Breaking News ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಎದುರಿಸಲು ನಿರ್ಧರಿಸಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪನವರಿಗೆ ದೆಹಲಿಗೆ ಬಂದು ಮಾತುಕತೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚಿಸಿದ್ದರು.
ಅದರಂತೆ, ಈಶ್ವರಪ್ಪನವರು ಏ. 4ರಂದು ಬೆಳಗ್ಗೆಯೇ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ದೆಹಲಿಗೆ ಹೋದ ನಂತರ ಅಮಿತ್ ಶಾ ಅವರು ಈಶ್ವರಪ್ಪನವರನ್ನು ಭೇಟಿಯಾಗಲು ಸಮಯ ಕೊಡಲಿಲ್ಲ ಎಂದು ಹೇಳಲಾಗಿದೆ. ದೆಹಲಿಗೆ ಆಹ್ವಾನ ನೀಡಿದ ನಂತರವೂ ಈಶ್ವರಪ್ಪನವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದೇ ಅದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.
ಮಂಗಳವಾರ ದೂರವಾಣಿ ಕರೆ ಮಾಡಿದ್ದ ಅಮಿತ್ ಶಾ ಅವರು ಬುಧವಾರ ದಿಲ್ಲಿಗೆ ಬರುವಂತೆ ಸೂಚಿಸಿದ್ದಾರೆ ಎಂಬುದಾಗಿ ಈಶ್ವರಪ್ಪ ಹೇಳಿದ್ದರು. ಬುಧವಾರ ದಿಲ್ಲಿಗೆ ತೆರಳುವ ಮುನ್ನವೂ ಅಲ್ಲಿನ ಬೆಳವಣಿಗೆಗಳನ್ನೆಲ್ಲಾ ನೇರವಾಗಿ ಹೇಳುವುದಾಗಿ ತಿಳಿಸಿದ್ದರು. ಆದರೆ ದಿಲ್ಲಿಗೆ ತೆರಳಿದ ಈಶ್ವರಪ್ಪ ಅವರಿಗೆ ಭೇಟಿ ಸಾಧ್ಯವಿಲ್ಲ ಎಂಬುದಾಗಿ ಅಮಿತ್ ಶಾ ಕಚೇರಿಯಿಂದ ಸಂದೇಶ ರವಾನೆಯಾಗಿದ್ದರಿಂದ ನಿರಾಸೆಯಾಗಿದೆ ಎಂದು ತಿಳಿದುಬಂದಿದೆ.
