ಸಮರ್ಪಕವಾಗಿ ಮಳೆಯಾಗದೇ ರೈತ ಸಮುದಾಯ ನಲುಗಿ ಹೋಗಿದ್ದು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಬೇಕು ಎಂದು ರೈತಪರ ಹೋರಾಟಗಾರ ಜೆ.ಬಿ. ವೀರಭದ್ರಪ್ಪ ಹಾಲಗಳಲೆ ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳ ಎರಡು ಹಾಗೂ ಮೂರನೇ ವಾರದಲ್ಲಿ ಮುಂಗಾರು ಮಳೆ ಸ್ವಲ್ಪ ಪ್ರಮಾಣದಲ್ಲಿ ಆಗಿದ್ದು, ಆ ಸಮಯದಲ್ಲಿ ರೈತರು ಬೀಜ, ಗೊಬ್ಬರಗಳನ್ನು ಸಾಲ ಮಾಡಿ ತಂದು ಬಿತ್ತನೆ ಮಾಡಿರುತ್ತಾರೆ. ಬಿತ್ತನೆ ಮಾಡಿ ಆರು ವಾರಗಳು ಕಳೆದರೂ ಸಮರ್ಪಕವಾಗಿ ಮಳೆಯಾಗದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಸಂಕಷ್ಟದಲ್ಲಿರುವಾಗ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದಿದ್ದಾರೆ.
ಬೀಜ ಗೊಬ್ಬರದ ಬೆಲೆಯೂ ಸಹ ಹೆಚ್ಚಿಗೆಯಾಗಿದೆ. ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಜಲ ಮೂಲಗಳಲ್ಲಿ ನೀರಿಲ್ಲದೇ ಜನ -ಜಾನುವಾರು ಪರದಾಡುವಂತಾಗಿದೆ. ಕೆರೆ ಕಟ್ಟೆಗಳು ಬಿರಿದಾಗಿದೆ. ಇಂತಹ ಸ್ಥಿತಿಯಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಸೂಕ್ತಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತ ಸಮೂಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
