ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಕಾನೂನು ಬೆಂಬಲ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದ ರೈತ ಸಂಘಟನೆಗಳು ಈಗ ಪಟ್ಟನ್ನು ಕೊಂಚ ಸಡಿಲಿಸಿವೆ. ತಮ್ಮ ಇತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದರೆ ಪ್ರತಿಭಟನೆ ಹಿಂಪಡೆಯಬಹುದು ಎಂಬ ಮಾಹಿತಿಯನ್ನು ಮೂಲಗಳು ತಿಳಿಸಿವೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಧೇಯಕವನ್ನು ಸಂಸತ್ ನಲ್ಲಿ ಅಂಗೀಕರಿಸಿರುವ ಕೇಂದ್ರ ಸರಕಾರವು ಈಗ ರೈತ ಸಂಘಟನೆಗಳ ಜೊತೆ ಮಾತುಕತೆಗೆ ಮುಂದಾಗಿದೆ. ಪ್ರತಿಭಟನಾನಿರತ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಇದನ್ನು ಸ್ಪಷ್ಟಪಡಿಸಿದೆ.
ಕೇಂದ್ರದಿಂದ ಪಂಜಾಬ್ ರೈತ ಒಕ್ಕೂಟದ ನಾಯಕರಿಗೆ ಕರೆ ಬಂದಿದೆ. ರೈತರ ಬೇಡಿಕೆ ಈಡೇರಿಸುವುದು, ಸಮಸ್ಯೆ ಬಗೆಹರಿಸುವ ಕುರಿತು ರಚಿಸಲಿರುವ ಸಮಿತಿಗೆ ಎಸ್ ಕೆಎಂ ನ ಐವರು ಸದಸ್ಯರ ಹೆಸರು ತಿಳಿಸುವಂತೆ ಕೋರಲಾಗಿದೆ ಎಂದು ಮಾಹಿತಿ ನೀಡಿದೆ.
ಸರಕಾರ ರಚಿಸುವ ಸಮಿತಿಯಲ್ಲಿ ಯಾರಿದ್ದಾರೆ? ಯಾವ ಉದ್ದೇಶಕ್ಕಾಗಿ ಸಮಿತಿ ರಚಿಸಲಾಗುತ್ತಿದೆ ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಅದರಲ್ಲೂ, ಇದರ ಕುರಿತು ಲಿಖಿತ ಮಾಹಿತಿಯನ್ನು ಒದಗಿಸಿಲ್ಲ. ಹಾಗಾಗಿ ಇದುವರೆಗೆ ನಾವು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.
ಲಿಖಿತ ಭರವಸೆ ಕೊಟ್ಟರೆ ಮಾತ್ರ ಪ್ರತಿಭಟನೆ ವಾಪಸ್
ಬಿಸಿಯೂಟ ಶಿಕ್ಷಕರಿಗೆ ಬಿಸಿ ತುಪ್ಪ!
ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸಿ ತಿಂಗಳಾಗಿದೆ. ಅದಕ್ಕೆ ಅನುದಾನದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗಾಗಿ ಅಕ್ಷರ ದಾಸೋಹ ಶಿಕ್ಷಕರ ಜೇಬಿಗೆ ಬಿಸಿಯಾಗಿದೆ. ಶಿಕ್ಷಕರು ಕೈಯಿಂದ ಹಣ ಹಾಕಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ.
ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲು ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆದರೆ ಕೊಡುವ ಹಣಕ್ಕೆ ತಕ್ಕದಾದ ಅನುದಾನವನ್ನು ನೀಡಬೇಕು. ಸರ್ಕಾರ ನೀಡುತ್ತಿರುವ ಅನುದಾನ ಏನೇನೂ ಸಾಲದು. ಬೆಲೆ ಏರಿಕೆಗೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಬಸವರಾಜು ಸಂಗಪ್ಪ ನವರು ತಿಳಿಸಿದ್ದಾರೆ.
ಸರ್ಕಾರದ ಬಿಸಿಊಟದ ಲೆಕ್ಕಚಾರ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ. ಬೆಲೆ ಏರಿಕೆ ಹೊಡೆತ ಬಾಧಿಸುತ್ತಿದೆ. ತರಕಾರಿ ಸೇರಿದಂತೆ ಅಡುಗೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಸರ್ಕಾರ ಕೊಡುವ ಅಕ್ಷರ ದಾಸೋಹ ಅನುದಾನ ಯಾವುದಕ್ಕೂ ಸಾಲದಂತಾಗಿದೆ.
ಈಗ ಬಹುಪಾಲು ಬೇಳೆ ಬಂದಿದೆ. ಎಣ್ಣೆ ಕೂಡ ಸರಬರಾಜಾಗಿದೆ. ಉಪ್ಪು ಸದ್ಯದಲ್ಲೇ ಪೂರೈಕೆಯಾಗಲಿದೆ. ಕೆಲವೇ ದಿನಗಳಲ್ಲಿ ಎಲ್ಲೆಡೆ ಬಿಸಿ ಊಟಕ್ಕೆ ಬೇಕಾದ ಸಾಮಗ್ರಿಗಳು ಸಮರ್ಪಕವಾಗಿ ಸರಬರಾಜು ಆಗಲಿದೆ ಎಂದು ಚಿಕ್ಕಬಳ್ಳಾಪುರದ ಅಕ್ಷರ ದಾಸೋಹ ಅಧಿಕಾರಿಯಾದ ಶೈಲಾ ಅವರು ತಿಳಿಸಿದ್ದಾರೆ.
ಸಾವಯವ ಮತ್ತು ಸಿರಿಧಾನ್ಯ ಮೇಳದ ಲಾಭ ಪಡೆಯಲು ಬಿ.ಸಿ.ಪಾಟೀಲ್ ಕರೆ
ಸಾವಯವ ಮತ್ತು ಸಿರಿಧಾನ್ಯ ಉತ್ಪಾದನೆಯೊಂದಿಗೆ ಜನರಿಗೆ ಆರೋಗ್ಯದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕೃಷಿ ಇಲಾಖೆ ಹಲವು ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಇದೀಗ ಅದರ ಮುಂದುವರೆದ ಭಾಗವಾಗಿ ರೈತೋತ್ಪಾದಕರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಏರ್ಪಡಿಸುವ ನಿಟ್ಟಿನಲ್ಲಿ
ಕೃಷಿ ಇಲಾಖೆ , ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಹಾಗೂ ಕರ್ನಾಟಕ ಅಡಆತ ಸೇವೆ ಅಧಿಕಾರಿಗಳ ಸಂಘ ಸಹಯೋಗದೊಂದಿಗೆ ಸಾವಯವ ಹಾಗೂ ಸಿರಿಧಾನ್ಯ ಮೇಳ
ಹಮ್ಮಿಕೊಳ್ಳಲಾಗಿದೆ.

ಇದೇ ಶನಿವಾರ ಡಿ.4 ಮತ್ತು 5 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಕೆ.ಎ.ಎಸ್ ಅಧಿಕಾರಿಗಳ ಸಂಘದಲ್ಲಿ ಮೇಳ ಆಯೋಜನೆಗೊಂಡಿದೆ.
ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದು, ಮೇಳದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಬೆಳೆಯಲ್ಲಿ ಸಾಧನೆಗೈದ ಪ್ರಗತಿಪರ ರೈತರಿಂದ ವಿಚಾರ ವಿನಿಮಯ,ಸಾಯವವ ಸಿರಿಧಾನ್ಯ ಕೃಷಿಯ ಮಹತ್ವವನ್ನು ಸಾರಲಾಗುತ್ತಿದೆ.ಇದರೊಂದಿಗೆ ಮೇಳದಲ್ಲಿ ಈ ಉತ್ಪನ್ನಗಳ ವಸ್ತುಪ್ರದರ್ಶನ ಸಹ ಹಮ್ಮಿಕೊಳ್ಳಲಾಗಿದೆ.
ಸಾವಯವ ಪದಾರ್ಥಗಳನ್ನು ಉಪಯೋಗಿಸುವದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ಈ ಸಾವಯವ ಕೃಷಿಯಿಂದ ಸಿಗುವ ಪದಾರ್ಥಗಳು ನಮ್ಮ ಸದೃಢ ಮತ್ತು ಆರೋಗ್ಯ ಯುತ ಬದುಕು ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗುತ್ತದೆ ಎನ್ನುವ ಬಯಕೆ ನಮ್ಮದು. ಆ ದಿಸೆಯಲ್ಲಿ ಆರೋಗ್ಯ ಔಷಧಿಗಾಗಿ ಮತ್ತು ದೇಹಕ್ಕೆ ಅತಿ ಉಪಯುಕ್ತ ಸಿರಿಧಾನ್ಯ ಮತ್ತು ದವಸ ಧಾನ್ಯ ಬೆಳೆಗಳ ಉಪಯೋಗದ ಬಗೆ ಮಾಹಿತಿ ನೀಡಲಾಗುತ್ತಿದೆ.ಅಲ್ಲದೆ ಇವುಗಳ ಕೃಷಿ ಬಳಕೆಯಿಂದ ಆಗುವ ಲಾಭಾಂಶದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಹಂಚಿಕೊಳ್ಳಲು ಮೇಳ ಉಪಯುಕ್ತವಾಗಲಿದೆ.ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಬೆಳೆ ವಿಮೆ ನೀಡದ ಕಂಪನಿಗಳಿಗೆ ಎಚ್ಚರಿಕೆ.
ರೈತರಿಗೆ ಯಾವುದೇ ಕಾರಣಕ್ಕೂ ಬೆಳೆವಿಮೆ ಕಂಪನಿಗಳಿಂದ ಅನ್ಯಾಯವಾಗಲು ಬಿಡುವುದಿಲ್ಲ. ಈಗಾಗಲೇ ಕಂಪನಿಗಳಿಗೆ ತಾಕೀತು ಮಾಡಲಾಗಿದೆ. ವಂಚನೆ ಎಸಗಲು ಬಿಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಬೆಳೆ ಹಾನಿಯ ಬಗ್ಗೆ ಈಗಾಗಲೇ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಎನ್ ಡಿಆರ್ ಎಫ್ ,ಎಸ್ ಡಿ ಆರ್ ಎಫ್ ವರದಿ ಆಧಾರದ ಮೇಲೆ ಬರುವ ದಿನಗಳಲ್ಲಿ ಪರಿಹಾರ ನೀಡಲಿದ್ದಾರೆ. ನವೆಂಬರ್ ತಿಂಗಳಲ್ಲಿ 5 ಲಕ್ಷ ಹೆಕ್ಟೇರ್ ಗೂ ಹೆಚ್ಚು ಬೆಳೆ ಹಾನಿಯಾಗಿದೆ. ಜುಲೈನಿಂದ ನವೆಂಬರ್ ತನಕ ಅದರ ಪ್ರಮಾಣ 11 ಲಕ್ಷಕ್ಕೇರಿದೆ. ಈಗಾಗಲೇ ಈ ಬಗ್ಗೆ ಸಿಎಂ ಮಾಹಿತಿ ನೀಡಿದ್ದು, ನವೀನ 30ರಿಂದಲೇ ಪರಿಹಾರ ಒದಗಿಸುವ ಕೆಲಸ ನಡೆದಿದೆ ಎಂದು ತಿಳಿಸಿದ್ದಾರೆ.
ಲಸಿಕೆ ನಿರಾಕರಣೆ, ತಹಶೀಲ್ದಾರರಿಂದ ಮನವೊಲಿಕೆ.
ಹೊಳೆಹೊನ್ನೂರು ಸಮೀಪದ ಡಿ.ಬಿ. ಹಳ್ಳಿ ಗ್ರಾಮದಲ್ಲಿ ಕೊರೋನ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದವರ ಮನೆಗೆ ಭದ್ರಾವತಿ ತಹಶೀಲ್ದಾರ ಪ್ರದೀಪ್ ಅವರು ಖುದ್ದು ಮನೆಬಾಗಿಲಿಗೆ ಹೋಗಿ ಮನವೊಲಿಸಿದ್ದಾರೆ.
ಕಲ್ಲಿಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿ.ಬಿ. ಹಳ್ಳಿ ಗ್ರಾಮದಲ್ಲಿ ಕೆಲವರು ಕರೋನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.
ಆರೋಗ್ಯ ಇಲಾಖೆ ಹಾಗೂ ಪಂಚಾಯತಿ ಸಿಬ್ಬಂದಿ ಕೆಲವು ಬಾರಿ ಲಸಿಕೆ ಹಿಡಿದು ಮನೆಗೆ ಹೋದರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದರು.
ಈ ವಿಷಯ ತಹಶೀಲ್ದಾರ್ ಪ್ರದೀಪ್ ಅವರಿಗೆ ತಿಳಿಸಲಾಯಿತು. ತಹಶೀಲ್ದಾರ್ ಅವರು ಖುದ್ದಾಗಿ ತಾವೇ ಆರೋಗ್ಯ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಜನರಿಗೆ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಕೋವಿಡ್ ಸನ್ನಿವೇಶಕ್ಕೆ ಲಸಿಕೆ ಯ ಪ್ರಾಮುಖ್ಯತೆಯ ಬಗ್ಗೆ ಮನಯೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸುಮಾರು 10 ಜನರಿಗೆ ಸ್ಥಳದಲ್ಲಿಯೇ ಲಸಿಕೆಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ. ಅಶೋಕ್, ಮಾರಶೆಟ್ಟಿಹಳ್ಳಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಹಮೀದಾ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಎಚ್ಐವಿ ಸೋಂಕಿತರನ್ನ ತಾರತಮ್ಯ ಕೂಡದು
ಏಡ್ಸ್ ರೋಗದ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೆಚ್ಐವಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಮತ್ತು ಮಾನಸಿಕ ಸ್ಥೈರ್ಯ ತುಂಬುವುದೇ ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಹೆಚ್ಐವಿ ಸೋಂಕಿತರನ್ನು ಎಲ್ಲರಂತೆ ಸಮಾನವಾಗಿ ಕಾಣಬೇಕೆಂದು ವಿಡಿಎಲ್ ಉಪನಿರ್ದೇಶಕ ಡಾ.ರಘುನಂದನ್ ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ನ್ಯಾಯವಾದಿಗಳ ಸಂಘ ಶಿವಮೊಗ್ಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿನಗರ, ಎನ್.ಎಸ್.ಎಸ್ ಘಟಕ-1,2,3, ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಎಂಎ ಸಭಾಂಗಣದಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಏಡ್ಸ್ ಖಾಯಿಲೆ ಬಗ್ಗೆ ತಿಳಿಯುವುದು ಅತ್ಯವಶ್ಯವಾಗಿದೆ. ಆದರೆ ಏಡ್ಸ್ ಪ್ರಸ್ತುತ ಮಾರಣಾಂತಿಕವಲ್ಲ. ಸೂಕ್ತ ಮತ್ತು ನಿಯಮಿತ ಚಿಕಿತ್ಸೆಯಿಂದ ಇದನ್ನು ನಿಯಂತ್ರಿಸಬಹುದು. ಹೆಚ್ಐವಿ ಪೀಡಿತರನ್ನು ಎಲ್ಲರಂತೆ ಕಾಣಬೇಕು. ಏಡ್ಸ್ ಬಗ್ಗೆ ಇರುವ ಮೌಢ್ಯತೆಯನ್ನು ಮಟ್ಟ ಹಾಕುವ ದಿನ ಇದಾಗಿದ್ದು, ಇದೂ ಕೂಡ ಸಕ್ಕರೆ ಮತ್ತು ಇತರೆ ಖಾಯಿಲೆ ರೀತಿಯ ಒಂದು ಖಾಯಿಲೆಯಾಗಿದೆ. ಚಿಕಿತ್ಸೆಯಿಂದ ಸೂಕ್ತವಾಗಿ ನಿಯಂತ್ರಿಸಬಹುದು ಹಾಗೂ ಈ ಸೋಂಕಿನ ಕುರಿತಾದ ಅರಿವಿನಿಂದ ಇದನ್ನು ದೂರ ಇಡಬಹುದು.

ಆದ್ದರಿಂದ ಎಚ್ ಐವಿ ಸೋಂಕಿತರನ್ನ ತಾರತಮ್ಯದಿಂದ ನೋಡದೆ ಎಲ್ಲರಂತೆ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಶಿವಯೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 1981 ರಲ್ಲಿ ಮೊತ್ತ ಮೊದಲಿಗೆ ಅಮೇರಿಕಾದ ಲಾಸ್ ಏಂಜಲೀಸ್ ಪ್ರದೇಶದಲ್ಲಿ ವ್ಯಕ್ತಿಯೋರ್ವನಲ್ಲಿ ಹೆಚ್ಐವಿ ಸೋಂಕು ಕಂಡು ಬಂದಿತು. ಇದೊಂದು ಮಾರಣಾಂತಿಕ ಸೋಂಕಾಗಿದ್ದು ಈ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಂತ್ರಣ ಸಾಧಿಸುವ ಸಲುವಾಗಿ 1988 ರಿಂದ ವಿಶ್ವ ಏಡ್ಸ್ ದಿನಾಚರಣೆ ಮಾಡಲಾಗುತ್ತಿದೆ.
ಹೆಚ್ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಮತ್ತು ಸಿರಂಜ್ ಬಳಕೆ, ತಪಾಸಣೆಗೊಳಪಡಿಸದ ರಕ್ತ ಮತ್ತು ಅದರ ಪದಾರ್ಥಗಳು ಹಾಗೂ ಗರ್ಭದಿಂದ ತಾಯಿಯಿಂದ ಮಗುವಿಗೆ ಈ ನಾಲ್ಕು ಮಾರ್ಗಗಳಿಂದ ಬರುತ್ತದೆ. ಆದರೆ ಇತ್ತೀಚಿನ ಸುಧಾರಣೆಗಳಿಂದಾಗಿ ರಕ್ತ, ಸೂಜಿ ಮತ್ತು ತಾಯಿಯಿಂದ ಮಗುವಿಗೆ ಬರುವುದನ್ನು ನಿಯಂತ್ರಿಸಲಾಗಿದೆ. ಆದರೆ ಜನರು ತಮ್ಮ ಅರಿವನ್ನು ಹೆಚ್ಚಿಸಿಕೊಂಡು ಅಸುರಕ್ಷಿತ ಲೈಂಗಿಕತೆಯಿಂದ ಸೋಂಕು ತಗುಲುವುದನ್ನು ನಿಯಂತ್ರಿಸಬೇಕು. ಲೈಂಗಿಕತೆಯ ಮಡಿವಂತಿಕೆಯಿಂದ ಕೂಡ ಈ ಸೋಂಕು ಹೆಚ್ಚಾಗುತ್ತಿದ್ದು ಈ ಬಗ್ಗೆ ಶಿಕ್ಷಣ ಮತ್ತು ಅರಿವು ಹೆಚ್ಚಬೇಕು ಎಂದ ಅವರು ನಿಯಮಿತ ಚಿಕಿತ್ಸೆಯಿಂದ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿಡಲು ಸಾಧ್ಯ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ 2015-16 ರಿಂದ ಅಕ್ಟೋಬರ್ 2021 ರವರೆಗೆ 4,24,017 ಸಾಮಾನ್ಯ ವ್ಯಕ್ತಿಗಳಿಗೆ ಹೆಚ್ಐವಿ ಪರೀಕ್ಷೆ ಮಾಡಿದ್ದು ಈ ಪೈಕಿ 2054 ಸೋಂಕಿತರು ಪತ್ತೆಯಾಗಿದ್ದಾರೆ. ಈ ಅಔದಿಯಲ್ಲಿ 2,21,600 ಗರ್ಭಿಣಿಯರಿಗೆ ಹೆಚ್ಐವಿ ಪರೀಕ್ಷೆ ಮಾಡಿದ್ದು ಇವರಲ್ಲಿ 79 ಗರ್ಭಿಣಿ ಸ್ತ್ರೀಯರಿದ್ದಾರೆ. ಹೆಚ್ಐವಿ ಚಿಕಿತ್ಸೆಗಾರಿ ಎಆರ್ಟಿ ಕೇಂದ್ರದಲ್ಲಿ 2008 ರಿಂದ 2021 ರವರೆಗೆ 6249 ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದು 3161 ಜನರು ಚಿಕತ್ಸೆ ಪಡೆದು ಬದುಕುತ್ತಿದ್ದಾರೆ. 2089 ಜನರು ಸೋಂಕಿನಿಂದ ಮರಣ ಹೊಂದಿದ್ದಾರೆ. ಸರ್ಕಾರೇತರ ಸಂಸ್ಥೆಗಳಾದ ಅಭಯಧಾಮ ಹೆಚ್ಐವಿ ಸೋಂಕಿತರ ಬೆಂಬಲ ಸಂಘ, ರಕ್ಷ ಸಮುದಾಯ ಸಂಘ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಅಂತಹ ಸಂಸ್ಥೆಗಳು ಹೆಚ್ಐವಿ ನಿಯಂತ್ರಣ ಕಾರ್ಯಕ್ರಮದಡಿ ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಂಘ ಸಂಸ್ಥೆಗಳು, ಕಾಲೇಜುಗಳು, ದಾನಿಗಳು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ , ಕುವೆಂಪು ವಿವಿ ಎನ್ಎಸ್ಎಸ್ ಜಿಲ್ಲಾ ಕಾರ್ಯಕ್ರಮಾಧಿಕಾರಿ ಪರಿಸರ ನಾಗರಾಜ್, ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಡಾ.ಮಂಜನಾಥ್ ನಾಗಲೀಕರ್, ಶಿವಮೊಗ್ಗ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಎಫ್ಪಿಎಐ ಅಧ್ಯಕ್ಷೆ ಪುಷ್ಪಾ ಶೆಟ್ಟಿ, ಸ್ಪಂದನಾ ಫೌಂಡೇಷನ್ ನ ಮಂಜುನಾಥ್ ಅಪ್ಪಾಜಿ, ಜ್ಯೋತಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಭಾರತದ ವಿಮಾನ ಸಂಚಾರ, ಮರುಪರಿಶೀಲನೆ
ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಡಿ.15ರಿಂದ ಪುನ್ ಪುನಾರಾರಂಭವಾಗುವ ಬಗ್ಗೆ ತಿಳಿಸಲಾಗಿತ್ತು.ಆದರೆ ಈಗ ಕೊರೋನಾ ವೈರಸ್ ನ ಹೊಸ ರೂಪಾಂತರ ತಳಿ ಓಮಿಕ್ರಾನ್ ಅನೇಕ ದೇಶಗಳಲ್ಲಿ ಪತ್ತೆಯಾಗಿದೆ. ಅದರ ಬಗ್ಗೆ ಆತಂಕ ತೀವ್ರವಾಗಿರುವ ಕಾರಣ ವಿಮಾನಸೇವೆ ಪುನರಾರಂಭದ ನಿರ್ಧಾರವನ್ನು ಮರು ಪರಿಶೀಲಿಸಲಾಗಿದೆ.
ಕೋವಿಡ್ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರ ಮನವೊಲಿಸುತ್ತದೆಯೇ ಹೊರತು ಕಠಿಣ ತೆಗೆದುಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಯಾವಾಗ ಆರಂಭಿಸಲಾಗುವುದು ಎಂಬುದನ್ನು ಮುಂದೆ ತಿಳಿಸಲಾಗುವುದು ಎಂದು ನಾಗರಿಕ ಯಾನ ಮಹಾನಿರ್ದೇಶನಾಲಯವು ತಿಳಿಸಿದೆ.
ಕೊರೊನಾ ಸಾಂಕ್ರಾಮಿಕ ದ ಕಾರಣದಿಂದಾಗಿ 2020 ರ ಮಾರ್ಚ್ ತಿಂಗಳಿನಿಂದ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ವಿಮಾನ ಸೇವೆಯನ್ನು ಪುನರಾರಂಭಿಸಲು ನಿರ್ಧಾರವನ್ನು ನವೆಂಬರ್ 26ರಂದು ಪ್ರಕಟಿಸಲಾಗಿತ್ತು. ಆದರೆ ಈಗ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿರುವ ಕಾರಣದಿಂದ ಈ ನಿರ್ಧಾರವನ್ನು ಮರುಪರಿಶೀಲಿಸಲು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆ , ಮನೆಬಾಗಿಲಿಗೇ ನೋಟಿಸ್.!
ಸಂಚಾರ ನಿಯಮ ಉಲ್ಲಂಘಿಸುವವರ ಮನೆಬಾಗಿಲಿಗೆ ನೋಟಿಸ್ ಕಳುಹಿಸುತ್ತಿದ್ದ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದುವರಿದು ದಂಡ ಸಂಗ್ರಹಕ್ಕೆ ವಾಹನ ಮಾಲೀಕರ ಮನೆಗಳಿಗೆ ಹೋಗುತ್ತಿದ್ದಾರೆ.
ಆಟೋಮೇಷನ್ ಸೆಂಟರ್ ಮೂಲಕ ಫೋಟೋ ಕ್ಲಿಕ್ಕಿಸಿ ವಾಹನ ಮಾಲೀಕರ ಮನೆಗಳಿಗೆ ನೋಟಿಸ್ ಕಳಿಸಲಾಗುತ್ತಿದೆ. ಅದರಲ್ಲಿ ಬಹುಪಾಲು ಜನ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಟ್ರಾಫಿಕ್ ಪೊಲೀಸರ ಮೂಲಕ ಅಂತವರ ಮನೆಗಳಿಗೆ ಭೇಟಿ ನೀಡಿ ದಂಡ ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಬರಲಿ ಎನ್ನುವುದೇ ಇದರ ಮೂಲ ಈಗಾಗಲೇ ನೋಟಿಸ್ ಬಂದವರು ವಿಳಂಬಮಾಡದೆ ದಂಡ ಪಾವತಿಸಿ ಎಂದು ಶಿವಮೊಗ್ಗದ ಎಸ್.ಪಿ. ಬಿ.ಎಂ. ಲಕ್ಷ್ಮೀಪ್ರಸಾದ್ ಅವರು ತಿಳಿಸಿದ್ದಾರೆ.
ಕಳೆದ ಒಂದೂವರೆ ತಿಂಗಳುಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಕೆಲಸ ಮಾಡುತ್ತಿದ್ದು ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.
ವಾಹನ ಸವಾರರು ಟ್ರಿಬ್ಬಲ್ ರೈಡಿಂಗ್, ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಸಿಗ್ನಲ್ ನಿಯಮ ಉಲ್ಲಂಘನೆ, ಒನ್ ವೇ ಸಂಚಾರ ಹೀಗೆ ನಾನಾ ಬಗೆಯ ನಿಯಮ ಉಲ್ಲಂಘನೆ ಗಳನ್ನು ಮಾಡಿದ್ದಲ್ಲಿ ಅವರನ್ನು ಹಿಡಿದು ದಂಡ ವಿಧಿಸಲಾಗುತ್ತಿದೆ. ಈ ಬಗ್ಗೆ ಶೇ. 60ರಷ್ಟು ಜನ ತಲೆಕೆಡಿಸಿಕೊಂಡಿಲ್ಲ. ದಂಡವನ್ನು ಪಾವತಿ ಮಾಡಿಲ್ಲ. ಈ ಕಾರಣಕ್ಕಾಗಿ ಪೊಲೀಸರೇ ಖುದ್ದು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಜಿ ಎಸ್ ಟಿ ಸಂಗ್ರಹ ಏರುಗತಿ
ಜಿ ಎಸ್ ಟಿ ಮೂಲಕ ನವೆಂಬರ್ ತಿಂಗಳಲ್ಲಿ 1.31 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿ ಎಸ್ ಟಿ ವ್ಯವಸ್ಥೆಯು 2017 ಏಪ್ರಿಲ್ ತಿಂಗಳಿನಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಅನಂತರ ಸಂಗ್ರಹ ಆಗಿರೋ ಎರಡನೆಯ ಅತಿ ಹೆಚ್ಚು ಮೊತ್ತ ಇದಾಗಿದೆ. ದೇಶದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎನ್ನುವುದನ್ನು ಅಂಕಿಅಂಶವು ಸೂಚಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ವಾಣಿಜ್ಯ ಚಟುವಟಿಕೆಗಳಲ್ಲಿ ಸುಧಾರಣೆ ಮತ್ತು ರಿಟರ್ನ್ಸ್ ಸಲ್ಲಿಕೆ ಹೆಚ್ಚಾಗಿರುವುದರಿಂದ ತೆರಿಗೆ ಸಂಗ್ರಹ ದ ಪ್ರಮಾಣವು ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಜಿ ಎಸ್ ಟಿ ವರಮಾನ ಸಂಗ್ರಹವು ಜುಲೈ ತಿಂಗಳಿನಿಂದ ಒಂದು ಲಕ್ಷ ಕೋಟಿಗೂ ಅಧಿಕ ಹೆಚ್ಚಿನ ಮಟ್ಟದಲ್ಲಿ ಇದೆ. ಕಳೆದ ವರ್ಷಕ್ಕಿಂತ ಜಿಎಸ್ ಟಿ ವರಮಾನ ಸಂಗ್ರಹ ಶೇ.25 ರಷ್ಟು ಏರಿಕೆಯಾಗಿದೆ. 2019ರ ನವೆಂಬರ್ ಗೆ ಹೋಲಿಸಿದರೆ ಶೇಕಡ 25 ರಷ್ಟು ಹೆಚ್ಚಾಗಿದೆ. 2021 ರ ಏಪ್ರಿಲ್ನಲ್ಲಿ 1.41 ಲಕ್ಷ ಕೋಟಿಗಳಷ್ಟು ಜಿಎಸ್ಟಿ ವರಮಾನ ಸಂಗ್ರಹವಾಗಿದೆ. ಈವರೆಗೂ ಅತಿ ಹೆಚ್ಚು ಮೊತ್ತ ಇದಾಗಿದೆ.
ಜಿ ಎಸ್ ಟಿ ಗೆ ಸಂಬಂಧಿಸಿದಂತೆ ತಂದಿರುವ ಆಡಳಿತಾತ್ಮಕ ಬದಲಾವಣೆಗಳು ಮತ್ತು ನೀತಿಯಲ್ಲಿನ ಸುಧಾರಣೆ ಕ್ರಮಗಳಿಂದಾಗಿ ಇತ್ತೀಚಿನ ತಿಂಗಳಲ್ಲಿ ಜಿ ಎಸ್ ಟಿ ವರಮಾನ ಸಂಗ್ರಹ ಏರುಗತಿಯಲ್ಲಿ ಪ್ರಗತಿಗೆ ಕಾರಣವಾಗಿದೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಅಕ್ರಮ ಮರಳು ಸಾಗಾಣಿಕೆ, ಅರಣ್ಯ ಇಲಾಖೆ ಎಚ್ಚರಿಕೆ.
ಹೊಸನಗರ ತಾಲ್ಲೂಕಿನ ಶರಾವತಿ ನದಿ ಯಲ್ಲಿ ದಿನನಿತ್ಯವೂ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎಂಬ ಬಗ್ಗೆ ದೂರುಗಳು ದಿನೇ ದಿನೇ ಕೇಳಿಬರುತ್ತಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಶರಾವತಿ ನದಿ ಪಾತ್ರದ ವಿವಿಧೆಡೆ ಭೇಟಿ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಂ. ಆರ್. ಆದರ್ಶ ತಿಳಿಸಿದ್ದಾರೆ.
ತಾಲೂಕಿನಲ್ಲಿ , ಸೊನಲೆ ಮತ್ತು ತ್ರಿಣಿವೆ ಪಂಚಾಯಿತಿ ವ್ಯಾಪ್ತಿಯ ಶರಾವತಿ ನದಿ ಪಾತ್ರದಲ್ಲಿ ಮೊದಲು ಮುಳುಗಡೆ ನೀರು ಇಳಿಸಲಾಗಿತ್ತು. ನದಿಪಾತ್ರದ ವ್ಯಾಪಕವಾಗಿ ಮರುಳು ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಬಂದಿವೆ.ಈ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಬೇರೆ ಮಾರ್ಗದಿಂದ ನದಿಗೆ ಹೋಗುವ ದಾರಿಗೆ ಟ್ರೆಂಚ್ ಹೊಡೆಯಲಾಗಿದೆ. ಅರಣ್ಯಾಧಿಕಾರಿಗಳು ನದಿ ಬಳಿ ಹೋಗಿ ಎಚ್ಚರಿಕೆಯನ್ನು ನೀಡಲಾಗಿದೆ. ಇದಕ್ಕೂ ಮೀರಿ ಅಕ್ರಮ ಮರಳು ಸಾಗಾಣಿಕೆ ಮುಂದುವರೆದರೆ ವಾಹನಗಳ ಮಾಲೀಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಮರಳು ಸಾಗಾಣಿಕೆಗೆ ಅವಕಾಶಮಾಡಿಕೊಡುವ ನದಿಪಾತ್ರದ ನಿವಾಸಿಗಳಿಗೂ ಸಹ ಎಚ್ಚರಿಕೆ ನೀಡಲಾಗಿದೆ. ಅಕ್ರಮಕ್ಕೆ ಸಹಾಯವನ್ನು ಮಾಡಿದರೆ ಮುಲಾಜಿಲ್ಲದೆ ದೂರನ್ನು ದಾಖಲಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಎಂ.ಆರ್. ಆದರ್ಶ ಅವರು ತಿಳಿಸಿದ್ದಾರೆ.
