ಚೆನ್ನೈ-ಬೆಂಗಳೂರು- ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ಕೊಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆಯಲ್ಲಿದ್ದರು.
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಲಿದೆ. ವಂದೇ ಭಾರತ್ 2.0¿ ರೈಲುಗಳು, ಕವಚ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ, ಬೆಂಗಳೂರು ನಗರ ಜಂಕ್ಷನ್ನಲ್ಲಿ ಒಂದೇ ಒಂದು ನಿಲುಗಡೆ ಇರುತ್ತದೆ. ಈ ರೈಲು, ಚೆನ್ನೈ ಸೆಂಟ್ರಲ್ನಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ. ಬೆಂಗಳೂರು ನಗರ ಜಂಕ್ಷನ್ಗೆ 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ 10:25ಕ್ಕೆ ಆಗಮಿಸುತ್ತದೆ. ಇಲ್ಲಿ ಐದು ನಿಮಿಷಗಳ ಕಾಲ ನಿಂತು, ಬೆಳಿಗ್ಗೆ 10.30 ಗಂಟೆಗೆ ಮೈಸೂರಿಗೆ ಹೊರಡುತ್ತದೆ. ನಂತರ ಮೈಸೂರು ಜಂಕ್ಷನ್ಗೆ 137.6 ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ 12.30ಕ್ಕೆ ತಲುಪುತ್ತದೆ.
ವಾಪಸ್ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 1.05ಕ್ಕೆ ಹೊರಟು 2.55ಕ್ಕೆ ಬೆಂಗಳೂರು ತಲುಪುತ್ತದೆ. ಐದು ನಿಮಿಷಗಳ ನಂತರ, ಅಂದರೆ 3:00 ಗಂಟೆಗೆ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ 7:35ಕ್ಕೆ ತಲುಪುತ್ತದೆ.
