ರಕ್ಷಾಬಂಧನವು ಕೇವಲ ಒಂದು ಹಬ್ಬವಲ್ಲ. ಅದು ಪ್ರೀತಿ, ವಿಶ್ವಾಸ, ಗೌರವ ಮತ್ತು ರಕ್ಷಣೆಯ ಸಂಕೇತವಾಗಿದೆ ಎಂದು ಬ್ರಹ್ಮಕುಮಾರೀಸ್ ಸೇವಾ ಕೇಂದ್ರದ ರಾಜಯೋಗಿನಿ ಬಿ.ಕೆ.ಅನಸೂಯ ಅಕ್ಕ ನವರು ತಿಳಿಸಿದರು.
ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಲ್ಲಿ ರಕ್ಷಾಬಂಧನ ಪಾವನ ಪರ್ವದ ಅಂಗವಾಗಿ ಭಾನುವಾರ ವಿಶೇಷ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ಆಯೋಜಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಈ ಹಬ್ಬವು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದೆ ಎಂದು ತಿಳಿಸಿದರು.
ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಗ್ಗುತ್ತಿರುವ ಸಂದರ್ಭದಲ್ಲಿ ಆಧ್ಯಾತ್ಮಿಕತೆಯ ಮೂಲಕ ಮನಸ್ಸಿನ ಶುದ್ಧೀಕರಣ ಅಗತ್ಯವಾಗಿದೆ. ರಾಜಯೋಗ ಧ್ಯಾನದ ಮೂಲಕ ಆತ್ಮಶಕ್ತಿ ವೃದ್ಧಿಯಾಗುವುದರ ಜೊತೆಗೆ ಕುಟುಂಬ ಹಾಗೂ ಸಮಾಜದಲ್ಲಿ ಸೌಹಾರ್ದತೆ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ರಾಖಿ ಕಟ್ಟುವುದು ಕೇವಲ ಆಚರಣೆಯಲ್ಲ, ಅದು ಪರಸ್ಪರರ ರಕ್ಷಣೆ, ಗೌರವ ಮತ್ತು ಜವಾಬ್ದಾರಿಯ ಪ್ರತಿಜ್ಞೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಅನಸೂಯ ಅಕ್ಕ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ರಹ್ಮಕುಮಾರಿ ಸಂಸ್ಥೆಯ ಸ್ವಾತಿ ಅಕ್ಕ ನವರು, ಬ್ರಹ್ಮಕುಮಾರಿ ಸಂಸ್ಥೆಯು ವಿಶ್ವಾದ್ಯಂತ ತನ್ನ ವಿಶಿಷ್ಟ ಕಾರ್ಯವೈಖರಿಯ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರೀತಿ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ರಕ್ಷಾಬಂಧನವು ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತವಾಗಿದ್ದು, ರಾಖಿ ಕೇವಲ ರಕ್ಷಣೆಯ ದಾರವಲ್ಲ. ಅದು ಪ್ರೀತಿ, ವಿಶ್ವಾಸ ಮತ್ತು ಬದ್ಧತೆಯ ಪ್ರತೀಕವಾಗಿದೆ. ರಾಖಿ ಕಟ್ಟುವುದು ಎಂದರೆ ಕೇವಲ ಕೈಗೆ ದಾರ ಕಟ್ಟುವುದಲ್ಲ, ಹೃದಯಗಳನ್ನು ಬೆಸೆಯುವುದು ಹಾಗೂ ಆತ್ಮೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಸಂಕೇತವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿರುವ ಈ ಹಬ್ಬವು ಪರಸ್ಪರ ಗೌರವ, ಪ್ರೀತಿ ಮತ್ತು ಜವಾಬ್ದಾರಿಯ ಸಂದೇಶವನ್ನು ಸಾರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಕ್ಷಾಬಂಧನದ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಲಾಯಿತು.
ಆನಂತರ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟೇರಿಯನ್ ಜಿ. ವಿಜಯಕುಮಾರ್, ಮನೋಹರ್, ರುದ್ರಪ್ಪ ಚಿಲೂರ್ , ಇತರೆ ಬ್ರಹ್ಮಕುಮಾರಿ ಸೇವಾಕೇಂದ್ರದ ಸಂಚಾಲಕರು ಹಾಗೂ
ಹೆಚ್ಚಿನ ಸಂಖ್ಯೆಯಲ್ಲಿ ಬ್ರಹ್ಮಕುಮಾರಿಸ್ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
