ಜಗಜ್ಯೋತಿ ಶ್ರೀ ಬಸವೇಶ್ವರರ ಸಮಾನತೆಯ ಸಂದೇಶವನ್ನು ವಿಶ್ವದಾದ್ಯಂತ ಹರಡುವ ಮಹತ್ತರ ಉದ್ದೇಶದೊಂದಿಗೆ, ಯುರೋಪಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಬಸವಭಕ್ತರು ಒಂದಾಗಿ ಮತ್ತೊಮ್ಮೆ ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.
ಬಸವ ಸಮಿತಿ ಯುರೋಪ್ ವತಿಯಿಂದ ಎರಡನೇ ಬಸವ ಜಯಂತಿ ಸಮಾವೇಶವನ್ನು 2026ರ ಮೇ 16ರಂದು ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಯೋಜಿಸಲಾಗಿದೆ.
ಮೇ 16ರಂದು ಬೆಳಗ್ಗೆ 9.30ರಿಂದ ಎರ್ಲಾಂಗನ್ನ ಫ್ರೌನಾರಾಚ್ ಸಮುದಾಯ ಕೇಂದ್ರದಲ್ಲಿ ಬಸವ ಜಯಂತಿ ಸಮಾವೇಶ ನಡೆಯಲಿದೆ. ಐತಿಹಾಸಿಕ ಸಮಾರಂಭಕ್ಕೆ ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಭಾರತದ ರಾಯಭಾರಿ ಅಜಿತ್ ವಿನಾಯಕ್ ಗುಪ್ತೆ, ಭಾರತ ಶಾಸ್ತ್ರಜ್ಞ ಪ್ರೊ. ಡಾ. ರಾಬರ್ಟ್ ಜೆ. ಝೈಡೆನ್ಬೋಸ್, ವಿಶ್ವ ಹಿಂದೂ ಪರಿಷತ್ ಯುರೋಪ್ ಪ್ರತಿನಿಧಿ ರಾಹುಲ್ ನಾರಾಯಣ್ ಜಿ., ಚಿಕ್ಕಮಗಳೂರು ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ ಉಪಸ್ಥಿತರಿರುವರು.
ಬೆಳಿಗ್ಗೆ 09.30ಕ್ಕೆ ಪ್ರಾರಂಭವಾಗುವ ಸಮಾರಂಭದಲ್ಲಿ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ, ಕಲಾತಂಡಗಳ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ದಾಸೋಹ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಂದ ವಚನ ವಾಚನ, ವಚನ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿವೆ. ವಿಶೇಷ ಆಕರ್ಷಣೆಯಾಗಿ ತಂಡಗಳಿಂದ ವಚನ ಗಾಯನ ಮತ್ತು ಸಂಗೀತ ಸಂಜೆ ಏರ್ಪಡಿಸಲಾಗಿದೆ.
ಮೇ 16ಕ್ಕೆ ಯುರೋಪಿನಲ್ಲಿ ಬಸವ ಜಯಂತಿ ಸಮಾವೇಶ
Date:
