Friday, February 13, 2026
Friday, February 13, 2026
Home Blog Page 113

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಣಂದೂರು ಲಿಂಗಪ್ಪನವರಿಗೆ ಅಭಿನಂದನೆ

0

2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಸನ್ಮಾನ್ಯ ಶ್ರೀ ಕೋಣಂದೂರು ಲಿಂಗಪ್ಪ (ಸಾಮಾಜಿಕ ಕ್ಷೇತ್ರ) ರವರನ್ನು ಜಿಲ್ಲಾಡಳಿತ ಹಾಗೂ ಇಲಾಖೆ ಪರವಾಗಿ ಆತ್ಮೀಯವಾಗಿ ಅಭಿನಂದಿಸಲಾಯಿತು.

ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ., ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್ ಹೆಚ್., ರಂಗಾಯಣ ಹಾಗೂ ಇಲಾಖೆಯ ಸಿಬ್ಬಂದಿಗಳು, ಕುಟುಂಬದವರು ಹಾಜರಿದ್ದರು.

Backward Classes Welfare Department ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಂದ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ/ ಶುಲ್ಕ ವಿನಾಯಿತಿಗೆ ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಣೆ

0

Backward Classes Welfare Department 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲೆಮಾರಿ/ಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ನ.15ರವರೆಗೆ ವಿಸ್ತರಿಸಲಾಗಿದೆ.

ಆಸಕ್ತರು ವೆಬ್‌ಸೈಟ್ https://ssp.postmatric.karnataka.gov.in ಮೂಲಕ ಅ.31ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ https://bcwd.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Backward Classes Welfare Department ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ: 8050770005, ಇ-ಮೇಲ್ bcwdhelpline@gmail.com ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇ-ಮೇಲ್ postmatrichelp@karnataka.gov.in ಅಥವಾ ದೂ.ಸಂ: 1902 ಗೆ ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಕಣ್ಣಿನ ಪೊರೆ ಮತ್ತು ಕಣ್ಷಿನ ಇತರ ಕಾಯಿಲೆಗಳ ಚಿಕಿತ್ಸಾ ಶಿಬಿರ ನಡೆಸಲು ಆಸಕ್ತಿಯಿರುವ ಅರ್ಹ ಸೇವಾ ಸಂಸ್ಥೆಗಳಿಂದ ಅರ್ಜಿ ಸ್ವೀಕಾರ ಗಡುವು ವಿಸ್ತರಣೆ

0

ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು 2025-26ನೇ ಸಾಲಿಗೆ ಆರೋಗ್ಯ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ‘ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಇತರ ಕಣ್ಣಿನ ಖಾಯಿಲೆಗಳ ಚಿಕಿತ್ಸಾ’ ಕಾರ್ಯಕ್ರಮಕ್ಕಾಗಿ ಆಸಕ್ತಿಯುಳ್ಳ ಹಾಗೂ ಅನುಭವವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ (ಎನ್‌ಜಿಓ) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನ.06ರವರೆಗೆ ವಿಸ್ತರಣೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗೆ ವೆಬ್‌ಸೈಟ್ https://kppp.karnataka.gov.in/#/portal/portal-home ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ, ದೂ.ಸಂ.: 8197094440/08182-222382 ಗಳನ್ನು ಸಂಪರ್ಕಿಸುವುದು.

Sardar Vallabhbhai Patel ಜಿಲ್ಲಾಡಳಿತದಿಂದ “ರಾಷ್ಟ್ರೀಯ ಏಕತಾ ದಿನ, ಪ್ರಮಾಣವಚನ ಸ್ವೀಕಾರ

0

Sardar Vallabhbhai Patel ಉಕ್ಕಿನ ಮನುಷ್ಯ “ಸರ್ದಾರ್ ವಲ್ಲಭಭಾಯಿ ಪಟೇಲ್” ಅವರ ಜನ್ಮದಿನವಾದ ಇಂದು “ರಾಷ್ಟ್ರೀಯ ಏಕತಾ ದಿನ”ದ ನಿಮಿತ್ತ ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ಅವರು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಏಕತೆಯ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲಾ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು

Kannada Rajyotsava ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ಕನ್ನಡ ಯುವಕರ ಸಂಘದಲ್ಲಿ ರಾಜ್ಯೋತ್ಸವ

0

Kannada Rajyotsava ಶಿವಮೊಗ್ಗ ನಗರದ ಜೈಲ್ ರಸ್ತೆಯ ಸಂಗೊಳ್ಳಿ ರಾಯಣ್ಣ ಕನ್ನಡ ಯುವಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಮ್ ಶ್ರೀಕಾಂತ್ ರವರು ಕನ್ನಡ ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ಸಂಗೊಳ್ಳಿ ರಾಯಣ್ಣ ಕನ್ನಡ ಅಧ್ಯಕ್ಷ ಚಂದ್ರು ಗೆಡ್ಡೆ, ಪ್ರಮುಖರಾದ ದಿನೇಶ್ ರಾವ್,ಸಿ ರವಿ , ಎಚ್ ಪಿ ಗಿರೀಶ್, ಎಸ್ ಬಸವರಾಜ್, ದಿವಾಕರ್, ನಾಗರಾಜ್ ಗೆಡ್ಡೆ, ಸಂದೀಪ್, ಮಂಜುನಾಥ್ ,ಚೇತನ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು‌

Klive Special Article ಕವಿ ಕೋಗಿಲೆಗಳ ಪುಣ್ಯಾರಾಮ -ಲೇ: ಡಾ.ರವಿ ಎಂ. ಸಿದ್ಲಿಪುರ

0

“ಲೇ: ಡಾ.ರವಿ ಎಂ . ಸಿದ್ಲಿಪುರ.ಕನ್ನಡ ಉಪನ್ಯಾಸಕರು. ಪ್ರಥಮ ದರ್ಜೆ ಕಾಲೇಜು.ರಾಣಿಬೆನ್ನೂರು.

Klive Special Article ಭಾಷೆಯೆಂಬುದು ಕೇವಲ ಸಂವಹನದ ಸಾಧನವಲ್ಲ; ಅದೊಂದು ಜನಾಂಗದ ಸಾಂಸ್ಕೃತಿಕ ಸ್ಮೃತಿ, ಸಾಮೂಹಿಕ ಪ್ರಜ್ಞೆ ಮತ್ತು ಅಸ್ಮಿತೆಯ ಜೀವಂತ ರೂಪ. ಒಂದು ನಾಡಿನ ಚರಿತ್ರೆಯುದ್ದಕ್ಕೂ ಅದರ ಜನರು ತಮ್ಮನ್ನು ತಾವು ಕಂಡುಕೊಂಡ ಬಗೆ, ನಾಡಿನೊಂದಿಗೆ ಸ್ಥಾಪಿಸಿಕೊಂಡ ಸಂಬಂಧ ಮತ್ತು ಭವಿಷ್ಯದ ಕುರಿತು ಕಂಡ ಕನಸುಗಳು ಆಯಾ ಕಾಲದ ಸಾಹಿತ್ಯದಲ್ಲಿ, ವಿಶೇಷವಾಗಿ ಕಾವ್ಯದಲ್ಲಿ, ಸ್ಪಷ್ಟವಾಗಿ ಅರಳಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ, ನಮ್ಮ ಕವಿಗಳು ಕನ್ನಡಿಗರ ಹೃದಯಬಡಿತವನ್ನು ಅಕ್ಷರಕ್ಕಿಳಿಸಿದ್ದಲ್ಲದೆ, ತಮ್ಮ ಕಾವ್ಯದ ಮೂಲಕ ನಾಡಿನ ಪ್ರಜ್ಞೆಯನ್ನೇ ರೂಪಿಸಿ, ಮುನ್ನಡೆಸಿದ್ದಾರೆ. ಕನ್ನಡದ ಅಸ್ಮಿತೆ ಎಂಬುದು ಸ್ಥಿರವಾದ ಶಿಲ್ಪವಲ್ಲ; ಅದು ನಿರಂತರವಾಗಿ ಹರಿಯುವ, ರೂಪಾಂತರಗೊಳ್ಳುವ ಜೀವಂತ ಚೇತನ ಎಂಬುದನ್ನು ಸಾರಿದ್ದಾರೆ.
ಕನ್ನಡ ಪ್ರಜ್ಞೆ ಹುಟ್ಟಿದ್ದು ಹೇಗೆ? ಅದು ಕೇವಲ ರಾಜಕೀಯ ಆಂದೋಲನದ ಫಲವೇ? ಖಂಡಿತ ಇಲ್ಲ. ಹರಿದು ಹಂಚಿಹೋಗಿದ್ದ ಒಂದು ಜನಾಂಗದ ಎದೆಯಲ್ಲಿ ‘ನಾವೆಲ್ಲ ಒಂದು’ ಎಂಬ ಕಿಡಿಯನ್ನು ಹೊತ್ತಿಸಿ, ಅದನ್ನು ಸ್ವಾಭಿಮಾನದ ಜ್ವಾಲೆಯಾಗಿ ರೂಪಿಸಿದ್ದು ನಮ್ಮ ಕವಿಗಳ ಕಾವ್ಯವಾಣಿ. ಈ ಪ್ರಜ್ಞೆಯ ವಿಕಾಸದ ಹೆಜ್ಜೆ ಗುರುತುಗಳು ಗೋವಿಂದ ಪೈಗಳಿಂದ ಹಿಡಿದು ನಿಸಾರ್ ಅಹಮದ್‌ರವರೆಗಿನ ಮಹಾನ್ ಕವಿಗಳ ಕಾವ್ಯಗಳಲ್ಲಿ ಅಚ್ಚಳಿಯದಂತೆ ದಾಖಲಾಗಿವೆ.
ಅವುಗಳ ಅಧ್ಯಯನವು ಕೇವಲ ಕವಿಗಳ ಪಟ್ಟಿಯಲ್ಲ ಅಥವಾ ಕವಿತೆಗಳ ವಿಶ್ಲೇಷಣೆಯಲ್ಲ. ಬದಲಿಗೆ, ಕನ್ನಡಿಗರು ತಮ್ಮನ್ನು ತಾವು ಮರುವ್ಯಾಖ್ಯಾನಿಸಿಕೊಂಡ ಬಗೆಗಿನ ಬೌದ್ಧಿಕ ಚರಿತ್ರೆ. ಇಲ್ಲಿ ಕಾವ್ಯವು ಕನ್ನಡ ಪ್ರಜ್ಞೆಯ ಬಹುಧ್ವನಿಗಳ ಸಂಕಥನವಾಗಿ ಅನಾವರಣಗೊಳ್ಳುತ್ತದೆ. ಈ ಮೂಲಕ, ನುಡಿಯ ಸೌಂದರ್ಯಕ್ಕೆ ಮೈಮರೆತ ವೈಯಕ್ತಿಕ ಪ್ರೇಮದಿಂದ ಹಿಡಿದು, ಅದನ್ನು ತಾಯಿಯ ಸ್ಥಾನದಲ್ಲಿಟ್ಟು ಪೂಜಿಸಿದ ಭಕ್ತಿಯವರೆಗೆ; ಹಂಚಿಹೋದ ನಾಡನ್ನು ಒಂದುಗೂಡಿಸಲು ಮೊಳಗಿದ ರಾಜಕೀಯ ಜಾಗೃತಿಯಿಂದ ಹಿಡಿದು, ಏಕೀಕರಣದ ನಂತರದ ವಾಸ್ತವದ ಸಂಘರ್ಷದವರೆಗೆ; ಗತವೈಭವದ ಕೊಂಡಾಟದಿಂದ ಹೊರಬಂದು ಕಠೋರ ಆತ್ಮವಿಮರ್ಶೆಯಲ್ಲಿ ತೊಡಗುವುದರಿಂದ ಹಿಡಿದು, ಸರ್ವರನ್ನೂ ಒಳಗೊಂಡ, ಬಹುತ್ವದ ನೆಲೆಯಲ್ಲಿ ನಿತ್ಯೋತ್ಸವವನ್ನು ಆಚರಿಸುವ ಪ್ರಬುದ್ಧತೆಯವರೆಗೆ- ಸಾಗಿಬಂದ ಸುದೀರ್ಘ ಹಾಗೂ ಸಂಕೀರ್ಣ ಪಯಣವನ್ನು ಐದು ಹಂತಗಳಲ್ಲಿ ಈ ಬರಹವು ಅನಾವರಣಗೊಳಿಸುತ್ತದೆ.
Klive Special Article ಹಂತ ೧: ಪ್ರೇಮದಿಂದ ಪೂಜೆಗೆ – ಅಸ್ಮಿತೆಯ ಭಾವನಾತ್ಮಕ ಅಡಿಪಾಯ
ಕನ್ನಡ ಪ್ರಜ್ಞೆಯ ಜಾಗೃತಿಯ ಮೊದಲ ಹಂತವು ನುಡಿಯ ಮೇಲಿನ ಸಹಜ ಪ್ರೇಮ ಮತ್ತು ಅದರ ಸೌಂದರ್ಯದ ಆರಾಧನೆಯಿಂದ ಆರಂಭವಾಗುತ್ತದೆ. ಆನಂದಕಂದರು ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು!’ ಎಂದು ಹಾಡಿದಾಗ, ಇಲ್ಲಿ ಕನ್ನಡವು ವೀಣೆಯ ನಾದ, ಕೃಷ್ಣನ ಮುರಲಿಯ ಗಾನ, ಗಿಳಿಯ ಮೆಲುಮಾತಿನಂತಹ ನಿರ್ಮಲ ಸೌಂದರ್ಯಾನುಭೂತಿಯಾಗಿ ಮೈದಳೆಯುತ್ತದೆ. ಇದು ಭಾಷೆಯ ಮಾಧುರ್ಯಕ್ಕೆ ಮನಸೋತ ಕವಿಪ್ರೇಮಿಯ ಉದ್ಗಾರವಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸಲು, ಕೇವಲ ಈ ಭಾಷೆಯ ಸೌಂದರ್ಯ ಪ್ರೇಮವು ಸಾಕಾಗಲಿಲ್ಲ. ಆಗ ಕನ್ನಡ ಪ್ರಜ್ಞೆಯು ವಿಕಾಸಗೊಂಡು ಮುಂದಿನ ಹಂತವನ್ನು ತಲುಪಿತು; ರಾಷ್ಟ್ರಕವಿ ಗೋವಿಂದ ಪೈಗಳು ಮತ್ತು ಹುಯಿಲಗೋಳ ನಾರಾಯಣರಾಯರು ಈ ಪ್ರೇಮವನ್ನು ‘ಪೂಜೆ’ಯ ಸ್ಥಾಯಿಗೆ ಏರಿಸಿದರು. ಪೈಗಳು ತಮ್ಮ ‘ಕನ್ನಡಿಗರ ತಾಯಿ’ ಕವಿತೆಯಲ್ಲಿ ನಾಡನ್ನು ‘ಜನ್ಮದಾತೆ’ಯಾಗಿಯೂ, ನುಡಿಯನ್ನು ‘ತಾಯಿ’ಯಾಗಿಯೂ ದೈವೀಕರಿಸಿದರು. ಹೀಗೆ ಜನ್ಮದಾತೆ, ಮಾತೆ, ಜನನಿ, ತನುಜಾತೆ, ತಾಯಿ ಎಂದು ಕರೆದುಕೊಳ್ಳುವ ಮೂಲಕ ನಾಡು-ನುಡಿಯೊಂದಿಗಿರುವ ಕರುಳುಬಳ್ಳಿಯ ಸಂಬಂಧವನ್ನು ಪ್ರತಿಪಾದಿಸಿದರು.
ಆನಂದಕಂದರ ಗಿಳಿ-ಕೋಗಿಲೆಗಳ ಜಾಗದಲ್ಲಿ, ಗೋವಿಂದ ಪೈಗಳು ಮತ್ತು ಹುಯಿಲಗೋಳ ನಾರಾಯಣರಾಯರು ಶಾತವಾಹನ, ಚಾಲುಕ್ಯ, ಹೊಯ್ಸಳರಂತಹ ರಾಜವಂಶಗಳನ್ನು; ಪಂಪ, ರನ್ನ, ಜಕ್ಕಣರಂತಹ ಕಲಾಶಿಲ್ಪಿಗಳನ್ನು; ರಾಮ, ಹನುಮರಂತಹ ಪೌರಾಣಿಕ ವ್ಯಕ್ತಿತ್ವಗಳನ್ನು ತಂದು ನಿಲ್ಲಿಸಿದರು. ‘ರಾಜನ್ಯರಿಪು ಪರಶುರಾಮನಮ್ಮನ ನಾಡು’ (ಹುಯಿಲಗೋಳ) ಮತ್ತು ‘ತಾಯೆ ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ’ (ಪೈ) ಎಂಬಂತಹ ಸಾಲುಗಳು ನಾಡಿಗೊಂದು ಅಖಂಡ ಮತ್ತು ವೈಭವಪೂರ್ಣ ಚಾರಿತ್ರಿಕ ಪರಂಪರೆಯೊಂದನ್ನು ಕಟ್ಟಿಕೊಟ್ಟವು. ಈ ವೈಭವೀಕರಣವು ಆ ಕಾಲದ ಐತಿಹಾಸಿಕ ಅಗತ್ಯವಾಗಿತ್ತು. ಅದು ಕನ್ನಡಿಗರಲ್ಲಿ ‘ನಮಗೊಂದು ಶ್ರೇಷ್ಠ ಇತಿಹಾಸವಿದೆ, ನಾವೆಲ್ಲರೂ ಒಂದು’ ಎಂಬ ಸ್ವಾಭಿಮಾನವನ್ನು ಜಾಗೃತಗೊಳಿಸಿ, ಸಾಮೂಹಿಕ ಅಸ್ಮಿತೆಯನ್ನು ರೂಪಿಸಲು ಭದ್ರ ಬುನಾದಿ ಹಾಕಿತು.
ಈ ಐತಿಹಾಸಿಕ ಪರಂಪರೆಯನ್ನು ಪೂಜಿಸುವ, ನಾಡಿನ ಸಾಂಸ್ಕೃತಿಕ ಮತ್ತು ತಾತ್ವಿಕ ಶ್ರೇಷ್ಠತೆಯನ್ನು ಸಂಭ್ರಮಿಸುವ ಪ್ರಜ್ಞೆಯು ಮತ್ತಷ್ಟು ವಿಸ್ತಾರಗೊಂಡು, ಹಲವು ಕವಿಗಳಲ್ಲಿ ಸಮಗ್ರ ರೂಪವನ್ನು ಪಡೆಯಿತು. ಈ ನಿಟ್ಟಿನಲ್ಲಿ, ಚೆನ್ನವೀರ ಕಣವಿಯವರ ‘ವಿಶ್ವಭಾರತಿಗೆ ಕನ್ನಡದಾರತಿ’ ಕವಿತೆಯು, ಗೋವಿಂದ ಪೈ ಮತ್ತು ಹುಯಿಲಗೋಳರು ಆರಂಭಿಸಿದ ನಾಡಿನ ವೈಭವೀಕರಣದ ಪರಂಪರೆಯನ್ನು ವ್ಯವಸ್ಥಿತವಾಗಿ ಮುಂದುವರಿಸುತ್ತದೆ. ರಾಜಮನೆತನಗಳು, ಮತ-ಧರ್ಮ ಸ್ಥಾಪಕರು, ಶರಣ-ದಾಸರು, ಚಾರಿತ್ರಿಕ ಮತ್ತು ಸಾಹಿತ್ಯಕ ಮಹಿಳೆಯರು(ಈ ವೈಶಿಷ್ಟ್ಯವು ಈ ಬರಹದಲ್ಲಿ ವಿಶ್ಲೇಷಿಸಲಾದ ಉಳಿದ ಪದ್ಯಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವುದಿಲ್ಲ) ಮತ್ತು ಕವಿಶ್ರೇಷ್ಠರವರೆಗಿನ ನಾಡಿನ ಸಮಗ್ರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪಟ್ಟಿಮಾಡುವ ಮೂಲಕ, ಈ ಕವಿತೆಯು ಕನ್ನಡ ಪ್ರಜ್ಞೆಯ ಬೇರುಗಳನ್ನು ಪೂಜಿಸುವ ಭಾವವನ್ನು ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ. ಆದರೆ ಇದರ ನಿಜವಾದ ಮಹತ್ವವಿರುವುದು, ‘ವಿಶ್ವಭಾರತಿಗೆ ಕನ್ನಡದಾರತಿ’ ಎಂಬ ಶೀರ್ಷಿಕೆ ಮತ್ತು ಅಂತಿಮ ಸಾಲುಗಳಲ್ಲಿ ವ್ಯಕ್ತವಾಗುವ ಸಮನ್ವಯ ದೃಷ್ಟಿಯಲ್ಲಿ. ಇದು ಕನ್ನಡದ ಅಸ್ಮಿತೆಯು ಸಂಕುಚಿತ ಪ್ರಾದೇಶಿಕವಾದವಲ್ಲ, ಬದಲಿಗೆ ಅದು ವಿಶಾಲ ರಾಷ್ಟ್ರೀಯ ಪ್ರಜ್ಞೆಗೆ ಸಲ್ಲಿಸುವ ಒಂದು ಗೌರವಯುತ ಕೊಡುಗೆ ಎಂಬುದನ್ನು ಸಾರುತ್ತದೆ.
Klive Special Article ಈ ಹಂತದ ಪರಿಪೂರ್ಣ ಅಭಿವ್ಯಕ್ತಿಯೇ ಕುವೆಂಪು ಅವರ ನಾಡಗೀತೆ. ಇಲ್ಲಿ ಕರ್ನಾಟಕವು ಕೇವಲ ಸುಂದರ ನಾಡಲ್ಲ, ಅದು ‘ಜಯ ಭಾರತ ಜನನಿಯ ತನುಜಾತೆ’. ಈ ಒಂದೇ ಸಾಲು ಕನ್ನಡ ಅಸ್ಮಿತೆಯನ್ನು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಬೆಸೆದು ಅದಕ್ಕೊಂದು ಉದಾತ್ತತೆಯನ್ನು ನೀಡುತ್ತದೆ. ಗೋವಿಂದ ಪೈಗಳು ನಾಡನ್ನು ‘ವಿದ್ಯಾರಣ್ಯರ ಹೊನ್ನಗನಿ’ ಎಂದರೆ, ಕುವೆಂಪು ಅದನ್ನು ‘ಭೂದೇವಿಯ ಮಕುಟದ ನವಮಣಿಯೆ, ಗಂಧದ ಚಂದದ ಹೊನ್ನಿನ ಗಣಿಯೆ’ ಎಂದು ಕರೆದು, ಪ್ರಕೃತಿ ಮತ್ತು ಸಂಪತ್ತಿನ ದೈವೀಕರಣ ಮಾಡುತ್ತಾರೆ. ‘ಕಪಿಲ ಪತಂಜಲ ಗೌತಮ ಜಿನನುತ’ ಹಾಗೂ ‘ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರ ಮಧ್ವರ ದಿವ್ಯಾರಣ್ಯ’ ಎಂಬ ಸಾಲುಗಳ ಮೂಲಕ, ನಾಡಿನ ತಾತ್ವಿಕ ಮತ್ತು ಧಾರ್ಮಿಕ ಪರಂಪರೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದು, ಕನ್ನಡ ಪ್ರಜ್ಞೆಗೆ ಒಂದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಬುನಾದಿಯನ್ನು ಹಾಕಿಕೊಡುತ್ತಾರೆ.
ಹಂತ ೨: ಜಾಗೃತಿಯ ಕಹಳೆ – ಏಕೀಕರಣದ ರಾಜಕೀಯ ಹೋರಾಟ
ಭಾವನಾತ್ಮಕ ನೆಲೆಗಟ್ಟು ಗಟ್ಟಿಯಾದ ಬಳಿಕ, ಕನ್ನಡ ಚೇತನವು ಏಕೀಕರಣದ ರಾಜಕೀಯ ಗುರಿಯತ್ತ ಸಾಗಿತು. ಹುಯಿಲಗೋಳರ ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಯು ಕೇವಲ ಹೊಗಳಿಕೆಯ ಹಾಡಾಗಿ ಉಳಿಯದೆ, ಕರ್ನಾಟಕ ಏಕೀಕರಣ ಚಳವಳಿಯ ಪ್ರೇರಕ ಶಕ್ತಿಯಾಯಿತು. ಇದರಲ್ಲಿ ಬರುವ ‘ಬದುಕು ಬಲುವಿನ ನಿಧಿಯು ಸದಭಿಮಾನದ ಗೂಡು’ ಎಂಬ ಸಾಲು, ಏಕೀಕರಣದಿಂದಾಗುವ ಪ್ರಯೋಜನಗಳನ್ನು ಸಾರುವ ಸ್ಪಷ್ಟ ರಾಜಕೀಯ ಘೋಷಣೆಯಾಗಿತ್ತು.
ಆದರೆ, ಈ ಹೋರಾಟದ ಬಹುಮುಖಿ ಭಾವನೆಗಳು ಬೇರೆ ಬೇರೆ ಕವಿಗಳಲ್ಲಿ ವಿಭಿನ್ನವಾಗಿ ವ್ಯಕ್ತಗೊಂಡವು. ಹುಯಿಲಗೋಳರದ್ದು ಭವಿಷ್ಯದ ಕನಸಿಗೆ ನೀಡಿದ ಆಹ್ವಾನವಾದರೆ, ಮಾಸ್ತಿಯವರ ‘ಕನ್ನಡನಾಡಿನ ಸ್ಥಿತಿಯನ್ನು ನೆನೆದು’ ಕವಿತೆಯು ವರ್ತಮಾನದ ನೋವಿನ ಆರ್ತನಾದವಾಗಿತ್ತು. ‘ಹರಿದು ತುಂಡಾಗಿಹುದು ಇಂದು ಕನ್ನಡನಾಡು’ ಎಂದು ಮರುಗುತ್ತಾ, ‘ಸ್ವಾಮಿ ನನ್ನೂರು ಧಾರವಾಡ, ನನ್ನೂರು ಮೈಸೂರು’ ಎನ್ನುವ ಪ್ರತ್ಯೇಕತಾವಾದವೇ ಕನ್ನಡಿಗರ ನಡುವಿನ ನಿಜವಾದ ಸವಾಲೆಂಬುದನ್ನು ಅವರು ಮನಗಾಣಿಸಿದರು.
ಈ ಜಾಗೃತಿಗೆ ರೊಚ್ಚಿನ ಹಾಗೂ ಆಧ್ಯಾತ್ಮಿಕ ಆಯಾಮವನ್ನು ನೀಡಿದವರು ಬೇಂದ್ರೆ ಮತ್ತು ಕುವೆಂಪು. ದ.ರಾ. ಬೇಂದ್ರೆಯವರು ‘ಏಳು ಶೂರರ ಖಣೀ, ಏಳು ಶೂರರ ರಾಣಿ’ ಎಂದು ನಾಡನ್ನು ನಿದ್ದೆಯಿಂದ ಏಳಬೇಕಾದ ರಾಣಿಯಾಗಿ ಚಿತ್ರಿಸಿದರು. ‘ಸತ್ತಿರುವುದೆದೆಸೇರು, ಸುತ್ತಿರುವ ವಿಷ ಹೀರು’ ಎಂದು ಜಡತ್ವವನ್ನು ಕಿತ್ತೊಗೆಯಲು ಕರೆನೀಡಿದರು.
ಇದಕ್ಕೆ ಪ್ರತಿಯಾಗಿ, ಕುವೆಂಪು ಅವರ ‘ಕನ್ನಡ ಡಿಂಡಿಮ’ ಈ ಜಾಗೃತಿಯನ್ನು ಒಂದು ಸಾಮೂಹಿಕ ಕರೆಯ ಹಂತಕ್ಕೆ ಕೊಂಡೊಯ್ಯುತ್ತದೆ. ‘ಬಾರಿಸು ಕನ್ನಡ ಡಿಂಡಿಮವ’ ಎಂಬುದು ಬೇಂದ್ರೆಯವರ ‘ಏಳು’ ಎಂಬ ಕೋರಿಕೆಗಿಂತ ಹೆಚ್ಚು ಆದೇಶಾತ್ಮಕವಾಗಿದೆ. ಅವರ ದೃಷ್ಟಿಯಲ್ಲಿ ಕರ್ನಾಟಕವು ಕೇವಲ ರಾಣಿಯಲ್ಲ, ಅದು ‘ಹೃದಯಶಿವ’. ಶಿವನಂತೆ ತಾಯ್ನಾಡು ಕೂಡ ‘ಶಿವೇತರ’ವಾದುದನ್ನು(ಅಮಂಗಳಕರವಾದುದನ್ನು) ನಾಶಮಾಡಿ, ‘ಸರ್ವೋದಯ’ದ ಮಂಗಳವನ್ನು ಸ್ಥಾಪಿಸಬೇಕು. ಈ ಮೂಲಕ ಕುವೆಂಪು ಅವರು ಚಳವಳಿಗೆ ಕೇವಲ ರಾಜಕೀಯ ಆಯಾಮವಷ್ಟೇ ಅಲ್ಲದೆ, ಒಂದು ನೈತಿಕ ಮತ್ತು ತಾತ್ವಿಕ ಬಲವನ್ನು ತುಂಬಿದರು. ನಮ್ಮ ‘ನಾಡಗೀತೆ’ಯು ಈ ಜಾಗೃತಿಯನ್ನು ತನ್ನ ಆಶಯದಲ್ಲಿ ಸ್ಥಾಯಿಗೊಳಿಸುತ್ತದೆ. ‘ತೈಲಪ ಹೊಯ್ಸಳರಾಳಿದ ನಾಡೇ, ಡಂಕಣ ಜಕಣರ ನಚ್ಚಿನ ಬೀಡೆ’ ಎಂದು ಹಾಡುವ ಮೂಲಕ, ಅದು ಹರಿದು ಹಂಚಿಹೋದ ಪ್ರದೇಶಗಳ ಐತಿಹಾಸಿಕ ಏಕತೆಯನ್ನು ನೆನಪಿಸುತ್ತದೆ. ‘ಕೃಷ್ಣ ಶರಾವತಿ ತುಂಗ, ಕಾವೇರಿಯ ವರ ರಂಗ’ ಎಂದು ನದಿಗಳನ್ನು ಹೆಸರಿಸುವ ಮೂಲಕ, ನಾಡಿನ ಭೌಗೋಳಿಕ ಸಮಗ್ರತೆಯ ಕಲ್ಪನೆಯನ್ನು ಜನಮಾನಸದಲ್ಲಿ ಸ್ಥಾಪಿಸುತ್ತದೆ. ಇದು ಕೇವಲ ಹೊಗಳಿಕೆಯಲ್ಲ, ಬದಲಾಗಿ ಏಕೀಕರಣ ಚಳವಳಿಗೆ ಬೇಕಾದ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಭೂಮಿಕೆಯನ್ನು ಸಿದ್ಧಪಡಿಸುವ ಕಾರ್ಯತಂತ್ರವೂ ಹೌದು.
ಹಂತ ೩: ನವನಿರ್ಮಾಣದ ಕನಸು ಮತ್ತು ವಾಸ್ತವದ ಸಂಘರ್ಷ
ಏಕೀಕರಣದ ನಂತರ ‘ಹೆಸರಾಯಿತು ಕರ್ನಾಟಕ, ಮುಂದೇನು?’ ಎಂಬ ಪ್ರಶ್ನೆ ಎದುರಾದಾಗ, ನಾಡು ಕಟ್ಟುವ ಬಗೆಗೆ ವಿಭಿನ್ನ ದೃಷ್ಟಿಕೋನಗಳು ಮೂಡಿದವು. ಚೆನ್ನವೀರ ಕಣವಿಯವರು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂದು ಸೌಮ್ಯ, ರಚನಾತ್ಮಕ ಮಾರ್ಗವನ್ನು ಸೂಚಿಸಿದರು. ಆದರೆ, ಎಂ. ಗೋಪಾಲಕೃಷ್ಣ ಅಡಿಗರು ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಅಡಿಗರು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನೇ ಕೆಡವಿ ‘ಹೊಸ ನಾಡೊಂದನ್ನು’ ಕಟ್ಟಲು ಸಂಕಲ್ಪ ತೊಡುತ್ತಾರೆ. ಅವರ ದೃಷ್ಟಿಯಲ್ಲಿ, ನಿಜವಾದ ಶತ್ರುಗಳು ಹೊರಗಿಲ್ಲ; ಬದಲಾಗಿ ‘ಜಾತಿ ಮತ ಭೇದಗಳ ಕಂದಕ’, ‘ರೂಢಿರಾಕ್ಷಸ’ ಮತ್ತು ‘ಅನ್ನದ ಅನ್ಯಾಯದ ದಾವಾಗ್ನಿ’ಯ ರೂಪದಲ್ಲಿ ನಮ್ಮೊಳಗೇ ಇದ್ದಾರೆ. ‘ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು’ ಎಂಬ ಅವರ ಸಾಲುಗಳು, ನಾಡಿನ ವೈಭವದ ಕಥನಗಳಿಗೆ ಪ್ರತಿಯಾಗಿ, ಸಾಮಾಜಿಕ ನ್ಯಾಯವಿಲ್ಲದ ಸ್ವಾಭಿಮಾನಕ್ಕೆ ಅರ್ಥವಿಲ್ಲವೆಂದು ನೇರವಾಗಿ ಸಾರುತ್ತವೆ. ಇದು ಕನ್ನಡ ಪ್ರಜ್ಞೆಯು ತನ್ನದೇ ಕಠೋರ ವಾಸ್ತವಕ್ಕೆ ಮುಖಾಮುಖಿಯಾದ ಆತ್ಮಾವಲೋಕನದ ಕ್ಷಣವಾಗಿತ್ತು.
ಹಂತ ೪: ಆತ್ಮವಿಮರ್ಶೆ ಮತ್ತು ಅಸ್ಮಿತೆಯ ಮರುವ್ಯಾಖ್ಯಾನ
ಅಡಿಗರು ತೆರೆದಿಟ್ಟ ಆತ್ಮವಿಮರ್ಶೆಯ ಹಾದಿಯಲ್ಲಿ ಸಾಗಿದ ಕನ್ನಡ ಪ್ರಜ್ಞೆಯು ಇನ್ನಷ್ಟು ಪ್ರಬುದ್ಧವಾಯಿತು. ಈ ಹಂತದಲ್ಲಿ, ಕನ್ನಡದ ದೈವೀಕರಣ ಮತ್ತು ಶಿಷ್ಟ ಪರಂಪರೆಯ ಪರಿಕಲ್ಪನೆಗಳು ಪ್ರಶ್ನೆಗೊಳಗಾದವು.
ಜಿ.ಪಿ. ರಾಜರತ್ನಂ ಅವರ ‘ಕನ್ನಡ್ ಪದಗೊಳ್’ ಈ ನಿಟ್ಟಿನಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು. ಇಲ್ಲಿ ಕನ್ನಡ ಪ್ರೇಮವು ಕೇವಲ ಪಂಡಿತರ ಗಂಭೀರ ಸ್ವತ್ತಾಗಿ ಉಳಿಯದೆ, ಹೆಂಡ-ಹೆಂಡತಿಯನ್ನೂ ಬಿಟ್ಟುಕೊಡಲು ಸಿದ್ಧನಿರುವ ಸಾಮಾನ್ಯ ಕುಡುಕನೊಬ್ಬನ ಸ್ವಾಭಿಮಾನದ ದನಿಯಾಗಿ ಮಾರ್ಪಟ್ಟಿತು. ‘ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ… ಮೂಗ್ನಲ್ ಕನ್ನಡ್ ಪದವಾಡ್ತೀನಿ!’ ಎನ್ನುವ ಅವನ ಹಠ, ಕನ್ನಡವನ್ನು ಪಾಂಡಿತ್ಯದ ಪೀಠದಿಂದ ಕೆಳಗಿಳಿಸಿ, ಜನಸಾಮಾನ್ಯರ ಜೀವಂತ ಅನುಭವವಾಗಿಸಿತು.
ಈ ಮರುವ್ಯಾಖ್ಯಾನಕ್ಕೆ ಅಡಿಗರು ತಮ್ಮ ‘ಕನ್ನಡವೆಂದರೆ’ ಕವಿತೆಯಲ್ಲಿ ತಾತ್ವಿಕ ಚೌಕಟ್ಟನ್ನು ಒದಗಿಸಿದರು. ‘ಕನ್ನಡವೆಂದರೆ ತಾಯಿಯೆ, ದೇವಿಯೆ?’ ಎಂದು ಕೇಳುವ ಮೂಲಕ, ಅವರು ಗೋವಿಂದ ಪೈಗಳ ದೈವೀಕರಣದ ಕಲ್ಪನೆಯನ್ನು ನೇರವಾಗಿ ಪ್ರಶ್ನಿಸಿದರು. ಕನ್ನಡವೆಂದರೆ ಕೇವಲ ‘ಪಂಪ ಕುಮಾರವ್ಯಾಸರ’ ಭಾಷೆಯಲ್ಲ, ಅದು ‘ತಿಮ್ಮನ, ಬೋರನ, ಈರಗಮಾರರ ಹೃದಯದ ಸಹಜ ತರಂಗ’ ಹಾಗೂ ‘ಜನಮನದೊಳಗೂಡಿ ತುಡಿತ ಕಡಿತಗಳ ಪ್ರತಿಕೃತಿ’ ಎಂದು ಪ್ರತಿಪಾದಿಸಿದರು. ಈ ಮೂಲಕ, ಕುವೆಂಪು ಅವರ ನಾಡಗೀತೆಯಲ್ಲಿ ವರ್ಣಿತವಾದ ಶಿಷ್ಟ, ಪೌರಾಣಿಕ, ಚಾರಿತ್ರಿಕ ಪರಂಪರೆಗೆ ಪ್ರತಿಯಾಗಿ, ಜನಪದರ ಮತ್ತು ಅಂಚಿನ ಸಮುದಾಯಗಳ ಜೀವಂತ ಭಾಷೆಯಾಗಿ ಕನ್ನಡವನ್ನು ಪುನರ್ಸ್ಥಾಪಿಸುವ ಪ್ರಯತ್ನ ನಡೆಯಿತು.
ಹೀಗೆ, ಈ ಹಂತದಲ್ಲಿ ಕನ್ನಡ ಪ್ರಜ್ಞೆಯು ಕೇವಲ ಗತವೈಭವವನ್ನು ಕೊಂಡಾಡುವುದನ್ನು ನಿಲ್ಲಿಸಿ, ತನ್ನ ಆತ್ಮವಿಸ್ಮೃತಿಯ ಕಟು ವಾಸ್ತವವನ್ನು ಎದುರಿಸಿತು. ‘ಪರರ ನುಡಿಗೆ ಮಿಡುಕುವ'(ಕನ್ನಡಿಗರ ತಾಯಿ, ಪೈ) ಮತ್ತು ‘ಹೊರಮನೆಯ ಬಾಣಸಿಗರು’ (ನಾಡಿನ ಹಾಡು, ಗೋಕಾಕ್) ಆಗಿ ಬದುಕುತ್ತಿರುವ ತನ್ನ ದ್ವಂದ್ವ ಸ್ಥಿತಿಯನ್ನು ಇದು ಮುಖಾಮುಖಿಯಾಗಿಸಿತು.
ಹಂತ ೫: ಸಮನ್ವಯ ಮತ್ತು ನಿತ್ಯೋತ್ಸವದ ದೃಷ್ಟಿ
ಪ್ರೇಮ, ಪೂಜೆ, ಹೋರಾಟ ಮತ್ತು ಆತ್ಮವಿಮರ್ಶೆಯ ಹಂತಗಳನ್ನು ದಾಟಿ ಬಂದ ಕನ್ನಡ ಪ್ರಜ್ಞೆಯು, ಅಂತಿಮವಾಗಿ ಒಂದು ಪ್ರಬುದ್ಧ ಸಮನ್ವಯದ ನೆಲೆಯನ್ನು ತಲುಪುತ್ತದೆ. ಕೆ.ಎಸ್. ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ ಕವಿತೆಯು ಈ ಸಮನ್ವಯದ ಶ್ರೇಷ್ಠ ಅಭಿವ್ಯಕ್ತಿಯಾಗಿದೆ. ಇದರಲ್ಲಿ ಅವರು ನಾಡಿನ ಪ್ರಕೃತಿ ಸೌಂದರ್ಯ(‘ಜೋಗದ ಸಿರಿ’), ಇತಿಹಾಸದ ಹೆಗ್ಗುರುತು (‘ಶಾಸನಗಳ ಸಾಲು’), ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಒಂದೆಡೆ ಸೇರಿಸುತ್ತಾರೆ. ಆದರೆ, ಅವನ್ನು ಕೇವಲ ಸ್ಮರಣೀಯ ಸಂಗತಿಗಳಾಗಿಸದೆ, ನಿರಂತರವಾಗಿ ಆಚರಿಸಬೇಕಾದ ‘ನಿತ್ಯೋತ್ಸವ’ವನ್ನಾಗಿ ಪರಿವರ್ತಿಸುತ್ತಾರೆ. ‘ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ’ ಎಂಬ ಸಾಲುಗಳು, ಭೇದಗಳನ್ನು ಮೀರಿದ ಆಧುನಿಕ, ಜಾತ್ಯತೀತ ಕರ್ನಾಟಕದ ಆದರ್ಶವನ್ನು ಬಿಂಬಿಸುತ್ತವೆ.
ಅಚ್ಚರಿಯ ಸಂಗತಿಯೆಂದರೆ, ಈ ಆಧುನಿಕ ಆದರ್ಶದ ಬೀಜವು ದಶಕಗಳ ಹಿಂದೆಯೇ ಕುವೆಂಪು ಅವರ ನಾಡಗೀತೆಯಲ್ಲಿ ಬಿತ್ತಲ್ಪಟ್ಟಿತ್ತು. ಕುವೆಂಪು ಅವರು ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಾಗಲೇ ಈ ಸಮನ್ವಯದ ದೃಷ್ಟಿಗೆ ಅಡಿಪಾಯ ಹಾಕಿದ್ದರು. ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ, ಅವರು ಎಲ್ಲ ಧರ್ಮೀಯರನ್ನೂ ಒಳಗೊಳ್ಳುವ ಬಹುತ್ವದ ಕರ್ನಾಟಕದ ಕನಸನ್ನು ಕಂಡಿದ್ದರು. ‘ನಾನಕ ರಾಮಾನಂದ ಕಬೀರರ’ ಹೆಸರನ್ನು ಸ್ಮರಿಸುವ ಮೂಲಕ, ಕನ್ನಡ ಪ್ರಜ್ಞೆಯು ಕೇವಲ ಪ್ರಾದೇಶಿಕವಲ್ಲ, ಅದೊಂದು ರಾಷ್ಟ್ರೀಯ, ಸೌಹಾರ್ದಯುತ ಪ್ರಜ್ಞೆ ಎಂಬುದನ್ನು ಸಾರಿದ್ದರು. ಹೀಗಾಗಿ, ನಿಸಾರ್ ಅಹಮದರ ‘ನಿತ್ಯೋತ್ಸವ’ವು ಕುವೆಂಪು ಅವರ ‘ವಿಶ್ವಮಾನವ’ ಸಂದೇಶದ ಮತ್ತು ‘ಸರ್ವಜನಾಂಗದ ಶಾಂತಿಯ ತೋಟ’ದ ಸಹಜ, ಆಧುನಿಕ ವಿಸ್ತರಣೆಯಾಗಿದೆ.
ಜೀವಂತ ಚೇತನದ ನಿರಂತರ ಪಯಣ
ಕನ್ನಡ ನಾಡು-ನುಡಿಯ ಕಾವ್ಯ ಪರಂಪರೆಯು ಒಂದೇ ದಿಕ್ಕಿನಲ್ಲಿ ಹರಿಯುವ ಪ್ರವಾಹವಲ್ಲ; ಅದು ತನ್ನ ಕಾಲದ ಅಗತ್ಯಗಳಿಗೆ ತಕ್ಕಂತೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ, ವಿಕಾಸ ಹೊಂದುತ್ತಾ ಬಂದಿರುವ ಒಂದು ಜೀವಂತ ಚೇತನದ ಪಯಣ. ಆನಂದಕಂದರ ವೈಯಕ್ತಿಕ ಪ್ರೇಮವು ಗೋವಿಂದ ಪೈಗಳಲ್ಲಿ ಐತಿಹಾಸಿಕ ಅಸ್ಮಿತೆಯಾಗಿ ರೂಪುಗೊಂಡರೆ; ಹುಯಿಲಗೋಳರ ರಾಜಕೀಯ ಘೋಷಣೆಯು ಮಾಸ್ತಿಯವರಲ್ಲಿ ಆರ್ತ ನೋವಿನ ಅಭಿವ್ಯಕ್ತಿಯಾಯಿತು; ಬೇಂದ್ರೆಯವರ ಜಾಗೃತಿಯ ಕರೆಯು ಕುವೆಂಪು ಅವರಲ್ಲಿ ಆಧ್ಯಾತ್ಮಿಕ ಆಜ್ಞೆಯಾಗಿ ಮೊಳಗಿತು; ಕಣವಿಯವರ ರಚನಾತ್ಮಕ ಚಿಂತನೆಗೆ ಅಡಿಗರ ಕ್ರಾಂತಿಕಾರಿ ಆಕ್ರೋಶವು ಪ್ರತಿವಾದವಾಗಿ ನಿಂತಿತು. ‘ಜಯ ಹೇ ಕರ್ನಾಟಕ ಮಾತೆ’ಯು ಈ ಪಯಣದಲ್ಲಿ ಕೇವಲ ಒಂದು ಮೈಲಿಗಲ್ಲಲ್ಲ; ಅದೊಂದು ಆಧಾರಸ್ತಂಭ ಮತ್ತು ಮಾರ್ಗದರ್ಶಿ ನಕ್ಷತ್ರ. ಅದು ನಾಡಿನ ವೈಭವವನ್ನು ಪೂಜಿಸುವ, ಏಕೀಕರಣಕ್ಕೆ ಜಾಗೃತಿ ಮೂಡಿಸುವ ಮತ್ತು ಸರ್ವರನ್ನೂ ಒಳಗೊಳ್ಳುವ ಸಮನ್ವಯದ ಆದರ್ಶವನ್ನು ಬಿತ್ತುವ ಬಹುಮುಖಿ ಕಾರ್ಯವನ್ನು ಏಕಕಾಲಕ್ಕೆ ನಿರ್ವಹಿಸುತ್ತದೆ.
ಕೆಲವು ಮಿತಿಗಳಾಚೆಗೆ, ಈ ಮಹಾನ್ ಪರಂಪರೆಯು ನಮಗೆ ನೀಡುವ ನಿಜವಾದ ಸ್ಫೂರ್ತಿಯೆಂದರೆ, ಕವಿಗಳು ತಮ್ಮ ಕಾಲದ ಬಿಕ್ಕಟ್ಟುಗಳಿಗೆ ಸ್ಪಂದಿಸಿದಂತೆ, ನಾವೂ ನಮ್ಮ ಕಾಲದ ಸವಾಲುಗಳಿಗೆ ಸೃಜನಶೀಲವಾಗಿ ಮತ್ತು ವಿಮರ್ಶಾತ್ಮಕವಾಗಿ ಮುಖಾಮುಖಿಯಾಗಬೇಕು. ಏಕೆಂದರೆ, ಜಾಗತೀಕರಣ, ತಂತ್ರಜ್ಞಾನ, ಪ್ರಾದೇಶಿಕ ಅಸಮತೋಲನ, ವಲಸೆ ಮತ್ತು ಸಾಮಾಜಿಕ ನ್ಯಾಯದಂತಹ ಇಂದಿನ ಸಂಕೀರ್ಣ ಪ್ರಶ್ನೆಗಳಿಗೆ, ಕೇವಲ ಹಳೆಯ ವೈಭವದ ಹಾಡುಗಳು ಉತ್ತರವಾಗಲಾರವು.
ತಾಳಿಕೋಟೆಯ ಸೋಲು ನಮ್ಮ ಇತಿಹಾಸದ ಕೊನೆಯಲ್ಲ; ‘ಸೋತು ನೀನೆ ಗೆದ್ದೆಯಲ್ಲ’(ಪೈ) ಎಂಬ ಛಲ ನಮ್ಮ ಚೈತನ್ಯ. ಈ ಮಹಾನ್ ಪರಂಪರೆಯು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಾವು ಕಟ್ಟಬೇಕಾದದ್ದು ಕೇವಲ ಭಾವನಾತ್ಮಕ ಘೋಷಣೆಗಳ ನಾಡನ್ನಲ್ಲ. ಬದಲಿಗೆ, ಜ್ಞಾನ, ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ಮಾನವೀಯತೆಯ ತಳಹದಿಯ ಮೇಲೆ ‘ಉಸಿರಾಗಲಿ ಕನ್ನಡ’ ಎಂಬ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಕವಿವಾಣಿಗಳೇ ಆ ದಿಟ್ಟ ಹೆಜ್ಜೆಗೆ ಬೇಕಾದ ಅನನ್ಯ ಸ್ಫೂರ್ತಿಯ ಸೆಲೆಯಾಗಿ ಸದಾ ನಮ್ಮನ್ನು ಮುನ್ನಡೆಸಲಿ.

Diana Book Gallery ಮೊಬೈಲ್ ಬಿಡಿ- ಪುಸ್ತಕ ಹಿಡಿ, ಡಯಾನಾ ಬುಕ್ ಗ್ಯಾಲರಿಯಲ್ಲಿ ರಾಜ್ಯೋತ್ಸವ ಪುಸ್ತಕಾಭಿಯಾನ

0

Diana Book Gallery “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಎಂಬ ಘೋಷವಾಕ್ಯದೊಂದಿಗೆ ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಜಿಲ್ಲೆಯ ಪ್ರಥಮ ವಿಶಾಲ ಶ್ರೇಣಿಯ ಸಂಪೂರ್ಣ ಹವಾನಿಯಂತ್ರಿತ ಡಯಾನ ಬುಕ್ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ ಪ್ರಕಟಿಸಿದೆ ಎಂದು ಕೆ.ಎಲ್.ಈಶ್ವರ್ ತಿಳಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು ನಾಡಿನ ಹೆಸರಾಂತ ಹಿರಿಯ ಕಿರಿಯ ಸಾಹಿತಿಗಳ ಕಥೆ – ಕಾದಂಬರಿಗಳು, ಕವನ ಸಂಕಲನಗಳ ಮೇಲೆ ನ. 01 ರಿಂದ 30 ರವರೆಗೆ ಈ ವಿಶೇಷ ರಿಯಾಯಿತಿ ಇದ್ದು, ಪ್ರತಿ 100 ರೂ ಗಳ ಪುಸ್ತಕ ಖರೀದಿಗೆ ಶೇ 10 % , ಪ್ರತೀ 1000 ಪುಸ್ತಕ ಖರೀದಿಗೆ ಶೇ 15 % ಹಾಗು ಪ್ರತೀ ೨೦೦೦ ರೂ ಗಳ ಪುಸ್ತಕ ಖರೀದಿಗೆ ಶೇ 25% ರದ್ದು ರಿಯಾಯಿತಿ ನೀಡಲಾಗುತ್ತದೆ.

ಜೊತೆಗೆ ಇಂಗ್ಲೀಷ್ ಕಾದಂಬರಿಗಳಿಗೂ ಸಹ ಈ ಕೊಡುಗೆ ಅನ್ವಯವಾಗಲಿದೆ.
ಹೆಸರಾಂತ ಸಾಹಿತಿಗಳಾದ ಡಾ. ಎಸ್,ಎಲ್,ಬೈರಪ್ಪ, ರಾಷ್ಟçಕವಿ ಕುವೆಂಪುರವರ ಕೃತಿಗಳ ಮೇಲೆ ಶೇ 15% ರಷ್ಟು ವಿಶೇಷ ರಿಯಾಯಿತಿ ಇದೆ.

Diana Book Gallery ಶಾಲಾ ಕಾಲೇಜುಗಳ ಪಠ್ಯ ಪುಸ್ತಕ ಮತ್ತು ಸ್ಪರ್ದಾತ್ಮಕ ಪರೀಕ್ಷೆಗಳ ಪುಸ್ತಕಗಳಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದಿರುವ ಅವರು, ಪುಸ್ತಕ ಸಂಸ್ಕçತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೊಡುಗೆ ಮಹತ್ವದ್ದಾಗಿದ್ದು ಪುಸ್ತಕ ಪ್ರಿಯರು, ಓದುಗರು, ಸಾಹಿತ್ಯಾಸಕ್ತರು ಈ ಎಲ್ಲಾ ಕೊಡುಗೆಗಳ ಪ್ರಯೋಜನ ಪಡೆದುಕೋಳ್ಳುವಂತೆ ಈಶ್ವರ್ ರವರು ಮನವಿ ಮಾಡಿದ್ದಾರೆ.

Sahyadri Narayana Multispecialty Hospital ಕೈಪೋಸಿಸ್ ಪೀಡಿತರಿಗೆ ಅಪರೂಪದ ಸರ್ಜರಿ ಮೂಲಕ ಯಶಸ್ವಿ ಚಿಕಿತ್ಸೆ ನೀಡಿದ ಎನ್. ಹೆಚ್. ಆಸ್ಪತ್ರೆ ವೈದ್ಯರ ತಂಡ

0

ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನ ವೈದ್ಯರು ಕೈಫೋಸಿಸ್ (ಬೆನ್ನುಮೂಳೆ ಮುಂದಕ್ಕೆ ಬಾಗಿರುವ ಸಂಕೀರ್ಣ ಸಮಸ್ಯೆ) ಸಮಸ್ಯೆ ಹೊಂದಿದ್ದ 66 ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಸಾಧನೆ ಮಾಡಿದೆ.

ಈ ಸಮಸ್ಯೆ ಹೊಂದಿರುವವರಲ್ಲಿ ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುವುದರಿಂದ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ಚಿಕಿತ್ಸಾ ಪ್ರಕ್ರಿಯೆ ಕಷ್ಟಕರವಾಗುತ್ತದೆ. ಆದರೆ ಹಿರಿಯ ಕಾರ್ಡಿಯೊಥೊರಾಸಿಕ್ ಸರ್ಜನ್ ಡಾ. ಬಾಲಸುಬ್ರಮಣಿ ಆರ್ ನೇತೃತ್ವದ ವೈದ್ಯಕೀಯ ತಂಡವು ಸುಮಾರು ಆರು ಗಂಟೆಗಳ ಕಾಲ ಈ ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.

ರೋಗಿಯು ಗಂಭೀರ ತ್ರಿವಳಿ ನಾಳ ಸಮಸ್ಯೆದಿಂದ ಬಳಲುತ್ತಿದ್ದರು. ಜೊತೆಗೆ ಹೈಪರ್‌ಟೆನ್ಷನ್ ಇತಿಹಾಸವೂ ಇತ್ತು. ಅಸ್ಥಿರ ಆಂಜೈನಾ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದಿದ್ದ ಅವರ ಹೃದಯದ ಕಾರ್ಯ ದಕ್ಷತೆ ಕಡಿಮೆಯಾಗಿದ್ದು, ಡಯಾಸ್ಟೊಲಿಕ್ ಡಿಸ್‌ಫಂಕ್ಷನ್ ಸಮಸ್ಯೆ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯವಾಗಿತ್ತು.

ವೈದ್ಯರಿಗೆ ಸವಾಲೊಡ್ಡಿದ ಪ್ರಕರಣ

ಕೈಫೋಸಿಸ್ ರೋಗಿಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲು ಭಾರಿ ಶಸ್ತ್ರಚಿಕಿತ್ಸಾ ಪರಿಣತಿ ಬೇಕು. ಕೈಫೋಸಿಸ್‌ನಿಂದ ಉಂಟಾಗುವ ಬೆನ್ನುಮೂಳೆಯ ವಕ್ರತೆಯು ಪಕ್ಕೆಲುಬುಗಳು ಮತ್ತು ಎದೆ ಕುಹರದ ಸಹಜ ಸಾಲನ್ನು ಬದಲಾಯಿಸುತ್ತದೆ. ಹೃದಯ ಶಸ್ತ್ರಚಿಕಿತ್ಸೆಗೆ ಸವಾಲೊಡ್ಡುತ್ತದೆ. ಬೆನ್ನುಮೂಳೆಯ ವಕ್ರತೆಯ ಕಾರಣದಿಂದ ಶಸ್ತ್ರಚಿಕಿತ್ಸಾ ಟೇಬಲ್‌ನಲ್ಲಿ ರೋಗಿಯನ್ನು ಸರಿಯಾಗಿ ಇರಿಸುವುದು ಕೂಡ ಕಷ್ಟಕರವಾಗುತ್ತದೆ. ಹೃದಯದ ಮೇಲೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ರೋಗಿಯ ಎದೆ ಮತ್ತು ತಲೆಯನ್ನು ಹೆಚ್ಚುವರಿ ಬೆಂಬಲ ನೀಡಿ ಎತ್ತಿಹಿಡಿಯಬೇಕು. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಬೇಕಿರುತ್ತದೆ.

ಈ ಕುರಿತು ಮಾತನಾಡಿದ ಡಾ. ಬಾಲಸುಬ್ರಮಣಿ ಅವರು, “ಕೈಫೋಸಿಸ್ ಸಮಸ್ಯೆಯು ಮನುಷ್ಯನ ಸಾಮಾನ್ಯ ಥೊರಾಸಿಕ್ ರಚನೆಯನ್ನೇ ಬದಲಾಯಿಸುತ್ತದೆ. ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಕಷ್ಟಗೊಳಿಸುತ್ತದೆ. ರೋಗಿಯ ವಿಶಿಷ್ಟ ದೇಹರಚನೆಗೆ ತಕ್ಕಂತೆ ಶಸ್ತ್ರಚಿಕಿತ್ಸಾ ಯೋಜನೆಯನ್ನು ಹೊಂದಿಸಿಕೊಳ್ಳಬೇಕು” ಎಂದು ಹೇಳಿದರು.

ಈ ಪ್ರಕರಣದಲ್ಲಿ ವೈದ್ಯರು ಮೂರು ಗ್ರಾಫ್ಟ್‌ ಗಳನ್ನು ಬಳಸಿ ಆಫ್- ಪಂಪ್ ಸಿಎಬಿಜಿ (ಒಪಿಸಿಎಬಿಜಿ) ಶಸ್ತ್ರಚಿಕಿತ್ಸೆ ನಡೆಸಿದರು. ಮರುದಿನ ರೋಗಿಗೆ ಎಕ್ಸ್‌ಟ್ಯೂಬೇಟ್ (ಟ್ಯೂಬ್ ಅನ್ನು ತೆಗೆಯುವುದು) ಮಾಡಲಾಯಿತು ಮತ್ತು ನಂತರ ರೋಗಿಯು ನಿಧಾನಕ್ಕೆ ಚೇತರಿಸಿಕೊಂಡರು.

ಕೈಫೋಸಿಸ್ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆ ಪ್ರಕ್ರಿಯೆ ಕೂಡ ಕಾರ್ಯವಿಧಾನದಷ್ಟೇ ಸವಾಲಿನದ್ದಾಗಿದೆ. ಎದೆಭಾಗದಲ್ಲಿನ ನೋವಿನ ಕಾರಣಕ್ಕೆ ರೋಗಿಗಳು ಬಾಗಿದ ಭಂಗಿಯನ್ನು ಅನುಸರಿಸಬಹುದು. ಅದನ್ನೇ ಅಭ್ಯಾಸವಾಗಿಸಿಕೊಳ್ಳಬಹುದು. ಈಗಾಗಲೇ ಕೈಫೋಸಿಸ್‌ ಹೊಂದಿರುವವರಿಗೆ ಇದರಿಂದ ಶ್ವಾಸಕೋಶದ ವಿಸ್ತರಣೆ ಕಡಿಮೆಯಾಗಿ ಉಸಿರಾಟದ ತೊಂದರೆ ಉಂಟಾಗಬಹುದು. ಶ್ವಾಸಕೋಶ ಕುಗ್ಗುವಿಕೆ (ಅಟೆಲೆಕ್ಟಾಸಿಸ್), ಕತ್ತನ್ನು ನಿಧಾನವಾಗಿ ತಿರುಗಿಸುವುದು, ಚೇತರಿಕೆ ನಿಧಾನವಾಗುವುದು ಮತ್ತು ಫಿಸಿಯೋಥೆರಪಿ ಸಂದರ್ಭದಲ್ಲಿಯೂ ಸವಾಲು ಇರಬಹುದು. ಫಿಸಿಯೋಥೆರಪಿಸ್ಟ್‌ ಗಳು ಕೈಫೋಸಿಸ್ ಸಮಸ್ಯೆಯು ಎದೆಗೂಡಿನ ಚಲನೆಯನ್ನು ಮತ್ತಷ್ಟು ಕಷ್ಟಕರಗೊಳಿಸಬಹುದು ಎಂದು ಹೇಳುತ್ತಾರೆ. ಹಾಗಾಗಿ ಚೇತರಿಕೆಯ ಪ್ರಕ್ರಿಯೆಯಗಳಲ್ಲಿ ಉಸಿರಾಟ ವ್ಯಾಯಾಮಗಳು ಬಹಳ ಮುಖ್ಯವಾಗುತ್ತವೆ.

“ರೋಗಿಗಳಿಗೆ ಶಸ್ತ್ರಚಿಕಿತ್ಸೆಯಾದರೆ ಮಾತ್ರ ಸಾಲದು, ಸೂಕ್ತವಾದ ಹೃದಯ ಆರೈಕೆ ಅಗತ್ಯವಾಗಿರುತ್ತದೆ. ಪರಿಣತರ ಮೇಲ್ವಿಚಾರಣೆಯಲ್ಲಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಅಗತ್ಯವಿದೆ. ಸೂಕ್ತ ಆಹಾರ ಮತ್ತು ಪೌಷ್ಟಿಕತೆ ಹಾಗೂ ಶಸ್ತ್ರಚಿಕಿತ್ಸೆಯ ನಂತರದ ಒತ್ತಡವನ್ನು ಕಡಿಮೆ ಮಾಡಲು ಕೌನ್ಸೆಲಿಂಗ್ ಕೂಡ ಬೇಕು” ಎನ್ನುತ್ತಾರೆ ಡಾ. ಬಾಲಸುಬ್ರಮಣಿ.

ಡಾ. ಶರತ್‌ ಪಿ ಸಂಗನಗೌಡರ್‌, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗೀಸ್‌ ಪಿ ಜಾನ್‌, ಮಾರ್ಕೇಟಿಂಗ್‌ ಮ್ಯಾನೇಜರ್‌ ಶೈಲೇಶ್‌ ಎಸ್‌, ಎನ್‌ ಮುಂತಾದವರು ಉಪಸ್ಥಿತರಿದ್ದರು.

Guarantee Scheme ತಾಲ್ಲೂಕು ಮಟ್ಟದ ಅಧಿಕಾರಿಗಳು ಪಂಚ ಗ್ಯಾರಂಟಿಗಳನ್ನ ಜಾರಿಮಾಡಲು ಕಾರ್ಯಕ್ಷಮತೆಯಿಂದ ಕೆಲಸ ಮಾಡಿ- ಹೆಚ್.ಎಂ.ಮಧು

0

Guarantee Scheme ಪಂಚ ಗ್ಯಾರಂಟಿಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಇದರಿಂದ ಅರ್ಥಿಕವಾಗಿ ಜನರ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ ಮಧು ತಿಳಿಸಿದರು.

ಶುಕ್ರವಾರ ನಗರದ ತಾಲ್ಲೂಕು ಪಂಚಾಯತ್‌ನಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣ ಮಾಡುವ ಉದ್ದೇಶದಿಂದ ಸರ್ಕಾರವೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ತಾಲ್ಲೂಕು ಮಟ್ಟದ ಪ್ರಾಧಿಕಾರದ ಜೊತೆಗೆ ಗ್ಯಾರಂಟಿಯ ಐದು ಇಲಾಖೆಗಳು ಕೈ ಜೋಡಿಸಿ ಸರ್ಕಾರದ ಯೋಜನೆಯನ್ನು ಜಿಲ್ಲಾದ್ಯಂತ ತಲುಪಿಸಲು ಸಹಕಾರಿಯಾಗುತ್ತಿದೆ ಎಂದರು.

ಸರ್ಕಾರದ ಜನಪರ ಕಾಳಜಿಯಿಂದ ಹಾಗೂ ಅಭಿವೃದ್ದಿ ಉದ್ದೇಶದಿಂದ ಇಂತಹ ಅನೇಕ ಯೋಜನೆಯ ಜಾರಿ ಮಾಡುತ್ತಿದ್ದು, ಈ ನಿಟ್ಟಿನಿಂದ ತಾಲ್ಲೂಕು ಮಟ್ಟದ ಪ್ರಾಧಿಕಾರದ ಸದಸ್ಯರುಗಳು ಕಾರ್ಯಕ್ಷಮತೆಯಿಂದ ಕೆಲಸ ಮಾಡಬೇಕು. ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದವರೆಗೂ ಮೀಸಲಾಗಿದೆ. ಆದರೆ ದುರ್ಬಲ ಹಾಗೂ ಬಡವರು ಸರಿಯಾದ ಮಾಹಿತಿ ಇಲ್ಲದೆ ಇದನ್ನು ಪಡೆಯಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಆದರಿಂದ ಇಂತಹ ವರ್ಗದ ಜನರಿಗೆ ಆದಷ್ಟು ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಯತ್ನದಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ. ಆಗ ಮಾತ್ರ ಸರ್ಕಾರದ ಉದ್ದೇಶ ಈಡೇರಲಿದೆ ಎಂದು ಹೇಳಿದರು.

ಜುಲೈ-2025 ರ ಮಾಹೆಯಲ್ಲಿ ಜಿಲ್ಲೆಯ 1,5,272 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಹಣ ಜಮಾ ಮಾಡಲಾಗಿದೆ. ಇನ್ನೂ 2044 ಖಾತೆಗಳು ಐಟಿ/ಜಿಎಸ್‌ಟಿ ಫಲಾನುಭವಿಗಳಾಗಿದ್ದು, ಇದರಲ್ಲಿ 304 ಅರ್ಜಿಗಳನ್ನು ಕಚೇರಿ ಸ್ವೀಕರಿಸಲಾಗಿದೆ. ಹಾಗೂ ಎನ್‌ಪಿಸಿಐ ಯಲ್ಲಿ 300 ಫಲಾನುಭವಿಗಳ ಅರ್ಜಿ ಬಾಕಿ ಇದೆ.

ಅನ್ಯಭಾಗ್ಯ ಯೋಜನೆಗೆ ಸಂಬಂಧಿಸಿದAತೆ ಸರ್ಕಾರವು ಸಚಿವ ಸಂಪುಟದಲ್ಲಿ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನೂ ಮುಂದೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿ ಬದಲಾಗಿ ಆಹಾರಧಾನ್ಯಗಳ ಕಿಟ್ ನೀಡಲಿದೆ. ಈ ಯೋಜನೆ ಜನವರಿ-2026 ರಿಂದ ಜಾರಿಯಾಗಲಿದೆ. ಹಾಗೂ ಇದರ ನಿರ್ವಹಣೆಗಾಗಿ ಗ್ರಾಮಾಂತರ ಹಾಗೂ ನಗರದಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರನ್ನು ಆಯಾ ವಾರ್ಡ್ ಮಟ್ಟದಲ್ಲಿ ನೇಮಕ ಮಾಡಲಾಗುತ್ತದೆ.

ಸರ್ಕಾರವು ಐಟಿ ಹಾಗೂ ಜಿಎಸ್‌ಟಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಮಾಡಿ ಅವರನ್ನು ಎಪಿಎಲ್ ಪಡಿತರ ಪಟ್ಟಿಗೆ ಸೇರಿಸಲು ತೀರ್ಮಾನ ಮಾಡಲಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಡಿ ತಾಲ್ಲೂಕು ಮಟ್ಟದಲ್ಲಿ 7.44 ಕೋಟಿ ವಿದ್ಯುತ್ ಬಳಕೆ ಮಾಡಲಾಗಿದ್ದು, ಸರ್ಕಾರದಿಂದ 6.40 ಕೋಟಿ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಯುವ ನಿಧಿ ಯೋಜನೆ ಅಡಿಯಲ್ಲಿ ಜುಲೈ-2025 ಮಾಹೆವರೆಗೂ 2,95 ಕೋಟಿ ಹಣವನ್ನು ವಿದ್ಯಾರ್ಹತೆಯನುಸಾರವಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.

Guarantee Scheme ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 5 ಕೋಟಿ ಮಹಿಳಾ ಫಲಾನುಭವಿಗಳು ಪ್ರಯಾಣ ಮಾಡಿದ್ದು, ಇದರಿಂದ 219 ಕೋಟಿ ಆದಾಯ ಸರ್ಕಾರ ಖಜಾನೆ ಬಂದಿದೆ. ಶಿವಮೊಗ್ಗ ಜಿಲ್ಲೆಗೆ ಎಲೆಕ್ಟ್ರಿಕಲ್ ಬಸ್ ನೀಡಲು ಕರ್ನಾಟಕ ಸರ್ಕಾರವು ಮುಂದಾಗಿದ್ದು, ಅದರಂತೆ ಈಗಾಗಲೇ ಬಸ್ ನಿಲ್ದಾಣದಲ್ಲಿ ಎಲೆಕ್ಟ್ರಿಕಲ್ ಚಾರ್ಚಿಂಗ್ ಪಾಯಿಂಟ್ ಕೂಡ ಅವಳಡಿಸಲಾಗಿದೆ. ಜಿಲ್ಲೆಗೆ ಆದಷ್ಟು ಬೇಗ ಎಲೆಕ್ಟ್ರಿಕಲ್ ಬಸ್ ಬರಲಿದ್ದು, ಇನ್ನೂ ಮುಂದೆ ಜಿಲ್ಲೆಯ ಜನರ ಪ್ರಯಾಣ ಸುಗಮವಾಗುತ್ತದೆ ಎಂದರು.

ಸಭೆಯಲ್ಲಿ ತಾಲ್ಲೂಕು ಸಿಓ ತಾರಾ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕರಾರಿನ ಆಧಾರದ ಮೇರೆ‌ಗೆ ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಒಂದು ವರ್ಷದ ಕರಾರಿನ ಆಧಾರದ ಮೇಲೆ ಖಾಲಿ ಇರುವ ಒಂದು ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವರು ಬಿ.ಕಾಂ ಪದವಿ ಹೊಂದಿರಬೇಕು. ಲೆಕ್ಕಪತ್ರಗಳನ್ನು ನಿರ್ವಹಿಸುವ ಕುರಿತು ಕನಿಷ್ಟ 5 ವರ್ಷಗಳ ಅನುಭವ, ಕನ್ನಡ ಮತ್ತು ಇಂಗ್ಲೀಷ್ ಮಾತನಾಡು ಹಗೂ ಬರೆಯುವಲ್ಲಿ ಉತ್ತಮ ಕೌಶಲ್ಯ, ಕಂಪ್ಯೂಟರ್ ಜ್ಞಾನ, ಟ್ಯಾಲಿ ಸಾಫ್ಟ್ವೇರ್ ಉಪಯೋಗಿಸುವ ಜ್ಞಾನ ಮತ್ತು ಕೌಶಲ್ಯ ಹಾಗೂ ಕಚೇರಿ ಪತ್ರ ವ್ಯವಹಾರಗಳು ಹಾಗೂ ಲೆಕ್ಕ ಪತ್ರ ವ್ಯವಹಾರಗಳನ್ನು ಗಣಕೀಕೃತದಲ್ಲಿ ನಮೂದಿಸಿ ಕೇಂದ್ರ ಕಚೇರಿ ಗಣಕಯಂತ್ರದ ಮೂಲಕ ಕಳುಹಿಸುವ ಕುರಿತು ಪರಿಣಿತಿ ಹೊಂದಿರಬೇಕು. ಈ ಹುದ್ದೆಗೆ 21,909 ರೂ. ಗೌರವಧನ ನೀಡಲಾಗುವುದು.
ಯಾವುದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸುವಂತಿಲ್ಲ.
ಅರ್ಹ ಅಭ್ಯರ್ಥಿಗಳು ಅದಕ್ಕೆ ಸ್ವವಿವರ, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರದೊಂದಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ ಶಿವಮೊಗ್ಗ ಇವರ ಹೆಸರಿಗೆ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು, ಕಾರ್ಮಿಕ ಅಧಿಕಾರಿ/ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಚೇರಿ, 2 ನೇ ಮಹಡಿ ವಾಣಿಜ್ಯ ಸಂಕೀರ್ಣ (ಸೂಡ) ಕಾಂಪ್ಲೇಕ್ಸ್, ಪೊಲೀಸ್ ಚೌಕಿ ವಿನೋಬ ನಗರ ಇಲ್ಲಿಗೆ ನ.10 ರೊಳಗಾಗಿ ಸಲ್ಲಿಸುವಂತೆ ಕಾರ್ಮಿಕ ಅಧಿಕಾರಿ ವೇಣುಗೋಪಾಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 08182-248810 ಗೆ ಸಂಪರ್ಕಿಸುವುದು.