ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನರಿಗೆ ಹಾಗೂ ಪ್ರವಾಸಿಗರಿಗೆ ಸಂತಸದ ಸುದ್ದಿ. ಲಿಂಗನಮಕ್ಕಿ ಡ್ಯಾಂ ಹಿನ್ನೀರಿನ ಮಟ್ಟ ಕುಸಿತದಿಂದ ಸ್ಥಗಿತಗೊಂಡಿದ್ದ ಮುಪ್ಪಾನೆ ಲಾಂಚ್ ಸೇವೆ ಇಂದಿನಿಂದ ಮತ್ತೆ ಪುನರಾರಂಭವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಪ್ಪಾನೆ ಕಡವಿನಲ್ಲಿ ಇಂದಿನಿಂದ ಲಾಂಚ್ ಸೇವೆ ಮತ್ತೆ ಆರಂಭವಾಗಿದೆ.
ಲಿಂಗನಮಕ್ಕಿ ಡ್ಯಾಂ ಹಿನ್ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದ್ದ ಕಾರಣ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಕೆಲ ದಿನಗಳ ಹಿಂದೆ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸಿತ್ತು.
ಜೋಗ ಜಲಪಾತ ಹಾಗೂ ಸಿಗಂದೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಮುಪ್ಪಾನೆ ಲಾಂಚ್, ಕರೂರು ಮತ್ತು ಭಾರಂಗಿ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅತ್ಯಂತ ಅನುಕೂಲಕರ ಮಾರ್ಗವಾಗಿದೆ.
ಅಲ್ಲದೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇದೇ ಮಾರ್ಗವನ್ನು ಬಳಸುತ್ತಾರೆ.
ಇತ್ತೀಚೆಗೆ ಸುರಿದ ಮಳೆಯಿಂದ ಲಿಂಗನಮಕ್ಕಿ ಡ್ಯಾಂ ಹಿನ್ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಲಾಂಚ್ ಸಂಚಾರಕ್ಕೆ ಅಗತ್ಯವಿರುವಷ್ಟು ನೀರು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಎಂದಿನಂತೆ ಲಾಂಚ್ ಸೇವೆಯನ್ನು ಪುನರಾರಂಭಿಸಲಾಗಿದೆ.
ಮುಪ್ಪಾನೆ ಲಾಂಚ್ ಸೇವೆ ಪುನರಾರಂಭವಾಗಿರುವ ಕುರಿತು ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಅಧಿಕೃತವಾಗಿ ಮಾಹಿತಿ ನೀಡಿದೆ.
