ನಿರೀಕ್ಷಿತ ಕಾರ್ಯನಿರ್ವಹಣೆ ತೋರದ ಬಿಎಸ್ಸೆನ್ನೆಲ್ ಉದ್ಯೋಗಿಗಳನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗುವುದು ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಎಚ್ಚರಿಕೆ ನೀಡಿದ್ದಾರೆ.
ಬಿಎಸ್ಸೆನ್ನೆಲ್ನ ಹಿರಿಯ ಅಧಿಕಾರಿಗಳ ಜೊತೆಗೆ ನಡೆದ ಸಭೆಯ ವೇಳೆ ಸಚಿವರ ಮೇಲಿನ ಎಚ್ಚರಿಕೆ ಬಂದಿದೆ.
ನಿಮ್ಮಿಂದ ನಿರೀಕ್ಷಿಸಿದಂತೆ ನೀವು ಕಾರ್ಯನಿರ್ವಹಿಸಬೇಕು, ಇಲ್ಲದೇ ಇದ್ದರೆ ನೀವು ಮನೆಗೆ ತೆರಳಬೇಕು. ಇದು ಹೊಸ ನಿಯಮ, ಸರಿಯಾಗಿ ಕಾರ್ಯನಿರ್ವಹಿಸಿ, ಕೆಲಸ ಮಾಡದ ಜನರು ವಿಆರ್ಎಸ್ ತೆಗೆದುಕೊಂಡು ಮನೆಗೆ ಹೋಗಬಹುದು. ಆದರೆ ವಿಆರ್ಎಸ್ ಗೆ ವಿರೋಧಿಸಿದರೆ ನಾವು 56ಜೆ ನಿಯಮ (ಶೀಘ್ರ ನಿವೃತ್ತಿ ಆದೇಶಿಸುವ ನಿಯಮ) ಬಳಸಲಾಗುವುದು.ನಿಮ್ಮ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಇಲ್ಲದೇ ಹೋದಲ್ಲಿ ಮನೆಗೆ ತೆರಳಲು ಸಿದ್ಧವಾಗಿ, ಇದು ಸ್ಪಷ್ಟ, ಯಾವುದೇ ಸಂಶಯ ಬೇಡ ,’ಎಂದು ಸಚಿವರು ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.
ಖಾಸಗಿ ಟೆಲಿಕಾಂ ಸಂಸ್ಥೆಗಳಿಂದ ಇರುವ ಸ್ಫರ್ಧೆಯನ್ನು ಎದುರಿಸಲು ಉದ್ಯೋಗಿಗಳು ಸ್ಪರ್ಧಾತ್ಮಕ ಮನೋಭಾವ ಹೊಂದಿರಬೇಕು ಎಂದೂ ಸಚಿವರು ಹೇಳಿದರು.
ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದರ ಹೊರತಾಗಿ ಕಚೇರಿಗಳನ್ನು ಸ್ವಚ್ಛವಾಗಿ ಸಿಬ್ಬಂದಿ ಇರಿಸುತ್ತಿಲ್ಲ ಎಂದು ಸಚಿವರು ಹೇಳಿದರಲ್ಲದೆ ಝರ್ಸುಗದ್ದ ಇಲ್ಲಿನ ಬಿಎಸ್ಸೆನ್ನೆಲ್ ಎಕ್ಸ್ ಚೇಂಜ್ ಅನ್ನು ಉಲ್ಲೇಖಿಸಿ, ಅಲ್ಲಿನ ಕೊಳಕು ವಾತಾವರಣ ನೋಡಿ ನನಗೆ ನಾಚಿಕೆಯಾಯಿತು ಎಂದರು.
ಈ ರೀತಿ ಅಸಮರ್ಪಕ ನಿರ್ವಹಣೆ ಸಹಿಸಲಾಗದು. ಇಂತಹ ಸ್ಥಿತಿಯಿದ್ದರೆ ಹಿರಿಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದರು.
ಬಿಎಸ್ಸೆನ್ನೆಲ್ ಅನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು ದೊಡ್ಡ ಕ್ರಮ ಕೈಗೊಂಡ ನಂತರ ಇದೀಗ ಅದರ ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಮಾಸಿಕ ಪರಿಶೀಲಿಸುವುದಾಗಿ ಹೇಳಿದ ಅವರು ಏನೇ ಸಮಸ್ಯೆಯಿದ್ದರೂ ನಾವು ಬಿಎಸ್ಸೆನ್ನೆಲ್ ಪರ ನಿಂತೆವು. ಈಗ ಅದೇ ಬದ್ಧತೆಯನ್ನು 62000 ಸಿಬ್ಬಂದಿಗಳಲ್ಲಿ ಪ್ರತಿಯೊಬ್ಬರಿಂದ ನಿರೀಕ್ಷಿಸುತ್ತೇವೆ ಎಂದರು.