Friday, July 17, 2026
Friday, July 17, 2026

ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ- ಡಿ.ಕೆ.ಶಿವಕುಮಾರ್

Date:

“ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು ಕೊಂಡುಕೊಂಡ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ‌” ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನೆಹರು ತಾರಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

“ಆಗಸ್ಟ್ 6 ರವರೆಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ನನಗೆ ಬರೆಯಬಹುದು. ಇದನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ. ಎಲ್ಲಾ ಪಕ್ಷದ ನಾಯಕರಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಲಾಗಿದೆ. ಶಾಸಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಏಕಪಕ್ಷೀಯವಾಗಿ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ” ಎಂದರು.

“ನಿಮ್ಮ ಯಾವುದೇ ಸಲಹೆ ಸೂಚನೆಗಳಿದ್ದರೂ ನನಗೆ ಹಾಗೂ ಕೃಷ್ಣ ಬೈರೇಗೌಡರಿಗೆ ನೀಡಿ. ನನ್ನ ಮೊಬೈಲ್ ಸಂಖ್ಯೆ ನೀಡಲು ತಿಳಿಸುತ್ತೇನೆ. ಅದಕ್ಕೆ ನಿಮ್ಮ ಸಲಹೆಗಳನ್ನು ಕಳುಹಿಸಬಹುದು. ಜೊತೆಗೆ ಡೆವಲಪರ್ ಗಳನ್ನು ಕರೆಸಿ ಅವರ ಜೊತೆಯೂ ಮಾತನಾಡಿ ಕಾನೂನು ಏನಿದೆ ಎಂದು ಮನವರಿಕೆ ಮಾಡಲಾಗುವುದು” ಎಂದರು.

“ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿದ್ದು ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಖಾತೆ ನೀಡಲಾಗಿದೆ. ಒಂದಷ್ಟು ಜನ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮೂರು ಮಹಡಿಗಳಿಗೆ ಅನುಮತಿ ಪಡೆದು ಐದು ಮಹಡಿಗಳನ್ನು ನಿರ್ಮಾಣ‌ ಮಾಡಿದ್ದಾರೆ. ಹೆಚ್ಚಿನವರು ಪ್ರಾಮಾಣಿಕರಿದ್ದು ಅವರು ಕಾನೂನಿನ ಅಡಿ ಕೆಲಸ ಮಾಡಿದ್ದಾರೆ” ಎಂದರು.

“ದೊಡ್ಡ, ದೊಡ್ದ ಬಿಲ್ಡರ್ ಗಳ ವಿಚಾರಕ್ಕಿಂತ ಸಣ್ಣ ಪುಟ್ಟ ಬಿಲ್ಡರ್ ಗಳು 60/80 ಅಥವಾ ಕಂದಾಯ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಕಾನೂನು ಮುರಿಯುತ್ತಾರೆ. ಅದರ ಗುಣಮಟ್ಟ ಕೂಡ ಸರಿಯಾಗಿರುವುದಿಲ್ಲ” ಎಂದರು.

ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರು

“ಒಮ್ಮೆ ಅಪಾರ್ಟ್ ಮೆಂಟ್ ನಿವಾಸಿಗಳಾದ ಮೇಲೆ ಒಪ್ಪಂದ ಮಾಡಿಕೊಳ್ಳುವಾಗಲೇ ಒಂದು ರೀತಿ, ನೋಂದಣಿ ಮಾಡಿಕೊಳ್ಳುವಾಗಲೇ ಇನ್ನೊಂದು ರೀತಿ, ಮನೆ ಸಿಕ್ಕ ಮೇಲೆಯೇ ಮತ್ತೊಂದು ರೀತಿಯಾಗಿ ಬದಲಾವಣೆ ಆಗುವುದು ನೋಡಿ ನನಗೆ ಬೇಸರವಾಗಿದೆ. ಅಪಾರ್‌ಮೆಂಟ್ ಅಸೋಸಿಯೇಷನ್ ಅಲ್ಲಿ ಒಂದಿಬ್ಬರು ತಕರಾರು ಗಿರಾಕಿಗಳು ಸೇರಿಕೊಂಡು ತೊಂದರೆ ತೊಡಕುಗಳನ್ನು ನೀಡುವುದೇ ಅವರ ಕೆಲಸವಾಗುತ್ತದೆ. ಉದಾಹರಣೆಗೆ ನನ್ನ ಅಪಾರ್ಟ್ ಮೆಂಟ್ ಅಲ್ಲಿ ನನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳುವ ಮೊದಲೇ ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ಅಲ್ಲಿ ಹಾಕಿದ್ದರು. ಬೆನ್ನಿಗಾನಹಳ್ಳಿಯಲ್ಲೂ ಇದೇ ರೀತಿ ನನಗೆ ಮಾಡಿದ್ದರು. ಒಳಗೆ ನನ್ನನ್ನ ಬಿಡುವುದಿಲ್ಲ ಎಂದು ಹೇಳಿದ್ದರು. ಇಂತಹ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು ಇಲ್ಲಿವೆ” ಎಂದರು.

“ಪ್ರೀತಿ, ವಿಶ್ವಾಸ, ನಂಬಿಕೆಯಿಂದ ನಮ್ಮ ಮೇಲಿನ ಅಭಿಮಾನದಿಂದ ಜನರು ಸೇರಿದ್ದಾರೆ. ಕಳೆದ ಬಾರಿ ಒಬ್ಬರು ನನಗೆ ಹೇಳಿದ್ದರು. ನೀವು ಒಂದಷ್ಟು ನಿಯಮಗಳನ್ನು ನೀವು ಮಾಡದೇ ಇದ್ದರೇ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ದಿ ಕಲಿಸುತ್ತೇವೆ ಎಂದಿದ್ದರು. ಬುದ್ದಿ ಕಲಿಸೋದು ಎಂದರೆ ಏನು? ಜನರಿಗೆ ಸಹಾಯ ಮಾಡಬೇಕು ಎಂದು ಭಗವಂತ ನಮಗೆ ಈ ಅವಕಾಶ ನೀಡಿದ್ದಾನೆ. ನಮ್ಮ ಪಕ್ಷ ಅವಕಾಶ ನೀಡಿದೆ.‌ ಅದಕ್ಕೆ ನಾನು ಎಂದಿಗೂ ನಕಾರಾತ್ಮಕ ಅಂಶಗಳ ಬಗ್ಗೆ ಗಮನವನ್ನೇ ನೀಡುವುದಿಲ್ಲ. ಧನಾತ್ಮಕ ಚಿಂತನೆಗಳೇ ನನ್ನ ಶಕ್ತಿ” ಎಂದರು.

“ಜನರು ಕಷ್ಟಪಟ್ಟು ತಮ್ಮ ಉಳಿತಾಯ ಸೇರಿಸಿ ತಲೆ ಮೇಲೆ ಸೂರು ಮಾಡಿಕೊಂಡಿರುತ್ತಾರೆ. ಜೀವನದಲ್ಲಿ ಎಷ್ಟೋ ಜನಕ್ಕೆ ಈ ಅವಕಾಶ ಸಿಗುವುದಿಲ್ಲ. ಬೇರೆ, ಬೇರೆ ನಗರಗಳಲ್ಲಿ ಇರುವ ಜನ ತಮ್ಮ ಆಸ್ತಿಗಳನ್ನು ಮಾರಿಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳು ರಾಜಕೀಯವಾಗಿ ಒಂದಷ್ಟು ವಿರೋಧಾಭಾಸ ಉಂಟಾಗಿ ಆಗಾಗ್ಗೆ ಹೆಚ್ಚು‌ ಕಡಿಮೆ ಮಾಡುತ್ತೀರಿ. ಆದರೂ ನಿಮ್ಮ ಬಗ್ಗೆ ನನಗೆ ನಂಬಿಕೆಯಿದೆ. ಜನರ ತೊಂದರೆಗಳನ್ನು ನಿವಾರಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಹೊರತು ವೈಯಕ್ತಿಕ ಅಭಿಲಾಷೆಗಳಿಗಾಗಿ ಅಲ್ಲ” ಎಂದು ಹೇಳಿದರು.

“ಕಷ್ಟಪಟ್ಟು ನೀವು ಗಳಿಸಿದ ಆಸ್ತಿ ನಿಮಗೇ ಸೇರಬೇಕು ಎಂದು ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮ ಹಾಗೂ ಆಸ್ತಿಯ ಪೋಟೋ ಸಮೇತ ಇ ಖಾತೆ ನೀಡುವ ಅತ್ಯುತ್ತಮ ಯೋಜನೆಯನ್ನು ನಾವು ನೀಡಿದ್ದೇವೆ. ಇಡೀ ದೇಶದಲ್ಲಿಯೇ ಅತ್ಯುತ್ತಮ ಯೋಜನೆ ಇದಾಗಿದೆ. ದೇಶದ ಯಾವುದೇ ನಗರದಲ್ಲಿ ಇಂತಹ ಯೋಜನೆ ಇದೆಯೇ ಎಂದು ನಿಮ್ಮ ಸ್ನೇಹಿತರನ್ನು ಕೇಳಿನೋಡಿ” ಎಂದರು.

ಎಸ್ ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ

“ಎಲ್ಲಾ ಅಸೋಸಿಯೇಷನ್ ಗಳು ಎಸ್ ಟಿಪಿ ಬಗ್ಗೆ ಗಮನ ಹರಿಸಬೇಕು. ಅಪಾರ್ಟ್ ಮೆಂಟ್ ಗಲ್ಲಿ STP, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸರ್ಕಾರ ಸುಧಾರಣೆಗಳನ್ನು ತಂದಿದೆ. ಅಂತರ್ಜಲ ವೃದ್ಧಿ, ಕಾವೇರಿ 5 ನೇ ಹಂತಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ತರಲು ಸಾಕಷ್ಟು ಶ್ರಮವಹಿಸಿದೆ. ಅನೇಕರಿಗೆ ಕಂತುಗಳ ಮೂಲಕ ಹಣ ನೀಡಿ ನೀರಿನ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿದೆ. ಕೆಲವು ಡೆವಲಪರ್ ಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಅವರೊಂದಿಗೂ ಮಾತನಾಡಿ ದಾಖಲಾತಿಗಳ ವರ್ಗಾವಣೆ ಸರಾಗವಾಗಿ ಆಗಬೇಕೆಂದು ಸೂಚಿಸಲಾಗುವುದು. ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ” ಎಂದರು.

“ಒಂದಷ್ಟು ಡೆವಲಪರ್ ಗಳು ದಾರಿ ತಪ್ಪಿಸುತ್ತಾರೆ, ಸರಿಯಾದ ದಾಖಲೆ ನೀಡುವುದಿಲ್ಲ. ಇಡೀ ಆಸ್ತಿಯನ್ನು ಅಡವಿಟ್ಟು ಸಾಲ ಮಾಡಿರುತ್ತಾರೆ. ಆಗ ಬ್ಯಾಂಕ್ ನವರು ನಿಮ್ಮ ಸುಪರ್ದಿಗೆ ಮನೆ ಫ್ಲಾಟ್ ನೀಡುವುದಿಲ್ಲ‌” ಎಂದರು.

ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ

“ಈಸ್ ಆಫ್ ಬಿಸಿನೆಸ್ ಗಾಗಿ ನಗರದಲ್ಲಿ ಐದು ಕಾರ್ಪೊರೇಷನ್ ಗಳನ್ನು ರಚಿಸಲಾಗಿದ್ದು, ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಬಳಿ, ಅಕ್ಕಪಕ್ಕದ ಅಪಾರ್ಟ್ ಮೆಂಟ್ ಗಳ ಸಮಸ್ಯೆಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ. ವ್ಯಾಜ್ಯಗಳಿಗೆ ಹೋಗದೆ ಬಗೆಹರಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ ಎಂದರು. ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು. ಟೀಂ ಕರ್ನಾಟಕವಾಗಿ ನಾವೆಲ್ಲ ಕೆಲಸ ಮಾಡಬೇಕೆಂದು” ಕರೆ ನೀಡಿದರು.

ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವಿಗೆ ಸರ್ಕಾರ ಬದ್ಧ

“ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ನಿಮ್ಮ ದನಿಯೇ ಸರ್ಕಾರದ ದನಿ” ಎಂದು ಹೇಳಿದರು.

ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು

“ನಗರದಲ್ಲಿ ಹೈ ರೈಸ್ ಕಟ್ಟಡಗಳ ಬಗ್ಗೆ ಗಮನಹರಿಸಿ, ರಸ್ತೆಗಳನ್ನು ವಿಸ್ತರಿಸುವ ಬಗ್ಗೆ ಒತ್ತು ನೀಡಲಾಗುತ್ತಿದೆ . ನಗರದಲ್ಲಿ 132 ಕಿಮೀ ಪೆರಿಫೆರಲ್ ವರ್ತುಲ ರಸ್ತೆ,(ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಾಣವಾಗುತ್ತಿದೆ ಎಂದರು. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಭೂ ಸ್ವಾಧೀನಕ್ಕೆ ರಾಜ್ಯದಲ್ಲಿ ರೈತರಿಗೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡಲಾಗುತ್ತಿದೆ” ಎಂದು ಹೇಳಿದರು.

“ಕಾನೂನಾತ್ಮಕ ಸಲಹೆಗಳನ್ನು ನೀಡಿ ಅದರಂತೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಪ್ಲೋರ್ ವೈಜ್ ಪ್ರಿಮಿಯಂ ಎಫ್ ಎಆರ್ ನೀಡುವುದನ್ನು ಪ್ರಾರಂಭ ಮಾಡಿದೆ. ಟಿಡಿಆರ್ ಸಹ ನೀಡಲಾಯಿತು. ಯಾರೋ ಒಂದಿಬ್ಬರು ಬೋಗಸ್ ಪ್ರೀಮಿಯಂ ಎಫ್ ಎಆರ್ ಇಟ್ಟುಕೊಂಡು ಇದರ ವಿರುದ್ಧ ನ್ಯಾಯಾಲಯಕ್ಕೆ ತೆರಳಿ ಒಂದು ವರ್ಷ ನಿಲ್ಲಿಸಿಬಿಟ್ಟರು. ಕೆಲವರೆಲ್ಲಾ ಕಟ್ಟಡ ಕಟ್ಟಲು ಅಡಚಣೆ ಉಂಟಾಯಿತು. ಆನಂತರ ನ್ಯಾಯಾಲಯ‌ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ನಮ್ಮ ಪರವಾಗಿ ತೀರ್ಪು ನೀಡಿತು‌. ಜೊತೆಗೆ ಅನುಮತಿ ನೀಡಿತು. ದೊಡ್ಡ ರಸ್ತೆ ಇರುವ ಕಡೆ ಎತ್ತರದ ಕಟ್ಟಡ ಕಟ್ಟಬಹುದು. ಸಣ್ಣ ರಸ್ತೆ ಇರುವ ಕಡೆ ಕಟ್ಟಲು ಆಗುವುದಿಲ್ಲ. ಭೂಮಿ ಬೆಲೆ ಕಡಿಮೆ ಆಗಬೇಕು ಎಂಬುದು ನನ್ನ ಆಸೆ” ಎಂದರು.

ಬೆಂಗಳೂರು ಭಾರತದ ಹೃದಯ

“ದಾವೋಸ್ ಗೆ ತೆರಳಿದಾಗ ಎಲ್ಲಾ ಉದ್ಯಮಿಗಳು ನನ್ನನ್ನೇ ಹುಡುಕಿಕೊಂಡು ಬಂದು ಮಾತನಾಡಿಸುತ್ತಿದ್ದರು. ಆಗ ಮಹಾರಾಷ್ಟ್ರದವರು ಏಕೆ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದ್ದಾರೆ ಎಂದು ಕೇಳಿದರು. ಆಗ ನಾನು ಬೇರೆ ದೇಶದವರನ್ನು ಏಕೆ ನಮ್ಮ ಬಗ್ಗೆ ನಿಮಗೆ ಆಸಕ್ತಿ ಎಂದು ಕೇಳಿದಾಗ, “ಬೆಂಗಳೂರಲ್ಲಿ 1 ಡಾಲರ್ ವೆಚ್ಚಕ್ಕೆ ಮುಂಬೈನಲ್ಲಿ ಮೂರುವರೆ ಡಾಲರ್ ಗೆ ಸಮ. ಅಷ್ಟು ವೆಚ್ಚ ಹೆಚ್ಚಳವಾಗಿದೆ ಅಲ್ಲಿ. ಬೆಂಗಳೂರಿನಲ್ಲಿ 2 ಕೋಟಿಗೆ ಒಂದು ಮನೆ ದೊರೆಯಲಿದೆ. ಆದೇ ಮುಂಬೈನಲ್ಲಿ 20 ಕೋಟಿ ವೆಚ್ಚ ಮಾಡಬೇಕಿದೆ. ಅದಕ್ಕೆ ಎಲ್ಲರೂ ಬೆಂಗಳೂರನ್ನು ಮೊದಲ ಆಯ್ಕೆಯನ್ನಾಗಿ ನೋಡುತ್ತಿದ್ದಾರೆ. ಅಂತರರಾಷ್ಟ್ರೀಯ ನಾಯಕರೂ ಬೆಂಗಳೂರನ್ನು ಮೆಚ್ಚುತ್ತಿದ್ದಾರೆ. ಇಲ್ಲಿನ ಶಿಕ್ಷಣ ಗುಣಮಟ್ಟವೂ ಚೆನ್ನಾಗಿದೆ” ಎಂದರು.

“ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ‌‌ ಸರ್ಕಾರ ಮುಂದಾಗಿದೆ. ಅದಕ್ಕೆ ಸೂಕ್ತ ಸ್ಥಳ ಹುಡುಕಲಾಗುತ್ತಿದೆ. ಬೆಂಗಳೂರು ನಿಮ್ಮೆಲ್ಲರ ಹೃದಯದಂತಿದೆ. ಜೊತೆಗೆ ಭಾರತದ ಹೃದಯದಂತೆ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Aerticle ಚಿನ್ನಕ್ಕಿಂತಲೂ ಚೆನ್ನ, ಚನ್ನಪ್ಪಯ್ಯ ಅವಧೂತರು ...

Klive Special Aerticle ದಾವಣಗೆರೆಯ ಸಮೀಪದ ಆನಗೋಡಿನಿಂದ ಸುಮಾರು 3 ಕಿ.ಮೀ...

ವಾಡಿಕೆಗಿಂತ ಕಡಿಮೆ ಮಳೆ ರೈತರು ಕೃಷಿ ಇಲಾಖೆ ಸೂಚಿಸಿದ ವ್ಯವಸಾಯ ಪದ್ಧತಿ ಅನುಸರಿಸಿ : ಗಿರಿಜಾ ಪಟ್ಟಣಶೆಟ್ಟಿ

ಶಿವಮೊಗ್ಗ ತಾಲ್ಲೂಕಿನಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿರುವುದಲ್ಲದೇ,...