Rotary Blood Bank ರೋಟರಿ ಉತ್ತರ 3182 ಹಾಗೂ ಅಂತಾರಾಷ್ಟ್ರೀಯ ರೋಟರಿ ಮೊಡೆಷ್ಟೋ ಯುನೈಟೆಡ್ ಸ್ಟೇಟ್ಸ್ ನ ಆಶ್ರಯದಲ್ಲಿ ರೋಟರಿ ಕ್ಲಬ್ ಕೈಗೊಂಡ ತುಂಗಾ ಮೇಲ್ದಡೆ ಜೀವ ವೈವಿಧ್ಯ ಅರಣ್ಯ ಯೋಜನೆಯಲ್ಲಿ ಅಧಿಕಾರಿಗಳನ್ನು ತರಬೇತಿ ನೀಡುವ ಒಂದು ದಿನದ ಕಾರ್ಯಾಗಾರವನ್ನು ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ಏರ್ಪಡಿಸಲಾಗಿದ್ದು, ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಯಾದ ಡಾ. ಶುಭಾ ಮರವಂತೆಯವರು, ” ಪಶ್ಚಿಮಘಟ್ಟಗಳ ಸಮೃದ್ಧಿ ಜೀವ ವೈವಿಧ್ಯತೆಯ ಕಕ್ಷೆ ನಮ್ಮ ಶಿವಮೊಗ್ಗ ಜಿಲ್ಲೆಯು ಪರಿಸರ ಸಂರಕ್ಷಣೆಯ ವಿಷಯದಲ್ಲಿ ತುಂಬಾ ಅಪಾಯದಲ್ಲಿದೆ. ನಿರಂತರ ಕಾಡು ನಾಶದಿಂದಾಗಿ ಪರಿಸದ ಜೀವ ಸಂಕುಲಗಳು ಅಳಿವಿನ ಅಂಚಿಗೆ ತಲುಪಿವೆ. ಮನುಷ್ಯನ ಸ್ವಾರ್ಥ, ದುರಾಸೆಗಳಿಂದಾಗಿ ಅತಿಯಾದ ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿದ್ದೇವೆ. ಇಂದು ಪರಿಸರ ಉಳಿಸಿಕೊಳ್ಳುವ ಬಹುದೊಡ್ಡ ಹೊಣೆಗಾರಿಕೆಗೆ ನಾವು ಮುಂದಾಗಬೇಕಿದೆ. ಅದಕ್ಕಾಗಿ ನಮಗೆ ಪ್ರಬಲ ಇಚ್ಛಾ ಶಕ್ತಿ ಬೇಕಾಗುತ್ತದೆ ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಉತ್ತರದ ಅಧ್ಯಕ್ಷರಾದ ಶ್ರೀ ಆರ್.ಬಸವರಾಜಪ್ಪನವರು ” ತುಂಗಾ ಮೇಲ್ದಡೆ ಯೋಜನೆಯ ಪರಿಸರವನ್ನು ಜೀವ ವೈವಿಧ್ಯತೆಯ ತಾಣವಾಗಿ ರೂಪಿಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ರೋಟರಿ ಹಾಗು ಇತರ ಪರಿಸರಾಸಕ್ತರು ಮತ್ತು ಕುವೆಂಪು ವಿವಿ ಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು ಹಾಗೂ ಸ್ವಯಂಸೇವಕರ ಸಹಯೋಗದಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ” ಎಂದರು.
Rotary Blood Bank ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಕುವೆಂಪು ವಿವಿಯ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ. ಯೋಗೀಂದ್ರ ಅವರು ಪರಿಸರ ಸಂರಚನೆಯ ಮೂಲ ಪರಿಕಲ್ಪನೆಗಳನ್ನು ವಿವರಿಸಿದರು. ಉಪ ಅರಣ್ಯಾಧಿಕಾರಿಗಳಾದ ಶ್ರೀ ಶರತ್ ಜೀವವೈವಿಧ್ಯತೆ ಹಾಗೂ ಸಂರಕ್ಷಣೆಯ ಕುರಿತು ಮಾತನಾಡಿದರು. ಕೃಷಿ ವಿವಿಯ ಪ್ರಾಧ್ಯಾಪಕರಾದ ಡಾ. ಉಲ್ಲಾಸ್ ನವಿಲೆಯವರು ಕಳೆ ನಿರ್ವಹಣೆ ಕುರಿತು ಮಾತನಾಡಿದರು.
ರೋಟರಿ ಸಹ ಗವರ್ನರ್ ಆದ ರೊ.ಕೆ. ಪಿ. ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೊ. ವಿಜಯ ಕುಮಾರ್, ರೊ. ಹರ್ಷ ಕಾಮತ್, ರೊ. ವಾರಿಜ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ರೊ. ಜಗದೀಶ ಸರ್ಜಾ ಎಲ್ಲರನ್ನೂ ಸ್ವಾಗತಿಸಿದರು. ರೊ. ಪ್ರೊ.ಎ. ಎಸ್. ಚಂದ್ರಶೇಖರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರೊ.ರವೀಂದ್ರ ಐತಾಳ್ ಕಾರ್ಯಕ್ರಮ ನಿರೂಸಿದರು. ರೊ. ಆನಂದಮೂರ್ತಿ ವಂದನಾರ್ಪಣೆ ಮಾಡಿದರು.
Rotary Blood Bank ಪರಿಸರ ಉಳಿಸುವ ಬಹುದೊಡ್ಡ ಹೊಣೆಗಾರಿಕೆಗೆ ನಾವು ಮುಂದಾಗಬೇಕಿದೆ – ಡಾ.ಶುಭಾ ಮರವಂತೆ
Rotary Club Shimoga ಎಲ್ಲಾ ಪಾಲಕರು ತಮ್ಮ ಮಕ್ಕಳಿಗೆ ಇಷ್ಟವಾದದ್ದನ್ನ ಓದಲು ಉತ್ತೇಜಿಸಬೇಕು – ಚಂದ್ರಪ್ಪ ಗುಂಡಪಲ್ಲಿ
Rotary Club Shimoga ದೇಶದಲ್ಲಿ ಸರ್ವರಿಗೂ ಶಿಕ್ಷಣದ ಜೊತೆಗೆ ಮಾನವಿಯತೆ ಬೆರೆತಾಗ ಮಾತ್ರ ದೇಶದ ಉನ್ನತಿಗೆ ಕಾರಣವಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪ್ಪ ಗುಂಡಪಳ್ಳಿಯವರು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿಯ ವಾರದ ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಪ್ರಾಪ್ತವಯಸ್ಸಿನ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣದ ನಂತರ ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು, ಸಾದ್ಯವಾಗದಿದ್ದಾಗ ಎದೆಗುಂದದೆ ಇತರೆ ತಮ್ಮ ಆಸಕ್ತಿಯ ಉತ್ತಮ ಆಯ್ಕೆಗಳನ್ನು ಆರಿಸಿಕೊಳ್ಳಬೇಕು. ಅದಕ್ಕೆ ಎಲ್ಲಾ ಪಾಲಕರು ಅವರ ಇಷ್ಟವಾದದ್ದನ್ನು ಓದಲು ಉತ್ತೇಜನ ನೀಡಬೇಕು. ಈಗ ವಿದ್ಯಾಭ್ಯಾಸಕ್ಕಿಂತ ಕೌಶಲ್ಯಭರಿತ ಜಾಣ್ಮೆಗೆ ಅವಕಾಶ ಜಾಸ್ತಿ.
ಪಾಲಕರು ಮಕ್ಕಳಿಗೆ ಉತ್ತಮ ಜೀವನ ಶೈಲಿ ಕಲಿಸಿ. ಬಹಳಷ್ಟು ಮಕ್ಕಳು ದುಷ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅವರ ಮೇಲೆ ನಿಗಾಇಡಿ, ವಿಶ್ವದಲ್ಲೆ ಉತ್ತಮ ಸಂಸ್ಕೃತಿ ನಮ್ಮದು, ನಮ್ಮ ನಡೆ ನುಡಿಗಳನ್ನು ಮಕ್ಕಳಿಗೆ ಕಲಿಸಿ. ಮಾನವೀಯತೆಯನ್ನು ಯಾರು ಮರೆಯಬಾರದು, ಅಪಘಾತ, ತುರ್ತು ಸಂದರ್ಭದಲ್ಲಿ ಸ್ವಂದಿಸಿ, ನಮ್ಮಲ್ಲೆ ಕಾಲೆಳೆಯುವ ಸಂಸ್ಕೃತಿಯನ್ನು ಬಿಡಿ.
ಮುಂದೆ ಕೃತಕಬುದ್ದಿಮತೆ ಬರಲಿದೆ. ಸಾಮಾನ್ಯ ಉದ್ಯೋಗ ಕಾಣೆಯಾಗಲಿದೆ. ಇಂದು ಎಲ್ಲದೂ ಸಾದ್ಯ, ಪ್ರಯತ್ನ ಮುಖ್ಯ, ಸಮಯಕ್ಕೆ ಮಹತ್ವ ನೀಡಿ, ನಂಬಿಕೆ ಉಳಿಸಿ ಬೆಳೆಸಿ. ಪಾಲಕರು, ಶಿಕ್ಷಕರು ಮಕ್ಕಳನ್ನು ತಿದ್ದಿ ತೀಡಿ, ಪ್ರೀತಿಯಿಂದ ಗೆಲ್ಲಬೇಕು ಎಂದರು.
ಬಿ.ಎಸ್.ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು, ಲಕ್ಷ್ಮೀನಾರಾಯಣ್ ಸ್ವಾಗತಿಸಿ, ಕಾರ್ಯದರ್ಶಿ ರೇವಣಸಿದ್ದಪ್ಪ ವಂದಿಸಿದರು. ಭಾರದ್ವಾಜ್, ನವೀನ್, ಜವಳಿ, ಎನ್.ವಿ.ಭಟ್ ಇತರ ಸದಸ್ಯರು ಇದ್ದರು
ಸಂತೇಶಿವರದ ಪ್ರಶಾಂತ ಲೇಖನಿಗ… ಡಾ.ಎಸ್.ಎಲ್.ಭೈರಪ್ಪ
ಸ್ಮರಣೆ: ಡಾ. ಸಿ.ಜಿ. ರಾಘವೇಂದ್ರ ವೈಲಾಯ.
ನವಜಾತ ಶಿಶು & ಮಕ್ಕಳ ತಜ್ಞರು.
ಜನನಿ ನ್ಯೂಲೈಫ್ ಆಸ್ಪತ್ರೆ. ಶಿವಮೊಗ್ಗ
ಆಧುನಿಕ ಕನ್ನಡ ಸಾಹಿತ್ಯದ ಮೇಲೆ ನನ್ನಂಥವರಿಗೆ ಆಸಕ್ತಿ ಹುಟ್ಟಲು ಮುಖ್ಯ ಕಾರಣ ಎಂದರೆ ಸಂತೇಶಿವರದ ಭೈರಪ್ಪನವರು ಎನ್ನಬಹುದು. ಇವರು ಕನ್ನಡ ಸಾಹಿತ್ಯ ಲೋಕದ ಶಾಶ್ವತ ಧ್ರುವತಾರೆ. ಕರುನಾಡಿನ ಅಪರೂಪದ ಸಾಕ್ಷಿ ಪ್ರಜ್ಞೆ. ಯಾವ ಇಸಂಗಳ, ಪೂರ್ವಾಗ್ರಹ ಗಳ ತೆಕ್ಕೆಗೂ ಸಿಲುಕದೆ ಬದುಕನ್ನು ಬಹಳ ಹತ್ತಿರದಿಂದ ಸಾಪೇಕ್ಷವಾಗಿ ಕಂಡು ಅದರ ಹತ್ತು ಹಲವು ಮಜಲುಗಳನ್ನು ಪರೀಕ್ಷಕ ದೃಷ್ಟಿಯಿಂದ ವಿಮರ್ಶೆ ಮಾಡಿ ಪಂಥ ನಿರಪೇಕ್ಷವಾಗಿ ಸರ್ವತಂತ್ರ ಸ್ವತಂತ್ರವಾದ ಸಾಹಿತ್ಯದ ರಚನೆಯನ್ನು ಮಾಡಿದ ಇವರು ನಿಜವಾದ ವಿಶ್ವಮಾನವ.
ನೂರು ಮತದ ಹೊಟ್ಟ ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದಲ್ಲೆ ಮೀರಿ ಬರಹವನ್ನೂ ಬದುಕನ್ನೂ ಸಾದೃಶವಾಗಿ ಕಂಡ ಅಪರೂಪದ ಮಹನೀಯರಿವರು. ಭಾರತೀಯ ದರ್ಶನಗಳು ಮತ್ತು ತತ್ವಶಾಸ್ತ್ರದ ಅಧ್ಯಯನವು ಸೃಜನಶೀಲ ಸಾಹಿತ್ಯಕ್ಕೆ ಹೇಗೆ ಭದ್ರ ಅಡಿಪಾಯವನ್ನು ಹಾಕಬಲ್ಲದು ಎಂದು ತೋರಿಸಿಕೊಟ್ಟವರಿವರು. ಪಾಶ್ಚಾತ್ಯರ ಅನುಕರಣೆಯ ಜನಪ್ರಿಯ ಮಾರ್ಗದ ಬದಲಾಗಿ ಶುದ್ಧ ಭಾರತೀಯ ನೆಲೆಗಟ್ಟಿನಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಗೆದ್ದವರು ನಮ್ಮ ಭೈರಪ್ಪ.
ತಾವು ಏನೂ ಅಲ್ಲದೇ ಇದ್ದಾಗ ತಮ್ಮ ಬರಹಗಳಿಗೆ ಒಂದು ಭದ್ರ ನೆಲೆಯನ್ನು ಒದಗಿಸಿಕೊಟ್ಟ ಪ್ರಕಾಶಕರನ್ನು ಕೈಬಿಡದೆ ಕೊನೆವರೆಗೂ ನಂಬಿ ಬದುಕಿದ ವಿಶ್ವಾಸಿ ಇವರು.ತಮ್ಮ ಬರಹಗಳಲ್ಲಿ ಹಲೆವೆಡೆ ಮೂಡಿಬಂದ ವ್ಯಭಿಚಾರದ ಉಲ್ಲೇಖಗಳ ಕುರಿತು ಹಲವರಿಂದ ಹಲವು ಬಾರಿ ಉಗ್ರ ಟೀಕೆಗೆ ಒಳಗಾದ ಭೈರಪ್ಪನವರು ತಮ್ಮ ಬದುಕಿನಲ್ಲಿ ಮಾತ್ರ ಶುದ್ಧ ಗರತಿಯಂತೆ ಬಾಳಿದವರು ನಮ್ಮ ಭೈರಪ್ಪ.
ಇವರಿಗೆ ದೊರಕದೇ ಉಳಿದ ಜ್ಞಾನಪೀಠದಂತ ಹಲವಾರು ಪ್ರಶಸ್ತಿಗಳು ಈ ಮೂಲೂ ತಮ್ಮ ಮೌಲ್ಯವನ್ನು ಕುಗ್ಗಿಸಿಕೊಂಡವೇ ಹೊರತು ಭೈರಪ್ಪನವರು ಆ ಕುರಿತು ಎಂದೂ ವಿಷಾದಗೊಂಡವರಲ್ಲ. ಸಾಹಿತ್ಯಾಸಕ್ತರು ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡ ಇವರ ಪುಸ್ತಕಗಳನ್ನು ಜನರು ಕೊಂಡು ಓದುವವರೆಗೂ ಭೈರಪ್ಪನವರು ಅಜರಾಮರ. ಇವರ ಬರಹಗಳಿಗೆ ಇರುವ ಮಾರುಕಟ್ಟೆಯೇ ಈ ಕೃತಿಗಳ ನೈಜ ಮೌಲ್ಯಮಾಪನ ವೆನ್ನಬಹುದು. ಆಧುನಿಕ ಕನ್ನಡ ಸಾಹಿತ್ಯವನ್ನು ವೈಶ್ವಿಕ ಮಟ್ಟಕ್ಕೆ ಎತ್ತರಿಸಿದ ಭೈರಪ್ಪನವರಿಗೆ ಕನ್ನಡಿಗರು ಸದಾ ಚಿರಋಣಿಗಳಾಗಿರಬೇಕು.
ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು ಎಂಬ ಭಾವಕ್ಕೆ ತಕ್ಕಂತೆ ತಾವು ಇದುತನಕ ಬರೆದು ಗಳಿಸಿದ ಸರ್ವಸ್ವವನ್ನೂ ಕಾಯ ಬಿಟ್ಟು ಹೋಗುವ ಮೊದಲೇ ತಾವು ಸಮಾಜಕ್ಕೆ ಕೊಟ್ಟು ಹೋಗಬೇಕೆಂಬ ತುಡಿತವನ್ನು ಹೊಂದಿ ಅದಕ್ಕನುಗುಣವಾಗಿ ತಮ್ಮ ಅಭಿಮಾನಿಗಳ ನರವಿನಿಂದ ಟ್ರಸ್ಟ್ ಒಂದನ್ನು ಸ್ಥಾಪಿಸಿದ್ದರು. ಇತ್ತೀಚೆಗೆ ಬರಡಾಗಿದ್ದ ತನ್ನ ಹುಟ್ಟೂರಿನ ಕೆರೆಗೆ ಮತ್ತೆ ನೀರನ್ನು ಹರಿಸಿದ ಆಧುನಿಕ ಭಗೀರಥ ಇವರು. ಪ್ರಶಸ್ತಿ, ಪ್ರಚಾರ, ಪ್ರಲೋಭನೆ, ರಾಜಕೀಯ ಪ್ರೇರಣೆ ಮತ್ತು ತ್ವರಿತ ಜನಪ್ರಿಯತೆಗಳ ಹಂಗಿಗೆ ಸಿಲುಕದೇ ಕೇವಲ ಆತ್ಮತೃಪ್ತಿಗಾಗಿ ಬರೆದು ಸೈ ಅನಿಸಿಕೊಂಡವರು ನಮ್ಮ ಭೈರಪ್ಪ. ಮಾನವನ ಬದುಕಿನಲ್ಲಿ ಮೌಲ್ಯಗಳ ಸಂಘರ್ಷ, ಚತುರ್ವಿಧ ಪುರುಷಾರ್ಥಗಳ ನಡುವಿನ ತಾಕಲಾಟ, ಲೌಕಿಕ ಬಯಕೆಗಳು ಮತ್ತು ಪಾರಲೌಕಿಕ ನಂಬಿಕೆಗಳ ನಡುವಿನ ತೊಯ್ದಾಟ ಹೀಗೆ ಬದುಕನ್ನು ಚಿಕಿತ್ಸಕ ದೃಷ್ಟಿಯಿಂದ ಕಂಡು, ಆ ಭಾವಮಥನದಲ್ಲಿ ಉದಿಸಿದ ಅಮೃತ ಮತ್ತು ವಿಷಗಳೆರಡನ್ನೂ ತನ್ನ ಕೃತಿಗಳ ಮೂಲಕ ನಿಸ್ಪ್ರಹವಾಗಿ ಓದುಗರಿಗೆ ಉಣಬಡಿಸಿದ ನಿಷ್ಠರವಾದಿ ನಮ್ಮ ಭೈರಪ್ಪ. ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ ಬರೆಯುವುದು ಅನಿವಾರ್ಯ ಕರ್ಮ ನನಗೆ, ಎಂಬಂತೆ ಬರೆದವರು ನಮ್ಮ ಭೈರಪ್ಪ. 25 ಉತ್ಕೃಷ್ಟ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತವಾಗಿಸಿದ ಇವರು ಸಾಹಿತಿಯೋರ್ವ ಕೇವಲ ಬರೆದು ಗಳಿಸುವ ಮೂಲಕ ಬದುಕಬಹುದು ಎಂದು ಸಾಧಿಸಿ ತೋರಿದ trend setter ಎನ್ನಬಹುದು. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಸಮಾಜದಿಂದ ಗಳಿಸಿದ ಎಲ್ಲವನ್ನೂ ಅದಕ್ಕೆ ಬಡ್ಡಿಯನ್ನೂ ಸೇರಿಸಿ ಮತ್ತೆ ಸಮಾಜಕ್ಕೇ ಬಿಟ್ಟು ಹೋದ ಮಹಾತ್ಮರಿವರು.
ಅನಂತ ತಾನನಂತವಾಗಿ ಆಗುತಿಹನು ನಿತ್ಯಯೋಗಿ ಎಂಬಂತೆ ಸಾರ್ಥಕ ಬದುಕನ್ನು ಬದುಕಿ, ಹೇಗೆ ಬಂದರೋ ಹಾಗೆಯೇ ಕಿಂಚಿತ್ತೂ ಸದ್ದುಮಾಡದೇ ಹೊರಟು ಹೋದ ಕರ್ಮಯೋಗಿ ನಮ್ಮ ಭೈರಪ್ಪ. ಇವರು ಬದುಕು ಮತ್ತು ಸಾಹಿತ್ಯವೆರಡನ್ನೂ ತಪಸ್ಸಿನಷ್ಟೇ ಪವಿತ್ರವಾಗಿ ಕಂಡವರು. ಲೋಕಕ್ಕೆ ಎಂದೂ ಹೊರೆಯಾಗದಂತೆ ಬದುಕಿ, ಛೇ ಇನ್ನೂ ಒಂದಷ್ಟು ವರ್ಷ ಬದುಕಬಾರದಿತ್ತೇ ಎಂಬ ವಿಷಾದವನ್ನು ನಮ್ಮೆಲ್ಲರಲ್ಲಿ ಉಳಿಸಿ ಕಣ್ಮರೆಯಾದ ಅದಮ್ಯ ಚೇತನ ನಮ್ಮ ಭೈರಪ್ಪ. ಈ ಕಾಲಾತೀತ ಸಾಹಿತ್ಯ ಕೃತಿಗಳ ಸೃಷ್ಟಿಕರ್ತನ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಮತ್ತೊಮ್ಮೆ ಅವರ ಬರಹಗಳಲ್ಲಿ ಮುಳುಗೇಳೋಣ. ಅಲ್ಲಿ ಕಂಡುಬರುವ ಮೌಲ್ಯಗಳನ್ನು ನಮ್ಮ ಬದುಕಿನೊಂದಿಗೆ ತಾಳೆಹಾಕುತ್ತಾ ತನ್ಮೂಲಕ ನಮ್ಮ ಬದುಕನ್ನು ಉತ್ತಮಗೊಳಿಸೋಣ.
ಡಾ|| ಸಿ.ಜಿ. ರಾಘವೇಂದ್ರ ವೈಲಾಯ
ನವಜಾತ ಶಿಶು & ಮಕ್ಕಳ ತಜ್ಞರು
ಜನನಿ ನ್ಯೂಲೈಫ್ ಮಹಿಳಾ & ಮಕ್ಕಳ ಆಸ್ಪತ್ರೆ
ಶಿವಮೊಗ್ಗ, ಕರ್ನಾಟಕ.
Karnataka State Open University ಪದವೀಧರರಿಗೆ ರಾಜ್ಯ ಮುಕ್ತ ವಿವಿಯ ತರಬೇತಿ ಕೇಂದ್ರದಿಂದ ಬ್ಯಾಂಕಿಂಗ್ & ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ
Karnataka State Open University ಪದವೀಧರರಾಗಿದ್ದು, ಬ್ಯಾಂಕಿಂಗ್ ಅಥವಾ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆ ಪಡೆಯಲು ಬಯಸುವವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು KSOU ನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ 50 ದಿನಗಳ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ತರಬೇತಿಯು
ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಾದ ಎಲ್ಲಾ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.
ಯಾವುದೇ ಪದವಿ ಪೂರ್ಣಗೊಳಿಸಿದ ಆಸಕ್ತ ಅಭ್ಯರ್ಥಿಗಳು ಈ ತರಬೇತಿಗೆ ಸೆ. 30 ರೊಳಗಾಗಿ ನೋಂದಾಯಿಸಿಕೊಳ್ಳುವಂತೆ ಕುಲಸಚಿವ ಪ್ರೊ. ನವೀನ್ಕುಮಾರ್ ಎಸ್.ಕೆ. ಅವರು ತಿಳಿಸಿದ್ದಾರೆ.
Karnataka State Open University ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2515944/ 9964760090 ಅನ್ನು ಸಂಪರ್ಕಿಸುವುದು.
Nalanda Chess Academy ಅಕ್ಟೋಬರ್ 1 ರಿಂದ ಶಿವಮೊಗ್ಗದ ನಲಂದಾ ಚೆಸ್ ಅಕಾಡೆಮಿಯಿಂದ ಉನ್ನತ ಚೆಸ್ ತರಬೇತಿ ಆರಂಭ
Nalanda Chess Academy ನಲಂದಾ ಚೆಸ್ ಅಕಾಡೆಮಿಯವರು ದಸರಾ ರಜೆ ಸಂದರ್ಭದಲ್ಲಿ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದಾರೆ.
ಅವಧಿ: 01-10-2025 ರಿಂದ 07-10-2025.
ವೇಳಾಪಟ್ಟಿ:
ಪ್ರಾಥಮಿಕ ತರಗತಿ: ಪ್ರತಿದಿನ 9:30 AM — 11:00 AM
ಉನ್ನತ ತರಗತಿ: ಪ್ರತಿದಿನ 11:00 AM — 12:30 PM
ಸ್ಥಳ: ನಲಂದಾ ಚೆಸ್ ಅಕಾಡೆಮಿಯ ಕಚೇರಿ.
ಶಿಬಿರದ ಮೊದಲ ದಿನದ ನೋಂದಣಿ ನಲಂದಾ ಚೆಸ್ ಅಕಾಡೆಮಿಯ ಕಚೇರಿಯಲ್ಲಿ ನಡೆಯಲಿದೆ.
ಸಂಪರ್ಕ ಮತ್ತು ವಿವರಗಳಿಗಾಗಿ:
ಶ್ರೀ ಕೃಷ್ಣ ಉಡುಪ — 9844436276 / 9916910411 / 9945809662
CBR Law College ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ತತ್ವಾದರ್ಶಗಳು ಮುಖ್ಯವಾಗಿವೆ- ಡಾ.ಎ.ಅನಲ
CBR Law College ರಾಷ್ಟ್ರ ಶಿಕ್ಷಣ ಸಂಸ್ಥೆ ಸಿಬಿಆರ್ ಕಾನೂನು ಮಹಾ ವಿದ್ಯಾಲಯ ಮತ್ತು ಸ್ನಾತಕೊತ್ತರ ಕಾನೂನು ಅಧ್ಯಯನ ಕೇಂದ್ರ (ಐ.ಕ್ಯೂ.ಎ .ಸಿ ಪ್ರೇರಣೆ) ಆಶ್ರಯದಲ್ಲಿ ಗಾಂಧೀ ಜಯಂತಿ ನಿಮಿತ್ತ ಶಾಂತಿಯ ಸಂದೇಶ ಸೌಹಾರ್ದ ಸಪ್ತಾಹ ಉದ್ಘಾಟನಾ ಕಾರ್ಯಕ್ರಮವನ್ನು ಇಂದಿನಿಂದ ಸೆ. ೩೦ರವರೆಗೆ ವಿವಿಧ ಕಾರ್ಯಕ್ರಮ ಗಳು ನಡೆಯಲಿದೆ.
ಸಿ. ಬಿ.ಆರ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎ ಅನಲ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದಿನ ಜಗತ್ತಿಗೆ ಗಾಂಧೀಜಿಯವರ ತತ್ವ ಆದರ್ಶಗಳು ಮುಖ್ಯವಾಗಿದೆ ಮತ್ತು ಎಲ್ಲರೂ ಹಿಂಸೆಯ ಮಾರ್ಗವನ್ನು ತೊರೆದು ಶಾಂತಿ, ಸೌಹಾರ್ದತೆ ಯಿಂದ ನಾವೆಲ್ಲರೂ ಭಾರತೀಯ ರೆಂಬ ಭಾವನೆಯಿಂದ ಬದುಕಬೇಕು ಎಂದು ತಿಳಿಸಿದರು.
CBR Law College ಈ ಸಂದರ್ಭದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಪ್ರತಿe ಬೋಧಿಸಲಾಯಿತು. ಪ್ರಾಧ್ಯಾಪಕ ಡಾ. ಕಾಂತ ರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.
Sahyadri Arts College ಮಾಹಿತಿ ತಂತ್ರಜ್ಞಾನ, ಅಂತರ್ಜಾಲ & ಸೈಬರ್ ಸೆಕ್ಯೂರಿಟಿಗೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವಿರಬೇಕು- ಜಿ.ವಿ.ಗಣೇಶ್
Sahyadri Arts College ತಂತ್ರಜ್ಞಾನ ಯುಗದಲ್ಲಿ ಹೊಸ ಆವಿಷ್ಕಾರಗಳು ನಿರಂತರ ನಡೆಯುತ್ತಿದ್ದು, ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ, ಅಂತರ್ಜಾಲ ಮತ್ತು ಸೈಬರ್ ಸೆಕ್ಯೂರಿಟಿ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ವಿ.ಗಣೇಶ್ ಹೇಳಿದರು.
ಜೆಸಿಐ ಸಹ್ಯಾದ್ರಿ ಘಟಕದ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ತಂತ್ರಜ್ಞಾನ ಸೈಬರ್ ಸೆಕ್ಯೂರಿಟಿ ಅಂತರ್ಜಾಲದ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಯಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಬೇಕು. ಜೆಸಿಐ ಸಂಸ್ಥೆ ವತಿಯಿಂದ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಜೆಸಿಐನಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಅನುಕೂಲ ಒದಗಿಸುತ್ತವೆ. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಗುವುದಲ್ಲದೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ನಿಯೋಜಿತ ರಾಷ್ಟ್ರೀಯ ತರಬೇತುದಾರ ಮೋಹನ್ ಕಲ್ಪತರು ಮಾತನಾಡಿ, ಜೆಸಿಐ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾದ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ವೃತ್ತಿಗಳಲ್ಲಿ ವಿಶೇಷ ಸಾಧನೆ ಮಾಡಲು ಬದುಕಿನ ಕಲೆ ಹಾಗೂ ವೃತ್ತಿ ಕೌಶಲ್ಯ, ಅಂತರ್ಜಾಲ ಬಳಸುವ ರೀತಿ ಹಾಗೂ ಹೊಸ ಆಪ್ಗಳನ್ನು ಯಾವ ರೀತಿ ಬಳಸಬೇಕು ಎನ್ನುವುದನ್ನು ಅರಿತಿರಬೇಕು ಎಂದರು.
Sahyadri Arts College ಮೊಬೈಲ್ನಲ್ಲಿ ಸಂಪೂರ್ಣ ಕಾರ್ಯನಿರ್ವಹಣೆ ಸಾಧ್ಯವಿದ್ದು, ನಮ್ಮ ಬ್ಯಾಂಕ್ ಖಾತೆಗಳನ್ನು ಸಹ ಅಷ್ಟೇ ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು. ಅದರ ಬಗ್ಗೆ ಸಮಗ್ರ ಮಾಹಿತಿ ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಈಗಾಗಲೇ ಸಾಕಷ್ಟು ಜನರು ಸೈಬರ್ ಸೆಕ್ಯೂರಿಟಿ ಇಲ್ಲದೆ ನೂರಾರು ಕೋಟಿ ರೂ. ಹಣ ಕಳೆದುಕೊಂಡಿರುವುದು ಮಾಧ್ಯಮದಲ್ಲಿ ನೋಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಸಹ ಬದಲಾದ ತಂತ್ರಜ್ಞಾನಕ್ಕೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ಹೊಸ ಹೊಸ ವಿದ್ಯಮಾನಗಳನ್ನು ಆಸಕ್ತಿಯಿಂದ ಕಲಿಯಬೇಕು. ಜೆಸಿಐನಂತಹ ತರಬೇತಿ ಕಾರ್ಯಗಾರಗಳು ವಿದ್ಯಾರ್ಥಿಗಳಿಗೆ ತುಂಬಾ ಪರಿಣಾಮಕಾರಿಯಾಗಿ ಉಪಯೋಗವಾಗುತ್ತವೆ ಎಂದರು.
ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಮಾತನಾಡಿ, ಡಿಜಿಟಲ್ ಲಿಟರಸಿ ಇಂದಿನ ಮಕ್ಕಳಿಗೆ ಬಹಳ ಅಗತ್ಯವಿದೆ ಎಂದು ತಿಳಿಸಿದರು. ಉಪನ್ಯಾಸಕ ಮಹದೇವ್ ಹಾಗೂ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
Chowdeshwari Temple ಶಿವಮೊಗ್ಗ ಚಾಲುಕ್ಯ ನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ಶ್ರೀಚಂಡಿಕಾ ಹೋಮ
Chowdeshwari Temple ಶಿವಮೊಗ್ಗ ನಗರದ ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸೆ.೨೪ರಂದು ಶ್ರೀಮತಿ ಮೈತ್ರಾ ಶ್ರೀ ನಾರಾಯಣಮೂರ್ತಿ ಕುಟುಂಬದವರಿಂದ ಅನ್ನಪೂರ್ಣೇಶ್ವರಿ ಅಲಂಕಾರ, ಶ್ರೀಮತಿ ದಿವ್ಯಾ ಡಾ. ಮೋಹನ್ ಮತ್ತು ಶ್ರೀಮತಿ ಮಧು ಶ್ರೀ ಪ್ರಸನ್ನ ಕುಟುಂಬದವರಿಂದ ಶ್ರೀ ಚಂಡಿಕಾಹೋಮ ನೇರವೆರಿಸಲಾಯಿತು.
ಸೆ. 25 ಶ್ರೀಮತಿ ಮೂಕಾಂಬಿಕಾ ಶ್ರೀ ಅಶೋಕ ಕುಮಾರ ಕುಟುಂಬದಿಂದ ದೇವಿಗೆ ಶಾಕಂಬರಿ ಅಲಂಕಾರ,
ಶ್ರೀಮತಿ ಡಾ. ಕಾವ್ಯ ಶ್ರೀ ಶ್ರೀ ಡಾ. ಅಪ್ರಮೇಯ ಕುಟುಂಬದವರಿಂದ ಬನಶಂಕರಿ ಹೋಮ ಏರ್ಪಡಿಸಲಾಗಿದೆ.
ಸಂಜೆ 6;30 ರಿಂದ ಪೃಥ್ವಿ ಗೌಡ ಇವರಿಂದ ಭಕ್ತಿ ಗೀತೆ ಕಾರ್ಯಕ್ರಮ. ರಾತ್ರಿ 8:00 ರಿಂದ ಶ್ರೀಮತಿ ಪವಿತ್ರ ಶ್ರೀ ಹರಿಪ್ರಕಾಶ್ ಕುಟುಂಬದವರಿಂದ ಉಯ್ಯಾಲೇ ಸೇವೆ ಹಮ್ಮಿಕೊಳ್ಳಲಾಗಿದೆ. Chowdeshwari Temple 8:00 ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ವಿರುತ್ತದೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಕೋರಿದ್ದಾರೆ
ಹೆಚ್ಚಿನ ಮಾಹಿತಿಗಾಗಿ : ಚೇತನಭಟ್ 9980247081, ಕೆ. ಶೇಖರ 9448888129 ಸಂಪರ್ಕಿಸಬಹುದು.
Shivamogga City Corporation ದೇಶದಲ್ಲಿ ಶೇ 80 ಅರಣ್ಯ ಪ್ರದೇಶ , ಶೇ,20 ರಷ್ಟು ಜನವಸತಿ ಇತ್ತು, ಈಗ ತಿರುವು ಮುರುವಾಗಿದೆ- ಡಾ.ಎಲ್.ಕೆ.ಶ್ರೀಪತಿ
Shivamogga City Corporation ಭಾರತೀಯ ಸನಾತನ ಪರಂಪರೆಯಲ್ಲಿ ವೃಕ್ಷಗಳಿಗೆ ಬಹಳ ಪೂಜನೀಯ ಮತ್ತು ಮಹತ್ವದ ಸ್ಥಾನ ಇದೆ ಶ್ರೀಪತಿ
ಬೃಹತ್ ಪರಾಶರ ಸಂಹಿತೆಯಲ್ಲಿ ಬರುವ “ಅಶ್ವತ್ಥಮೇಕಂ ಪಿಚುಮಂದಮೇಕಂ ನಗ್ರೋಧಮೇಕಂ ದಶಚಿಂಚೀಣೀಕಂ. ಕಫಿತ್ಥ ಬಿಲ್ವಾ ಮಲಕೀ ತ್ರಯಂ ಪಂಚಾಮ್ರರೋಪಿ ನರಕಂ ನ ಪಶ್ಯೇತ್” ಅಂದರೆ, ಒಂದು ಆಶ್ವತ್ಥ, ಒಂದು ಬೇವಿನ ಮರ, ಒಂದು ಆಲ, ಅಥವಾ ಹತ್ತು ಹುಣಿಸೆ ಅಥವಾ ಮೂರು ಬಿಲ್ವ, ನಲ್ಲಿ ಮತ್ತು ನೇರಿಳೆ ಅಥವಾ ಐದು ಮಾವಿನ ಗಿಡಗಳನ್ನು ಯಾರು ನೆಡುವರೋ ಅವರಿಗೆ ನರಕ ಪ್ರಾಪ್ತಿಯಿಲ್ಲ” ಎಂದು ಹೇಳಿದರು. ಇಲ್ಲಿ ನರಕ ಎನ್ನುವುದನ್ನು ಇಲ್ಲಿ ಬೂಮಿಯ ಮೇಲೇ ಎಂದು ತಿಳಿದುಕೊಳ್ಳಬೇಕು ಎಂದು ಡಾ. ಶ್ರೀಪತಿ ಎಲ್.ಕೆ. ಸಂದರ್ಶಕ ಪ್ರಾದ್ಯಾಪಕರು, ಐಐಟಿ ಧಾರವಾಡ ಇವರು ತಿಳಿಸಿದರು. ಅವರು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಚರಿಸುತ್ತಿರುವ ದಸರಾ ಮಹೋತ್ಸವದ “ಪರಿಸರ ದಸರಾ ಅಂಗವಾಗಿ ಒಂದು ಸಾವಿರ ಬೃಹತ್ ಗಿಡ ನೆಡುವ ಕಾರ್ಯಕ್ರಮ ಉಧ್ಗಾಟಿಸಿ ಮಾತನಾಡಿದರು. ಮುಂದುವರೆದು ಭಗವಾನ್ ಬುಧ್ನ ಅನುಯಾಯಿಯಾಗಲು ಆರು ಗಿಡಗಳನ್ನು ನೆಟ್ಟು ಅವುಗಳನ್ನು ಪೂರ್ಣ ಬೆಳೆಯುವವರೆಗೆ ಪೋಷಿಸಬೇಕೆಂದು ಬುದ್ಧ ಹೇಳಿದ್ದನ್ನು ಉಲ್ಲೇಖಿಸಿ ಆಗ ನಮ್ಮ ದೇಶದಲ್ಲಿ ಶೇಕಡಾ 80 ಭಾಗ ಅರಣ್ಯ ಪ್ರದೇಶ ಇತ್ತು ಕೇವಲ ಶೇಕಡಾ 20 ಭಾಗ ಜನವಸತಿ ಇತ್ತು. ಈಗ ಅದು ತಿರುವು ಮುರುವು ಆಗಿದೆ. ಈಗಲಾದರೂ ನಾವು ಎಚ್ಚರಿಕೆ ವಹಿಸಿದ್ದರೆ ಜಾಗತಿಕ ತಾಪಮಾನ ಏರಿಕೆ ತಡೆಯಲು ಸಾಧ್ಯವಿಲ್ಲ. ಕೇವಲ ಗಿಡ ನೆಡುವ ಸಾಂಕೇತಿಕ ಕಾರ್ಯಕ್ರಮ ಇದು ಆಗಬಾರದು. ನೆಟ್ಟ ಗಿಡವನ್ನು ಕನಿಷ್ಠ ಮೂರು ವರ್ಷ ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಎಚ್ಚರಿಕೆ ನುಡಿಗಳನ್ನು ಆಡಿದರು.
Shivamogga City Corporation ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗಬಹಿಸಿದ್ದ, ಜಿಲ್ಲಾ ಕಾನೂನು ಸೇವಾ ಆಯೋಗದ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ರವರು ನಮ್ಮ ದೇಶದ ಪ್ರಥಮ ಮಹಿಳೆ, ಗೌರವಾನ್ವಿತ ರಾಷ್ಟ್ರಾಧ್ಯಕ್ಷೆ ಶ್ರೀಮತಿ ದ್ರೌಪಧಿ ಮುರ್ಮು ರವರ ಬಾಲ್ಯದ ಅನುಭವವನ್ನು ಉಲ್ಲೇಖಿಸುತ್ತಾ “ ಒರಿಸ್ಸಾಧ ಅವರ ಜನಾಂಗದಲ್ಲಿ ಮರವನ್ನು ಅನಿವಾರ್ಯವಾಗಿ ಕಡಿಯುವ ಸಂಧರ್ಭದಲ್ಲಿ ಅದಕ್ಕೆ ನಮಿಸುವ ಪರಿಪಾಠವಿದೆ ಅದು ಜೀವಂತ ಇದ್ದಾಗ ಪಶು ಪಕ್ಷಿ ಪ್ರಾಣಿಗಳಿಗೆ ಆಹಾರ ನೀಡಿದೆ, ಕಡಿದ ಮೇಲೂ ಅದು ನಮಗೆ ಆಹಾರ ಬೇಯಿಸಲು ಉಪಯೋಗವಾಗುತ್ತಿದೆ. ಹಾಗಾಗಿ ಅದಕ್ಕೆ ನಮಸ್ಕರಿಸುವುದು ನಮ್ಮ ಸಂಪ್ರದಾಯ” ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ “ ಪರಿಸರ ದಸರಾ ಕಾರ್ಯಕ್ರಮದ ಮುಖ್ಯಸ್ಥೆ ನಗರಪಾಲಿಕೆಯ ಅಭಿಯಂತರರಾದ ಶ್ರೀಮತಿ ತ್ರಿವೇಣಿ ಪರ್ಯಾವರಣ ಟ್ರಸ್ಟನ ಅಧ್ಯಕ್ಷರಾದ ಪ್ರೊ ಕುಮಾರಸ್ವಾಮಿ, ರೋಟೇರಿಯನ್, ಶ್ರೀ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
World Heart Day ಸೆ.28 ರಂದು ವಿಶ್ವ ಹೃದಯ ದಿನ, ಎನ್.ಹೆಚ್.ಆಸ್ಪತ್ರೆಯಿಂದ ವಿಶೇಷ ವಾಕಥಾನ್
World Heart Day ವಿಶ್ವ ಹೃದಯ ದಿನದ ಅಂಗವಾಗಿ, ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೆ. ೨೮ (ಭಾನುವಾರ) ದಂದು ವಾಕಾಥಾನ್ ಹಮ್ಮಿಕೊಂಡಿದೆ.
ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಈ ವಾಕಾಥಾನ್ ಗೆ ಶಿವಮೊಗ್ಗದ ಸಂಸದರಾದ ಶ್ರೀ ಬಿವೈ ರಾಘವೇಂದ್ರ ಅವರು ನೆಹರು ಮೈದಾನದಲ್ಲಿ ಬೆಳಿಗ್ಗೆ ೭ ಘಂಟೆಗೆ ಉದ್ಘಾಟಿಸಲಿದ್ದಾರೆ.
ಜಾಗೃತಿ ಜಾಥಾವೂ ನೆಹರು ಮೈದಾನದಿಂದ ಮಹಾವೀರ ಸರ್ಕಲ್, ಗೋಪಿ ಸರ್ಕಲ್, ಅಮೀರ ಅಹ್ಮದ್ ಸರ್ಕಲ್ ಮಾರ್ಗವಾಗಿ ನೆಹರೂ ರಸ್ತೆ, ಗೋಪಿ ಸರ್ಕಲ್, ಜೈಲ್ ಸರ್ಕಲ್, ಮಹಾವೀರ ಸರ್ಕಲ್ ತಲುಪಿ ತದನಂತರ ಕುವೆಂಪು ರಸ್ತೆಯ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ನ ಆವರಣದಲ್ಲಿ ಅಂತ್ಯಗೊಳ್ಳಲಿದೆ.
World Heart Day ಶಿವಮೊಗ್ಗ ನಗರದ ನಾಗರಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸುವಂತೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
