ಪ್ರವಾಸಿಗರಿಗೆ, ವಾಹನ ಸವಾರರಿಗೆ ನಿಗದಿತ ಸ್ಥಳ ತಲುಪಲು ಮಾರ್ಗಸೂಚಿ ಫಲಕಗಳು ಸಾಕಷ್ಟು ಸಹಾಯ ಮಾಡುತ್ತವೆ, ಆದರೆ, ಪಟ್ಟಣದ ಆಯಕಟ್ಟಿನ ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳು ಇಲ್ಲದೇ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದೆ.
ಪಟ್ಟಣದ ಪುರಸಭೆ ಮುಂಭಾಗದ ವೃತ್ತ, ಆನವಟ್ಟಿ ರಸ್ತೆಯ ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಹೊಸಬಾಳೆ ರಸ್ತೆಯ ಶ್ರೀ ಸ್ವಾಮೀ ವಿವೇಕಾನಂದ ವೃತ್ತ, ತೋಗರ್ಸಿ ರಸ್ತೆಯ ಬಂಗಾರಧಾಮದ ಬಳಿ ಮಾರ್ಗಸೂಚಿ ಫಲಕಗಳು ಇಲ್ಲದೇ ವಾಹನಸವಾರರು ಹಾದಿಹೋಕರನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕು ಕೇಂದ್ರವಾದ ಪಟ್ಟಣದಿಂದ ಶಿರಾಳಕೊಪ್ಪ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಆನವಟ್ಟಿ, ಹುಬ್ಬಳ್ಳಿ, ಬನವಾಸಿ, ಶಿರಸಿ, ಕುಮಟಾ, ಸಾಗರ, ಪ್ರವಾಸಿ ಸ್ಥಳಗಳಾದ ಸಿಗಂದೂರು, ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಸಂಪರ್ಕ ಲಭಿಸುತ್ತದೆ. ಆದರೆ, ಸಮರ್ಪಕವಾದ ಮಾರ್ಗಸೂಚಿ ಫಲಕಗಳು ಇಲ್ಲದೇ ಇರುವುದರಿಂದ ದೂರದ ಊರಿಂದ ಆಗಮಿಸುವ ವಾಹನ ಸವಾರರಿಗೆ ಮಾರ್ಗ ತಿಳಿಯದಂತಾಗಿದ್ದು, ರಸ್ತೆ ಬದಿಯಲ್ಲಿನ ಹಾದಿ ಹೋಕರಿಂದ ನಿಗದಿತ ಸ್ಥಳ ತಲುಪಲು ಮಾಹಿತಿ ಪಡೆಯುವಂತಾಗಿದೆ. ಅಲ್ಲದೇ, ರಾಜ್ಯದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಅನಾನಸ್ ಬೆಳೆಯನ್ನು ತಾಲೂಕಿನಲ್ಲಿ ಬೆಳೆಯಲಾಗುತ್ತದೆ. ಸಗಟು ಲಾರಿಗಳು ಮುಂಬೈ, ದೆಹಲಿಗೆ ಸಂಚರಿಸುತ್ತವೆ. ಅವರಿಗೂ ಸಹ ಮಾರ್ಗಸೂಚಿ ಫಲಕಗಳಿಲ್ಲದಿರುವುದು ಗೊಂದಲಕ್ಕೆ ಎಡೆಮಾಡಿಕೊಡುತ್ತಿದೆ. ಅಧುನಿಕತೆಯ ಜ್ಞಾನ ಉಳ್ಳವರು ಗೂಗಲ್ ಮ್ಯಾಪ್ ಮೊರೆ ಹೋಗುತ್ತಾರೆ. ಆದರೆ, ಅದರ ಅರಿವಿಲ್ಲದವರಿಗೆ ತೀವ್ರ ಸಮಸ್ಯೆ ಭಾದಿಸುತ್ತಿದೆ.
ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣುವಂತೆ, ಗಾಳಿ-ಮಳೆಗೆ ಭಾಗದಂತೆ ಬಲವಾದ ಕಂಬಗಳ ಮೂಲಕ ಅಳವಡಿಸಬೇಕು. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತಕೊಂಡು ಪ್ರಮುಖ ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳನ್ನು ಹಾಕುವ ಮೂಲಕ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.
ಬಾಕ್ಸ್:
ಸೊರಬ ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ಪಟ್ಟಣದಿಂದ ಹಲವು ಜಿಲ್ಲೆಗಳಿಗೆ ಹಾಗೂ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ದೊರೆಯುತ್ತದೆ. ಆದರೆ, ಪ್ರಮುಖ ವೃತ್ತಗಳಲ್ಲಿ ಮಾರ್ಗಸೂಚಿ ಫಲಕಗಳು ಇಲ್ಲದೇ ಇರುವುದು ವಾಹನ ಸವಾರರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಪಿಡಬ್ಲ್ಯುಡಿ ಇಲಾಖೆ ಅಥವಾ ಪುರಸಭೆಯಿಂದ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು.
ಜೆ.ಎಸ್. ಚಿದಾನಂದಗೌಡ, ಅಧ್ಯಕ್ಷರು, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಸೊರಬ.
