ಮಲೆನಾಡಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ರಾಜಧಾನಿ ಶಿವಮೊಗ್ಗ ನಗರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅನವರತ ಫೌಂಡೇಶನ್ ವತಿಯಿಂದ ‘ವಿವೇಕ ವಿದ್ಯಾನಿಧಿ’ ಯೋಜನೆಯಡಿ ಪ್ರೋತ್ಸಾಹಕ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಘೋಷಿಸಲಾಗಿದೆ.
ಕಳೆದ ವರ್ಷದ ಯಶಸ್ವಿ ಯೋಜನೆಯ ಮುಂದುವರಿದ ಭಾಗವಾಗಿ ಈ ವರ್ಷವೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಡ ಕುಟುಂಬಗಳ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಯೋಜನೆಯಡಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿ, ತಲಾ ₹5,000 ವಿದ್ಯಾರ್ಥಿವೇತನವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಭಾವಚಿತ್ರ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆ ಅಥವಾ ಕಾಲೇಜಿನ ಪ್ರವೇಶ ಪತ್ರ ಅಥವಾ ಪ್ರಮಾಣಪತ್ರ, ವೈಯಕ್ತಿಕ ಬ್ಯಾಂಕ್ ಖಾತೆಯ ವಿವರ, ಶುಲ್ಕ ಪಾವತಿ ರಶೀದಿ ಹಾಗೂ ಹಿಂದಿನ ವರ್ಷದ ಅಂಕಪಟ್ಟಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ವರ್ಷದ ಪರೀಕ್ಷೆಯಲ್ಲಿ 50ರಿಂದ 75 ಪ್ರತಿಶತದೊಳಗಿನ ಅಂಕಗಳನ್ನು ಪಡೆದಿರಬೇಕು. ಜೊತೆಗೆ ಪೋಷಕರ ಬಿಪಿಎಲ್ ಕಾರ್ಡ್ ಅಥವಾ ₹1.80 ಲಕ್ಷಕ್ಕಿಂತ ಕಡಿಮೆ ಆದಾಯದ ಪ್ರಮಾಣಪತ್ರ ಹೊಂದಿರಬೇಕು.
ಪೋಷಕರು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದು, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಯ ಶಾಲಾ ಅಥವಾ ಕಾಲೇಜು ಶುಲ್ಕವು ₹30 ಸಾವಿರ ಮೀರಿರಬಾರದು ಎಂಬ ಮಾನದಂಡವನ್ನೂ ನಿಗದಿಪಡಿಸಲಾಗಿದೆ.
ಅರ್ಜಿ ವಿತರಣೆ ಮತ್ತು ಸ್ವೀಕಾರ ಜೂನ್ 11, 2026ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5, 2026 ಕೊನೆಯ ದಿನವಾಗಿದೆ.
ಅರ್ಜಿ ಪಡೆಯುವ ಹಾಗೂ ಸಲ್ಲಿಸುವ ಸ್ಥಳ ಕರ್ತವ್ಯ ಭವನ, ಶಾಸಕರ ಕಚೇರಿ, ಮಹಾನಗರ ಪಾಲಿಕೆ ಕಟ್ಟಡ, ಶಿವಪ್ಪ ನಾಯಕ ಮಾರುಕಟ್ಟೆ ಪಕ್ಕ, ನೆಹರು ರಸ್ತೆ, ಶಿವಮೊಗ್ಗ ಆಗಿದೆ.
ಆರ್ಥಿಕ ಅಡಚಣೆಯಿಂದ ಯಾವುದೇ ವಿದ್ಯಾರ್ಥಿಯ ಶೈಕ್ಷಣಿಕ ಕನಸುಗಳು ಕಮರಬಾರದು ಎಂಬ ಉದ್ದೇಶದಿಂದ ‘ವಿವೇಕ ವಿದ್ಯಾನಿಧಿ’ ಯೋಜನೆಯನ್ನು ರೂಪಿಸಲಾಗಿದೆ ಎಂದು ಅನವರತ ಫೌಂಡೇಶನ್ನ ಗೌರವಾಧ್ಯಕ್ಷರು ಹಾಗೂ ಶಿವಮೊಗ್ಗ ನಗರ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ತಿಳಿಸಿದ್ದಾರೆ.
ಅರ್ಹ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸುವ ಮೂಲಕ ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
