ಅಸಿಸ್ಟೆಂಟ್ ಕಮಿಷನರ್ ಬಿ ಬೀರಪ್ಪ ಭಾಗಿಗಳಾಗಿದ್ದರು. ಪುರಸಭೆಗೆ ಸೇರಿದ್ದ ಜಾಗದಲ್ಲಿ ಸ್ಕೌಟ್ ಭವನ ನಿರ್ಮಾಣಕ್ಕೆ ಬೀರಪ್ಪನವರು ಜಾಗ ಮಂಜೂರು ಮಾಡಿದರು. ಮದ್ದೂರಾಯಪ್ಪನವರು ಆಗ 3000 ರೂಪಾಯಿಗಳನ್ನು ಅಂದರೆ ಬಂಗಾರ ದರಕ್ಕೆ ಹೋಲಿಸಿದರೆ ಈಗಿನ ಸುಮಾರು 65 ಲಕ್ಷ ರುಪಾಯಿ ಸ್ಕೌಟ್ ಭವನ ನಿರ್ಮಾಣಕ್ಕೆ ನೀಡಿದರು. 1945 ರಲ್ಲಿ ಸಚಿವರಾಗಿದ್ದ ಎಲ್ ಸಿದ್ದಪ್ಪನವರು ಈ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಧರ್ಮ ರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಕೌಟ್ ಭವನವು ಪಿ.ಜೆ. ಬಡಾವಣೆಯ ಮೊದಲನೇ ಮುಖ್ಯ ರಸ್ತೆಯಲ್ಲಿ (ಹೈಸ್ಕೂಲ್ ಫೀಲ್ಡ್ ಪಕ್ಕ) ನಿರ್ಮಾಣವಾಯಿತು. 1946 ರಲ್ಲಿ ದಾವಣಗೆರೆ ಸ್ಥಳೀಯ ಸ್ಕೌಟ್ ಸಂಘವು ಜಿಲ್ಲಾ ಮಟ್ಟಕ್ಕೆ ಏರಿತು, ಆಗ 24 ತಂಡಗಳಿದ್ದವು. ರಾಜ್ಯದ ಸ್ಕೌಟ್ ಮುಖ್ಯ ಆಯುಕ್ತ ಪಿ. ಶಿವಶಂಕರ್ ಇದಕ್ಕೆ ಕಾರಣರಾದರು.

-ಕೊಂಡಜ್ಜಿ ಬಸಪ್ಪನವರ ಪಾತ್ರ:
1951 ವಿಶ್ವ ಸ್ಕೌಟ್ ಜಾಂಬೂರಿ ಆಸ್ಟ್ರಿಯಾದಲ್ಲಿ ನಡೆದಾಗ ಇದರ ಲೀಗಲ್ ಅಡ್ವೈಸರ್ ಅಂದರೆ ಕಾನೂನು ಸಲಹೆಗಾರರಾಗಿ ಕೊಂಡಜ್ಜಿ ಬಸಪ್ಪನವರು, ಪಬ್ಲಿಕ್ ರಿಲೇಶನ್ ಆಫೀಸರ್ ಅಂದರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿ ಪ್ರಸಿದ್ಧ ಕೈಗಾರಿಕೋದ್ಯಮಿ ದಾನಿ ಚಿಗಟೇರಿ ಜಯಣ್ಣನವರು, ಮೆಡಿಕಲ್ ಆಫೀಸರ್ ಅಂದರೆ ಆರೋಗ್ಯ ಅಧಿಕಾರಿಗಳಾಗಿ ಡಾ. ಜಿ ವಿ ಶಿವಶಂಕರ್ ರವರು ಭಾಗವಹಿಸಿದ್ದು ನಮ್ಮ ರಾಜ್ಯದ ಹಾಗೂ ದಾವಣಗೆರೆಯ ಹೆಮ್ಮೆ ಎನ್ನಬಹುದು. ಮುಂದೆ ಕೊಂಡಜ್ಜಿ ಬಸಪ್ಪನವರು ರಾಜ್ಯ ಆಯುಕ್ತರಾದರು, ಆಗ ಮುನ್ಸಿಪಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಆರ್ ಚಂದ್ರಶೇಖರಯ್ಯನವರು ಚಿತ್ರದುರ್ಗ ಜಿಲ್ಲಾ ಸ್ಕೌಟ್ಸ್ ಆಯುಕ್ತರಾಗಿದ್ದರು. ಮೈಸೂರಿನ ಮಹಾರಾಜ ರಾಜಪ್ರಮುಖ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ದಾವಣಗೆರೆಗೆ ಬಂದಾಗ ದಾವಣಗೆರೆ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ‘STAVE ADEN’ ಗೌರವ ನೀಡಿದರು, ತಮ್ಮ ಸ್ಕೌಟ್ ದಂಡಗಳು ಅಂದರೆ ದೊಣ್ಣೆಗಳಿಂದಲೇ ಜಯದೇವ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ಸ್ವಾಗತ ಕಮಾನು ನಿರ್ಮಿಸಿದ್ದರು, ಇದು ಮಹಾರಾಜರಿಗೆ ಅತ್ಯಂತ ಇಷ್ಟವಾಯಿತು. ದಾವಣಗೆರೆ ಸ್ಕೌಟ್ ಗೈಡ್ ಗಳಿಂದ ಶ್ರಮದಾನ ಶಿಬಿರಗಳ ಆರಂಭವಾಗಿ ಮುನ್ಸಿಪಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಸೀತಾರಾಮರಾವ್ ಹಾಗೂ ಶಿಕ್ಷಕರಾದ ಶಂಕರನಾರಾಯಣ ರಾವ್, ಬಾಳಾಚಾರ್ಯರ ನೇತೃತ್ವದಲ್ಲಿ ಜಿಗಳಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ, ಕುಂಬಳೂರು ದೇವರ ಬೆಳಕೆರೆಯ ರಸ್ತೆ ಹಾಗೂ ಶಿವಮೊಗ್ಗ ಹೊಸಪೇಟೆ ರಸ್ತೆಗೆ ಅನುಕೂಲಕರವಾದ ಶ್ರಮದಾನ ಸ್ಕೌಟ್ ಗಳು ಮಾಡಿದರು. ಚಿಗಟೇರಿ ಜಯಣ್ಣ, ಡಾ. ಜಿ ವಿ ಶಿವಶಂಕರ್, ಎಂ ಕೆ ಪಾಣಿ ಮುಂತಾದವರು ಪ್ರೋತ್ಸಾಹಕರಾಗಿದ್ದರು. ಲೋಕಸಭಾ ಸದಸ್ಯರು ಕೇಂದ್ರ ಸಚಿವರು ಆಗಿದ್ದ ಕೀರ್ತಿಶೇಷ ಕೊಂಡಜ್ಜಿ ಬಸಪ್ಪನವರು ಕೊಂಡಜ್ಜಿಯಲ್ಲಿ ರಾಜ್ಯದ ಪ್ರಮುಖವಾದ ಸ್ಕೌಟ್ ತರಬೇತಿ ಕೇಂದ್ರ ಮೂಡಿ ಬರಲು ಪ್ರಮುಖ ಕಾರಣಕರ್ತರಾದರು.

Klive Special Article -ಪುನರ್ ನಿರ್ಮಿತ ಸ್ಕೌಟ್ ಭವನ:
ಸುಮಾರು 80 ವರ್ಷ ಹಳೆಯದಾಗಿದ್ದ ಸುಣ್ಣದ ಗಾರೆಯ ನಿರ್ಮಾಣವಾಗಿದ್ದ ಸ್ಕೌಟ್ ಭವನವು ಸುಮಾರು 2 ಕೋಟಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಈಗ ಸುಸಜ್ಜಿತವಾಗಿ ಪುನರ್ ನಿರ್ಮಾಣಗೊಂಡಿದ್ದು ಇದಕ್ಕೆ ಭಾರತ್ ಸ್ಕೌಟ್ಸ್ ಗೈಡ್ಸ್ ದಾವಣಗೆರೆ ಟ್ರಸ್ಟ್ ನಿಂದ 1 ಕೋಟಿ 25 ಲಕ್ಷ, ರಾಜ್ಯ ಸ್ಕೌಟ್ ಸಂಸ್ಥೆಯಿಂದ (ಮಾಜಿ ಸಚಿವ ಡಾ. ಪಿ ಜಿ ಆರ್ ಸಿಂಧ್ಯಾ ಈಗ ಮುಖ್ಯ ಆಯುಕ್ತರು) 1 ಕೋಟಿ ರೂಪಾಯಿ, ಭೋಜನಾಲಯಕ್ಕೆ ಚಿಗಟೇರಿ ಜಯಪ್ರಕಾಶ್ ರಿಂದ 1 ಲಕ್ಷ ರೂಪಾಯಿ, ಆಡಿಟೋರಿಯಂಗೆ ಚಿಗಟೇರಿ ಜಯಣ್ಣನವರ ಹೆಸರಿನಲ್ಲಿ ಮುರುಘರಾಜೇಂದ್ರ ಚಿಗಟೇರಿಯವರಿಂದ 2 ಲಕ್ಷ ರೂಪಾಯಿ, ಕಟ್ಟಡಕ್ಕೆ ಲಕ್ಷ್ಮಣಶೆಟ್ಟಿ ಟ್ರಸ್ಟ್ ನಿಂದ 1 ಲಕ್ಷ ರೂಪಾಯಿ ಹೀಗೆ ಸ್ಥಳೀಯ ದಾನಿಗಳಿಂದ 5 ಲಕ್ಷ ರೂಪಾಯಿ ಸಂದಾಯವಾಗಿದೆ.
ಪುನರ್ ನಿರ್ಮಾಣಗೊಂಡಿರುವ ಈ ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಕೌಟ್ ಭವನವು ಅತ್ಯಂತ ಸುಸಜ್ಜಿತವಾಗಿದ್ದು ನಗರ ಮಧ್ಯಭಾಗದಲ್ಲಿ ಪ್ರೌಢಶಾಲಾ ಮೈದಾನ ಪಕ್ಕದಲ್ಲಿ ಈ ಭವನವು ಬಹು ಉಪಯೋಗಿ ಹಾಲ್ ಆಗಿದ್ದು ಸುಸಜ್ಜಿತವಾದ ವೇದಿಕೆ ಹಾಗೂ ಆಸನ ವ್ಯವಸ್ಥೆ ಇರುವ ಸಭಾಂಗಣ, ಊಟದ ಹಾಲ್, ರೂಮ್ ಗಳ ವ್ಯವಸ್ಥೆ ಇದ್ದು ಸಾರ್ವಜನಿಕರು, ಶಾಲಾ ಕಾಲೇಜು, ಸಂಘಸಂಸ್ಥೆಗಳವರು ಕಾರ್ಯಕ್ರಮ ಸಮಾರಂಭಗಳನ್ನು ನಡೆಸಲು ತುಂಬಾ ಅನುಕೂಲಕರವಾಗಿದೆ. ಈ ಭವನದ ಆವರಣದಲ್ಲಿ ಅಥಣಿ ಕೊಟ್ರಪ್ಪ ವಾಣಿಜ್ಯ ಸಂಕೀರ್ಣ ಟವರ್, ಜಂಬಿಗಿ ಶರಣಪ್ಪ ಶತಮಾನೋತ್ಸವ ಕಟ್ಟಡ ಮುಂತಾದವುಗಳು ಇವೆ.
ಇಂದು ಬೆಳಿಗ್ಗೆ 11 ಗಂಟೆಗೆ ಸ್ಕೌಟ್ ಭವನ ಉದ್ಘಾಟನೆಯನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು, ಜಯಣ್ಣ ಚಿಗಟೇರಿ ಸಭಾಂಗಣದ ಉದ್ಘಾಟನೆಯನ್ನು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಡಾ. ಪಿ ಜಿ ಆರ್ ಸಿಂಧ್ಯಾ ನೆರವೇರಿಸಲಿದ್ದು, ಕೊಂಡಜ್ಜಿ ಬಸಪ್ಪ ಆಡಳಿತ ಕಚೇರಿಯ ಉದ್ಘಾಟನೆಯನ್ನು ರಾಜ್ಯ ಸಂಸ್ಥೆಯ ಸಹಾಯಕ ಆಯುಕ್ತ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ಎಂ ಕೆ ಪಾಣಿ ಯೂಥ್ ಹಾಸ್ಟೆಲ್ ಉದ್ಘಾಟನೆಯನ್ನು ನವದೆಹಲಿ ರಾಷ್ಟ್ರ ಸಂಸ್ಥೆಯ ಆಯುಕ್ತ ಎ ಎಸ್ ಮಧುಸೂದನ್, ಗುಂಡಿ ವನಜಾಕ್ಷಮ್ಮ ವೇದಿಕೆಯ ಉದ್ಘಾಟನೆಯನ್ನು ರಾಜ್ಯ ಸಂಸ್ಥೆಯ ಆಯುಕ್ತೆ ಶ್ರೀಮತಿ ಗೀತಾ ನಟರಾಜ್, ಜಯಪ್ರಕಾಶ್ ಚಿಗಟೇರಿ ಭೋಜನಾಲಯದ ಉದ್ಘಾಟನೆಯನ್ನು ಚಾಮುಂಡಿ ಸ್ಕೌಟ್ಸ್ ಮತ್ತು ಗೈಡ್ಸ್ ಗ್ರೂಪ್ ನ ಶಾಶ್ವತ ಟ್ರಸ್ಟಿ, ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಛಾಯಾಚಿತ್ರ ಗ್ಯಾಲರಿ ಉದ್ಘಾಟನೆಯನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸ್ಕೌಟ್ಸ್ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಉದ್ಘಾಟಿಸಲಿದ್ದು ಸಂಸ್ಥೆಯ ಜಿಲ್ಲಾಧ್ಯಕ್ಷ ಆರ್ ಡಿ ಬದ್ರಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ದಾವಣಗೆರೆ ಜಿಲ್ಲಾ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ವಾಸಿಲ್, ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ ಚಿಗಟೇರಿ ಮುಂತಾಗಿ ಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದಾವಣಗೆರೆ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಸ್ಕೌಟರ್ಸ್ ಮತ್ತು ಗೈಡರ್ಸ್ ಗಳು ಬನ್ನೀಸ್, ಕಬ್ಸ್, ಬುಲ್ಬುಲ್ಸ್, ಸ್ಕೌಟ್ಸ್ ,ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಭಾಗವಹಿಸಲಿದ್ದಾರೆ.
-ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು,
ಭಾರತ್ ಸ್ಕೌಟ್ಸ್ ಗೈಡ್ಸ್ ದಾವಣಗೆರೆ ಜಿಲ್ಲಾ ಉಪಾಧ್ಯಕ್ಷರು-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadra Dam ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ

Bhadra Dam ಭದ್ರಾ ಜಲಾಶಯಕ್ಕೆ ಮಳೆ ಹಿನ್ನೆಲೆಯಲ್ಲಿ ನಿರಂತರವಾಗಿ ನೀರಿನ ಹರಿವು...

DC Shivamogga ಮತದಾರರ ಪಟ್ಟಿ ಪರಿಷ್ಕರಣೆ, ಸಹಕರಿಸಲು ಜಿಲ್ಲಾ ಜನತೆಗೆ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಮನವಿ

DC Shivamogga ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ದಪಡಿಸಲು...

B.Y. Raghavendra ನಮ್ಮ ಸಹಕಾರಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖ : ಬಿ.ವೈ.ರಾಘವೇಂದ್ರ

B.Y. Raghavendra ಅಂತರರಾಷ್ಟ್ರೀಯ ಸಹಕಾರಿ ದಿನ–2026 ಹಾಗೂ ಕೇಂದ್ರ ಸಹಕಾರ ಸಚಿವಾಲಯ...