Klive Special Article ತಳಿ’ ನಾಟಕ ಆರಂಭವಾಗುತ್ತಿದೆ ಒಂದು ಮೌನ ಎಲ್ಲರನ್ನು ಆವರಿಸಿ ನಿಶ್ಯಬ್ಧ ವಾತಾವರಣ ಉಂಟಾಯಿತು. ಆ ಸ್ಥಿತಿ ನಾಟಕ ಮುಗಿದ ಮೇಲೆ ಹಾಗೆ ಇತ್ತು. ಪ್ರತಿ ಪೀಳಿಗೆಗೂ ಹೊಸತನ್ನು ಹುಟ್ಟುಹಾಕುವ ತವಕ, ಆ ಸಂಭ್ರಮ ಹಳೆಯದನ್ನು ನಾಶಮಾಡುತ್ತದೆ. ಈ ಹೊತ್ತಿನಲ್ಲಿ ಆರಾಜಾಕತೆಗೆ ಅವಕಾಶ ನೀಡದೇ ಎಲ್ಲವನ್ನೂ ಕಟ್ಟಿಕೊಡುವಂತಹ ವಿರಳತೆಯ ತಳಿ ಇರಬೇಕು. ನಾಶದ ಮನಸ್ಥಿತಿಯ ಸ್ಥಳ ಯಥೇಚ್ಛವಾಗಿದ್ದರೂ ಅದಕ್ಕೊಂದು ಅಂತ್ಯ ನೀಡಲೇಬೇಕೆನ್ನುವುದನ್ನು ನಿರ್ದೇಶಕರಾದ ಸೇತುರಾಮ್ ಅವರು ಬಹು ಸಮರ್ಥವಾಗಿ ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿ ಬರುವ ಡೈಲಾಗ್ಗಳಂತೂ ನಮ್ಮ ಸುತ್ತಮುತ್ತಲಿನ ಯಾವದೋ ಒಂದು ವ್ಯಕ್ತಿತ್ವವನ್ನು ಪರಿಚಯಿಸುತ್ತಲೇ ಇರುವಂತಿತ್ತು. ಪುಂಖಾನು ಪುಂಖವಾಗಿ ನಟರಾಡುವ ಮಾತಿಗೆ ಪ್ರೇಕ್ಷಕ ಅಕ್ಷರಶಃ ಮೂಕವಿಸ್ಮಿತನಾಗಿದ್ದ. ಇಂತಹ ಒಂದು ಅತ್ಯದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದು ಅಜಯ ಸಂಸ್ಕೃತಿ ಬಳಗದವರು ಕುವೆಂಪುರಂಗ ಮಂದಿರದಲ್ಲಿ ಆಯೋಜಿಸಿದ ಸೇತುರಾಮ್ ನಿರ್ದೇಶನದ “ತಳಿ” ಎನ್ನುವ ನಾಟಕ.
ಈ ನಾಟಕ ಯಾವುದೇ ಪೂರ್ವಗ್ರಹವಿಲ್ಲದೆ ನೋಡಬೇಕು ಅದು ನಮ್ಮೆಲ್ಲರನ್ನು ತನ್ನೊಳಗೆ ಆಪೋಷಣೆ ತೆಗೆದುಕೊಂಡು ಬಿಡುವಂತೆ ಮಾಡುವ, ವೈಚಾರಿಕತೆಯ ನಿಲುವಿನಲ್ಲೇ ಭಾವನೆಗಳನ್ನು ಬಿಚ್ಚಿಡುವ ಒಂದು ಸುಂದರವಾದ ಸೃಷ್ಟಿಯಾಗಿತ್ತು. ಅಲ್ಲಿನ ಪ್ರತಿಯೊಂದು ಸಂಭಾಷಣೆ ನಮ್ಮನ್ನು ಯೋಚನಾಲಹರಿಗೆ ತಳ್ಳುತ್ತಿತ್ತು. ಯೋಚಿಸಿ ಅರ್ಥವಾಗುವಷ್ಟರಲ್ಲಿ ಅಬ್ಬ! ಎನ್ನುವ ಉದ್ಗಾರವಾಕ್ಯ ತಂತಾನೆ ಬರುವಂತಿತ್ತು. ಸೇತುರಾಮ್ ಅವರ ನಾಟಕಗಳೇ ಹಾಗೆ ನಮ್ಮಲ್ಲಿ ಒಂದು ಸಂಚಲನ ಸೃಷ್ಟಿ ಮಾಡುವ ಶಕ್ತಿ ಹೊಂದಿರುವಂಥದ್ದು.
ಈ ನಾಟಕದಲ್ಲಿನ ಪ್ರತಿಯೊಬ್ಬನ ನಟನೆಯೂ ಶ್ಲಾಘಿಸುವುದಕ್ಕೆ ಯೋಗ್ಯವೇ. ಇರುವ ನಾಲ್ಕೇ ಪಾತ್ರ ನಮ್ಮೆಲ್ಲರನ್ನು ಭಾವ ಲೋಕದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಯಿತು. ನಿರರ್ಗಳವಾಗಿ ಪ್ರತಿ ನಟನು ಆಡುತ್ತಿದ್ದ ಮಾತುಗಳಂತೂ ನಮ್ಮಗಳ ನಡುವೆಯೇ ನಡೆಯುವ ಸಂಭಾಷಣೆ ಎನಿಸುವಷ್ಟು ಆಪ್ತವಾಗಿತ್ತು. ಒಂದು ಹೆಣ್ಣು ಪ್ರಕೃತಿಯ ಸಂಕೇತವಾಗಿ ಆಕೆ ಸೃಷ್ಟಿ. ಸಹನೆಯ ಪ್ರತಿರೂಪವಾದ ಆಕೆ ಸಿಡಿದೆಳಲೂಬಹುದು. ಆಕೆಯ ಸ್ವಭಾವವೇ ಅವಳಿಗೆ ಬಲಹೀನತೆ ಆದರೆ, ಅದರಿಂದಲೇ ಆಕೆ ಗಟ್ಟಿಗಿತ್ತಿಯೂ ಆಗುವಳು ಎನ್ನುವುದನ್ನು ಬಹಳ ಚೆನ್ನಾಗಿ ಈ ನಾಟಕದಲ್ಲಿ ತೋರಿಸಿದ್ದಾರೆ.
ಸೇತುರಾಮ್ ಅವರ ಅಭಿನಯದ ಕುರಿತಾಗಿ ಮಾತೇ ಇಲ್ಲ. ಅಷ್ಟು ಅದ್ಭುತವಾದ ನಟನೆ. ಅವರ ಸಂಭಾಷಣೆ, ಹಾವ, ಭಾವ, ನಟನಾ ಚಾತುರ್ಯ ಎಲ್ಲದರಲ್ಲೂ ಮೇಲ್ಪಂಕ್ತಿಯವರೇ. ಹಾಗಾಗಿ ಕಥೆಯ ಸೊಗಸು ಹೆಚ್ಚಲು ಅವರ ಪಾತ್ರವಂತು ಮೊದಲಿನ ಸಾಲಿನಲ್ಲಿ ನಿಂತಿದೆ. ಪತ್ನಿಯ ಪಾತ್ರ ಮಾಡಿದ ಪರಿಣಾಮ ಕೂಡ ಬಹಳ ಚೆನ್ನಾಗಿ ಅಭಿನಯಿಸಿದರು. ರಂಗದ ಆಚೆಗೆ ಅವರು ನೋಡಿದರೆ ತಮ್ಮ ವಯಸ್ಸಿಗೂ ಮೀರಿದ ಪಾತ್ರವನ್ನು ಬಹಳ ಸಮರ್ಥವಾಗಿ ನಿರ್ವಹಿಸಿದರು. ಇನ್ನು ಕಾವಲು ಕಾಯುವ ಬೇಲಿಯ ಹಾಗೆ ತಾನೇ ಅಂದುಕೊಂಡು ತಮಗೆ ನೀಡಿದ ಪಾತ್ರವನ್ನು ಶ್ರೀಪತಿಯವರು ಸಹ ಬಹಳ ಚೆನ್ನಾಗಿ ಅಭಿನಯಿಸಿದರು ಅನ್ನುವುದಕ್ಕಿಂತ ಆ ಪಾತ್ರವು ಏನು ಕೇಳುತ್ತದೆ ಅದನ್ನು ಸರಿಯಾಗಿ ನೀಡಿದರು. ಇಲ್ಲಿ ಬರುವ ಅದ್ಭುತ ಎನಿಸಿದ ಇನ್ನೊಂದು ಪಾತ್ರವೆಂದರೆ ಮಗಳದ್ದು, ಆ ಪಾತ್ರದಲ್ಲಿ ಸೌಮ್ಯ ಭಾಗವತ್ ಅಂತೂ ಸೇತುರಾಮ ಅವರ ಸರಿ ಸಮಕ್ಕೆ ನಿಂತು ಅಭಿನಯಿಸಿದರೆಂದರೆ ತಪ್ಪಾಗಲಾರದು. ತನಗೆ ಇದ್ದ ಪರಿಧಿಯಲ್ಲಿ ಅದ್ಭುತವಾದ ನಟನೆ ಮಾಡಿ ನೋಡುಗರ ಮನಸ್ಸನ್ನು ಮುದಗೊಳಿಸಿದರು. ಆಕೆಯ ಪಾತ್ರವೇ ಹಾಗೆ ಅಲ್ಲಿ ಗಟ್ಟಿತನದ್ದು, ನಿರರ್ಗಳವಾದ ಸಂಭಾಷಣೆಯಲ್ಲಿ ಆಕೆ ತೋರಿದ ಭಾವಾಭಿನಯ ಸಹೃದಯರ ಹೃದಯ ಗೆದ್ದಿತು. ತಮ್ಮ ರಚನೆ, ತಮ್ಮದೇ ನಿರ್ದೇಶನದಲ್ಲಿ ಸೇತುರಾಮ್ ಗೆದ್ದರೆ, ಸೌಮ್ಯ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿ ಗೆದ್ದಿದ್ದಾರೆ.
Klive Special Article ಒಟ್ಟಿನಲ್ಲಿ ಹೇಳಬೇಕೆಂದರೆ ರಂಗಮಂದಿರದ ಹೊರಗೆ ಮಿಂಚು ಗುಡುಗುಗಳ ಆರ್ಭಟವಾದರೆ, ಒಳಗೆ ಸಂಭಾಷಣೆಗಳ ಆರ್ಭಟ. ಇದಕ್ಕೆ ಸೋತು ಪ್ರೇಕ್ಷಕ ಸುಮ್ಮನೆ ಕಣ್ಣು ಬೆಳಕಿಸುತ್ತಾ ನಡೆ ನಡುವೆ ತಿಳಿ ಹಾಸ್ಯವನ್ನು ಆಸ್ವಾದಿಸುತ್ತ, ನಾಟಕದಲ್ಲಿನ ರಸಗಳಿಗೆ ತಾನು ಮೈಮರೆತು ಆಹ್ಲಾದಿಸುತ್ತಾ ಕುಳಿತುಬಿಟ್ಟಿದ್ದ. ಮಿಂಚು ಗುಡುಗು ಸಹಿತವಾಗಿ ಧೋ ಎಂದು ಮಳೆ ಸುರಿದು ಎಳೆ ತಂಪಾದ ಹಾಗೆ ರಂಗಮಂದಿರದ ಒಳಗಿದ್ದ ಪ್ರೇಕ್ಷಕನೂ ಸುಮ್ಮನಿದ್ದು ಎಲ್ಲವನ್ನೂ ತನ್ನ ಸುತ್ತುಮುತ್ತಲೆ ಅನುಭವಿಸುತ್ತಿರುವಂತದ್ದೇನು ಎನ್ನುವ ರೀತಿಯಲ್ಲಿ ಆಸ್ವಾದಿಸುತ್ತಿದ್ದ. ನಟರು ಗೆಲ್ಲುವುದು ಸಹೃದಯ ಪ್ರೇಕ್ಷಕರು ಅಸ್ವಾದಿಸಿದಾಗ ಅದರಂತೆ ಇಲ್ಲಿನ ಎಲ್ಲಾ ನಟರ ಅಭಿನಯಕ್ಕೆ ಪ್ರೇಕ್ಷಕ ಮೂಕ ವಿಸ್ಮಿತನಾಗಿ ಮಾರುಹೋಗಿಬಿಟ್ಟಿದ್ದ ಎಂದರೆ ಅತಿಶಯೋಕ್ತಿಯಲ್ಲ.
ಸೌಂದರ್ಯ ಒಳಗಿನಿಂದ ಹೊಮ್ಮಬೇಕೆ ಹೊರತು ಹೊರಗಿನಿಂದ ಮೆತ್ತುವುದಲ್ಲ, ಹೆಗಲೇರಿದಾಗಲೇ ಹೊರೆಯ ಅರಿವಾಗೋದು, ಸಂಸಾರಕ್ಕೆ ವಯಸ್ಸಾಗತ್ತೆ ಹಾದರ ಚಿರಯೌವ್ವನ,
ಹೆಣ್ಣು ಸೃಷ್ಟಿಯು ಹೌದು ಸಂಹಾರಕಳು ಆಗಬಹುದು, ಮನೆಯಲ್ಲಿ ಹಿಂದೆ ನಾಲ್ಕು ನಾಲ್ಕು ತೊಟ್ಟಿಲುಗಳು ತೂಗುತ್ತಿದ್ದವು, ಇಂದು ಬೀದಿಗೆ ನಾಲ್ಕು ನಾಲ್ಕು ಫರ್ಟಿಲಿಟಿ ಸೆಂಟರ್ ಗಳು ತಲೆಯೆತ್ತಿವೆ, ಅದಕ್ಕಾಗಿ ಹೆಣ್ಣು ಹೇಗೋ ಬದುಕಿ ಕೊಳ್ಳುತ್ತಾಳೆ, ಅಸ್ತಿತ್ವ ಸತ್ತಿದ್ದು ಗಂಡಿಗೆ, ಹೆಣ್ಣು ಪ್ರಕೃತಿ ಆಕ್ರಮಿಸುವವರ ಸ್ವತ್ತು, ಸಾವು ಸುದ್ದಿಯಾಗದಿದ್ರೆ ಬದುಕಿದ್ದೇ ಸುಳ್ಳಾಗತ್ತೆ, ಹೆಣ್ಣು ಪ್ರಕೃತಿ ಅದು ಆಕ್ರಮಿಸುವವರ ಸ್ವತ್ತು, ಗಂಡು ಜವಾಬ್ದಾರಿಗೆ ಹೆಣ್ಣು ಕರ್ತವ್ಯಕ್ಕೆ ಸುಖ ಸ್ಕ್ಯಾಭಾವಿಕ ಹುಟ್ಟು ನೈಸರ್ಗಿಕ ಇತ್ಯಾದಿಗಳು ಮರು ಆಲೋಚನೆಗೆ ನಮ್ಮನ್ನ ಹಚ್ಚುವ ಡೈಲಾಗ್ ಆಗಿದ್ದವು. ಅವುಗಳು ನಮ್ಮೊಳಗೇ ನಾವು ಮತ್ತೆ ಮತ್ತೆ ಇಣುಕಿ ನೋಡುವ ಸಮಾಜದ ಕಿರುಗನ್ನಡಿಯಂತಿದ್ದವು.
ಸಂದರ್ಭದಲ್ಲಿ ತಕ್ಕದಾಗಿ ಬರುತ್ತಿದ್ದ ಹಿನ್ನೆಲೆ ಸಂಗೀತ ಮತ್ತಷ್ಟು ಆ ನಾಟಕವನ್ನು ಆಪ್ತವಾಗಿ ಸುತ್ತಿತ್ತು. ಹಾಗಾಗಿ ಅರುಂಧತಿ ವಸಿಷ್ಠದ ಸಂಗೀತ ಮತ್ತು ಅದನ್ನು ನಿರ್ವಹಿಸುವ ಸರ್ವಜ್ಞ ಆಚಾರ್ಯ ಸಹ ಅಭಿನಂದನಾರ್ಹರೇ. ಬೆಳಕಿನಲ್ಲಿ ನಂದ ಕಿಶೋರ್ ಕೆಲಸವು ಸ್ಮರಿಸಬೇಕಾದದ್ದೇ ಆಗಿದೆ. ಸನ್ನಿವೇಶಕ್ಕೆ ಬೇಕಾದಷ್ಟೇ ಇದ್ದ ಸಂಗೀತ ಬೆಳಕು ಕೂಡ ಇಲ್ಲಿ ಗಮನ ಸೆಳೆಯಿತು.
ಹಾಗಾಗಿ ಇಂತಹ ಒಂದು ಒಳ್ಳೆಯ ರಸಾನುಭವಿಕೆ ಅವಕಾಶ ನೀಡುವಂತಹ ಆಯೋಜಕರಾದ ಅಜಯ ಸಂಸ್ಕೃತಿ ಬಳಗದ ಸರ್ವರಿಗೂ ಅನಂತಾನಂತ ಧನ್ಯವಾದಗಳು.
ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ