Thursday, March 19, 2026
Thursday, March 19, 2026
Home Blog Page 1479

ಪತ್ರಿಕೆಗಳು ವ್ಯಕ್ತಿ ಮತ್ತು ಪಕ್ಷದ ಮುಖವಾಣಿಯಾಗಬಾರದು- ಈಶ್ವರಪ್ಪ

0

ಸರ್ವಾಧಿಕಾರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಅದೇ ರೀತಿಯಲ್ಲಿ ಪತ್ರಿಕೆಗಳು ಕೂಡ ಒಬ್ಬ ವ್ಯಕ್ತಿ, ಪಕ್ಷದ ಮುಖವಾಣಿಯಾಗಿರಬಾರದು ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕೆಯುಡಬ್ಲ್ಯೂಜೆ ವತಿಯಿಂದ ಹಮ್ಮಿಕೊಂಡಿದ್ದ ಮೀಡಿಯಾ ಹೌಸ್‌ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭಾರತೀಯರ ದೃಷ್ಟಿಯಲ್ಲಿ ಪತ್ರಿಕಾ ವೃತ್ತಿ ಪವಿತ್ರವಾದ ವೃತ್ತಿ.
ಭಾರತ ಮಾತೆಯ ಸೇವೆ ದಿನನಿತ್ಯ ಹಾಗೂ ಪೂಜೆ ಮಾಡುತ್ತಿರುವ ಕ್ಷೇತ್ರ ಇದಾಗಿದೆ ಎಂದರು.

ರಾಜಕೀಯ ಕ್ಷೇತ್ರ ಯಾವುದಾದರೂ ಒಬ್ಬ ವ್ಯಕ್ತಿಯ ಕೈಗೆ ಬಂದರೆ ಅದು ಸರ್ವಾಧಿಕಾರ ಆಗುತ್ತದೆ. ಅಂತಹ ಸರ್ವಾಧಿಕಾರಿಗಳು ಮಣ್ಣು ಮುಕ್ಕಿ ಹೋಗಿದ್ದಾರೆ. ಮಣ್ಣು ಮುಕ್ಕಿಸುವಂತಹ ಶಕ್ತಿಯನ್ನು ರೈತರು, ಜನಸಾಮಾನ್ಯರ ಕೈಗೆ ಪ್ರಜಾಪ್ರಭುತ್ವ ನೀಡಿದೆ. ಸರ್ವಾಧಿಕಾರಿಗಳನ್ನು ಜನ ಇತಿಹಾಸದ ಪುಟಗಳಿಗೆ ಸೇರಿದಂತೆ, ಮುಖವಾಣಿಯಾದ ಪತ್ರಿಗಳನ್ನು ಕೂಡ ಪಕ್ಕಕ್ಕೆ ಸರಿಸುವ ಕೆಲಸ ಓದುಗರು ಮಾಡಲಿದ್ದಾರೆ. ಹೀಗಾಗಿ ಪತ್ರಿಕೆಗಳು ಭ್ರಷ್ಟಾಚಾರವಿಲ್ಲದೆ, ಚಾರಿತ್ರ್ಯ ಇಟ್ಟುಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಸಮಾಜಕ್ಕೆ ಆಸ್ತಿಯಾಗಲಿದೆ ಎಂದು ಸಲಹೆ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಯಾವುದೇ ಕ್ಷೇತ್ರಗಳಲ್ಲಿ ಸಂಘಟನೆ ಪ್ರಬಲವಾಗಿದ್ದರೆ ಸಮರ್ಥವಾಗಿ ಕೆಲಸ ಮಾಡಬಹುದಾಗಿದೆ. ಇದರಿಂದಾಗಿ ಸಂಘಟನೆ ಬಲಗೊಳಿಸುವ ಕೆಲಸ ಆಗಬೇಕಿದೆ. ಯಾರಿಗೂ ಕೂಡ ಪ್ರತಿಷ್ಠೆ ಸರಿಯಲ್ಲ ಎಂದು ಹೇಳಿದರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ್‌ ತಗಡೂರುಮಾತನಾಡಿ, ವ್ಯಕ್ತಿ ಮುಖ್ಯವಲ್ಲ. ಸಂಘಟನೆ ಮುಖ್ಯ. ಕೆಲವರ ಸ್ವಾರ್ಥದಿಂದ ಸಂಘಟನೆಯಲ್ಲಿ ಆಗಾಗ ಕೆಲವೊಂದು ಬೆಳವಣಿಗೆ ಆಗುತ್ತಿರುತ್ತವೆ. ಒಬ್ಬ ವ್ಯಕ್ತಿಗೆ ಈ ಸಂಘಟನೆ ಅಡ ಇಡುವ ಪ್ರಶ್ನೆಯೇ ಇಲ್ಲ ಎಂದರು. ಈ ಸಂದರ್ಭ ರಾಜ್ಯ ಸಂಘದ ಪದಾಧಿಕಾರಿಗಳಾದ ಅಜ್ಜಮಾಡು ರಮೇಶ್‌ ಕುಟ್ಟಪ್ಪ, ಸೋಮಶೇಖರ್‌ ಕರಗೋಡು ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್‌.ರವಿಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ. ಪದ್ಮನಾಬ್‌ ಮತ್ತಿತರರು ಇದ್ದರು.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಮಾತನಾಡಿ, ಆ ಪಕ್ಷದಲ್ಲಿ ಒಗ್ಗಟ್ಟು ಅಸಾಧ್ಯ ಎಂಬುದು ಪದೇಪದೆ ಸಾಬೀತಾಗುತ್ತಿದೆ. ಮೊನ್ನೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಆಲಿಂಗನ ಕೂಡ ಒಂದೇ ನಿಮಿಷದ್ದಾಗಿದೆ. ಇದು ರಾಹುಲ್‌ ಗಾಂಧಿ ಬಲವಂತಕ್ಕೆ ಆಗಿರುವ ಆಲಿಂಗನ. ಸಮಾವೇಶ ಮುಗಿಯುತ್ತಿದ್ದಂತೆ ಬೇರೆ ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ ಎಂದು ಈಶ್ವರಪ್ಪ ನವರು ವ್ಯಂಗ್ಯವಾಡಿದರು.

ಹರ್ ಘರ್ ತಿರಂಗ ಶಿವಮೊಗ್ಗ ಜಿಲ್ಲೆಯಲ್ಲಿ ಸಕಲ ಸಿದ್ಧತೆ- ಡಾ.ಸೆಲ್ವಮಣಿ

0

ಹರ್ ಘರ್ ತಿರಂಗ್ ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಜಿಲ್ಲೆಯ ಎಲ್ಲಾ ಮನೆ, ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಹರ್ ಘರ್ ತಿರಂಗ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲು ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಪ್ರತಿ ಮನೆ ಮನೆಯಲ್ಲೂ ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಲು ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಘೋಷವಾಕ್ಯದಡಿ ಅಭಿಯಾನಕ್ಕೆ ಕರೆ ನೀಡಿದೆ. ಇದರಂತೆ ಜಿಲ್ಲೆಯ ಪ್ರತಿ ಮನೆಗಳ, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ರಾಷ್ಟ್ರಪ್ರೇಮದ ಪ್ರದರ್ಶನದ ಸಂಕೇತವಾದ ಈ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದ ಬಿ.ಎಸ್.ಯಡಿಯೂರಪ್ಪ

ಜಿಲ್ಲೆಯಲ್ಲಿ ಅಭಿಯಾನವನ್ನು ಯಶಸ್ವಿಯಾಗಿ ನೆರವೇರಿಸಲು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ವ್ಯವಸ್ಥಿತವಾಗಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರೇರಣೆ ನೀಡುವ ಕಾರ್ಯ ಮಾಡಲಾಗಿದೆ.

ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮನೆಗಳ ಮೇಲೆ ತ್ರಿವರ್ಣ ಧ್ಜಜವನ್ನು ಹಾರಿಸಲು ಸಿದ್ಧತೆಗಳನ್ನು ಮಾಡಲಾಗಿದೆ. ಎನ್‍ಆರ್‍ಎಲ್‍ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರು ಸ್ಥಳೀಯವಾಗಿ ಈ ಧ್ವಜಗಳನ್ನು ಸಿದ್ಧಪಡಿಸಿರುವುದು ವಿಶೇಷವಾಗಿದೆ. ಗ್ರಾಮ ಪಂಚಾಯತ್‍ಗಳಿಗೆ ಪೂರೈಕೆ ಮಾಡಲು ಶಿವಮೊಗ್ಗ ತಾಲೂಕಿನಲ್ಲಿ 16,700, ಭದ್ರಾವತಿ ತಾಲೂಕು 17500, ತೀರ್ಥಹಳ್ಳಿ 15000, ಹೊಸನಗರ 15ಸಾವಿರ, ಸಾಗರ 12ಸಾವಿರ, ಸೊರಬ 14ಸಾವಿರ ಮತ್ತು ಶಿಕಾರಿಪುರ ತಾಲೂಕಿನಲ್ಲಿ 19ಸಾವಿರ ಒಟ್ಟು 1,09,200 ಧ್ವಜಗಳನ್ನು ಸಿದ್ಧಪಡಿಸಲಾಗಿದೆ.

ಇದಲ್ಲದೆ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 80ಸಾವಿರ ತ್ರಿವರ್ಣ ಧ್ವಜಗಳನ್ನು ಪೂರೈಕೆ ಮಾಡಲಾಗಿದೆ. ಅಭಿಯಾನದ ಯಶಸ್ವಿಗೆ ಜಿಲ್ಲೆಯ ಎಲ್ಲಾ 11 ನಗರ ಸ್ಥಳೀಯ ಸಂಸ್ಥೆಗಳು ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿವೆ. ಜನಪ್ರತಿನಿಧಿಗಳು, ಸ್ವ ಸಹಾಯ ಸಂಘಗಳು, ವಿವಿಧ ಸಂಘ ಸಂಸ್ಥೆಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಿವೆ. ತ್ರಿವರ್ಣ ಧ್ವಜಕ್ಕೆ ತಲಾ 22ರೂಪಾಯಿ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳಿಂದ ಧ್ವಜವನ್ನು ಖರೀದಿಸಿ ಸ್ವಯಂ ಪ್ರೇರಣೆಯಿಂದ ತಮ್ಮ ಮನೆಗಳ ಮೇಲೆ ಪ್ರದರ್ಶಿಸಲು ಕೋರಲಾಗಿದೆ.

ಸಾರ್ವಜನಿಕರು ತ್ರಿವರ್ಣ ಧ್ವಜದ ಶಿಷ್ಟಾಚಾರಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಆಗಸ್ಟ್ 13ರಂದು ಹಾರಿಸಿದ ಬಾವುಟವನ್ನು ಪ್ರತಿದಿನ ಇಳಿಸುವ ಅಗತ್ಯವಿಲ್ಲ. ಹಾನಿಗೀಡಾದ ಧ್ವಜವನ್ನು ಮಾರಾಟ ಮಾಡಬಾರದು ಎಂದು ಅವರು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಯೋಜನಾ ನಿರ್ದೇಶಕ ಕರಿಭೀಮಣ್ಣ ಮೂಕಪ್ಪನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಉಪಸ್ಥಿತರಿದ್ದರು.

ನಾಡ ಹಬ್ಬಕ್ಕೆ ಕಾಡಿನಿಂದ ಬಂದ ಗಜಪಡೆ

0

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣ ಇಂದು ಆರಂಭವಾಗಲಿದೆ.

ಕಾಡಿನಿಂದ ನಾಡಿಗೆ ಇಂದು ದಸರಾ ಗಜಪಡೆ ಬರಲಿದೆ. ಗಜಪಯಣಕ್ಕೆ ಸಚಿವ ಎಸ್​.ಟಿ ಸೋಮಶೇಖರ್ ಚಾಲನೆ ನೀಡಲಿದ್ದಾರೆ.

ವೀರನಹೊಸಹಳ್ಳಿ ಅರಣ್ಯ ಪ್ರದೇಶದ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಬಳಿಕ ಲಾರಿಗಳ ಮೂಲಕ‌ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿಗೆ ಆನೆಗಳು ಆಗಮಿಸಲಿವೆ. ಈ ಭಾರಿ 14 ಆನೆಗಳು ಮೈಸೂರು ದಸರೆಯಲ್ಲಿ‌ ಭಾಗವಹಿಸಲಿವೆ.

ಈ ಭಾರಿ ಅದ್ದೂರಿ ಮತ್ತು ಸಾಂಪ್ರದಾಯಿಕ ದಸರೆಗೆ ಸರ್ಕಾರ ಸಿದ್ದತೆ ನಡೆಸಿದೆ.

ಹಿರೋಷಿಮಾ: ಮಾನವನ ಅತೀಬುದ್ಧಿಯ ಮೂರ್ಖತನ

0

ಆಗಸ್ಟ್ 6ರಂದು 75 ವರ್ಷಗಳ ಹಿಂದೆ ಜಪಾನ್ 1945 ರಲ್ಲಿ ವಿಶ್ವದಲ್ಲೇ ಅತ್ಯಂತ ಕರಾಳ ಘಟನೆಗೆ ಸಾಕ್ಷಿಯಾಗಿತ್ತು.
ಈ ದಿನ, ಜಪಾನಿನ ನಗರಗಳಾದ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಮೆರಿಕಾ ಪರಮಾಣು ಬಾಂಬ್‌ಗಳನ್ನು ಬೀಳಿಸಿತು. ಈ ವಿನಾಶದ ಬಳಿಕ ಜಪಾನ್‌ ಶರಣಾಗತಿಗೆ ಕಾರಣವಾಯಿತು.

ಲಭ್ಯ ಮಾಹಿತಿಯ ಪ್ರಕಾರ, 1945ರ ಆಗಸ್ಟ್​ 6ರಂದು ಹಿರೋಶಿಮಾ ಮೇಲೆ ಅಮೆರಿಕ ಅಣುಬಾಂಬ್ ದಾಳಿ ನಡೆಸಿತ್ತು. ಮಾರ್ಪಡಿಸಿದ ಬಿ -29 ಯುರೋನಿಯಂ ಗನ್ ಮಾದರಿಯ ಬಾಂಬ್ ಅನ್ನು ಲಿಟಲ್ ಬಾಯ್ ಎಂಬ ಹೆಸರಿನಿಂದ ಹಿರೋಷಿಮಾದಲ್ಲಿ ಬ್ರಿಟಿಷರ ಒಪ್ಪಿಗೆಯೊಂದಿಗೆ ಬೀಳಿಸಿತು. ಇದರಿಂದಾಗಿ ಹಿರೋಶಿಮಾದಲ್ಲಿ 1.40 ಲಕ್ಷ ಜನರು ಸಾವನ್ನಪ್ಪಿದ್ದರು.

ಅಂದರೆ ಹಿರೋಶಿಮಾದ ಜನಸಂಖ್ಯೆಯ ಶೇ. 40ರಷ್ಟು ಜನರು ಈ ದಾಳಿಯನ್ನು ಪ್ರಾಣ ಕಳೆದುಕೊಂಡರು.
ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕದವರು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿ ಮಾಡಿದ್ದು ಮಾನವ ಇತಿಹಾಸದ ಘೋರ ಕ್ಷಣಗಳಲ್ಲಿ ಒಂದು.

ಹಿರೋಶಿಮಾದಲ್ಲಿ ಮೊದಲು ದಾಳಿಯಾದರೆ, ನಾಗಸಾಕಿಯಲ್ಲಿ ಎರಡನೇ ದಾಳಿಯಾಗಿತ್ತು. ಹಿರೋಶಿಮಾದ ಅಣುಬಾಂಬ್ ದಾಳಿಯಾಗಿ ಇವತ್ತಿಗೆ ಸರಿಯಾಗಿ 75 ವರ್ಷ. 1945, ಆಗಸ್ಟ್ 6ರಂದು ಹಿರೋಶಿಮಾ ಮೇಲೆ ಅಣು ಬಾಂಬ್ ಬಿದ್ದಿತ್ತು. ನಾಗಸಾಕಿಯ ಮೇಲೆ ಆಗಸ್ಟ್ 9ರಂದು ಅಣುಬಾಂಬ್ ದಾಳಿ ನಡೆಸಲಾಗಿತ್ತು.

ಹಿರೋಶಿಮಾ ನಗರದಲ್ಲಿ ಆಗ ಇದ್ದ ಜನಸಂಖ್ಯೆ 3.5 ಲಕ್ಷ. ಬಾಂಬ್ ಬಿದ್ದ ಸ್ಥಳದಿಂದ 500 ಮೀಟರ್ ಸುತ್ತಮುತ್ತಲಿದ್ದ ಪ್ರತಿಯೊಬ್ಬ ವವ್ಯಕ್ತಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಅಣು ಬಾಂಬ್​ನಿಂದ ಉದ್ಭವಿಸಿದ ವಿಕಿರಣಗಳಿಂದಾಗಿ ಕ್ರಮೇಣ ಸಾವಿನ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 1.4 ಲಕ್ಷ ಜನರು ಬಲಿಯಾಗಿ ಹೋಗಿದ್ದರು.

ಇದರರ್ಥ ಹಿರೋಶಿಮಾ ಜನಸಂಖ್ಯೆಯ ಶೇ. 40 ಭಾಗ ಅಸುನೀಗಿದ್ದರು. ಈಗಲೂ ಅಲ್ಲಿ ವಿಕಿರಣದ ಪರಿಣಾಮವನ್ನು ಜನರು ಅನುಭವಿಸುತ್ತಲೇ ಇದ್ದಾರೆ. ಈಗ ಹುಟ್ಟುವ ಮಕ್ಕಳಲ್ಲೂ ಸಹ ಪರಿಣಾಮ ಕಂಡುಬರುತ್ತಿದೆ. ಮಕ್ಕಳು ಬುದ್ಧಿಮಾಂದ್ಯ , ವಿಕಲ ಚೇತನರಾಗಿ ಹುಟ್ಟುತ್ತಿದ್ದಾರೆ.

ಈಗ ಹಿರೋಶಿಮಾಗೆ ಹೋದರೆ ಅಲ್ಲಿ ಓರಿಗಮಿ ಪೇಪರ್​ನಿಂದ ಮಾಡಲಾದ ಕ್ರೇನ್​ಗಳು ಎಲ್ಲೆಡೆಯೂ ಕಾಣಸಿಗುತ್ತಯಂತೆ. ಈ ಕ್ರೇನ್​ಗಳಿಗೂ ಅಣುಬಾಂಬ್ ದಾಳಿಗೂ ಸಂಬಂಧ ಇದೆ.

ಜಪಾನ್ ದೇಶದ ಒಂದು ಜಾನಪದ ಕಥೆಯ ಪ್ರಕಾರ, ಒಂದು ಸಾವಿರ ಪೇಪರ್ ಕ್ರೇನ್​ಗಳನ್ನ ಮಾಡಿದರೆ ಅವರ ಒಂದು ಬಯಕೆ ಈಡೇರುತ್ತದಂತೆ. 12 ವರ್ಷದ ಸಡಾಕೋ ಸಸಾಕಿ ಎಂಬ ಬಾಲಕಿ ಈ ಪೇಪರ್ ಕ್ರೇನ್​ಗಳನ್ನ ತಯಾರಿಸಿದ್ದಳು. ಅಣುಬಾಂಬ್ ದಾಳಿಯಾದಾಗ ಈಕೆಗೆ 2 ವರ್ಷ. 10 ವರ್ಷಗಳ ಬಳಿಕ ವಿಕಿರಣದ ಪರಿಣಾಮವಾಗಿ ಈಕೆಗೆ ಲ್ಯೂಕೆಮಿಯಾ ಕಾಯಿಲೆ ತೋರಿತು. ಆ ಬಳಿಕ ಆಕೆ ರೋಗದಿಂದ ಮುಕ್ತವಾಗಲು ಜಾನಪದ ಕಥೆಯಂತೆ 1,000 ಓರಿಗಮಿ ಪೇಪರ್ ಕ್ರೇನ್​ಗಳನ್ನ ತಯಾರಿಸಿದ್ದಳು. ಆದರೆ, ದುರಂತವೆಂದರೆ ಆಕೆ ಬದುಕುಳಿಯಲಿಲ್ಲ.

ಲ್ಯೂಕೆಮಿಯಾ ವಕ್ಕರಿಸಿಕೊಂಡ ಎರಡೇ ತಿಂಗಳಲ್ಲಿ ಆಕೆ ಬಲಿಯಾಗಿದ್ದಳು. ಆಕೆಯ ಹೋರಾಟದ ಮನೋಭಾವಕ್ಕೆ ಸಂಕೇತವಾಗಿ ಜಪಾನೀಯರು ಈಗಲೂ ಪ್ರತಿ ವರ್ಷ ಪೇಪರ್ ಕ್ರೇನ್​​ಗಳನ್ನ ತಯಾರಿಸುತ್ತಾರೆ.

2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹಿರೋಶಿಮಾಗೆ ಭೇಟಿ ನೀಡಿದಾಗ ನಾಲ್ಕು ಪೇಪರ್ ಕ್ರೇನ್​ಗಳನ್ನ ತೆಗೆದುಕೊಂಡು ಹೋಗದ್ದರು. ಈಗಲೂ ಒಬಾಮ ಅವರ ಕ್ರೇನ್​ಗಳನ್ನ ಹಿರೋಶಿಮಾದ ಮ್ಯೂಸಿಯಂನಲ್ಲಿ ಸ್ಮರಣಿಕೆಯಾಗಿ ಇಡಲಾಗಿದೆ

ನಟ ಪ್ರಕಾಶ್ ರೈ ಕೊಡುಗೆಯ ಅಪ್ಪುಎಕ್ಸ್ ಪ್ರೆಸ್ ಅಂಬುಲೆನ್ಸ್

0

ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಸ್ಮರಣೆಯಲ್ಲಿ ಮೈಸೂರಿನ ಮಂಡಿ ಮೊಹಲ್ಲಾದ ಸಿಎಸ್‌ಐ ಹೋಲ್ಡ್ಸ್‌ವರ್ತ್ ಸ್ಮಾರಕ ಆಸ್ಪತ್ರೆಗೆ ನಟ ಪ್ರಕಾಶ್ ರೈ ‘ಅಪ್ಪು ಎಕ್ಸ್ ಪ್ರೆಸ್’ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು, ಪ್ರಕಾಶ್ ರಾಜ್ ಪ್ರತಿಷ್ಠಾನದಿಂದ ಅಪ್ಪು ಎಕ್ಸ್‌ಪ್ರೆಸ್ ಹೆಸರಿನ ಆಂಬ್ಯುಲೆನ್ಸ್‌ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದು ವರ್ಷದೊಳಗೆ ನೀಡುವ ಯೋಜನೆ ಇದೆ. ಇದಕ್ಕಾಗಿ ಕೈಜೋಡಿಸುವ ಸ್ನೇಹಿತರಿದ್ದಾರೆ. ಯಾರೂ ಕೊಡದಿದ್ದರೂ ನಾನು ದುಡಿಯುವ ಹಣದಲ್ಲೇ ಈ ಸತ್ಕಾರ್ಯ ಮಾಡುತ್ತೇನೆ ಎಂದು ಹೇಳಿದರು.

ಅಪ್ಪು ಬಾಲ್ಯದಿಂದಲೂ ನಾನು ನೋಡಿದ ಹುಡುಗ, ಆತ ಸಮಾಜಮುಖಿಯಾಗಿ ಬೆಳೆದ ವ್ಯಕ್ತಿ. ಆ ಎತ್ತರಕ್ಕೆ ಬೆಳೆದ ವ್ಯಕ್ತಿಯಿಂದ ಇನ್ನೊಂದಷ್ಟು ಕೆಲಸಗಳು ಆಗಬೇಕಾಗಿತ್ತು. ಆ ಜನಪರ ವ್ಯಕ್ತಿತ್ವವನ್ನು ಅನುಕರಿಸುವ ಭಾಗವಾಗಿ ಪ್ರತಿಷ್ಠಾನದಿಂದ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಾಮನ್ ವೆಲ್ತ್ ಕ್ರೀಡಾಕೂಟ: ಕುಸ್ತಿಪಟು ವಿನೇಶ್ ಪೊಗಟ್ ದಾಖಲೆ

0

ಕುಸ್ತಿಪಟು ವಿನೇಶ್ ಫೋಗಟ್ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆಯಿಂದ ಹಿಡಿದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸತತ 3 ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಹಿಳಾ ಕುಸ್ತಿ 53 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು, ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ.

ಬಿಎಸ್ಎನ್ಎಲ್ ಕಾರ್ಯದಕ್ಷತೆ ಇಲ್ಲದ ನೌಕರರಿಗೆ ಕಡ್ಡಾಯ ನಿವೃತ್ತಿ-ಅಶ್ವಿನಿ ವೈಷ್ಣವ್

0

ನಿರೀಕ್ಷಿತ ಕಾರ್ಯನಿರ್ವಹಣೆ ತೋರದ ಬಿಎಸ್ಸೆನ್ನೆಲ್ ಉದ್ಯೋಗಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗುವುದು ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ ನೀಡಿದ್ದಾರೆ.

ಬಿಎಸ್ಸೆನ್ನೆಲ್‍ನ ಹಿರಿಯ ಅಧಿಕಾರಿಗಳ ಜೊತೆಗೆ ನಡೆದ ಸಭೆಯ ವೇಳೆ ಸಚಿವರ ಮೇಲಿನ ಎಚ್ಚರಿಕೆ ಬಂದಿದೆ.
ನಿಮ್ಮಿಂದ ನಿರೀಕ್ಷಿಸಿದಂತೆ ನೀವು ಕಾರ್ಯನಿರ್ವಹಿಸಬೇಕು, ಇಲ್ಲದೇ ಇದ್ದರೆ ನೀವು ಮನೆಗೆ ತೆರಳಬೇಕು. ಇದು ಹೊಸ ನಿಯಮ, ಸರಿಯಾಗಿ ಕಾರ್ಯನಿರ್ವಹಿಸಿ, ಕೆಲಸ ಮಾಡದ ಜನರು ವಿಆರ್‌ಎಸ್ ತೆಗೆದುಕೊಂಡು ಮನೆಗೆ ಹೋಗಬಹುದು. ಆದರೆ ವಿಆರ್‌ಎಸ್ ಗೆ ವಿರೋಧಿಸಿದರೆ ನಾವು 56ಜೆ ನಿಯಮ (ಶೀಘ್ರ ನಿವೃತ್ತಿ ಆದೇಶಿಸುವ ನಿಯಮ) ಬಳಸಲಾಗುವುದು.ನಿಮ್ಮ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಇಲ್ಲದೇ ಹೋದಲ್ಲಿ ಮನೆಗೆ ತೆರಳಲು ಸಿದ್ಧವಾಗಿ, ಇದು ಸ್ಪಷ್ಟ, ಯಾವುದೇ ಸಂಶಯ ಬೇಡ ,’ಎಂದು ಸಚಿವರು ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ಖಾಸಗಿ ಟೆಲಿಕಾಂ ಸಂಸ್ಥೆಗಳಿಂದ ಇರುವ ಸ್ಫರ್ಧೆಯನ್ನು ಎದುರಿಸಲು ಉದ್ಯೋಗಿಗಳು ಸ್ಪರ್ಧಾತ್ಮಕ ಮನೋಭಾವ ಹೊಂದಿರಬೇಕು ಎಂದೂ ಸಚಿವರು ಹೇಳಿದರು.
ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದರ ಹೊರತಾಗಿ ಕಚೇರಿಗಳನ್ನು ಸ್ವಚ್ಛವಾಗಿ ಸಿಬ್ಬಂದಿ ಇರಿಸುತ್ತಿಲ್ಲ ಎಂದು ಸಚಿವರು ಹೇಳಿದರಲ್ಲದೆ ಝರ್ಸುಗದ್ದ ಇಲ್ಲಿನ ಬಿಎಸ್ಸೆನ್ನೆಲ್ ಎಕ್ಸ್ ಚೇಂಜ್ ಅನ್ನು ಉಲ್ಲೇಖಿಸಿ, ಅಲ್ಲಿನ ಕೊಳಕು ವಾತಾವರಣ ನೋಡಿ ನನಗೆ ನಾಚಿಕೆಯಾಯಿತು ಎಂದರು.

ಈ ರೀತಿ ಅಸಮರ್ಪಕ ನಿರ್ವಹಣೆ ಸಹಿಸಲಾಗದು. ಇಂತಹ ಸ್ಥಿತಿಯಿದ್ದರೆ ಹಿರಿಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದರು.
ಬಿಎಸ್ಸೆನ್ನೆಲ್ ಅನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು ದೊಡ್ಡ ಕ್ರಮ ಕೈಗೊಂಡ ನಂತರ ಇದೀಗ ಅದರ ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಮಾಸಿಕ ಪರಿಶೀಲಿಸುವುದಾಗಿ ಹೇಳಿದ ಅವರು ಏನೇ ಸಮಸ್ಯೆಯಿದ್ದರೂ ನಾವು ಬಿಎಸ್ಸೆನ್ನೆಲ್ ಪರ ನಿಂತೆವು. ಈಗ ಅದೇ ಬದ್ಧತೆಯನ್ನು 62000 ಸಿಬ್ಬಂದಿಗಳಲ್ಲಿ ಪ್ರತಿಯೊಬ್ಬರಿಂದ ನಿರೀಕ್ಷಿಸುತ್ತೇವೆ ಎಂದರು.

ಕಾಮನ್ ವೆಲ್ತ್ ಕ್ರೀಡಾಕೂಟ:ಭಾವಿನಾ ಬೆನ್ ಗೆ ಚಿನ್ನದ ಪದಕ

0

ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾಬೆನ್ ಪಟೇಲ್ ಅವರು ನಿನ್ನೆ ಶನಿವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪ್ಯಾರಾ ಟೇಬಲ್ ಟೆನಿಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಗುಜರಾತ್‌ನ 35 ವರ್ಷದ ಭಾವಿನಾಬೆನ್ ನೈಜೀರಿಯಾದ ಇಫೆಚುಕ್ವುಡೆ ಕ್ರಿಸ್ಟಿಯಾನಾ ಇಕ್ಪಿಯೋಯಿ ವಿರುದ್ಧ 3ರಿಂದ0 ನೇರ ಸೆಟ್‌ಗಳಲ್ಲಿ ಇಕ್ಪಿಯೊಯಿ ವಿರುದ್ಧ ಪ್ರಾಬಲ್ಯ ಸಾಧಿಸಿದರು.

ದೇಶದಲ್ಲಿ ಕೋವಿಡ್ ಸೋಂಕು ಇಳಿಕೆಆದರೆ ಸಾವಿನ ಸಂಖ್ಯೆ ಏರಿಕೆ

0

ದೇಶದಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಇನ್ನಷ್ಟು ಕಡಿಮೆ ಆಗಿದೆ. ಕಳೆದ 24 ಗಂಟೆಯಲ್ಲಿ 18,738 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ದೇಶದಲ್ಲಿ ಈವರೆಗೆ ಕೊರೋನಾ ಗೆ ಸಾವನ್ನಪ್ಪಿದವರ ಸಂಖ್ಯೆ 5,26,689ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 1,34,933 ಕೋವಿಡ್ ಸಕ್ರಿಯ ಪ್ರಕರಣಗಳಿದೆ. ಶೇ.98.50ರಷ್ಟು ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ದೇಶದಲ್ಲಿ ಇದುವರೆಗೆ 4,34,84,110 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 29,58,617 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೇಶದಲ್ಲಿ ಈವರೆಗೆ 2,06,21,79,411 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 3,72,910 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.

ಚುನಾಯಿತ ಉಪರಾಷ್ಟ್ರಪತಿ ಧನ್ಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

0

ನೂತನ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ರೈತನ ಮಗ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಮೋದಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ 6 ಉಪರಾಷ್ಟ್ರಪತಿ ಚುನಾವಣೆಗಳಿಗೆ ಹೋಲಿಸಿದರೆ ಅತ್ಯಧಿಕ ಶೇ. 74ರಷ್ಟು ಮತಗಳನ್ನು ಪಡೆದು ವಿಜಯಶಾಲಿಯಾದ ಧನಕರ್ ಅವರನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಧನಕರ್ ಅವರಿಗೆ ಮತದಾನ ಮಾಡಿದ ಎಲ್ಲ ಸಂಸದರಿಗೂ ಮೋದಿ ಧನ್ಯವಾದ ಹೇಳಿದರು.

ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ, ಅದ್ಬುತ ಕಾನೂನು ಜ್ಞಾನ ಹಾಗೂ ಬುದ್ಧಿಜೀವಿಯಾಗಿರುವ ರೈತನ ಮಗನನ್ನು ದೇಶದ ಉಪ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪಕ್ಷದ ಅದ್ಭುತ ಬೆಂಬಲದೊಂದಿಗೆ ಭಾರತದ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ಜಗದೀಪ್ ಧನಕರ್ ಜಿ ಅವರಿಗೆ ಅಭಿನಂದನೆಗಳು. ಅವರು ಅತ್ಯುತ್ತಮ ಉಪ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಅವರ ಬುದ್ಧಿವಂತಿಕೆಯಿಂದ ನಮ್ಮ ರಾಷ್ಟ್ರವು ಮಹತ್ತರವಾದ ಲಾಭವನ್ನು ಪಡೆಯುತ್ತದೆ ಎಂದು ಅವರು ಹೇಳಿದ್ದಾರೆ.

ಧನಕರ್ ಅವರು 528 ಮತಗಳನ್ನು ಪಡೆದರೆ, ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರು 182 ಮತಗಳನ್ನು ಪಡೆದರು.