Monday, August 3, 2026
Monday, August 3, 2026
Home Blog Page 17

ಜುಲೈ 22 . ಡಾ.ರತ್ನಾಕರ್ ಅವರಿಂದ “ಆರೋಗ್ಯ- ಹವ್ಯಾಸ” ಕುರಿತು ಉಪನ್ಯಾಸ

0

ಶಿವಮೊಗ್ಗದ ಹಿರಿಯ ಪ್ರಖ್ಯಾತ ಡಾಕ್ಟರ್ ಶ್ರೀಯುತ ರತ್ನಾಕ‌ರ್ ರವರು ದಿನಾಂಕ 22/7/26 8 ಬುಧುವಾರ ಸಂಜೆ 7ರಿಂದ 8 ಗಂಟೆಯವರೆಗೆ ಸವಳಂಗ ರಸ್ತೆ ಯಲ್ಲಿರುವ ರೋಟರಿ ಯುವ ಕೇಂದ್ರದಲ್ಲಿ ಆರೋಗ್ಯ-ಹವ್ಯಾಸ ಕುರಿತು ಉಪನ್ಯಾಸ -ಮಾತುಕತೆ ನಡೆಸಲಿದ್ದಾರೆ ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಬೇಕಾಗಿ ರೋಟರಿ ಪದಾಧಿಕಾರಿಗಳು ಕೋರಿದ್ದಾರೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾದ ಸುಮಂತ್ ಭಟ್ ಮತ್ತು ಶಿವಧ್ವಜ್ ಅವರಿಗೆ ಮುಖ್ಯಮಂತ್ರಿಗಳಿಂದ ಅಭಿನಂದನೆ

0

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಹಾಗೂ ಶಿವಧ್ವಜ್ ಶೆಟ್ಟಿ ನಿರ್ದೇಶನದ ‘ಇಂಬು’ ಅತ್ಯುತ್ತಮ ತುಳು ಭಾಷೆಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ. ಪ್ರಶಸ್ತಿ ಪಡೆದ ಎರಡೂ ಚಿತ್ರತಂಡಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಮುಂದಿನ ದಿನಗಳಲ್ಲಿ ಇಂತಹ ಚಲನಚಿತ್ರಗಳು ಇನ್ನೂ ಹೆಚ್ಚು ಬರಲಿ, ನಾಡಿನ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೇರಿಸಲಿ ಎಂದು ಹಾರೈಸುತ್ತೇನೆ. ಎಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ
ಡಿ.ಕೆ. ಶಿವಕುಮಾರ್‌ ಅಭಿನಂದನೆ ಕೋರಿದ್ದಾರೆ.

ಲಂಚ ಪಡೆಯುವ ಸಂದರ್ಭದಲ್ಲೇ” ರೆಡ್ ಹ್ಯಾಂಡ್” ಸಿಕ್ಕಿಬಿದ್ದ “ಪ್ರಾಂಶುಪಾಲ”

0

ಶಾಲಾ ಪ್ರವೇಶಾತಿ ನೀಡಲು ಬಾಲಕಿಯ ತಂದೆಯಿಂದ ಲಂಚ ಪಡೆಯುತ್ತಿದ್ದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸೋಮವಾರ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ, ಎಳನೀರು ವ್ಯಾಪಾರಿ ಮೇಘರಾಜ.ಸಿ ಎಂಬುವವರು ತಮ್ಮ ಮಗಳು ಕು.ದೀಕ್ಷಾಳನ್ನು ಭದ್ರಾವತಿ ತಾಲೂಕು ಹುಣಸೆಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ 7ನೇ ತರಗತಿಗೆ ಸೇರಿಸಲು ಬಯಸಿದ್ದರು. ಈ ವೇಳೆ ಶಾಲೆಯ ಪ್ರಾಂಶುಪಾಲರಾದ ನಾಮದೇವ್ ಅವರು ‘ಡ್ರಮ್ ಸೆಟ್’ ಕೊಡುವ ನೆಪದಲ್ಲಿ ರೂ.20,000/- ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಲಂಚ ನೀಡಲು ಇಷ್ಟವಿಲ್ಲದ ಮೇಘರಾಜ್ ಅವರು ಜುಲೈ 18 ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರಿನನ್ವಯ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯಿದೆ-2018) ಕಲಂ 7(a) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ದೂರುದಾರರು ಮುಂಗಡವಾಗಿ ರೂ‌10,000/- ಹಣವನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಜುಲೈ 20 ರಂದು ಮಧ್ಯಾಹ್ನ 12.20 ಗಂಟೆಗೆ ಹುಣಸೆಕಟ್ಟೆಯ ವಸತಿ ಶಾಲೆಯ ತಮ್ಮ ಕೊಠಡಿಯಲ್ಲಿ ಪ್ರಾಂಶುಪಾಲ ನಾಮದೇವ್ ಅವರು ದೂರುದಾರರಿಂದ ರೂ.10,000/- ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆಗಿ ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಲಂಚದ ಹಣವನ್ನು ಜಪ್ತಿ ಮಾಡಿಕೊಂಡಿದ್ದು, ಆಪಾದಿತ ಅಧಿಕಾರಿಯನ್ನು ಮುಂದಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರುದ್ರೇಶ್.ಕೆ.ಪಿ. ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಸಹ್ಯಾದ್ರಿ ವಿಜ್ಞಾನ ಮತ್ತು ಕಲಾ ಕಾಲೇಜುಗಳ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಾತಿ ಪುನರಾರಂಭಿಸಲು ಶಾಸಕರ ಒತ್ತಾಯ

0

ಶಿವಮೊಗ್ಗದ ಹೆಮ್ಮೆಯ ಶೈಕ್ಷಣಿಕ ಸಂಸ್ಥೆಗಳಾದ ಸಹ್ಯಾದ್ರಿ ವಿಜ್ಞಾನ ಮತ್ತು ಕಲಾ ಕಾಲೇಜುಗಳ ಸ್ನಾತಕೋತ್ತರ (PG) ಕೋರ್ಸ್‌ಗಳ ಪ್ರವೇಶಾತಿಯನ್ನು ಈ ವರ್ಷದ ಅಧಿಸೂಚನೆಯಿಂದ ಕುವೆಂಪು ವಿಶ್ವವಿದ್ಯಾಲಯವು ದಿಢೀರನೆ ಕೈಬಿಟ್ಟಿರುವುದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಈ ಕುರಿತು ಮಾನ್ಯ ಕುಲಪತಿಗಳಿಗೆ ಭೇಟಿ ಮಾಡಿ ಪ್ರವೇಶಾತಿಯನ್ನು ಪುನರಾರಂಭಿಸಲು ಪರಿಷ್ಕೃತ ಅಧಿಸೂಚನೆ ಹೊರಡಿಸುವಂತೆ ಒತ್ತಾಯ ಮಾಡಲಾಯಿತು.

ನಮ್ಮ ಪ್ರಮುಖ ಆಕ್ಷೇಪಣೆಗಳು ಹಾಗೂ ವಾಸ್ತವಾಂಶಗಳು:

75 ವರ್ಷಗಳ ಇತಿಹಾಸ: ಮಲೆನಾಡು ಭಾಗದ ಸಾವಿರಾರು ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಬೆಳಕಾಗಿರುವ ಈ ಘಟಕ ಕಾಲೇಜುಗಳು ನಗರದ ಹೃದಯಭಾಗದಲ್ಲಿದ್ದು, ಸಾರಿಗೆ ಸಂಪರ್ಕಕ್ಕೆ ಮೊದಲ ಆದ್ಯತೆಯಾಗಿದೆ.

ಅತ್ಯುತ್ತಮ ಶೈಕ್ಷಣಿಕ ದಾಖಲೆ: ಇತ್ತೀಚೆಗಷ್ಟೇ ಬಯೋಟೆಕ್ನಾಲಜಿಯಲ್ಲಿ 10 ಕ್ಕೆ 5 ರಾಂಕ್ ಹಾಗೂ ರಾಜ್ಯಶಾಸ್ತ್ರದಲ್ಲಿ ಸಾಲು ಸಾಲು ರಾಂಕ್‌ಗಳನ್ನು ತಂದುಕೊಟ್ಟ ಇತಿಹಾಸ ಈ ಸಂಸ್ಥೆಯಾಗಿದ್ದು, ನ್ಯಾಕ್ (NAAC) ಸಮಿತಿಯು ಸಹ ಇಲ್ಲಿ ಪಿಜಿ ವಿಭಾಗಗಳನ್ನು ನಡೆಸಲು ಶಿಫಾರಸು ಮಾಡಿದೆ.

ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹೊರೆಯಿಲ್ಲ: ಇಲ್ಲಿ ಬೋಧಿಸುವ ಶೇ. 99 ರಷ್ಟು ಅಧ್ಯಾಪಕರು ಖಾಯಂ ಆಗಿದ್ದು, ಡಾಕ್ಟರೇಟ್ ಪದವಿ ಹೊಂದಿದ್ದಾರೆ. ಇವರಿಂದ 24 ವಿದ್ಯಾರ್ಥಿಗಳು ಈಗಾಗಲೇ ಪಿಎಚ್.ಡಿ ಪಡೆದಿದ್ದಾರೆ.

ಹೀಗಿದ್ದರೂ, ಯಶಸ್ವಿಯಾಗಿ ನಡೆಯುತ್ತಿರುವ ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಫಿಸಿಕ್ಸ್ ಹಾಗೂ ರಾಜ್ಯಶಾಸ್ತ್ರದಂತಹ ಪ್ರಮುಖ ಪಿಜಿ ಕೋರ್ಸ್‌ಗಳನ್ನು ದಿಢೀರನೆ ಸ್ಥಗಿತಗೊಳಿಸುವುದು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳುವ ನಿರ್ಧಾರವಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕುವೆಂಪು ವಿಶ್ವವಿದ್ಯಾಲಯವು ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆದು, ಸಹ್ಯಾದ್ರಿ ಕಾಲೇಜುಗಳಲ್ಲಿ ಪಿಜಿ ಕೋರ್ಸ್‌ಗಳ ಪ್ರವೇಶಾತಿಯನ್ನು ಪುನರಾರಂಭಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.

ಎಚ್ಚರಿಕೆ…..ಸಾಗರ ತಾಲ್ಲೂಕಿನ ನಾಡಮಂಚಾಲೆಯ ಹೊಸ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಜುಲೈ 25 ರಂದು ಚಾಲನೆ.! ಕೆಪಿಟಿಸಿಎಲ್ ಪ್ರಕಟಣೆ

0

ಸಾಗರ ತಾಲ್ಲೂಕಿನ ನಾಡಮಂಚಾಲೆ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಬೃಹತ್ ವಿದ್ಯುತ್ ಪ್ರಸರಣ ಮಾರ್ಗಗಳು ಜುಲೈ 25 ಅಥವಾ ಅದರ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಾದರೂ ಚಾಲನೆಗೊಳ್ಳಲಿವೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತಿಳಿಸಿದೆ.
​ನಾಡಮಂಚಾಲೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 2×100 MVA, 220/110 KV ಹಾಗೂ 1×10 MVA, 110/11 KV ಶಕ್ತಿ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಮತ್ತು ಉದ್ದೇಶಿತ 220 KV (1.35 ಕಿ.ಮೀ) ಹಾಗೂ 110 KV ಲಿಲೋ (1.08 ಕಿ.ಮೀ) ವಿದ್ಯುತ್ ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 25 ರಿಂದ ಮಾರ್ಗಗಳನ್ನು ಚಾಲನೆಗೊಳಿಸಲಾಗುತ್ತಿದೆ.
ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆಗಳು:
​ಅಪಾಯಕಾರಿ ವಿದ್ಯುತ್ ಮಾರ್ಗಗಳು ಚಾಲನೆಗೊಳ್ಳುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
​ಗೋಪುರಗಳನ್ನು ಹತ್ತುವುದು ನಿಷೇಧಿಸಲಾಗಿದೆ. ವಿದ್ಯುತ್ ಕಂಬಗಳು ಅಥವಾ ಬೃಹತ್ ಗೋಪುರಗಳನ್ನು (ಟವರ್) ಯಾರು ಹತ್ತಬಾರದು.
​ದನಕರುಗಳನ್ನು ಕಟ್ಟಬಾರದು. ವಿದ್ಯುತ್ ಗೋಪುರಗಳ ಆವರಣದಲ್ಲಿ ಅಥವಾ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು ಅಪಾಯಕಾರಿ.
​ವಸ್ತುಗಳನ್ನು ಎಸೆಯಬಾರದು, ವಿದ್ಯುತ್ ವಾಹಕ ತಂತಿಗಳಿಗೆ ತಗುಲುವಂತೆ ಯಾವುದೇ ವಸ್ತುಗಳು ಅಥವಾ ತಂತಿಗಳನ್ನು ಎಸೆಯಬಾರದು.
ಈ ನಿಯಮಗಳನ್ನು ಮೀರಿ ನಡೆಯುವ ಕೃತ್ಯಗಳಿಂದ ಏನಾದರೂ ಅನಾಹುತ ಸಂಭವಿಸಿದಲ್ಲಿ ಅದಕ್ಕೆ ಸಾರ್ವಜನಿಕರೇ ನೇರ ಹೊಣೆಗಾರರಾಗಿರುತ್ತಾರೆ. ಉಂಟಾಗುವ ಆಸ್ತಿ-ಪಾಸ್ತಿ ಅಥವಾ ಜೀವ ಹಾನಿಗೆ ಕೆವಿಪ್ರನಿನಿಯು ಯಾವುದೇ ಜವಾಬ್ದಾರಿ ವಹಿಸುವುದಿಲ್ಲ ಹಾಗೂ ಪರಿಹಾರ ನೀಡಲಾಗುವುದಿಲ್ಲ ಎಂದು ಶಿವಮೊಗ್ಗ ಯೋಜನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದವಿಧರರಿಗೆ ಜುಲೈ 23 ರಂದು ಉದ್ಯೋಗ ಭರ್ತಿಗಾಗಿ ನೇರ ಸಂದರ್ಶನ

0

ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಹಾಜರಾಗಬೇಕು . ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಮನೆಮನೆಗೆ ತೆರಳಿ ಉಚಿತ ಜಾತಿ ಪ್ರಮಾಣಪತ್ರ, ವಿತರಣೆಗೆ “ಸೀಎಂ” ರಿಂದ ಚಾಲನೆ

0

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು “ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಉಚಿತ ಜಾತಿ ಪ್ರಮಾಣ ಪತ್ರ ವಿತರಣೆ ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ” ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಚಾಲನೆ ನೀಡಿದರು.

ಇದೇ ವೇಳೆ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯ ವೆಬ್ ಸೈಟ್ ಹಾಗೂ ವಾಟ್ಸ್ ಆ್ಯಪ್ ಸೇವೆಗೆ ಕೂಡ ಚಾಲನೆ ನೀಡಿದರು.

“ನಿಮ್ಮ ಮತ ನಿಮ್ಮ ಹಕ್ಕು,” ನಿಮ್ಮ ಮತ- ನಿಮ್ಮ ಬದುಕು” ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ

ಕರ್ನಾಟಕ ರಾಜ್ಯ ಬದುಕು ಕಟ್ಟಿಕೊಳ್ಳುವವ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಒದಗಿಸಿಕೊಟ್ಟು ಅವರ ಹಕ್ಕು ಸಂರಕ್ಷಿಸಲು ಸದಾ ಮುಂಚೂಣಿಯಲ್ಲಿರುವ ರಾಜ್ಯ. ಎಸ್ ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನೆ ಬಾಗಿಲಿಗೆ ಪಹಣಿ ನೀಡುವ ಮೂಲಕ ಹೊಸ ಹೆಜ್ಜೆ ಇಟ್ಟಿತ್ತು. ನಾನು ಮುಖ್ಯಮಂತ್ರಿಯಾಗುವ ಮುನ್ನ ಹಾಗೂ ನಂತರವೂ “ನಿಮ್ಮ ಮತ ನಿಮ್ಮ ಹಕ್ಕು,” ನಿಮ್ಮ ಮತ- ನಿಮ್ಮ ಬದುಕು” ಇದಕ್ಕೆ ನಮ್ಮ ಸರ್ಕಾರ ಗ್ಯಾರಂಟಿ ಎನ್ನುವುದು ನಮ್ಮ ಮಂತ್ರ ಹಾಗೂ ತತ್ವವಾಗಿದೆ ಎಂದರು.

ಐತಿಹಾಸಿಕ ಅಭಿಯಾನ
ಭಾರತದಲ್ಲಿಯೇ ಶಾಶ್ವತವಾದ ಪ್ರಮಾಣ ಪತ್ರವನ್ನು ಉಚಿತವಾಗಿ ಮನೆ ಮನೆಗೆ ತೆರಳಿ ಪ್ರಮಾಣ ಪತ್ರವನ್ನು ನೀಡಲಾಗುವ ಐತಿಹಾಸಿಕ ಅಭಿಯಾನವನ್ನು ಸರ್ಕಾರ ಕೈಗೊಂಡಿದೆ. ಮತದಾರರ ಪಟ್ಟಿಗೆ ಸೇರಲು ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದಾದ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡುವ ಐತಿಹಾಸಿಕ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದರು.

ರಾಜಕಾರಣವಿಲ್ಲದ ಪಕ್ಷಾತೀತ ಕ್ರಮ

ದೇಶದಲ್ಲಿಯೇ 4.85 ಕೋಟಿ ಕುಟುಂಬಗಳಿಗೆ ಈ ದಾಖಲೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎನ್ನುವುದು ನಮ್ಮ ಹೆಮ್ಮೆ ಎಂದರು. ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳನ್ನು ಚಾಚೂ ತಪ್ಪದೆ ಸರ್ಕಾರ ಪಾಲಿಸುತ್ತಿದೆ. ರಾಜ್ಯದ ನಿವಾಸಿಗಳಿಗೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ. ಇದನ್ನು ಪಕ್ಷಾತೀತವಾಗಿ ನಾವು ಜವಾಬ್ದಾರಿಯಿಂದ ಕೈಗೊಂಡಿದ್ದೇವೆ ಎಂದರು.

ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರುವವರಿದ್ದು, ಆದರೆ ಜನರಿಗೆ ನೆರವಾಗುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ

ಅರ್ಜಿಗಳನ್ನು ಆನ್ ಲೈನ್ ಮೂಲಕ, ಸೇವಾ ಕೇಂದ್ರಗಳಲ್ಲಿ, ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ facilitation centre ಗಳಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನನ್ನ ಮತ್ತು ಉಪಮುಖ್ಯಮಂತ್ರಿಗಳ ಭಾವಚಿತ್ರವಿರುವ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. BLO ಗಳು ನೀಡುವ ಅರ್ಜಿಗಳನ್ನು ಭರ್ತಿ ಮಾಡಿ ಅವರಿಗೆ ತಲುಪಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಐದು ಗ್ಯಾರಂಟಿಗಳ ಜೊತೆ ಭೂಮಿ ಗ್ಯಾರಂಟಿಯನ್ನೂ ನೀಡುತ್ತಿದ್ದು, ಇದರ ಜೊತೆಗೆ ರಾಜ್ಯದಲ್ಲಿ ವಿಶೇಷ ಆಂದೋಲನವನ್ನು ಸರ್ಕಾರ ಕೈಗೊಂಡು ಮತದಾನದ ಗ್ಯಾರಂಟಿಯನ್ನು ಜಾರಿಗೊಳಿಸಿದ್ದೇವೆ ಎಂದರು.

ಜನರ ಗುರುತಿನಲ್ಲಿ ಶಕ್ತಿ ಅಡಗಿದೆ

ಜನರ ಬದುಕು, ಗುರುತು ಬಹಳ ಮುಖ್ಯ. ಗುರುತಿದ್ದಲ್ಲಿ ಬದುಕು ಇದೆ. ಅದರಲ್ಲಿ ಶಕ್ತಿ ಇದ್ದು, ಮುಂದಿನ ದಿನಗಳಲ್ಲಿ ಅವರ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇದು ಅತ್ಯಗತ್ಯ ಎಂದರು.

ಆಡಳಿತ ವ್ಯವಸ್ಥೆಯಲ್ಲಿಯೇ ಕರ್ನಾಟಕ ಸರ್ಕಾರ ಕೈಗೊಂಡಿರುವ ಐತಿಹಾಸಿಕ ಹೆಜ್ಜೆ
ಜನರ ಬದುಕಿಗೆ ನೇರವಾಗಿ ಸಹಾಯ ಮಾಡುವುದು ಹಾಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿಯೇ ಕರ್ನಾಟಕ ಸರ್ಕಾರ ಕೈಗೊಂಡಿರುವ ಐತಿಹಾಸಿಕ ಹೆಜ್ಜೆ ಇದಾಗಿದೆ ಎಂದು ಸಿಎಂ ಬಣ್ಣಿಸಿದರು.

ಜನರು ಯಾವುದೇ ಕಾರಣಕ್ಕೂ ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು
ಅಭಿಯಾನದ ಮೂಲಕ ಜನರ ಸೌಲಭ್ಯಗಳನ್ನು ನೇರವಾಗಿ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ. ಸರ್ಕಾರ ಮತ್ತು ಜನರ ನಡುವಿನ ಅಂತರ ನಿವಾರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಹಾಗು ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬ ದೃಷ್ಟಿಯಿಂದ ಈ ಕಾರ್ಯವನ್ನು ಕೈಗೊಂಡಿದೆ ಎಂದರು.

ರಾಜಕಾರಣ ಮುಖ್ಯವಲ್ಲ, ಜನರ ಬದುಕು ಹಾಗೂ ಹಕ್ಕು ಮುಖ್ಯ

ಈ ಸೌಲಭ್ಯವನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಗ್ರಾಮ ಲೆಕ್ಕಿಗರು ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಶ್ರಮ ಅಭಿನಂದನೀಯ ಎಂದು ಮುಖ್ಯಮಂತ್ರಿಗಳು ಜನರು ಶಾಶ್ವತ ಸಾಕ್ಷಿ ಪತ್ರವನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕಾಂಗದಲ್ಲಿ ನಿಯಮಗಳನ್ನು ರೂಪಿಸಿದರೂ, ಅದನ್ನು ಕಾರ್ಯಾಂಗ ನಿಷ್ಠೆಯಿಂದ ಅನುಷ್ಠಾನಗೊಳಿಸಿದಾಗ ಮಾತ್ರ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮನೀಶ್ ಮೌದ್ಗಿಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

ಶಿವಮೊಗ್ಗದಿಂದ ಯುವತಿ‌ ನಾಪತ್ತೆ ; ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ

0

ಶಿವಮೊಗ್ಗ ಸೀಗೆಹಟ್ಟಿ ವಂದನಾ ಟಾಕೀಸ್ ಹತ್ತಿರ ಸಂಗೀತ ಎಂಬ 23 ವರ್ಷದ ಯುವತಿ ಜು.07 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಕಾಣೆಯಾದ ಸಂಗೀತ 4.8 ಅಡಿ ಎತ್ತರ, ಕೋಲುಮುಖ, ಎಣ್ಣೆಗಪ್ಪು ಮೈಬಣ್ಣ, ಗದ್ದದ ಮೇಲೆ ಹಳೆ ಗಾಯದ ಗುರುತು ಇದ್ದು, ಕುಂಟುತ್ತಾ ನಡೆಯುತ್ತಾರೆ. ಕನ್ನಡ ಮತ್ತು ತಮಿಳು ಭಾಷೆ ಮಾತಾನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪು ಚೂಡಿದಾರ್ ಹಾಗೂ ಕಪ್ಪು ಸ್ವೆಟರ್ ಧರಿಸಿರುತ್ತಾರೆ.
ಈ ಯುವತಿಯ ಬಗ್ಗೆ ಸುಳಿವು ದೊರತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 6362856914 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ.

ಜ್ಞಾನ ವಿಕಾಸ ಕಾರ್ಯಕ್ರಮದಡಿ‌ ಆಹಾರ ಮೇಳ

0

ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ವತಿಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದಂತೆ ಗೋಪಾಳ ವಲಯದ ಶ್ರೀರಾಮನಗರ ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀಮತಿ ಡಾ. ಸೌಮ್ಯ. ನಿಸರ್ಗ ಆಸ್ಪತ್ರೆ, ವಿನೋಬನಗರ ಶಿವಮೊಗ್ಗ ಇವರು ದಿನನಿತ್ಯದ ಆಹಾರದಲ್ಲಿ ಪೌಷ್ಟಿಕ ಆಹಾರದ ಬಳಕೆಯ ಬಗ್ಗೆ ಜ್ಞಾನವಿಕಾಸ ಕೇಂದ್ರದ 54 ಮಹಿಳಾ ಸದಸ್ಯರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ್ ಸಮಾಜ ಸೇವಕರು, ಶ್ರೀಯುತ ಗಜೇಂಧ್ರಪ್ಪ ಮಾರಿಕಾಂಭಾ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರು, ಮತ್ತು ಹನುಮಂತಪ್ಪ ಗ್ರಾಮದ ಗಣ್ಯರು ಶ್ರೀಮತಿ ಚೇತನ ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಮೊಗ್ಗ, ಸೇವಾಪ್ರತಿನಿಧಿ, ಪುನೀತ ಮತ್ತು ಲಕ್ಷಣ ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಎಸ್.ಜಾನಕಿ ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದಾರೆ-ಮಲ್ಲಿಕಾರ್ಜುನ ಕಾನೂರ್

0

ಹಿನ್ನೆಲೆ ಗಾಯಕಿ ಹಾಗೂ ಬಹು ಭಾಷಾ ಗಾಯಕಿಯಾದ ಎಸ್.ಜಾನಕಿ ರವರು ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದಾರೆ, ಯಾವುದು ಸಹ ಶಾಶ್ವತವಲ್ಲ ಬದುಕಿದಾಗ ಒಳ್ಳೆಯ ಕೆಲಸ ಮಾಡುವುದು ಎಷ್ಟು ಮುಖ್ಯ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ ಎಂದು ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾನೂರ್ ಹೇಳಿದರು.

ಭಾನುವಾರ ಸಂಜೆ ಫ್ರೆಂಡ್ಸ್ ಸೆಂಟರ್ ಗೋಪಾಳದಲ್ಲಿ ನಡೆದ ದಿ. ಎಸ್.ಜಾನಕಿ ಯವರ ಭಾವಪೂರ್ಣ ಶ್ರದ್ದಾoಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಧದ ಗುಡಿ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯತೆ “ಎಲ್ಲೂ ಹೋಗೋಲ್ಲ ಮಾಮ, ಎಲ್ಲೂ ಹೋಗೋಲ್ಲ” ಎಂದು ಹಾಡುವ ಧಾಟಿ, ಡಾಕ್ಟರ್ ರಾಜಕುಮಾರ್ ಮೊದಲ ಚಿತ್ರ ಪ್ರೇಮದ ಕಾಣಿಕೆ, ದಕ್ಷಿಣ ಭಾರತದ ಕೋಗಿಲೆ ಎಂದು ಹಲವು ಗೌರವಗಳನ್ನು ತಂದುಕೊಟ್ಟಿದೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ 48000 ಇವರ ಗಾಯನಕ್ಕೆ 4 ರಾಷ್ಟ್ರ ಪ್ರಶಸ್ತಿಗಳು, 30 ರಾಜ್ಯ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ದೊರಕಿದೆ. ಜಾನಕಮ್ಮ ಅವರ ಅಗಲಿಕೆ ನಮ್ಮ ರಾಜ್ಯ ಹಾಗೂ ದೇಶದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಪೂರ್ವಧ್ಯಕ್ಷರಾದ ವಿ.ನಾಗರಾಜ್ ರವರು ನುಡಿ ನಮನ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಸದಸ್ಯರು ಅವರು ಹಾಡಿದ ಗೀತೆಗಳನ್ನು ಹೇಳುವ ಮೂಲಕ ಮತ್ತು ಮೌನಚಾರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ದಾoಜಲಿ ಸಲ್ಲಿಸಲಾಯಿತು.

ಕಾರ್ಯದರ್ಶಿ ರಮೇಶ್ ಬಾಬು ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕುಮಾರ್ ರವರು ಎಲ್ಲರನ್ನು ವಂದಿಸಿದರು, ರಂಜನಿ ದತ್ತಾತ್ರಿ ನಿರೂಪಿಸಿದರು. ಖಜಾಂಚಿ ಉಮಾ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷಿಣಿ ಸುನೀತ ಚೇತನ್, ಜಿ.ವಿಜಯಕುಮಾರ್, ಸತ್ಯನಾರಾಯಣ.ಜಿ.,ರವೀಂದ್ರನಾಥ್ ಐತಾಳ್, ಪಂಚಾಕ್ಷರಯ್ಯ ಹಿರೇಮಠ್, ಟಿ.ಎಲ್.ಸುರೇಶ್,
ರಾಜೇಶ್.ಆರ್., ರೂಪ ರವಿ ಮೂಡಬಾಗಿಲು, ಸಂದ್ಯಾ ಸತ್ಯನಾರಾಯಣ, ವೀಣಾ ಗುರುನಾಥ್, ಶ್ರೀನಿವಾಸ್ ಕಾಮತ್, ಮನೋಹರ್, ಅನಿತಾ ಸುರೇಂದ್ರ ಕಾಸಲ, ಬಿಂದು ವಿಜಯಕುಮಾರ್, ಉಷ ರಮೇಶ್, ಸುವರ್ಣ ವಿಜಯ ಕುಮಾರ್, ಲಕ್ಷ್ಮೀ ಸತ್ಯನಾರಾಯಣ, ಸುನಂದಾ ವೆಂಕಟೇಶ್, ರಜನಿ ಅಶೋಕ್, ಉಮೇಶ್ ಹಿರೇಮಠ್, ವಿರೂಪಾಕ್ಷ ಲತಾ ಶಂಕರ್, ಫ್ರೆಂಡ್ಸ್ ಸೆಂಟರ್ ನ ಸದಸ್ಯರು ಉಪಸ್ಥಿತರಿದ್ದರು.