ಮೇಲ್ವರ್ಗದ ಪಂಕ್ತಿಗೆ ಮಾತ್ರ ಸೀಮಿತವಾದ ಭಕ್ತಿ ಪರಂಪರೆಯ ಚಕ್ರವ್ಯೂಹವನ್ನು ಭೇದಿಸಿ ಒಳ ಹೊಕ್ಕು ತಮ್ಮ ತನವನ್ನು ಮೆರೆದವರು ಕನಕದಾಸರು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಹೇಳಿದರು.
ಅವರು ತಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಕವಿಯೂ ಕಲಿಯೂ ಆದ ಕನಕದಾಸರು ತಮ್ಮ ವೈಚಾರಿಕತೆಯ ಪ್ರಖರತೆಯಿಂದದಾಸರಲ್ಲಿ ಕವಿ, ಕವಿಗಳಲ್ಲಿ ದಾಸರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದು ತಿಳಿಸಿದರು.
ಕೀರ್ತನೆ, ಮುಂಡಿಗೆ, ಮೋಹನತರಂಗಿಣಿ,ರಾಧಾನ್ಯ ಚರಿತೆ, ನಳಚರಿತ್ರೆ, ಹರಿಭಕ್ತಸಾರ, ಮೊದಲಾದ ಕೃತಿಗಳ ಮೂಲಕ ಜೀವಪರ ಸಂದೇಶಗಳನ್ನು ಬಿತ್ತಿದ್ದಾರೆ ಎಂದ ಅವರು ಸಮಾಜದಲ್ಲಿ ಅಂಕಾರ, ಡಾಂಬಿಕತನ, ಭಕ್ತಿ ಶೂನ್ಯತೆಯಿಂದ ಕೂಡಿದವರನ್ನು ಕಟುವಾಗಿ ಟೀಕಿಸಿದರು ಎಂದು ವಿವರಿಸಿದರು.
ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ ನಾಲಿಗೆಯ ಕೂರಿಗೆ ಮಾಡಿ ಬಿತ್ತಿರಯ್ಯ ಎನ್ನುವ ಚಿಂತನೆಯ ಮೂಲಕ ಸಮಾಜಕ್ಕೆ ಒಳಿತನ್ನು ಬಯಸಿದವರು ಕನಕದಾಸರು ಎಂದು ಬಣ್ಣಿಸಿದರು.
ಕುಲಕ್ಕಿಂತ ಗುಣ ಶ್ರೇಷ್ಠ ಎಂದು ಪ್ರತಿಪಾದಿಸಿದ ಅವರು ಗುಣವೇ ಮುಖ್ಯ ಹೊರತು ಕುಲವಲ್ಲ ಎಂದು ತೀವ್ರವಾಗಿ ಪ್ರತಿಪಾದಿಸಿದ್ದರು ಎಂದು ಮಾಹಿತಿ ನೀಡಿದರು.
ಕನಕದಾಸರ ಉಪದೇಶಗಳು ಸರ್ವಕಾಲಿಕ ಪ್ರಸ್ತುತತೆಯನ್ನು ಪಡೆದುಕೊಂಡಿವೆ ಎಂದು ಡಾ.ಹೆಗಡೆ ಹೇಳಿದರು.
ಉಪಪ್ರಾಂಶುಪಾಲರಾದ ಡಾ.ಆರ್.ಎಂ.ಜಗದೀಶ ಅಧ್ಯಕ್ಷತೆ ವಹಿಸಿ ಮಾತನಾಡಿ ಕನಕದಾದರು 14ನೇ ಶತಮಾನದಲ್ಲೇ ತಮ್ಮ ಉಪದೇಶಗಳ ಮೂಲಕ ಜಾತಿ ಪದ್ಧತಿ ನಿರ್ಮೂಲನೆಗೆ ಮುನ್ನುಡಿ ಬರೆದವರು ಕನಕದಾಸರು ಎಂದು ಗುಣಗಾನ ಮಾಡಿದರು.
ಐಕ್ಯೂಎಸಿ ಸಂಯೋಜಕ ಡಾ.ಎ.ಪಿ.ಓಂಕಾರಪ್ಪ, ದಾಸರ ಪದವನ್ನು ಹಾಡಿದರು. ಡಾ.ಬಿ.ಎಂ.ರವಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎನ್.ಡಿ.ರಮೇಶ ವಂದಿಸಿದರು.
ಕನಕರು ಕವಿಯೂ ಹೌದು ಕಲಿಯೂ ಹೌದು-ಡಾ.ಬಾಲಕೃಷ್ಣ ಹೆಗ್ಗಡೆ
ರೈತರಿಗೆ ಈಗ ಹೊಸ ಯೋಜನೆಯಲ್ಲಿ ₹3 ಲಕ್ಷದವರೆಗೆ ಸಹಾಯಧನ
ರೈತರ ಶ್ರೇಯೋಭಿವೃದ್ಧಿಗೆ ನಾನಾ ಯೋಜನೆಗಳನ್ನ ಜಾರಿಗೆ ತರುತ್ತಿರುವ ಕೇಂದ್ರ ಸರಕಾರ ಮತ್ತೊಂದು ಹೊಸ ಯೋಜನೆ ತಂದಿದ್ದು, ಈಗ ರೈತರಿಗೆ 3 ಲಕ್ಷ ಸಹಾಯಧನ ಸಿಗಲಿದೆ. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಈ ಯೋಜನೆ ಜಾರಿಗೆ ತಂದಿದ್ದು, ಹಸು, ಎಮ್ಮೆ, ಮೇಕೆ, ಮೀನು ಸಾಕುತ್ತಿರುವ ಎಲ್ಲ ರೈತರಿಗೆ ಸರಕಾರ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದೆ.
ಪಶುಸಂಗೋಪನೆಯನ್ನ ಉತ್ತೇಜಿಸುವ ಮತ್ತು ಹಾಲು, ಹಾಲಿನ ಉತ್ಪನ್ನಗಳು ಮತ್ತು ಮಾಂಸದ ಕೊರತೆಯನ್ನ ನೀಗಿಸುವ ಉದ್ದೇಶದಿಂದ ಕೇಂದ್ರವು ಈ ಯೋಜನೆಯನ್ನ ಪ್ರಾರಂಭಿಸಿದೆ. ಈ ಕಾರ್ಡ್ ಸಹಾಯದಿಂದ ರೈತರಿಗೆ ಸುಲಭವಾಗಿ ಸಾಲ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪಿಎಂ ಕಿಸಾನ್ ಬಳಸುವವರೂ ಈ ಕಾರ್ಡ್ ಪಡೆಯಬಹುದು. 7ರಷ್ಟು ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ ಪಡೆಯಬಹುದು. ಇನ್ನು ಒಂದು ವರ್ಷದೊಳಗೆ ಸಾಲ ಮರುಪಾವತಿ ಮಾಡುವವರಿಗೆ ಹೆಚ್ಚುವರಿ ಸಬ್ಸಿಡಿ ಕೂಡ ನೀಡಲಾಗುತ್ತದೆ. ರೈತರು ಐದು ವರ್ಷದೊಳಗೆ ಸಾಲ ಮರುಪಾವತಿ ಮಾಡಬೇಕು.
ಈ ಕಾರ್ಡ್ ಪಡೆಯಲು ಬಯಸುವ ರೈತರು ಮೊದಲು ಹತ್ತಿರದ ಬ್ಯಾಂಕ್ಗೆ ಹೋಗಿ. ನಂತರ ಅರ್ಜಿ ನಮೂನೆಯನ್ನ ತೆಗೆದುಕೊಂಡು ಸಂಬಂಧಿತ ವಿವರಗಳನ್ನ ನಮೂದಿಸಿ. ಇದಲ್ಲದೇ KYC ಗಾಗಿ ಕೆಲವು ದಾಖಲೆಗಳನ್ನ ಸಲ್ಲಿಸಬೇಕು. ಪರಿಶೀಲನೆಯ ನಂತರ 15 ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್, ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಜಮೀನುದಾಖಲೆಗಳು, ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನ ಒದಗಿಸಬೇಕು.
ದೇಶದಲ್ಲಿ ಕೊರೋನ ಸೋಂಕು ಏರಿಕೆ ಸೂಚನೆ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕೊಂಚ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 842 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.
ಮಹಾಮಾರಿಗೆ ಒಂದೇ ದಿನದಲ್ಲಿ 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಈವರೆಗೆ 5,30,520 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.
ದೇಶದಲ್ಲಿ 12,752 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಶೇ.98.78ರಷ್ಟು ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,41,21,538 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ನಿನ್ನೆ 1,38,075 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 2,19,77,93,278 ಡೋಸ್ ಲಸಿಕೆ ಹಾಕಲಾಗಿದೆ. 24 ಗಂಟೆಯಲ್ಲಿ 1,65,486 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ.
ಚನ್ನೈ ಬೆಂಗಳೂರು ಮೈಸೂರು ವಂದೇಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಉದ್ಘಾಟನೆ
ಚೆನ್ನೈ-ಬೆಂಗಳೂರು- ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ಕೊಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆಯಲ್ಲಿದ್ದರು.
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಲಿದೆ. ವಂದೇ ಭಾರತ್ 2.0¿ ರೈಲುಗಳು, ಕವಚ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ, ಬೆಂಗಳೂರು ನಗರ ಜಂಕ್ಷನ್ನಲ್ಲಿ ಒಂದೇ ಒಂದು ನಿಲುಗಡೆ ಇರುತ್ತದೆ. ಈ ರೈಲು, ಚೆನ್ನೈ ಸೆಂಟ್ರಲ್ನಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ. ಬೆಂಗಳೂರು ನಗರ ಜಂಕ್ಷನ್ಗೆ 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ 10:25ಕ್ಕೆ ಆಗಮಿಸುತ್ತದೆ. ಇಲ್ಲಿ ಐದು ನಿಮಿಷಗಳ ಕಾಲ ನಿಂತು, ಬೆಳಿಗ್ಗೆ 10.30 ಗಂಟೆಗೆ ಮೈಸೂರಿಗೆ ಹೊರಡುತ್ತದೆ. ನಂತರ ಮೈಸೂರು ಜಂಕ್ಷನ್ಗೆ 137.6 ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ 12.30ಕ್ಕೆ ತಲುಪುತ್ತದೆ.
ವಾಪಸ್ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 1.05ಕ್ಕೆ ಹೊರಟು 2.55ಕ್ಕೆ ಬೆಂಗಳೂರು ತಲುಪುತ್ತದೆ. ಐದು ನಿಮಿಷಗಳ ನಂತರ, ಅಂದರೆ 3:00 ಗಂಟೆಗೆ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ 7:35ಕ್ಕೆ ತಲುಪುತ್ತದೆ.
ಉದ್ಯೋಗ ಕಡಿತ ಈಗ ಅಮೇಜಾನ್ ಕಂಪನಿ ಉಪಕ್ರಮ
ಸಾಮಾಜಿಕ ಜಾಲತಾಣ ಕಂಪನಿಗಳಾದ ಮೆಟಾ ಹಾಗೂ ಟ್ವಿಟರ್ ಬೆನ್ನಲ್ಲೇ ಇದೀಗ ಅಮೆರಿಕದ ಟೆಕ್ ಮತ್ತು ಇ-ಕಾಮರ್ಸ್ ಕಂಪನಿ ಅಮೆಜಾನ್ ಕೂಡ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ ಎಂದು ವರದಿಯಾಗಿದೆ.
ಆರ್ಥಿಕ ಕುಸಿತದ ಈ ಸಂದರ್ಭದಲ್ಲಿ ಕಂಪನಿಗೆ ಲಾಭದಾಯಕವಾಗಿರದ ಉಪಕ್ರಮಗಳನ್ನು ತಡೆಹಿಡಿಯಬೇಕಾದ ಅನಿವಾರ್ಯತೆ ಇದೆ ಎಂದು ಅಮೆಜಾನ್ ಹೇಳಿದೆ.
ನೇಮಕಾತಿ ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಕಳೆದ ವಾರವಷ್ಟೇ ಅಮೆಜಾನ್ ಘೋಷಿಸಿತ್ತು. ತಮ್ಮನ್ನು ಕಂಪನಿ ಕೆಲಸದಿಂದ ವಜಾಗೊಳಿಸಿದೆ ಎಂದು ಅಮೆಜಾನ್ ಉದ್ಯೋಗಿ, ಸಾಫ್ಟ್ವೇರ್ ಎಂಜಿನಿಯರ್ ಜೇಮಿ ಝಾಂಗ್ ಎಂಬುವವರು ಸಂದೇಶ ಪ್ರಕಟಿಸಿದ್ದಾರೆ.
ಅಮೆಜಾನ್ ರೋಬೊಟಿಕ್ಸ್ ಎಐನಲ್ಲಿ ನನ್ನ ಒಂದೂವರೆ ವರ್ಷದ ಉದ್ಯೋಗ ಮುಕ್ತಾಯಗೊಂಡಿದೆ. ಅಚ್ಚರಿಯ ವಜಾದೊಂದಿಗೆ ಉದ್ಯೋಗ ಕೊನೆಗೊಂಡಿದೆ. ನಮ್ಮ ಇಡೀ ರೋಬೊಟಿಕ್ಸ್ ತಂಡವನ್ನೇ ವಜಾಗೊಳಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ಅಮೆಜಾನ್ನ ರೋಬೊಟಿಕ್ಸ್ ತಂಡದಲ್ಲಿ 3,766 ಉದ್ಯೋಗಿಗಳಿದ್ದಾರೆ. ವಾಸ್ತವದಲ್ಲಿ ಎಷ್ಟು ಉದ್ಯೋಗಿಗಳು ಇದ್ದಾರೆ ಎಂಬುದನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಿದೆ ಎಂದು ತಿಳಿದುಬಂದಿದೆ.
ಉದ್ಯೋಗಿಗಳ ವಜಾ ಕುರಿತಾಗಿ ಅಮೆಜಾನ್ನಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಲಾಭದಾಯಕವಲ್ಲದ ಘಟಕಗಳಲ್ಲಿ ಕೆಲಸ ಮಾಡುವವರು ಬೇರೆ ಉದ್ಯೋಗ ಹುಡುಕಿಕೊಳ್ಳುವಂತೆ ಅಮೆಜಾನ್ ಸೂಚಿಸಿತ್ತು.
ಯಾಕೆಂದರೆ ಯಾವುದೇ ಕ್ಷಣದಲ್ಲಿ ಅವರ ಪ್ರಾಜೆಕ್ಟ್ಗಳು ಕೊನೆಗೊಳ್ಳುವ ಸಾಧ್ಯತೆ ಇದೆ.
ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ ಸಂಬಂಧ ಒಂದು ದಿನ ‘ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲು ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 2022ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ’ ಪಂಚಾಯಿತಿಗಳನ್ನಾಗಿಸಲು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಹಾಗೂ 01 ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು ಸುತ್ತೋಲೆಯನ್ನುಹೊರಡಿಸಲಾಗಿದೆ.
ಸದರಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ‘ಸ್ಥಳೀಯ ಸಮುದಾಯ, ಗ್ರಾಮಸ್ಥರು ಮತ್ತು ಅಧಿಕಾರೇತರರ ಸಹಕಾರದೊಂದಿಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಹಾಗೂ ಈ ಅಧೀನ ಕಛೇರಿ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು, ಮುಖ್ಯಶಿಕ್ಷಕರುಗಳು ಕೋವಿಡ್ ಸುರಕ್ಷತಾ ಕ್ರಮವನ್ನು.. ಅನುಸರಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ:14.11.2022ರಿಂದ ದಿನಾಂಕ:24.01.2023ರ ವರಗೆ ನಡೆಯಲಿರುವ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ’ದಲ್ಲಿ ಭಾಗವಹಿಸಿ, ಇದರೊಂದಿಗೆ ನೀಡಲಾಗಿರುವ ಕಾರ್ಯ ಚಟುವಟಿಕೆಗಳ ವೇಳಾ ಪಟ್ಟಿಯಂತ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ನೆರವು ಸಹಕಾರವನ್ನು ನೀಡಲು ಸೂಚಿಸಿದ್ದಾರೆ.
ನಿತ್ಯ ಒಂದು ತಾಸು ಹೆಚ್ಚಿಗೆ ಕೆಲಸಮಾಡಿ- ಬೊಮ್ಮಾಯಿ
ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ನೌಕರರಿಗೆ ಕರೆ ನೀಡಿದರು.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7 ನೇ ವೇತನ ಆಯೋಗ ರಚನೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರುಗಳ ನಿಯೋಗವು ಇಂದು ಮುಖ್ಯ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಕೆಳಹಂತದವರೆಗೆ ಈ ಕೆಲಸ ಆಗಬೇಕು.
ಮುಂದಿನ ಕೆಲಸಗಳನ್ನು ನನಗೆ ಬಿಡಿ. ಎಲ್ಲರೂ ಒಂದಾಗಿ ಸುಭಿಕ್ಷ ನಾಡನ್ನು ಕಟ್ಟೋಣ. ಪ್ರಾಮಾಣಿಕತೆ, ನಿಷ್ಠೆ ಹಾಗು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಿ. ಬಡವರಿಗೆ, ಜನಪರವಾದ ಕೆಲಸ ಮಾಡಿದರೆ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ನವ ಕರ್ನಾಟಕ ದಿಂದ ನವ ಭಾರತ ನಿರ್ಮಿಸೋಣ ಎಂದರು. ದೇಶದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕನಸಿಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡಬೇಕು ಎಂದರು.
ಕರ್ನಾಟಕದಲ್ಲಿ ವೇತನ ಆಯೋಗವನ್ನು ಐದು ವರ್ಷವಾದ ಕೂಡಲೇ ಘೋಷಣೆಯಾಗಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ ಎಂದರು.
ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತದೆ. ಸರ್ಕಾರಿ ನೌಕರರಾಗಿ ಸೇವೆಗೆ ಸೇರಿದ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ವಿರುತ್ತದೆ. ಸಮಯ ಮತ್ತು ಹಣ ಎರಡೂ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದರೆ ಬದುಕಿಗೆ ಪ್ರೇರಣೆ. ಅದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಕೂಡ ಇದಕ್ಕೆ ಒತ್ತಾಸೆಯಾಗಿದ್ದರು. ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರೂ ಒತ್ತಾಯ ಮಾಡಿದ್ದರು ಎಂದರು.
ಅತ್ಯಂತ ಪ್ರಾಮಾಣಿಕ, ನಿಷ್ಠಾವಂತ ಅಧಿಕಾಯಾಗಿದ್ದ ಡಾ: ಸುಧಾಕರ್ ರಾವ್ ದಕ್ಷತೆಯಿಂದ ಕೆಲಸ ಮಾಡಿದವರು. ಪ್ರಭಾವಕ್ಕೆ ಮಣಿಯದವರು.
ನ್ಯಾಯಸಮ್ಮತವಾದ 7 ನೇ ವೇತನ ಆಯೋಗದ ವರದಿ ಬರಲಿ ಎಂದು ಶುದ್ಧಹಸ್ತ, ಶುದ್ಧ ಅಂತ:ಕರಣವುಳ್ಳ ಸುಧಾಕರ್ ರಾವ್ ಅವರ ಆಯ್ಕೆ ಆಗಿದೆ ಎಂದರು. ಇದಕ್ಕೆ ನೌಕರರ ಸಹಕಾರ ಕೂಡ ಅಗತ್ಯ. ಇದನ್ನು ಸಕಾರಗೊಳಿಸಿ ಎಲ್ಲರಿಗೂ ಒಳ್ಳೆಯದು ಆಗಬೇಕು. ಚಿಂತೆ ಮಾಡಬೇಡಿ. ಮುಂದಿನ ಸರ್ಕಾರ ನಮ್ಮದೇ ಬರಲಿದೆ. ಇದರ ಅನುಷ್ಠಾನ ನಾವೇ ಮಾಡುತ್ತೇವೆ ಎಂದರು.
ಡಿಸೆಂಬರ್ ಒಳಗೆ ಮುಂಗಾರು ಬೆಳೆವಿಮೆ ಇತ್ಯರ್ಥಕ್ಕೆ ಕೃಷಿ ಸಚಿವರ ಸೂಚನೆ
ಡಿಸೆಂಬರ್ ಅಂತ್ಯದೊಳಗೆ ಪೂರ್ವ ಮುಂಗಾರು ಹಂಗಾಮಿನ ಬೆಳೆವಿಮೆ ಪರಿಹಾರ ಇತ್ಯರ್ಥಕ್ಕೆ ಬಿಸಿಪಿ ಸೂಚನೆ
ಬೆಂಗಳೂರು,ನ .10: 2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ರೈತರ ಬೆಳೆ ವಿಮೆ ಪರಿಹಾರವನ್ನು ಡಿಸೆಂಬರ್ ಅಂತ್ಯದೊಳಗೆ ಇತ್ಯರ್ಥ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೃಷಿ ಸಚಿವರೂ ಆಗಿರುವ ಚಿತ್ರದುರ್ಗ,ಗದಗ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಬೆಳೆವಿಮೆ ಪರಿಹಾರ ಇತ್ಯರ್ಥ ಸಂಬಂಧ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.
ಸಭೆಯಲ್ಲಿ 2022-23 ನೇ ಸಾಲಿನ ಬೆಳೆ ವಿಮೆ ಇತ್ಯರ್ಥ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡ ಸಚಿವರು ಯಾವುದೇ ಕಾರಣಕ್ಕೂ ಬೆಳೆವಿಮೆ ಪರಿಹಾರ ತಡವಾಗಬಾರದು.ರೈತರು ವಿಮೆಗಾಗಿ ಕಾದುಕುಳಿತಿರುತ್ತಾರೆ.ಸಂಬಂಧಿಸಿದ ಇನ್ಸೂರೆನ್ಸ್ ಕಂಪೆನಿಗಳೊಂದಿಗೆ ನಿರಂತರ ಸಂಪರ್ಕವನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು.ಆಧಾರ್ ಕಾರ್ಡ್ ಲಿಂಕ್ ಆಗದ ಇನ್ನೂ ಹೆಚ್ಚಿನ ರೈತರು ಇರುವುದನ್ನು ಗಮನಿಸಿದ ಸಚಿವರು ಆದಷ್ಟು ಕೂಡಲೇ ರೈತರು ಆಧಾರ್ ಕಾರ್ಡ್ ಬೆಳೆವಿಮೆಗೆ ಸರಿಯಾಗಿ ಲಿಂಕ್ ಆಗಿದಿಯೇ ಎಂಬುದನ್ನು ಪರಿಶೀಲಿಸಬೇಕು.ಇನ್ಸೂರೆನ್ಸ್ ಕಂಪೆನಿಗಳೊಂದಿಗೆ ಆಧಾರ್ನಲ್ಲಿ ಏನಾದರೂ ತಿದ್ದುಪಡಿ ಆಗಿದ್ದಲ್ಲಿ ಅದನ್ನು ಜರೂರಾಗಿ ಗಮನಕ್ಕೆ ತರಬೇಕು.ಬೆಳೆವಿಮೆಗೆ ಇನ್ಸೂರೆನ್ಸ್ ಮಾಡಿಸಾಯಿತು ಎಂಬುದಷ್ಟನ್ನೇ ಗಮನಿಸದೇ ಸರಿಯಾಗಿ ಆಧಾರ್ ಕಾರ್ಡ್ ಮಾಹಿತಿ ಲಿಂಕ್ ಆಗಿದಿಯೇ ಇಲ್ಲವೇ ಮಾಹಿತಿ ಸರಿಯಿದೆಯೇ ಇಲ್ಲವೇ ಎಂಬುದನ್ನು ರೈತರು ಖಚಿತಪಡಿಸಿಕೊಳ್ಳಬೇಕು.ಅಲ್ಲದೇ ಇನ್ಸೂರೆನ್ಸ್ ಕಂಪೆನಿಗಳು ಇನ್ಸೂರೆನ್ಸ್ ಮಾಡಿಸಿಕೊಂಡು ಸುಮ್ಮನಾದರಷ್ಟೇ ಸಾಲದು.ರೈತನಿಗೆ ನಿಯಮಬದ್ಧವಾಗಿ ಬೆಳೆವಿಮೆ ಪರಿಹಾರ ಒದಿಸುವಲ್ಲಿ ನ್ಯಾಯವಾಗಿ ಕೆಲಸ ಮಾಡಬೇಕು.ಒಂದುವೇಳೆ ಆಧಾರ್ ಅಥವಾ ಇನ್ಯಾವುದೇ ಮಾಹಿತಿ ರೈತರಿಂದಾಗಲೀ ಅಥವಾ ಅಧಿಕಾರಿಗಳಿಂದಾಗಲೀ ಕಣ್ತಪ್ಪಿನಿಂದಲೋ ಅಥವಾ ಇನ್ಯಾವುದಾದರೂ ಕಾರಣಕ್ಕೆ ತಪ್ಪಿದ್ದಲ್ಲಿ ಅದನ್ನು ಪಡೆಯುವ ಕೆಲಸ ಮಾಡಬೇಕು.ಇನ್ಸೂರೆನ್ಸ್ ಮಾಡಿಸಿಕೊಂಡರಾಯಿತಷ್ಟೇ ಎನ್ನುವ ಅಸಡ್ಡೆಯನ್ನು ಯಾವ ಇನ್ಸೂರೆನ್ಸ್ ಕಂಪೆನಿಗಳೂ ಮಾಡಬಾರದು.ಸರಿಯಾಗಿ ಬೆಳೆ ವಿಮೆಪರಿಹಾರ ಇತ್ಯರ್ಥವಾಗುವಂತೆ ಕೃಷಿ ಅಧಿಕಾರಿಗಳೊಂದಿಗೆ ಕೈಜೋಡಿಸಬೇಕೆಂದು ಬಿಸಿಪಿ ತಾಕೀತು ಮಾಡಿದರು.
ಮುಂಗಾರು ಹಂಗಾಮಿನ ಬೆಳೆಗಳಿಗೆ ಜನವರಿಯಲ್ಲಿ ವಿಮೆಪರಿಹಾರ ಇತ್ಯರ್ಥಪಡಿಸಲು ಪ್ರಕ್ರಿಯೆ ಆರಂಭಿಸುವಂತೆ ಸಭೆಯಲ್ಲಿ ಸಚಿವರು ಸೂಚಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಶಿವಯೋಗಿ ಕಳಸದ,ಆಯುಕ್ತರಾದ ಶರತ್ ಪಿ, ಬೆಳೆವಿಮೆಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಮತ್ತಿತ್ತರ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾಂತಾರ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟ ದಾಖಲೆ
ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಹಲವು ದಾಖಲೆ ಬರೆಯುತ್ತ ಗಳಿಕೆಯಲ್ಲೂ ಕೋಟಿಕೋಟಿ ಬಾಚುತ್ತ ಹೋಗ್ತಿರೋ ಸಿನಿಮಾ ಕಾಂತಾರ ಈಗ ಹೊಸ ದಾಖಲೆಬರೆದಿದೆ. ಕರ್ನಾಟಕದಲ್ಲಿ ಒಂದು ಕೋಟಿ ಕಾಂತಾರಾ ಟಿಕೆಟ್ ಸೇಲ್ ಆಗಿದ್ದು ಈ ದಾಖಲೆ ವಿಚಾರವನ್ನು ಸ್ವತಃ ಹೊಂಬಾಳೆ ಮೂವಿಸ್ ಘೋಷಿಸಿದೆ.
ಸೆಪ್ಟೆಂಬರ್ 30 ರಂದು ತೆರೆಕಂಡ ಕಾಂತಾರ ಸಿನಿಮಾ ವಿಶ್ವದ ಸಿನಿಪ್ರೇಮಿಗಳನ್ನು ಸೆಳೆದಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಎಲ್ಲ ಭಾಷೆಯಲ್ಲೂ ಹಲವು ಹೊಸ ದಾಖಲೆ ಬರೆಯುತ್ತ ಸಾಗಿದೆ.
ಬಾಲಿವುಡ್ ನಲ್ಲಿ ರಾಮಸೇತು ಸಿನಿಮಾವನ್ನು ಮೀರಿಸುವ ಗಳಿಕೆ ಕಾಣ್ತಿರೋ ಕಾಂತಾರ ಈಗ ಕನ್ನಡದಲ್ಲಿ ಹೊಸ ದಾಖಲೆ ಬರೆದಿದೆ. ಈ ವಿಚಾರವನ್ನು ಸ್ವತಃ ಕಾಂತಾರ ಸಿನಿಮಾದ ಮೇಕರ್ಸ್ ಹೊಂಬಾಳೆ ಮೂವಿಸ್ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಒಂದು ಕೋಟಿ ಟಿಕೇಟ್ಸ್ ಮಾರಾಟವಾಗಿದೆ ಎಂದು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೊಂಬಾಳೆ ಫಿಲ್ಸ್ಮ್ ಪೋಸ್ಟರ್ ರಿಲೀಸ್ ಮಾಡಿದೆ.
ಸದ್ಯ ಸಿನಿಮಾ ರಿಲೀಸ್ ಆದ ಒಂದು ತಿಂಗಳ ಬಳಿಕವೂ ಕಾಂತಾರ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಇದುವರೆಗೂ ಕಾಂತಾರ ಯಾವ ಯಾವ ದಾಖಲೆ ಮುರಿದಿದೆ ಅನ್ನೋದನ್ನು ಗಮನಿಸೋದಾದರೇ ಐದನೇ ವಾರದ ಪ್ರದರ್ಶನದಲ್ಲೇ ಕಾಂತಾರ ಬಾಹುಬಲಿ 2 ಆಫೀಸ್ ಗಳಿಕೆಯ ದಾಖಲೆಯನ್ನು ಮುರಿದಿದೆ. ಈಗ ಕರ್ನಾಟಕದಲ್ಲಿ ಇದುವರೆಗೂ ತೆರೆಕಂಡ ಸಿನಿಮಾಗಳ ಪೈಕಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎಂಬ ಖ್ಯಾತಿಗೂ ಕಾಂತಾರ ಪಾತ್ರವಾಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಪ್ರದರ್ಶನದ ಐದನೇ ವಾರದಲ್ಲಿ 40 ಕೋಟಿ ಗಳಿಸಿತ್ತು. ಅದೇ ಕಾಂತಾರ ಸಿನಿಮಾ ಐದನೇ ವಾರದಲ್ಲಿ 65 ಕೋಟಿ ಗಳಿಸಿದೆ.
ಸದ್ಯ ಸಿನಿಮಾದ ನಾಯಕ ರಿಶಬ್ ಶೆಟ್ಟಿ ವಿಶ್ವದಾದ್ಯಂತ ಓಡಾಡಿಕೊಂಡು ಸಿನಿಮಾ ಪ್ರಮೋಶನ್ ನಲ್ಲಿ ತೊಡಗಿದ್ದು, ರಿಶಬ್ ಗೆ ಈಗಾಗಲೇ ಟಾಲಿವುಡ್ ಸೇರಿದಂತೆ ಬಾಲಿವುಡ್ ನಿಂದಲೂ ಸಿನಿಮಾ ಆಫರ್ ಬಂದಿದೆಯಂತೆ. ಆದರೆ ಸದ್ಯ ರಿಶಬ್ ಬೇರೆ ಭಾಷೆಯ ಸಿನಿಮಾಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು ಕನ್ನಡದಲ್ಲೇ ಇನ್ನಷ್ಟು ಸಿನಿಮಾಗಳನ್ನು ನಿರ್ಮಿಸಲು ಚಿಂತನೆ ನಡೆಸಿರೋದಾಗಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ನಟ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಕಾಂತಾರ ಕಂತೆ ಕಂತೆ ದಾಖಲೆಗಳ ಜೊತೆ ಮುಂದೇ ಸಾಗುತ್ತಿದ್ದು, ಚಿತ್ರತಂಡಸ ಸಂಭ್ರಮ ದುಪ್ಪಟ್ಟಾಗಿದೆ.
ವಿಚಾರಣೆಗೆ ಹೇಳಿಕೆ ನೀಡಿದ ಡಾ.ಶಿವಮೂರ್ತಿ ಶರಣರು
ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ ಫೋಕ್ಸೋ ಪ್ರಕರಣ ಸಾಕಷ್ಟು ಕುತೂಹಲಕಾರಿ ತಿರುವು ಪಡೆದುಕೊಳ್ಳುತ್ತಿದೆ.
ಡಿವೈಎಸ್ಪಿ ಅನಿಲ್ ರಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಈ ಮಧ್ಯೆ ಸ್ವಾಮಿ ನೀಡಿದ ಕಿರುಕುಳದ ಬಗ್ಗೆ ಇಬ್ಬರು ಅಪ್ರಾಪ್ತ ಬಾಲಕಿಯರು ಹೇಳಿಕೆ ನೀಡಿದ್ದರೇ ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಮುರುಘಾಶ್ರೀ ಹೇಳಿಕೆ ನೀಡಿರುವುದು ಚಾರ್ಜಶೀಟ್ ನಲ್ಲಿ ದಾಖಲಾಗಿದೆ.
ತಮ್ಮ ಮೇಲಿನ ಆರೋಪದ ಬಗ್ಗೆ ತನಿಖೆ ವೇಳೆ ಆರೋಪಿ ಮುರುಘಾಶ್ರೀ ಹೇಳಿಕೆ ನೀಡಿದ್ದಾರೆ. 4-5ವರ್ಷಗಳಿಂದ ವಾರ್ಡನ್ ಆಗಿ ರಶ್ಮಿ ನೇಮಕ ಆಗಿದೆ. ರಶ್ಮಿ ಯಾವಾಗಿನಿಂದ ಮಠದಲ್ಲಿದ್ದರು ಎಂಬುದು ಗೊತ್ತಿಲ್ಲ. ಹಾಸ್ಟೆಲ್, ವಿದ್ಯಾರ್ಥಿನಿಯರಿಗೆ ಸಂಬಂಧಿತ ವಿಚಾರ ಮ್ಯಾನೇಜರ್ ಪರಮಶಿವಯ್ಯ ಜತೆ ಚರ್ಚಿಸುತ್ತಿದ್ದರು. ಹಾಸ್ಟೆಲ್ ವಿದ್ಯಾರ್ಥಿನಿಯರು ನಮಗೆ ಪ್ರೀತಿಯಿಂದ ಅಪ್ಪಾಜಿ ಎನ್ನುತ್ತಾರೆ. ನಮ್ಮ ಖಾಸಗಿ ಕೊಠಡಿಗೆ ಯಾರಿಗೂ ಪ್ರವೇಶ ಇಲ್ಲ. ಸ್ವಚ್ಚತೆಯ ಕೆಲಸಕ್ಕೆ ನಾವು ಮಕ್ಕಳನ್ನು ಬಳಸಲ್ಲ. ಸಂತ್ರಸ್ತ ವಿದ್ಯಾರ್ಥಿನಿಯರ ಬಗ್ಗೆ ನನಗೆ ವೈಯಕ್ತಿಕ ಪರಿಚಯ ಇಲ್ಲ. ಗುಂಪಿನಲ್ಲಿ ಬಂದು ವಿದ್ಯಾರ್ಥಿಗಳು ಭೇಟಿ ಆಗುತ್ತಿದ್ದರು. ಭೇಟಿಗೆ ಬಂದವರಿಗೆ ಹಣ್ಣು, ಡ್ರೈಫ್ರೂಟ್ಸ್, ಚಾಕೊಲೇಟ್ ಗಳನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದೆವು.
ಮತ್ತು ಬರುವ ಪದಾರ್ಥ ಬೆರೆಸಿ ಮಕ್ಕಳಿಗೆ ನೀಡಿಲ್ಲ. ಮದ್ಯಪಾನ ಮಾಡುವ ಅಭ್ಯಾಸ ನಮಗೆ ಇಲ್ಲ. ಕೆಲ ಹೆಣ್ಣು ಮಕ್ಕಳ ಬಗ್ಗೆ ನಮಗೆ ಸಂಪರ್ಕ ಕಲ್ಪಿಸಿ ಮಾತಾಡಿದ್ದು ತಿಳಿದಿಲ್ಲ ಎಂದಿದ್ದಾರೆ.
ಅಲ್ಲದೇ ನಮ್ಮ ಖಾಸಗಿ ಕೊಠಡಿ ಸ್ವಚ್ಛತೆಗೆ ಮಹಾಲಿಂಗ, ಕರಿಬಸಪ್ಪ, ಪ್ರಜ್ವಲ್ ಎಂಬುವರನ್ನು ಮಾತ್ರ ಉಪಯೋಗಿಸುತ್ತಿದ್ದೆವು. 23/07/2022 ರಿಂದ 28/07/2022ರವರೆಗೆ ಭಕ್ತರ ಕೋರಿಕೆಯಂತೆ ಮಾರಿಷಸ್ ದೇಶಕ್ಕೆ ತೆರಳಿದ್ದೆವು. ಆಗ ಅಕ್ಕಮಹಾದೇವಿ ಹಾಸ್ಟೆಲ್ ನ ಇಬ್ಬರು ಮಕ್ಕಳು ಕಾಣೆ ಆಗಿದ್ದರು. ಮಠದ ಆಡಳಿತಾಧಿಕಾರಿ ಆಗಿದ್ದ ಎಸ್ ಕೆ ಬಸವರಾಜನ್, ಪತ್ನಿ ಸೌಭಾಗ್ಯ ಕಾಟನ್ ಪೇಟೆ ಠಾಣೆಗೆ ತೆರಳಿ ತಮ್ಮ ಸುಪರ್ದಿಗೆ ಪಡೆದಿದ್ದಾರೆ.
1994ರಿಂದ 2007ರವರೆಗೆ ಬಸವರಾಜನ್ ಮಠದ ಆಡಳಿತಾಧಿಕಾರಿ ಆಗಿದ್ದರು. ಆಗ MLA, MLC ಚುನಾವಣೆಗೆ ಸ್ಪರ್ದಿಸಿ ಮಠದ ಹಣ ದುರುಪಯೋಗ. ಮಠದ ಹಣದಿಂದ ಆಸ್ತಿ ಖರೀಧಿಸಿ ಮಠಕ್ಕೆ ವಂಚನೆ. ಹೀಗಾಗಿ, ಮಠದ ಆಡಳಿತಾಧಿಕಾರಿ ಸ್ಥಾನದಿಂದ ವಜಾ ಮಾಡಲಾಗಿತ್ತು.
2022ರಲ್ಲಿ ಮಠದ ವಿರುದ್ಧದ ಸಿವಿಲ್ ದಾವೆ ಹಿಂಪಡೆಯುವ ಭರವಸೆ ನೀಡಿದ್ದರು. 2022ರ ಡಿಸೆಂಬರ್ ನಲ್ಲಿ ಮಠದ ಆಡಳಿತಾಧಿಕಾರಿಯಾಗಿ ನೇಮಿಸಿದೆ.
ಹಾಸ್ಟೆಲ್ ವಿದ್ಯಾರ್ಥಿಗಳನ್ನು ಲೈಂಗಿಕ ವಾಗಿ ಬಳಸಿಕೊಂಡಿಲ್ಲ. ನನ್ನ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು.ಷಡ್ಯಂತ್ರ, ಪ್ರಚೋದಿತವಾಗಿದ್ದು ಸತ್ಯಕ್ಕೆ ದೂರಾಗಿವೆ.
ಈ ದೇಶದ ಕಾನೂನು ಗೌರವಿಸುವ ದೃಷ್ಠಿಯಿಂದ ಸ್ವ ಇಚ್ಛೆಯಿಂದ ನಿಮ್ಮೆದುರು ಹಾಜರಾಗಿದ್ದೇನೆ ಎಂದು ಚಿತ್ರದುರ್ಗದ ಮುರುಘಾ ಸ್ವಾಮಿಗಳು ಹೇಳಿಕೆ ನೀಡಿದ್ದಾರೆ.
ಇನ್ನು ಈ ಹೇಳಿಕೆ ಒಳಗೊಂಡ ಚಾರ್ಜಶೀಟ್ ನ್ನು ಡಿವೈಎಸ್ಪಿ ಅನಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದ ಸ್ಥಳ ಮಹಜರು ವೇಳೆ 2 ಮೊಬೈಲ್, 4 ಜತೆ ಕಪನಿ, 10 ಲಂಗೋಟಿ ವಶಕ್ಕೆ ಪಡೆದಿರುವ ಪೊಲೀಸರು ಇದರಲ್ಲಿ ಕೆಲವನ್ನು ವೈದ್ಯಕೀಯ ಪರೀಕ್ಷೆ ಗೊಳಪಡಿಸಲಿದ್ದಾರೆ.
