Tuesday, August 25, 2026
Tuesday, August 25, 2026

ಹಾಲಿನ ದರ ಲೀಟರ್ ಗೆ ₹ 50 ನಿರ್ಧರಿಸಲು ಮನವಿ

Date:

ಕರ್ನಾಟಕ ಪ್ರಾಂತ ರೈತ ಸಂಘವು ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಾಲು ಉತ್ಪಾದಕರ ಸಮಾವೇಶದಲ್ಲಿ ರೈತರಿಂದ ಖರೀದಿಸುವ ಒಂದು ಲೀಟರ್ ಹಾಲಿನ ದರವನ್ನು ₹ 50ಕ್ಕೆ ಹೆಚ್ಚಿಸಬೇಕು. ಉತ್ಪಾದಕರಿಗೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಮಾವೇಶ ಉದ್ಘಾಟಿಸಿದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನಾಯಕ ಹಾಗೂ ಕೇರಳದ ಮಾಜಿ ಶಾಸಕ ಕೃಷ್ಣಪ್ರಸಾದ್ ಮಾತನಾಡಿ,

ರಾಜ್ಯದಲ್ಲಿ 29 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆ ಮೇಲೆ ಅವಲಂಬಿತವಾಗಿವೆ. 14 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಸಣ್ಣ ಮತ್ತು ಮಧ್ಯಮ ವರ್ಗಗಳ ಕುಟುಂಬಗಳು ತಮ್ಮ ಜೀವನಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿವೆ. ಆದರೆ, ಒಂದು ಲೀಟರ್ ಹಾಲಿನ ಉತ್ಪಾದನೆಗೆ ರೈತರಿಗೆ ₹ 35 ವೆಚ್ಚ ತಗಲುತ್ತಿದೆ. ಸರ್ಕಾರದ ಸಬ್ಸಿಡಿ ಸೇರಿದಂತೆ ಲೀಟರ್ ಹಾಲಿಗೆ ₹ 33 ದೊರೆಯುತ್ತಿದೆ. ಹೈನುಗಾರರು ನಷ್ಟದಲ್ಲಿ ಇದ್ದಾರೆ ಎಂದು ಹೇಳಿದರು.

ರೈತರು ತಮ್ಮ ಬದುಕಿನ ಆಧಾರಕ್ಕೆ ಪೆಟ್ಟು ಬಿದ್ದಾಗ ಸಂಘಟಿತರಾಗಬೇಕು. ಜೀವನದ ಪ್ರಶ್ನೆಗಳು ಬಂದಾಗ ಒಂದೆಡೆ ಸೇರಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಈಗ ರೈತರು ನೆಮ್ಮದಿಯಾಗಿದ್ದಾರಾ? ಅವರ ಕುಟುಂಬ ನೆಮ್ಮದಿ ಆಗಿದೆಯಾ? ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯುತ್ತಿದೆಯಾ? ಎನ್ನುವ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಬೇಕಾಗಿದೆ. ಕೇಂದ್ರದಲ್ಲಿ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಇಂದಿನ ನರೇಂದ್ರ ಮೋದಿಯವರೆಗಿನ ಆಡಳಿತದಲ್ಲಿ ಹಲವು ಸರ್ಕಾರಗಳು ಬಂದವು. ಆದರೆ, ಕೆಲವೇ ರಾಜ್ಯಗಳಲ್ಲಿ ಮಾತ್ರ ಭೂ ಸುಧಾರಣಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಯಿತು ಎಂದು ಹೇಳಿದರು.

ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕೋಚಿಮುಲ್‌ನಲ್ಲಿ ಈಗ ನಿತ್ಯ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಸರ್ಕಾರ ಸಬ್ಸಿಡಿ ಸೇರಿ ಒಂದು ಲೀಟರ್ ಹಾಲಿಗೆ ₹ 33 ನೀಡಲಾಗುತ್ತಿದೆ. ಇದು ರೈತರಿಗೆ ನೀಡುತ್ತಿರುವ ಕಡಿಮೆ ಹಣವಾಗಿದೆ ಎಂದು ಹೇಳಿದರು.
ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡುವ ಬೆಲೆಯನ್ನು ಹೆಚ್ಚಿಸಬೇಕು. ಆ ಅಧಿಕಾರ ಒಕ್ಕೂಟಗಳಿಗೆ ಮತ್ತು ಕೆಎಂಎಫ್‌ಗೆ ಇಲ್ಲ. ಕೆಎಂಎಫ್ ಅಧ್ಯಕ್ಷರೇ ಲೀಟರ್ ಹಾಲಿನ ಬೆಲೆಯನ್ನು ₹ 3 ಹೆಚ್ಚಿಸಿ ಎಂದು ಸರ್ಕಾರಕ್ಕೆ ಕೋರಿದ್ದಾರೆ.

ಸ್ವಾಮಿನಾಥನ್ ವರದಿ ಪ್ರಕಾರ ಉತ್ಪಾದನಾ ವೆಚ್ಚವನ್ನು ಕಳೆದು ಅದರ ಅದರ ಮೇಲೆ ಶೇ 50ರಷ್ಟು ಲಾಭ ಸೇರಿಸಿ ರೈತರ ಉತ್ಪನ್ನಗಳಿಗೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ಪ್ರಕಾರ ರಾಜ್ಯದಲ್ಲಿ ಲೀಟರ್ ಹಾಲಿನ ಬೆಲೆ ₹ 50 ಆಗಬೇಕು ಎಂದು ಆಗ್ರಹಿಸಿದರು.
ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಿಸಲು ರೈತರು ಒಗ್ಗೂಡಿ ಹೋರಾಡಬೇಕು. ಹಾಲಿನ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ದೃಷ್ಟಿಯಿಂದ ಸರ್ಕಾರ ಹೈನುಗಾರರಿಗೆ ಸಬ್ಸಿಡಿ ನೀಡಬೇಕು ಎಂದು
ಒತ್ತಾಯಿಸಿದರು.

ಕೋಚಿಮುಲ್ ನಿರ್ದೇಶಕರಾದ ಭರಣಿ ವೆಂಕಟೇಶ್, ಆದಿನಾರಾಯಣ ರೆಡ್ಡಿ, ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜು, ಉಪಾಧ್ಯಕ್ಷ ಮಂಜುನಾಥ ರೆಡ್ಡಿ, ಜಿಲ್ಲಾ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿನಾರಾಯಣರೆಡ್ಡಿ, ಕೆ.ಆರ್. ದೇಸಾಯಿ, ಯಶವಂತ್, ನವೀನ್, ಸೂರ್ಯನಾರಾಯಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...