ಉತ್ತರಪ್ರದೇಶದ ಲಿಖಿಂಪುರ-ಖೇರಿ ಹಿಂಸಾಚಾರ ಪ್ರಕರಣದ ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಲು ನಿರ್ಧರಿಸಲಾಗಿತ್ತು.
ಈಗ ಈ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ನೇಮಿಸಿದೆ. ಇವರು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದರು.
ಮುಖ್ಯ ನ್ಯಾಯಮೂರ್ತಿಗಳಾದ ಎನ್.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್,ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ರಾಜ್ಯ ಸರ್ಕಾರ ನೀಡಿದ ಐಪಿಎಸ್ ಅಧಿಕಾರಿಗಳ ಹೆಸರನ್ನು ಪರಿಗಣಿಸಿ ಅದರಲ್ಲಿ ಮೂವರು ಅಧಿಕಾರಿಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡದ ಭಾಗವಾಗಿ ನೇಮಿಸಿದೆ. ಈ ಕುರಿತು ಶೀಘ್ರದಲ್ಲೇ ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.
ಲಿಖಿಂಪುರ -ಖೇರಿ ತನಿಖೆ ನ್ಯಾ.ರಾಕೇಶ್ ಕುಮಾರ್ ನೇಮಕ
ಮಾದಕ ವ್ಯಸನ ಜನಜಾಗೃತಿ ಅಭಿಯಾನ
ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಶಿಸ್ತು ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿ ಹಾಕಿದಲ್ಲಿ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ನಾವೆಲ್ಲ ಕಾರ್ಯೋನ್ಮುಖರಾಗಿರಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನುಡಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನ-2021 ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಅಡಿಪಾಯ ತುಂಬ ಸದೃಢವಾಗಿರಬೇಕು. ಅವರಿಗೆ ಉತ್ತಮ ಸಾಮಾಜಿಕ ವಾತಾವರಣ, ಶಿಕ್ಷಣ, ಆರೋಗ್ಯ ಒದಗಿಸಬೇಕು. ಆಗ ಇಡೀ ಕುಟುಂಬ, ಸಮಾಜದ ಬೆಳವಣಿಗೆ ಸಾಧ್ಯ. ಹಾಗೂ ವಿದ್ಯಾರ್ಥಿಗಳು ಕೂಡ ಶಿಸ್ತು ಮತ್ತು ಪರಿಶ್ರಮದಿಂದ ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದರು.
ಮಾದಕ ವಸ್ತುಗಳ ಸೇವನೆ ಒಂದು ಫ್ಯಾಷನ್ ಎಂಬಂತೆ ಬಿಂಬಿಸಿ, ಮಾದಕ ದ್ರವ್ಯಗಳನ್ನು ತುಂಬಾ ಆಕರ್ಷಕ ಪ್ಯಾಕೆಟ್ಗಳನ್ನು ಮಾಡಿ ಮಕ್ಕಳನ್ನು, ಹದಿಹರೆಯದವರನ್ನು ಸೆಳೆಯಲಾಗುತ್ತಿದೆ. ಶಾಲಾ ಹಂತದಲ್ಲಿಯೇ ಮಾದಕ ದ್ರವ್ಯಗಳ ಬಗ್ಗೆ ಅರಿವು ಮೂಡಿಸುವುದು ಬಹು ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಬೀಡಿ, ಸಿಗರೇಟ್ ಇತರೆ ಮಾದಕ ವ್ಯಸನಕ್ಕೆ ತುತ್ತಾದರೆ ಅದರ ದುಷ್ಪರಿಣಾಮ ತೀವ್ರವಾಗಿದ್ದು ಅದರಿಂದ ಹೊರಬರುವುದು ಕೂಡ ಅತ್ಯಂತ ಕಷ್ಟವಾಗಿರುತ್ತದೆ. ಹಾಗೂ ಈ ಮಾದಕ ವಸ್ತುಗಳನ್ನು ಕೊಳ್ಳಲು ಅವಶ್ಯಕವಾದ ಹಣಕ್ಕಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಹ ಮಕ್ಕಳು ತೊಡಗುವ ಸಾಧ್ಯತೆ ಇದ್ದು ಇಂತಹ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಬೆಲೆ ಕೂಡ ಸಿಗುವುದಿಲ್ಲ. ಆದ್ದರಿಂದ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಅಧ್ಯಯನನಿರತರಾಗಿ ಉನ್ನತ ಮಟ್ಟದ ಹುದ್ದೆಗಳಿಗೇರಬೇಕು. ದಯಮಾಡಿ ಯಾವುದೇ ಮಕ್ಕಳು ಈ ದ್ರವ್ಯಗಳನ್ನು ಮುಟ್ಟಬಾರದು ಎಂದು ತಿಳಿ ಹೇಳಿದರು.
ಮಾದಕ ದ್ರವ್ಯ ವ್ಯಸನ ದುಷ್ಪರಿಣಾಮಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆರೋಗ್ಯ ಮತ್ತು ಸಮಾಜದ ಬೆಳೆವಣಿಗೆ ವಿಷಯವನ್ನು ಆಧರಿಸಿ ರಚಿಸಿರುವ ಚಿತ್ರಕಲೆ ಮತ್ತು ಪ್ರಬಂಧಗಳು ಪ್ರಬುದ್ಧವಾಗಿವೆ. ದುಷ್ಪರಿಣಾಮ ಕುರಿತು ಅವರ ಯೋಚನಾ ಲಹರಿ ನಿಜಕ್ಕೂ ಅಚ್ಚರಿ ಮೂಡಿಸುವಂತಿದ್ದು, ಮಕ್ಕಳ ಸೃಜನಾತ್ಮಕತೆ ಎಲ್ಲರೂ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ ಅವರು ಜಾಗೃತಿ ಅಭಿಯಾನ ನಡೆಸಿದ ಪೊಲೀಸ್ ಇಲಾಖೆ ಮತ್ತು ವಿವಿಧ ಜಾಗೃತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್.ಬಿ.ಎಂ ಮಾತನಾಡಿ, ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದ್ದು ಇದರ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 50 ಶಾಲೆಗಳಿಗೆ ಭೇಟಿ ನೀಡಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನೊಳಗೊಂಡು ಮಾದಕ ವ್ಯಸನ ದುಷ್ಪರಿಣಾಮಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ.
ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾದಕ ದ್ರವ್ಯ ವಸನ ದುಷ್ಪರಿಣಾಮಗಳ ಕುರಿತು ಆಯೋಜಿಸಲಾಗಿದ್ದ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಮನೋಜ್ಞವಾಗಿ ವಿಷಯವನ್ನು ಚಿತ್ರಿಸಿದ್ದಾರೆ. ಇದಕ್ಕೆ ನಾನು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮನೋತಜ್ಞ ಡಾ.ಅರವಿಂದ್ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹಾಗೂ ಇದೇ ವೇಳೆ ಮಾದಕ ದ್ರವ್ಯ ವ್ಯಸನ ಹೇಗೆ ಇಡೀ ಕುಟುಂಬವನ್ನು ತೊಂದರೆಗೀಡು ಮಾಡುತ್ತದೆ ಎಂಬ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.
ಬಹುಮಾನ ವಿತರಣೆ : ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ 63 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್ಪಿ ಹೆಚ್.ಟಿ.ಶೇಖರ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು.
ಪ್ರಾದೇಶಿಕ ಆಯುಕ್ತರ ಮಟ್ಟದ ಅಧಿಕಾರಿ ನೇಮಿಸಿ
ಶರಾವತಿ ವಿದ್ಯುತ್ ಯೋಜನೆ ನಾಡಿಗೇ ಬೆಳಕು ನೀಡಿತು.
ಆದರೆ ಮುಳುಗಡೆ ಪ್ರದೇಶದಲ್ಲಿದ್ದ ಜೀವಗಳಿಗೆ ಬಾಳನ್ನೇ ನೀಡಲಾಗಿಲ್ಲ.
ಮನೆಮಾರು ತ್ಯಾಗಮಾಡಿದವರು ಇನ್ನೂ ಅಲೆಮಾರಿಗಳಂತೆ ಪರಿಹಾರಕ್ಕಾಗಿ ಅಲೆಯುವಂತಾಗಿದೆ.
ಎಷ್ಟೋ ಕುಟುಂಬಗಳ ಹಿರಿಯರು ಪರಿಹಾರದ ಕನಸು ಕಾಣುತ್ತಲೇ ಸಾವನ್ನಪ್ಪಿದ್ದಾರೆ. ಈ ಸಮಸ್ಯೆಯ ಪರಿಹಾರ ಕುರಿತು ಹೊಸನಗರ ತಾಲೂಕಿನ ಮುಡುಗೊಪ್ಪ ದಲ್ಲಿ ಸಮಾಲೋಚನೆ ಸಭೆ ನಡೆಯಿತು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಐದು ದಶಕಗಳು ಕಳೆದರೂ ಜೀವಂತವಾಗಿವೆ. ಚಕ್ರಾ, ಸಾವೇಹಕ್ಲು, ವಾರಾಹಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಜಿಲ್ಲಾಧಿಕಾರಿ ಅವರಿಗೆ ಇಡೀ ಜಿಲ್ಲೆಯನ್ನು ನಿಭಾಯಿಸುವ ಜೊತೆಗೆ ಈ ಬಗ್ಗೆಯೂ ಗಮನ ನೀಡುವುದು ಕಷ್ಟ. ಮುಳುಗಡೆ, ಪುನರ್ವಸತಿ, ಪರಿಹಾರ ಹೀಗೆ ಹಲವಾರು ಸಮಸ್ಯೆಗಳಿವೆ. ಕಂದಾಯ, ಅರಣ್ಯ, ಕೆಪಿಸಿ ಸಮನ್ವಯತೆ ಸಾಧಿಸಿಕೊಂಡು, ಸರ್ಕಾರದ ಮಟ್ಟದಲ್ಲಿ ನೇರವಾಗಿ ವ್ಯವಹರಿಸುವಂತೆ ಉನ್ನತ ಅಧಿಕಾರಿಯನ್ನು ನೇಮಿಸಬೇಕು ಎಂದು ನಗರದ ಹೋಬಳಿ ನಾಗರಿಕರ ಹೋರಾಟ ವೇದಿಕೆ ಸಂಚಾಲಕ ವಿ.ಜಿ. ಶ್ರೀಕರ್ ಒತ್ತಾಯಿಸಿದ್ದಾರೆ.
ಸಮಿತಿಗೆ ಪ್ರಾದೇಶಿಕ ಆಯುಕ್ತ ಕೇಡರ್ ಅಧಿಕಾರಿಯನ್ನು ನೇಮಿಸಬೇಕು. ಅವರಿಗೆ ಅಧಿಕಾರ ಚಲಾಯಿಸುವ ಸ್ವತಂತ್ರವನ್ನು ನೀಡಬೇಕು. ತಾಲೂಕಿನ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂತ್ರಸ್ತರ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಈ ನಿರ್ಣಯವನ್ನು ತೆಗೆದುಕೊಂಡರು.
ಈ ಕಾರ್ಯಕ್ರಮದಲ್ಲಿ ರೈತ ಮುಖಂಡ ಜಿ.ವಿ. ರವೀಂದ್ರ, ಎಪಿಎಂಸಿ ಸದಸ್ಯ ಕಣ್ಕಿ ಮಹೇಶ್, ನಿತಿನ್ ಮಳಲಿ, ರಾಜೇಶ್, ಎಸ್.ಎಂ ಹರೀಶ್ ಇನ್ನು ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.
ಭತ್ತ, ಮೆಕ್ಕೆಜೋಳ ರಾಗಿಗೆ ಬೆಂಬಲ ಬೆಲೆ ಹೆಚ್ಚಿಸಿ
ರಾಜ್ಯ ಸರ್ಕಾರ ಬತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಖರೀದಿಗಾಗಿ ಎಲ್ಲೆಡೆ ಖರೀದಿ ಕೇಂದ್ರ ತರೆಯಬೇಕೆಂದು ರಾಜ್ಯ ರೈತಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ದುಬಾರಿ ಕೂಲಿ, ರಸಗೊಬ್ಬರ, ಕೀಟನಾಶಕಗಳ, ಬೆಲೆ ಎರಡುಪಟ್ಟು ಹೆಚ್ಚಾಗಿದೆ. ರೈತರ ಜೀವನ ವೆಚ್ಚವೂ ಜಾಸ್ತಿಯಾಗಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಕಡಿಮೆಯಾಗುತ್ತಿದೆ. ರೈತರು ಬೆಳೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆ ಕಾರಣದಿಂದ ಅವರು ಬ್ಯಾಂಕ್ ಗಳ ಸಾಲವನ್ನು ತೀರಿಸಲು ಆಗುತ್ತಿಲ್ಲ. ಸಾಲದ ಹೊರೆ ಜಾಸ್ತಿಯಾಗಿ ಜೀವನ ನಿರ್ವಹಣೆಯ ದುರಸ್ತವಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪನವರು ಹೇಳಿದ್ದಾರೆ.
ಜಿಲ್ಲೆಯಲ್ಲಿ 78,000 ಹೆಕ್ಟೇರ್ ನಲ್ಲಿ ಭತ್ತ, 53,000 ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಹಾಗೂ ರಾಜ್ಯದಲ್ಲಿ 10.22 ಲಕ್ಷ ಹೆಕ್ಟೇರ್ ನಲ್ಲಿ ಭತ್ತ ,14.16 ಲಕ್ಷ ಹೆಕ್ಟೇರ್ ನಲ್ಲಿ ಮೆಕ್ಕೆಜೋಳ ಮತ್ತು 6.90 ನಲ್ಲಿ ರಾಗಿ ಬೆಳೆದಿದ್ದಾರೆ.
ಈ ವರ್ಷ ಉತ್ತಮ ಫಸಲು ಬಂದರೂ ಕುಯ್ಲು ಹಂತದಲ್ಲಿ ಬಂದ ಮಳೆಯಿಂದಾಗಿ ಕೈಗೆ ಸಿಕ್ಕಿದ್ದು, ಬಾಯಿಗೆ ಬರದಂತಾಗಿದೆ.
ಆದ್ದರಿಂದ ಮೆಕ್ಕೆಜೋಳ ಮತ್ತು ಭತ್ತದ ಧಾರಣೆ ಕುಸಿತ ವಾಗಿರುವುದರಿಂದ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡೂ ಬೆಳೆಗಳಿಗೆ ರೂ.3 ಸಾವಿರ ಮತ್ತು ರಾಗಿಗೆ 4 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕೆಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ನಾಗರಾಜ್ ಗೆ ಮತ್ತೊಂದು ಪ್ರಶಸ್ತಿಯ ಗರಿ
ಸಂಗೀತ, ನೃತ್ಯ, ನಾಟಕದಂತೆಯೇ ಫೋಟೋಗ್ರಫಿಗೂ ಕೂಡ ತನ್ನದೇ ಆದ ಮಹತ್ವವಿದೆ. ಫೋಟೋಗ್ರಫಿ ಎನ್ನುವುದು ಒಂದು ಅದ್ಭುತ ಕಲೆ. ಇದು ಸುಲಭವಾಗಿ ಎಲ್ಲರಿಗೂ ದಕ್ಕುವುದಿಲ್ಲ. ಈ ಸುಂದರ ಫೋಟೊಗ್ರಫಿ ಕಲೆಯ ಮಾಂತ್ರಿಕ ಶಿವಮೊಗ್ಗದ ನಾಗರಾಜ್. ಈಗಾಗಲೇ ಖ್ಯಾತ ವೃತ್ತಪತ್ರಿಕೆ ಗಳಲ್ಲಿ ಅವರ ಸಾವಿರಾರು ಛಾಯಾಚಿತ್ರಗಳು ನೋಡುಗರ ಕಣ್ಸೆಳೆದಿವೆ. ಛಾಯಾಚಿತ್ರ ಕಲೆಯನ್ನ ಕರಗತ ಮಾಡಿಕೊಂಡಿರುವ ನಾಗರಾಜ್ ಅವರನ್ನ ಈಗಾಗಲೇ ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಪ್ರಸ್ತುತ ಇವರು ಪುಣೆಯ ದ ಫೋಟೋಗ್ರಫಿಕ್ ಸೊಸೈಟಿ(ಪಿ.ಎಸ್.ಪಿ.) ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪುರಸ್ಕೃತರಾಗಿದ್ದಾರೆ. ಪಿ.ಎಸ್.ಪಿ. ನಡೆಸಿದ ಈ ಸ್ಪರ್ಧೆಯಲ್ಲಿ ದೇಶದ ನೂರಾರು ಛಾಯಾ ಚಿತ್ರಗ್ರಾಹಕರು ಸ್ಪರ್ಧಿಸಿದ್ದರು. ಇವರಲ್ಲಿ ಶಿವಮೊಗ್ಗ ನಾಗರಾಜ್ ಎರಡನೇ ಬಹುಮಾನ ಪಡೆದಿದ್ದಾರೆ. ಪೆಂಡಮಿಕ್(ಸಾಂಕ್ರಾಮಿ ರೋಗಗಳು) ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದು, ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬನನ್ನು ಅವಸರವಾಗಿ ಆಸ್ಪತ್ರೆಗೆ ಸಾಗಿಸುವ ಮತ್ತು ಆ ವ್ಯಕ್ತಿಯ ಸಂಬಂಧಿಕರ ಆತಂಕದ ಚಿತ್ರವನ್ನು ಇವರು ಸೆರೆಹಿಡಿದಿದ್ದರು. ಇದೊಂದು ಮಾನವೀಯತೆಯ ಚಿತ್ರವಾಗಿತ್ತು. ಇದನ್ನು ಮಾನ್ಯ ಮಾಡಿದ ತೀರ್ಪುಗಾರರ ತಂಡವು ನಾಗರಾಜ್ ಅವರಿಗೆ ಈ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯ ಮೊತ್ತ ಹಾಗೂ ಪದಕವನ್ನು ನಾಗರಾಜ್ ಈಗಾಗಲೇ ಪಡೆದಿದ್ದಾರೆ. ಶಿವಮೊಗ್ಗ ನಾಗರಾಜ್ ಈಗಾಗಲೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಈ ಹಿಂದೆ ನ್ಯೂಯಾರ್ಕ್, ನಾರ್ತ್ ಮೆಸಿಡೋನಿಯಾ, ಬಾಂಗ್ಲಾದೇಶ, ಶ್ರೀಲಂಕಾ, ಭಾರತ ಸೇರಿದಂತೆ ಹಲವು ಛಾಯಾಗ್ರಾಹಕ ಸಂಸ್ಥೆಗಳು ನಡೆಸಿದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ರಾಜ್ಯ, ರಾಷ್ಟ್ರಕ್ಕೂ ಗೌರವ ತಂದುಕೊಟ್ಟಿದ್ದಾರೆ. ನಾಗರಾಜ್ ಮೂಲತಃ ಪರಿಸರ ಛಾಯಾಗ್ರಾಹಕರಾಗಿದ್ದಾರೆ. ಪತ್ರಿಕೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ಅವರು ತೆಗೆದ ಹಕ್ಕಿಗಳ ಫೋಟೋಗಳು ಯುಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕ ಹೆಸರು ಮಾಡಿವೆ. ಅನೇಕ ಬಾರಿ ಛಾಯಾ ಚಿತ್ರ ಪ್ರದರ್ಶನ ನಡೆಸಿದ ನಾಗರಾಜ್ ಅವರ ಕ್ಯಾಮೆರಾದ ಕಣ್ಣಿನಲ್ಲಿ ಪ್ರೀತಿ, ಅಂತಃಕರಣ, ವಿಸ್ಮಯ ಚೆಲುವು, ಮಾನವೀಯತೆ ಬಡತನ, ರಾಜಕೀಯ ಸೇರಿದಂತೆ ಹಲವು ವಿಷಯ ಅಡಕವಾಗಿದ್ದು, ಇವರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ. ಫೋಟೋಗ್ರಫಿ ಕ್ಷೇತ್ರದಲ್ಲಿ ಇವರು ಮತ್ತಷ್ಟು ಎತ್ತರಕ್ಕೆ ಬೆಳೆಯಲ್ಲಿ ಎಂದು ಕೆ ಲೈವ್ ಬಳಗ ಹಾರೈಸುತ್ತದೆ.
ಹ್ಯಾಕರ್ ಶ್ರೀಕಿಯ ಚಮತ್ಕಾರ
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರೋಪಿ ಹ್ಯಾಕರ್ ಶ್ರೀಕಿಯ ಚಮತ್ಕಾರ ಹೊರಬಿದ್ದಿದೆ. ಒಂದೇ ಲ್ಯಾಪ್ಟಾಪ್ನಲ್ಲಿ ಬಿಟ್ ಕಾಯಿನ್ ಗಳ ಅಕೌಂಟ್ಗೆ ಪ್ರವೇಶಿಸಲು ಬಳಸುವ 76 ಲಕ್ಷ ಪ್ರೈವೇಟ್ ಕೀ ಮತ್ತು ಹಲವು ಡಿಜಿಟಲ್ ವ್ಯಾಲೆಟ್ ಗಳು ಇದ್ದವು ಎಂಬುದನ್ನು ವಿಧಿವಿಜ್ಞಾನ ವಿಶ್ಲೇಷಣಾ ವರದಿ ತಿಳಿಸಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಕೋರಿಕೆಗೆ ಸೈಬರ್ ತಂತ್ರಜ್ಞರು ಶ್ರೀಕಿಯ ಲ್ಯಾಪ್ ಟಾಪ್ ಅನ್ನು ಪರಿಶೀಲನೆಗೆ ಒಳಪಡಿಸಿದ್ದರು. ಶ್ರೀಕಿ ಹೊಂದಿದ್ದ ಕ್ಲೌಡ್ ಅಕೌಂಟ್ ‘ಕ್ಲೌಡ್ ಅಕೌಂಟ್’ ಒಂದನ್ನು ಪರಿಶೀಲಿಸಿದಾಗ 27-ಇ ವ್ಯಾಲೆಟ್ಗಳು, ಲಕ್ಷಗಟ್ಟಲೆ ಪ್ರೈವೇಟ್ ಕೀಗಳು ಹಾಗೂ ವಿಳಾಸಗಳು ಪತ್ತೆಯಾಗಿದ್ದವು. ಹ್ಯಾಕರ್ ಶ್ರೀಕಿ ‘ಬಿಟ್ ಕಾಯಿನ್ ಕೇರ್’ ಎಂಬ ತಂತ್ರಜ್ಞಾನವನ್ನೇ ಹ್ಯಾಕ್ ಮಾಡಿ. ತನ್ನ ಹಿಡಿತಕ್ಕೆ ತೆಗೆದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಹ್ಯಾಕರ್ ಶ್ರೀಕಿ ಬಿಟ್ ಕಾಯಿನ್ ತನಿಖಾಧಿಕಾರಿಗಳ ದಿಕ್ಕುತಪ್ಪಿಸಲು ‘ಬಿಟ್ ಕಾಯಿನ್ ಕೇರ್’ ತಂತ್ರಾಶವನ್ನೇ ಹ್ಯಾಕ್ ಮಾಡಿ ತಿರುಚಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಸೈಬರ್ ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ.
ಅಭಿನವ್ ಅಬ್ಬರ ಬ್ಯಾಟಿಂಗ್ : ಕರ್ನಾಟಕ ಕ್ಕೆ ಜಯ
ಸೈಯದ್ ಮುಸ್ತಾಕ್ ಅಲಿ ಟಿ – 20 ಟೂರ್ನಿಯು ಪಂದ್ಯ ಸೌರಾಷ್ಟ್ರ ಮತ್ತು ಕರ್ನಾಟಕ ತಂಡಗಳ ನಡುವೆ ನಡೆಯಿತು. ಸೌರಾಷ್ಟ್ರ ವಿರುದ್ಧ ಕರ್ನಾಟಕ ರೋಚಕ ಜಯ ಸಾಧಿಸಿತು.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಾಗಿ ನಡೆಯಿತು. ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಡಿದ ಸೌರಾಷ್ಟ್ರ ತಂಡವು ಶೆಲ್ಡನ್ ಜಾಕ್ಸನ್ 43 ಎಸೆತಗಳಲ್ಲಿ 53 ರನ್ ಗಳಿಸಿ ಅರ್ಧಶತಕ ಭಾರಿಸಿದರು. ಇವರ ಅಬ್ಬರದ ಬ್ಯಾಟಿಂಗ್ ನಿಂದ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು.
146 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಆಡಿದ ಕರ್ನಾಟಕ ಕೇವಲ 2 ಎಸೆತ ಉಳಿದಿದೆ ಎನ್ನುವಾಗ ಕ್ರೀಡಾಂಗಣದ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿಯುವಂತೆ ಮಾಡಿತು. ದಿಟ್ಟತನದ ಬ್ಯಾಟಿಂಗ್ ಪ್ರದರ್ಶಿಸಿದ ಅಭಿನವ್ ಅಂತಿಮ ಓವರ್ ನ 5 ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಹೊಡೆದರು. ಇದರಿಂದಾಗಿ 19 .5 ಓವರ್ ಗಳಲ್ಲಿಯೇ 8 ವಿಕೆಟ್ ಗಳಿಗೆ 150 ರನ್ ಬಾರಿಸಿ ರೋಚಕ ಜಯ ಸಾಧಿಸಿತು.
ಕರ್ನಾಟಕ ತಂಡ ರನ್ ಪಡೆಯುತ್ತಾ ಹೋದಂತೆ ಸೌರಾಷ್ಟ್ರ ದ ಅನುಭವಿ ಎಡಗೈ ಮದ್ಯಮವೇಗಿ ಜಯದೇವ್ ಉನದ್ಕಟ್ ಪೆಟ್ಟು ಕೊಟ್ಟರು. ಇದರಿಂದಾಗಿ ಕರ್ನಾಟಕ ಕೇವಲ 34 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಗಳನ್ನ ಕಳೆದುಕೊಂಡಿತು.
ಈ ಹಂತದಲ್ಲಿ ಒಂದೆಡೆ ವಿಕೆಟ್ ಗಳು ಪತನವಾಗುತ್ತಿದ್ದರೆ, 5 ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಅಭಿನವ್ ಮನೋಹರ್ ತಮ್ಮ ರನ್ ವೇಗಕ್ಕೆ ಕಡಿವಾಣ ಹಾಕಲಿಲ್ಲ. ದಿಟ್ಟತನದಿಂದ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. 49 ಎಸೆತಗಳಲ್ಲಿ 70 ರನ್ ಗಳಿಸಿ ಸೌರಾಷ್ಟ್ರದ ಬೌಲರ್ಗಳನ್ನು ಹೌಹಾರಿದವರಂತೆ ಮಾಡಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ನಾಟಕ ತಂಡವು ಸಯ್ಯದ್ ಮುಷ್ತಾಕ್ ಅಲಿ ಟಿ – 20 ಕ್ರಿಕೆಟ್ ಟೂರ್ನಿಯ 8 ರ ಘಟ್ಟಕ್ಕೆ ಏರಿ ಮತ್ತು ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಕಾರಣರಾದರು.
ಸೌರಾಷ್ಟ್ರದ ಜಯದೇವ್ 4 ವಿಕೆಟ್ ಗಳಿಸಿದರು ಕೂಡ ತಂಡಕ್ಕೆ ಜಯದ ಕಾಣಿಕೆ ಸಾಧ್ಯವಾಗಲಿಲ್ಲ.
ಕರ್ನಾಟಕ ತಂಡದ ವಿ.ಕೌಶಿಕ್ . ವೈಶಾಖ್ ವಿಜಯ್ ಕುಮಾರ್. ಮತ್ತು ಕೆ.ಸಿ. ಕಾರ್ಯಪ್ಪ.ತಲಾ 2 ವಿಕೆಟ್ ಗಳಿಸಿದರು. ದೇವದತ್ತ ಪಡಿಕ್ಕಲ್. ಆರ್. ಸಮರ್ಥ್ ಮತ್ತು ಕೆ . ಗೌತಮ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಕರ್ನಾಟಕ ಕ್ವಾರ್ಟರ್ ಫೈನಲ್ ನಲ್ಲಿ ಬಂಗಾಳ ತಂಡವನ್ನು ಎದುರಿಸಲಿದೆ.
ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿ: ಪ್ರಗತಿಗೆ ಬೆಸುಗೆ
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ್ದಾರೆ.
2017ರಲ್ಲಿ ಉತ್ತರಪ್ರದೇಶದಲ್ಲಿ 6 ಹೆದ್ದಾರಿಗಳನ್ನು ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಈ ಪೈಕಿ ಉತ್ತರಪ್ರದೇಶದ ಪೂರ್ವಾಂಚಲ ಹೆದ್ದಾರಿಯು ಉದ್ಘಾಟನೆಯಾದ ಮೊದಲ ಯೋಜನೆಯಾಗಿದೆ.
ಪೂರ್ವಾಂಚಲ್ ಎಕ್ಸ್ ಪ್ರೆಸ್ ಹೆದ್ದಾರಿಯ ಉದ್ಘಾಟನೆ ಬಳಿಕ, ಸುಲ್ತಾನ್ ಪುರದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. “ಆರು ಪಥಗಳ ಪೂರ್ವಾಂಚಲ ಎಕ್ಸ್ಪ್ರೆಸ್ ಹೆದ್ದಾರಿಯು ಉತ್ತರ ಪ್ರದೇಶದ ಪೂರ್ವಭಾಗದ ಜೀವನಾಡಿಯಾಗಲಿದೆ. ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ. ಹೆದ್ದಾರಿಯು ವಾಯುಪಡೆಗೆ ಶಕ್ತಿ ತುಂಬಲಿದೆ” ಎಂದು ಪ್ರಧಾನಿ ತಿಳಿಸಿದ್ದಾರೆ.
ಈ ಹೆದ್ದಾರಿಯು 341 ಕಿ. ಮೀ ಉದ್ದದ ಮಾರ್ಗವನ್ನು ಹೊಂದಿದೆ. 22,500 ಕೋಟಿ ವೆಚ್ಚವಾಗಿದೆ. ಉತ್ತರ ಪ್ರದೇಶದ ಪೂರ್ವ-ಪಶ್ಚಿಮ ಭಾಗಗಳಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಲಖನೌ, ಗಾಜಿಪುರ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಾಗಿದೆ. ಉತ್ತರಪ್ರದೇಶದ 8 ಜಿಲ್ಲೆಗಳಲ್ಲಿ ಈ ಮಾರ್ಗ ಹಾದು ಹೋಗುತ್ತದೆ.
ಈಗಾಗಲೇ ಇರುವ ಆಗ್ರಾ,ಲಖನೌ ಹೆದ್ದಾರಿಯನ್ನು ಇದು ಸಂಪರ್ಕಿಸುತ್ತದೆ. ರಾಜ್ಯದ ಪೂರ್ವ ಭಾಗವು ಪಶ್ಚಿಮ ಭಾಗದ ಜೊತೆ ಬೆಸೆಯುತ್ತದೆ.
ಈ ಭಾಗ ಬೃಹತ್ ಕೈಗಾರಿಕಾ ಕಾರಿಡಾರ್ ಆಗಿ ಬದಲಾಗಲಿದೆ. ಉದ್ಯೋಗದ ಅವಕಾಶಗಳು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.
ಪುನೀತರನ್ನ ಪರಿಪರಿಯಾಗಿ ನೆನೆದ ಜನಮನ
ಕನ್ನಡ ಚಲನಚಿತ್ರದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ತುಂಬಲಾರದ ನಷ್ಟ. ಉಸಿರು ಅಳಿದ ಬಳಿಕವು ಹೆಸರು ಉಳಿಸಿಕೊಳ್ಳುವ ವ್ಯಕ್ತಿಗಳು ಬಹಳ ಅಪರೂಪ ಪುನೀತ್ ಅವರ ವ್ಯಕ್ತಿತ್ವ ಅದಕ್ಕೊಂದು ಮಾದರಿ. ಪುನೀತ್ ರಾಜಕುಮಾರ್ ಅವರ ನಟನೆ ಹಾಗೂ ಸಾಮಾಜಿಕ ಸೇವೆಗೆ ಮರಣೋತ್ತರ ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತಿದೆ.
ಕರ್ನಾಟಕ ರತ್ನ ಪ್ರಶಸ್ತಿ, ಬಸವ ಶ್ರೀ ಪ್ರಶಸ್ತಿ, ಸಿದ್ದಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಅವರು ಭಾಜನರಾಗಿದ್ದಾರೆ. ಅಲ್ಲದೆ ರಾಜ್ಯದ ಸಾಮಾನ್ಯ ಜನರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲರೂ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲೇಬೇಕೆಂದು ಒತ್ತಾಯ ಹೇರುತ್ತಿದ್ದಾರೆ. ಪುನೀತ್ ಅವರ ನಟನೆಯ ಸಾಧನೆಯ ಜೊತೆಗೆ ಸಮಾಜದ ಮೇಲೆ ಅವರಿಗಿದ್ದ ಕಳಕಳಿಯನ್ನು ನಮ್ಮ ಜನತೆ ಎಷ್ಟು ಮೆಚ್ಚಿದೆ ಎಂದು ಇದರಿಂದ ತಿಳಿಯುತ್ತದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ “ಪುನೀತ್ ನಮನ” ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಚಲನಚಿತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಅಲ್ಲದೆ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗಿಯಾಗಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಭಾಗಿಯಾಗಿದ್ದದ್ದು ಒಂದುದು ವಿಶೇಷ.
ಪುನೀತ್ ನಮನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಪುನೀತ್ ಅವರ ‘ಬೆಟ್ಟದ ಹೂವು’ ಚಿತ್ರದ ಅಮೋಘ ನಟನೆಗೆ ಕೇಂದ್ರ ಸರ್ಕಾರ ‘ಅತ್ಯುತ್ತಮ ಬಾಲ್ಯ ನಟ ಪ್ರಶಸ್ತಿ’ ನೀಡಿದೆ ಹಾಗೂ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರ ಚಿತ್ರವೊಂದಕ್ಕೆ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ ಪ್ರಶಸ್ತಿ’ ನೀಡಿದ್ದನ್ನು ನೆನಪಿಸಿಕೊಂಡರು. ಡಾ.ರಾಜಕುಮಾರ್ ನಿಧನರಾದ ಸಮಯದಲ್ಲಿ ಯಾವ ರೀತಿಯಲ್ಲಿ ಜನ ತಮ್ಮ ದುಃಖ ಮತ್ತು ನಮನವನ್ನು ವ್ಯಕ್ತಪಡಿಸಿದ್ದರೋ, ಅದೇ ರೀತಿ ಪುನೀತ್ ನಿಧನದ ಸಂದರ್ಭದಲ್ಲಿ ಕೂಡ ಜನತೆ ಪ್ರೀತಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪುನೀತ್ ದೊಡ್ಡ ಹೆಜ್ಜೆ ಬಿಟ್ಟು ಹೋಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಕೊಡಿಸಲು ಮುಖ್ಯಮಂತ್ರಿಯವರು ಎಲ್ಲಾ ಪ್ರಯತ್ನ ಮಾಡಬೇಕು ಎಂದು ಒತ್ತಾಯ ಮಾಡಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಚಿತ್ರರಂಗಕ್ಕೆ ಬರುವವರಿಗೆ ಪುನೀತ್ ಹೆಸರಿನಲ್ಲಿ ಒಂದು ತರಬೇತಿ ಸಂಸ್ಥೆ ಅಥವಾ ಸ್ಟುಡಿಯೋ ಸ್ಥಾಪಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ದಕ್ಷಿಣ ಭಾರತದ ಚಲನಚಿತ್ರ ನಟ ಶರತ್ ಕುಮಾರ್ ಮಾತನಾಡಿ ಈ ನಾಡು ನನಗೆ ಯಾವಾಗಲೂ ಹತ್ತಿರ. ಪುನೀತ್ ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳೋಣ ಎಂದರು.
ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿ “ಹಿಂದೆ ಇಲ್ಲೇ ನಡೆದ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ನನ್ನ ಆಯಸ್ಸು ನಿನಗೆ ಕೊಡ್ತೀನಿ ಎಂದು ಪುನೀತ್ ಗೆ ಹೇಳಿದ್ದೆ…. ಇಲ್ಲ… ಆಗ್ತಾಯಿಲ್ಲ. ನನ್ನನ್ನು ಅಲ್ಲಿಗೆ ಕಳಿಸಿ, ಅವನನ್ನು ಇಲ್ಲಿಗೆ ಕರೆಸಿಕೊಳ್ಳಿ” ಎಂದು ಭಾವತೀವ್ರತೆಯಿಂದ ಮಾತನಾಡಿದರು. ಮುಂದೆ ಮಾತುಗಳೇ ಹೊರಡದೆ ದುಃಖತಪ್ತರಾದರು.
ಹಿರಿಯಣ್ಣ ನಟ ಶಿವರಾಜ್ ಕುಮಾರ್ ಮಾತನಾಡಿ “ಇಲ್ಲಿ ಮಾತನಾಡಲು ನನಗೆ ತುಂಬಾ ಕಷ್ಟ ಆಗ್ತುತ್ತಿದೆ. ನನ್ನ ತಮ್ಮ ಪುನೀತ್ ಬಗ್ಗೆ ಪದೇಪದೇ ಮಾತಾಡಿ ಮಾತಾಡಿ…. ಸಂದರ್ಶನಗಳಲ್ಲಿ ಹೊಗಳಿದ್ದು ಜಾಸ್ತಿ ಆಯ್ತೇನೋ? ಅವನಿಗೆ ನನ್ನ ದೃಷ್ಟಿಯೇ ಆಯ್ತಾ?” . ನನಗೆ ಚಿತ್ರರಂಗದಲ್ಲಿ ನಟನೆ ಆಸಕ್ತಿ ಇರಲಿಲ್ಲ ಸ್ಪೂರ್ತಿ ಕೊಟ್ಟವನೇ ಪುನೀತ್ ಎನ್ನುತ್ತಾ ಬಿಕ್ಕಿಬಿಕ್ಕಿ ಅತ್ತರು. ಈ ಸನ್ನಿವೇಶದಲ್ಲಿ ಕಣ್ಣೀರು ತರಿಸುವಂತಿತ್ತು.
ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಇಬ್ಬರು ಪುತ್ರಿಯರು ದುಃಖ ಸಾಗರದಲ್ಲಿ ಮುಳುಗಿದ್ದರು.
ಮುತ್ತುರಾಜ ಹೆತ್ತ ಮುತ್ತೆ ಎತ್ತ ಹೋದೆಯೋ.
ಅತ್ತು ಕರೆದರೂ ಮತ್ತೆ ಬಾರದಾದೆಯೋ….
ನಾಗೇಂದ್ರ ಪ್ರಸಾದ್ ರಚಿಸಿದ ಈ ಹಾಡು ಅಷ್ಟೇ ಆರ್ಥ ಧ್ವನಿಯಲ್ಲಿ ಮೂಡಿ ಬಂದಿತು. ಕೇಳಿದವರ ಎದೆಯಲ್ಲಿ ಪುನೀತರ ಅಗಲಿಕೆಯ ದುಃಖವನ್ನು ಭರಿಸಲು ಸಾಂತ್ವನ ಹೇಳುವಂತಿತ್ತು.
ರಾಜ್ಯದಲ್ಲಿ ಎನ್. ಎಸ್.ಎಸ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಎನ್ ಎಸ್ ಎಸ್ ಶಿಬಿರ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಲಿತ ವಿದ್ಯೆಯ ಮೂಲಕ ಸಮಾಜದಲ್ಲಿನ ನ್ಯೂನ್ಯತೆ ಹೋಗಲಾಡಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಸಮಾಜಮುಖಿ ಯಾಗುವ ನಿಟ್ಟಿನಲ್ಲಿ, ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ, ಎನ್.ಎಸ್.ಎಸ್ ಸೇವಾ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಶ್ರೀಮತಿ ಜಿ. ಅನುರಾಧ ಹೇಳಿದ್ದಾರೆ.
“ಎನ್ ಎಸ್ ಎಸ್ ಶಿಬಿರಗಳು ಮಾನಸಿಕ, ಬೌದ್ಧಿಕ, ಆಂತರಿಕ ಆರೋಗ್ಯ ನೀಡುತ್ತವೆ” ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ಡಾ.ಎಚ್.ಎಂ. ವಾಗ್ದೇವಿ, ಡಾ. ಕೆ. ಬಿ. ಧನಂಜಯ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
