2021 -22ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಒಟ್ಟು ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ.
3,030 ಕೋಟಿ ರೂ. ಹವಾಮಾನ ಬದಲಾವಣೆ, ಅರಣ್ಯ ಹಾಗೂ ಪರಿಸರ ಇಲಾಖೆಗೆ ನೀಡಲಾಗಿರುವ ಅನುದಾನ. ಸ್ವಚ್ಛ ಇಂಧನ, ಅಭಿವೃದ್ಧಿ ಹಾಗೂ ಬಳಕೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
54,873 ಕೋಟಿ ರೂ. ಭೂ ವಿಜ್ಞಾನ ಸಚಿವಾಲಯಕ್ಕೆ ನೀಡಲಾಗಿರುವ ಅನುದಾನವಾಗಿದೆ. ಕಳೆದ ವರ್ಷಕ್ಕಿಂತ 2684 ಕೋಟಿ ರೂ. ಹೆಚ್ಚಿನ ಅನುದಾನ ನೀಡಲಾಗಿದೆ.
73000 ಕೋಟಿ ರೂ. ಮನರೇಗಾ ಯೋಜನೆಗೆ ನೀಡಲಾಗಿರುವ ಅನುದಾನವಾಗಿದೆ. ಕಳೆದ ವರ್ಷಕ್ಕಿಂತ ಶೇಕಡಾ 25.51ರಷ್ಟು ಕಡಿಮೆ ಅನುದಾನವನ್ನು ನೀಡಲಾಗಿದೆ.
ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಅಂಗವಾಗಿ ಅಭಿವೃದ್ಧಿಹೊಂದುತ್ತಿರುವ ಅನಿಮೇಷನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ ಗಳ ಉತ್ತೇಜನ ಅಗತ್ಯವಾದ ಉನ್ನತ ಮಟ್ಟದ ಕಾರ್ಯಪಡೆ ರಚನೆಗೆ ಬಜೆಟ್ ನಲ್ಲಿ ಸರ್ಕಾರ ಒತ್ತು ನೀಡುವ ಸುಳಿವು ಕೊಟ್ಟಿದೆ.
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಬಹಳ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಬಜೆಟ್ ನಲ್ಲಿ ಈಶಾನ್ಯ ರಾಜ್ಯಗಳಿಗಾಗಿಯೇ ಸೀಮಿತವಾದ 1500 ಕೋಟಿ ರೂ. ಮೌಲ್ಯದ ಹೊಸ ಯೋಜನೆ ಪಿಎಂ-ದೇವೈನ್ (PM-DevINE) ಘೋಷಣೆ ಮಾಡಿಸಿದ್ದಾರೆ.
ಸಾಧನೆ ಆಧರಿತ ಪ್ರೋತ್ಸಾಹಧನ ಯೋಜನೆಯ ಭಾಗವಾಗಿ 19,500 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಿ ಮುಂದಿನ ಎಂಟು ವರ್ಷಗಳಲ್ಲಿ 280 ಗಿಗಾವ್ಯಾಟ್ ಸೌರ ಇಂಧನ ಸಾಮರ್ಥ್ಯ ಉತ್ಪಾದನೆಗೆ ಸಿದ್ಧತೆ ನಡೆಯಲಿದೆ.
ಮಹಾನಗರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರವಾಹನ ಬಳಕೆಗೆ ಪ್ರೋತ್ಸಾಹ ನೀಡಲಾಗಿದೆ. ಈ ಮೂಲಕ ಇವಿ ಬ್ಯಾಟರಿ ಸ್ಟ್ಯಾಂಪಿಂಗ್ ಗೆ ಒತ್ತು ನೀಡುವ ಘೋಷಣೆ ಮಾಡಿದೆ.
ಬಜೆಟ್ ಮಂಡನೆ ಕುರಿತು ಪ್ರಮುಖರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದು ಮುಂಗಾಣ್ಕೆಯ ಉತ್ತಮ ಬಜೆಟ್. ಮೋದಿ ನಾಯಕತ್ವದಲ್ಲಿ ಭಾರತದ ಆರ್ಥಿಕತೆಯನ್ನು ವಿಶ್ವದಲ್ಲೇ ಮುಂಚೂಣಿಗೆ ನಿಲ್ಲಿಸಲು ಸಹಾಯಕ. ಬಜೆಟ್ ಗಾತ್ರ ವನ್ನು 39.45 ಲಕ್ಷ ಕೋಟಿಗೆ ಏರಿಸುವ ಮೂಲಕ ಭಾರತೀಯ ಆರ್ಥಿಕತೆಯ ವೇಗವನ್ನು ಬಜೆಟ್ ಸಾಬೀತುಪಡಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.
ನವೋದ್ಯಮಗಳು ಮತ್ತು ಖಾಸಗಿ ಘಟಕಗಳಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಶೇ.25ರಷ್ಟನ್ನು ಮೀಸಲಿಡುವ ಪ್ರಸ್ತಾಪವನ್ನು ಮಂಡಿಸಲಾಗಿದೆ. ಇದೊಂದು ಅತ್ಯುತ್ತಮ ಕ್ರಮ. ರಕ್ಷಣಾ ವಲಯವನ್ನು ಸ್ಥಳೀಯವಾಗಿ ರೂಪಿಸಿದ ಸಾಧನ ಸಲಕರಣೆಗಳಿಂದ ಬಲ ಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ.
ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿರುವುದು ದಿಟ್ಟ ಹೆಜ್ಜೆ. ಶಿರಾಡಿ ಘಾಟ್ ಹೆದ್ದಾರಿ ಉನ್ನತೀಕರಣಕ್ಕೆ 1,200 ಕೋಟಿ ರೂ., ಬಾನಾಪುರ-ಗದ್ದನಕೇರಿ ಹೆದ್ದಾರಿ ವಿಸ್ತರಣೆಗೆ 173 ಕೋಟಿ ರೂ. ಘೋಷಿಸಿರುವುದು ನಮ್ಮ ರಾಜ್ಯಕ್ಕೆ ನೀಡಿದ ಕಾಣಿಕೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ನಿರುದ್ಯೋಗ, ಹಣದುಬ್ಬರದಿಂದ ನಲುಗಿಹೋಗಿರುವ ಸಾಮಾನ್ಯ ಜನರಿಗೆ ಈ ಬಜೆಟ್ ಏನನ್ನೂ ಒದಗಿಸಿಲ್ಲ. ಇದೊಂದು ಪೆಗಾಸುಸ್ ಬೇಹುಗಾರಿಕೆ ಆರೋಪದಿಂದ ಮುನಿಸಿಕೊಳ್ಳಲು ತುಪ್ಪ ಸವರುವ ಮುಂಗಡಪತ್ರವಷ್ಟೇ.ಶಬ್ದಾಡಂಬರದಿಂದ ಯಾವ ಸಾಧನೆಯೂ ಆಗದು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
ನಿಜಕ್ಕೂ ಇದೊಂದು ನಿರಾಶಾದಾಯಕ ಬಜೆಟ್. ಜನಸಾಮಾನ್ಯರಿಗೆ ಕಿಂಚಿತ್ತೂ ನೆರವು ನೀಡಿಲ್ಲ.ಕೊರೊನಾ ಕಾಲಘಟ್ಟದ ಈ ಸಂದರ್ಭದಲ್ಲಿ ಭಾರಿ ನಿರೀಕ್ಷೆಗಳೇ ಇತ್ತು. ಆದರೆ ಯಾರಿಗೂ ಬಲವನ್ನೂ ನೀಡಿಲ್ಲ. ಯಾವ ವಲಯದಲ್ಲೂ ದರವನ್ನು ಕಡಿಮೆ ಮಾಡಿಲ್ಲ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.