Kuvempu University ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು 35ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಪ್ರಮಾಣ ಪತ್ರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ
ದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಏ. 24, ದಂಡ ಶುಲ್ಕ ರೂ.100/-ರೊಂದಿಗೆ ಅರ್ಜಿ ಸಲ್ಲಿಸಲು ಏ. 26 ಹಾಗೂ ದಂಡ ಶುಲ್ಕ ರೂ. 200/- ರೊಂದಿಗೆ ಅರ್ಜಿ ಸಲ್ಲಿಸಲು ಏ. 27 ಕೊನೆಯ ದಿನಾಂಕವಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ತಿಳಿಸಿರುತ್ತಾರೆ.
Kuvempu University ಕುವೆಂಪು ವಿವಿ ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನ
ಶ್ರೀಶಂಕರ ಜಯಂತಿಕವನ. ರಚನೆ : ಪ್ರೇಮಾ ಶ್ರೀಕೃಷ್ಣ, ಮಂಗಳೂರು
ಕಾಲಡಿ ಗ್ರಾಮದಿ ಜನಿಸಿದ ಶಿವಗುರು
ಆರ್ಯಾಂಬೆಯ ಸುತ ಶಂಕರರು
ಬಾಲ್ಯದಿ ವೇದವ ಕರಗತ ಮಾಡಿದ
ಪ್ರತಿಭಾನ್ವಿತ ಹಿತಚಿಂತಕರು
ಜ್ಞಾನದ ಹಸಿವೆಯ ತಣಿಸಲು ಸನ್ಯಾ-
ಸತ್ವದ ದೀಕ್ಷೆಯ ಪಡೆದಿಹರು
ಮಾತೆಯ ಕಷ್ಟಕೆ ಮರುಗುತ ನದಿಯನೆ
ಮನೆಯ ಸಮೀಪಕೆ ಹರಿಸಿಹರು
ದೇಶಾಟನೆಯಲಿ ಶ್ರೇಷ್ಠ ಸನಾತನ
ಧರ್ಮದ ಹಿರಿಮೆಯ ಸಾರಿದರು
ಅದ್ವೈತವ ಪ್ರತಿಪಾದಿಸಿ ಮೌಢ್ಯವ
ನೀಗಿಸಿ ದೀಪ್ತಿಯ ಹರಡಿದರು
ಬಕುತಿಯು ತುಂಬಿದ ಚಿತ್ತವ ಬೆಳಗುವ
ಕೃತಿಗಳ ರಚಿಸಿದ ಆಚಾರ್ಯ
ಮಠಗಳ ಸ್ಥಾಪಿಸಿ ತತ್ತ್ವವ ಸಾರಿದ
ಶಿವನವತಾರವೆ ಗುರುವರ್ಯ!!
ಪ್ರೇಮಾ ಶ್ರೀಕೃಷ್ಣ, ಮಂಗಳೂರು
ಏಪ್ರಿಲ್ 22 .ಸರ್ಕಾರಿ ನಿವೃತ್ತ/ ಕುಟುಂಬ ಪಿಂಚಣಿದಾರರ ಕುಂದುಕೊರತೆ ಆಲಿಸಲು ವಿಡಿಯೊ ಕಾನ್ಫರೆನ್ಸ್
ಮೈಸೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಉಡುಪಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಸರ್ಕಾರಿ ನಿವೃತ್ತ/ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ನಿವಾರಣೆಗಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಏ.22 ರಂದು ಬೆಳಗ್ಗೆ 11.00ಕ್ಕೆ “ಪಿಂಚಣಿ ಅದಾಲತ್” ಹಾಗೂ ಮಧ್ಯಾಹ್ನ ಜಿಪಿಎಫ್ ಚಂದಾದಾರರ ಕುಂದುಕೊರತೆಗಳ ನಿವಾರಣೆಗಾಗಿ ”ಜಿಪಿಎಫ್ ಅದಾಲತ್” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಪಿಂಚಣಿದಾರರು ಬೆಳಿಗ್ಗೆ 11 ಗಂಟೆಗೆ ಎ.ಸಿ.ಕಚೇರಿಯ ಕೆ-ಸ್ವಾನ್-ವಿ.ಸಿ. ಸಭಾಂಗಣದಲ್ಲಿ ನಡೆಯುವ ಪಿಂಚಣಿ ಮತ್ತು ಜಿಪಿಎಫ್ ಅದಾಲತ್ನಲ್ಲಿ ಭಾಗವಹಿಸಿ ರಾಜ್ಯ ಸೇವಾ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ. ಅಥವಾ ಶಿವಮೊಗ್ಗ ಜಿಲ್ಲಾ ಖಜಾನೆಯ ಉಪನಿರ್ದೇಶಕರ ಕಚೇರಿಯಲ್ಲಿ ಮುಂಚಿತವಾಗಿ ವಿವರಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಮ್ಮ ಧರ್ಮದ ಮೌಲ್ಯ ಮತ್ತು ಸಂಸ್ಕೃತಿಯ ರಕ್ಷಣೆ ಮಾಡೋಣ- ಎಂ.ವಿಜಯ್
ನಮ್ಮೂರ ಬಳಗದ ವತಿಯಿಂದ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ದರ್ಶನಿಕ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕ ಎಂ ವಿಜಯ್ ರವರು ಅದ್ವೈತ ತತ್ವದ ಜೊತೆಗೆ ವೇದಾಂತದ ಸತ್ಯವನ್ನು ಜಗತ್ತಿಗೆ ಸಾರಿದ ಜಗದ್ಗುರು ಶ್ರೀ ಶಂಕರಾಚಾರ್ಯರು ಮಾನವ ಕಲ್ಯಾಣದ ಸಂದೇಶ ಸಾರಿ “ಎಲ್ಲರಿಗಾಗಿ ಶಂಕರ… ಎಲ್ಲೆಡೆಯೂ ಶಂಕರ…” ಎಂಬ ಆಶಯದಂತೆ ಸರ್ವರಿಗೂ ಜಗದ್ಗುರುಗಳ, ನಮ್ಮ ಧರ್ಮದ ಮೌಲ್ಯಗಳನ್ನು ತಿಳಿಸುವ ಸಂಕಲ್ಪ ಮಾಡೋಣ ನಮ್ಮ ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು
ಕಾರ್ಯಕ್ರಮಕ್ಕೆ ವಿಶೇಷವಾಗಿ ಕವಿಗಳಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮೊಮ್ಮಗ ಚೈತನ್ಯ ಮಾಸ್ತಿ ರವರು ಆಗಮಿಸಿ ಶುಭ ಕೋರಿದರು
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಸಿ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್ ಪಿ ಗಿರೀಶ್, ರಾಜೇಶ್ ಮಂದಾರ,ಎಸ್ ಬಸವರಾಜ್, ಪ್ರಶಾಂತ್ ರಾಯ್ , ಆರ್ ಕಿರಣ್ ,ಟಿ ಪಿಆರ್ ಸಂತೋಷ್ ವಕೀಲರು, ಗುರುಪ್ರಸಾದ್, ಎಂ. ರಾಕೇಶ್, ಕೆ ಎಲ್ ಪವನ್, ಕರಾಟೆ ವಿನೋದ್, ಮುರುಳಿ ಸಣ್ಣಕ್ಕಿ, ಕೇಶವ ಸಿಗೆಹಟ್ಟಿ , ಎಂ.ಸುಹಾಸ್, ಗಿರೀಶ್ ಶಾಸ್ತ್ರಿ, ಭವಾನಿ ರಾವ್, ಪೈಂಟರ್ ಕೃಷ್ಣಪ್ಪ ಇದ್ದರು
ರಕ್ತದಾನದಿಂದ ಜನರನ್ನ ಉಳಿಸಿದ ಪುಣ್ಯ ದೊರೆಯುತ್ತದೆ-ಡಾ.ಬಸವ ಮರುಳಸಿದ್ಧಶ್ರೀ
ಎಲ್ಲಾ ದಾನಗಳಿಗಿಂತ ಪವಿತ್ರವಾದದ್ದು ರಕ್ತದಾನ, ರಕ್ತದಾನ ಮಾಡುವುದರಿಂದ ನಮ್ಮ ದೇಹ, ಮನಸ್ಸು ಹಾಗೂ ಆರೋಗ್ಯ ಸದೃಢವಾಗಿರುತ್ತದೆ ಎಂದು ಪೂಜ್ಯ ಶ್ರೀ ಮ. ನಿ. ಪ್ರ. ಡಾ.ಬಸವ ಮರುಳಸಿದ್ದ ಸ್ವಾಮಿಗಳು ನುಡಿದರು. ಅವರು ಬಸವ ಕೇಂದ್ರದಲ್ಲಿ ಬಸವ ಜಯಂತಿ ಅಂಗವಾಗಿ ಬಸವ ಕೇಂದ್ರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಕದಳಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು,
26ನೇ ಬಾರಿ ರಕ್ತದಾನ ಮಾಡುವುದರ ಮುಖಾಂತರ ಶಿಬಿರಕ್ಕೆ ಚಾಲನೆ ನೀಡಿದರು. ನಿರಂತರವಾಗಿ ರಕ್ತದಾನ ಮಾಡುವುದರಿಂದ ಒಳ್ಳೆಯ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಹಾಗೂ ರಕ್ತದಾನದಿಂದ ಸಾಕಷ್ಟು ಜನರ ಪ್ರಾಣವನ್ನು ಉಳಿಸಿರುವ ಪುಣ್ಯ ನಮಗೆ ಲಭಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ಶಿವಮೊಗ್ಗ ಬಸವೇಶ್ವರ ವೀರಶೈವ ಲಿಂಗಾಯಿತ ಸೇವಾ ಸಂಘದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್. ಬಳ್ಳಕೆರೆ ಸಂತೋಷ್. ಎಸ್ ಪಿ ದಿನೇಶ್. ಎಚ್ ಸಿ ಯೋಗೇಶ್. ರಾಜ್ಯಾಧ್ಯಕ್ಷರಾದ ಷಡಕ್ಷರಿ.. ಡಾಕ್ಟರ್ ಧನಂಜಯ ಸರ್ಜಿ. ಜಿ ವಿಜಯಕುಮಾರ್.
ಮಹಾಸಭಾ ಅಧ್ಯಕ್ಷರು ರುದ್ರಮುನಿ ಸಜ್ಜನ್. ರಾಜಶೇಖರ್. ಮಲ್ಲಿಕಾರ್ಜುನ್ ಕಾನೂರ್. ಕೆ ಆರ್ ಸೋಮನಾಥ್. . ಬಸವ ಕೇಂದ್ರದ ಅಧ್ಯಕ್ಷರಾದ ಜಿ ಬೆನಕಪ್ಪ. ಚಂದ್ರಶೇಖರ್ ಹಾಲಸ್ವಾಮಿ. ಎಸ್ ಪಿ ದಿನೇಶ್ ಧರಣೇಂದ್ರ ದಿನಕರ್. ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಬಸವ ಕೇಂದ್ರದ ಭಕ್ತರು ಉಪಸ್ಥಿತರಿದ್ದರು
B.Y. Raghavendra ಕ್ರಾಂತಿಕಾರಿ ಬಸವಣ್ಣನವರ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡೋಣ- ಬಿ.ವೈ.ರಾಘವೇಂದ್ರ
B.Y. Raghavendra ಕಾಯಕ- ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ ಬಸವಣ್ಣನವರ
ಒಂದಾದರೂ ವಚನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಮಹಾನ್ ಮಾನವತಾವಾದಿ, ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಸಾರಿ, ಸಮಾಜದ ದಿಕ್ಕನ್ನು ಬದಲಾಸಯಿಸಿದ ಕ್ರಾಂತಿಕಾರಿ ಯುಗಪುರುಷನ ಜಯಂತಿಯಂದು ನಾವು ಅವರ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡಬೇಕು.
ಸಾರ್ವತ್ರಿಕವಾಗಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ ವಿಶ್ವದ ಮೊದಲ ಸಂಸತ್ತು ಎಂದರೆ ಅದು ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’. ಅವರು
ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ.
ಜಾಗತಿಕ ಸಮಸ್ಯೆಗಳಿಗೆ ಬಸವಣ್ಣವರ ವಚನಗಳು ಲಸಿಕೆ ಇದ್ದಂತೆ.
ಯುವಜನತೆ ಪ್ರಸ್ತುತದಲ್ಲಿಮೊಬೈಲ್ ಗೀಳಿಗೆ ತುತ್ತಾಗುತ್ತಿದ್ದು,
ಮಾನಸಿಕ ಖಿನ್ನತೆ ಅವರಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ನಮ್ಮ ಮಕ್ಕಳಿಗೆ ವಚನಗಳನ್ನು ತಿಳಿಸುವ ಪ್ರಯತ್ನ ಮಾಡಿದಲ್ಲಿ ವೈದ್ಯರ ಅವಶ್ಯಕತೆ ಅಷ್ಟಾಗಿ ಇರುವುದಿಲ್ಲ ಎಂದರು.
B.Y. Raghavendra ಭದ್ರಾವತಿಯ ಆಧ್ಯಾತ್ಮಿಕ ಚಿಂತಕರು ಹಾಗೂ ಮನೋಚಿಕಿತ್ಸಕರಾದ ಡಾ. ಸಂತೋಷ್ ಕುಮಾರ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮನುಕುಲದ ಉದ್ದಾರಕ್ಕಾಗಿ ಜನಿಸಿದವರ ದಿನವನ್ನು ಜಯಂತಿ ಎನ್ನಲಾಗುತ್ತದೆ. ಅಜ್ಞಾನದ ಮೇಲೆ ಜ್ಞಾನದ ವಿಜಯ, ಸ್ವಾರ್ಥದ ಮೇಲೆ ಪರೋಪಕಾರದ ಜಯ, ಕತ್ತಲ ಮೇಲೆ ಬೆಳಕಿನ ಜಯ ಗಳಿಸಿರುವವರ, ದ್ವೈತ ಗೆದ್ದು ಅದ್ವೈತ ಸಾಧಿಸಿದವರ ಜಯಂತಿಯನ್ನು ಆಚರಿಸುತ್ತೇವೆ.
ಆತ್ಮಾವಲೋಕನ ಮಾಡಿಕೊಳ್ಳುವ ದಿನ ಇದಾಗಿದ್ದು ಬಸವೇಶ್ವರರ ಒಂದಾದರೂ ವಚನವನ್ನು ಅಳವಡಿಸಿಕೊಂಡಲ್ಲಿ ಈ ದಿನ ಸಾರ್ಥಕವಾಗುತ್ತದೆ ಎಂದ ಅವರು ಎಲ್ಲರಲ್ಲಿಯೂ ಆತ್ಮ ಸಾಕ್ಷಾತ್ಕಾರ ಜಾಗೃತಗೊಳಿಸಿ ಸಮಾಜ ತಿದ್ದುವ ಕೆಲಸವನ್ನು ಮಹನೀಯರು ಮಾಡುತ್ತಾ ಬಂದಿದ್ದಾರೆ ಎಂದರು.
ಬಸವಣ್ಣನವರು ಜಗತ್ತಿಗೆ ನೀಡಿದ ಅತ್ಯಂತ ದೊಡ್ಡ ಕೊಡುಗೆ ‘ಕಾಯಕವೇ ಕೈಲಾಸ’. ದೇಹ, ಮನಸ್ಸು, ಆತ್ಮದ ತಲ್ಲೀನತೆಯಿಂದ ಮಾಡುವ ಕೆಲಸ ಕಾಯಕ. ಕೆಲಸ ಯಾವುದಾದರೂ ಇರಲಿ, ಅದನ್ನು ಪ್ರಾಮಾಣಿಕವಾಗಿ ಮಾಡುವುದೇ ದೇವರ ಸೇವೆ ಎಂಬುದು ಅವರ ತತ್ವವಾಗಿತ್ತು. ಮಾನವೀಯತೆ, ಧಾರ್ಮಿಕ ತಳಹದಿ ಹೊಂದಿರುವ ಹಾಗೂ ಆತ್ಮ ಸಾಕ್ಷಾತ್ಕರದೆಡೆಗೆ ಕೊಂಡೊಯ್ಯುವುದೇ ನಿಜ ಕಾಯಕ. ಕೆಲಸ ಯಾವುದೇ ಇರಲಿ, ಅದನ್ನು ಶ್ರದ್ದೆ, ಪ್ರಾಮಾಣಿಕಯಿಂದ ಮಾಡುತ್ತಾ ಅತ್ಯುನ್ನತ ತಲ್ಲೀನತೆಯ ಸ್ಥಿತಿಗೆ ತಲುಪುವುದೇ ಕೈಲಾಸ ಎಂದ ಅವರು ಕೇವಲ ದುಡಿಯುವುದಷ್ಟೇ ಅಲ್ಲ, ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಹಿತಕ್ಕಾಗಿ ನೀಡಬೇಕು ಎಂಬ ‘ದಾಸೋಹ’ ಭಾವನೆಯನ್ನು ಅವರು ಬಿತ್ತಿದರು.
ಅಹಂಕಾರವಿಲ್ಲದೇ, ಪ್ರತಿಫಲದ ಅಪೇಕ್ಷೆ ಇಲ್ಲದೇ ತಾನು ಸೇವಕ ಎಂಬ ಮನೋಭಾವದಿಂದ ನೀಡುವುದೇ ದಾಸೋಹ ಎಂದಿದ್ದಾರೆ ಬಸವಣ್ಣ ಹಾಗೂ ಎಲ್ಲರಲ್ಲಿಯೂ ಶಿವನಿದ್ದಾನೆಂಬ ತತ್ವ ಸಾರಿದ್ದಾರೆ ಎಂದು ತಿಳಿಸಿದ ಅವರು ನಾವು ನಮ್ಮ ಜೀವನದಲ್ಲಿ
ಕಾಯಕ ಮತ್ತು ದಾಸೋಹ ತತ್ವಗಳನ್ನು ಅಳವಡಿಕೊಳ್ಳೋಣವೆಂದು ಕರೆ ನೀಡಿದರು.
ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಹಾಗೂ ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷ ತೆ ವಹಿಸಿದ್ದರು.
ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್,
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ,
ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್, ಗೌರವ ಕಾರ್ಯದರ್ಶಿಗಳಾದ ಎಸ್ ಪಿ ದಿನೇಶ್,
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಹಾಜರಿದ್ದರು.
“ಶಿಖಂಡಿ” ಚಿತ್ರಕ್ಕಾಗಿ ಶಿವಮೊಗ್ಗ ಆರ್.ಸುಮೀತ್ ಕಂಠದಲ್ಲಿ ಮೂಡಿದ ಹಾಡು ಎ2 ಮ್ಯೂಸಿಕ್ ಚಾನಲ್ ನಲ್ಲಿ ಕೇಳಿ
ಯುವ ಪ್ರತಿಭಾವಂತ ಗಾಯಕ ಶಿವಮೊಗ್ಗದ ಆರ್.ಸುಮಿತ್ ಧ್ವನಿಯಲ್ಲಿ ಶಿಖಂಡಿ ಚಿತ್ರದ ಮೊದಲ ಹಾಡು ಎ2 ಮ್ಯೂಸಿಕ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಶಿವಮೊಗ್ಗದ ಯುವ ಪ್ರತಿಭಾವಂತ ಗಾಯಕ ಆರ್.ಸುಮಿತ್ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಬಹು ನಿರೀಕ್ಷಿತ ಶಿಖಂಡಿ ಚಿತ್ರದ ಮೊದಲ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಸಂಗೀತಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಶಿವಮೊಗ್ಗದ ಯುವಕ ಆರ್.ಸುಮಿತ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಚಿತ್ರದ ನಿರ್ಮಾಪಕರಾಗಿ ಪೋಲ ಪ್ರವೀಣ್ ಕುಮಾರ್, ನಿರ್ದೇಶಕರಾಗಿ ವಿ.ಗುರುಮೂರ್ತಿ, ಸಹ ನಿರ್ದೇಶಕರಾಗಿ ಜಿ.ಎಂ.ದಯಾಶಂಕರ್ ಕಾರ್ಯನಿರ್ವಹಿಸಿದ್ದಾರೆ. ಕೆಜಿಎಫ್ ಸಾಹಿತಿ ಕಿನ್ನಲ್ ರಾಜ್ ಹಾಡಿನ ಸಾಹಿತ್ಯ ರಚಿಸಿದ್ದಾರೆ.
ಶಿವಮೊಗ್ಗದ ಪ್ರತಿಭೆ ಆರ್.ಸುಮಿತ್ ಜಿಲ್ಲೆಯ ಗಾಯಕ ಮೆಲೋಡಿ ರಮೇಶ್ ಅವರ ಪುತ್ರರಾಗಿದ್ದು, ಈ ಹಾಡಿನ ಮೂಲಕ ಸಿನಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಜನರಿಗೆ ಹೆಮ್ಮೆಯ ವಿಷಯವಾಗಿದೆ. ಹಾಡಿನಲ್ಲಿ ಗಾಯಕ ಆರ್.ಸುಮಿತ್ ಅವರೊಂದಿಗೆ ಮಾದೇವ ಹಾಡಿನ ಖ್ಯಾತಿಯ ಹಿನ್ನಲೆ ಗಾಯಕಿ ಸ್ನೇಹಾ ರಾಘವನ್ ಸಹ ತಮ್ಮ ಮಧುರ ಧ್ವನಿ ನೀಡಿದ್ದಾರೆ. ಇಬ್ಬರ ಗಾಯನ ಹಾಡಿನ ಮೆಲೋಡಿಯನ್ನು ಮತ್ತಷ್ಟು ಮನಮುಟ್ಟುವಂತೆ ಮಾಡಿದೆ.
ಮುಖ್ಯ ಪಾತ್ರಗಳಲ್ಲಿ ಯುವರಾಜ್ ಮತ್ತು ಖ್ಯಾತಿ ಅಭಿನಯಿಸಿದ್ದು, ತೆಲುಗು ಬಿಗ್ ಬಾಸ್ ವಿಜೇತ ನಿಖಿಲ್ ಮಲಿಯಕ್ಕಲ್, ಮಜಾಭಾರತ ಖ್ಯಾತಿ ರಾಘವೇಂದ್ರ, ಕಾಮಿಡಿ ಕಿಲಾಡಿಗಳು ಖ್ಯಾತಿ ನಯನಾ, ಬಿಗ್ ಬಾಸ್ ಕನ್ನಡ ಸ್ಪರ್ಧಿ ನೀತು ವನಜಾಕ್ಷಿ, ದೀಪಕ್ ಶೆಟ್ಟಿ ಅಭಿನಯಿಸಿದ್ದಾರೆ. ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ ಮೊದಲ ಹಾಡು ಶಿವಮೊಗ್ಗದ ಆರ್.ಸುಮಿತ್ ಅವರ ಧ್ವನಿಯಲ್ಲಿ ಸಂಗೀತಾಭಿಮಾನಿಗಳ ಮನಗೆಲ್ಲುತ್ತಿದೆ
Bharat Scouts and Guides ಕೃಷಿ ಕ್ಷೇತ್ರ ಮಾಹಿತಿಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ- ಕೆ.ರವಿ
Bharat Scouts and Guides ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದುವುದು ಮುಖ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ ಆಯುಕ್ತ ಕೆ.ರವಿ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ, ಜಿಲ್ಲಾ ಸಂಸ್ಥೆ, ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಐದು ದಿನದ ಕೃಷಿ ಮತ್ತು ತೋಟಗಾರಿಕಾ ತರಬೇತಿ ಶಿಬಿರ ಶಿಬಿರದಲ್ಲಿ ಕೃಷಿ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಕೃಷಿ ಬಗ್ಗೆ ಮಾಹಿತಿಯು ಅತ್ಯಗತ್ಯ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಪ್ರತಿ ಕ್ಷೇತ್ರದ ಅನುಭವಗಳು ಅತ್ಯಗತ್ಯ. ಕೃಷಿ ಕ್ಷೇತ್ರವು ಸಹ ಜ್ಞಾನಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ತರಬೇತಿ ಆಯುಕ್ತ ಶಿವಶಂಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೃಷಿ ಜ್ಞಾನದ ಕೊರತೆ ಇದೆ. ನಮ್ಮ ದೇಶದ ಬೆನ್ನೆಲುಬು ಕೃಷಿ. ಇದರ ಬಗ್ಗೆ ಸಮಗ್ರವಾದ ಮಾಹಿತಿ ನಾವು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ತಮ್ಮ ಪಠ್ಯದ ಚಟುವಟಿಕೆಗಳ ಜೊತೆಗೆ ಕೃಷಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯ ಶಿವಮೊಗ್ಗ ಜಿಲ್ಲೆಯಲ್ಲಿ ಇರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಕೃಷಿಯ ಬಗ್ಗೆ ಅಗಾಧವಾದ ಮಾಹಿತಿ ಹಾಗೂ ಪ್ರಾತ್ಯಕ್ಷತೆ ದೊರೆಯುವುದರ ಮುಖಾಂತರ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ವಿಶೇಷ ಸಂಸ್ಥೆಯಾಗಿದೆ ಎಂದು ತಿಳಿಸಿದರು.
Bharat Scouts and Guides ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ರೋವರ್ಸ್ ರೆಂಜರ್ಸ್ ಮಕ್ಕಳಿಗೆ ಇರುವಕ್ಕಿ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮಣ್ಣಿನ ಆರೋಗ್ಯ, ರಕ್ಷಣೆ, ಜೇನು ಸಾಕಾಣಿಕೆ, ವಿವಿಧ ಕೃಷಿ ಮಾಹಿತಿ ಮತ್ತು ತಳಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕುಲಸಚಿವ ಡಾ. ಕೆ.ಸಿ.ಶಶಿಧರ್ ಅವರು ಮಕ್ಕಳಿಗೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು, ಹಾವೇರಿ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ, ಬಾಗಲಕೋಟೆಯ ಸ್ಕೌಟ್ಸ್ ಅಂಡ್ ಗೈಡ್ಸ್ನ ರೋವರ್ಸ್, ರೆಂಜರ್ಸ್ ಗಳು ಪಾಲ್ಗೊಂಡಿದ್ದರು. ಗೈಡ್ ಮಾಸ್ಟರ್ ಸ್ವಾತಿ, ರುದ್ರಪ್ಪ ಚೀಲೂರ್ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ಕೌಶಲ್ಯ ವೃದ್ದಿಸಲು ಪೂರಕ- ಬ್ರಹ್ಮಕುಮಾರಿ ಸ್ವಾತಿ
ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳು ಉತ್ತಮವಾಗಿ ಸಂವಹನ ನಡೆಸಲು ಹಾಗು ಆತ್ಮವಿಶ್ವಾಸದಿಂದ ಮುನ್ನಡೆಯಲು, ಸಾರ್ವಜನಿಕ ಭಾಷಣ, ಸೃಜನಶೀಲ ಬರವಣಿಗೆ, ನೃತ್ಯ, ಕ್ರೀಡೆಗಳ ಬಗ್ಗೆ ಜ್ಞಾನ ಹೆಚ್ಚಿಸಿದೆ ಎಂದು ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಖ್ಯಸ್ಥೆ, ರಾಜಯೋಗಿನಿ, ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
ನವುಲೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸರ್ಟಿಫಿಕೇಟ್ ನೀಡಿ ಮಾತನಾಡಿ, ಪ್ರತಿ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಸಹಕಾರಿಯಾಗಿದೆ. ಸಂವಹನಕಾರರು ಮತ್ತು ವಾಗ್ಮಿಗಳು ಕಲಿಕೆಯನ್ನು ಆಕರ್ಷಕವಾಗಿಸಿ ಹಂತ ಹಂತವಾಗಿ ಆತ್ಮವಿಶ್ವಾಸವನ್ನು ಬೆಳೆಸಲು ವ್ಯಕ್ತಿತ್ವ ವಿಕಸನ ಶಿಬಿರ ವಿನ್ಯಾಸಗೊಳಿಸಲಾಗಿತ್ತು ಎಂದು ತಿಳಿಸಿದರು.
ಮಕ್ಕಳಿಗೆ ಸವಾಲಿನ ಸನ್ನಿವೇಶಗಳನ್ನು ಎದುರಿಸುವ ಬಗ್ಗೆ, ಅವರಲ್ಲಿ ಕೌಶಲ್ಯ ವೃದ್ಧಿಸಲು ಪೂರಕವಾದ ಚಟುವಟಿಕೆಗಳನ್ನು ನಡೆಸಲಾಯಿತು. ವೈಯಕ್ತಿಕ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ದಿಗೆ ನೆರವಾಗಿದೆ. ಶಿಬಿರವು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮನೋಭಾವ ಬೆಳೆಸಿದೆ. ಮುಂದಿನ ದಿನಗಳಲ್ಲೂ ಇಂತಹ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಸ್ಥೆಯು ನೀಡಿದ ಬೇಸಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮಕ್ಕಳಲ್ಲಿ ಹೊಸ ವಿಷಯಗಳನ್ನು ಅನ್ವೇಷಿಸಲು, ವೈಯಕ್ತಿಕ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಮತ್ತು ಕಡಿಮೆ ಒತ್ತಡದ ವಾತಾವರಣದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಲು ಸ್ವಾತಂತ್ರö್ಯ ಒದಗಿಸಿದೆ. ಬೇಸಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಈ ಶಿಬಿರದ ಸಮಯದಲ್ಲಿ ನೀವು ಗಳಿಸಿದ ಕೌಶಲ್ಯಗಳು ಸಕಾರಾತ್ಮಕ ಪ್ರಭಾವ ಬೀರುತ್ತವೆ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಕ್ರಿಯವಾಗಿ ಸಿದ್ಧರಾಗಿರಿಸಲು ಸಹಾಯ ಮಾಡುತ್ತದೆ. ಕಲಿಕೆಗೆ ಹೆಚ್ಚು ಹೊಂದಿಕೊಳ್ಳುವ ವಿಧಾನವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ತೆರಿಗೆ ಸಲಹೆಗಾರ ಆರ್.ಮನೋಹರ, ಬ್ರಹ್ಮಕುಮಾರಿ ಕಾವ್ಯ, ಈಶ್ವರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ
Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)
ಪ್ರತಿವರ್ಷ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿಯಂದು ಶ್ರೀಶಂಕರಭಗವತ್ಪಾದರ ಜಯಂತಿಯನ್ನು ಆಚರಿಸಲಾಗುತ್ತದೆ.
ಶ್ರೀಶಂಕರಾಚಾರ್ಯರು ಅದ್ವೈತಮತ ಸಿದ್ಧಾಂತದ ಸ್ಥಾಪಕರು. ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶ್ರೀಶಂಕರಾಚಾರ್ಯರು ಮೊದಲಿಗರು.
ಇವರು ಕೇರಳ ರಾಜ್ಯದ ಕಾಲಟಿ ಎನ್ನುವ ಹಳ್ಳಿಯಲ್ಲಿ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು.
ತಂದೆ ಶಿವಗುರು,ತಾಯಿ ಆರ್ಯಾಂಬೆ ಎನ್ನುವ ಹೆಸರಿನವರು.
ತಂದೆಯನ್ನು ಬಹಳ ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡರು.ತಾಯಿಯ ಆರೈಕೆಯಲ್ಲಿ ಬೆಳೆದವರು.ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ತಳೆದ ಇವರು ಸನ್ಯಾಸ ಜೀವನದ ಕಡೆಗೆ ಒಲವು ತೋರಿದರು. ಆದರೆ
ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಬಹಳ ಕಷ್ಟ ಪಡಬೇಕಾಯಿತು.ತಾಯಿಗೆ ಅವರ ಅಂತಿಮ ಕ್ಷಣದಲ್ಲಿ
ತಾನು ಎಲ್ಲಿದ್ದರೂ ಬರುವುದಾಗಿ ಮಾತು ಕೊಟ್ಟು, ಶಂಕರರು ಸೂಕ್ತ ಗುರುವನ್ನು ಹುಡುಕುತ್ತಾ ಹೊರಡುತ್ತಾರೆ.ತಾಯಿಗೆ ಕೊಟ್ಟ ಮಾತಿನಂತೆ ಆಕೆಯ ಅಂತಿಮ ಕಾಲದಲ್ಲಿ ಕಾಲಟಿಗೆ ಹಿಂದಿರುಗಿ ತಾಯಿಯ
ಅಂತಿಮ ವಿಧಿಗಳನ್ನು ಪೂರೈಸುತ್ತಾರೆ.ನರ್ಮದಾ ನದೀ ತೀರದಲ್ಲಿದ್ದ ಶ್ರೀಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತಮ್ಮ ಗುರುಗಳನ್ನಾಗಿ ಪಡೆಯುತ್ತಾರೆ. ಅವರಿಂದಲೇ ಸನ್ಯಾಸದೀಕ್ಷೆಯನ್ನೂ ಪಡೆಯುತ್ತಾರೆ.ಗುರುಗಳಿಂದ ವೇದಾಂತ ಶಾಸ್ತ್ರಗಳನ್ನು ಅಭ್ಯಾಸಮಾಡಿದ ನಂತರ
ಕಾಶಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ಕೆಲವರು ತಮ್ಮ ಶಿಷ್ಯರನ್ನಾಗಿ ಪಡೆದು ಅವರಿಗೆ ವೇದಾಂತದ ಪಾಠವನ್ನು ಹೇಳಿಕೊಟ್ಟರು.ಶ್ರೀಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಪ್ರತಿಪಾದಕರು.ಇವರ ಸಿದ್ಧಾಂತದ ಪ್ರಕಾರ
ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆಬೇರೆ ಅಂಶಗಳಲ್ಲ. ಇರುವುದು ಒಂದೇ. ಆತ್ಮನೇ
ಪರಮಾತ್ಮನು,ಪರಮಾತ್ಮನೇ ಆತ್ಮನು.
ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಆಧ್ಯಾತ್ಮಿಕ ವಿಚಾರದಮೇಲಿನ ವಾದದಲ್ಲಿ ಸೋಲಿಸಿದರು.ಮಂಡನಮಿಶ್ರರೆಂಬ ದೊಡ್ಡ ವಿದ್ವಾಂಸರನ್ನು ವೇದಾಂತ ಚರ್ಚೆಯಲ್ಲಿ ಸೋಲಿಸಿದ ಘಟನೆ ಬಹು ಮುಖ್ಯವಾದುದು.ಮುಂದೆ ಮಂಡನ ಮಿಶ್ರರೇ ಶ್ರೀಸುರೇಶ್ವರಾಚಾರ್ಯ ಎಂಬ ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕುಪೀಠಗಳನ್ನು ಸ್ಥಾಪಿಸಿ ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ
ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿದರು. ಹಲವಾರು ಪಂಡಿತರನ್ನೂ,ಶಾಸ್ತ್ರವೇತ್ತರನ್ನೂ ಜಯಿಸಿ,ಸರ್ವಜ್ಞಪೀಠವನ್ನೇರಿದರು.
ಕಾಶ್ಮೀರದ ಪಂಡಿತರುಗಳನ್ನು ವಾದದಲ್ಲಿ ಜಯಿಸಿ,ಅವರು ಸೋಲೊಪ್ಪುವಂತೆ ಮಾಡಿದರು.
Klive special Article ಶ್ರೀಶಂಕರಾಚಾರ್ಯರು ಉತ್ತರದಲ್ಲಿ ಬದರೀಪೀಠ, ದಕ್ಷಿಣದಲ್ಲಿ ಶೃಂಗೇರಿಪೀಠ,ಪೂರ್ವದಲ್ಲಿ ಪುರಿಪೀಠ ಮತ್ತು ಪಶ್ಚಿಮದಲ್ಲಿ ದ್ವಾರಕಾಪೀಠ.ಈ ನಾಲ್ಕು ಮಠಗಳೂ ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.ಶಂಕರರು ಬಾದರಾಯಣರ ಬ್ರಹ್ಮಸೂತ್ರ(ವೇದಾಂತಸೂತ್ರ/ಶಾರೀರಿಕ ಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು.ಉಪನಿಷತ್ತುಗಳಿಗೆ ಮತ್ತು ಶ್ರೀ ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು.ಇವರು ರಚಿಸಿದ ಭಜಗೋವಿಂದಮ್ ಸ್ತೋತ್ರ ಪ್ರಸಿದ್ಧವಾಗಿದೆ.
ಹಲವಾರು ಇತರೆ ಸ್ತೋತ್ರಗಳನ್ನೂ ಶಂಕರ ಭಗವತ್ಪಾದರು ರಚಿಸಿದ್ದಾರೆ.ಕನಕಧಾರ ಸ್ತೋತ್ರ ಎನ್ನುವ ಶ್ರೇಷ್ಠವಾದ ಸ್ತೋತ್ರವನ್ನೂ ರಚಿಸಿದ್ದಾರೆ. ಇಂತಹ ಮಹಿಮರಾದ ಶ್ರೀಶಂಕರಾಚಾರ್ಯರು ತಮ್ಮ 32ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶ್ರೀಶಂಕರಾಚಾರ್ಯರ ಜಯಂತಿಯ ದಿನವಾದ ಇಂದುಗುರುಗಳನ್ನು ಭಕ್ತಿಯಿಂದ ಸ್ಮರಿಸಿ,ನಮ್ಮ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
